Homeಮುಖಪುಟಲಲಿತಾ ಕುಮಾರಿ ಪ್ರಕರಣ ದಿಲ್ಲಿ ಪೊಲೀಸರಿಗೆ ಮಾದರಿಯಾಗಲಿ: ನ್ಯಾ. ಮುರಳೀಧರ್

ಲಲಿತಾ ಕುಮಾರಿ ಪ್ರಕರಣ ದಿಲ್ಲಿ ಪೊಲೀಸರಿಗೆ ಮಾದರಿಯಾಗಲಿ: ನ್ಯಾ. ಮುರಳೀಧರ್

ದಿಲ್ಲಿ ಪೊಲೀಸರು ಲಲಿತಾ ಕುಮಾರಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನಿಂದ ಕಲಿಯಬೇಕು ಮತ್ತು ಕಾನೂನು ಹೇಗೆ ಹೇಳುತ್ತದೆಯೋ ತಪ್ಪದೇ ಅದಕ್ಕನುಗುಣವಾಗಿ ಕೆಲಸ ಮಾಡಬೇಕು ಎಂದು ನ್ಯಾಯಮೂರ್ತಿ ಮುರಳೀಧರ್ ಹೇಳಿದ್ದಾರೆ.

- Advertisement -
- Advertisement -

-ಅಪರ್ಣಾ ಮಂಧಾನಿ

ಅನುವಾದ: ನಿಖಿಲ್ ಕೋಲ್ಪೆ

ದಿಲ್ಲಿ ಹೈಕೋರ್ಟ್ ಇತ್ತೀಚೆಗೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮತ್ತು ನ್ಯಾ. ಮುರಳೀಧರ್ ಅವರ ನಡುವಿನ ಆಕರ್ಣೀಯ ಸಂಭಾಷಣೆಗೆ ಸಾಕ್ಷಿಯಾಯಿತು.

ದಿಲ್ಲಿ ಹೈಕೋರ್ಟ್ ಈಶಾನ್ಯ ದಿಲ್ಲಿಯಲ್ಲಿ ಫೆಬ್ರವರಿ 23,24,25ರಂದು ನಡೆದ ಯೋಜಿತ ಗಲಭೆಗಳ ಕುರಿತು ವಿಶೇಷ ತನಿಖಾ ತಂಡ (ಎಸ್‌ಐಟಿ)ದಿಂದ ತನಿಖೆ ನಡೆಯಬೇಕು ಮತ್ತು ಬಿಜೆಪಿ ನಾಯಕರಾದ ಪರ್ವೇಶ್ ವರ್ಮಾ, ಅನುರಾಗ್ ಠಾಕೂರ್, ಕಪಿಲ್ ಮಿಶ್ರಾ ಮುಂತಾದವರ ಮೇಲೆ ಪ್ರಚೋದನಕಾರಿ ಭಾಷಣ ಮಾಡಿದ್ದಕ್ಕಾಗಿ ಎಫ್ಐಆರ್ ದಾಖಲಿಸಬೇಕು ಎಂದು ಕೋರಿ ಸಾಮಾಜಿಕ ಕಾರ್ಯಕರ್ತ ಹರೀಶ್ ಮಂದರ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಕುರಿತು ಹೈಕೋರ್ಟಿನಲ್ಲಿ ವಿಚಾರಣೆ ನಡೆಯುತ್ತಿತ್ತು.

ವಿಚಾರಣೆಯ ವೇಳೆ ಅಧಿಕಾರಿಗಳ ಮೇಲೆ ಕಟುವಾಗಿ ದಾಳಿ ನಡೆಸಿದ ನ್ಯಾ. ಮುರಳೀಧರ್, “ತನಿಖೆಯು ಲಲಿತಾ ಕುಮಾರಿ ವಿರುದ್ಧ  ಉತ್ತರ ಪ್ರದೇಶ ಸರಕಾರ ಪ್ರಕರಣದಲ್ಲಿ ಸುಪ್ರೀಂಕೋರ್ಟಿನ ಸಂವಿಧಾನ ಪೀಠವು ನೀಡಿರುವ ತೀರ್ಪಿನಿಂದ ನಿರ್ದೇಶಿತವಾಗಬೇಕು ಮತ್ತು ಪೊಲೀಸರು ಕಾನೂನಿನಲ್ಲಿ ಹೇಳಿರುವಂತೆಯೇ ಕೆಲಸ ಮಾಡಬೇಕು” ಎಂದು ಹೇಳಿದರು.

