Homeಮುಖಪುಟಎನ್‌ಆರ್‌ಸಿ: ಮೋದಿ ಸರಕಾರವನ್ನು ಮಣಿಸಲು ರಾಜ್ಯಗಳಿಗಿರುವ ಮೂರು ಸುಲಭ ಹೆಜ್ಜೆಗಳು

ಎನ್‌ಆರ್‌ಸಿ: ಮೋದಿ ಸರಕಾರವನ್ನು ಮಣಿಸಲು ರಾಜ್ಯಗಳಿಗಿರುವ ಮೂರು ಸುಲಭ ಹೆಜ್ಜೆಗಳು

ಭಾರತವು ಕೊರೊನ ಮತ್ತು ಕಾಂಗ್ರೆಸ್ ಬಿಕ್ಕಟ್ಟುಗಳ ಕುರಿತು ಚರ್ಚಿಸುತ್ತಿರುವಂತೆಯೇ, ನಾವು ಭಾರತವು ಎದುರುನೋಡುತ್ತಿರುವ ಸಾಂವಿಧಾನಿಕ ಬಿಕ್ಕಟ್ಟನ್ನು ಅವಗಣಿಸಬಾರದು.

- Advertisement -
- Advertisement -
  • ಯೋಗೇಂದ್ರ ಯಾದವ್

ಅನುವಾದ: ನಿಖಿಲ್ ಕೋಲ್ಪೆ

ರಾಜ್ಯಗಳು ಎನ್‌ಪಿಆರ್ ಮಾಹಿತಿ ಸಂಗ್ರಹವನ್ನು ನಿರಾಕರಿಸಬೇಕಾಗಿಲ್ಲ. ಜನಗಣತಿಯ ಪಾವಿತ್ರ್ಯ ಉಳಿಸಿಕೊಳ್ಳಲು ಅವು ಕೆಲವು ಮುನ್ನೆಚ್ಚರಿಕೆಗಾಗಿ ಒತ್ತಾಯಿಸಬಹುದು ಮತ್ತು ತಮ್ಮದೇ ಕಾನೂನುಬದ್ಧ ಕರ್ತವ್ಯಗಳ ಉಲ್ಲಂಘನೆಯಾಗದಂತೆ ನೋಡಿಕೊಳ್ಳಬಹುದು.
….

ಭಾರತವು ಕೊರೊನ ಮತ್ತು ಕಾಂಗ್ರೆಸ್ ಬಿಕ್ಕಟ್ಟುಗಳ ಕುರಿತು ಚರ್ಚಿಸುತ್ತಿರುವಂತೆಯೇ, ನಾವು ಭಾರತವು ಎದುರುನೋಡುತ್ತಿರುವ ಸಾಂವಿಧಾನಿಕ ಬಿಕ್ಕಟ್ಟನ್ನು ಅವಗಣಿಸಬಾರದು. ಎನ್‌ಆರ್‌ಸಿ ವಿರುದ್ಧ ಸಮರ ಪಾಳಯಕ್ಕೆ ಈ ವಾರ ದಿಲ್ಲಿ ಮತ್ತು ತೆಲಂಗಾಣ ಸೇರಿಕೊಳ್ಳುವುದರೊಂದಿಗೆ ದೇಶದ ಇತಿಹಾಸದಲ್ಲಿಯೇ ಅತ್ಯಂತ ಗಂಭೀರ ಸಾಂವಿಧಾನಿಕ ಸಂಘರ್ಷಕ್ಕೆ ವೇದಿಕೆ ಸಿದ್ಧವಾಗಿದೆ. ಸಂಘರ್ಷದ ವಿಷಯ ಅಂದರೆ, ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಎಂದರೆ, ಎನ್‌ಪಿಆರ್ ನಡೆಸುವುದು ಸಣ್ಣದೆಂಬಂತೆ ಕಾಣಬಹುದು. ಆದರೆ, ಬಾಜಿಗಳು ಬಹಳ ದೊಡ್ಡದಾಗಿವೆ. ಈ ಪಣದಲ್ಲಿ ಇರುವುದು ಒಕ್ಕೂಟ ವ್ಯವಸ್ಥೆ, ಜಾತ್ಯಾತೀತತೆ ಮತ್ತು ಪ್ರಜಾಪ್ರಭುತ್ವದಂತಹ ದೊಡ್ಡ ವಿಷಯಗಳು!

