Homeಮುಖಪುಟಎನ್‌ಆರ್‌ಸಿ: ಮೋದಿ ಸರಕಾರವನ್ನು ಮಣಿಸಲು ರಾಜ್ಯಗಳಿಗಿರುವ ಮೂರು ಸುಲಭ ಹೆಜ್ಜೆಗಳು

ಎನ್‌ಆರ್‌ಸಿ: ಮೋದಿ ಸರಕಾರವನ್ನು ಮಣಿಸಲು ರಾಜ್ಯಗಳಿಗಿರುವ ಮೂರು ಸುಲಭ ಹೆಜ್ಜೆಗಳು

ಭಾರತವು ಕೊರೊನ ಮತ್ತು ಕಾಂಗ್ರೆಸ್ ಬಿಕ್ಕಟ್ಟುಗಳ ಕುರಿತು ಚರ್ಚಿಸುತ್ತಿರುವಂತೆಯೇ, ನಾವು ಭಾರತವು ಎದುರುನೋಡುತ್ತಿರುವ ಸಾಂವಿಧಾನಿಕ ಬಿಕ್ಕಟ್ಟನ್ನು ಅವಗಣಿಸಬಾರದು.

- Advertisement -
- Advertisement -
  • ಯೋಗೇಂದ್ರ ಯಾದವ್

ಅನುವಾದ: ನಿಖಿಲ್ ಕೋಲ್ಪೆ

ರಾಜ್ಯಗಳು ಎನ್‌ಪಿಆರ್ ಮಾಹಿತಿ ಸಂಗ್ರಹವನ್ನು ನಿರಾಕರಿಸಬೇಕಾಗಿಲ್ಲ. ಜನಗಣತಿಯ ಪಾವಿತ್ರ್ಯ ಉಳಿಸಿಕೊಳ್ಳಲು ಅವು ಕೆಲವು ಮುನ್ನೆಚ್ಚರಿಕೆಗಾಗಿ ಒತ್ತಾಯಿಸಬಹುದು ಮತ್ತು ತಮ್ಮದೇ ಕಾನೂನುಬದ್ಧ ಕರ್ತವ್ಯಗಳ ಉಲ್ಲಂಘನೆಯಾಗದಂತೆ ನೋಡಿಕೊಳ್ಳಬಹುದು.
….

ಭಾರತವು ಕೊರೊನ ಮತ್ತು ಕಾಂಗ್ರೆಸ್ ಬಿಕ್ಕಟ್ಟುಗಳ ಕುರಿತು ಚರ್ಚಿಸುತ್ತಿರುವಂತೆಯೇ, ನಾವು ಭಾರತವು ಎದುರುನೋಡುತ್ತಿರುವ ಸಾಂವಿಧಾನಿಕ ಬಿಕ್ಕಟ್ಟನ್ನು ಅವಗಣಿಸಬಾರದು. ಎನ್‌ಆರ್‌ಸಿ ವಿರುದ್ಧ ಸಮರ ಪಾಳಯಕ್ಕೆ ಈ ವಾರ ದಿಲ್ಲಿ ಮತ್ತು ತೆಲಂಗಾಣ ಸೇರಿಕೊಳ್ಳುವುದರೊಂದಿಗೆ ದೇಶದ ಇತಿಹಾಸದಲ್ಲಿಯೇ ಅತ್ಯಂತ ಗಂಭೀರ ಸಾಂವಿಧಾನಿಕ ಸಂಘರ್ಷಕ್ಕೆ ವೇದಿಕೆ ಸಿದ್ಧವಾಗಿದೆ. ಸಂಘರ್ಷದ ವಿಷಯ ಅಂದರೆ, ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಎಂದರೆ, ಎನ್‌ಪಿಆರ್ ನಡೆಸುವುದು ಸಣ್ಣದೆಂಬಂತೆ ಕಾಣಬಹುದು. ಆದರೆ, ಬಾಜಿಗಳು ಬಹಳ ದೊಡ್ಡದಾಗಿವೆ. ಈ ಪಣದಲ್ಲಿ ಇರುವುದು ಒಕ್ಕೂಟ ವ್ಯವಸ್ಥೆ, ಜಾತ್ಯಾತೀತತೆ ಮತ್ತು ಪ್ರಜಾಪ್ರಭುತ್ವದಂತಹ ದೊಡ್ಡ ವಿಷಯಗಳು!

