Homeಮುಖಪುಟ’ಮರ್ಯಾದೆ’ ಮತ್ತು ಮನುಷ್ಯತ್ವದ ಕಂದರವನ್ನು ಶೋಧಿಸುವ ’ಪಾವ ಕದೈಗಳ್'

’ಮರ್ಯಾದೆ’ ಮತ್ತು ಮನುಷ್ಯತ್ವದ ಕಂದರವನ್ನು ಶೋಧಿಸುವ ’ಪಾವ ಕದೈಗಳ್’

ಇನ್ನೂ ಬದಲಾಗದ ವ್ಯವಸ್ಥೆಯ ಬಗ್ಗೆ ನೋಡುಗನಿಗೆ ಸ್ವಲ್ಪವಾದರೂ ತಟ್ಟಿ ಚಿಂತಿಸುವಂತೆ ಮಾಡಬಲ್ಲ ಈ ನಾಲ್ಕು ಕಥೆಗಳ ಗುಚ್ಛ ನಮ್ಮ ಪ್ಯಾಟ್ರಿಯಾರ್ಕಲ್ ಮನಸ್ಥಿತಿಯನ್ನು, ಜಾತಿ ವ್ಯವಸ್ಥೆಯನ್ನು ಪ್ರಶ್ನಿಸಿ ಮತ್ತು ಇವುಗಳಿಂದ ಹುಟ್ಟಿರುವ ’ಮರ್ಯಾದೆ’ಯ ಕಲ್ಪನೆಯನ್ನು ಅಲ್ಲಾಡಿಸುತ್ತದೆ.

- Advertisement -
- Advertisement -

ಭಾರತದ ಮುಖ್ಯವಾಹಿನಿ ಸಿನಿಮಾಗಳು ಬಹುತೇಕ ಜಾತಿಯ ಬಗ್ಗೆ ಚರ್ಚಿಸಲು ಹಿಂದೇಟು ಹಾಕುವುದೇ ಹೆಚ್ಚು. ಪಾತ್ರಗಳನ್ನು ಹೆಸರಿಸುವುದರಲ್ಲೂ ಕೂಡಾ ಜಾತಿ ಗೊತ್ತಾಗಬಾರದೆಂಬಂತೆ ಜಾಗ್ರತೆ ವಹಿಸಲಾಗುತ್ತೆ. ಆದರೆ ಅವೇ ಸಿನಿಮಾಗಳಲ್ಲಿ ಮೇಲ್ಜಾತಿಗಳ ಬಗ್ಗೆ ಈ ಧೋರಣೆ ತಳೆಯುವುದು ಕಡಿಮೆ. ಬ್ರಾಹ್ಮಣಿಕೆಯ ಪ್ರದರ್ಶನಕ್ಕೆ ಇದು ಅಡ್ಡಿಯೇ ಆಗುವುದಿಲ್ಲ. ಕನ್ನಡದ ಹಲವು ಸಿನಿಮಾಗಳಲ್ಲಿ ’ಗೌಡರ ಗತ್ತಿ’ನೂ ಕಮ್ಮಿಯಿಲ್ಲ. ಇಂತದಕ್ಕೆ ಅತ್ತ ತಮಿಳಿನಲ್ಲಿ ಥೇವರ್ ಮಗನ್‌ನಂತಹ ಚಿತ್ರಗಳೂ ಬಂದಿವೆ. ಆದರೆ ಇದೇ ಮಾತನ್ನು ತಳವರ್ಗಗಳ ಬಗ್ಗೆ ಹೇಳಲು ಬರುವುದಿಲ್ಲ. ಇದಕ್ಕೆ ಭಿನ್ನವಾಗಿ ಇಂದು ತಮಿಳು ಸಿನಿಮಾ ಮಾತ್ರ ಜಾತಿಯ ಪ್ರಶ್ನೆಯನ್ನು ನಿಜವಾಗಿ ಚರ್ಚಿಸುತ್ತಿದೆ ಅನ್ನಿಸುತ್ತೆ.