ಈಗಾಗಲೇ 11 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳು ಈಗಿರುವ ರೀತಿಯಲ್ಲಿ ಎನ್‌ಪಿಆರ್ ಕುರಿತು ಸಂಶಯ ವ್ಯಕ್ತಪಡಿಸಿವೆ. ಕೇಂದ್ರ ಸರಕಾರದ ಯಾವುದೇ ಕಾರ್ಯಕ್ರಮಕ್ಕೆ ದೇಶದ ಹೆಚ್ಚುಕಡಿಮೆ ಅರ್ಧದಷ್ಟು ರಾಜ್ಯಗಳು ವಿರೋಧ ವ್ಯಕ್ತಪಡಿಸಿರುವುದು ಇದೇ ಮೊದಲು. ಬಿಹಾರ, ಆಂಧ್ರಪ್ರದೇಶ, ಮತ್ತು ತಮಿಳುನಾಡು ಸರಕಾರಗಳು ಟೀಕಾಕಾರರ ಜೊತೆಗೆ ಸೇರಿರುವುದರಿಂದ, ಇದೀಗ ಸರಳವಾದ ಬಿಜೆಪಿ- ಬಿಜೆಪಿ ವಿರೋಧಿ ಹೊಂದಾಣಿಕೆಯಾಗಿ ಉಳಿದಿಲ್ಲ. ನರೇಂದ್ರ ಮೋದಿ ಸರಕಾರವು ಹಿಂದಡಿ ಇಟ್ಟಿರುವುದು ಸ್ಪಷ್ಟವಾಗಿದೆ. ಇದು ಕೇಂದ್ರ ಗೃಹಸಚಿವ ಅಮಿತ್ ಶಾ ಎನ್‌ಪಿಆರ್ ಕುರಿತು ರಾಜ್ಯಸಭೆಯಲ್ಲಿ ನೀಡಿದ ಪ್ರತಿಕ್ರಿಯೆಯಿಂದ ಸಾಬೀತಾಗಿದೆ. ಆದರೂ, ಈ ಕದನದ ಪರಿಣಾಮ ಏನಾಗಬಹುದು ಎಂಬುದು ಇನ್ನೂ ಅಸ್ಪಷ್ಟವಾಗಿದೆ. ಆದರೆ, ಎನ್‌ಪಿಆರ್ ವಿರೋಧಿಸುತ್ತಿರುವ ರಾಜ್ಯಗಳು ಯಾವುದೇ ಒಂದು ಸಮಾನ ಅಥವಾ ಯಾವುದೇ ಒಂದು ಕಾರ್ಯತಂತ್ರ ಹೊಂದಿರುವಂತೆ ಕಾಣುವುದಿಲ್ಲ.

ಎನ್‌ಪಿಆರ್ ವಿಷಯ ಏಕೆ ಮುಖ್ಯ?

ಈ ಹೋರಾಟವು ಏಕೆ ಮುಖ್ಯವಾಗಿದೆ ಎಂದರೆ, ಎನ್‌ಪಿಆರ್ ಎಂಬುದು ಮೊದಲಿಗೆ ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲಿ ನಂತರ ಇಡೀ ದೇಶದಲ್ಲಿ ಪೌರತ್ವವನ್ನು ಹೊಸದಾಗಿ ಮರುರೂಪಿಸುವ ಬಿಜೆಪಿಯ ರಾಜಕೀಯ ಕಾರ್ಯತಂತ್ರದ ಮೊದಲ ಹೆಜ್ಜೆಯಾಗಿದೆ.

ನಾವು “ಕಾಲಾನುಕ್ರಮಣಿಕೆ”ಯನ್ನು ಮರೆಯುವುದು ಬೇಡ: ಮೊದಲಿಗೆ ಎನ್‌ಪಿಆರ್ ಭಾರತದ “ಸಾಮಾನ್ಯ ನಿವಾಸಿಗಳ” ಕುರಿತು ಎಲ್ಲಾ ಮಾಹಿತಿಗಳನ್ನು ಸಂಗ್ರಹಿಸುತ್ತದೆ. ನಂತರ ಭಾರತೀಯ ಪೌರರ ರಾಷ್ಟ್ರೀಯ ನೋಂದಣಿಯನ್ನು, ಅಂದರೆ ಎನ್‌ಆರ್‌ಸಿಯನ್ನು ಎನ್‌ಪಿಆರ್‌ನಲ್ಲಿರುವ “ಸಂಶಯಾಸ್ಪದ” ನಾಗರಿಕರನ್ನು ಗುರುತಿಸುವುದರ ಮೂಲಕ ಮಾಡುವ ಪ್ರಕ್ರಿಯೆ ಆರಂಭವಾಗುತ್ತದೆ. ಅಮಿತ್ ಶಾ ರಾಜ್ಯಸಭೆಯಲ್ಲಿ ನೀಡಿದ ಮೌಖಿಕ ಭರವಸೆಯ ಹೊರತಾಗಿಯೂ, ಪೌರರ ನೋಂದಣಿ ಮತ್ತು ರಾಷ್ಟ್ರೀಯ ಗುರುತುಚೀಟಿ ನೀಡಿಕೆ ನಿಯಮಗಳು 2003ರ ನಿಯಮ 4(3) ಮತ್ತು 4(4)- “ಸಂಶಯಾಸ್ಪದ” ನಾಗರಿಕರ ಗುರುತಿಸುವಿಕೆ ಮತ್ತು ಪರಿಶೀಲನೆಗೆ ಅವಕಾಶ ಒದಗಿಸುತ್ತದೆ.

