Homeಅಂಕಣಗಳುಹಿಟ್ಲರನ ಜರ್ಮನಿಯಲ್ಲಿ ನಾಜೀಗಳ ಕಾಲಿಗೆರಗಿತ್ತು ನ್ಯಾಯಾಂಗ!

ಹಿಟ್ಲರನ ಜರ್ಮನಿಯಲ್ಲಿ ನಾಜೀಗಳ ಕಾಲಿಗೆರಗಿತ್ತು ನ್ಯಾಯಾಂಗ!

- Advertisement -
- Advertisement -

1933ರಲ್ಲಿ ಅಧಿಕಾರಕ್ಕೆ ಬಂದ ಒಡನೆಯೇ ನಾಜಿಗಳು ಮಾಡಿದ ಮೊದಲನೆಯ ಕೆಲಸವೆಂದರೆ ತಮಗಿದ್ದ ಆಂತರಿಕ ವಿರೋಧವನ್ನು ಅಳಿಸಿ ಹಾಕುವುದು. ಈ ದಿಸೆಯಲ್ಲಿ ಕೈವಶ ಮಾಡಿಕೊಂಡ ಹಲವು ಹತಾರುಗಳ ಪೈಕಿ ನ್ಯಾಯಾಂಗದ ಹತಾರು ಕೂಡ ಒಂದು.

ಜರ್ಮನಿಯ ನ್ಯಾಯಾಲಯ ವ್ಯವಸ್ಥೆಯ ಹೊರಗೆ ಮತ್ತು ಜರ್ಮನಿಯ ಕಾನೂನು ವ್ಯಾಪ್ತಿಯ ಹೊರಗೆ ತನ್ನದ ಆದ ನ್ಯಾಯಾಂಗ ವ್ಯವಸ್ಥೆಯನ್ನು ಜಾರಿಗೆ ತಂದಿದ್ದ ಅಡಾಲ್ಫ್ ಹಿಟ್ಲರ್. ಇವುಗಳನ್ನು ನಾಜೀ ವಿಶೇಷ ನ್ಯಾಯಾಲಯಗಳು ಎಂದು ಕರೆಯಲಾಗಿತ್ತು. ಇವು ವ್ಯಾಪಕ ಅಧಿಕಾರಗಳನ್ನು ಹೊಂದಿದ್ದ ರಾಜಕೀಯ ಕೋರ್ಟುಗಳಾಗಿದ್ದವು. ದೇಶದ್ರೋಹ ಅಥವಾ ರಾಷ್ಟ್ರೀಯ ಇಲ್ಲವೇ ಪ್ರಾದೇಶಿಕ ಸರ್ಕಾರಗಳ ಸದಸ್ಯರ ಮೇಲೆ ದಾಳಿ ನಡೆಸಿದವರನ್ನು ವಿಚಾರಿಸಿಕೊಳ್ಳಲು ಆರಂಭದಲ್ಲಿ ಈ ನ್ಯಾಯಾಲಯಗಳನ್ನು ಬಳಸಿಕೊಳ್ಳಲಾಯಿತು. ಸಾವಿರಾರು ಕಮ್ಯೂನಿಸ್ಟರು ಮತ್ತು ಸೋಶಿಯಲ್ ಡೆಮಾಕ್ರಟ್ ಗಳನ್ನುಬಂಧಿಸಲಾಯಿತು. ಅವರ ಚಟುವಟಿಕೆಗಳನ್ನು ಕಾನೂನುಬಾಹಿರ ಎಂದು ಘೋಷಿಸಲಾಯಿತು. ಜರ್ಮನಿಯ ಸಂವಿಧಾನದ 114, 115, 118, 123, 124, ಹಾಗೂ 153ನೆಯ ಕಲಮುಗಳನ್ನು ಅನಿರ್ದಿಷ್ಟ ಕಾಲ ಅಮಾನತಿನಲ್ಲಿ ಇರಿಸಲಾಯಿತು. ವ್ಯಕ್ತಿ ಸ್ವಾತಂತ್ರ್ಯ, ಪತ್ರಿಕಾ ಸ್ವಾತಂತ್ರ್ಯವೂ ಸೇರಿದಂತೆ ಅಭಿವ್ಯಕ್ತಿ ಸ್ವಾತಂತ್ರ್ಯ ಸಭೆ ಸೇರುವ ಮತ್ತು ಸಂಘ ಕಟ್ಟಿಕೊಳ್ಳುವ ಸ್ವಾತಂತ್ರ್ಯಗಳು ಹರಣಗೊಂಡವು. ಅಂಚೆ, ಟೆಲಿಗ್ರಾಫಿಕ್ ಹಾಗೂ ದೂರವಾಣಿ ಸಂಪರ್ಕಗಳ ಖಾಸಗಿತನವನ್ನು ಉಲ್ಲಂಘಿಸಲಾಯಿತು. ಮನೆಗಳ ಶೋಧ, ಆಸ್ತಿಪಾಸ್ತಿಗಳ ಮುಟ್ಟುಗೋಲು ಮತ್ತು ನಿರ್ಬಂಧಗಳನ್ನು ವಿಧಿಸಲಾಯಿತು. ಸರ್ಕಾರದ ಆದೇಶಗಳನ್ನು ಪಾಲಿಸದಿರುವ ಇಲ್ಲವೇ ಅವುಗಳ ವಿರುದ್ಧ ಜನರನ್ನು ಪ್ರಚೋದಿಸುವ ಅಥವಾ ಮೇಲ್ಮನವಿಗೆ ಪ್ರಯತ್ನಿಸುವವರನ್ನು ಶಿಕ್ಷಿಸಲಾಯಿತು.

