ಅಮೃತಾ- ಪ್ರಣಯ್ ಅಂತರ್ಜಾತಿ ವಿವಾಹದ ಕಾರಣಕ್ಕೆ ತೆಲಂಗಾಣವಲ್ಲದೇ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಪ್ರಣಯ್ ಹತ್ಯೆಯ ಮುಖ್ಯ ಆರೋಪಿಯಾಗಿದ್ದ ಅಮೃತಾಳ ತಂದೆ ಮಾರುತಿರಾವ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇಷ್ಟಕ್ಕೆ ಕೆಲವರು ನ್ಯಾಯ ಸಿಕ್ಕಿತು ಎಂದು ಅಭಿಪ್ರಾಯಪಟ್ಟಿದ್ದಾರೆ. ಆದರೆ ಈ ದೇಶದ ಜಾತಿ ವ್ಯವಸ್ಥೆ ಅಷ್ಟು ಸುಲಭವಲ್ಲ ಎಂಬುದು ಮತ್ತೆ ಮತ್ತೆ ಸಾಬೀತು ಪಡಿಸುತ್ತಿದೆ.
ಕಳೆದ ವರ್ಷ ತೆಲಂಗಾಣದ ನಲ್ಗೋಂಡ ಜಿಲ್ಲೆಯ ಮಿರ್ಯಾಲಗೂಡದಲ್ಲಿ ತಳಸಮುದಾಯ ಹುಡುಗ ಪ್ರಣಯ್ ಮತ್ತು ಮೇಲ್ಜಾತಿಯ ಹುಡುಗಿ ಅಮೃತ ಪ್ರೀತಿಸಿದ್ದರು. ಪ್ರಣಯಪಕ್ಷಿಗಳಿಂತಿದ್ದ ಈ ಮುದ್ದಾದ ಜೋಡಿ ಮದುವೆಯಾದ ಕಾರಣಕ್ಕೆ ಅಮೃತರವರ ತಂದೆ ಮಾರುತಿ ರಾವ್ ಸಿಟ್ಟಿನಿಂದ ಅವರನ್ನು ದೂರ ಇಟ್ಟು ಬೆದರಿಕೆ ಹಾಕಿದ್ದರು.
ಇದನ್ನೂ ಓದಿ : ಪ್ರೀತಿ ಕೊಂದ ಜಾತಿ… ಜಾತಿಯನ್ನು ಕೊಲ್ಲುವುದು ಯಾವಾಗ?
ನಂತರ ಗರ್ಭಿಣಿ ಸಂದರ್ಭದಲ್ಲಿ ಅಮೃತಳನ್ನು ಆಸ್ಫತ್ರೆಗೆ ಕರೆದುಕೊಂಡು ಬಂದ ಪ್ರಣಯ್ನನ್ನು ಅಮೃತಾಳ ತಂದೆ ಮಾರುತಿರಾವ್ ಮತ್ತು ಆತನ ಗೂಂಡಾಗಳು 2018 ಸೆಪ್ಟೆಂಬರ್ 14ರಂದು ಭೀಕರವಾಗಿ ಹಲ್ಲೆ ಮಾಡಿ ಕೊಲೆ ಮಾಡಿದ್ದರು. ಇಡೀ ದೇಶ ಬೆಚ್ಚಿ ಬೀಳುವಂತಹ ಜಾತಿ ದುರಹಾಂಕಾರದ ಹತ್ಯೆ ಇದಾಗಿತ್ತು. ಇದಕ್ಕೆ ಜಾತಿಧರ್ಮ ನೋಡದೇ ಹಲವಾರು ಜನ ಈ ದುಷ್ಕೃತ್ಯವನ್ನು ಖಂಡಿಸಿದ್ದರು.