ಸಿಎಎ ವಿರೋಧಿ ಆಂದೋಲನವು ಈ ಮೌಖಿಕ ಭರವಸೆಯನ್ನು ತಿರಸ್ಕರಿಸಿರುವುದರಲ್ಲಿ ಮತ್ತು ಈ ನಿಯಮಗಳ ತಿದ್ದುಪಡಿಗೆ ಒತ್ತಾಯಿಸಿರುವುದರಲ್ಲಿ ಯಾವುದೇ ಅಚ್ಚರಿಯಿಲ್ಲ. ಅದಕ್ಕೆ ಬೇಕಾಗಿರುವುದೆಂದರೆ ಕೇವಲ ಒಂದು ಕೇಂದ್ರ ಸರಕಾರಿ ಅಧಿಸೂಚನೆ. ಒಮ್ಮೆ ಎನ್‌ಆರ್‌ಸಿ ಪ್ರಕ್ರಿಯೆ ಮುಗಿಯಿತೋ, ಪೌರತ್ವ ತಿದ್ದುಪಡಿ ಕಾಯಿದೆ ಚಾಲನೆಗೆ ಬರುತ್ತದೆ. ಎನ್‌ಆರ್‌ಸಿಯಿಂದ ಕೈಬಿಟ್ಟ ಮುಸ್ಲಿಮೇತರರಿಗೆ ತಾವು ಬಾಂಗ್ಲಾದೇಶ, ಅಫಘಾನಿಸ್ತಾನ ಅಥವಾ ಬಾಂಗ್ಲಾದೇಶದಿಂದ ಬಂದವರೆಂದು ಹೇಳಿಕೊಂಡು ಪೌರರ ಯಾದಿಗೆ ಸೇರಿಕೊಳ್ಳುವ ಅವಕಾಶವಿರುತ್ತದೆ. ಆದರೆ, ಅಂತಹ ಅದೃಷ್ಟ ಮುಸ್ಲಿಮರಿಗೆ ಇಲ್ಲ. ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲಿ ಚುನಾವಣೆ ನಡೆಲಿರುವ 2021ಕ್ಕೆ ಮೊದಲು ಈ ಪ್ರಕ್ರಿಯೆಯನ್ನು ಮುಗಿಸುವ ಆಶಯ ಬಿಜೆಪಿಯದ್ದು. ಏನಿದ್ದರೂ, 2024 ಒಳಗಾಗಿ ಈ ಎನ್‌ಆರ್‌ಸಿ ಪ್ರಕ್ರಿಯೆಯನ್ನು ಮುಗಿಸಿ ಲೋಕಸಭಾ ಚುನಾವಣೆಯನ್ನು ಎದುರಿಸುವ ಹುನ್ನಾರ ಬಿಜೆಪಿಯದ್ದು. ಆದುದರಿಂದ ಎನ್‌ಪಿಆರ್ ಪ್ರಕ್ರಿಯೆಯನ್ನು ತಡೆಯುವುದು ಈ ವಿಭಜನಕಾರಿ ರಾಜಕೀಯ ಕಾರ್ಯಕ್ರಮವನ್ನು ತಡೆಯುವ ಮೊದಲ ಮತ್ತು ನಿರ್ಣಾಯಕ ಹೆಜ್ಜೆಯಾಗಿದೆ.

ತಪ್ಪಿಸಿಕೊಳ್ಳುವದೋ, ಪ್ರತಿರೋಧಿಸುವುದೋ?

ಈ ರಾಜಕೀಯ ಕದನವು ಮೊದಲಿಗೆ ಕಾನೂನು ಮತ್ತು ಸಾಂವಿಧಾನಿಕ ನೆಲೆಯಲ್ಲಿ ನಡೆಯಲಿದೆ. ಮೋದಿ ಸರಕಾರವು ದಶಕವಾರು ಬರುವ ಜನಗಣತಿಯ ಜೊತೆಗೆ ಎನ್‌ಪಿಆರ್ ಪ್ರಕ್ರಿಯೆಯನ್ನು ಜೋಡಿಸುವ ಮೂಲಕ ಮೊದಲ ಹೆಜ್ಜೆಯನ್ನು ಇಟ್ಟಿದೆ. ಕಾರ್ಯತಂತ್ರವು ಸ್ಪಷ್ಟವಾಗಿದೆ. ಯಾವುದೇ ರಾಜ್ಯವು ಜನಗಣತಿಗೆ ಇಲ್ಲ ಎನ್ನಲು ಸಾಧ್ಯವಿಲ್ಲವಾದದುದರಿಂದ ಅದು ಎನ್‌ಪಿಆರ್ ಕೂಡಾ ನಡೆಸಬೇಕಾದ ಒತ್ತಡಕ್ಕೆ ಒಳಗಾಗುತ್ತದೆ. ಅಲ್ಲಿಯ ತನಕ ಮೋದಿ ಸರಕಾರವು ಎನ್‌ಆರ್‌ಸಿ ಕುರಿತು ತೆಪ್ಪಗಿರುತ್ತದೆ. ಒಮ್ಮೆ ಎನ್‌ಪಿಆರ್ ಪೂರ್ಣಗೊಂಡರೆ, ಎನ್‌ಪಿಆರ್ ಎಂಬುದು ಎನ್‌ಆರ್‌ಸಿಯನ್ನು ರೂಪಿಸುವ ಮನೆಮನೆ ಸಮೀಕ್ಷೆಯಾಗಿತ್ತು ಎಂದು ಅಧಿಸೂಚನೆ ಹೊರಡಿಸುತ್ತದೆ. ಎನ್‌ಪಿಆರ್ ನಡೆಸಲು ನಿರಾಕರಿಸುವ ಯಾವುದೇ ರಾಜ್ಯ ಸರಕಾರಕ್ಕೆ ಜನಗಣತಿಯನ್ನು ಬುಡಮೇಲುಗೊಳಿಸಿದ ಆರೋಪದ ಮೇಲೆ ಸಂವಿಧಾನದ ವಿಧಿ 356 ಅನ್ವಯ ವಜಾಗೊಳಿಸುವ ಬೆದರಿಕೆ ಒಡ್ಡಲಾಗುತ್ತದೆ.