ಹಂಗಾಮಿ ವಿಶೇಷ ಕೋರ್ಟುಗಳು ಜರ್ಮನಿಯಲ್ಲಿ 19ನೆಯ ಶತಮಾನದಲ್ಲೂ ಅಸ್ತಿತ್ವದಲ್ಲಿದ್ದವು. ಸ್ಥಳೀಯ ನಾಗರಿಕ ಗಲಭೆಗಳ ವಿಚಾರಣೆಗೆ ಈ ಕೋರ್ಟುಗಳನ್ನು ರಚಿಸಲಾಗುತ್ತಿತ್ತು. ಉದ್ದೇಶ ಈಡೇರಿದ ನಂತರ ಅವುಗಳ ಸಮಾಪ್ತಿಯಾಗುತ್ತಿತ್ತು. ಹೆಚ್ಚು ಕಾಯಂ ಸ್ವರೂಪದ ವಿಶೇಷ ಕೋರ್ಟುಗಳ ರಾಷ್ಟ್ರೀಯ ಜಾಲ ರಚನೆಯಾದದ್ದು 1933ರಲ್ಲಿ. 26ರಿಂದ ಶುರುವಾದ ಇವುಗಳ ಸಂಖ್ಯೆ 1942ರ ಹೊತ್ತಿಗೆ 74ಕ್ಕೆ ಹೆಚ್ಚಿತ್ತು.ಮಾಮೂಲು ನ್ಯಾಯಾಲಯ ವ್ಯವಸ್ಥೆಯಡಿ ಆಪಾದಿತರಿಗೆ ದೊರೆಯುತ್ತಿದ್ದ ನಾಮಮಾತ್ರದ ರಕ್ಷಣೆಗಳನ್ನು ವಿಶೇಷ ಕೋರ್ಟುಗಳಲ್ಲಿ ಕಿತ್ತು ಎಸೆಯಲಾಗಿತ್ತು. ಮೇಲ್ಮನವಿಯ ಅವಕಾಶವೇ ಇರಲಿಲ್ಲ. ಸಾಕ್ಷ್ಯ ಪುರಾವೆಗಳನ್ನು ಎಷ್ಟರಮಟ್ಟಿಗೆ ಪರಿಗಣಿಸಬೇಕು ಎಂಬುದನ್ನು ನ್ಯಾಯಾಲಯವೇ ನಿರ್ಧರಿಸುತ್ತಿತ್ತು. ಆಪಾದಿತರ ಪರ ವಕೀಲರು ಆಪಾದನೆಗಳಿಗೆ ಸಂಬಂಧಿಸಿದಂತೆ ಸರ್ಕಾರ ಒದಗಿಸುತ್ತಿದ್ದ ಪುರಾವೆಗಳನ್ನು ಪ್ರಶ್ನಿಸುವಂತೆಯೇ ಇರಲಿಲ್ಲ. ಪೋಲೆಂಡ್ ನಾಗರಿಕರು ಮತ್ತು ಯಹೂದಿಗಳಿಗೆ ಯಾವ ಕಾರಣಕ್ಕೆ ಬೇಕಾದರೂ ಮರಣದಂಡನೆ ನೀಡಬಹುದೆಂಬ ವಿಶೇಷ ಕಾನೂನನ್ನು ಜಾರಿಗೆ ತರಲಾಗಿತ್ತು.