ಆ ಸಂದರ್ಭದಲ್ಲಿ ನೊಂದು ಬೆಂದು ಒಂಟಿಯಾದ ಅಮೃತಾ ಏನು ಮಾಡಬೇಕು? ತುಂಬು ಗರ್ಭಿಣಿಯಾದ ಅವಳು ತನ್ನ ಗಂಡನನ್ನು ತನ್ನ ಕಣ್ಣಾರೆ ಕೊಂದ ಅಪ್ಪನ ಮನೆಗೆ ಹೋಗಬೇಕೆ? ಇಲ್ಲ ತನ್ನ ಗಂಡನಿಲ್ಲದಿದ್ದರೂ ಗಂಡನ ಮನೆಯಲ್ಲಿ ಇರಬೇಕೆ ಎಂಬುದರ ಕುರಿತು ಗೊಂದಲಗೊಂಡಳು. ಆದರೆ ಕೊನೆಗೆ ತನ್ನ ಅಪ್ಪನ ವಿರುದ್ಧ ದೂರು ನೀಡಿ ತನ್ನ ಗಂಡನ ಮನೆಯಲ್ಲಿಯೇ ಉಳಿದುಕೊಂಡಳು. ಪ್ರಣಯ್ನ ತಂದೆ ತಾಯಿಯರು ಸಹ ಮಗ ಬಲಿಯಾದರೂ ಸೊಸೆ ಅಮೃತಾಳನ್ನು ಮನೆ ಮಗಳಂತೆ ನೋಡಿಕೊಳ್ಳಲು ಆರಂಭಿಸಿದರು. ಅಮೃತಾಗೆ ಮುದ್ದಾದ ಗಂಡು ಮಗು ಹುಟ್ಟಿದೆ. ಆ ಮಗುವಿಗೆ ನಿಹಾನ್ ಎಂದು ಹೆಸರಿಡಲಾಗಿದೆ.
ಈಗ ಒಂದೂವರೆ ವರ್ಷದ ಬಳಿಕ ಆ ಪ್ರಕರಣದ ಪ್ರಮುಖ ಆರೋಪಿ ಮಾರುತಿರಾವ್ ಆತ್ಮಹತ್ಯೆ ಮಾಡಿಕೊಳ್ಳುವಾಗ ಬರೆದ ಪತ್ರದಲ್ಲಿ “ಗಿರಿಜಾ (ಹೆಂಡತಿ) ಕ್ಷಮಿಸು, ಅಮೃತ(ಮಗಳು) ಅಮ್ಮನ ಹತ್ತಿರ ಬಾ’ ಎಂದು ಮನವಿ ಮಾಡಿದ್ದಾನೆ.
ಈಗ ಬಹಳಷ್ಟು ಜಾತಿವಾದಿಗಳು ಅಮೃತಾ ಮೇಲೆ ಮುಗಿಬಿದ್ದಿದ್ದಾರೆ. ನಿನ್ನಿಂದಾಗಿ ನಮ್ಮ ಸಮದಾಯದ ಮಾನ ಮರ್ಯಾದೆ ಹಾಳಾಗಿದ್ದಲ್ಲದೇ ನಿನ್ನ ಅಪ್ಪನ ಸಾವಿಗೂ ನೀನೇ ಕಾರಣಳಾಗಿದ್ದೀಯ. ನಿನ್ನ ತಾಯಿ ಒಂಟಿಯಾಗಲು ನೀನೇ ಕಾರಣಳಾಗಿದ್ದೀಯ.. ಈಗಲಾದರೂ ನಿನ್ನ ತವರು ಮನೆಗೆ ಬಂದು ನಿನ್ನ ಒಬ್ಬಂಟಿ ತಾಯಿಯನ್ನು ನೋಡಿಕೊ ಎಂದು ಉಪದೇಶಗಳನ್ನು ನೀಡುತ್ತಿದ್ದಾರೆ.
ನಿನ್ನ ತಂದೆ ಪಶ್ಚಾತಾಪಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆದರೆ ನಿನಗೆ ಪಶ್ಚಾತಾಪವಿಲ್ಲ ನೋಡು ಎಂದು ಹಂಗಿಸುತ್ತಿದ್ದಾರೆ. ಒಟ್ಟಿನಲ್ಲಿ ತನ್ನ ಮಗಳನ್ನೇ ಕೊಂದ ಕೊಲೆಗಡುಕ, ಜಾತಿ ಕ್ರಿಮಿ ಮಾರುತಿರಾವ್ ಮೇಲೆ ಅನುಕಂಪ ತೋರಿಸುತ್ತಾ, ಸಂತ್ರಸ್ತೆಯಾದ ಅಮೃತಾಳನ್ನೇ ವಿಲನ್ ಮಾಡಲು ನೋಡುತ್ತಿದ್ದಾರೆ.