ಪ್ರಕರಣವು ಹೈಕೋರ್ಟಿನ ಇನ್ನೊಂದು ಪೀಠದಲ್ಲಿ ವಿಚಾರಣೆಗೆ ಬಂದಾಗಲೂ ಹರೀಶ್ ಮಂದರ್ ಪರ ವಾದಿಸಿದ ಹಿರಿಯ ವಕೀಲ ಕಾಲಿನ್ ಗೊನ್ಸಾಲ್ವಿಸ್ ಅವರು ತನ್ನ ವಾದದಲ್ಲಿ 2013ರ ಲಲಿತಾ ಕುಮಾರಿ ಪ್ರಕರಣವನ್ನು ಬಹುವಾಗಿ ಅವಲಂಬಿಸಿದರು. ಈ ಪ್ರಕರಣವು ಎಪ್ರಿಲ್‌ನಲ್ಲಿ ಮತ್ತೆ ವಿಚಾರಣೆಗೆ ಬರಲಿರುವ ಹಿನ್ನೆಲೆಯಲ್ಲಿ ‘ದಿ ಪ್ರಿಂಟ್’ ಲಲಿತಾ ಕುಮಾರಿ ಪ್ರಕರಣದ ತೀರ್ಪನ್ನು ವಿವರಿಸಿದೆ.

ಲಲಿತಾ ಕುಮಾರಿ ಯಾರು?

ಲಲಿತಾ ಕುಮಾರಿ ಅಪ್ರಾಪ್ತ ವಯಸ್ಸಿನ ಒಬ್ಬಳು ಬಾಲಕಿಯಾಗಿದ್ದು, ಆಕೆಯನ್ನು ಅಪಹರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಆಕೆಯ ತಂದೆ ಭೋಲಾ ಕಮತ್ ಸುಪ್ರೀಂಕೋರ್ಟಿನಲ್ಲಿ ಹೇಬಿಯಸ್ ಕೋರ್ಪಸ್ ಅರ್ಜಿ ಸಲ್ಲಿಸಿದ್ದರು. ತಾನು ಸಂಬಂಧಪಟ್ಟ ಪೊಲೀಸ್ ಠಾಣೆಯ ಠಾಣಾಧಿಕಾರಿಗೆ ವಿವರವಾದ ವರದಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಅವರು ಆರೋಪಿಸಿದ್ದರು. ವಿಷಯ ಪೊಲೀಸ್ ಸುಪರಿಂಟೆಂಟ್‌ಗೆ ತಲುಪಿದ ಬಳಿಕವಷ್ಟೇ ಎಫ್ಐಆರ್ ದಾಖಲಿಸಲಾಗಿತ್ತು.

ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ದೇಶದ ಉದ್ದಗಲಕ್ಕೂ ಪ್ರಕರಣದಿಂದ ಪ್ರಕರಣಕ್ಕೆ ಎಫ್ಐಆರ್ ನೋಂದಣಿಯಲ್ಲಿ ವ್ಯತ್ಯಯವಿರುವುದನ್ನು ಗಮನಿಸಿತು. ಈ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ನೋಟೀಸು ಜಾರಿ ಮಾಡಿತು. ಕ್ರಿಮಿನಲ್ ಪ್ರೊಸಿಜರ್ ಕೋಡ್ (ಸಿಆರ್‌ಪಿಸಿ)ನ ವಿಧಿ 154ರ ಅನ್ವಯ ಗಂಭೀರ (ಗುರುತರ) ದಂಡನಾರ್ಹ ಅಪರಾಧವೊಂದು (cognisable offence) ಘಟಿಸಿರುವ ಕುರಿತು ಮಾಹಿತಿ ಸಿಕ್ಕಿದ ತಕ್ಷಣ ಪೊಲೀಸ್ ಅಧಿಕಾರಿಗಳು ಎಫ್ಐಆರ್ ದಾಖಲಿಸುವುದಕ್ಕೆ ಬದ್ಧರೇ ಎಂಬ ಕುರಿತು ವಿವಿಧ ನ್ಯಾಯಾಲಯಗಳು ತದ್ವಿರುದ್ಧವಾದ ತೀರ್ಪುಗಳನ್ನು ನೀಡಿವುದನ್ನೂ ಮೂವರು ಸದಸ್ಯರ ಸಂವಿಧಾನ ಪೀಠ ಪರಿಶೀಲಿಸಿತು.

ಗಂಭೀರ ದಂಡನಾರ್ಹ ಅಪರಾಧವೆಂದರೆ, ಪೊಲೀಸರು ಯಾವುದೇ ವಾರಂಟ್ ಇಲ್ಲದೆಯೇ ವ್ಯಕ್ತಿಯನ್ನು ಬಂಧಿಸಬಹುದಾದ ಅಪರಾಧ. ಇವುಗಳಲ್ಲಿ ಕೊಲೆ, ಅತ್ಯಾಚಾರ, ವರದಕ್ಷಿಣೆ ಸಾವು, ಅಪಹರಣ ಇತ್ಯಾದಿಗಳು ಬರುತ್ತವೆ. ಗುರುತರವಾದ ಅಪರಾಧದ ಕುರಿತಾಗಿ ಪಡೆದ ಮಾಹಿತಿಯನ್ನು ಯಾವ ರೀತಿಯಲ್ಲಿ ಪರಿಗಣಿಸಬೇಕು ಎಂಬ ಕುರಿತು ಸಿಆರ್‌ಪಿಸಿಯ ವಿಧಿ 154ರಲ್ಲಿ ವಿವರಿಸಲಾಗಿದೆ. ಎಫ್ಐಆರ್‌ನ ಕಡ್ಡಾಯ ನೋಂದಣಿಯ ಪ್ರಶ್ನೆಯನ್ನು ನಂತರ ಐವರು ನ್ಯಾಯಾಧೀಶರ ಪೀಠಕ್ಕೆ ಸಲ್ಲಿಸಲಾಗಿತ್ತು.

ಪೊಲೀಸ್ ಅಧಿಕಾರಿಗಳು ಕರ್ತವ್ಯದಿಂದ ನುಣುಚಿಕೊಳ್ಳುವಂತಿಲ್ಲ

ಲಲಿತಾ ಕುಮಾರಿ ಪ್ರಕರಣದಲ್ಲಿ ಪೊಲೀಸರು ಅನುಸರಿಸಬೇಕಾದ ಕ್ರಮಗಳ ಕುರಿತು ಸುಪ್ರೀಂಕೋರ್ಟ್ ಎಂಟು ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಿತ್ತು.