ಪೋಲೀಶ್ ಜನರಿಗೆ ಜರ್ಮನರಿಗಿಂತ ಹೆಚ್ಚು ದೀರ್ಘ ಶಿಕ್ಷೆ ವಿಧಿಸಬಹುದು, ಯಾಕೆಂದರೆ ಅವರು ಜರ್ಮನರಿಗಿಂತ ಕೀಳು ಜನಾಂಗದವರು ಎಂದು ವಿಶೇಷ ಕೋರ್ಟುಗಳ ನ್ಯಾಯಾಧೀಶರು ಸಾರಿ ಹೇಳುತ್ತಿದ್ದರು.

ಹಿಟ್ಲರನ ನ್ಯಾಯಾಂಗದಲ್ಲಿ ನಿಷ್ಪಕ್ಷಪಾತ ಎಂಬ ಮಾತಿಗೆ ಅರ್ಥವೇ ಇರಲಿಲ್ಲ. 1942ರ ಏಪ್ರಿಲ್ 26ರಂದು ನ್ಯಾಯಾಂಗವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಹಿಟ್ಲರ್ ಹೇಳುತ್ತಾನೆ- ಜರ್ಮನಿಯ ಕಾನೂನು ವೃತ್ತಿಪರರು ಅರ್ಥಮಾಡಿಕೊಳ್ಳಬೇಕು…ದೇಶಕ್ಕಾಗಿ ಅವರು ಇದ್ದಾರೆಯೇ ವಿನಾ, ದೇಶ ಅವರಿಗಾಗಿ ಇಲ್ಲ. ಇನ್ನು ಮೇಲೆ ನಾನು ಖುದ್ದಾಗಿ ಈ ಕೇಸುಗಳಲ್ಲಿ ಮಧ್ಯಪ್ರವೇಶ ಮಾಡುತ್ತೇನೆ…ಕಾಲದ ಕರೆಯನ್ನು ಅರ್ಥ ಮಾಡಿಕೊಳ್ಳದ ನ್ಯಾಯಾಧೀಶರನ್ನು ಅವರ ಹುದ್ದೆಗಳಿಂದ ಕಿತ್ತು ಹಾಕುತ್ತೇನೆ.

