ಪುಟಕ್ಕಿಟ್ಟ ಪುಟಗಳು : ಯೋಗೇಶ್ ಮಾಸ್ಟರ್
ಭಾರತದಲ್ಲಿ ಭಗವದ್ಗೀತೆ ಮತ್ತು ಯೋಗವನ್ನು ಪರ ವಿರೋಧಗಳ ನೆಲೆಗಟ್ಟುಗಳಿಂದಲ್ಲದೇ ಮರು ಸಂಶೋಧನೆ ಮಾಡಿದ ವಿದ್ವಾಂಸ ಫುಲ್ಗೇಂದ ಸಿನ್ಹಾ. ಅವರು ಅಮೆರಿಕೆಯಲ್ಲಿ ಸ್ವಯಂ ಯೋಗಾಚಾರ್ಯ ರಾಗಿದ್ದ ಕಾರಣದಿಂದ ಯೋಗದ ಮೂಲವನ್ನು ಹುಡುಕಲು ಹೊರಟ ಅವರು ಅದರ ಜೊತೆಜೊತೆಗೇ ಗೀತೆಯ ಮೂಲವನ್ನೂ ಗುರುತಿಸುವ ಯತ್ನ ಮಾಡಿದರು.
ಇದರಿಂದ ಗೀತಾ- ಯಾಸ್ ಇಟ್ ವಾಸ್ ಎಂಬ ಮಹತ್ವಪೂರ್ಣ ಕೃತಿಯ ರಚನೆಯಾಯ್ತು. ಗೀತಾ – ಯಾಸ್ ಇಟ್ ಈಸ್ ಎಂಬ ಇಸ್ಕಾನ್ ಸಂಸ್ಥಾಪಕರ ಕೃತಿಯೊಂದಿದೆ. ಈ ಕೃತಿಗಳ ನಡುವಿನ ವ್ಯತ್ಯಾಸವೆಂದರೆ, ಇಸ್ಕಾನ್ ಕೃತಿ ಮಂಪರನ್ನು ತರಿಸುತ್ತದೆ. ಸಿನ್ಹಾರವರ ಸಂಶೋಧನಾ ಕೃತಿ ಮಂಪರನ್ನು ಹರಿಸುತ್ತದೆ.

ಸಿನ್ಹಾರವರ ಈ ಕೃತಿ ಮಹತ್ವದ್ದು ಎನಿಸುವುದಕ್ಕೆ ಕಾರಣಗಳಿವೆ. ಯಾವುದೇ ನೆಲದ ಸಾಂಸ್ಕೃತಿಕ ರೂಢಿಗಳು ಮತ್ತು ಧಾರ್ಮಿಕ ನಂಬುಗೆಗಳು ಸಮಾಜದ ಪ್ರಗತಿಗೆ ಅಥವಾ ಅವನತಿಗೆ ಹೇಗೆ ಕಾರಣವಾಗುತ್ತದೆ ಎಂದು ವಿವರಿಸುತ್ತದೆ. ಯೋಗವಾಗಲಿ, ಭಗವದ್ಗೀತೆಯಾಗಲಿ ವೈದಿಕರ ಅಥವಾ ಹಿಂದೂಗಳ ಕೊಡುಗೆ ಹೇಗೆ ಅಲ್ಲ ಎಂದು ಪ್ರತಿಪಾದಿಸುತ್ತದೆ ಮತ್ತು ಅತಿ ಮುಖ್ಯವಾಗಿ ಮೂಲದಲ್ಲಿ ಇದ್ದಂತಹ ಭಗವದ್ಗೀತೆ ಏನು? ಯಾವ್ಯಾವ ಪ್ರಭಾವಗಳಿಂದ ಮತ್ತು ಯಾವ್ಯಾವ ನುಸುಳುವಿಕೆಗಳಿಂದ ಈಗ ನಾವು ಕಾಣುತ್ತಿರುವ ಭಗವದ್ಗೀತೆಯಾಗಿದೆ ಎಂದು ಆಧಾರಸಹಿತ ವಿವರಿಸುತ್ತಾರೆ.