ಈಗಾಗಲೇ 11 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳು ಈಗಿರುವ ರೀತಿಯಲ್ಲಿ ಎನ್‌ಪಿಆರ್ ಕುರಿತು ಸಂಶಯ ವ್ಯಕ್ತಪಡಿಸಿವೆ. ಕೇಂದ್ರ ಸರಕಾರದ ಯಾವುದೇ ಕಾರ್ಯಕ್ರಮಕ್ಕೆ ದೇಶದ ಹೆಚ್ಚುಕಡಿಮೆ ಅರ್ಧದಷ್ಟು ರಾಜ್ಯಗಳು ವಿರೋಧ ವ್ಯಕ್ತಪಡಿಸಿರುವುದು ಇದೇ ಮೊದಲು. ಬಿಹಾರ, ಆಂಧ್ರಪ್ರದೇಶ, ಮತ್ತು ತಮಿಳುನಾಡು ಸರಕಾರಗಳು ಟೀಕಾಕಾರರ ಜೊತೆಗೆ ಸೇರಿರುವುದರಿಂದ, ಇದೀಗ ಸರಳವಾದ ಬಿಜೆಪಿ- ಬಿಜೆಪಿ ವಿರೋಧಿ ಹೊಂದಾಣಿಕೆಯಾಗಿ ಉಳಿದಿಲ್ಲ. ನರೇಂದ್ರ ಮೋದಿ ಸರಕಾರವು ಹಿಂದಡಿ ಇಟ್ಟಿರುವುದು ಸ್ಪಷ್ಟವಾಗಿದೆ. ಇದು ಕೇಂದ್ರ ಗೃಹಸಚಿವ ಅಮಿತ್ ಶಾ ಎನ್‌ಪಿಆರ್ ಕುರಿತು ರಾಜ್ಯಸಭೆಯಲ್ಲಿ ನೀಡಿದ ಪ್ರತಿಕ್ರಿಯೆಯಿಂದ ಸಾಬೀತಾಗಿದೆ. ಆದರೂ, ಈ ಕದನದ ಪರಿಣಾಮ ಏನಾಗಬಹುದು ಎಂಬುದು ಇನ್ನೂ ಅಸ್ಪಷ್ಟವಾಗಿದೆ. ಆದರೆ, ಎನ್‌ಪಿಆರ್ ವಿರೋಧಿಸುತ್ತಿರುವ ರಾಜ್ಯಗಳು ಯಾವುದೇ ಒಂದು ಸಮಾನ ಅಥವಾ ಯಾವುದೇ ಒಂದು ಕಾರ್ಯತಂತ್ರ ಹೊಂದಿರುವಂತೆ ಕಾಣುವುದಿಲ್ಲ.

ಎನ್‌ಪಿಆರ್ ವಿಷಯ ಏಕೆ ಮುಖ್ಯ?

ಈ ಹೋರಾಟವು ಏಕೆ ಮುಖ್ಯವಾಗಿದೆ ಎಂದರೆ, ಎನ್‌ಪಿಆರ್ ಎಂಬುದು ಮೊದಲಿಗೆ ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲಿ ನಂತರ ಇಡೀ ದೇಶದಲ್ಲಿ ಪೌರತ್ವವನ್ನು ಹೊಸದಾಗಿ ಮರುರೂಪಿಸುವ ಬಿಜೆಪಿಯ ರಾಜಕೀಯ ಕಾರ್ಯತಂತ್ರದ ಮೊದಲ ಹೆಜ್ಜೆಯಾಗಿದೆ.

