Homeಅಂಕಣಗಳುಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮುಗಿಸಿ ಹಾಕಿ ಫ್ಯಾಸಿಸಂ ತರಲಾಗಿದೆ : ಪ್ರಶಾಂತ್ ಭೂಷಣ್ ಭಾಷಣದ ಬರಹ ರೂಪ

ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮುಗಿಸಿ ಹಾಕಿ ಫ್ಯಾಸಿಸಂ ತರಲಾಗಿದೆ : ಪ್ರಶಾಂತ್ ಭೂಷಣ್ ಭಾಷಣದ ಬರಹ ರೂಪ

- Advertisement -
- Advertisement -

ಜನಸಂಕಲ್ಪ ಸಮಾವೇಶದಲ್ಲಿ ಸುಪ್ರೀಂಕೋರ್ಟಿನ ನ್ಯಾಯವಾದಿ ಮತ್ತು ದೇಶದ ಪ್ರಮುಖ ಭ್ರಷ್ಟಾಚಾರ ವಿರೋಧಿ ಹೋರಾಟಗಾರರಲ್ಲೊಬ್ಬರಾದ ಪ್ರಶಾಂತ್ ಭೂಷಣ್ ಅವರು ಆಡಿದ ಮಾತುಗಳ ಸಂಪೂರ್ಣ ಬರಹ ರೂಪ.

ನಿಮಗೆಲ್ಲರಿಗೂ ನಮಸ್ಕಾರ, ನಾನು ಕನ್ನಡದಲ್ಲಿ ಮಾತನಾಡಲಾಗದಿರುವುದಕ್ಕೆ ವಿಷಾದಿಸುತ್ತಾ, ಹಿಂದಿಯಲ್ಲಿ ಮಾತಾಡುತ್ತೇನೆ.

72 ವರ್ಷಗಳ ಹಿಂದೆ ನಾವು ಪ್ರಜಾತಂತ್ರಕ್ಕೆ ತೆರೆದುಕೊಂಡಾಗ ನಮ್ಮ ಲೋಕತಂತ್ರ ಮತ್ತು ನಮ್ಮ ಮೌಲಿಕ ಹಕ್ಕುಗಳ ರಕ್ಷಣೆಯಾಗುತ್ತದೆಂದು ಭಾವಿಸಿದ್ದೆವು. ಲೋಕತಂತ್ರ ಸ್ಥಾಪನೆಯಾದಾಗ ಮಾತ್ರ ಪ್ರಜಾತಾಂತ್ರಿಕ ಸಂಸ್ಥೆಗಳಲ್ಲಿ ಏನಾಗುತ್ತಿದೆಯೆಂಬ ಕುರಿತು ಜನಸಾಮಾನ್ಯರಿಗೆ ಪೂರಾ ಮಾಹಿತಿ ಸಿಗಲು ಮತ್ತು ಅವರ ಏಳಿಗೆಗಾಗಿ ಬಳಕೆಯಾಗಲು ಸಾಧ್ಯ ಎಂಬ ಭಾವನೆಯಿತ್ತು. ಬೆಳಿಗ್ಗೆಯಿಂದ ರಾತ್ರಿಯವರೆಗೆ 2 ಹೊತ್ತಿನ ಊಟಕ್ಕಾಗಿ ಪರದಾಡುತ್ತಲೇ ಇದ್ದವರು ಯಾವ ರೀತಿಯ ಮಾಹಿತಿ ಪಡೆದುಕೊಳ್ಳಲು ಸಾಧ್ಯ?

ಯಾವ ಸಮಾಜದಲ್ಲಿ ಅಪಾರವಾದ ಅಸಮಾನತೆ ಇರುತ್ತದೋ, ಆದಾಯ ಗಳಿಕೆಯಲ್ಲಿ ಅಗಾಧ ವ್ಯತ್ಯಾಸ ಇರುತ್ತದೋ ಅಲ್ಲಿ ನಿಜವಾದ ಪ್ರಜಾತಂತ್ರದ ಸ್ಥಾಪನೆ ಅಸಾಧ್ಯ. ಏಕೆಂದರೆ ಅವರು ತಮ್ಮ ಹಣ ಮತ್ತು ಅಧಿಕಾರ ಬಳಸಿ ಜನರ ಅಭಿಪ್ರಾಯ ರೂಪಿಸುತ್ತಾರೆ. ಇದನ್ನು ನೋಮ್ ಚಾಮ್‍ಸ್ಕಿ ‘ಸಮ್ಮತಿಯ ಉತ್ಪಾದನೆ’ ಎಂದಿದ್ದಾರೆ.

ನಮ್ಮ ದೇಶದ ಚುನಾವಣೆಗಳಲ್ಲಿ ಅತೀ ಹೆಚ್ಚು ಹಣ ಖರ್ಚಾಗುತ್ತಿದೆ. ಇದರಿಂದ ಏನಾಗುತ್ತಿದೆ ನೋಡೋಣ. ನಾವು ಓಟು ಹಾಕುವಾಗ ಯಾವ ಪಕ್ಷ ಉತ್ತಮವೋ, ಅಭ್ಯರ್ಥಿ ಉತ್ತಮರೋ ಅದನ್ನು ಮಾತ್ರ ನೋಡುವುದಿಲ್ಲ. ನಾವು ಅವರು ಗೆಲ್ಲುವ ಸಾಧ್ಯತೆ ಇದೆಯೋ ಇಲ್ಲವೋ ಎಂಬುದನ್ನು ನೋಡುತ್ತೇವೆ. ಒಂದು ವೇಳೆ ಅಭ್ಯರ್ಥಿ ಒಳ್ಳೆಯವರಿದ್ದರೂ, ಗೆಲ್ಲುವ ಸಾಧ್ಯತೆ ಇಲ್ಲದಿದ್ದರೆ ಅವರಿಗೆ ಓಟು ಹಾಕುವುದಿಲ್ಲ. ಗೆಲ್ಲುವ ಸಾಧ್ಯತೆ ಇರುವವರು ಕೆಟ್ಟವರಾದರೂ, ಕಡಿಮೆ ಕೆಟ್ಟವರನ್ನು ನೋಡಿ ಓಟು ಹಾಕುತ್ತೇವೆ. ಏಕೆಂದರೆ ನಮ್ಮ ಮತ ವ್ಯರ್ಥವಾಗಬಾರದೆಂದು ನಮ್ಮ ಜನರ ಭಾವನೆ.

