Homeಅಂಕಣಗಳುಆಶಾನಿ ಸಂಕೇತ ಸಿನಿಮಾ ಮತ್ತು ಜಮೀನ್ದಾರಿ ಪದ್ದತಿ ನೆನಪಿಸುವ ಕೃಷಿ ಕಾಯ್ದೆಗಳು

ಆಶಾನಿ ಸಂಕೇತ ಸಿನಿಮಾ ಮತ್ತು ಜಮೀನ್ದಾರಿ ಪದ್ದತಿ ನೆನಪಿಸುವ ಕೃಷಿ ಕಾಯ್ದೆಗಳು

ಇವು ರೈತರ ಬೆನ್ನು ಮುರಿಯಬಲ್ಲ ಕಾಯಿದೆಗಳು, ಇದರಿಂದ ಬರೆ ರೈತರ ನಾಶ ಆಗೋದಿಲ್ಲ, ಕೃಷಿ ಆಧಾರಿತ ದೇಶವಾದ ಭಾರತ ದೇಶ ಸರ್ವ ನಾಶ ಆಗತತಿ' ಅಂತ ರೈತ ಸಂಘಟನೆ, ವಿರೋಧ ಪಕ್ಷಗಳು ಆಂದೋಲನ ಶುರು ಮಾಡಿದಾರ..

- Advertisement -
- Advertisement -

ಸತ್ಯಜಿತ್ ರೇ ಅವರ ‘ಆಶಾನಿ ಸಂಕೇತ’ ಸಿನಿಮಾದಾಗ ಒಂದು ದೃಶ್ಯ ಬರ್ತದ. ಊರಿಗೆ ಊರೇ ಉಪವಾಸ ಬಿದ್ದು, ಎಲ್ಲರೂ ತಿನಲಿಕ್ಕೆ ಎನರ ಸಿಗತೆತಿ ಅಂತ ಜಂಗಲ್ಲಿಗೆ ಹೋಗತಾರ. ಅಲ್ಲೇ ಗಡ್ಡಿ, ಗೆಣಸು, ಒಣಗಿದ ಬೀಜ, ಮಣ್ಣು, ಕಲ್ಲು, ಹಂಚು, ಹೀಂಗ ಕೈಗೆ ಸಿಕ್ಕಿದ್ದು ಎಲ್ಲಾ ತಿನ್ನತಾರ. ಒಂದು ಹುಡಿಗಿ ಒಂದು ಗಡ್ಡಿ ತೊಗೊಂಡು ತನ್ನ ತಮ್ಮ- ತಂಗಿಯರಿಗೆ ಕೊಡಬೇಕು ಅಂತ ಊರಿಗೆ ವಾಪಸ್ ಬರತಾಳ. ಬರೋ ದಾರಿಯೊಳಗ ಶಕ್ತಿ ಕಮ್ಮಿ ಆಗಿ, ತಲಿ ತಿರುಗಿ ಬಿದ್ದು ಸಾಯತಾಳ. ಅಕಿ ಸಾಯೋದನ್ನ ಇನ್ನೊಂದು ಹುಡುಗಿ ದೂರ ನಿಂತು ನೋಡ್ತಾ ಇರತಾಳ. ಅಕಿ ಸತ್ತು ಹೋದ ಮರು ಕ್ಷಣ, ಆ ಹುಡುಗಿ ಓಡಿ ಬಂದು ಈ ಹೆಣದ ಕೈ ಒಳಗಿನ ಗಡ್ಡಿ ಕಿತಕೊಂಡು ಓಡಿಹೋಗಿ, ಅದನ್ನ ತಿನ್ನತಾಳ.

