ಬೆಂಕಿಕಡ್ಡಿ ಗೀರಿದ ಪರಿಣಾಮವೇ ಹಿಂಸಾಚಾರಕ್ಕೆ ಮೂಲ ಕಾರಣ. ಮೂರು ಕಿಡಿಗಳು ಹೊತ್ತಿಕೊಂಡು ಉರಿಯಲು ಆರಂಭಿಸಿದಾಗಲೇ ಆರಿಸುವ ಯತ್ನ ಮಾಡಿದ್ದರೆ ಯಾವುದೇ ಅನಾಹುತಗಳು ಸಂಭವಿಸುವ ಸಾಧ್ಯತೆ ಇರಲಿಲ್ಲ.. ಸೂತ್ರಧಾರಿಗಳು ಹೊತ್ತಿಸಿದ ಕಿಡಿಗಳು ಸುಡುತ್ತಲೇ ಹೋದವು. ಬೆಂಕಿ ಹೊತ್ತಿಕೊಳ್ಳುತ್ತಿ ದ್ದಂತೆಯೇ ತುಪ್ಪವನ್ನೂ ಸುರಿಯತೊಡಗಿದರು. ಬೆಂಕಿಯ ಕೆನ್ನಾಲಗೆಗಳು ಇಡೀ ಈಶಾನ್ಯ ದೆಹಲಿಯ ಹಲವು ಪ್ರದೇಶಗಳು ಹೊತ್ತಿ ಉರಿದವು. ಹಿಂಸಾಚಾರ 42 ಬಲಿ ಪಡೆಯಿತು. ನೂರಾರು ಮಂದಿ ಗಾಯಗೊಂಡರು. ಹಲವು ಮನೆಗಳು, ಶಾಪ್ ಮತ್ತು ಮನೆಗಳು ಕಿಡಿಗೇಡಿಗಳು ಹೊತ್ತಿಸಿದ ಬೆಂಕಿಯಲ್ಲಿ ಭಸ್ಮವಾದವು. ಇದರ ಅರಿವು ಇರಬೇಕಾಗಿದ್ದವರು ಜಾಣತನ ಪ್ರದರ್ಶಿಸಿದರು. ಜಾಣತನ ಫಲವೇ ಹಿಂಸಾಚಾರ ಮತ್ತು ಬೆಂಕಿ .
ಧ್ವಂಸಗೈದ ಕೈಗಳಿಗೆ ಮಣ್ಣು ಮೆತ್ತಿಕೊಳ್ಳಲಿಲ್ಲ.ಮಣ್ಣುಮೆತ್ತಿಕೊಂಡ ಸಾಕ್ಷಿಯೂ ಇರಲಿಲ್ಲ.ಎಲ್ಲವೂ ಸೇವೆಯೊಳಗೆ ಮುಗಿದು ಹೋಗಿತ್ತು. 1992, 2002 ಮತ್ತು 2020 ಪ್ರತಿ ಘಟನೆಯ ನಡುವೆ 10 ವರ್ಷಗಳ ಅಂತರವಿದೆ. ಮೂರನೆಯದು 18 ವರ್ಷದ ಅಂತರ.ಇವೆಲ್ಲವೂ “ನಿರ್ದಿಷ್ಟ ದಾಳಿ”ಯ ಭಾಗವೇ ಆಗಿವೆ. “ನಿರ್ದಿಷ್ಟ ದಾಳಿ”ಗೆ 28 ವರ್ಷಗಳ ಇತಿಹಾಸವಿದೆ. ಈ ಇತಿಹಾಸ ಕರಾಳ ಅಧ್ಯಾಯಗಳು ಪ್ರತಿ ಹತ್ತು ಇಲ್ಲವೇ ಹದಿನೆಂಟು ವರ್ಷಕ್ಕೊಮ್ಮೆ ತೆರೆದುಕೊಳ್ಳುತ್ತಲೇ ಹೋಗುತ್ತಿವೆ. ಸಂಘಟಿತ, ವ್ಯವಸ್ಥಿತ ಮತ್ತು “ನಿರ್ದಿಷ್ಟ ದಾಳಿ” ನಡೆದಾಗ ಸಾಮಾನ್ಯ ಜನತೆ ಜರ್ಝರಿತಗೊಂಡಿರುವುದಂತೂ ಸತ್ಯದ ಸಂಗತಿ.