ಈ ತನಕ ರಾಜ್ಯ ಸರಕಾರಗಳು ಎರಡು ರೀತಿಯ ಪ್ರತಿಕ್ರಿಯೆ ನೀಡಿವೆ: ತಪ್ಪಿಸಿಕೊಳ್ಳುವಿಕೆ ಮತ್ತು ಪ್ರತಿರೋಧ. ಇವೆರಡೂ ಪರಿಣಾಮಕಾರಿಯಾಗುವ ಸಾಧ್ಯತೆ ಕಡಿಮೆ. ಈ ತನಕ ಬಿಹಾರ, ಆಂಧ್ರಪ್ರದೇಶ ಮತ್ತು ದಿಲ್ಲಿ ಎನ್‌ಪಿಆರ್‌ಗೆ ವಿರೋಧ ವ್ಯಕ್ತಪಡಿಸಿಲ್ಲ. ಆದರೆ, ಅದರ ಸ್ವರೂಪ ಈಗಿರುವುದಕ್ಕೆ ಬದಲಾಗಿ 2010ರಲ್ಲಿ ಇದ್ದಂತೆ ಇರಬೇಕು ಎಂದು ಹೇಳುತ್ತಿವೆ. ಅವು ಹೊಸ ಎನ್‌ಪಿಆರ್‌ನಲ್ಲಿ ಸೇರಿಸಲಾಗಿರುವ ಆರು ಹೆಚ್ಚುವರಿ ಪ್ರಶ್ನೆಗಳಿಗೆ ಆಕ್ಷೇಪ ವ್ಯಕ್ತಪಡಿಸಿವೆ. ಅವೆಂದರೆ, ತಂದೆ ತಾಯಿಯರ ಜನನ ಸ್ಥಳ ಮತ್ತು ದಿನಾಂಕ, ಆಧಾರ್ (ಐಚ್ಛಿಕ), ಡ್ರೈವಿಂಗ್ ಲೈಸನ್ಸ್, ಪ್ಯಾನ್ (ಪಿಎಎನ್) ಮತ್ತು ಪಾಸ್‌ಪೋರ್ಟ್ ಸಂಖ್ಯೆ. ಬಿಜೆಪಿಯ ಬೆಂಬಲದೊಂದಿಗೆ ಬಿಹಾರ ಸರಕಾರ 2010ರ ಮಾದರಿಯನ್ನು ಒಪ್ಪಿಕೊಂಡಿರುವುದು ಮೋದಿ ಸರಕಾರವು ಇದನ್ನೇ ಒಂದು “ರಾಜಿಸೂತ್ರ” ಎಂದು ಪರಿಗಣಿಸಬಹುದು ಎಂಬುದನ್ನು ಸೂಚಿಸುತ್ತದೆ.

ಇಂತಹಾ ತಪ್ಪಿಸಿಕೊಳ್ಳುವಿಕೆಯ ಸಮಸ್ಯೆ ಎಂದರೆ, ಬಿಜೆಪಿಯು ಇದನ್ನು ಒಪ್ಪಿಕೊಳ್ಳಬಹುದು ಮತ್ತು ಇದು ಎನ್‌ಆರ್‌ಸಿಯ ದಾರಿಗೆ ಅಡ್ಡವಾಗುವುದಿಲ್ಲ. ಆಗಲೂ ಸರಕಾರವು 2010ರ ಮಾದರಿಯನ್ನೇ ಬಳಸಿಕೊಂಡು ಪಡೆದ ಮಾಹಿತಿಯನ್ನು ಬಳಸಿಕೊಂಡು “ಸಂಶಯಾಸ್ಪದ” ನಾಗರಿಕರನ್ನು ಗುರುತಿಸಬಹುದು. ರಾಜ್ಯ ಸರಕಾರಗಳು ತಮ್ಮ ನಾಗರಿಕರನ್ನು ಈ ತಾರತಮ್ಯದ ಮತ್ತು ವಿಭಜನಕಾರಿಯಾದ ಕಾರ್ಯಕ್ರಮದಿಂದ ರಕ್ಷಿಸಿಕೊಳ್ಳಬೇಕೆಂದಿದ್ದರೆ, “2010ರ ಸೂತ್ರ”ಕ್ಕೆ ಇನ್ನೊಂದು ಶರತ್ತನ್ನು ಸೇರಿಸುವಂತೆ ಒತ್ತಾಯಿಸಬೇಕು: ಅದೆಂದರೆ 2003ರ ನಿಯಮಗಳಿಗೆ ತಿದ್ದುಪಡಿ ತರುವ ಮೂಲಕ, “ಸಂಶಯಾಸ್ಪದ” ನಾಗರಿಕರ ಗುರತಿಸುವಿಕೆ ಅಥವಾ ಪರಿಶೀಲನೆ ಸೇರಿದಂತೆ ಯಾವುದೇ ರೀತಿಯಲ್ಲಿ ಎನ್‌ಪಿಆರ್ ಮಾಹಿತಿಯನ್ನು ಎನ್‌ಆರ್‌ಸಿಗೆ ಬಳಸುವುದಿಲ್ಲ ಎಂದು ಕೇಂದ್ರ ಸರಕಾರದಿಂದ ಭರವಸೆ ಪಡೆಯುವುದು. ರಾಜಕೀಯ ಹುನ್ನಾರವನ್ನು ಪರಿಗಣಿಸಿದರೆ ಮೋದಿ ಸರಕಾರ ಇದಕ್ಕೆ ಒಪ್ಪುವ ಸಾಧ್ಯತೆಗಳಿಲ್ಲ.