ನಾವು “ಕಾಲಾನುಕ್ರಮಣಿಕೆ”ಯನ್ನು ಮರೆಯುವುದು ಬೇಡ: ಮೊದಲಿಗೆ ಎನ್‌ಪಿಆರ್ ಭಾರತದ “ಸಾಮಾನ್ಯ ನಿವಾಸಿಗಳ” ಕುರಿತು ಎಲ್ಲಾ ಮಾಹಿತಿಗಳನ್ನು ಸಂಗ್ರಹಿಸುತ್ತದೆ. ನಂತರ ಭಾರತೀಯ ಪೌರರ ರಾಷ್ಟ್ರೀಯ ನೋಂದಣಿಯನ್ನು, ಅಂದರೆ ಎನ್‌ಆರ್‌ಸಿಯನ್ನು ಎನ್‌ಪಿಆರ್‌ನಲ್ಲಿರುವ “ಸಂಶಯಾಸ್ಪದ” ನಾಗರಿಕರನ್ನು ಗುರುತಿಸುವುದರ ಮೂಲಕ ಮಾಡುವ ಪ್ರಕ್ರಿಯೆ ಆರಂಭವಾಗುತ್ತದೆ. ಅಮಿತ್ ಶಾ ರಾಜ್ಯಸಭೆಯಲ್ಲಿ ನೀಡಿದ ಮೌಖಿಕ ಭರವಸೆಯ ಹೊರತಾಗಿಯೂ, ಪೌರರ ನೋಂದಣಿ ಮತ್ತು ರಾಷ್ಟ್ರೀಯ ಗುರುತುಚೀಟಿ ನೀಡಿಕೆ ನಿಯಮಗಳು 2003ರ ನಿಯಮ 4(3) ಮತ್ತು 4(4)- “ಸಂಶಯಾಸ್ಪದ” ನಾಗರಿಕರ ಗುರುತಿಸುವಿಕೆ ಮತ್ತು ಪರಿಶೀಲನೆಗೆ ಅವಕಾಶ ಒದಗಿಸುತ್ತದೆ.

ಸಿಎಎ ವಿರೋಧಿ ಆಂದೋಲನವು ಈ ಮೌಖಿಕ ಭರವಸೆಯನ್ನು ತಿರಸ್ಕರಿಸಿರುವುದರಲ್ಲಿ ಮತ್ತು ಈ ನಿಯಮಗಳ ತಿದ್ದುಪಡಿಗೆ ಒತ್ತಾಯಿಸಿರುವುದರಲ್ಲಿ ಯಾವುದೇ ಅಚ್ಚರಿಯಿಲ್ಲ. ಅದಕ್ಕೆ ಬೇಕಾಗಿರುವುದೆಂದರೆ ಕೇವಲ ಒಂದು ಕೇಂದ್ರ ಸರಕಾರಿ ಅಧಿಸೂಚನೆ. ಒಮ್ಮೆ ಎನ್‌ಆರ್‌ಸಿ ಪ್ರಕ್ರಿಯೆ ಮುಗಿಯಿತೋ, ಪೌರತ್ವ ತಿದ್ದುಪಡಿ ಕಾಯಿದೆ ಚಾಲನೆಗೆ ಬರುತ್ತದೆ. ಎನ್‌ಆರ್‌ಸಿಯಿಂದ ಕೈಬಿಟ್ಟ ಮುಸ್ಲಿಮೇತರರಿಗೆ ತಾವು ಬಾಂಗ್ಲಾದೇಶ, ಅಫಘಾನಿಸ್ತಾನ ಅಥವಾ ಬಾಂಗ್ಲಾದೇಶದಿಂದ ಬಂದವರೆಂದು ಹೇಳಿಕೊಂಡು ಪೌರರ ಯಾದಿಗೆ ಸೇರಿಕೊಳ್ಳುವ ಅವಕಾಶವಿರುತ್ತದೆ. ಆದರೆ, ಅಂತಹ ಅದೃಷ್ಟ ಮುಸ್ಲಿಮರಿಗೆ ಇಲ್ಲ. ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲಿ ಚುನಾವಣೆ ನಡೆಲಿರುವ 2021ಕ್ಕೆ ಮೊದಲು ಈ ಪ್ರಕ್ರಿಯೆಯನ್ನು ಮುಗಿಸುವ ಆಶಯ ಬಿಜೆಪಿಯದ್ದು. ಏನಿದ್ದರೂ, 2024 ಒಳಗಾಗಿ ಈ ಎನ್‌ಆರ್‌ಸಿ ಪ್ರಕ್ರಿಯೆಯನ್ನು ಮುಗಿಸಿ ಲೋಕಸಭಾ ಚುನಾವಣೆಯನ್ನು ಎದುರಿಸುವ ಹುನ್ನಾರ ಬಿಜೆಪಿಯದ್ದು. ಆದುದರಿಂದ ಎನ್‌ಪಿಆರ್ ಪ್ರಕ್ರಿಯೆಯನ್ನು ತಡೆಯುವುದು ಈ ವಿಭಜನಕಾರಿ ರಾಜಕೀಯ ಕಾರ್ಯಕ್ರಮವನ್ನು ತಡೆಯುವ ಮೊದಲ ಮತ್ತು ನಿರ್ಣಾಯಕ ಹೆಜ್ಜೆಯಾಗಿದೆ.