ಯಾರು ಗೆಲ್ಲುತ್ತಾರೆಂಬುದು ಹೇಗೆ ನಿರ್ಧಾರ ಆಗುತ್ತದೆ? ಯಾರು ಹೆಚ್ಚು ಕಾಣಿಸಿಕೊಳ್ಳೂತ್ತಾರೋ, ವಿಸಿಬಿಲಿಟಿ ಇರುತ್ತದೋ ಅವರು. ಎಲ್ಲಾ ಕಡೆ ಅವರು ಕಾಣಬೇಕೆಂದರೆ ಅದು ಹೇಗೆ ಸಾಧ್ಯ? ಅದು ದುಡ್ಡಿನ ಮೇಲೆ ನಡೆಯುತ್ತದೆ. 50 ಬಸ್ ಜನರನ್ನು ಕರೆದುಕೊಂಡು ಬಾ, 50 ಲಕ್ಷ ರೂಕೊಡುತ್ತೇವೆ ಎಂದು ಹೇಳಿ ಬಲ ತೋರಿಸಬಲ್ಲವರು ಗೆಲ್ಲಬಲ್ಲವರು. ಅವರ ಪಕ್ಷಗಳಿಂದ ಸಾವಿರಾರು ಕೋಟಿ ರೂ. ಖರ್ಚು ಮಾಡಿ (ಮೋದಿಯವರ ಹಾಗೆ) ಜಾಹೀರಾತು ಕೊಡಬಲ್ಲವರೇ ಗೆಲ್ಲಬಲ್ಲವರು ಎಂದಾಗುತ್ತದೆ.

ಮೊದಲು ಪಕ್ಷಗಳ ಖರ್ಚಿನ ಮೇಲೆ ಮಿತಿ ಇತ್ತು. ಈಗ ಇಲ್ಲ. ಅಭ್ಯರ್ಥಿ ಖರ್ಚು ಮಾಡುವ ಹಣದ ಮೇಲೆ ಮಿತಿ ಇದೆ. ಆದರೆ ಅದು ಲೆಕ್ಕಕ್ಕಿಲ್ಲ. ವಸ್ತು ರೂಪಗಳಲ್ಲೂ ವಹಿವಾಟು ನಡೆಯುತ್ತದೆ. ಆದ್ದರಿಂದಲೇ ಚುನಾವಣಾ ಖರ್ಚಿನ ಎಲ್ಲವೂ ಬ್ಯಾಂಕ್ ಮೂಲಕವೇ ನಡೆಯಲಿ ಎಂದು ನಾವು ಒತ್ತಾಯಿಸಿದ್ದೆವು. ಯಾರು ನಗದು ಖರ್ಚು ಮಾಡುವುದು ಬೇಡ ಎಂದು. ಅದೂ ಕೂಡಾ ಜಾರಿಯಾಗಲಿಲ್ಲ.

ಜನಪರ ಕ್ಯಾಂಡಿಡೇಟ್‍ಗಳ ಬಳಿ ಹಣ ಇರುವುದಿಲ್ಲ. ಉದಾ.ಕನ್ಹಯ್ಯ ಕುಮಾರ್ ತಮ್ಮ ಚುನಾವಣೆಗೆ ಜನರಿಂದಲೇ ಹಣ ಕೇಳುತ್ತಿದ್ದಾರೆ. ಆದ್ದರಿಂದ ಯಾವುದೇ ಅಭ್ಯರ್ಥಿ ಚುನಾವಣೆಯಲ್ಲಿ ಎಷ್ಟು ಓಟು ಗಳಿಸುತ್ತಾರೋ ಅವರಿಗೆ ಪ್ರತಿ ಮತಕ್ಕೆ ಸರ್ಕಾರ ನಿಗದಿಪಡಿಸಿದ ಪ್ರಕಾರ ವಾಪಸ್ ಹಣ ಕೊಡಬೇಕು. ಆಗ ಸಾಲ ಮಾಡಿಯಾದರೂ ಒಳ್ಳೆಯ ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯ. ಹೀಗಾದಾಗ ಚಿಕ್ಕ ಪಕ್ಷಗಳಿಂದಲೂ ಅಭ್ಯರ್ಥಿಗಳು ಗೆಲ್ಲುವ ಸಾಧ್ಯತೆ ಇರುವುದರಿಂದ, ಜನರು ಅವರಿಗೂ ಓಟು ಹಾಕುತ್ತಾರೆ. ಮತ ವ್ಯರ್ಥವಾಗುತ್ತದೆಂದು ಭಾವಿಸುವುದಿಲ್ಲ.