ಈ ಸಿನಿಮಾದ ಸಂದೇಶ ಏನು ಅಂದ್ರ `ಕ್ಷಾಮ ಅನ್ನುವುದು ಮಾನವ ನಿರ್ಮಿತ, ನಿಸರ್ಗದತ್ತವಾದದ್ದು ಅಲ್ಲ’ ಅಂತ. ಅಲ್ಲಿನ ಕತಿ ಸುಮಾರು 1940ರ ಆಸು ಪಾಸಿನದು. ಎರಡನೇ ವಿಶ್ವಯುದ್ಧದಾಗ ಪಾಲುಗೊಂಡ ಬ್ರಿಟಿಷ್ ಸೈನಿಕರಿಗೆ ಬೇಕಾಗತದ ಅಂತ ಹೇಳಿ ಸರಕಾರಿ ಅಧಿಕಾರಿಗಳು ಮತ್ತು ವ್ಯಾಪಾರಿಗಳು ಆ ಊರಿನ ರೈತರು ಬೆಳೆದ ಆಹಾರ ಧಾನ್ಯವನ್ನ ಮುಚ್ಚಿ ಇಡತಾರ. ಅಕ್ಕಿ ಇಲ್ಲ, ಬೇಳೆ ಇಲ್ಲ ಅಂತ ಕೃತಕ ಅಭಾವ ಸೃಷ್ಟಿ ಮಾಡತಾರ.

ಆ ಊರಿನ ಜನ ತಿನ್ನಲಿಕ್ಕೆ ಏನೂ ಇಲ್ಲದೆ ಒದ್ದಾಡತಾರ. ಅರ್ಧದಷ್ಟು ಜನ ಸಾಯತಾರ, ಇನ್ನೂ ಅರ್ಧ ಜನಾ ಊರು ಬಿಡತಾರ. ತಮ್ಮ ಜಮೀನು, ಮನಿ ಬಿಟ್ಟು, ಉಟ್ಟ ಬಟ್ಟಿ ಮ್ಯಾಲೆ ಹೆಂಡರು, ಮಕ್ಕಳು ಕಟಿಗೊಂಡು ಅನಿಶ್ಚಿತ ಭವಿಷ್ಯದ ಕಡೆ ನಡಿಯಲಿಕ್ಕೆ ಶುರು ಮಾಡತಾರ. ಅವರಿಗೆ ಬಹಳ ಮಂದಿಗೆ `ನಮ್ಮ ಊರಾಗ ಬೇಕಾದಷ್ಟು ಅಕ್ಕಿ, ಹಿಟ್ಟು ಐತಿ, ಆದರ ಸರಕಾರ ಹಾಗೂ ವ್ಯಾಪಾರಿಗಳು ಸುಳ್ಳು ಹೇಳತಾರ’ ಅನ್ನೋದು ಗೊತ್ತು ಇರೋದಿಲ್ಲ. ಅದರ ಬಗ್ಗೆ ಸತ್ಯ ಗೊತ್ತಿದ್ದ ಕೆಲವರಿಗೆ ಸರಕಾರದ ವಿರುದ್ಧ ಹೋರಾಟ ಮಾಡೋ ಶಕ್ತಿ ಇರೋದಿಲ್ಲ. ಹೋರಾಟ ಮಾಡಿದ ಕೆಲವರನ್ನು ಬ್ರಿಟಿಷ್ ಸರಕಾರ ಜೈಲಿಗೆ ಕಳಿಸಿರತದ, ಗಲ್ಲಿಗೆ ಹಾಕಿರತದ – ಗಡಿಪಾರು ಮಾಡಿರತದ.

photo courtesy : Child Friendly News

ಭೀಕರ ಬರಗಾಲದ ಭಯಂಕರ ಪರಿಣಾಮಗಳನ್ನ ತೋರಿಸಿದ ಈ ಸಿನಿಮಾದಾಗ ನಾಯಕಿ ತನ್ನ ಗಂಡನಿಗೆ ನಾನು ಬಸುರಿ ಎನ್ನುವ ಸಿಹಿ ಸುದ್ದಿ ಹೇಳುವ ದೃಶ್ಯದಿಂದ ಮುಕ್ತಾಯ ಆಗತದ. ಆದರ ಆ ಪುಟ್ಟ ಹುಡುಗಿಯ ಸಾವಿನ ದೃಶ್ಯವೇ ನೋಡುವವರ ನೆನಪಿನಾಗ ಉಳಿತದ. ಸಿನಿಮಾ ನೋಡಿ ಎಷ್ಟೋ ವರ್ಷಗಳು ಆದರೂ ಕೂಡ ಇದು ನಮಗ ಕಾಡತದ.