ರಜನೀಕಾಂತ್ ನಾಯಕನಾಗಿದ್ದ ’ಕಬಾಲಿ’ ಸಿನೆಮಾವನ್ನು ಪ. ರಂಜಿತ್ ನಿರ್ದೇಶಿಸುವುದರೊಂದಿಗೆ ಗಟ್ಟಿಯಾದ ದಲಿತ ಧ್ವನಿಯೊಂದು ಹುಟ್ಟಿಕೊಂಡಿತು. ಕಾಲಾ, ಪರೆಯೇರುಂ ಪೆರುಮಾಳ್, ಅಸುರನ್ ಅಂತಹ ಚಿತ್ರಗಳು ಇವತ್ತು ಜಾತಿಯ ಪ್ರಶ್ನೆಯನ್ನು ಪೊಲಿಟಿಕಲ್ ಪ್ರಶ್ನೆಯಾಗಿಯೇ ಚರ್ಚಿಸಿವೆ. ಅತ್ತ ತೆಲುಗಿನಲ್ಲಿ ’ಪಲಾಸ 1976’ ಎಂಬ ಸಿನಿಮಾ ಸಹ ದಲಿತ ಪ್ರಶ್ನೆಯ ಹಿನ್ನೆಲೆಯಲ್ಲಿ ರಾಯಲಸೀಮೆಯ ಫ್ಯೂಡಲ್ ಹಿಂಸೆಯನ್ನು ನೋಡಿತ್ತು. ಇದೆಲ್ಲದಕ್ಕೆ ಪ್ರತಿಕ್ರಿಯೆಯೋ ಎಂಬಂತೆ ಮರ್ಯಾದೆಗೇಡು ಹತ್ಯೆಗಳನ್ನು ಸಮರ್ಥಿಸುವ ದನಿಯಿದ್ದ ’ದ್ರೌಪದಿ’ ಚಿತ್ರವೂ ತಮಿಳಿನಲ್ಲಿ ಬಂತು. ಇತ್ತೀಚೆಗೆ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾದ ನಾಲ್ಕು ಚಿತ್ರಗಳ ಗುಚ್ಛ ’ಪಾವ ಕದೈಗಳ್ ಅನ್ನು ತಮಿಳು ಚಿತ್ರರಂಗದಲ್ಲಿ ನಡೆಯುತ್ತಿರುವ ಈ ಜಾತಿ ಪ್ರಶ್ನೆಯ ಚರ್ಚೆಯ ಹಿನ್ನೆಲೆಯಲ್ಲಿ ನೋಡಬೇಕಿದೆ.