ಆದರೆ ಈಗ? ದೊಡ್ಡ ಶ್ರೀಮಂತರಿಂದ ಹಣ ತೆಗೆದುಕೊಂಡವರು ದೊಡ್ಡದಾಗಿ ಹಣ ಖರ್ಚು ಮಾಡುತ್ತಿದ್ದಾರೆ. ಈಗಿನ ಸರ್ಕಾರವು ವಿದೇಶೀ ಹಣವನ್ನು ತೆಗೆದುಕೊಳ್ಳಬಾರದೆಂದು ಈ ಹಿಂದೆ ಇದ್ದ ನಿಯಮವನ್ನೂ ತೆಗೆದುಹಾಕಿದೆ. ಯಾವುದೇ ಕಂಪೆನಿ, ಅದರ ಲಾಭ ಎಷ್ಟೇ ಇದ್ದರೂ, ಅವರು ಎಷ್ಟು ಬೇಕಾದರೂ ಹಣ ನೀಡಬಹುದೆಂಬ ಹೊಸ ನಿಯಮವನ್ನೂ ತಂದರು. ಎಲೆಕ್ಟೋರಲ್ ಬಾಂಡ್ ಎಂಬ ಹೊಸ ಪದ್ಧತಿಯನ್ನು ತರಲಾಗಿದೆ. ಇದರ ಮೇಲೆ ಯಾರ ಹೆಸರೂ ಇರುವುದಿಲ್ಲ. ಅದನ್ನು ಖರೀದಿಸಿ – ಎಷ್ಟು ಕೋಟಿಗಳ ಮೊತ್ತಕ್ಕೆ ಬೇಕಾದರೂ – ರಾಜಕೀಯ ಪಕ್ಷಗಳಿಗೆ ನೀಡಬಹುದು. ಯಾರು ಯಾರಿಗೆ ನೀಡಿದರು ಎಂಬ ಮಾಹಿತಿಯೂ ಇರುವುದಿಲ್ಲ.

ಈಗಾಗಲೇ 2000 ಕೋಟಿ ರೂ.ಗಳ ಎಲಕ್ಟೋರಲ್ ಬಾಂಡ್ ಖರೀದಿಯಾಗಿದ್ದು, ಅದರಲ್ಲಿ 95% ಬಿಜೆಪಿಗೇ ಹೋಗಿದೆ. ಬಿಜೆಪಿಯ ಫಲಾನುಭವಿ ಕಂಪೆನಿಗಳು ಇದನ್ನು ಮಾಡಿವೆ. ಮಾಹಿತಿ ಆಯೋಗಕ್ಕೂ ಈ ಮಾಹಿತಿ ಇರುವುದಿಲ್ಲ.

ಎಲ್ಲಾ ಅಭ್ಯರ್ಥಿಗಳೂ ಆಯೋಗಕ್ಕೆ ವಿದ್ಯಾರ್ಹತೆಯೇನೆಂದು ಘೋಷಿಸಬೇಕು. ಮೋದಿಯವರನ್ನು ಕೇಳಿದಾಗ ಅವರು ತಮ್ಮ ಬಳಿ ಎಂಟೈರ್ ಪೊಲಿಟಿಕಲ್ ಸೈನ್ಸ್‍ನ ಡಿಗ್ರಿ ಇದೆಯೆಂದು ಹೇಳಿದರು. ಅದೇನು ಎಂದು ನಾವೂ ನೋಡೋಣ ಎಂದು ಮಾಹಿತಿ ಕೇಳಿದರೆ, ಮಾಹಿತಿಯೇ ಇಲ್ಲ. ಏಕೆಂದರೆ ಅಂತಹದೊಂದು ಡಿಗ್ರಿಯೇ ಇಲ್ಲ. ಇದು ದೇಶದ ಪ್ರಧಾನಿಯ ಕಥೆ.

ಇದೇ ಪ್ರಧಾನ ಮಂತ್ರಿಗಳು ದೊಡ್ಡ ಬಂಡವಾಳಸ್ಥರನ್ನು (300 ಸಾರಿ ವಿಮಾನದಲ್ಲಿ ವಿದೇಶಗಳಿಗೆ ಹೋಗಿದ್ದಾರೆ) ವಿಮಾನದಲ್ಲಿ ಕರೆದುಕೊಂಡು ಸುತ್ತಾಡಿ ಅವರ ಪರವಾಗಿ ಒಪ್ಪಂದಗಳನ್ನು ಮಾಡಿಕೊಳ್ಳೂತ್ತಾರೆ. ಅದಾನಿಯ ಪರವಾಗಿ ಆಸ್ಟ್ರೇಲಿಯಾದಲ್ಲಿ ಗಣಿಗಾರಿಕೆ ಮಾಡಲು ಒಪ್ಪಂದಕ್ಕೆ ಸಹಾಯ ಮಾಡುತ್ತಾರೆ.

ಯಾರು ಇದೆಲ್ಲವನ್ನೂ ಪ್ರಶ್ನಿಸುತ್ತಾರೋ ಅಂತಹ ಮಾಧ್ಯಮಗಳ ಮೇಲೆ ಸಿಬಿಐ ಇಡಿ ಇತ್ಯಾದಿ ಛೂ ಬಿಡುತ್ತಾರೆ. ಇದರಿಂದ ಪ್ರಜಾತಂತ್ರ ದುರ್ಬಲವಾಗುತ್ತಿದೆ. ಸಂವಿಧಾನ ಕೊಟ್ಟಿರುವ ಹಕ್ಕು ಅಭಿವ್ಯಕ್ತಿ ಸ್ವಾತಂತ್ರ್ಯ. ಆದರೆ ಸರ್ಕಾರವನ್ನು ಟೀಕಿಸುವವರ ವಿರುದ್ಧ ದೇಶದ್ರೋಹದ ಆರೋಪ ಹೊರಿಸಿ ಹತ್ತಿಕ್ಕಲಾಗುತ್ತದೆ. ಸುಪ್ರೀಂಕೋರ್ಟಿನ ತೀರ್ಪಿನ ಪ್ರಕಾರ ನೀವು ಹಿಂಸೆಯನ್ನು ಪ್ರಚೊದಿಸದಿದ್ದರೆ ದೇಶದ್ರೋಹದ ಆರೋಪ ಹೊರೆಸಲು ಬರುವುದಿಲ್ಲ. ಆದರೂ ದೊಡ್ಡ ಮಾನವ ಹಕ್ಕು ಹೋರಾಟಗಾರರಾದ ಸುಧಾ ಭಾರದ್ವಾಜ್ ಮೊದಲಾದವರ ವಿರುದ್ಧ ಆರೋಪ ಹೊರಿಸಿ ಬಂಧಿಸಲಾಗಿದೆ.