ಸೂತ್ರ ಹಿಡಿದವರು ಪರದೆಯ ಹಿಂದೆ ಇದ್ದಾರೆ. ಪರದೆಯ ಹಿಂದೆ ಯಾರು ಕುಳಿತಿದ್ದಾರೆ? ಯಾವ ಬೊಂಬೆ ಸೂತ್ರ ಹಿಡಿದ್ದಾರೆಂಬುದು ಪ್ರೇಕ್ಷಕರಿಗೆ ಗೊತ್ತಾಗುತ್ತಿಲ್ಲ. ಸೂತ್ರಧಾರರು ನಿರ್ದೇಶಿಸಿದಂತೆ ಗೊಂಬೆಗಳು ನರ್ತಿಸುತ್ತಿವೆ. ಕೊಳ್ಳಿ ಇಟ್ಟಂತೆ ನಟಿಸಿದರೆ ವಾಸ್ತವದಲ್ಲಿ ಬೆಂಕಿ ಹೊತ್ತಿಕೊಂಡು ಉರಿಯುತ್ತದೆ. ಪಾತ್ರದ ಹತ್ಯೆ ನಡೆದುಹೋದರೆ ವಾಸ್ತವದಲ್ಲಿ ಹಲವು ತಲೆಗಳು ಉರುಳಿಹೋಗಿರುತ್ತವೆ. ಸೂತ್ರಧಾರರ ಶಕ್ತಿ ಏನೆಂಬುದು ಅವರ ಬೊಂಬೆ ಆಡಿಸುವ ರೀತಿಯಲ್ಲೇ ತಿಳಿಯುತ್ತದೆ. ರಂಗಸ್ಥಳದಲ್ಲಿ ಅಭಿನಯಿಸುವ ಬೊಂಬೆಗಳು ನಿಜ ಜೀವನದಲ್ಲಿ ಜೀವಂತ ಮನುಷ್ಯರೇ ಆಗಿರುತ್ತಾರೆ. ಅಂಥ ಬೊಂಬೆಗಳಿಂದಾಗಿಯೇ ಈಶಾನ್ಯ ದೆಹಲಿ ಹೊತ್ತಿ ಉರಿಯುತ್ತಿರುವುದು.
ಬೊಂಬೆಗಳು ಅಭಿನಯಿಸುವಾಗ ಯಾರೂ ರಂಗಸ್ಥಳಕ್ಕೆ ಹೋಗುವಂತಿಲ್ಲ. ಹೋಗಬೇಕಾದವರು ಹತ್ತಿರದಲ್ಲೇ ನಿಂತು ತಾದಾತ್ಮ್ಯದಿಂದ ನೋಡುತ್ತಾರೆ. ಬೊಂಬೆಗಳ ಅಭಿನಯ ಅಂಥದ್ದು. ನಿಜದಲ್ಲಿ ಬೆಂಕಿ ಹಚ್ಚಿದರೂ, ಜೀವಗಳು ಉರುಳಿಬಿದ್ದರೂ ಅದು ರಂಗದ ಮೇಲೆಯೇ ನಡೆದಂತೆ ಕಾಣುತ್ತದೆ. ಸೂತ್ರಧಾರರ ”ಪಾಲಕರು” ಆಜ್ಞಾನುವರ್ತಿಗಳು ಬೆಂಕಿ ಹೊತ್ತಿಕೊಂಡಿದ್ದನ್ನು ನೋಡಿ ನೀರು ಸುರಿದು ಆರಿಸುವ ಪ್ರಯತ್ನ ಮಾಡಬಹುದಿತ್ತು ಅದು ಮಾಡಲೇ ಇಲ್ಲ. ”ಊರೆಲ್ಲಾ ಕೊಳ್ಳೇ ಹೋದಮೇಲೆ ದಿಡ್ಡಿ ಬಾಗಿಲು ಹಾಕಿದರು” ಎಂಬಂತೆ ಪಾಲಕರು ನಡೆದುಕೊಂಡರು. ಸೂತ್ರದಾರರ ಕೈಚಳಕ ಪ್ರೇಕ್ಷಕರನ್ನು ಮನರಂಜಿಸಿತ್ತು. ಅವರ ಬಯಕೆಯೂ ಈಡೇರಿತ್ತು.
ಯಕ್ಷಗೊಂಬೆಗಳು ಪರಸ್ಪರ ಕಲ್ಲು ತೂರಿಕೊಂಡಿದ್ದವು. ಇದು ಜನರಿಗೆ ಕಾಣುವ ಹೊತ್ತಿಗೆ ಪರಸ್ಪರ ವಿರೋಧಿ ಗುಂಪು ಕಲ್ಲುತೂರಿಕೊಂಡಂತೆ. ಯಾಕೆ ಹೀಗೆ? ಇಂತಹ ನಾಟಕದ ದೃಶ್ಯಗಳ ಸೂತ್ರಧಾರರು ಆಟ ಆಡಲು ಬೇಕು. ಆ ಆಟ ಪ್ರೇಕ್ಷಕರಿಂದ ಹೊಗಳಿಕೆಯ ಗದ್ದುಗೆಗೆ ಏರಿಸುತ್ತದೆ. ಸೂತ್ರದಾರರು ಹೊಗಳಿಕೆಯ ಗದ್ದುಗೆ ಹಿಡಿಯುವುದೇ ತೊಗಲು ಬೊಂಬೆಗಳ ನರ್ತನದಿಂದ. ಆ ತೊಗಲು ಗೊಂಬೆಗಳು ಇಡೀ ದೇಶದ ಯಾವುದೇ ರಾಜ್ಯದಲ್ಲಿರಬಹುದು. ಅವು ಸದಾ ಕುಣಿಯುತ್ತಲೇ ಇರುತ್ತವೆ. ಗೊಂಬೆಗಳು ಹೆಚ್ಚುಹೆಚ್ಚು ಕುಣಿದಂತೆ ಪ್ರೇಕ್ಷಕ ಅಳುತ್ತಾನೆ, ನಗುತ್ತಾನೆ, ನೋವು ತಾಳಲಾರದೆ ಆಕ್ರಂದನ ಮಾಡುತ್ತಾನೆ.