’ಪಾವ ಕದೈಗಳ್‌ನ ನಾಲ್ಕು ಚಿತ್ರಗಳೂ “ಮರ್ಯಾದೆ”ಯ ಪ್ರಶ್ನೆಯ ಸುತ್ತಲೇ ಗಿರಕಿ ಹೊಡೆಯುತ್ತದೆ. ಈ ಮರ್ಯಾದೆ ಪ್ರಶ್ನೆಯಲ್ಲಿ ಹೇಗೆ ಜಾತಿ ಮತ್ತು ಹೆಣ್ಣು ಎರಡೂ ಪ್ರಮುಖ ಎಂಬುದನ್ನು ಈ ನಾಲ್ಕೂ ಚಿತ್ರಗಳು ಅತ್ಯಂತ ಶಕ್ತಿಯುತವಾಗಿ ಕಟ್ಟಿಕೊಡುತ್ತವೆ. ಈ ನಾಲ್ಕರಲ್ಲಿ ಎರಡು ಕಥೆಗಳು ತಮಿಳುನಾಡಿನಲ್ಲಿ ನಡೆದ ನೈಜ ಘಟನೆಗಳಿಂದ ಪ್ರೇರಣೆ ಪಡೆದವು – ಗೌತಂ ಮೆನನ್ ಅವರು ನಿರ್ದೇಶಿಸಿರುವ ’ವಾನ್ಮಗಳ್, ಪೊಲ್ಲಾಚಿ ಸೆಕ್ಸ್ ಹಗರಣದಿಂದ ಮತ್ತು ವೆಟ್ರಿಮಾರನ್ ನಿರ್ದೇಶಿಸಿರುವ ’ಊರ್ ಇರುವು’ ತಮಿಳುನಾಡಿನಲ್ಲಿ ನಡೆದ ಮರ್ಯಾದೆಗೇಡು ಹತ್ಯೆಯೊಂದರ ಪ್ರೇರಣೆಯಿಂದ ಹೆಣೆದಿರುವ ಕಥೆಗಳು. ಹಾಗಾಗಿಯೇ ಈ ಚಿತ್ರಗಳಲ್ಲಿ ಪತ್ರಿಕಾ ವರದಿಯ ಛಾಯೆಯಿದೆ ಮತ್ತು ಹಾಗಾಗಿಯೇ ಅವು ಅಷ್ಟು ಪರಿಣಾಮಕಾರಿ ಅಲ್ಲ ಎಂದು ಕೆಲವರು ಆಕ್ಷೇಪಿಸಿದ್ದಾರಾದರೂ, ಈ ಚಿತ್ರಗಳು ನೀಡುವ ಒಳನೋಟ ಮತ್ತು ಮೂಡಿಸುವ ತಲ್ಲಣ ಆಳವಾದದ್ದು. ಈ ಚಿತ್ರಗಳ ವಿಶೇಷತೆಯೆಂದರೆ “ಮರ್ಯಾದೆ” ಉಳಿಸಿಕೊಳ್ಳಲು ಹಿಂಸೆಗೆ ಇಳಿಯುವ ತಲೆಮಾರಿನ ಬಗ್ಗೆಯೇ ಈ ಕಥೆಗಳ ಫೋಕಸ್ ಇದ್ದು, ಹಿಂಸೆಗೆ ಒಳಗಾದ ಯುವಕರ ಬಗ್ಗೆ ಮಾತ್ರ ಅಲ್ಲ ಎನ್ನಬಹುದು. ಈ ತಲೆಮಾರುಗಳ ನಡುವಿನ ಅಂತರ ಮತ್ತು ತಲ್ಲಣಗಳನ್ನು ಈ ಚಿತ್ರಗಳು ಶಕ್ತವಾಗಿ ಹಿಡಿದುಕೊಡುತ್ತವೆ.