ಚಿಂತನೆ ಮತ್ತು ಭಾವನೆಗಳ ಪ್ರಭಾವವು ದೇಶದ ಪ್ರಗತಿಗೆ ಹೇಗೆ ಕೆಲಸ ಮಾಡುತ್ತದೆ ಎಂದು ಯೋಚಿಸುತ್ತಾರೆ ಸಿನ್ಹಾ. ಕೆಲವು ದೇಶಗಳಿಗೆ ಸಂಪನ್ಮೂಲಗಳ ಕೊರತೆ ಇದ್ದು, ಎಲ್ಲವೂ ವ್ಯತಿರಿಕ್ತವಾಗಿರುವಂತಹ ವಾತಾವರಣವೇ ಇದ್ದರೂ ಔದ್ಯೋಗಿಕವಾಗಿ, ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಅಭಿವೃದ್ಧಿ ಸಾಧಿಸುತ್ತಾರೆ. ಆದರೆ, ಭಾರತದಂತಹ ದೇಶವು ಎಲ್ಲವೂ ಇದ್ದು ಹಾಗೆ ಸಾಧಿಸಲಾಗದಿರುವುದಕ್ಕೆ ಕಾರಣ ಏನು ಎಂದು ನೋಡುತ್ತಾ, ಸಿನ್ಹಾ ಗೀತೆಯ ಕಡೆ ನೋಡುತ್ತಾರೆ. ಕೆಲಸ ಮಾಡು ಆದರೆ ಪ್ರತಿಫಲವನ್ನು ಅಪೇಕ್ಷಿಸಬೇಡ. ಬಯಕೆ ದುಃಖಕ್ಕೆ ಕಾರಣ, ಬಯಕೆಯನ್ನು ಹೊಂದಬೇಡ. ವಿಧಿ ಲಿಖಿತದಂತೆ ಎಲ್ಲವೂ ನಡೆಯುತ್ತದೆ. ಪ್ರಾಪಂಚಿಕ ವ್ಯವಹಾರ ನಶ್ವರ, ಆಧ್ಯಾತ್ಮಿಕತೆಯೇ ಉನ್ನತ ಮತ್ತು ಅಮರ. ನೀನು ಏನೇ ಮಾಡಿದರೂ ದೇವರು ಅನುಗ್ರಹಿಸದಿದ್ದರೆ ಎಲ್ಲವೂ ವ್ಯರ್ಥ. ದುಃಖ, ಸಂತೋಷ, ಯಶಸ್ಸು ಮತ್ತು ವೈಫಲ್ಯ ಎಲ್ಲವೂ ದೇವರ ಇಚ್ಛೆ. ಬೇರೂರಿರುವ ಇಂತಹ ವಿಚಾರಗಳು ಯಾವ ರೀತಿಯಲ್ಲಿ ಮನುಷ್ಯನ ಸಂಕಲ್ಪ ಮತ್ತು ಸಾಧನೆಗೆ ನ್ಯಾಯ ಸಂದಾಯ ಮಾಡುತ್ತದೆ ಎಂಬುದು ಸಿನ್ಹಾರ ಚಿಂತನೆ. ರಾಷ್ಟ್ರೀಯತೆಯು ಧಾರ್ಮಿಕತೆಯ ಮೇಲೆ ಅವಲಂಬಿತವಾದರೆ ಎಂತಹ ಪ್ರಮಾದಗಳನ್ನು ಮತ್ತು ವೈಫಲ್ಯಗಳನ್ನು ಕಾಣಬೇಕಾಗುತ್ತದೆ ಎಂದು ಎಚ್ಚರಿಸುತ್ತಾರೆ.