ಬಂಗಾಳಿ ಭಾಷಾದಾಗ ಆಶಾನಿ ಸಂಕೇತ ಅಂತ ಅಂದ್ರ `ದೂರದಲ್ಲಿ ಎಲ್ಲೋ ಗುಡುಗಿನ ಸದ್ದು’ ಅಂತ ಅರ್ಥ. ಗುಡುಗಿನ ಸದ್ದು ಕೇಳುತ್ತಾ ಇದ್ದರೂ ಕೂಡ ಮಳೆ ಬರಂಗಿಲ್ಲ.

ಆವಾಗ ಹಂಗ ಯಾಕ ಆತು ಅಂದ್ರ ಆಗ ಜಮೀನುದಾರಿ ಪದ್ಧತಿ ಇತ್ತು. ಇಡೀ ಊರಿಗೆ ಒಬ್ಬರೋ – ಇಬ್ಬರೋ ಜಮೀನ್ ಮಾಲೀಕರು ಇದ್ದರು. ಉಳಿದವರು ಎಲ್ಲಾ ಅವರ ಕಡೆ ಕೆಲಸ ಮಾಡೋ ಕೂಲಿಗಳು.

ಭೂಮಿಯ ಮಾಲೀಕರ ಮ್ಯಾಲೆ ಯಾರದೂ ನಿಯಂತ್ರಣ ಇರಲಿಲ್ಲ. ಅವರು ತಮಗ ತಿಳದಿದ್ದು, ತಿಳದಷ್ಟು ಬೆಳದು, ತಿಳದವರಿಗೆ ಮಾರಾಟ ಮಾಡಬಹುದಾಗಿತ್ತು. ಇನ್ನ ಕೆಲವು ಸಣ್ಣ ರೈತರು ಇದ್ದರು ಕೂಡ ಅವರು ದೊಡ್ಡ ಸಾಹುಕಾರನ ಸಾಲಗಾರರಾಗಿ ಇದ್ದರು. ಅವರ ಕೈಸಾಲ ತೀರಿಸಲಿಕ್ಕೆ ತಾವು ಬೆಳೆದದ್ದು ಸಾಹುಕಾರಿಗೆ ಮಾರಾಟ ಮಾಡಬೇಕಾಗಿತ್ತು. ಅವರು ಹೇಳಿದ ಬೆಳೆಗೆ ಮಾರಾಟ ಮಾಡೋ ಅನಿವಾರ್ಯ ಪರಿಸ್ಥಿತಿ ಇತ್ತು.

ಆ ಸಾಹುಕಾರನ ಹತ್ತಿರ ಧಾನ್ಯ ಇಡಲಿಕ್ಕೆ ದೊಡ್ಡ ದೊಡ್ಡ ಗೋಡೌನ್, ಹಗೇವು ಇದ್ದವು. ಅವನ ಸಾಲಾ ತೀರಿಸಲಾರದವರನ್ನು ಕೂಡಿಹಾಕಲಿಕ್ಕೆ ಕತ್ತಲೆ ಕ್ವಾಣಿನೂ ಇದ್ದವು. ಸಾಲ ಕೊಡದೇ ಇದ್ದ ರೈತರ ಜಮೀನು ತಮ್ಮ ಹೆಸರಿಗೆ ಬರೆಸಿಕೊಂಡು ಮೋಸ ಮಾಡಿದ ಸಾಹುಕಾರರ ಕತೆ ಇಡೀ ದೇಶದ ತುಂಬಾ ಅದಾವು. ಬಡ್ಡಿ ಕೊಡಲಾರದ ರೈತರ ಹೆಂಡತಿಯರ ಮ್ಯಾಲೆ ಸಾಹುಕಾರರು ದಬ್ಬಾಳಿಕೆ ಮಾಡಿದ್ದಕ್ಕ ಹುಟ್ಟಿದ ಮಕ್ಕಳಿಗೆ `ಬಡ್ಡಿ ಮಕ್ಕಳು’ ಅಂತ ಅನ್ನೋದು ಬೈಗುಳ ಅಲ್ಲ ಅನ್ನುವಷ್ಟು ನಮ್ಮ ದೇಶದಾಗ ಸಾಮಾನ್ಯ ಆಗಿ ಹೊಗೇತಿ.