ಗಾಂಧಿ ಬ್ರಿಟಿಷ್ ಆಳ್ವಿಕೆಯನ್ನು ವಿರೋಧಿಸುತ್ತಾ, ಪಾಶ್ಚಿಮಾತ್ಯ ನಾಗರಿಕತೆಯು ಕ್ರೈಸಿಸ್‌ನಲ್ಲಿದ್ದು, ಅವರಿಗಾಗಿಯೂ ನಾನು ಹೋರಾಡುತ್ತಿದ್ದೇನೆ ಎಂದೇ ತಿಳಿದಿದ್ದರು. ಈ ಚಿತ್ರಗಳಲ್ಲೂ “ಮರ್ಯಾದೆ” ಎಂಬುದು ಹೇಗೆ ಒಂದು ಸಾಮಾಜಿಕ ಸಂರಚನೆಯಾಗಿದ್ದು ಅದನ್ನು ಒಳಗೊಳ್ಳಲು ಸಮಾಜವು ಹೇಗೆ ಒಬ್ಬನ ಮೇಲೆ ನಿರಂತರ ಒತ್ತಡ ಹೇರುತ್ತದೆ ಮತ್ತು ಅನೇಕ ಮರ್ಯಾದೆಗೇಡು ಹತ್ಯೆಗಳ ಹಿಂದೆ ಇಂಥದೊಂದು ಒತ್ತಡವು ಕೆಲಸ ಮಾಡುತ್ತದೆ, ಮತ್ತು ಸ್ವಂತ ಮಕ್ಕಳನ್ನೇ ಕೊಲ್ಲುವ ಹಂತಕ್ಕೆ ಹೋಗುವ ಜನ ಕೂಡ ಹೇಗೆ ಒಂದು ರೀತಿಯಲ್ಲಿ ಈ ವ್ಯವಸ್ಥೆಯ ವಿಕ್ಟಿಂಗಳು ಮತ್ತು ಅವರಿಗೂ ಈ ಉಸಿರುಕಟ್ಟುವ ವ್ಯವಸ್ಥೆಯಿಂದ ಬಿಡುಗಡೆ ಬೇಕಾಗಿದೆ ಎಂಬ ದನಿಯಲ್ಲಿ ಈ ಚಿತ್ರಗಳಿವೆ. ವಿಗ್ನೇಶ್ ಶಿವನ್ ನಿರ್ದೇಶನದ ’ಲವ್ ಪಣ್ಣಾ ಉತ್ರಾಣಮ್ ಮತ್ತು ’ಊರ್ ಇರುವು’ ಚಿತ್ರಗಳಲ್ಲಿ ಅವರ ಮಕ್ಕಳನ್ನು ಕೊಲ್ಲಲು ಆ ಜಾತಿ ಸಮಾಜದಿಂದ ಇರುವ ಒತ್ತಡ ಸ್ಪಷ್ಟ. ಈ ತಂದೆಯರ ತೊಳಲಾಟವು ವಿದಿತ. ಆದರೆ ಅವರು ಕಡೆಗೆ ತಮ್ಮ ಮಕ್ಕಳನ್ನು ಕೊಲ್ಲುತ್ತಾರೆ. ಶಿವನ್ ಅವರ ಚಿತ್ರದಲ್ಲಿ ಒಬ್ಬ ಮಗಳನ್ನು ಕೊಲ್ಲುವ ತಂದೆ ಕೊನೆಗೆ ಮತ್ತೊಬ್ಬ ಮಗಳನ್ನು ಹಳ್ಳಿಯಿಂದ ತಪ್ಪಿಸಿಕೊಳ್ಳಲು ಬಿಡುವುದಷ್ಟೇ ಅಲ್ಲದೆ, ತಾನೂ ಹಳ್ಳಿಯಿಂದ ತಪ್ಪಿಸಿಕೊಂಡು ಮಗಳ ಜೊತೆ ಫ್ರಾನ್ಸ್‌ನಲ್ಲಿ ಅವಳ ಜೊತೆ ವಾಸ ಮಾಡುತ್ತಾನೆ.