ಇದಲ್ಲದೆ ಬೀದಿಗಳಲ್ಲಿ ಜನರನ್ನು ಕೊಲ್ಲುವ ಗುಂಪುಗಳನ್ನು ಸೃಷ್ಟಿಸಲಾಗಿದೆ-ದಲಿತರು ಮತ್ತು ಮುಸ್ಲಿಮರ ಮೇಲೆ ದಾಳಿಗಳಾಗುತ್ತವೆ. ಇದಕ್ಕಾಗಿ ಅನೇಕ ಸೇನೆಗಳನ್ನು ಕಟ್ಟಲಾಗಿದೆ. ಹೊಡೆದವರ ಮೇಲೆ ಕ್ರಮ ತೆಗೆದುಕೊಳ್ಳಬೇಕಾದ ಪೊಲೀಸರು, ಹೊಡೆತ ತಿಂದವರ ಮೇಲೆಯೇ ಕೇಸು ಹಾಕಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲೂ ಇಂತಹ ಕೊಲೆಗಡುಕ ಪಡೆಗಳಿವೆ. ಸ್ವಾತಿ ಚತುರ್ವೇದಿ ಬರೆದಿರುವ ಪುಸ್ತಕ ತೋರಿಸುವಂತೆ ಇವೆಲ್ಲವೂ ಮೋದಿಯವರಿಂದಲೇ ಪ್ರಚೋದಿತವಾಗಿ ಕೆಲಸ ಮಾಡುತ್ತಿರುವ ಗುಂಪುಗಳು.

ಅಂದರೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಪೂರ್ತಿ ಮುಗಿಸಿ ಹಾಕಿ ಫ್ಯಾಸಿಸ್ಟ್ ವಾತಾವರಣ ಮೂಡಿಸಲಾಗಿದೆ.

ಬದುಕುವ ಹಕ್ಕು ಎಂದರೆ ಘನತೆಯಿಂದ ಬದುಕುವ ಹಕ್ಕು ಎಂದು ಮೂಲಭೂತ ಹಕ್ಕುಗಳ ಭಾಗದಲ್ಲಿ ಸಂವಿಧಾನ ಹೇಳಿದೆ. ಆದರೆ ಭಾರತದಲ್ಲಿ ಇಡೀ ಪ್ರಪಂಚದಲ್ಲಿರುವಷ್ಟು ಅಪೌಷ್ಟಿಕ ಮಕ್ಕಳಿದ್ದಾರೆ. ಇದೆಲ್ಲವನ್ನು ಸರಿ ಮಾಡುವ ಬದಲು ನೋಟು ರದ್ದತಿ ಜಿಎಸ್‍ಟಿ ಇನ್ನೂ ಏನೇನೋ ತಂದು ಅದಾನಿ ಅಂಬಾನಿಗಳನ್ನ ಬೆಳೆಸಿ ಜನರನ್ನು ಹಿಂಡುತ್ತಿದ್ದಾರೆ. ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದವರು ಅದರ ಬದಲು ಒಂದು ಕೋಟಿ ಉದ್ಯೋಗ ಹಾಳು ಮಾಡುತ್ತಿದ್ದಾರೆ.

ಭ್ರಷ್ಟಾಚಾರ ಕಪ್ಪುಹಣ ಎಲ್ಲ ಮುಕ್ತಾಯ ಮಾಡಿ ಅಚ್ಛೇ ದಿನ್ ತರುತ್ತೇವೆ ಎಂದವರು ಏನು ಮಾಡುತ್ತಿದ್ದಾರೆ? ಇವರ ಕಾಲದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಎಚ್‍ಎಎಲ್ ಕೈಯ್ಯಲ್ಲಿದ್ದ ಒಪ್ಪಂದ ರದ್ದು ಮಾಡಿ ಅನಿಲ್ ಅಂಬಾನಿಗೆ-ಯಾವುದೇ ಅನುಭವ ಇಲ್ಲದವನಿಗೆ-ನೀಡಲಾಗಿದೆ. ಭ್ರಷ್ಟಾಚಾರದ ವಿರುದ್ಧ ಕೆಲಸ ಮಾಡಬೇಕಾದ ಸಿಬಿಐ ಸಿವಿಸಿ ಮೊದಲಾದವನ್ನು ನಾಶ ಮಾಡಿ ಅದರೊಳಗೇ ಭ್ರಷ್ಟರನ್ನು ತಂದು ಕೂರಿಸಿದರು.

ಈಗ ಚುನಾವಣಾ ಆಯೋಗವೂ ಸ್ವತಂತ್ರವಾಗಿ ಕೆಲಸ ಮಾಡುತ್ತಿಲ್ಲ ಎಂಬ ಆರೋಪವಿದೆ. ನೀತಿ ಸಂಹಿತೆ ಘೋಷಣೆಯಾದ ನಂತರವೂ ಸರ್ಕಾರದ ವತಿಯಿಂದ ಹಲವು ಉಲ್ಲಂಘನೆಗಳು. ರೈಲುಗಳಲ್ಲಿ ಮೈ ಭೀ ಚೌಕೀದಾರ್ ಟೀ ಕಪ್ ಮಾರಾಟವಾಗುತ್ತಿದೆ. ಇಂತಹದ್ದು ಎಷ್ಟು ನಡೆದರೂ ತಡೆಯುತ್ತಿಲ್ಲ. ಸ್ವತಂತ್ರ ಬಂದಾಗಿನಿಂದ ಎಂದೂ ಸಂಶಯಕ್ಕೊಳಗಾಗಿರದ ಸುಪ್ರೀಂ ಕೋರ್ಟ್ ಮೇಲೆಯೇ ಅನುಮಾನ ಬರುವಂತೆ ಮೋದಿ ಸರ್ಕಾರ ನಡೆದುಕೊಂಡಿದೆ.