ಎರಡನೇ ಹಾದಿಯೆಂದರೆ, ಕೇರಳ ಮತ್ತು ಪಶ್ಚಿಮ ಬಂಗಾಳಗಳು ತೆಗೆದುಕೊಂಡಿರುವ ಬಹಿರಂಗ ಪ್ರತಿರೋಧದ ಹಾದಿ. ಅವು ಎನ್‌ಪಿಆರ್ ಪ್ರಕ್ರಿಯೆಯನ್ನು ಮುನ್ನಡೆಸದಂತೆ ತಮ್ಮ ನೌಕರರಿಗೆ ಆದೇಶಿಸಿವೆ. ಈ ನಿಲುವಿಗೆ ಸಾಂವಿಧಾನಿಕ ಅರ್ಹತೆಯಿದೆ. ಜನಗಣತಿಯ ಮಾಹಿತಿಯ ಶುದ್ಧತೆ ಕಾಪಾಡುವುದು ಮತ್ತು ಅದನ್ನು ಎನ್‌ಪಿಆರ್ ಜೊತೆಗೆ ಬೆರೆಸಿ ಮಾಹಿತಿಯನ್ನು ದೂಷಿತಗೊಳಿಸುವುದನ್ನು ಮತ್ತು ಗೌಪ್ಯತೆಯನ್ನು ಬಹಿರಂಗಗೊಳಿಸುವುದನ್ನು ತಡೆಯಲು ಕೈಗೊಂಡ ಕ್ರಮ ಎಂದು ವಾದಿಸಬಹುದು. ಇದು ಆಧಾರ್ ಮಾಹಿತಿ ಸಂಗ್ರಹವನ್ನು ಎನ್‌ಪಿಆರ್‌ನಂತಹಾ ಯಾವುದೇ ಇತರ ಮಾಹಿತಿ ಸಂಗ್ರಹಕ್ಕೆ ಬಳಸಬಾರದು ಎಂದು ಪುಟ್ಟಸ್ವಾಮಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪನ್ನು ಇದು ಎತ್ತಿಹಿಡಿಯುತ್ತವೆ.

ಎನ್‌ಪಿಆರ್‌ಗೆ ಆಧಾರವಾಗಿರುವ ನಿಯಮಗಳನ್ನು 2003ರಲ್ಲಿ ಅಂದರೆ 2004ರಲ್ಲಿ ತಿದ್ದುಪಡಿ ಮಾಡಲಾದ ಪೌರತ್ವ ಕಾಯಿದೆಗೂ ಮುಂಚಿತವಾಗಿ ರೂಪಿಸಿರುವುದರಿಂದ ಅವುಗಳನ್ನು ಅನುಷ್ಟಾನಗೊಳಿಸದಿರಲು ತಾನು ಕರ್ತವ್ಯಬದ್ಧ ಎಂದು ಯಾವುದೇ ರಾಜ್ಯ ಸರಕಾರ ವಾದಿಸಬಹುದು. ಈ ನೆಲೆಯಲ್ಲಿ ಯಾವುದೇ ರಾಜ್ಯ ಸರಕಾರ ಎನ್‌ಪಿಆರ್ ಜಾರಿಗೊಳಿಸಲು ನಿರಾಕರಿಸಿದರೆ, ಅದು ಆಡಳಿತವನ್ನು ಜಾರಿಗೊಳಿಸಲು ವೈಫಲ್ಯ ಎಂಬ ನೆಲೆಯಲ್ಲಿ ಪರಿಗಣಿಸಲು ಅಥವಾ  ಸಂವಿಧಾನದ ವಿಧಿ 356 ಅಡಿಯಲ್ಲಿ ವಜಾಗೊಳಿಸಲು ಸಾಧ್ಯವಿಲ್ಲ.

ಹೀಗಿದ್ದರೂ, ಇಲ್ಲಿ ಸಮಸ್ಯೆ ಎಂದರೆ, ಒಂದು ವೇಳೆ ಕೇಂದ್ರ ಸರಕಾರವು ಇದೇ ನೆಲೆಯಲ್ಲಿ ರಾಜ್ಯ ಸರಕಾರಗಳನ್ನು ವಜಾ ಗೊಳಿಸಲ ಬಳಸಿದರೆ, ಈ ವಾದಗಳನ್ನು ಕೇಳುವವರು ಯಾರು? ಸಂವಿಧಾನದ ವಿಧಿ 370ಯ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ವರ್ತನೆ ಅಥವಾ ಅಪವರ್ತನೆ ಈ ಕುರಿತು ವಿಶ್ವಾಸವನ್ನೇನೂ ಮೂಡಿಸುವುದಿಲ್ಲ.

ಕೊಂಡಿ ಕಳಚುವಿಕೆ, ಭಿನ್ನಮತ, ಪರಿಹಾರ ಸೂತ್ರ (delink, defer, diffuse)

ರಾಜ್ಯ ಸರಕಾರಗಳು ಅನುಸರಿಸಬಹುದಾದ ಮೂರನೇ ಕ್ರಮವೊಂದು ಇಲ್ಲಿದೆ. ರಾಜ್ಯ ಸರಕಾರಗಳು “2010ರ ಸೂತ್ರ” ಇತ್ಯಾದಿಗಳ ಮೂಲಕ ತಪ್ಪಿಸಿಕೊಳ್ಳುವ ಕ್ರಮ ಅನುಸರಿಸುವುದು ಅಥವಾ ಅಪಾಯಕಾರಿ ಪ್ರತಿರೋಧದ ಕ್ರಮಗಳಿಗೆ ಬದಲಾಗಿ ಮೂರನೇ ಹಾದಿಯೊಂದಿದೆ.