PC : Only kollywood

’ಊರ್ ಇರುವು’ ಚಿತ್ರದಲ್ಲಿ ಮನೆಯಿಂದ ಓಡಿಹೋದ ಮಗಳು ಬಹುಶಃ ದಲಿತ ಹುಡುಗನೊಬ್ಬನನ್ನು ಮದುವೆ ಆಗಿ ಬೆಂಗಳೂರಲ್ಲಿ ನೆಲೆಸಿದ್ದಾಳೆ. ಗರ್ಭಿಣಿ. ಆಕೆಯನ್ನು ಹುಡುಕಿಕೊಂಡು ಬರುವ ತಂದೆ ಅಳಿಯ ಕೊಟ್ಟ ನೀರು ಮುಟ್ಟಲೂ ಅಂಜುವವನು. ಮೊಮ್ಮಗುವನ್ನು ಬಿಟ್ಟು ಇರಕ್ಕಾಗಲ್ಲ, ಮಗಳನ್ನು ಕರಕೊಂಡು ಹೋಗಿ ಸೀಮಂತ ಮಾಡ್ತೀನಿ ಅಂದಾಗ ಅಳಿಯ ’ನಾನು ಕೊಟ್ಟ ನೀರನ್ನೇ ಕುಡಿಯದ ನಿಮ್ಮನೆಗೆ ನಾನು ಹೇಗೆ ಬರಲಿ’ ಅಂತ ಕೇಳ್ತಾನೆ. ನನಗೆ ಹೇಳದೆಯೇ ಯಾಕೆ ಓಡಿ ಹೋದೆ ಎಂದು ಕೇಳಿದ್ದಕ್ಕೆ ಮಗಳು ’ಇದೇ ರೀತಿ ಬೇರೆ ಜಾತಿಯ ಹುಡುಗನನ್ನು ಮದುವೆಯಾಗಿದ್ದಕ್ಕೆ ಊರಲ್ಲಿ ಏನು ಮಾಡಿದರು, ನೀನೂ ಸುಮ್ಮನಿದ್ದೆಯಲ್ಲ ಎಂದು ಕೇಳುತ್ತಾಳೆ, ತಂದೆಯಲ್ಲಿ ಉತ್ತರವಿಲ್ಲ. ಒಂದು ಬಾರಿ ಆಕೆಯನ್ನು ಬಿಟ್ಟು ಹೊರಟುಹೋಗಲು ಅನುವಾಗುತ್ತಾನೆ ಕೂಡಾ. ಆದರೆ ಮಗಳೇ ತಡೆಯುತ್ತಾಳೆ. ತಂದೆ ಮಗಳಿಗೆ ಹೇಳ್ತಾನೆ: “ಈ ಜೀವನವನ್ನು ನೀನು ಕಟ್ಟಿಕೊಂಡಿದ್ದೀಯ. ಇದರ ಮೇಲೆ ಯಾರಿಗೂ ಹಕ್ಕಿಲ್ಲ ಎಂದು. ಅತ್ತ ಈಕೆಯ ಅಕ್ಕನನ್ನು ಗಂಡ ಬಿಟ್ಟುಬಿಟ್ಟಿದ್ದಾನೆ. ಕಾರಣ ದಲಿತರ ಹುಡುಗನೊಬ್ಬನಿಗೆ ಹುಟ್ಟುವ ಮಗುವಿನ ಮನೆಯ ಹುಡುಗಿ ಅಂತ! ಇನ್ನೂ ಒಬ್ಬಳು ಮಗಳಿದ್ದಾಳೆ, ಅವಳಿಗೆ ಓದು ಬಿಡಿಸಿದ್ದಾನೆ ಅಪ್ಪ. ಮಗಳನ್ನು ಊರಿಗೆ ಕರಕೊಂಡು ಬಂದು ಸೀಮಂತಕ್ಕೆ ಎಲ್ಲ ತಯಾರಿ ನಡೆದಿದೆ. ಜಾತಿಯ ಹುಡುಗರು ಬಂದು ಇದಕ್ಕೆ ಆಕ್ಷೇಪಿಸುತ್ತಾರೆ. ಬೇರೆಯವರಿಗೊಂದು ನ್ಯಾಯ ತನ್ನ ಮಗಳಿಗೊಂದು ನ್ಯಾಯವಾ ಎಂಬುದು ಅವರ ಪ್ರಶ್ನೆ.

ಲವ್ ಪಣ್ಣಾ ಉತ್ರಾಣುಂ

ಶಿವನ್ ಅವರ ’ಲವ್ ಪಣ್ಣಾ ಉತ್ರಾಣುಂ’ ಚಿತ್ರದಲ್ಲಿ ಸ್ವತಃ ಜಾತಿಯನ್ನು ಉಳಿಸಲು ಅಂತರಜಾತಿ ವಿವಾಹಗಳಾಗುತ್ತಿರುವ ಯುವಕರನ್ನು ಕೊಲ್ಲುತ್ತಿರುವ ತಂದೆಗೆ ಆತನ ಬಂಟ ಕೇಳುವುದೂ ಅದೇ ಪ್ರಶ್ನೆ. ಈ ಪಾತ್ರವು ’ಪರೆಯೇರುಂ ಪೆರುಮಾಳ್ ಚಿತ್ರದಲ್ಲಿ ಹೀಗೆ ಉಚ್ಛಜಾತಿಯ ಹುಡುಗಿಯರನ್ನು ಪ್ರೇಮಿಸುವ ಹುಡುಗರನ್ನು ಕೊಲ್ಲುವುದೇ ಕಾಯಕ ಮಾಡಿಕೊಂಡ ಮುದುಕನ ಪಾತ್ರ ನೆನಪಿಸುತ್ತದೆ. ’ಊರ್ ಇರುವು’ನಲ್ಲಿ ಸೀಮಂತದ ಹಿಂದಿನ ರಾತ್ರಿ ಮಗಳಿಗೆ ಅಪ್ಪನೇ ವಿಷ ಹಾಕಿ ಸಾಯಿಸುತ್ತಾನೆ. “ನಿನ್ನನ್ನು ನಾನು ಬಿಡಲಾಗುವುದಿಲ್ಲ. ನನಗೆ ಇನ್ನೂ ಬೇರೆ ಮಕ್ಕಳಿದ್ದಾರೆ. ಅವರ ಒಳತಿಗಾಗಿ…”, ಎಂಬ ಆತನ ವಾದ ಹುಚ್ಚು ಎನಿಸಿದರೂ ಆ ಹಳ್ಳಿಯಲ್ಲಿ (ಎಲ್ಲೆಲ್ಲೂ) ಜಾತಿ ಸಮಾಜದಲ್ಲಿ ಅದು ವಾಸ್ತವೂ ಹೌದು ಎಂಬುದು ನಮ್ಮನ್ನು ತಟ್ಟುತ್ತದೆ. ಇದೇ ಮಾತನ್ನು ಸುಧಾ ಕೊಂಗಾರಾ ಅವರ ನಿರ್ದೇಶನದ ’ತಂಗಮ್ ಎಂಬ ಚಿತ್ರದಲ್ಲಿ ತಾಯಿ ತನ್ನ ತೃತೀಯ ಲಿಂಗ ಮಗ ಸತ್ತಾರ್‌ನಿಗೆ ಹೇಳುತ್ತಾಳೆ: ’ನಿನ್ನ ತಂಗಿ, ತಮ್ಮಂದಿರಿಗಾಗಿ ನೀನು ಸತ್ತು ಹೋಗು’ ಎಂದು.