ಮುಚ್ಚಿದ ಲಕೋಟೆಯಲ್ಲಿ ರಫೇಲ್ ಡೀಲ್ ಕುರಿತು ಸುಳ್ಳು ಹೇಳಲಾಯಿತು. ಇಲ್ಲದ ಸಿಐಜಿ ವರದಿಯನ್ನು ಇದೆಯೆಂದು ಅದರಲ್ಲಿ ಹೇಳಲಾಗಿತ್ತು. ಜನರು ಇನ್ನೂ ಬಂದೇ ಇರದ ವರದಿ ಹೇಗೆ ಕೊಟ್ಟಿರಿ ಎಂದಾಗ ತಕ್ಷಣ ಅಫಿಡವಿಟ್ ಕೊಟ್ಟು ಇನ್ನೊಂದು ಸುಳ್ಳು ಹೇಳಿದರು. ಇದುವರೆಗೆ ಸಿಐಜಿ ಆಡಿಟ್ ಮಾಡಿರುವ ಕನಿಷ್ಠ 100 ರಕ್ಷಣಾ ಒಪ್ಪಂದಗಳಲ್ಲಿ ಎಲ್ಲೂ ದರದ ವಿವರವನ್ನು ಅಳಿಸಿ ಹಾಕಿರಲಿಲ್ಲ. ಈಗ ರಫೇಲ್ ವಿಚಾರದಲ್ಲಿ ಸಿಐಜಿ ವರದಿಯಿಂದ ದರದ ವಿವರ ತೆಗೆಯಲಾಗಿದೆ. ಅಂದರೆ ನೀವು ಸಿಐಜಿಯನ್ನೂ ಕೂಡಾ ಸಿಬಿಐ ಇತ್ಯಾದಿಗಳಂತೆ ಚಮಚಾ ಸ್ಥಾನಕ್ಕೆ ತಂದಿದ್ದೀರಿ.

ಆರ್‍ಬಿಐ ಗವರ್ನರ್ ಆಗಿದ್ದಾಗ ರಘುರಾಂ ರಾಜನ್ 16 ಜನರ ಮೇಲೆ ಹಿಂದಿರುಗಿಸದ ಸಾಲ ಹೊಂದಿದವರೆಂದು ಮತ್ತು ಇವರು ಓಡಿಹೋಗಬಹುದೆದಂದು ಸರ್ಕಾರಕ್ಕೆ ಪಟ್ಟಿ ಕೊಟ್ಟಿದ್ದರು, ಅವರ ಮೇಲೆ ಕ್ರಮ ತೆಗೆದುಕೊಳ್ಳುವ ಬದಲು ರಘುರಾಂ ರಾಜನ್‍ರನ್ನೇ ಹೊರಕಳಿಸಲಾಯಿತು.

ನಂತರ ಬಂದ ಗವರ್ನರ್ ಕೂಡಾ ಅಪಾಯದ ಬಗ್ಗೆ ಎಚ್ಚರಿಕೆ ಕೊಟ್ಟಿದ್ದರು-ಆದರೆ ಬಹಿರಂಗಗೊಳಿಸಿರಲಿಲ್ಲ. ಈ ವಿಚಾರ ಹೊರಬಂದ ಕೂಡಲೇ ಅವರನ್ನೂ ಹೊರ ಹಾಕಿ ಆರೆಸ್ಸೆಸ್ ಚಡ್ಡಿ ಹಾಕಿಕೊಂಡಿರುವ ಗುರುಮೂರ್ತಿ ಅಂತಹವರನ್ನು ನಿರ್ದೇಶಕ ಸ್ಥಾನಕ್ಕೆ ತಂದಿದ್ದೀರಿ. ಅಂದರೆ ಪ್ರಮುಖ ಸ್ಥಾನಗಳಲ್ಲೆಲ್ಲ ಅವರುಗಳೇ ಇದ್ದಾರೆ.

ಇಂದು ಮುಖ್ಯ ಚುನಾವಣಾ ಆಯುಕ್ತ ಆಗಿರುವ ವ್ಯಕ್ತಿ ಗುಜರಾತ್ ಮೂಲದ ಸುನಿಲ್ ಅರೋರಾ. ಈತ ನೀರಾ ರಾಡಿಯಾ ಪ್ರಕರಣದಲ್ಲಿ ಮುಖ್ಯ ಭಾಗಿ. ನೀರಾ ರಾಡಿಯಾ ಪ್ರಕರಣ ನಡೆಯಿತೆಂದು ನೀವೇ ಗದ್ದಲ ಮಾಡಿ, ನಂತರ ಅದೇ ವ್ಯಕ್ತಿಯನ್ನು ಇಂದು ಮುಖ್ಯ ಚುನಾವಣಾಧಿಕಾರಿ ಮಾಡಿದ್ದೀರಿ ಎಂದು ಬಿಜೆಪಿಯವರನ್ನು ಕೇಳಬೇಕಿದೆ. ಈಗ ಚುನಾವಣೆಗಳ ಕತೆ ಏನಾಗಿದೆ ಎಂದು ನೋಡುತ್ತಿದ್ದೇವೆ,

ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಪ್ರಜಾತಂತ್ರ ಅಪಾಯದಲ್ಲಿತ್ತು. ಆದರೆ ಇಂದು ಪ್ರಜಾತಂತ್ರ, ಗಣತಂತ್ರ ಮಾತ್ರವಲ್ಲ ಇಡೀ ನಾಗರೀಕತೆಯೇ ಅಪಾಯದಲ್ಲಿದೆ. ಇಂತಹ ಅಪಾಯಕಾರಿ ಸ್ಥಿತಿ ಹಿಂದೆಂದೂ ಬಂದಿರಲಿಲ್ಲ. ಆದ್ದರಿಂದ ಈ ಚುನಾವಣೆ ಅತ್ಯಂತ ನಿರ್ಣಾಯಕವಾಗಿದೆ. ನಾವು ಸಂವಿಧಾನ ರೂಪಿಸಿಕೊಳ್ಳುವಾಗ ದೇಶವನ್ನು ಹೇಗೆ ಕಲ್ಪಿಸಿಕೊಂಡಿದ್ದೇವೋ ಹಾಗೆ ಈ ದೇಶವೇ ಉಳಿಯಿತ್ತದೋ ಇಲ್ಲವೋ ಎಂಬ ಅನುಮಾನ ಎದುರಾಗಿದೆ.