ತಪ್ಪಿಸಿಕೊಳ್ಳುವದೋ, ಪ್ರತಿರೋಧಿಸುವುದೋ?

ಈ ರಾಜಕೀಯ ಕದನವು ಮೊದಲಿಗೆ ಕಾನೂನು ಮತ್ತು ಸಾಂವಿಧಾನಿಕ ನೆಲೆಯಲ್ಲಿ ನಡೆಯಲಿದೆ. ಮೋದಿ ಸರಕಾರವು ದಶಕವಾರು ಬರುವ ಜನಗಣತಿಯ ಜೊತೆಗೆ ಎನ್‌ಪಿಆರ್ ಪ್ರಕ್ರಿಯೆಯನ್ನು ಜೋಡಿಸುವ ಮೂಲಕ ಮೊದಲ ಹೆಜ್ಜೆಯನ್ನು ಇಟ್ಟಿದೆ. ಕಾರ್ಯತಂತ್ರವು ಸ್ಪಷ್ಟವಾಗಿದೆ. ಯಾವುದೇ ರಾಜ್ಯವು ಜನಗಣತಿಗೆ ಇಲ್ಲ ಎನ್ನಲು ಸಾಧ್ಯವಿಲ್ಲವಾದದುದರಿಂದ ಅದು ಎನ್‌ಪಿಆರ್ ಕೂಡಾ ನಡೆಸಬೇಕಾದ ಒತ್ತಡಕ್ಕೆ ಒಳಗಾಗುತ್ತದೆ. ಅಲ್ಲಿಯ ತನಕ ಮೋದಿ ಸರಕಾರವು ಎನ್‌ಆರ್‌ಸಿ ಕುರಿತು ತೆಪ್ಪಗಿರುತ್ತದೆ. ಒಮ್ಮೆ ಎನ್‌ಪಿಆರ್ ಪೂರ್ಣಗೊಂಡರೆ, ಎನ್‌ಪಿಆರ್ ಎಂಬುದು ಎನ್‌ಆರ್‌ಸಿಯನ್ನು ರೂಪಿಸುವ ಮನೆಮನೆ ಸಮೀಕ್ಷೆಯಾಗಿತ್ತು ಎಂದು ಅಧಿಸೂಚನೆ ಹೊರಡಿಸುತ್ತದೆ. ಎನ್‌ಪಿಆರ್ ನಡೆಸಲು ನಿರಾಕರಿಸುವ ಯಾವುದೇ ರಾಜ್ಯ ಸರಕಾರಕ್ಕೆ ಜನಗಣತಿಯನ್ನು ಬುಡಮೇಲುಗೊಳಿಸಿದ ಆರೋಪದ ಮೇಲೆ ಸಂವಿಧಾನದ ವಿಧಿ 356 ಅನ್ವಯ ವಜಾಗೊಳಿಸುವ ಬೆದರಿಕೆ ಒಡ್ಡಲಾಗುತ್ತದೆ.