ಮಹಾಭಾರತದಲ್ಲಿ ಕೃಷ್ಣ ಸೂತ್ರಧಾರ ಅರ್ಜುನನ ಸಾರಥಿ. ದ್ವಾರಕಾ ನಗರಿಯ ಅವತಾರ ಪುರುಷ. ಅಂಥ ಕೃಷ್ಣ ಯುದ್ದರಂಗದಲ್ಲಿ ಕುದುರೆಯ ಲಗಾಮು ಹಿಡಿದು ಅರ್ಜುನನಿಗೆ ನೆರವಾದ. ಪಾಂಡವರಿಗೆ ಪಟ್ಟಾಧಿಕಾರ ಸಿಗುವಂತೆ ಮಾಡುವಲ್ಲಿ ಯಶಸ್ವಿಯಾದ. ಯುದ್ದದಲ್ಲಿ ಸಾವು ನೋವಾದಾಗ ಅವರು ಮಾಡಿದ ಪಾಪದ ಫಲ ಅಂದ. ಧರ್ಮಕ್ಕೆ ಜ್ಲಾನಿ ಉಂಟಾದಾಗ ಅವತಾರವೆತ್ತಿ ದುಷ್ಟರ ಸಂಹಾರ ಮಾಡುತ್ತೇನೆ ಎಂದ. ಆ ದುಷ್ಟರು ಕೂಡ ನಮ್ಮೊಂದಿಗೆ ನೆಮ್ಮದಿಯಿಂದ ಜೀವನ ಸಾಗಿಸಿದ್ದವರೇ. ಆದರೆ ಅಧಿಕಾರದ ಆಸೆಗೆ ನಮ್ಮೊಂದಿಗಿನ ದುಷ್ಟರೆಂದು ಕರೆಯಲ್ಪಡುವವನ್ನು ಕೊಲ್ಲಲು ಪ್ರೇರೇಪಿಸಿದ. ದುಷ್ಟರು ಯಾರು ಎಂಬುದನ್ನು ನಿರ್ಧರಿಸುವರು ದ್ವಾರಕೆಯ ಪುತ್ರರು. ದ್ವಾರಕೆಯ ಸೂತ್ರದಾರರು ಮಾಡಿದ್ದು ತಪ್ಪಲ್ಲವೇ ಎಂದು ಕೇಳಿದರೆ ಧರ್ಮದ ಕಡೆ ಮುಖ ಮಾಡುತ್ತಾರೆ. ಆ ಮುಖಗಳಿಗೆ ರಕ್ತದ ಕಲೆಗಳು ಮೆತ್ತಿಕೊಂಡಿವೆ.
ಸಧ್ಯಕ್ಕೆ ತೊಗಲು ಬೊಂಬೆಯಾಟ ನಿಂತಿದೆ. ಯುದ್ದದಲ್ಲಿ ಕಾಲು, ಕಣ್ಣು, ಕೈ ಕಳೆದುಕಕೊಂಡ, ಗಾಯಗೊಂಡ ಅಮಾಯಕರು ಧನ್ವಂತರಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುಟುಂಬಗಳ ರೋಧಿಸುತ್ತಿವೆ. ಮನೆ, ಅಂಗಡಿ ಕಳೆದು ಕೊಂಡವರು ದಿಕ್ಕುಗಾಣದೆ ಯಾರತ್ತಲೋ ಸಹಾಯಹಸ್ತ ಚಾಚಿದ್ದಾರೆ. ಪರಿಹಾರ ಸಿಗುವ ನಿರೀಕ್ಷೆಯಲ್ಲಿದ್ದಾರೆ. ಕ್ರೂರ ಮನಸ್ಸುಗಳು ಜಯದಲ್ಲಿ ಸಂಭ್ರಮಿಸುತ್ತಿವೆ. ದುಃಖತಪ್ತರು ‘ಹರ ಕೊಲ್ಲಲ್ ಪರ ಕಾಯ್ವನೆ’? ಎಂದು ಗೋಳಾಡುತ್ತಿದ್ದಾರೆ. ಭೀಭತ್ಸ ಸನ್ನಿವೇಶ ನಮ್ಮೆದುರಿಗಿದೆ. ದುಃಖದ ಕಾರ್ಮೋಡಗಳು ಮಳೆಸುರಿಸುತ್ತಿವೆ. ಭೂಮಿ ನೆನೆಯದು ಬೆಂಕಿ ಆರದು ಅನ್ನುವಂತಿದೆ. ‘ಎಳವನ ಮೇಲೆ ಕುರುಡ ಕುಳಿತಿದ್ದಾನೆ/ ದಾರಿ ಸಾಗುವುದೆಂತೋ ನೋಡಬೇಕಾಗಿದೆ’.