ಇನ್ನು ’ವಾನ್ಮಗಳ್ ಚಿತ್ರದಲ್ಲಿ ಹನ್ನೆರಡು ವರ್ಷದ ಹುಡುಗಿಯನ್ನು ಕೆಲವು ಹುಡುಗರು ರೇಪ್ ಮಾಡಿದ್ದಾರೆ. ಅದಕ್ಕೆ ಆ ಹುಡುಗಿಯ ಕುಟುಂಬ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಚಿತ್ರ ಕಟ್ಟಿಕೊಡುತ್ತದೆ. ತಂದೆಗೆ ಮಗಳನ್ನು ಮಾತಾಡಿಸಲೇ ಆಗುತ್ತಿಲ್ಲ, ಆಕೆಯನ್ನು ಆತ ತಪ್ಪಿಸುತ್ತಿದ್ದಾನೆ, ಮಗನ ಸ್ನೇಹಿತರೇ ಈ ಕೃತ್ಯ ಎಸಗಿದ್ದು ಅದು ತಿಳಿದು ಪೊಲೀಸರಿಗೆ ದೂರು ನೀಡೋಣ ಎಂದು ಮಗ ತಂದೆಯನ್ನು ಕರೆಯುತ್ತಾನೆ. ಆದರೆ ತಾಯಿ ಪೊಲೀಸರಿಗೆ ದೂರು ನೀಡಿದರೆ ಮರ್ಯಾದೆ ಹೋಗುತ್ತದೆ ಬೇಡ ಎಂದು ತಡೆಯುತ್ತಾಳೆ. ಮಗ ಹೋಗಿ ತನ್ನ ತಂಗಿಯನ್ನು ಅಬ್ಯೂಸ್ ಮಾಡಿದ ಹುಡುಗನ ಶಿಶ್ನ ಕತ್ತರಿಸುತ್ತಾನೆ. ಆದರೆ ಈ ಕುಟುಂಬದಲ್ಲಿ ಅತ್ಯಂತ ಹೆಚ್ಚು ಪಿತೃಪ್ರಧಾನ್ಯವಾಗಿ ಯೋಚಿಸುವುದು, ತಳಮಳಕ್ಕೆ ಒಳಗಾಗುವುದು ತಾಯಿ. ಹಿರಿಯ ಮಗಳು ದೊಡ್ಡವಳಾದಾಗ ಮನೆಯ ಗೌರವ ಹೆಣ್ಣಿನ ದೇಹ, ನಡತೆಯಲ್ಲಿರುತ್ತದೆ ಎಂದು ಪಾಠ ಮಾಡುವ ಈ ತಾಯಿಗೆ ತನ್ನ ಕಿರಿಯ ಮಗಳನ್ನು ಯಾರೋ ಹುಡುಗರು ಬಲಾತ್ಕಾರ ಮಾಡಿದ್ದಾರೆ ಎಂಬುದನ್ನು ಅರಗಿಸಿಕೊಳ್ಳಲೇ ಆಗುವುದಿಲ್ಲ. ಆ ಮಗುವಿಗೆ ಪದೇ ಪದೇ ಸ್ನಾನ ಮಾಡಿಸುತ್ತಾ ಆ ಘಾತವನ್ನು ತೊಳೆದುಬಿಡಬೇಕೆಂಬಂತೆ ಮೈಉಜ್ಜುತ್ತಲೇ ಇರುವ ತಾಯಿಗೆ, ಆ ಮಗುವನ್ನೇ ಕೊಂದುಬಿಡುವ ಯೋಚನೆ! ಕೂಡಲೇ ಎಚ್ಚೆತ್ತುಕೊಳ್ಳುವ ಆಕೆ ತನ್ನ ಮಗಳನ್ನೇ ಕೊಂದುಬಿಡುವ ಯೋಚನೆ ನನಗೆ ಮೂಡಿಸಿದ ಈ “ಮರ್ಯಾದೆ”ಗೆ ಬೆಂಕಿ ಹಾಕ, ನನ್ನ ಮಗಳು ಬೆಳೆದು ದೊಡ್ಡವಳಾಗಿ ಅಂತರಿಕ್ಷದಲ್ಲಿ ಪ್ರಯಾಣಿಸುತ್ತಿದ್ದಾಗ ಮರ್ಯಾದೆ ಎಂದು ಮುಂದಿನ ಜೀವನಕ್ಕೆ ಅಣಿಯಾಗುತ್ತಾಳೆ. ನಾವಿರುವ ಜಾತಿ ಸಮಾಜದಲ್ಲಿ ಇಂತಹ ಯೋಚನೆಗಳೂ ನಮಗೂ ಬರಬಹುದು, ಆದರೆ ಇಂಥ ಒಂದು ಕ್ಷಣದ ಎಚ್ಚರ, ಯಾವುದು ಮರ್ಯಾದೆ ಎಂಬ ಒಂದು ಸಣ್ಣ ಪ್ರಶ್ನೆ ನಮ್ಮನ್ನು ಮನುಷ್ಯರಾಗೇ ಉಳಿಸಬಲ್ಲದು.