ಈ ಚುನಾವಣೆಯ ಸಂದರ್ಭಕ್ಕೆಂದು ನಾವು ಹಲವು ಬುದ್ಧಿಜೀವಿಗಳು ಸೇರಿ ‘ರೀಕ್ಲೇಮಿಂಗ್ ರಿಪಬ್ಲಿಕ್’ ಎಂಬ ಈ ಪುಸ್ತಕ ತಂದಿದ್ದೇವೆ. ಇದು ಇಂದು ಕನ್ನಡದಲ್ಲೂ ಬಿಡುಗಡೆಯಾಗಿದೆ. ಕಾನೂನಿನ ಕ್ಷೇತ್ರ, ಸಾರ್ವಜನಿಕ ನೀತಿಗಳ ಕ್ಷೇತ್ರ, ಚುನಾವಣಾ ಸುಧಾರಣೆಗಳ ಕ್ಷೇತ್ರ, ಪೊಲೀಸರು ಮತ್ತು ಮಾನವ ಹಕ್ಕುಗಳನ್ನು ಸುಧಾರಿಸುವ ವಿಚಾರ, ಉದ್ಯೋಗ, ಆಹಾರ ಭದ್ರತೆ ವಿಚಾರ ಇವೆಲ್ಲವೂ ಇವೆ ಇದರಲ್ಲಿ.

ಉದ್ಯೋಗ ಮತ್ತು ಆಹಾರ ಭದ್ರತೆ ಅತಿ ಮುಖ್ಯ. ಈ ದೇಶದಲ್ಲಿ ಎಂತಹ ಹಸಿವಿನ ಸಾವುಗಳಿವೆ, ರೈತರ ಆತ್ಮಹತ್ಯೆಗಳಿವೆ ನೋಡುತ್ತಿದ್ದೇವೆ. ಅದಕ್ಕಾಗಿ ನಾವಿಲ್ಲಿ ಒಂದು ಯೋಜನೆ ಮುಂದಿಟ್ಟಿದ್ದೇವೆ. ರಾಹುಲ್ ಗಾಂಧಿ ಹೇಳಿದಂತಹ ಕನಿಷ್ಠ ಆದಾಯ ಖಾತ್ರಿ ಯೋಜನೆಗಿಂತ ಭಿನ್ನವಾದುದನ್ನು ನಾವು ಹೇಳುತ್ತಿದ್ದೇವೆ. ಇದು ನರೇಗಾ ರೀತಿಯ ಯೋಜನೆ. ಕನಿಷ್ಠ 250 ದಿನಗಳಿಗೆ ಕನಿಷ್ಠ ಅದಾಯ ದೊರೆಯುವ ವ್ಯವಸ್ಥೆ ಕುಟುಂಬದ ಎಲ್ಲ ವಯಸ್ಕರಿಗೆ ಬೇಕು ಎಂದು ಕೇಳುತ್ತಿದ್ದೇವೆ. ಹಾಗೆಯೇ ಶಿಕ್ಷಣ ಹಕ್ಕು ಕಾಯ್ದೆಯನ್ನು ಕನಿಷ್ಟ 18 ವರ್ಷಕ್ಕೆ ಏರಿಸಬೇಕು. ಇಂತಹ ಹಲವಾರು ಕಲ್ಯಾಣ ರಾಜ್ಯದ ಕಾರ್ಯಕ್ರಮಗಳು ಇದರಲ್ಲಿ ಇವೆ.

ಇವೆಲ್ಲಕ್ಕೂ ಸಾಕಷ್ಟು ಹಣ ಬೇಕು. ಆದರೆ ನಮ್ಮ ತಂಡದಲ್ಲಿ ಒಳ್ಳೊಳ್ಳೆಯ ಆರ್ಥಿಕ ತಜ್ಞರಿದ್ದರು. ಇಡೀ ಪ್ರಪಂಚದಲ್ಲಿ ಅತ್ಯುತ್ತಮ ತೆರಿಗೆ ನೀತಿ ನಮ್ಮಲ್ಲಿದೆ. 12% ತೆರಿಗೆ ಖಂಡಿತ ವಸೂಲಿಯಾಗುತ್ತದೆ. ಎಲ್ಲ ದೇಶಗಳಲ್ಲಿ ಉತ್ತರಾಧಿಕಾರದ ತೆರಿಗೆ ಇದೆ. ಉದಾಹರಣೆಗೆ ಈ ದೇಶದ ಅತಿ ದೊಡ್ಡ 7 ಶ್ರೀಮಂತ ಮಂದಿಯ ಬಳಿ 20 ಲಕ್ಷ ಕೋಟಿ ಇದೆ. ಅವರ ಮಕ್ಕಳಿಗೆ ವಾರಸುದಾರಿಕೆ ಬರುವಾಗ ಕನಿಷ್ಠ 20% ತೆರಿಗೆ ಹಾಕಬೇಕು. ಹಾಗೆಯೇ ಕಾರ್ಪೊರೇಟ್‍ಗಳಿಗೆ ಕೊಟ್ಟ ವಿನಾಯಿತಿ ತೆಗೆಯಬೇಕು. ಇಂತಹ ಹಲವು ಸಾಧ್ಯತೆಗಳನ್ನು ನಾವು ಚರ್ಚಿಸಿದ್ದೇವೆ.