ಆವಾಗ ಎಲ್ಲಾ ಸಣ್ಣ ರೈತರು ಕೂಡಿಕೊಂಡು, ತಮ್ಮ ಕಾಳು-ಕಡಿಗೆ ತಾವು ಒಂದು ಬೆಲೆ ನಿಗದಿ ಮಾಡಿ ಮಾರಾಟ ಮಾಡಲಿಕ್ಕೆ ಸಾಧ್ಯ ಆಗುವ ಅವಕಾಶ ಇರಲಿಲ್ಲ. ಅಷ್ಟ ಅಲ್ಲದ, ಸಾಹುಕಾರರು ತಮ್ಮ ಕಾಳು-ಕಡಿಗೆ ಎಷ್ಟು ಬೆಲೆ ಕಟ್ಟಿ ಮಾರಾಟ ಮಾಡತಾರ ಅನ್ನೋದರ ಬಗ್ಗೆ ಒಂದು ಕಾನೂನು ಇರಲಿಲ್ಲ.

ಇಂತಹ ಎಲ್ಲ ಕಲ್ಯಾಣ ಕಾನೂನುಗಳು ಜಾರಿಯಾಗಿದ್ದು ಸ್ವಾತಂತ್ರ ಬಂದ ಮ್ಯಾಲೆ. ಅವಕ್ಕ ಜಮೀನ್‍ದಾರಿ ನಿರ್ಮೂಲನೆ ಕಾಯಿದೆ, ಭೂ ಕಂದಾಯ ಕಾಯಿದೆ, ಭೂ ಸುಧಾರಣೆ ಕಾಯಿದೆ, ಎಪಿಎಂಸಿ ಕಾಯಿದೆ, ಅಗತ್ಯ ವಸ್ತು ಕಾಯಿದೆ ಅಂತ ಹೆಸರು.

ಆದರ ಈಗ `ಸ್ವತಂತ್ರ ಬಂದು ಏಳು ದಶಕಗಳಲ್ಲಿ ಯಾವುದೇ ಒಳ್ಳೆ ಕೆಲಸ ಆಗಿಲ್ಲ’ ಅಂತ ನಂಬುವ ಸರಕಾರ ಬಂದದ. ತಾನು ಕ್ರಾಂತಿಕಾರಿ ಬದಲಾವಣೆ ಮಾಡತೆನಿ ಅನ್ನುವ ರಣ ಘೋಷಣೆ ಮಾಡೇಬಿಟ್ಟೆದ.

ಅದಕ್ಕ ಸಾಮಾನ್ಯ ಮತದಾರರಿಗೆ ಕೊಟ್ಟ ಮಾತು ಮಾತ್ರ ನೆನಪು ಹರಿಬಿಟ್ಟದ. ಆದರ ದೊಡ್ಡ ದೊಡ್ಡ ಕಂಪನಿಗಳಿಗೆ ಕೊಟ್ಟ ಮಾತನ್ನು ಪಾಲಿಸಲಿಕ್ಕೆ ಹತ್ತಿ ಬಿಟ್ಟದ.

