ಉತ್ತರ ಪ್ರದೇಶದ ಹತ್ರಾಸ್ನಲ್ಲಿ ಮೇಲ್ಜಾತಿ ಯುವಕರಿಂದ ಅತ್ಯಾಚಾರ ಮತ್ತು ಕೊಲೆಗಿಡಾದ ದಲಿತ ಯುವತಿಯ ಪ್ರಕರಣ ದೇಶದಾದ್ಯಂತ ತೀವ್ರ ಪ್ರತಿಭಟನೆ, ಆಕ್ರೋಶಕ್ಕೆ ಕಾರಣವಾಗಿದೆ. ಈ ಅಮಾನವೀಯ ಘಟನೆ ದೇಶದ ಲಕ್ಷಾಂತರ ಜನಕ್ಕೆ ಆಘಾತ ತಂದಿದ್ದರೆ, ಉತ್ತರ ಪ್ರದೇಶದ ಬಿಜೆಪಿಯ ದಲಿತ ಸಂಸದರು ಮಾತ್ರ ಇದು ಪಕ್ಷಕ್ಕೆ ರಾಜಕೀಯ ಹಾನಿಯುಂಟುಮಾಡಿದೆ ಎಂದಿದ್ದಾರೆ!
ಉತ್ತರ ಪ್ರದೇಶದ ಆಡಳಿತ ಪಕ್ಷ ಬಿಜೆಪಿಯ ಹಲವು ದಲಿತ ಸಂಸದರು ಈ ಘಟನೆ ಆಡಳಿತದ ಚಿತ್ರಣವನ್ನು ದುರ್ಬಲಗೊಳಿಸಿದೆ. ಜೊತೆಗೆ ರಾಜಕೀಯವಾಗಿ ಹಾನಿಯುಂಟು ಮಾಡುತ್ತದೆ ಎಂದಿದ್ದಾರೆ. ಇದರ ಜೊತೆಗೆ ರಾಜ್ಯ ಸರ್ಕಾರದ ಆಡಳಿತದ ಮೇಲೆ ವಿಶ್ವಾಸ ವ್ಯಕ್ತಪಡಿಸಿರುವ ದಲಿತ ಸಂಸದರು ಪೊಲೀಸರಲ್ಲಿ ಆಳವಾಗಿ ಬೇರೂರಿರುವ ಜಾತಿವಾದ ಮತ್ತು ಭ್ರಷ್ಟಾಚಾರವೇ ಘಟನೆಗೆ ಕಾರಣ ಎಂದು ದೂಷಿಸಿದ್ದಾರೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಉತ್ತರ ಪ್ರದೇಶ ಬಿಜೆಪಿಯ ಕನಿಷ್ಠ ನಾಲ್ಕು ದಲಿತ ಸಂಸದರು ಮೃತ ಸಂತ್ರಸ್ತೆಯ ಕುಟುಂಬವನ್ನು ಒಳಗೊಳ್ಳದೆ ಅವಸರದಲ್ಲಿ ಮೃತದೇಹವನ್ನು ದಹನ ಮಾಡಿದ ಪೊಲೀಸ್ ಕ್ರಮವನ್ನು “ಖಂಡನೀಯ” ಎಂದಿದ್ದಾರೆ. ಜೊತೆಗೆ ಪ್ರಕರಣದ ಸಮರ್ಪಕ ತನಿಖೆಗೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ದಲಿತ ಹೆಣ್ಣುಮಕ್ಕಳ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ, ಅತ್ಯಾಚಾರದ ಈ ಅಂಕಿ-ಅಂಶಗಳನ್ನು ನೋಡಿ: ನೀವೇ ಪ್ರಶ್ನಿಸಿಕೊಳ್ಳಿ