ಮುಂದೆ ಯಾವುದೇ ಸರ್ಕಾರ ಬಂದರೂ ಅವರ ಮುಂದೆ ನಮ್ಮ ಅಜೆಂಡಾ ಇವುಗಳೇನೆ. ಇವುಗಳ ಮೇಲೆ ಸರ್ಕಾರ ಆದ್ಯತೆ ಕೊಟ್ಟು ಜಾರಿ ಮಾಡಬೇಕೆಂದು ನಾವು ಒತ್ತಾಯಿಸುತ್ತಿದ್ದೇವೆ. 2004ರಲ್ಲಿ ಯುಪಿಎ ಸರ್ಕಾರ ಬಂದಾಗ ಸೋನಿಯಾ ಗಾಂಧಿ ಒಂದು ಸಲಹಾ ಸಮಿತಿ ಮಾಡಿ ಅದರಲ್ಲಿ ಅತ್ಯುತ್ತಮ ಜನರನ್ನು ಹಾಕಿದ್ದರು. ಆ ಸಮಯದಲ್ಲಿ ಮಾಹಿತಿ ಹಕ್ಕು ಕಾಯ್ದೆ, ಶಿಕ್ಷಣ ಹಕ್ಕು ಕಾಯ್ದೆ, ಅರಣ್ಯ ಹಕ್ಕು ಕಾಯ್ದೆ, ನರೇಗಾ ಇತ್ಯಾದಿಗಳು ಆಗ ಜಾರಿಯಾದವು. ಅದರಿಂದ ಜನಪ್ರಿಯತೆ ಸಿಕ್ಕಿ ಎರಡನೇ ಬಾರಿ ಗೆದ್ದರು. ಆದ್ದರಿಂದಲೇ ಜನರ ಅಜೆಂಡಗಳ ಮೇಲೆ ಚುನಾವಣೆಯಲ್ಲಿ ಚರ್ಚೆ ನಡೆಯಬೇಕೆಂದು ನಾವು ಒತಾಯಿಸುತ್ತೇವೆ.

ಎಲ್ಲಕ್ಕಿಂತ ಮುಖ್ಯವಾಗಿ ಈ ಚುನಾವಣೆಯ ಸಂದರ್ಭದಲ್ಲಿ ಬಿಕ್ಕಟ್ಟಿನಲ್ಲಿರುವ ಪ್ರಜಾತಂತ್ರ, ಗಣರಾಜ್ಯ ಮತ್ತು ನಾಗರೀಕತೆಯನ್ನು ನಾವು ರಕ್ಷಿಸಲೇಬೇಕಿದೆ. ಆ ನಿಟ್ಟಿನಲ್ಲಿ ನಾವು ನೀವೆಲ್ಲರೂ ಕ್ರಿಯಾಶೀಲರಾಗೋಣ ಎಂದು ಕೋರುತ್ತಾ ನನ್ನ ಮಾತನ್ನು ಮುಗಿಸುತ್ತಿದ್ದೇನೆ.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ದೆಹಲಿ ಗಲಭೆ ಪ್ರಕರಣದಿಂದ ಒಂಬತ್ತು ಜನರನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಒಂಬತ್ತು ಜನರನ್ನು ನ್ಯಾಯಾಲಯವು ಖುಲಾಸೆಗೊಳಿಸಿದೆ. ಸಾಕ್ಷ್ಯಗಳು ನಿರ್ದಿಷ್ಟತೆಯ ಕೊರತೆ ಮತ್ತು ಸಾಮಾನ್ಯ ಸ್ವರೂಪದ್ದಾಗಿರುವುದರಿಂದ ಪ್ರಕರಣದಲ್ಲಿ ಅವುಗಳನ್ನು ನಂಬಲಾಗುವುದಿಲ್ಲ ಎಂ ನ್ಯಾಯಾಲಯ ಹೇಳಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ...

ಚುನಾವಣಾ ಕಾರ್ಯಕ್ಕೆ ಅರಣ್ಯ ಸಿಬ್ಬಂದಿ : ಅಸ್ಸಾಂ ಸರ್ಕಾರದ ಆದೇಶಕ್ಕೆ ಎನ್‌ಜಿಟಿ ತಡೆ

ವಿಧಾನಸಭೆ ಚುನಾವಣೆಗೆ ಅಸ್ಸಾಂ ಅರಣ್ಯ ಸಂರಕ್ಷಣಾ ಪಡೆಯ 1,600 ಸಿಬ್ಬಂದಿಯನ್ನು ನಿಯೋಜಿಸಲು ಕೋರಿದ್ದ ಅಸ್ಸಾಂ ಸರ್ಕಾರದ ಆದೇಶವನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಪೂರ್ವ ವಲಯ ಪೀಠ ಗುರುವಾರ (ಮಾ.2) ತಡೆಹಿಡಿದಿದೆ. ಈ ಆದೇಶವನ್ನು...

‘ಕರೂರು ದುರಂತದಲ್ಲಿ ಪಿತೂರಿ ಇದೆ’ ಈ ಘಟನೆಯಲ್ಲಿ ನನಗೂ ನ್ಯಾಯ ಬೇಕು: ಟಿವಿಕೆ ಮುಖ್ಯಸ್ಥ ನಟ, ರಾಜಕಾರಣಿ ವಿಜಯ್ ಆರೋಪ  

ಕರೂರಿನಲ್ಲಿ ನಡೆದ ದುರಂತ ಕಾಲ್ತುಳಿತ ಮತ್ತು ಅವರ ಕೊನೆಯ ಚಿತ್ರ ಜನನಾಯಗನ್ ಬಿ ಡುಗಡೆಯ ಹಿಂದೆ ಜಂಟಿ ಕುತಂತ್ರ ಮತ್ತು ಪಿತೂರಿ ಇದೆ ಎಂದು ಟಿವಿಕೆ ಮುಖ್ಯಸ್ಥ ವಿಜಯ್ ಗುರುವಾರ ಆರೋಪಿಸಿದ್ದಾರೆ ಮತ್ತು...