ರಾಜ್ಯ ಸರಕಾರವೊಂದು ಎನ್‌ಪಿಆರ್ ಜಾರಿಗೊಳಿಸಲು ನಿರಾಕರಿಸಬೇಕೆಂದಿಲ್ಲ. ತಾನು ಜನಗಣತಿಯ ಪಾವಿತ್ರ್ಯ ಮತ್ತು ತನ್ನದೇ ಕಾನೂನು ಬದ್ಧತೆಗಳ ಉಲ್ಲಂಘನೆ ಆಗದಂತೆ ಎಚ್ಚರಿಕೆ ವಹಿಸುತ್ತಿರುವುದಾಗಿ ವಾದಿಸಬಹುದು.

ಜನಗಣತಿ ಮತ್ತು ಎನ್‌ಪಿಆರ್ ನಡುವಿನ ಕೊಂಡಿ ಕಳಚುವುದು ರಾಜ್ಯ ಸರಕಾರವೊಂದರ ಅಧಿಕಾರ ವ್ಯಾಪ್ತಿಯಲ್ಲಿಯೇ ಇದೆ. ಸರಕಾರವು ಒಂದು ಆದೇಶ ಹೊರಡಿಸಬಹುದು ಅಥವಾ ಈಗಿರುವ ಆದೇಶವನ್ನು ತಿದ್ದುಪಡಿ ಮಾಡಬಹುದು. ಎನ್‌ಪಿಆರ್ ಉಲ್ಲೇಖ ಮಾಡದೆಯೇ ಮನೆಮನೆ ಜನಗಣತಿ ಮತ್ತು ಮಾಹಿತಿ ಸಂಗ್ರಹಕ್ಕೆ ದಿನಾಂಕಗಳ ಕುರಿತು ಅಧಿಸೂಚನೆ ಹೊರಡಿಸಬಹುದು. ರಾಜಸ್ತಾನ ಸರಕಾರವು ಈಗಾಗಲೇ ಅದನ್ನು ಮಾಡಿದೆ.

ಎರಡನೆಯದಾಗಿ, ರಾಜ್ಯ ಸರಕಾರ ಎನ್‌ಪಿಆರ್ ಮುಂದೂಡಬಹುದು. ಜನಗಣತಿ ಮುಗಿದ ನಂತರ ಅಂದರೆ, 2021ರಲ್ಲಿ ಇಡೀ ಜನಗಣತಿ ಪ್ರಕ್ರಿಯೆ ಮುಗಿದ ನಂತರ ಎನ್‌ಪಿಆರ್‌ಗೆ ಮಾಹಿತಿಗೆ ಹೊಸ ದಿನಾಂಕಗಳನ್ನು ಅಧಿಸೂಚಿಸುವ ಮೂಲಕ ಎರಡನೇ ಹೆಜ್ಜೆ ಇಡಬಹುದು.

ಮೂರನೆಯದಾಗಿ, ಶಿಕ್ಷಣ ಹಕ್ಕು ಕಾಯಿದೆಯ ವಿಧಿ 27 ಹೇಳುವಂತೆ ಎನ್‌ಪಿಆರ್‌ಗೆ ಯಾವುದೇ ಶಿಕ್ಷಕರ ಸೇವೆಯನ್ನು ನಿರಾಕರಿಸಬೇಕು. ಏಕೆಂದರೆ, ಈ ವಿಧಿಯು ಜನಗಣತಿ, ಚುನಾವಣೆ ಮತ್ತು ದುರಂತ ನಿರ್ವಹಣೆ ಹೊರತು ಬೇರಾವುದೇ ಶಿಕ್ಷಣೇತರ ಕರ್ತವ್ಯಗಳಿಗೆ ಶಿಕ್ಷಕರನ್ನು ಬಳಸಲಾಗದು ಎಂದು ಹೇಳುತ್ತದೆ. ಅಂಂತಿಮವಾಗಿ ದೊಡ್ಡ ಪ್ರಮಾಣದಲ್ಲಿ ಅಹಿಂಸಾತ್ಮಕ ಬಹಿಷ್ಕಾರ ಎನ್‌ಪಿಆರ್ ವಿರುದ್ಧ ನಡೆದರೆ, ಸರಕಾರ ಅಂತಹಾ ಪ್ರಜಾಸತ್ತಾತ್ಮಕ ಪ್ರತಿಭಟನೆಯ ಅಪರಾಧೀಕರಣ ಮಾಡಬಾರದು.

ಈ ಮೂರನೆಯ ಮತ್ತು ಕೊನೆಯ ಹಾದಿಯು ಕೇಂದ್ರ ಮತ್ತು ರಾಜ್ಯ ಸರಕಾರಗಳ ನಡುವೆ ಯಾವುದೇ ಸಂಘರ್ಷದ ಅವಕಾಶ ಕೊಡುವುದಿಲ್ಲ. ಅದು ಎನ್‌ಪಿಆರ್ ಮಾಹಿತಿಗಳನ್ನು ಎನ್‌ಆರ್‌ಸಿಗೆ ಬಳಸಿಕೊಳ್ಳುವ ದುರುದ್ದೇಶಕ್ಕೆ ತಡೆಯೊಡ್ಡುತ್ತದೆ. ನಮ್ಮ ಗಣರಾಜ್ಯವನ್ನು ರಕ್ಷಿಸುವ ಕದನವು ಚಿಕ್ಕದಾದ ಮತ್ತು ಕೇವಲ ತಾಂತ್ರಿಕವಾದ ಜಯದೊಂದಿಗೆ ಆರಂಭವಾಗುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಹಾರಾಷ್ಟ್ರ: ಎರಡು ಗಂಟೆಗಳಲ್ಲಿ 40 ಜನರಿಗೆ ಕಚ್ಚಿದ ಬೀದಿ ನಾಯಿ: ಚಿಕಿತ್ಸೆಗಾಗಿ ಆಸ್ಪತ್ರೆ ಎದುರು ಸರತಿ ಸಾಲಿನಲ್ಲಿ ನಿಂತ ಗಾಯಾಳುಗಳು