`ನಾವು ಮೇಲೆ ಕಂಡ ಎಲ್ಲ ನಿರುಪಯೋಗಿ ಕಾನೂನುಗಳನ್ನು ಬದಲು ಮಾಡಿ ಬಿಟ್ಟೆವು’ ಅಂತ ಹೇಳಿದ ಪಂಥ ಪ್ರಧಾನ ಸೇವಕರು ಈ ತಿದ್ದುಪಡಿ ಕಾಯಿದೆಗಳನ್ನ `ಕೃಷಿ ಕ್ಷೇತ್ರದಲ್ಲಿ ಆಮೂಲಾಗ್ರ ಸುಧಾರಣೆ ತರಬಲ್ಲ ಕ್ರಾಂತಿಕಾರಿ ಬದಲಾವಣೆ’ಗಳು ಅಂತ ಬಣ್ಣಿಸಿದಾರ. ಹಂಗ ನೋಡಿದರ “ಸುಧಾರಣೆ ಹಾಗೂ ಕ್ರಾಂತಿ’’ ಅನ್ನುವ ಶಬ್ದ ಬಿಟ್ಟು, ಅವರು ಹೇಳಿದ್ದು ಎಲ್ಲಾ ಖರೆ ಐತಿ.

ರೈತರ ಪರ ಇರೋ ಕಲ್ಯಾಣ ಕಾಯಿದೆಗಳನ್ನ ಬದಲು ಮಾಡಿ, ಸಾಹುಕಾರರ – ಮಧ್ಯವರ್ತಿಗಳ ಕೈಯೊಳಗ ಅವರು ಸಿಗಲಾರದ ಹಂಗ ಅವರನ್ನ ಪಾರು ಮಾಡೋ ನೀತಿ – ನಿಯಮಗಳನ್ನ ಬೀಸಿ ಒಗದುಬಿಟ್ಟಾರ.

ಆಧುನಿಕ ಯುಗದ ಬಿಲಿಯನ್ ಡಾಲರ್ ಸಾಹುಕಾರರನ್ನು ಕರದು ಅವರಿಗೆ ಯಾವುದೇ ಮಿತಿ ಇಲ್ಲದೆ ಭೂಮಿ ಒಡೆತನ ಮಾಡುವ, ಬೆಳೆದ ಬೆಲೆಯನ್ನು ಅವೈಜ್ಞಾನಿಕ ಬೆಲೆಗೆ ಖರೀದಿ ಮಾಡುವ ಅವಕಾಶ ಮಾಡಿಕೊಟ್ಟಾರ.

photo courtesy : The People Post

ಹೊಸ ಜಮೀನ್‍ದಾರಿ ಪದ್ಧತಿಯನ್ನು ಒಪ್ಪಂದ ಕೃಷಿ ಅನ್ನೋ ಒಪ್ಪ-ಓರಣದ ಹೆಸರಿನಿಂದ ಜಾರಿಗೆ ತಂದು ಸಣ್ಣ ರೈತರು ಎಲ್ಲಾ ತಮ್ಮದೇ ಹೊಲದೊಳಗ ಕೂಲಿಗಳಾಗಿ ಹೋಗೋ ಅವಕಾಶ ಇದರಾಗ ಐತಿ.

ಅಗತ್ಯ ಸಾಮಗ್ರಿ ಕಾಯಿದೆ ಬದಲಾವಣೆ ಮಾಡಿ ವ್ಯಾಪಾರಿಗಳು ಯಾವುದೇ ಸಾಮಾನು ಎಷ್ಟು ಬೇಕಾದರೂ ಸಂಗ್ರಹ ಮಾಡಿ ಇಟ್ಟುಕೋಬಹುದು ಅಂತ ಮಾಡಿಬಿಟ್ಟಾರ. ನಾಳೆ ಅತ್ಯಂತ ರಾಕ್ಷಸಿ ರೂಪ ಪಡೆಯಬಹುದಾದ ಕಲಂ ಇದು.

ನಮ್ಮಿಂದ ವೋಟು ತೊಗೊಂಡು ಹೋದವರು ಮಾಡಿದ ಕೆಲಸ ಹೆಂಗ ಐತಿ ಅಂದ್ರ ಅದರ ಪರಿಣಾಮ ಇನ್ನೂ ಒಂದು ನೂರು ವರ್ಷ ಆದಮೇಲೆ ಬಹಳ ಮಂದಿಗೆ ಗೊತ್ತಾಗತದ.