ನಾಜೀ ಪಕ್ಷ ಮತ್ತು ಕಾನೂನಿನ ನಡುವೆ ಸಂಘರ್ಷ ಉಂಟಾದ ಸಂದರ್ಭಗಳಲ್ಲಿ ನಾಜೀ ಪಾರ್ಟಿಯದೇ ಮೇಲುಗೈ ಆಗತಕ್ಕದ್ದು ಎಂದು ನ್ಯಾಯಾಧೀಶರಿಗೆ ನಿರ್ದೇಶನ ನೀಡಲಾಯಿತು. ನಾಜೀ ಆಡಳಿತದಲ್ಲಿ ನ್ಯಾಯಾಧೀಶರು ಯಾವ ಪೀಡನೆಗೂ ಗುರಿಯಾಗದ ವರ್ಗವಾಗಿದ್ದರು ಎಂಬ ಮಾತು ಹಲವು ಗೂಢಾರ್ಥಗಳನ್ನು ಧ್ವನಿಸುತ್ತದೆ. ಅವರ ಪೈಕಿ ಯಾರನ್ನೂ ಚಿತ್ರವಧೆಯ ಕಾನ್ಸಂಟ್ರೇಶನ್ ಕ್ಯಾಂಪ್ ಗಳಿಗೆ ನೂಕಲಾಗಲಿಲ್ಲ. ಅವರಾಗಿಯೇ ಆಡಳಿತ ಪಕ್ಷದ ಜೊತೆ ಕೈಗೂಡಿಸಿದಾಗ ಮತ್ತು ಸಾಷ್ಟಾಂಗ ಪ್ರಣಾಮ ಮಾಡಿದಾಗ ಅವರನ್ನು ಪೀಡಿಸುವ ಅಗತ್ಯವಾದರೂ ಏನಿತ್ತು?

ನಾಜೀಗಳು ಎಸಗಿದ ಎಲ್ಲ ದೌರ್ಜನ್ಯಗಳಿಗೂ ಕಾನೂನುಬದ್ಧತೆಯ ಅಂಗಿ ತೊಡಿಸುವುದು ನ್ಯಾಯಾಂಗದ ಕರ್ತವ್ಯವಾಗಿತ್ತು. ಉದಾರ ಜರ್ಮನ್ ಕಾನೂನನ್ನು ದಬ್ಬಾಳಿಕೆ ಮತ್ತು ಭೇದ ಭಾವ ಹಾಗೂ ಜನಾಂಗೀಯ ಹತ್ಯೆಯ ಹತಾರನ್ನಾಗಿಸಿದವರು ಆ ದೇಶದ ನಾಜೀ ನಿಷ್ಠ ನ್ಯಾಯಾಧೀಶರು. ನಾಜೀ ಆಳ್ವಿಕೆಯ ನಿಷ್ಠಾವಂತ ಸೇವಕರಂತೆ ನಡೆದುಕೊಂಡರು ಎಂಬ ಸಂಗತಿಗಳು ಇತಿಹಾಸ ಸಂಶೋಧನೆಯಿಂದ ಹೊರಬಿದ್ದಿವೆ. ಆದರೆ ಈ ಆಳ್ವಿಕೆಗೆ ತಲೆ ಬಾಗದ ನ್ಯಾಯಾಧೀಶರೂ ಅಲ್ಲಲ್ಲಿ ಕಂಡು ಬಂದಿದ್ದಾರೆ.