ವಾನ್ಮಗಳ್

’ತಂಗಮ್ ಚಿತ್ರದಲ್ಲಿ ಓಡಿಹೋಗಿ ಮದುವೆಯಾಗಿರುವ ದಂಪತಿ (ಇಲ್ಲಿ ಒಂದು ಸಂಕೀರ್ಣ ಪ್ರೇಮಕಥೆಯೂ ಅಡಗಿದೆ. ಸತ್ತಾರ್ ತನ್ನ ಪ್ರಿಯಕರ ಶರವಣನಿಗೆ ಅವನ ಬಯಕೆಯಂತೆ ತನ್ನ ತಂಗಿ ಸಾಯಿರಾ ಜೊತೆ ಓಡಿಹೋಗಿ ಅಂತರಧರ್ಮೀಯ ಮದುವೆ ಮಾಡಿಕೊಳ್ಳಲು ಸಹಕರಿಸುತ್ತಾರೆ) ಹಿಂದಿರುಗಿದಾಗ, ಅವರನ್ನು ಒಪ್ಪಿಕೊಳ್ಳಲು ಎರಡೂ ಕುಟುಂಬದವರು ಸಿದ್ಧರಿದ್ದರೂ, ಸತ್ತಾರ್‌ನನ್ನು ಮನೆಯಿಂದ ಹೊರದಬ್ಬಿ ಅವನ ಸಾವಿಗೆ ಕಾರಣವಾಗಿರುವ ತಮ್ಮ ಕುಟುಂಬದ ಸದಸ್ಯರ ಬಗ್ಗೆ, ಊರ ಜನರ ಬಗ್ಗೆ ಆ ದಂಪತಿ ತಳೆಯುವ, ಸಿಟ್ಟು, ಹತಾಶೆ, ಆಕ್ರೋಶ ಎಲ್ಲವೂ ಪ್ರೇಕ್ಷಕನದ್ದೂ ಆಗುತ್ತದೆ.

