“ಚುನಾವಣಾ ಬಾಂಡ್ ಯೋಜನೆಯ ರದ್ದತಿ ಕುರಿತು ಪ್ರಾಮಾಣಿಕವಾಗಿ ಚಿಂತಿಸಿದಾಗ ಪ್ರತಿಯೊಬ್ಬರು ವಿಷಾದಿಸಲಿದ್ದಾರೆ. ಚುನಾವಣಾ ಬಾಂಡ್ ಯೋಜನೆಯ ರದ್ದತಿ ದೇಶವನ್ನು ಸಂಪೂರ್ಣವಾಗಿ ಕಪ್ಪು ಹಣದೆಡೆಗೆ ತಳ್ಳಲಿದೆ” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಸುದ್ದಿ ಸಂಸ್ಥೆ ಎಎನ್ಐಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ‘ಅಸಂವಿಧಾನಿಕ’ ಎಂದು ರದ್ದುಪಡಿಸಿರುವ ಯೋಜನೆಯನ್ನು ಸಮರ್ಥಿಸಿಕೊಂಡಿದ್ದಾರೆ.
WATCH | PM Modi explains 'the success story of electoral bonds' and why he feels 'everyone will regret' its dismissal👇 @ANI @smitaprakash @PMOIndia @narendramodi pic.twitter.com/q3g7Kz2HZL
— ET NOW (@ETNOWlive) April 15, 2024
“ಕಪ್ಪು ಹಣದ ವಿರುದ್ದ ಹೋರಾಡಲು ನಮ್ಮ ಸರ್ಕಾರ ಚುನಾವಣಾ ಬಾಂಡ್ ಯೋಜನೆಯನ್ನು ಜಾರಿಗೊಳಿಸಿತ್ತು. ಇದು ಅಪರಾಧ ಚಟುವಟಿಕೆಗಳಿಂದ ರಾಜಕೀಯ ಪಕ್ಷಗಳಿಗೆ ಸಂದಾಯವಾಗುತ್ತಿದ್ದ ಲೆಕ್ಕಕ್ಕೆ ಸಿಗದ ಹಣದ ಲೆಕ್ಕ ತಿಳಿಯಲು ಸಹಕಾರಿಯಾಗಿತ್ತು” ಎಂದು ಪ್ರಧಾನಿ ಹೇಳಿದ್ದಾರೆ.
“ಪ್ರತಿಪಕ್ಷಗಳು ಯೋಜನೆಯ ಕುರಿತು ಸುಳ್ಳು ಹರಡುತ್ತಿವೆ ಎಂದ ಮೋದಿ, ಚುನಾವಣೆಯ ಸಮಯದಲ್ಲಿ ಕಪ್ಪು ಹಣಕ್ಕೆ ಕಡಿವಾಣ ಹಾಕಲು ನಾವು ಯೋಜನೆ ಪರಿಚಯಿಸಿದೆವು. ನಮ್ಮ ಭಾರತೀಯ ಜನತಾ ಪಕ್ಷ (ಬಿಜೆಪಿ) ವೇ ಯೋಜನೆಯ ದೊಡ್ಡ ಫಲಾನುಭವಿ” ಎಂದಿದ್ದಾರೆ.
“ಚುನಾವಣೆಯ ಸಮಯದಲ್ಲಿ ಕಪ್ಪು ಹಣಕ್ಕೆ ಕಡಿವಾಣ ಹಾಕುವುದು ಹೇಗೆ? ಪಾರದರ್ಶಕತೆ ಕಾಪಾಡುವುದು ಹೇಗೆ? ಎಂಬುವುದು ನನ್ನನ್ನು ಕಾಡುತ್ತಿದ್ದ ವಿಷಯ. ಅದಕ್ಕಾಗಿ ನಾವು ಒಂದು ಮಾರ್ಗ ಕಂಡುಕೊಂಡೆವು. ಆದರೆ, ಚುನಾವಣಾ ಬಾಂಡ್ ಯೋಜನೆ ಪರಿಪೂರ್ಣವಾದದ್ದು ಎಂದು ನಾನು ಹೇಳಲ್ಲ. ಅದರಲ್ಲೂ ಸಣ್ಣಪುಟ್ಟ ನೂನ್ಯತೆಗಳು ಇರಬಹುದು” ಎಂದು ಮೋದಿ ಹೇಳಿದ್ದಾರೆ.
ಕಾರ್ಪೋರೇಟ್ ವ್ಯಕ್ತಿಗಳು ಮತ್ತು ಸಂಸ್ಥೆಗಳು ಬಾಂಡ್ ಖರೀದಿಸಿ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುತ್ತಿದ್ದ ಚುನಾವಣಾ ಬಾಂಡ್ ಯೋಜನೆಯನ್ನು ಫೆ.15ರಂದು ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಅವರನ್ನು ಒಳಗೊಂಡ ಸುಪ್ರೀಂ ಕೋರ್ಟ್ ಪೀಠ ರದ್ದುಗೊಳಿಸಿದೆ.