ಬೀಡ್: ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಕೈಜ್ ಪಟ್ಟಣದಲ್ಲಿ ಬೀದಿ ನಾಯಿಯೊಂದು ಎರಡು ಗಂಟೆಗಳಲ್ಲಿ ಕನಿಷ್ಠ 40 ಜನರನ್ನು ಕಚ್ಚಿದ್ದು, ರೇಬೀಸ್ ವಿರುದ್ಧ ಲಸಿಕೆ ಪಡೆಯಲು ಸಂತ್ರಸ್ತರು ಸರ್ಕಾರಿ ಆಸ್ಪತ್ರೆಯಲ್ಲಿ ಸರತಿ ಸಾಲಿನಲ್ಲಿ ನಿಲ್ಲುವಂತೆ...

ಇರಾನ್‌ಗೆ ಶಸ್ತ್ರಾಸ್ತ್ರ ಕಳುಹಿಸುವುದಕ್ಕೆ ಚೀನಾ ಅಧ್ಯಕ್ಷ ಜಿನ್‌ಪಿಂಗ್ ನಿರಾಕರಿಸಿದ್ದಾರೆ: ಡೊನಾಲ್ಡ್‌ ಟ್ರಂಪ್

"ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಇರಾನ್‌ಗೆ ಶಸ್ತ್ರಾಸ್ತ್ರಗಳನ್ನು ಕಳುಹಿಸುವುದನ್ನು ನಿರಾಕರಿಸಿದ್ದಾರೆ" ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಹೇಳಿದ್ದಾರೆ. ಚೀನಾ ಇರಾನ್‌ಗೆ ಯುದ್ಧಕ್ಕಾಗಿ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿದೆ ಎಂಬ ವರದಿಗಳ ನಂತರ ಅಮೆರಿಕದ...

‘ಉದ್ದೇಶಿತ ಮಹಿಳಾ ಮೀಸಲಾತಿಯಲ್ಲಿ ಎಸ್‌ಸಿ, ಎಸ್‌ಟಿ, ಒಬಿಸಿ ಮಹಿಳೆಯರಿಗೆ ಪ್ರತ್ಯೇಕ ಕೋಟಾ ನಿಗದಿ ಮಾಡಬೇಕು’: ಮಾಯಾವತಿ

ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಉದ್ದೇಶಿತ ಶೇಕಡಾ 33ರಷ್ಟು ಮೀಸಲಾತಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳಿಗೆ ಸೇರಿದ ಮಹಿಳೆಯರಿಗೆ ಪ್ರತ್ಯೇಕ ಕೋಟಾವನ್ನು ನಿಗದಿಪಡಿಸಬೇಕೆಂದು ಬಹುಜನ ಸಮಾಜ...

ಆತ್ಮಾವಲೋಕನಕ್ಕೆ ಸಿದ್ಧವಿಲ್ಲದ ಕಾಂಗ್ರೆಸ್ಸಿನಿಂದ ಅಲ್ಪಸಂಖ್ಯಾತರ ಭಾವನೆಗಳ ಮೇಲೆ ಹಲ್ಲೆ: ಎದ್ದೇಳು ಕರ್ನಾಟಕ

ಶಾಮನೂರು ಶಿವಶಂಕರಪ್ಪ ನಿಧನದ ಬಳಿಕ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಉಪ ಚುನಾವಣೆಯು ಕಾಂಗ್ರೆಸ್‌ ಪಕ್ಷದಲ್ಲಿ ಗೊಂದಲ ಮತ್ತು ವಿವಾದ ಉಂಟುಮಾಡಿದೆ. ಮತದಾನ ಮುಗಿದ ಬಳಿಕ, ಕಾಂಗ್ರೆಸ್‌ ಪಕ್ಷವು ಮುಸ್ಲಿಂ ನಾಯಕರಾದ...

ಮಹಿಳಾ ಮೀಸಲಾತಿ, ಕ್ಷೇತ್ರ ಮರುವಿಂಗಡಣೆ ಕುರಿತ ಚರ್ಚೆ: ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಸಭೆ ಸೇರಿದ ವಿಪಕ್ಷ ನಾಯಕರು

ಸಂಸತ್ತಿನ ಮೂರು ದಿನಗಳ ವಿಶೇಷ ಅಧಿವೇಶನಕ್ಕೂ ಮುನ್ನ, ಮಹಿಳಾ ಮೀಸಲಾತಿ ಕಾನೂನು ಮತ್ತು ಪ್ರಸ್ತಾವಿತ ಕ್ಷೇತ್ರ ಮರುವಿಂಗಡಣೆ ತಿದ್ದುಪಡಿ ಕುರಿತು ಕಾರ್ಯತಂತ್ರವನ್ನು ಚರ್ಚಿಸಲು ವಿರೋಧ ಪಕ್ಷಗಳ ಉನ್ನತ ನಾಯಕರು ಬುಧವಾರ ನವದೆಹಲಿಯಲ್ಲಿರುವ ಕಾಂಗ್ರೆಸ್...