ಇತ್ತೀಚಿನವರೆಗೂ ಬಿಜೆಪಿಯ ಎಸ್ಸಿ ಮೋರ್ಚಾದ ಮುಖ್ಯಸ್ಥರಾಗಿದ್ದ ಕೌಶಂಬಿ ಸಂಸದ ವಿನೋದ್ ಕುಮಾರ್ ಸೋಂಕರ್ ಹೇಳುವಂತೆ, “ಖಂಡಿತವಾಗಿಯೂ, ಈ ಘಟನೆಯು ರಾಜ್ಯ ಮತ್ತು ಸರ್ಕಾರದ ಚಿತ್ರಣವನ್ನು ದುರ್ಬಲಗೊಳಿಸಿದೆ. ಜನರನ್ನು ಸರ್ಕಾರದ ವಿರುದ್ಧ ಕೆರಳಿಸಿದೆ. ಇದು ರಾಜಕೀಯವಾಗಿ ನಮಗೆ ಹಾನಿಕಾರಕವಾಗಿದೆ. ಆದರೆ ಸಂತ್ರಸ್ತೆಯ ಕುಟುಂಬಕ್ಕೆ ನ್ಯಾಯ ದೊರಕಿಸಲು ರಾಜ್ಯ ಸರ್ಕಾರ ಅತ್ಯುತ್ತಮ ಪ್ರಯತ್ನ ಮಾಡುತ್ತಿದೆ” ಎಂದಿದ್ದಾರೆ. ಘಟನೆಗೆ ಪೊಲೀಸ್ ಅಧಿಕಾರಶಾಹಿ ವರ್ಗದ ಭ್ರಷ್ಟಾಚಾರ ಮತ್ತು ಜಾತಿವಾದವೇ ಕಾರಣ ಎಂದು ಸೋಂಕರ್ ಆರೋಪಿಸಿದ್ದಾರೆ.
“ಇದು ಕಳೆದ ಕೆಲವು ವರ್ಷಗಳಿಂದ ಸೃಷ್ಠಿಯಾಗಿರುವ ಸಮಸ್ಯೆಯಲ್ಲ, ಇದು ತುಂಬಾ ಸಮಯದಿಂದಲೂ ಇರುವಂತಹದ್ದು. ರಾಜ್ಯದಲ್ಲಿ ಹಿಂದಿನ ಎಸ್ಪಿ ಮತ್ತು ಬಿಎಸ್ಪಿ ಸರ್ಕಾರಗಳು ಜಾತಿ ಹೆಸರಿನಲ್ಲಿ ಪೊಲೀಸ್ ವ್ಯವಸ್ಥೆಯಲ್ಲಿ ಮತ್ತು ಅಧಿಕಾರಶಾಹಿಯಲ್ಲಿ ಹುದ್ದೆಗಳನ್ನು ವಿತರಿಸಿದ್ದವು. ವಾಸ್ತವವಾಗಿ, ಈ ಪಕ್ಷಗಳಿಗೆ ಇನ್ನೂ ನಿಷ್ಠರಾಗಿರುವವರು ಬಿಜೆಪಿ ಮತ್ತು ಈಗಿನ ಸರ್ಕಾರವನ್ನು ದೂಷಿಸುತ್ತಿದ್ದಾರೆ ಎಂದು ನಮ್ಮಲ್ಲಿ ಕೆಲವರು ಮುಖ್ಯಮಂತ್ರಿಗೆ ತಿಳಿಸಿದ್ದಾರೆ ”ಎಂದು ಸಂಸದ ಸೋಂಕರ್ ಹೇಳಿದ್ದಾರೆ.
ಇನ್ನು ಹೆಸರು ಹೇಳಲು ಇಚ್ಚಿಸದ ಮತ್ತೊಬ್ಬ ದಲಿತ ಸಂಸದ, ಈ ದುರ್ಘಟನೆ ಅಕ್ಟೋಬರ್ 28 ರಿಂದ ಪ್ರಾರಂಭವಾಗುವ ಬಿಹಾರ ಚುನಾವಣೆಯಲ್ಲಿ ಪಕ್ಷದ ಭವಿಷ್ಯವನ್ನು ಹಾಳುಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ಎಚ್ಚರಿಸಿದ್ದಾರೆ.