ತೆಲಂಗಾಣ| ಗೋಮಾಂಸ ಮಾರಾಟ ಆರೋಪ; ಮುಸ್ಲಿಂ ಸಮುದಾಯದ ತಂದೆ-ಮಗನ ಮೇಲೆ ಹಲ್ಲೆ

ಹನುಮಾನ್ ಜಯಂತಿ ಸಂದರ್ಭದಲ್ಲಿ ಗೋಮಾಂಸ ಮಾರಾಟ ಮಾಡಿದ ಆರೋಪದ ಮೇಲೆ ಹಿಂದುತ್ವವಾದಿ ಗುಂಪೊಂದು 60 ವರ್ಷದ ಮುಸ್ಲಿಂ ವ್ಯಕ್ತಿ ಮತ್ತು ಆತನ ಹದಿಹರೆಯದ ಮಗನ ಮೇಲೆ ಹಲ್ಲೆ ನಡೆಸಿರುವ ಘಟನೆ ತೆಲಂಗಾಣದ ಜಗ್ತಿಯಾಲ್...

‘ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ’..ಚುನಾವಣೆ ಗೆಲ್ಲಲು ಧರ್ಮ ಮುಂದಿಟ್ಟ ಗುರುವಾಯೂರು ಬಿಜೆಪಿ ಅಭ್ಯರ್ಥಿ

ಕೇರಳದ ಗುರುವಾಯೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಗೋಪಾಲಕೃಷ್ಣನ್ ಚುನಾವಣೆ ಗೆಲ್ಲಲು ಧರ್ಮವನ್ನೇ ಮುಖ್ಯ ಅಸ್ತ್ರವನ್ನಾಗಿ ಬಳಸಿಕೊಂಡಿದ್ದು, ಕಳೆದ 50 ವರ್ಷಗಳಲ್ಲಿ ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ ಎಂಬುವುದನ್ನು ಪುನರುಚ್ಚರಿಸಿದ್ದಾರೆ. ಚುನಾವಣಾ ಪ್ರಚಾರದ ಭಾಗವಾಗಿ...

ಹೊಸ ಹಿಂದೂ ದೇವಾಲಯಕ್ಕೆ ಭೂಮಿ ಮಂಜೂರು ಮಾಡಿದ ಸಿಂಗಾಪುರ ಆಡಳಿತ

ಸಿಂಗಪುರದಲ್ಲಿ ಹೆಚ್ಚುತ್ತಿರುವ ಹಿಂದೂ ಸಮುದಾಯದ ಅಗತ್ಯಗಳನ್ನು ಪೂರೈಸಲು ಸಿಂಗಾಪುರ ಸರ್ಕಾರವು ನಗರ-ರಾಜ್ಯದ ಯಿಶುನ್ ಅವೆನ್ಯೂ 3 ರಲ್ಲಿ ಹೊಸ ಹಿಂದೂ ದೇವಾಲಯವನ್ನು ನಿರ್ಮಿಸಲು ಭೂಮಿ ಮಂಜೂರು ಮಾಡಿದೆ. ಏಪ್ರಿಲ್ 1 ರ ಬುಧವಾರದ ಮಾಧ್ಯಮ...

ಕೇರಳ ಚುನಾವಣೆಗೆ ಮುನ್ನ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆ ಬೆಂಬಲ ಘೋಷಿಸಿದ ‘ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ’

ಎಡ ಸರ್ಕಾರ ಕೈಗೊಂಡ ಅಭಿವೃದ್ಧಿ ಉಪಕ್ರಮಗಳು ಆದಿವಾಸಿ, ದಲಿತ ಮತ್ತು ಇತರ ಅಂಚಿನಲ್ಲಿರುವ ಸಮುದಾಯಗಳನ್ನು ಬದಿಗಿಟ್ಟಿವೆ ಎಂದು ಆರೋಪಿಸಿ, ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ (ಎಡಿಎಫ್) ಬುಧವಾರ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರಜಾಸತ್ತಾತ್ಮಕ ರಂಗ...

ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಪೂರ್ವಾನುಮತಿ ನೀಡಲು ಹೈಕೋರ್ಟ್ ನಿರ್ದೇಶನ

ಪರಿಸರ ಸ್ನೇಹಿ ಬಟ್ಟೆ ಚೀಲಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಎಫ್‌ಐಆರ್ ದಾಖಲಿಸಲು ಅನುಮತಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ ಎಂದು ವರದಿಯಾಗಿದೆ....

ನ್ಯಾಯಾಂಗ ಅಧಿಕಾರಿಗಳನ್ನು ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಎಸ್‌ಐಆರ್ ಕಾರ್ಯದಲ್ಲಿ ತೊಡಗಿರುವ ನ್ಯಾಯಾಂಗ ಅಧಿಕಾರಿಗಳನ್ನು 'ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ' ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೂಷಿಸಿದ್ದಾರೆ. ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಿಹಾಕಿದ್ದಕ್ಕಾಗಿ ಬುಧವಾರ ಪ್ರತಿಭಟನಾಕಾರರು ಹಲವಾರು...

ಎಎಪಿಯ ರಾಜ್ಯಸಭಾ ಉಪನಾಯಕ ಸ್ಥಾನದಿಂದ ರಾಘವ್ ಚಡ್ಡಾಗೆ ಕೋಕ್, ಅಶೋಕ್ ಮಿತ್ತಲ್ ಗೆ ಅಧಿಕಾರ: ವರದಿ

ಮಹತ್ವದ ಬೆಳವಣಿಗೆಯೊಂದರಲ್ಲಿ, ಆಮ್ ಆದ್ಮಿ ಪಕ್ಷ (ಎಎಪಿ) ರಾಜ್ಯಸಭೆಯಲ್ಲಿ ರಾಘವ್ ಚಡ್ಡಾ ಅವರನ್ನು ಉಪನಾಯಕ ಹುದ್ದೆಯಿಂದ ಬದಲಾಯಿಸಲು ಮುಂದಾಗಿದ್ದು, ಇದು ಪಕ್ಷದೊಳಗಿನ ಆಂತರಿಕ ಬಿರುಕು ಉಂಟಾಗಿರುವ ಲಕ್ಷಣಗಳನ್ನು ಸೂಚಿಸುತ್ತದೆ. ಮೇಲ್ಮನೆಯಲ್ಲಿ ಪಕ್ಷದ ಹೊಸ...