ಈ ತನಕ ರಾಜ್ಯ ಸರಕಾರಗಳು ಎರಡು ರೀತಿಯ ಪ್ರತಿಕ್ರಿಯೆ ನೀಡಿವೆ: ತಪ್ಪಿಸಿಕೊಳ್ಳುವಿಕೆ ಮತ್ತು ಪ್ರತಿರೋಧ. ಇವೆರಡೂ ಪರಿಣಾಮಕಾರಿಯಾಗುವ ಸಾಧ್ಯತೆ ಕಡಿಮೆ. ಈ ತನಕ ಬಿಹಾರ, ಆಂಧ್ರಪ್ರದೇಶ ಮತ್ತು ದಿಲ್ಲಿ ಎನ್‌ಪಿಆರ್‌ಗೆ ವಿರೋಧ ವ್ಯಕ್ತಪಡಿಸಿಲ್ಲ. ಆದರೆ, ಅದರ ಸ್ವರೂಪ ಈಗಿರುವುದಕ್ಕೆ ಬದಲಾಗಿ 2010ರಲ್ಲಿ ಇದ್ದಂತೆ ಇರಬೇಕು ಎಂದು ಹೇಳುತ್ತಿವೆ. ಅವು ಹೊಸ ಎನ್‌ಪಿಆರ್‌ನಲ್ಲಿ ಸೇರಿಸಲಾಗಿರುವ ಆರು ಹೆಚ್ಚುವರಿ ಪ್ರಶ್ನೆಗಳಿಗೆ ಆಕ್ಷೇಪ ವ್ಯಕ್ತಪಡಿಸಿವೆ. ಅವೆಂದರೆ, ತಂದೆ ತಾಯಿಯರ ಜನನ ಸ್ಥಳ ಮತ್ತು ದಿನಾಂಕ, ಆಧಾರ್ (ಐಚ್ಛಿಕ), ಡ್ರೈವಿಂಗ್ ಲೈಸನ್ಸ್, ಪ್ಯಾನ್ (ಪಿಎಎನ್) ಮತ್ತು ಪಾಸ್‌ಪೋರ್ಟ್ ಸಂಖ್ಯೆ. ಬಿಜೆಪಿಯ ಬೆಂಬಲದೊಂದಿಗೆ ಬಿಹಾರ ಸರಕಾರ 2010ರ ಮಾದರಿಯನ್ನು ಒಪ್ಪಿಕೊಂಡಿರುವುದು ಮೋದಿ ಸರಕಾರವು ಇದನ್ನೇ ಒಂದು “ರಾಜಿಸೂತ್ರ” ಎಂದು ಪರಿಗಣಿಸಬಹುದು ಎಂಬುದನ್ನು ಸೂಚಿಸುತ್ತದೆ.

ಇಂತಹಾ ತಪ್ಪಿಸಿಕೊಳ್ಳುವಿಕೆಯ ಸಮಸ್ಯೆ ಎಂದರೆ, ಬಿಜೆಪಿಯು ಇದನ್ನು ಒಪ್ಪಿಕೊಳ್ಳಬಹುದು ಮತ್ತು ಇದು ಎನ್‌ಆರ್‌ಸಿಯ ದಾರಿಗೆ ಅಡ್ಡವಾಗುವುದಿಲ್ಲ. ಆಗಲೂ ಸರಕಾರವು 2010ರ ಮಾದರಿಯನ್ನೇ ಬಳಸಿಕೊಂಡು ಪಡೆದ ಮಾಹಿತಿಯನ್ನು ಬಳಸಿಕೊಂಡು “ಸಂಶಯಾಸ್ಪದ” ನಾಗರಿಕರನ್ನು ಗುರುತಿಸಬಹುದು. ರಾಜ್ಯ ಸರಕಾರಗಳು ತಮ್ಮ ನಾಗರಿಕರನ್ನು ಈ ತಾರತಮ್ಯದ ಮತ್ತು ವಿಭಜನಕಾರಿಯಾದ ಕಾರ್ಯಕ್ರಮದಿಂದ ರಕ್ಷಿಸಿಕೊಳ್ಳಬೇಕೆಂದಿದ್ದರೆ, “2010ರ ಸೂತ್ರ”ಕ್ಕೆ ಇನ್ನೊಂದು ಶರತ್ತನ್ನು ಸೇರಿಸುವಂತೆ ಒತ್ತಾಯಿಸಬೇಕು: ಅದೆಂದರೆ 2003ರ ನಿಯಮಗಳಿಗೆ ತಿದ್ದುಪಡಿ ತರುವ ಮೂಲಕ, “ಸಂಶಯಾಸ್ಪದ” ನಾಗರಿಕರ ಗುರತಿಸುವಿಕೆ ಅಥವಾ ಪರಿಶೀಲನೆ ಸೇರಿದಂತೆ ಯಾವುದೇ ರೀತಿಯಲ್ಲಿ ಎನ್‌ಪಿಆರ್ ಮಾಹಿತಿಯನ್ನು ಎನ್‌ಆರ್‌ಸಿಗೆ ಬಳಸುವುದಿಲ್ಲ ಎಂದು ಕೇಂದ್ರ ಸರಕಾರದಿಂದ ಭರವಸೆ ಪಡೆಯುವುದು. ರಾಜಕೀಯ ಹುನ್ನಾರವನ್ನು ಪರಿಗಣಿಸಿದರೆ ಮೋದಿ ಸರಕಾರ ಇದಕ್ಕೆ ಒಪ್ಪುವ ಸಾಧ್ಯತೆಗಳಿಲ್ಲ.