ಯೋಜನೆಯ ರದ್ದತಿ ವೇಳೆ ಇದು ‘ಅಸಂವಿಧಾನಿಕ ಮತ್ತು ಜನರ ಮಾಹಿತಿ ಹಕ್ಕಿಗೆ ವಿರುದ್ದವಾಗಿದೆ’ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಸುಪ್ರೀಂ ಕೋರ್ಟ್ ಆದೇಶದಂತೆ ಚುನಾವಣಾ ಬಾಂಡ್ಗಳ ಮಾಹಿತಿಯನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಭಾರತೀಯ ಚುನಾವಣಾ ಆಯೋಗಕ್ಕೆ ನೀಡಿತ್ತು. ಆ ಮಾಹಿತಿಯನ್ನು ಚುನಾವಣಾ ಆಯೋಗ ತನ್ನ ವೆಬ್ಸೈಟ್ನಲ್ಲಿ ಪ್ರಕಟಿಸಿದೆ. ಚುನಾವಣಾ ಆಯೋಗದ ವೆಬ್ಸೈಟ್ನಲ್ಲಿರುವ ಮಾಹಿತಿಯನ್ನು ನೋಡಿದರೆ, ಹಲವು ಕಾರ್ಪೋರೇಟ್ ಸಂಸ್ಥೆಗಳು ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿ ಲಾಭ ಪಡೆದುಕೊಂಡಿರುವುದು ಗೊತ್ತಾಗುತ್ತದೆ.
ಮತ್ತೊಂದು ಗಮನಾರ್ಹ ಸಂಗತಿಯೆಂದರೆ, ಚುನಾವಣಾ ಬಾಂಡ್ ಯೋಜನೆಯನ್ನು ರಾಜಕೀಯ ಪಕ್ಷಗಳ ದೇಣಿಗೆ ಪಾರದರ್ಶಕವಾಗಿಸಲು ನಾವು ಪರಿಚಯಿಸಿದೆವು ಎಂದು ಪ್ರಧಾನಿ ನರೇಂದ್ರ ಮೋದಿ ಪದೇ ಪದೇ ಹೇಳುತ್ತಿದ್ದಾರೆ. ಆದರೆ, ಸುಪ್ರೀಂ ಕೋರ್ಟ್ ಆದೇಶಿಸುವವರೆಗೆ ಚುನಾವಣಾ ಬಾಂಡ್ ಮೂಲಕ ರಾಜಕೀಯ ಪಕ್ಷಗಳು ಪಡೆದ ದೇಣಿಗೆಗಳ ಮಾಹಿತಿ ಯಾರಿಗೂ ಗೊತ್ತಾಗುತ್ತಿರಲಿಲ್ಲ. ಮಾಹಿತಿ ಹಕ್ಕು ಕಾಯ್ದೆ (ಆರ್ಟಿಐ) ಅಡಿ ಅರ್ಜಿ ಹಾಕಿದರೂ ಮಾಹಿತಿ ಸಿಗುತ್ತಿರಲಿಲ್ಲ. ಈ ಕಾರಣಕ್ಕಾಗಿಯೇ ಸುಪ್ರೀಂ ಕೋರ್ಟ್ ಚುನಾವಣಾ ಬಾಂಡ್ ಯೋಜನೆ ಜನರ ಮಾಹಿತಿ ಹಕ್ಕಿನ ವಿರುದ್ದವಿದೆ ಎಂದಿರುವುದು.
ಈ ಹಿಂದೆಯೂ ಪ್ರಧಾನಿ ನರೇಂದ್ರ ಚುನಾವಣಾ ಬಾಂಡ್ ಯೋಜನೆಯನ್ನು ಸಮರ್ಥಿಸುವಾಗ ಸುಳ್ಳು ಹೇಳಿಕೆ ಕೊಟ್ಟಿದ್ದರು. ಈ ಕುರಿತು ನಾನುಗೌರಿ.ಕಾಂ ಮಾಡಿರುವ ಫ್ಯಾಕ್ಟ್ಚೆಕ್ ವರದಿಯ ಲಿಂಕ್ ಕೆಳಗಿದೆ.
Fact Check: ಚುನಾವಣಾ ಬಾಂಡ್ ಕುರಿತು ಪ್ರಧಾನಿ ಮೋದಿ ನೀಡಿರುವ ಹೇಳಿಕೆ ಸುಳ್ಳು