ಕೆಲವರ ಪ್ರಕಾರ ಇವು ನಮ್ಮ ರಾಷ್ಟ್ರವನ್ನ ಮುಂದಕ್ಕ ತೊಗೊಂಡು ಹೋಗೋ ಕಾಯಿದೆ ಅಲ್ಲ. 1858ಕ್ಕಿಂತ ಹಿಂದಕ್ಕ ತೊಗೊಂಡು ಹೋಗೋ ಕಾಯಿದೆ. ಇವೆಲ್ಲಾ ಬಡ ರೈತರ ಜುಟ್ಟು ಈಸ್ಟ್ ಇಂಡಿಯಾ ಕಂಪನಿ ಬದಲಿಗೆ ವೆಸ್ಟ್ ಇಂಡಿಯಾ ಕಂಪನಿ ಕೈಯೊಳಗ ಕೊಡೋ ಪಿತೂರಿಯ ಮೊದಲ ಹೆಜ್ಜೆ.

ಆಶಾನಿ ಸಂಕೇತ, ಆಕಾಲೆರ್ ಸಂಧಾನೆ, ಹಾಗೂ ಇತರ ಚಿತ್ರಗಳು ಎಪ್ಪತ್ತರ ದಶಕದಾಗ ಜಗಮನ್ನಣೆ ಗಳಿಸಿದವು. ಬ್ರಿಟಿಷ್ ಸರ್ಕಾರದ ಮಾನವ ವಿರೋಧಿ ನೀತಿಗಳಿಂದಾಗಿ ಕ್ಷಾಮ ಉಂಟಾಗಿ, ಲಕ್ಷಾಂತರ ಜನ ಉಪವಾಸ ಬಿದ್ದ ಕತಿ ಹೇಳಿದವು.

ಹಂಗ ನೋಡಿದರ ನಮ್ಮನ್ನು ಬ್ರಿಟಿಷ್ ಸರಕಾರಕ್ಕಿಂತ ಈಸ್ಟ್ ಇಂಡಿಯಾ ಕಂಪನಿ ಆಳಿದ್ದೇ ಜಾಸ್ತಿ.

1608ರಲ್ಲಿ ವ್ಯಾಪಾರ ಮಾಡುವ ಉದ್ದೇಶದಿಂದ ಬ್ರಿಟಿಷರು ಭಾರತದೊಳಗ ಕಾಲು ಇಟ್ಟರು. ಅಲ್ಲಿಂದ 1858ರ ತನಕಾ ನಮ್ಮಲ್ಲೇ ಕಂಪನಿ ಸರಕಾರ ಇತ್ತು. ನಮ್ಮ ರಾಷ್ಟ್ರಭಕ್ತರು 1857ರ ಸಂಗ್ರಾಮದಾಗ ಒಟ್ಟಾಗಿ ಹೋರಾಟ ಮಾಡಿದಾಗ ಈಸ್ಟ್ ಇಂಡಿಯಾ ಕಂಪನಿಗೆ ರಾಜಕೀಯ ಮಾಡಲಿಕ್ಕೆ ಬರೋದಿಲ್ಲ ಅಂತ ಬ್ರಿಟನ್ ಸಂಸತ್ತಿಗೆ ಮನದಟ್ಟಾಗಿ ಇಲ್ಲಿಯ ಆಡಳಿತವನ್ನ ಅಲ್ಲಿನ ಪ್ರಧಾನಿ ತಮ್ಮ ಕೈಯೊಳಗ ತೊಗೊಂಡರು.

