ಲೋಕಸಭೆ ಚುನಾವಣೆಗೆ “ದೇವರು ಮತ್ತು ಪೂಜಾ ಸ್ಥಳಗಳ” ಹೆಸರಿನಲ್ಲಿ ಮತ ಕೇಳುವ ಮೂಲಕ ಮಾದರಿ ನೀತಿ ಸಂಹಿತೆ (ಎಂಸಿಸಿ) ಉಲ್ಲಂಘಿಸಿರುವ ಆರೋಪದ ಮೇಲೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ದೆಹಲಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿದೆ ಎಂದು ಬಾರ್ & ಬೆಂಚ್ ವರದಿ ಮಾಡಿದೆ.
ಏಪ್ರಿಲ್ 9 ರಂದು ಉತ್ತರ ಪ್ರದೇಶದ ಪಿಲಿಭಿತ್ನಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕರೂ ಆಗಿರುವ ಪ್ರಧಾನಿ ಮೋದಿ ಮಾಡಿರುವ ಭಾಷಣವನ್ನು ಉಲ್ಲೇಖಿಸಿ ಆನಂದ್ ಎಸ್ ಜೊಂಧಲೆ ಎಂಬ ವಕೀಲರು ನ್ಯಾಯಾಲಕ್ಕೆ ಅರ್ಜಿ ಸಲ್ಲಿಸಿದ್ದಾರೆ.
“ತಮ್ಮ ಭಾಷಣದ ವೇಳೆ ಪ್ರಧಾನಿ ಮೋದಿಯವರು “ಹಿಂದೂ ದೇವರುಗಳು ಮತ್ತು ಹಿಂದೂ ಆರಾಧನಾ ಸ್ಥಳಗಳ ಜೊತೆಗೆ ಸಿಖ್ ದೇವರುಗಳು ಮತ್ತು ಸಿಖ್ ಆರಾಧನಾ ಸ್ಥಳಗಳ” ಹೆಸರಿನಲ್ಲಿ ಬಿಜೆಪಿಗೆ ಮತ ನೀಡುವಂತೆ ಮತದಾರರಲ್ಲಿ ಮನವಿ ಮಾಡಿದ್ದಾರೆ” ಎಂದು ಜೊಂಧಲೆ ಆರೋಪಿಸಿದ್ದಾರೆ.
ಆರು ವರ್ಷಗಳ ಕಾಲ ಯಾವುದೇ ಚುನಾವಣೆಗಳಲ್ಲಿ ಸ್ಪರ್ಧಿಸದಂತೆ ಪ್ರಧಾನಿ ಮೋದಿ ಅವರನ್ನು ಅನರ್ಹಗೊಳಿಸುವಂತೆ ಅರ್ಜಿಯಲ್ಲಿ ಕೋರಲಾಗಿದೆ.
ತಾನು ರಾಮ ಮಂದಿರ ನಿರ್ಮಿಸಿದ್ದಾಗಿ ಕರ್ತಾರ್ಪುರ ಸಾಹಿಬ್ ಕಾರಿಡಾರ್ ಅಭಿವೃದ್ಧಿಪಡಿಸಿದ್ದಾಗಿ ಗುರುದ್ವಾರಗಳಿಗೆ ಸಂಬಂಧಿಸಿದ ವಸ್ತುಗಳ ಜಿಎಸ್ಟಿ ತೆಗೆದುಹಾಕಿದ್ದಾಗಿ ಜೊತೆಗೆ ಅಫ್ಘಾನಿಸ್ತಾನದಿಂದ ಗುರು ಗ್ರಂಥ ಸಾಹಿಬ್ನ ಪ್ರತಿಗಳನ್ನು ಮರಳಿ ತಂದಿದ್ದಾಗಿ ಹೇಳಿ ಮೋದಿಯವರು ಮತ ಯಾಚನೆ ಮಾಡಿದ್ದಾರೆ ಎಂದು ಅರ್ಜಿದಾರರು ದೂರಿದ್ದಾರೆ.
ಅ ಮೂಲಕ ಮೋದಿಯವರು ನೀತಿ ಸಂಹಿತೆಯ ನಿಯಮಾವಳಿಗಳ ಸಂಪುಟ III ರ ಸಾಮಾನ್ಯ ನಡಾವಳಿ I(1) ಮತ್ತು (3)ನ್ನು ಉಲ್ಲಂಘಿಸಿದ್ದಾರೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಯಾವುದೇ ಪಕ್ಷ ಅಥವಾ ಅಭ್ಯರ್ಥಿ ಈಗಿರುವ ಭಿನ್ನಾಭಿಪ್ರಾಯಗಳನ್ನು ಉಲ್ಬಣಗೊಳಿಸುವಂತಹ ಇಲ್ಲವೇ ಪರಸ್ಪರ ದ್ವೇಷಕ್ಕೆ ಕುಮ್ಮಕ್ಕು ನೀಡುವ ಅಥವಾ ವಿವಿಧ ಜಾತಿ ಸಮುದಾಯಗಳ ನಡುವೆ ಧಾರ್ಮಿಕ ಅಥವಾ ಭಾಷಿಕ ಮನಸ್ತಾಪ ಉಂಟುಮಾಡುವಂತಹ ಚಟುವಟಿಕೆಯಲ್ಲಿ ತೊಡಗಿರಬಾರದು ಎನ್ನುತ್ತದೆ ನಿಬಂಧನೆ.
“ಜಾತಿ ಅಥವಾ ಸಮುದಾಯದ ಭಾವನೆಗಳ ಹೆಸರಿನಲ್ಲಿ ಮತ ಯಾಚನೆ ನಡೆಯಬಾರದು ಎಂದು ಅದು ಹೇಳುತ್ತದೆ. ಮಸೀದಿ, ಚರ್ಚ್ಗಳು, ದೇವಾಲಯಗಳು ಅಥವಾ ಇತರ ಪೂಜಾ ಸ್ಥಳಗಳನ್ನು ಚುನಾವಣಾ ಪ್ರಚಾರಕ್ಕಾಗಿ ವೇದಿಕೆಯಾಗಿ ಬಳಸಬಾರದು” ಎಂದು ಜೊಂಧಲೆ ತಮ್ಮ ಅರ್ಜಿಯಲ್ಲಿ ಪ್ರತಿಪಾದಿಸಿದ್ದಾರೆ.
ಪಿಎಂ ಮೋದಿ ಹಿಂದೂ ಮತ್ತು ಸಿಖ್ ದೇವರುಗಳು ಮತ್ತು ಅವರ ಆರಾಧನಾ ಸ್ಥಳಗಳ ಹೆಸರಿನಲ್ಲಿ ಮತ ಕೇಳಿದ್ದಲ್ಲದೆ, ಮುಸ್ಲಿಮರ ಪರವಾಗಿ ರಾಜಕೀಯ ಪಕ್ಷಗಳು ಕೆಲಸ ಮಾಡುತ್ತಿವೆ ಎಂದಿದ್ದಾರೆ ಎಂದು ಅವರು ಆಪಾದಿಸಿದ್ದಾರೆ.
ಇದನ್ನೂ ಓದಿ : ‘ಅಸಂವಿಧಾನಿಕ’ ಚುನಾವಣಾ ಬಾಂಡ್ ಯೋಜನೆಯನ್ನು ಸಮರ್ಥಿಸಿಕೊಂಡ ಪ್ರಧಾನಿ ಮೋದಿ