ಪಡೆದ ಮಾಹಿತಿಯು ಗುರುತರವಾದ ಅಪರಾಧ ಘಟಿಸಿರುವುದನ್ನು ಸೂಚಿಸುತ್ತಿದ್ದರೆ, ಸಿಆರ್‌ಪಿಸಿ ವಿಧಿ 154ರ ಅನ್ವಯ ಎಫ್ಐಆರ್ ದಾಖಲಿಸುವುದು ಕಡ್ಡಾಯ ಎಂದು ಪೀಠವು ತೀರ್ಪು ನೀಡಿತು. ಇಂತಹ ಸಂದರ್ಭದಲ್ಲಿ ಯಾವುದೇ ಪೂರ್ವಭಾವಿ ತನಿಖೆಗೆ ಅವಕಾಶವಿಲ್ಲ ಎಂದು ಅದು ಹೇಳಿತು.  “ಗುರುತರ ಅಪರಾಧ ಘಟಿಸಿರುವ ಮಾಹಿತಿಯನ್ನು ಬಹಿರಂಗಗೊಳಿಸಲಾದಾಗ ಪೊಲೀಸ್ ಅಧಿಕಾರಿಯು ತನ್ನ ಕರ್ತವ್ಯದಿಂದ ನುಣುಚಿಕೊಳ್ಳುವಂತಿಲ್ಲ. ಗುರುತರ ಅಪರಾಧ ಘಟಿಸಿರುವ ಮಾಹಿತಿಯನ್ನು ಪಡೆದ ತಕ್ಷಣ ಎಫ್‌ಐಆರ್ ದಾಖಲಿಸದೆ ಕರ್ತವ್ಯಚ್ಯುತಿ ಮಾಡಿದ ಅಧಿಕಾರಿಯ ವಿರುದ್ಧ ಕ್ರಮಕೈಗೊಳ್ಳಬೇಕು” ಎಂದು ತೀರ್ಪಿನಲ್ಲಿ ಹೇಳಲಾಗಿದೆ.

ಪೂರ್ವಭಾವಿ ತನಿಖೆ ನಡೆಸಬಹುದಾದಂತಹ ಪ್ರಕರಣಗಳಿಗೆ ಸಂಬಂಧಿಸಿದಂತೆ ಅದು ವಾಸ್ತವಾಂಶಗಳು ಮತ್ತು ಸಂದರ್ಭಗಳ ಮೇಲೆ ಅವಲಂಬಿಸಿದೆ ಎಂದು ನ್ಯಾಯಾಲಯ ಹೇಳಿದೆ. ಇದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಇಂತಹಾ ಪ್ರಕರಣಗಳ ಒಂದು ವಿವರವಾದ ಯಾದಿಯನ್ನೇ ನೀಡಿದೆ. ಅವುಗಳಲ್ಲಿ ದಾಂಪತ್ಯ/ ಕೌಟುಂಬಿಕ ಕಲಹಗಳು, ವಾಣಿಜ್ಯ ಅಪರಾಧಗಳು, ವೈದ್ಯಕೀಯ ನಿರ್ಲಕ್ಷ್ಯದ ಪ್ರಕರಣಗಳು, ಭ್ರಷ್ಟಾಚಾರದ ಪ್ರಕರಣಗಳು ಇತ್ಯಾದಿಗಳಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸುವ ಮೊದಲು ಪೂರ್ವಭಾವಿ ತನಿಖೆಯ ಅಗತ್ಯವಿದ್ದು, ಎಫ್‌ಐಆರ್ ದಾಖಲೆಯಲ್ಲಿ ವಿಳಂಬವಾಗಬಹುದು.

ಯಾವುದೇ ಪ್ರಕರಣದಲ್ಲಿ ಏಳು ದಿನಗಳ ಒಳಗಾಗಿ ತನಿಖೆಯನ್ನು ಆರಂಭಿಸಬೇಕು ಎಂದು ಕೂಡಾ ಸುಪ್ರೀಂಕೋರ್ಟ್ ಆದೇಶಿಸಿತ್ತು. 2014ರ ಮಾರ್ಚ್ ತಿಂಗಳಲ್ಲಿ ಇದನ್ನು ಬದಲಿಸಿ ಸಾಮಾನ್ಯ ಪ್ರಕರಣಗಳಲ್ಲಿ ಸಮಯದ ಮಿತಿಯನ್ನು 15 ದಿನಗಳಿಗೆ ಮತ್ತು ಅಸಾಧಾರಣ ಪ್ರಕರಣಗಳಲ್ಲಿ ಆರು ವಾರಗಳಿಗೆ ವಿಸ್ತರಿಸಲಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...