ವಾಸ್ತವವೇನು
ಅಮೃತಾ ದೂರು ನೀಡಿದ ನಂತರ ಮಾರುತಿರಾವ್ ಮತ್ತು ಆತನ ಸಹಚರರ ಮೇಲೆ ಬಲವಾದ ಕೇಸುಗಳು ಬಿದ್ದಿದ್ದು ಕೋರ್ಟ್ಗೆ ಅಲೆಯುತ್ತಿದ್ದ. ಇತ್ತಿಚೆಗೆ ಅಮೃತಾಳನ್ನು ತನ್ನ ಮನೆಗೆ ಬಂದರೆ ಆಸ್ತಿಯೆಲ್ಲ ಬರೆದುಕೊಡುವುದಾಗಿ ಹೇಳಿ ಬೆದರಿಕೆ ಹಾಕಿಸಿದರು ಅಮೃತಾ ಜಗ್ಗದೇ ಮತ್ತೆ ಈ ಬೆದರಿಕೆಯ ವಿಚಾರದ ಕುರಿತು ಪೋಲೀಸರಿಗೆ ದೂರು ನೀಡಿದ್ದಳು. ಮಾರುತಿರಾವ್ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದು ಸಾಕಷ್ಟು ಆಸ್ತಿ ಮಾಡಿದ್ದಾನೆ. ಈ ಕುರಿತು ಆತ ಮತ್ತು ಆತನ ಸಹೋದರ ಶ್ರವಣ್ ನಡುವೆ ಜಗಳ ಸಹ ನಡೆಯುತ್ತಿತ್ತು.
ಮಾರುತಿರಾವ್ ಸಹೋದರ ಶ್ರವಣ್ ಕೂಡ ಕೊಲೆ ಆರೋಪಿಯಾಗಿದ್ದ. ಹಾಗಾಗಿ ಆತ ಪದೇ ಪದೇ ಕೊಲೆ ಕೇಸಿನಲ್ಲಿ ನಾನು ಅಲೆಯುತ್ತಿದ್ದೇನೆ. ನಿನಗಿದ್ದ ಒಬ್ಬಳೇ ಮಗಳು ಸಹ ನಿನ್ನ ಜೊತೆಗಿಲ್ಲ ಮಾತ್ರವಲ್ಲದೇ ನಿನ್ನ ವಿರುದ್ಧವೇ ದೂರು ನೀಡುತ್ತಿದ್ದಾಳೆ. ಹಾಗಾಗಿ ಆಕೆಯನ್ನು ಮುಗಿಸಿಬಿಡು, ನಿನ್ನ ಆಸ್ತಿಯನ್ನೆಲ್ಲ ನನ್ನ ಹೆಸರಿಗೆ ಬರೆದುಕೊಂಡು ಎಂದು ದುಂಬಾಲು ಬಿದ್ದಿದ್ದ ಎಂಬ ಸತ್ಯಗಳು ಒಂದೊಂದೇ ಹೊರಬರುತ್ತಿವೆ.
ಇದೆಲ್ಲವೂ ಅಮೃತಾಳ ಗಮನಕ್ಕೆ ಬಂದಿತ್ತು. ಹಾಗಾಗಿಯೇ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅಕೆ “ನನ್ನ ತಂದೆ ಮಾರುತಿರಾವ್ ಹೆದರಿಕೆಯ ವ್ಯಕ್ತಿಯಲ್ಲ. ಪಶ್ಚಾತ್ತಾಪದಿಂದ ಆತ್ಮಹತ್ಯೆ ಮಾಡಿಕೊಳ್ಳುವವರಾಗಿದ್ದರೆ ಈ ಹಿಂದೆಯೇ ಮಾಡಿಕೊಳ್ಳುತ್ತಿದ್ದರು. ನಮ್ಮ ಚಿಕ್ಕಪ್ಪ ಶ್ರವಣ್ ಜೊತೆ ನಮ್ಮ ತಂದೆಗೆ ಹಲವಾರು ಭಾರಿ ಆಸ್ತಿ ಜಗಳ ಆಗಿದೆ ಎಂದು ಕೇಳಿದ್ದೆ, ಈ ಆತ್ಮಹತ್ಯೆಗೆ ಇದೇ ಕಾರಣವು ಇರಬಹುದು” ಎಂಬ ಸಂದೇಹ ವ್ಯಕ್ತಪಡಿಸಿದ್ದಾಳೆ.