ಎರಡನೇ ಹಾದಿಯೆಂದರೆ, ಕೇರಳ ಮತ್ತು ಪಶ್ಚಿಮ ಬಂಗಾಳಗಳು ತೆಗೆದುಕೊಂಡಿರುವ ಬಹಿರಂಗ ಪ್ರತಿರೋಧದ ಹಾದಿ. ಅವು ಎನ್‌ಪಿಆರ್ ಪ್ರಕ್ರಿಯೆಯನ್ನು ಮುನ್ನಡೆಸದಂತೆ ತಮ್ಮ ನೌಕರರಿಗೆ ಆದೇಶಿಸಿವೆ. ಈ ನಿಲುವಿಗೆ ಸಾಂವಿಧಾನಿಕ ಅರ್ಹತೆಯಿದೆ. ಜನಗಣತಿಯ ಮಾಹಿತಿಯ ಶುದ್ಧತೆ ಕಾಪಾಡುವುದು ಮತ್ತು ಅದನ್ನು ಎನ್‌ಪಿಆರ್ ಜೊತೆಗೆ ಬೆರೆಸಿ ಮಾಹಿತಿಯನ್ನು ದೂಷಿತಗೊಳಿಸುವುದನ್ನು ಮತ್ತು ಗೌಪ್ಯತೆಯನ್ನು ಬಹಿರಂಗಗೊಳಿಸುವುದನ್ನು ತಡೆಯಲು ಕೈಗೊಂಡ ಕ್ರಮ ಎಂದು ವಾದಿಸಬಹುದು. ಇದು ಆಧಾರ್ ಮಾಹಿತಿ ಸಂಗ್ರಹವನ್ನು ಎನ್‌ಪಿಆರ್‌ನಂತಹಾ ಯಾವುದೇ ಇತರ ಮಾಹಿತಿ ಸಂಗ್ರಹಕ್ಕೆ ಬಳಸಬಾರದು ಎಂದು ಪುಟ್ಟಸ್ವಾಮಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪನ್ನು ಇದು ಎತ್ತಿಹಿಡಿಯುತ್ತವೆ.

ಎನ್‌ಪಿಆರ್‌ಗೆ ಆಧಾರವಾಗಿರುವ ನಿಯಮಗಳನ್ನು 2003ರಲ್ಲಿ ಅಂದರೆ 2004ರಲ್ಲಿ ತಿದ್ದುಪಡಿ ಮಾಡಲಾದ ಪೌರತ್ವ ಕಾಯಿದೆಗೂ ಮುಂಚಿತವಾಗಿ ರೂಪಿಸಿರುವುದರಿಂದ ಅವುಗಳನ್ನು ಅನುಷ್ಟಾನಗೊಳಿಸದಿರಲು ತಾನು ಕರ್ತವ್ಯಬದ್ಧ ಎಂದು ಯಾವುದೇ ರಾಜ್ಯ ಸರಕಾರ ವಾದಿಸಬಹುದು. ಈ ನೆಲೆಯಲ್ಲಿ ಯಾವುದೇ ರಾಜ್ಯ ಸರಕಾರ ಎನ್‌ಪಿಆರ್ ಜಾರಿಗೊಳಿಸಲು ನಿರಾಕರಿಸಿದರೆ, ಅದು ಆಡಳಿತವನ್ನು ಜಾರಿಗೊಳಿಸಲು ವೈಫಲ್ಯ ಎಂಬ ನೆಲೆಯಲ್ಲಿ ಪರಿಗಣಿಸಲು ಅಥವಾ  ಸಂವಿಧಾನದ ವಿಧಿ 356 ಅಡಿಯಲ್ಲಿ ವಜಾಗೊಳಿಸಲು ಸಾಧ್ಯವಿಲ್ಲ.