ಯೋಗೀಶ್‌ ಗೌಡ ಕೊಲೆ ಪ್ರಕರಣ : ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ದೋಷಿ

ಧಾರವಾಡ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಯೋಗೀಶ್‌ಗೌಡ ಕೊಲೆ ಪ್ರಕರಣದ ಅಂತಿಮ ತೀರ್ಪು ಹೊರಬಿದ್ದಿದ್ದು, ಹಾಲಿ ಕಾಂಗ್ರೆಸ್ ಶಾಸಕ ಹಾಗೂ ಮಾಜಿ ಸಚಿವ ವಿನಯ್‌ ಕುಲಕರ್ಣಿ ಸೇರಿ 19 ಮಂದಿ ಆರೋಪಿಗಳು ದೋಷಿಗಳು ಎಂದು ಜನಪ್ರತಿನಿಧಿಗಳ ವಿಶೇಷ...

ಉತ್ತರ ಪ್ರದೇಶ| ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದ 17 ವರ್ಷದ ದಲಿತ ಬಾಲಕಿ ಆತ್ಮಹತ್ಯೆಗೆ ಶರಣು

ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದ 17 ವರ್ಷದ ದಲಿತ ಬಾಲಕಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದ ಚಿತ್ರಕೂಟ ಜಿಲ್ಲೆಯ ಹಳ್ಳಿಯಲ್ಲಿ ನಡೆದಿದೆ. ಹೋಳಿ ಹಬ್ಬದಂದು ನಡೆದಿತ್ತು ಎನ್ನಲಾದ ಅತ್ಯಾಚಾರ ಪ್ರಕರಣದಲ್ಲಿ ಸ್ಥಳೀಯ ಮೂವರು ಯುವಕರ...

“ತಲೆ ಮೇಲೆ ತೂಗುತ್ತಿದ್ದ ಕತ್ತಿ ಈಗ ಮೈಮೇಲೆ ಎರಗಿದೆ”: ಕ್ಷೇತ್ರ ಮರುವಿಂಗಡನೆ ವಿರುದ್ಧ ಸಮರ ಸಾರಿದ ಸ್ಟಾಲಿನ್; ರಾಜ್ಯಾದ್ಯಂತ ಕಪ್ಪು ಬಾವುಟ ಪ್ರತಿಭಟನೆಗೆ ಕರೆ

ಕೇಂದ್ರ ಸರ್ಕಾರದ ಪ್ರಸ್ತಾವಿತ ಕ್ಷೇತ್ರ ಮರುವಿಂಗಡನೆ ಪ್ರಕ್ರಿಯೆಯ ವಿರುದ್ಧ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ತಮ್ಮ ಟೀಕೆಯನ್ನು ತೀವ್ರಗೊಳಿಸಿದ್ದು, ಇದನ್ನು ದಕ್ಷಿಣ ರಾಜ್ಯಗಳ ವಿರುದ್ಧದ 'ಐತಿಹಾಸಿಕ ಅನ್ಯಾಯ' ಎಂದು ಕರೆದಿದ್ದಾರೆ ಮತ್ತು ಗುರುವಾರ...

ಶಿಕೋಪುರ ಭೂ ವ್ಯವಹಾರದ ಹಣ ವರ್ಗಾವಣೆ ಪ್ರಕರಣ; ರಾಬರ್ಟ್ ವಾದ್ರಾಗೆ ದೆಹಲಿ ನ್ಯಾಯಾಲಯದಿಂದ ಸಮನ್ಸ್

ಹರಿಯಾಣದ ಶಿಕೋಪುರದಲ್ಲಿ ನಡೆದ ವಿವಾದಾತ್ಮಕ ಭೂ ವ್ಯವಹಾರಕ್ಕೆ ಸಂಬಂಧಿಸಿದ ಹಣ ವರ್ಗಾವಣೆ ತನಿಖೆಗೆ ಸಂಬಂಧಿಸಿದಂತೆ ಉದ್ಯಮಿ ರಾಬರ್ಟ್ ವಾದ್ರಾ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ಸಲ್ಲಿಸಿದ್ದ ಆರೋಪಪಟ್ಟಿಯನ್ನು ಬುಧವಾರ ದೆಹಲಿ ನ್ಯಾಯಾಲಯವು ಪರಿಗಣಿಸಿದೆ....

ಕಾಂಗ್ರೆಸ್‌ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ‌ ಎಂಎಲ್‌ಸಿ ಅಬ್ದುಲ್ ಜಬ್ಬಾರ್ ಅಮಾನತು

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಬಳಿಕ ರಾಜ್ಯ ಕಾಂಗ್ರೆಸ್‌ನಲ್ಲಿ ಉಂಟಾಗಿರುವ ಆಂತರಿಕ ಭಿನ್ನತೆ ಸದ್ಯಕ್ಕೆ ಶಮನಗೊಳ್ಳುವ ಸಾಧ್ಯತೆ ಕಾಣುತ್ತಿಲ್ಲ. ಕಾಂಗ್ರೆಸ್‌ನ ರಾಜ್ಯ ಮತ್ತು ಹೈಕಮಾಂಡ್‌ ನಾಯಕರ ನಡೆ ಗಾಯಕ್ಕೆ ಮುಲಾಮು...