I, a citizen of Republic of India
ನಾನು,
ಭಾರತ ಗಣರಾಜ್ಯದ ಪ್ರಜೆಯೇ ಹೊರತು ಯಾವುದೋ ಸರ್ಕಸ್ ಕಂಪೆನಿಯ ರಿಂಗ್ ಮಾಸ್ಟರನ ಕರೆಗೆ ತಕ್ಕಂತೆ ತಿಪ್ಪರಲಾಗ ಹಾಕುವ ಬಫೂನ್ ಅಲ್ಲ.
ಹಲವಾರು ದೇಶಗಳಲ್ಲಿ ನಾಯಕರು ದಿನದ ಕೊನೆಯಲ್ಲಿ ಕರೋನಾ ವಿರುದ್ಧ ಸಾರಿರುವ ಸಮರದಲ್ಲಿ ಆ ದಿನದ ಬೆಳವಣಿಗೆಗಳೇನು ಎನ್ನುವುದನ್ನು ಹಂಚಿಕೊಳ್ಳಲು ಪ್ರಜೆಗಳೊಂದಿಗೆ ಮಾತನಾಡುತ್ತಿರುವುದನ್ನು ನೋಡುತ್ತಿದ್ದೇವೆ.
ಹಾಗೆಯೇ ಅಲ್ಲಿನ ಮಾಧ್ಯಮಗಳು ಸರಕಾರವನ್ನು ಕಾರ್ಯಬದ್ಧವಾಗಿಸಲು ತುರ್ತಿನ ಪ್ರಶ್ನೆಗಳನ್ನು ಎತ್ತುತ್ತಿರುವುದನ್ನು ನೋಡುತ್ತಿದ್ದೇವೆ.
ಆದರೆ ನಾವಿಲ್ಲಿ, ಯಾರದೋ ತಾಳಕ್ಕೆ ಕುಣಿಯುವ ಕೋತಿಗಳಾಗಿದ್ದೇವೆ.
ನಾನು ಈ ದೇಶದ ಪ್ರಜೆಯಾಗಿ ಹಕ್ಕೊತ್ತಾಯದಿಂದ ಕೆಲವು ಮಾಹಿತಿಯನ್ನು ತಿಳಿಯಲು ಇಚ್ಛಿಸುತ್ತಿದ್ದೇನೆ. ಈ ದೇಶದಲ್ಲಿ, ಈ ದಿನ
ವೈದ್ಯರು, ದಾದಿಯರು ಮತ್ತು ಇತರ ವೈದ್ಯಕೀಯ ಸಿಬ್ಬಂದಿಗೆ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಲು ಲಭ್ಯವಿರುವ PPE ಗಳು ಎಷ್ಟು?
ಎಷ್ಟು ಆಸ್ಪತ್ರೆಗಳು, ವೆಂಟಿಲೇಟರುಗಳು ಮತ್ತು ತೀವ್ರ ನಿಗಾ ಘಟಕಗಳು ಈ ವೈದ್ಯಕೀಯ ತುರ್ತುಪರಿಸ್ಥಿತಿಯನ್ನು ನಿಭಾಯಿಸಲು ತಯಾರಿವೆ?
ಕರೋನಾ ಪರೀಕ್ಷೆಯ ಸೌಲಭ್ಯ ಎಲ್ಲರಿಗೆ ದೊರೆಯುವ ರೀತಿಯಲ್ಲಿ ನಾವೆಷ್ಟು ಬೆಳವಣಿಗೆಯನ್ನು ಸಾಧಿಸಿದ್ದೇವೆ?
ದಿನಗೂಲಿಯವರ, ಮನೆಯಿಲ್ಲದವರ, ನಿರುದ್ಯೋಗಿಗಳ ಮತ್ತು ವಲಸೆ ಕೆಲಸಗಾರರ ದಯನೀಯ ಸ್ಥಿತಿಯನ್ನು ಉತ್ತಮಪಡಿಸಲು ಸರಕಾರ ಯಾವ ಕ್ರಮಗಳನ್ನು ಕೈಗೊಂಡಿದೆ?
ಬೀದಿಗೆ ಬಿದ್ದು ನೂರಾರು ಕಿಲೋಮೀಟರುಗಳನ್ನು ಸವೆಸುತ್ತಿರುವ ವಲಸೆ ಕೆಲಸಗಾರರ ಆಹಾರ ಮತ್ತು ವೈದ್ಯಕೀಯ ಅಗತ್ಯಗಳ ಪಾಡೇನು?
ಬೆಳೆದಿದ್ದನ್ನು ಮಾರಲಾಗದೆ ಅಸಹಾಯರಾಗಿ ಕೈಚೆಲ್ಲಿ ಕೂತಿರುವ ರೈತರ ಗತಿಯೇನು?
ಮನೆಯಲ್ಲಿ ಬಂಧಿತರಾಗಿರುವ ಹೆಂಗಸರು ಮತ್ತು ಮಕ್ಕಳು ಎದುರಿಸುತ್ತಿರುವ ಕೌಟುಂಬಿಕ ದೌರ್ಜನ್ಯಗಳ ರೂಪಗಳು ಯಾವುವು? ಪರಿಹಾರಗಳೇನು?
ತೃತೀಯ ಲಿಂಗಿಗಳ ಮತ್ತು ಲೈಂಗಿಕ ಕೆಲಸಗಾರರು ಈ ಲಾಕ್ ಡೌನ್ ಅವಧಿಯಲ್ಲಿ ಬದುಕನ್ನು ಹೇಗೆ ಸಾಗಿಸಬೇಕು? ಅವರಿಗೆ ಸರಕಾರ ಏನು ಮಾಡುತ್ತಿದೆ?
ಮೋದಿ ಸರಕಾರಕ್ಕೆ ನಾನು ಕೇಳಬೇಕಾದ ಪ್ರಶ್ನೆಗಳು ಇನ್ನೂ ಹಲವಾರಿವೆ.
ಈ ದುರ್ಭರ ಕಾಲದಲ್ಲಿ ಬೆಳಕೆಂದರೆ ಜ್ಞಾನ ಮತ್ತು ಮಾಹಿತಿ.
ಸರಕಾರ ಈ ಕೆಲವು ಪ್ರಶ್ನೆಗಳಿಗಾದರೂ ಸ್ಪಂದಿಸಿ ‘ಬೆಳಕನ್ನು’ ಚೆಲ್ಲಲ್ಲಿ ಎಂದು ಕೇಳಿಕೊಳ್ಳುತ್ತೇನೆ.
ಮತ್ತೊಮ್ಮೆ ಇದನ್ನು ಒತ್ತಿ ಹೇಳಲು ಇಚ್ಛಿಸುತ್ತೇನೆ:
ನಾನೊಬ್ಬ ಭಾರತ ಗಣರಾಜ್ಯದ ಪ್ರಜೆ
ಶೀಟಿ ಊದಿದ ತಕ್ಷಣ ಪಲ್ಟಿ ಹೊಡೆಯಲಾರಂಭಿಸುವ ಕೋತಿಯಲ್ಲ.
– ವೃಂದಾ ಗ್ರೋವರ್
ಕನ್ನಡಕ್ಕೆ: ಸುಕನ್ಯಾ ಕನಾರಳ್ಳಿ