ಒಬ್ಬ ವ್ಯಕ್ತಿಗೆ ತನ್ನನ್ನು ತಾನು ಕೊಂದುಕೊಳ್ಳುವ ಮತ್ತು ಇನ್ನೊಬ್ಬರನ್ನು ಕೊಲ್ಲವ ಯಾವುದೇ ಹಕ್ಕು ಇಲ್ಲ. ನ್ಯಾಯಾಲಯದ ಮೂಲಕ ನಮ್ಮ ತಂದೆಗೆ ಯಾವುದೇ ರೀತಿಯ ಶಿಕ್ಷೆ ಆಗಿದ್ದರೂ ಸಹ ನಾನು ಸ್ವಾಗತಿಸುತ್ತಿದ್ದೆ. ಆದರೆ ಈ ಆತ್ಮಹತ್ಯೆ ಮಾಡಿಕೊಂಡಿರುವ ವೀಚಾರ ನೋವನ್ನು ತಂದಿದೆ. ಗಂಡ ತೀರಿಕೊಂಡರೆ ಆ ಹೆಂಡತಿಯ ಸ್ಥಿತಿ ಹೇಗಿರುತ್ತದೆ ಎಂದು ನನಗೆ ಒಂದೂವರೆ ವರ್ಷದಿಂದ ಅನುಭವವಾಗಿದೆ. ಹಾಗಾಗಿಯೇ ನಮ್ಮ ತಾಯಿಯನ್ನು ಮಾತಾಡಿಸಲು ಹೋಗಿದ್ದೆ. ಆದರೆ ಅಲ್ಲಿನ ನಮ್ಮ ಕುಟುಂಬಸ್ಥರು ನನಗೆ ಅನುಮತಿ ನೀಡಲಿಲ್ಲ. ಮಗನನ್ನು ಕಳೆದುಕೊಂಡ ನನ್ನ ಅತ್ತೆ-ಮಾವನನ್ನು ನಾನು ಬಿಟ್ಟುಹೋಗಲು ಸಾಧ್ಯವಿಲ್ಲ. ಆದರೆ ನನ್ನ ತಾಯಿಯು ನನ್ನ ಜೊತೆ ಬಂದರೆ ನಾನೇ ನೋಡಿಕೊಳ್ಳುತ್ತೇನೆ. ನನಗೆ ಮಾರುತಿರಾವ್ನ ಯಾವ ಆಸ್ತಿಯ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾಳೆ.
ಇದನ್ನೂ ಓದಿ: ಅಂತರ್ಜಾತಿ ವಿವಾಹದಿಂದ ಹತ್ಯೆಯಾದ ಪ್ರಣಯ್ ಹೆಂಡತಿ ಅಮೃತಗೆ ತಂದೆಯಿಂದ ಮತ್ತೆ ಬೆದರಿಕೆ: ದೂರು ದಾಖಲು
ಆ ಮೂಲಕ ಜಾತಿಗಿಂತ ಮಾನವೀಯತೆ ಮತ್ತು ಮನುಷ್ಯ ಸಂಬಂಧಗಳು ಮುಖ್ಯ ಎಂದು ಸಾರಿದ್ದಾಳೆ. ಆಕೆ ಪ್ರಬುದ್ಧವಾಗಿ ನಡೆದುಕೊಂಡಿದ್ದಾಳೆ. ಆದರೆ ಆಕೆಯ ಕುಟುಂಬ ಮಾತ್ರ ಇನ್ನು ಜಾತಿಗ್ರಸ್ಥ ಮನಸ್ಥಿತಿಯಿಂದ ಹೊರಬಂದಿಲ್ಲ. ಇದು ಈ ದೇಶದ ದುಸ್ಥಿತಿಯಾಗಿದೆ. ಹಾಗಾಗಿಯೇ ಜಸ್ಟೀಸ್ ಫಾರ್ ಪ್ರಣಯ್ ಎಂಬ ಅಭಿಯಾನದ ಮೂಲಕ ಅಮೃತಾ ತನ್ನ ಹೋರಾಟವನ್ನು ಮುಂದುವರೆಸಿದ್ದಾಳೆ. ಸಮಾಜ ಈ ಸಂದರ್ಭದಲ್ಲಿ ಆಕೆಯ ಪರ ನಿಲ್ಲಬೇಕೆ ಹೊರತು ಜಾತಿವಾದಿ ಆಕೆಯ ತಂದೆಯ ಪರವಲ್ಲ..