ಹೀಗಿದ್ದರೂ, ಇಲ್ಲಿ ಸಮಸ್ಯೆ ಎಂದರೆ, ಒಂದು ವೇಳೆ ಕೇಂದ್ರ ಸರಕಾರವು ಇದೇ ನೆಲೆಯಲ್ಲಿ ರಾಜ್ಯ ಸರಕಾರಗಳನ್ನು ವಜಾ ಗೊಳಿಸಲ ಬಳಸಿದರೆ, ಈ ವಾದಗಳನ್ನು ಕೇಳುವವರು ಯಾರು? ಸಂವಿಧಾನದ ವಿಧಿ 370ಯ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ವರ್ತನೆ ಅಥವಾ ಅಪವರ್ತನೆ ಈ ಕುರಿತು ವಿಶ್ವಾಸವನ್ನೇನೂ ಮೂಡಿಸುವುದಿಲ್ಲ.

ಕೊಂಡಿ ಕಳಚುವಿಕೆ, ಭಿನ್ನಮತ, ಪರಿಹಾರ ಸೂತ್ರ (delink, defer, diffuse)

ರಾಜ್ಯ ಸರಕಾರಗಳು ಅನುಸರಿಸಬಹುದಾದ ಮೂರನೇ ಕ್ರಮವೊಂದು ಇಲ್ಲಿದೆ. ರಾಜ್ಯ ಸರಕಾರಗಳು “2010ರ ಸೂತ್ರ” ಇತ್ಯಾದಿಗಳ ಮೂಲಕ ತಪ್ಪಿಸಿಕೊಳ್ಳುವ ಕ್ರಮ ಅನುಸರಿಸುವುದು ಅಥವಾ ಅಪಾಯಕಾರಿ ಪ್ರತಿರೋಧದ ಕ್ರಮಗಳಿಗೆ ಬದಲಾಗಿ ಮೂರನೇ ಹಾದಿಯೊಂದಿದೆ.

ರಾಜ್ಯ ಸರಕಾರವೊಂದು ಎನ್‌ಪಿಆರ್ ಜಾರಿಗೊಳಿಸಲು ನಿರಾಕರಿಸಬೇಕೆಂದಿಲ್ಲ. ತಾನು ಜನಗಣತಿಯ ಪಾವಿತ್ರ್ಯ ಮತ್ತು ತನ್ನದೇ ಕಾನೂನು ಬದ್ಧತೆಗಳ ಉಲ್ಲಂಘನೆ ಆಗದಂತೆ ಎಚ್ಚರಿಕೆ ವಹಿಸುತ್ತಿರುವುದಾಗಿ ವಾದಿಸಬಹುದು.

ಜನಗಣತಿ ಮತ್ತು ಎನ್‌ಪಿಆರ್ ನಡುವಿನ ಕೊಂಡಿ ಕಳಚುವುದು ರಾಜ್ಯ ಸರಕಾರವೊಂದರ ಅಧಿಕಾರ ವ್ಯಾಪ್ತಿಯಲ್ಲಿಯೇ ಇದೆ. ಸರಕಾರವು ಒಂದು ಆದೇಶ ಹೊರಡಿಸಬಹುದು ಅಥವಾ ಈಗಿರುವ ಆದೇಶವನ್ನು ತಿದ್ದುಪಡಿ ಮಾಡಬಹುದು. ಎನ್‌ಪಿಆರ್ ಉಲ್ಲೇಖ ಮಾಡದೆಯೇ ಮನೆಮನೆ ಜನಗಣತಿ ಮತ್ತು ಮಾಹಿತಿ ಸಂಗ್ರಹಕ್ಕೆ ದಿನಾಂಕಗಳ ಕುರಿತು ಅಧಿಸೂಚನೆ ಹೊರಡಿಸಬಹುದು. ರಾಜಸ್ತಾನ ಸರಕಾರವು ಈಗಾಗಲೇ ಅದನ್ನು ಮಾಡಿದೆ.