ನಾಜೀ ಜರ್ಮನಿಯ ನ್ಯಾಯಾಂಗ ವ್ಯವಸ್ಥೆಯ ನೆರಳು ಇಂದಿನ ಭಾರತದ ನ್ಯಾಯಾಂಗದ ಮೇಲೆ ಕವಿಯತೊಡಗಿದೆಯೇ ಎಂಬ ಸಂದೇಹ ಮೂಡತೊಡಗಿದೆ. ಇತ್ತೀಚಿನ ವರ್ಷಗಳಲ್ಲಿ ರಫೇಲ್ ಖರೀದಿ ವ್ಯವಹಾರ, ನ್ಯಾಯಾಧೀಶ ಲೋಯಾ ಅವರ ನಿಗೂಢ ಸಾವಿನ ಪ್ರಕರಣವನ್ನು ನಿರ್ವಹಿಸಿದ ರೀತಿ, ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸೌಲಭ್ಯದ ರದ್ದು ಕ್ರಮವನ್ನು ಪ್ರಶ್ನಿಸಿದ್ದ ಮತ್ತು ಕಾಶ್ಮೀರಿ ನಾಯಕರ ಬಂಧನದ ಹಿನ್ನೆಲೆಯಲ್ಲಿ ಹಾಕಲಾಗಿದ್ದ ಹತ್ತಾರು ಹೇಬಿಯಸ್ ಕಾರ್ಪಸ್ ಅರ್ಜಿಗಳ ವಿಚಾರಣೆಯಲ್ಲಿ ವಿಳಂಬ, ಸಿಎಎ-ಎನ್.ಆರ್.ಸಿ ಪ್ರಶ್ನಿಸಿದ ಅರ್ಜಿಗಳ ವಿಚಾರಣೆಯನ್ನು ಬದಿಗೊತ್ತಿರುವುದೇ ಅಲ್ಲದೆ ಕಳೆದ ಎರಡು ವರ್ಷಗಳಲ್ಲಿ ಹೊರಬಿದ್ದಿರುವ ಸುಪ್ರೀಮ್ ಕೋರ್ಟಿನ ಸಾಲು ಸಾಲು ತೀರ್ಪುಗಳು, ಪ್ರಧಾನಮಂತ್ರಿಯವರನ್ನು ಸಾರ್ವಜನಿಕ ಸಮಾರಂಭದಲ್ಲಿ ಅವರ ಎದುರಿಗೇ ಹಾಡಿ ಹೊಗಳುವ ಸುಪ್ರೀಮ್ ಕೋರ್ಟ್ ನ್ಯಾಯಾಧೀಶರ ವರ್ತನೆ, ದೆಹಲಿ ಕೋಮು ಗಲಭೆಗಳ ಕುರಿತು ನಿಷ್ಠುರವಾಗಿ ಗುಡುಗಿದ್ದ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಮುರಳೀಧರ ಅವರ ಹಠಾತ್ ವರ್ಗಾವಣೆ ಹಾಗೂ ಇತ್ತೀಚೆಗಷ್ಟೇ ನಿವೃತ್ತಿ ಹೊಂದಿದ್ದ ಸುಪ್ರೀಮ್ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗೋಯ್ ಅವರು ಸರ್ಕಾರ ನೀಡಿರುವ ರಾಜ್ಯಸಭಾ ಸದಸ್ಯತ್ವವನ್ನು ಒಪ್ಪಿಕೊಂಡಿರುವ ಬೆಳವಣಿಗೆಗಳು ಈ ಸಂದೇಹವನ್ನು ಗಟ್ಟಿ ಮಾಡತೊಡಗಿವೆ.

ಸಿಎಎ ಪ್ರತಿಭಟನಾಕಾರರ ಹೆಸರುಗಳು, ವಿಳಾಸಗಳು, ಭಾವಚಿತ್ರಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ನೂರಾರು ಭಿತ್ತಿ ಫಲಕಗಳ ಮೂಲಕ ಜಾಹೀರು ಮಾಡುವ ಉತ್ತರಪ್ರದೇಶದ ಅಪಾಯಕಾರಿ ನಡೆಯನ್ನು ಅಲಹಾಬಾದ್ ಹೈಕೋರ್ಟ್ ತೀವ್ರವಾಗಿ ಖಂಡಿಸುತ್ತದೆ. ಪ್ರತಿಭಟನೆಯ ಹಕ್ಕು ಮತ್ತು ಖಾಸಗಿತನದ ಹಕ್ಕಿನ ಉಲ್ಲಂಘನೆ ಎಂದು ಸಾರುತ್ತದೆ. ಈ ಫಲಕಗಳನ್ನು ತೆಗೆದು ಹಾಕುವಂತೆ ಆದೇಶ ನೀಡುತ್ತದೆ.
ಆದರೆ ನಿರ್ದಿಷ್ಟ ಜನಾಂಗದ ಮೇಲೆ ಸೇಡು ತೀರಿಸಿಕೊಳ್ಳುವುದಾಗಿ ಬಹಿರಂಗವಾಗಿ ಮಾತಾಡುವ ಆ ರಾಜ್ಯ ಸರ್ಕಾರ ಸುಪ್ರೀಮ್ ಕೋರ್ಟಿಗೆ ಮೇಲ್ಮನವಿ ಸಲ್ಲಿಸುತ್ತದೆ. ಉತ್ತರಪ್ರದೇಶ ಸರ್ಕಾರದ ಕೃತ್ಯಕ್ಕೆ ಕಾಯಿದೆ ಕಾನೂನಿನ ಸಮರ್ಥನೆ ಇಲ್ಲ ಎಂದು ಟೀಕೆ ಟಿಪ್ಪಣಿ ಮಾಡಿದರೂ, ಕಡೆಯಲ್ಲಿ ಈ ಪ್ರಕರಣವನ್ನು ಹೆಚ್ಚು ನ್ಯಾಯಮೂರ್ತಿ ಗಳಿರುವ ಪೀಠದ ವಿಚಾರಣೆಗೆ ಒಪ್ಪಿಸುವ ಸುಪ್ರೀಮ್ ಕೋರ್ಟಿನ ನಡವಳಿಕೆ ನಿಗೂಢವೇ ಸರಿ.