ಈಗ ಈಸ್ಟ್ ಇಂಡಿಯ ಕಂಪನಿ ಹೋಗಿ ವೆಸ್ಟ್ ಇಂಡಿಯನ್ ಕಂಪನಿ ಬಂದದ. ಅವರ ಸಾಮಾನು ನಾವು ಖರೀದಿ ಮಾಡಿ, ನಮ್ಮ ಕಪ್ಪ ಅವರಿಗೆ ಕೊಟ್ಟಿದ್ದಕ್ಕ ಅವರು ದೊಡ್ಡವರಾಗಿಬಿಟ್ಟಾರ. ಎಲ್ಲ ಕ್ಷೇತ್ರದಾಗ ತಮ್ಮ ಏಕಸ್ವಾಮ್ಯ ಬೆಳೆಸಿಕೊಂಡುಬಿಟ್ಟಾರ. ಕಿತ್ತೂರು ರಾಣಿ ಚನ್ನಮ್ಮ ಅವರು ಕಂಪನಿ ಸರಕಾರಕ್ಕ ಕಪ್ಪ ಕೊಡುವ ಸಂಬಂಧ ಯುದ್ಧ ಮಾಡಿದರು. ಅವರ ಬಗ್ಗೆ ಮಾಡಿದ ಸಿನಿಮಾ-ನಾಟಕದೊಳಗೆ ವೀರ ರಾಣಿಯ `ನಿಮಗೇಕೆ ಕೊಡಬೇಕು ಕಪ್ಪ’ ಅನ್ನುವ ಮಾತು ಜನಪ್ರಿಯ ಆಗೇದ.

ಆ ಮಾತನ್ನು ನಾವು ಮರೆಯದಂತೆ ಆಗಲಿ.

`ಇವು ರೈತರ ಬೆನ್ನು ಮುರಿಯಬಲ್ಲ ಕಾಯಿದೆಗಳು, ಇದರಿಂದ ಬರೆ ರೈತರ ನಾಶ ಆಗೋದಿಲ್ಲ, ಕೃಷಿ ಆಧಾರಿತ ದೇಶವಾದ ಭಾರತ ದೇಶ ಸರ್ವ ನಾಶ ಆಗತತಿ’ ಅಂತ ರೈತ ಸಂಘಟನೆ, ವಿರೋಧ ಪಕ್ಷಗಳು ಆಂದೋಲನ ಶುರು ಮಾಡಿದಾರ. ನಿರೀಕ್ಷೆಯಂತೆ ಕಂಗನಾ ರನ್‍ಔಟ್ ಅವರು `ಪ್ರತಿಭಟನಾಕಾರರು ಭಯೋತ್ಪಾದಕರು’ ಅಂತ ಫರಮಾನು ಹೊರಡಿಸಿಬಿಟ್ಟಾರ.

`ಎಲ್ಲಾ ರೈತರಿಗೆ ಒಳ್ಳೇದಾಗಲಿ ಅಂತ ನಮ್ಮ ನಾಯಕರು ಇಂತಹ ಕ್ರಮ ಕೈಗೊಂಡಾರ. ಬರೆ ಹುಳುಕ ಹುಡುಕಬ್ಯಾಡ್ರಿ. ಬರೆ ನೆಗೆಟಿವ್ ಮಾತು ಬ್ಯಾಡ’ ಅಂತ ಕೆಲವರು ಕಿವಿಮಾತು ಹೇಳಲಿಕ್ಕೆ ಹತ್ಯಾರ.

ಇದರಾಗ 99 ಶೇಕಡಾ ಚಲೋ ಆಗಬಹುದು. ಶೇಖಡಾ ಒಂದು ದುರುಪಯೋಗ ಆಗೋ ಸಾಧ್ಯತೆ ಐತಿ ಅಲ್ಲಾ, ಅದಕ್ಕ ಇಷ್ಟು ಮಾತು. ಜನಸಂಖ್ಯೆಯ ಶೇಕಡಾ 99ರಷ್ಟು ಇದ್ದವರು ಶೇಕಡಾ ಒಂದರ ದುರುಪಯೋಗದ ಸಾಧ್ಯತೆ ಹೇಳದೆ ಹೋದರ ಹೆಂಗ?


ಇದನ್ನೂ ಓದಿ: ದಿಲ್ಲಿ ಪೊಲೀಸರಿಗೆ ಪರಮಾಧಿಕಾರ: ಏನಿದು ರಾಸು ಕಾಯಿದೆ?
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...