ಎರಡನೆಯದಾಗಿ, ರಾಜ್ಯ ಸರಕಾರ ಎನ್‌ಪಿಆರ್ ಮುಂದೂಡಬಹುದು. ಜನಗಣತಿ ಮುಗಿದ ನಂತರ ಅಂದರೆ, 2021ರಲ್ಲಿ ಇಡೀ ಜನಗಣತಿ ಪ್ರಕ್ರಿಯೆ ಮುಗಿದ ನಂತರ ಎನ್‌ಪಿಆರ್‌ಗೆ ಮಾಹಿತಿಗೆ ಹೊಸ ದಿನಾಂಕಗಳನ್ನು ಅಧಿಸೂಚಿಸುವ ಮೂಲಕ ಎರಡನೇ ಹೆಜ್ಜೆ ಇಡಬಹುದು.

ಮೂರನೆಯದಾಗಿ, ಶಿಕ್ಷಣ ಹಕ್ಕು ಕಾಯಿದೆಯ ವಿಧಿ 27 ಹೇಳುವಂತೆ ಎನ್‌ಪಿಆರ್‌ಗೆ ಯಾವುದೇ ಶಿಕ್ಷಕರ ಸೇವೆಯನ್ನು ನಿರಾಕರಿಸಬೇಕು. ಏಕೆಂದರೆ, ಈ ವಿಧಿಯು ಜನಗಣತಿ, ಚುನಾವಣೆ ಮತ್ತು ದುರಂತ ನಿರ್ವಹಣೆ ಹೊರತು ಬೇರಾವುದೇ ಶಿಕ್ಷಣೇತರ ಕರ್ತವ್ಯಗಳಿಗೆ ಶಿಕ್ಷಕರನ್ನು ಬಳಸಲಾಗದು ಎಂದು ಹೇಳುತ್ತದೆ. ಅಂಂತಿಮವಾಗಿ ದೊಡ್ಡ ಪ್ರಮಾಣದಲ್ಲಿ ಅಹಿಂಸಾತ್ಮಕ ಬಹಿಷ್ಕಾರ ಎನ್‌ಪಿಆರ್ ವಿರುದ್ಧ ನಡೆದರೆ, ಸರಕಾರ ಅಂತಹಾ ಪ್ರಜಾಸತ್ತಾತ್ಮಕ ಪ್ರತಿಭಟನೆಯ ಅಪರಾಧೀಕರಣ ಮಾಡಬಾರದು.

ಈ ಮೂರನೆಯ ಮತ್ತು ಕೊನೆಯ ಹಾದಿಯು ಕೇಂದ್ರ ಮತ್ತು ರಾಜ್ಯ ಸರಕಾರಗಳ ನಡುವೆ ಯಾವುದೇ ಸಂಘರ್ಷದ ಅವಕಾಶ ಕೊಡುವುದಿಲ್ಲ. ಅದು ಎನ್‌ಪಿಆರ್ ಮಾಹಿತಿಗಳನ್ನು ಎನ್‌ಆರ್‌ಸಿಗೆ ಬಳಸಿಕೊಳ್ಳುವ ದುರುದ್ದೇಶಕ್ಕೆ ತಡೆಯೊಡ್ಡುತ್ತದೆ. ನಮ್ಮ ಗಣರಾಜ್ಯವನ್ನು ರಕ್ಷಿಸುವ ಕದನವು ಚಿಕ್ಕದಾದ ಮತ್ತು ಕೇವಲ ತಾಂತ್ರಿಕವಾದ ಜಯದೊಂದಿಗೆ ಆರಂಭವಾಗುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...