ನಿಷ್ಠುರ ನ್ಯಾಯಮೂರ್ತಿಯೆಂದು ಹೆಸರು ಗಳಿಸಿ ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಹುದ್ದೆಯಿಂದ ನಿವೃತ್ತರಾದ ಅಜಿತ್ ಪ್ರಕಾಶ್ ಶಾ ಅವರ ಪ್ರಕಾರ ಸುಪ್ರೀಮ್ ಕೋರ್ಟಿನ ಇತ್ತೀಚಿನ ವರ್ಷಗಳ ನಡೆ ಕಳವಳಕಾರಿ. ನಿಜ, ಇಂದಿರಾಗಾಂಧೀ ಘೋಷಿಸಿದ್ದ ತುರ್ತುಪರಿಸ್ಥಿತಿಯಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ವಜಾ ಮಾಡಿದ್ದ ಸುಪ್ರೀಮ್ ಕೋರ್ಟು ಪ್ರಾಣದ ಹಕ್ಕಿನಂತಹ ಮೂಲಭೂತ ಹಕ್ಕು ತುರ್ತುಪರಿಸ್ಥಿತಿಯಲ್ಲಿ ಮಹತ್ವದ್ದಲ್ಲ ಎಂದು ಸಾರಿ ಆಳುವವರ ಮುಂದೆ ಮಂಡಿಯೂರಿತ್ತು. ಮುಖ್ಯ ನ್ಯಾಯಮೂರ್ತಿಗಳು, ನ್ಯಾಯಮೂರ್ತಿಗಳು, ಮುಖ್ಯ ಚುನಾವಣಾಧಿಕಾರಿ ಈ ಹಿಂದೆಯೂ ರಾಜ್ಯಸಭಾ ಸದಸ್ಯತ್ವವನ್ನು ಒಪ್ಪಿಕೊಂಡಿದ್ದಾರೆ.

ಆದರೆ ಈಗ ಸರ್ಕಾರ ನಡೆಸುತ್ತಿರುವ ಪಕ್ಷ ತಾನು ಪರಮ ಪವಿತ್ರವೆಂದೂ, ತನ್ನ ಗಂಗೆಯಲ್ಲಿ ಮಿಂದವರೆಲ್ಲ ಪಾವನರೆಂದೂ, ತಾನು ಪಾರ್ಟಿ ವಿತ್ ಎ ಡಿಫರೆನ್ಸ್ ಎಂದೂ ಎದೆ ಬಡಿದುಕೊಳ್ಳುತ್ತಲೇ ಬಂದಿರುವ ರಾಜಕೀಯ ಪಕ್ಷ. ಅವರು ಲದ್ದಿ ಮೆದ್ದರೆಂದು ನೀವೂ ಲದ್ದಿ ಮೆದ್ದದ್ದನ್ನು ಸಮರ್ಥಿಸುವುದು ಯಾವ ಕೋನದಿಂದ ಸರಿ ಎಂಬುದನ್ನು ವಿವರಿಸಬೇಕು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...