ಕಪಿಲ ಪತಂಜಲ ಗೌತಮ ಜಿನರೆಲ್ಲರ ತಾತ್ವಿಕತೆಗಳು ಭಾರತದ ಸಿದ್ಧಾಂತಕ್ಕೆ ಕಾಣ್ಕೆಗಳನ್ನು ನೀಡಿದವು ಎನ್ನುತ್ತಲೇ ವ್ಯಾಸನ ಭಗವದ್ಗೀತೆಯಲ್ಲಿ ಅವೆಲ್ಲವೂ ಹೇಗೆ ನುಸುಳಿದವು ಎಂಬುದು ಒಂದು ಸಸ್ಪೆನ್ಸ್ ಥ್ರಿಲ್ಲರ್.
ಹದಿನೆಂಟು ಅಧ್ಯಾಯಗಳ ಭಗವದ್ಗೀತೆಯಲ್ಲಿ ಹದಿನೈದು ಅಧ್ಯಾಯಗಳೇ ಕಲಬೆರಕೆಯವು ಎಂದರೆ ಮರ್ಮಾಘಾತವಾಗದೇ!
ಮೂಲ ಗೀತ ಮೊದಲನೆಯ ಅಧ್ಯಾಯದ 28ನೇ ಶ್ಲೋಕದಿಂದ ಆರಂಭವಾಗುತ್ತದೆ. ನಂತರ ಮೊದಲ 3 ಅಧ್ಯಾಯಗಳಷ್ಟೇ ಅಸಲಿ ಎನ್ನುತ್ತಾ ಕ್ರಿಶ 800 ರಲ್ಲಿ ಬ್ರಾಹ್ಮಣವಾದವನ್ನು ಮತ್ತು ಅದ್ವೈತ ಸಿದ್ಧಾಂತವನ್ನು ಹೇಗೆ ತರಲಾಯ್ತು ಎಂದು ಕೂಲಂಕುಷವಾಗಿ ವಿವರಿಸುತ್ತಾರೆ.
ಕೊನೆಗೆ ತಿಳಿಯುವುದೇನೆಂದರೆ, ಮೂಲ ಭಗವದ್ಗೀತೆ ಅನೇಕ ಪ್ರಭಾವಗಳನ್ನು, ಬದಲಾವಣೆಗಳನ್ನು ಮತ್ತು ಕಲಬೆರಕೆಗಳನ್ನು ಹೊಂದಿದೆ. ಯೋಗ, ಗೀತೆ ಹಿಂದೂ ಧರ್ಮದ ಅಥವಾ ವೈದಿಕ ಧರ್ಮದ ಕೊಡುಗೆ ಏನಲ್ಲ. ಯೋಗ ದೇಹಕ್ಕೆ ಮತ್ತು ಗೀತೆ ಮನಸ್ಸಿಗೆ ಆರೋಗ್ಯ ಕೊಡುವ ದೃಷ್ಟಿಯನ್ನು ಹೊಂದಿರುವುದರಿಂದ ಪೂರ್ವಾಗ್ರಹಪೀಡಿತರಾಗಿ ತಿರಸ್ಕರಿಸಬಾರದು ಎಂಬುದು. ಒಬ್ಬ ಸತ್ಯಾನ್ವೇಷಿಯು ಪೂರ್ವಾಗ್ರಹಗಳಲ್ಲಿ ಬಂಧಿತನಾದರೆ ಸಂಶೋಧನೆಯಾಗಲಿ, ಅಧ್ಯಯನವಾಗಲಿ ಹೇಗೆ ಸಾಧ್ಯ!



ಬಹುಜನರಿಗೆ ತಿಳಿದ ವಿಚಾರ. ಇದರಲ್ಲಿ ವಿಶೇಷವಾಗಿ ಏನೂ ಇಲ್ಲ. ಶತಮಾನಗಳಿಂದ ಈ ವಾದ ಇದ್ದದ್ದೇ….!!
where to get this book.