ಇದನ್ನೂ ಓದಿ: ಉತ್ತರ ಪ್ರದೇಶ: ಮತ್ತೊಬ್ಬ ದಲಿತ ಯುವತಿ ಮೇಲೆ ಅತ್ಯಾಚಾರ, ಕೊಲೆ
ಮೋಹನ್ ಲಾಲ್ಗಂಜ್ ಸಂಸದ ಕೌಶಲ್ ಕಿಶೋರ್ “ಯುಪಿ ಪೊಲೀಸರು ಬಡವರು ಮತ್ತು ದಲಿತರಿಗೆ ಕಿರುಕುಳ ನೀಡುತ್ತಿದ್ದಾರೆ. ಅವರು ತಮ್ಮ ವಿರುದ್ಧದ ದೌರ್ಜನ್ಯ ಪ್ರಕರಣಗಳನ್ನು ಮುಚ್ಚಿಹಾಕುತ್ತಾರೆ. ಅಂತಹ ಪೊಲೀಸರಿಗೆ ಶಿಕ್ಷೆಯಾಗುವಂತೆ ಸರ್ಕಾರ ಮಾಡಬೇಕು. ಈ ಸರ್ಕಾರ ಅಂತಹ ಅಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತದೆ ಎಂಬ ವಿಶ್ವಾಸ ನನಗಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇನ್ನು ಬರಾಬಂಕಿ ಸಂಸದ ಉಪೇಂದ್ರ ಸಿಂಗ್ ರಾವತ್ ಅವರು ಈ ಘಟನೆಯ ಬಗ್ಗೆ ರಾಜ್ಯದ ದಲಿತರು ತುಂಬಾ ಅಸಮಾಧಾನಗೊಂಡಿದ್ದಾರೆ ಎಂದಿದ್ದಾರೆ. “ಈ ಕೃತ್ಯವನ್ನು ಖಂಡಿಸಬೇಕಾಗಿದೆ. ಅದು ಕೇವಲ ದಲಿತ ಯುವತಿ ಎಂಬ ಕಾರಣದಿಂದಲ್ಲ, ಇಂತಹ ದುರ್ಘಟನೆ ಯಾರಿಗೂ ಸಂಭವಿಸಬಾರದು. ಅಪರಾಧಿಗಳು ಪೊಲೀಸರೇ ಆಗಿರಲಿ ಅಥವಾ ಬೇರೆಯವರೇ ಆಗಿರಲಿ ಸರ್ಕಾರವು ಯಾರನ್ನೂ ಬಿಡುವುದಿಲ್ಲ ಎಂಬ ಖಾತ್ರಿ ನನಗಿದೆ” ಎಂದಿದ್ದಾರೆ.
“ಸಂತ್ರಸ್ತರು ದಲಿತರಾಗಿದ್ದಾಗ ಅಥವಾ ಹಿಂದುಳಿದ ಜಾತಿಯವರಾಗಿದ್ದಾಗ, ನ್ಯಾಯ ಸಿಗುವುದು ಮತ್ತು ವ್ಯವಸ್ಥೆ ಕ್ರಮಗೊಳ್ಳು ವುದು ಕೆಲವೊಮ್ಮೆ ವಿಳಂಬವಾಗುತ್ತದೆ. ಏಕೆಂದರೆ ಅವರು ದುರ್ಬಲರು ಎಂಬ ಕಾರಣಕ್ಕೆ. ಆದರೆ ಅಪರಾಧಿಗಳಿಗೆ ಶಿಕ್ಷೆಯಾಗದಿದ್ದರೆ ಸರ್ಕಾರ ತುಂಬಾ ನಷ್ಟವನ್ನು ಅನುಭವಿಸುತ್ತದೆ” ಎಂದು ಘಟನೆಯ ತೀವ್ರತೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಅನ್ಯಾಯದ ಈ ಘೋರ ಸಾವು ಯಾವ ಹೆಣ್ಣಿಗೂ ಬರದಿರಲಿ: ಎಚ್.ಎಸ್.ಅನುಪಮ
ಉತ್ತರ ಪ್ರದೇಶ ಸರ್ಕಾರ ಪ್ರಕರಣ ಕುರಿತು ಮೂರು ಮಂದಿ ಸದಸ್ಯರ ಎಸ್ಐಟಿ ತಂಡವನ್ನು ರಚನೆ ಮಾಡಿದ್ದು, 7 ದಿನಗಳಲ್ಲಿ ವರದಿ ನೀಡುವಂತೆ ಆದೇಶಿಸಿದೆ. ಪ್ರಧಾನಿ ನರೇಂದ್ರ ಮೋದಿಯವರ ಸೂಚನೆ ಮೇರೆಗೆ ಈ ಎಸ್ಐಟಿ ತಂಡ ರಚಿಸಲಾಗಿದ ಎಂದು ಯುಪಿ ಮುಖ್ಯಮಂತ್ರಿ ಆದಿತ್ಯನಾಥ್ ತಿಳಿಸಿದ್ದಾರೆ.
ದೇಶದೆಲ್ಲೆಡೆ ಪ್ರತಿಭಟನೆ ಮತ್ತು ವ್ಯಾಪಕ ಆಕ್ರೋಶವನ್ನು ಎದುರಿಸುತ್ತಿರುವ ಉತ್ತರ ಪ್ರದೇಶ ರಾಜ್ಯವು ಈ ಪ್ರಕರಣದ ವಿಚಾರಣೆಗೆ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯವನ್ನು ಸ್ಥಾಪಿಸುವುದಾಗಿ ಹೇಳಿದೆ. ಇದಲ್ಲದೆ, ಸಂತ್ರಸ್ತೆಯ ಕುಟುಂಬಕ್ಕೆ 25 ಲಕ್ಷ ರೂ.ಗಳ ಪರಿಹಾರ, ಕುಟುಂಬ ಸದಸ್ಯರಿಗೆ ಸರ್ಕಾರಿ ಕೆಲಸ, ಮತ್ತು ರಾಜ್ಯ ನಗರಾಭಿವೃದ್ಧಿ ಏಜೆನ್ಸಿಯ ಅಡಿಯಲ್ಲಿ ಹತ್ರಾಸ್ ನಗರದಲ್ಲಿ ಒಂದು ಮನೆ ಕೊಡುವುದಾಗಿ ಘೋಷಿಸಿದೆ.
ದಲಿತ ಯುವತಿ ಮೇಲೆ ನಡೆದ ಕ್ರೂರ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಥವಾ ವಿಶೇಷ ತನಿಖಾ ತಂಡ ತನಿಖೆ ನಡೆಸಬೇಕೆಂದು ಕೋರಿ ಸುಪ್ರೀಂ ಕೋರ್ಟ್ನಲ್ಲಿ ರಿಟ್ ಅರ್ಜಿ ಕೂಡ ಸಲ್ಲಿಸಲಾಗಿದೆ. ರಾಜ್ಯ ಸರ್ಕಾರ ಈ ಪ್ರಕರಣದ ತನಿಖೆಗೆ ಎಸ್ಐಟಿ ತಂಡ ರಚಿಸಲಾಗಿದೆ ಎಂದಿದೆ.
ಒಟ್ಟಾರೆ ಉತ್ತರ ಪ್ರದೇಶದಲ್ಲಿ ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ ಪ್ರಕರಣಗಳು ಬೆಳಕಿಗೆ ಬರಲು ಹತ್ರಾಸ್ ಗ್ಯಾಂಗ್ ರೇಪ್ ಪ್ರಕರಣ ಕಾರಣವಾಗಿದೆ. ತಮ್ಮದೆ ಪಕ್ಷದ ನಾಯಕರು ರಾಜ್ಯದ ಜನತೆ ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಳ್ಳುತ್ತಿರುವುದು ಮತ್ತು ಮುಂದಿನ ಚುನಾವಣೆಯಲ್ಲಿ ಪರಿಣಾಮ ಬೀರುತ್ತದೆ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ. ಇಂತಹ ಸಂದರ್ಭದಲ್ಲಿ, ದೇಶದ ಜನತೆ ಹತ್ರಾಸ್ ಪ್ರಕರಣದ ಮೇಲೆ ಕಣ್ಣಿಟ್ಟಿರುವಾಗ, ಆರೋಪಿಗಳಿಗೆ ಸರಿಯಾದ ಶಿಕ್ಷೆ ನೀಡುವ ಕೆಲಸ ಆಗಬೇಕಿದೆ. ಮತ್ತೆ ಇಂತಹ ದುರ್ಘಟನೆಗಳು ನಡೆಯದ ರೀತಿಯಲ್ಲಿ ಕಠಿಣ ಕ್ರಮ ಕೈಗೊಳ್ಳುವ ಅಗತ್ಯ ಸರ್ಕಾರದ ಮೇಲಿದೆ.