ತಂಗಮ್

ಇನ್ನೂ ಬದಲಾಗದ ವ್ಯವಸ್ಥೆಯ ಬಗ್ಗೆ ನೋಡುಗನಿಗೆ ಸ್ವಲ್ಪವಾದರೂ ತಟ್ಟಿ ಚಿಂತಿಸುವಂತೆ ಮಾಡಬಲ್ಲ ಈ ನಾಲ್ಕು ಕಥೆಗಳ ಗುಚ್ಛ ನಮ್ಮ ಪ್ಯಾಟ್ರಿಯಾರ್ಕಲ್ ಮನಸ್ಥಿತಿಯನ್ನು, ಜಾತಿ ವ್ಯವಸ್ಥೆಯನ್ನು ಪ್ರಶ್ನಿಸಿ ಮತ್ತು ಇವುಗಳಿಂದ ಹುಟ್ಟಿರುವ ’ಮರ್ಯಾದೆ’ಯ ಕಲ್ಪನೆಯನ್ನು ಅಲ್ಲಾಡಿಸುತ್ತದೆ.

ಒರು ಇರವು

ಇದನ್ನೂ ಓದಿ: ಮರ್ಯಾದಾಹೀನ ಹತ್ಯೆ: ಸಿನಿಮಾ ಶೈಲಿಯಲ್ಲಿ ಕಥೆ ಕಟ್ಟಿದ ಯುವತಿಯ ಕುಟುಂಬ!
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....

ಪಿಟಿಸಿಎಲ್‌ ಕಾಯ್ದೆ ತಿದ್ದುಪಡಿ- ಕೋರ್ಟ್‌ಗಳಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ

ಪಿಟಿಸಿಎಲ್‌ ಕಾಯ್ದೆ, 1978ರ 2023ರ ತಿದ್ದುಪಡಿ ಕಾಯ್ದೆಯ ವಿರೋಧಿಸಿ ಹಾಗೂ ಕಂದಾಯ ಇಲಾಖೆಯ ಎಸಿ, ಡಿಸಿ ನ್ಯಾಯಾಲಯಗಳು ಹಾಗೂ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ...

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್‌ಗೆ ಜಾಮೀನು

ಪತ್ತನಂತಿಟ್ಟ: ಈ ತಿಂಗಳ ಆರಂಭದಲ್ಲಿ ಬಂಧಿಸಲ್ಪಟ್ಟ ಮೂರನೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್ ಅವರಿಗೆ ಕೇರಳ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ. ಶಾಸಕರು ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ್ದ ಪತ್ತನಂತಿಟ್ಟ...

ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ಸಾವು : ಪಿತೂರಿ ಶಂಕೆ ವ್ಯಕ್ತಪಡಿಸಿದ ಮಮತಾ ಬ್ಯಾನರ್ಜಿ, ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿದ ರಾಜಕೀಯ ನಾಯಕರು

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಸಾವಿಗೆ ಕಾರಣವಾದ ಬಾರಾಮತಿ ವಿಮಾನ ಪತನದ ಕುರಿತು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕೆಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ (ಜ.28) ಒತ್ತಾಯಿಸಿದ್ದಾರೆ....

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯ ತಡೆಯಲು ಯುಜಿಸಿ ಹೊಸ ನಿಯಮ; ಮುಂದುವರೆದ ಪ್ರಬಲಜಾತಿ ಗುಂಪಿನ ವಿರೋಧ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ಪರಿಹರಿಸುವ ಗುರಿಯನ್ನು ಹೊಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಪರಿಷ್ಕೃತ ನಿಯಮಗಳ ಕುರಿತು ದೇಶದಲ್ಲಿ ಭಾರಿ ರಾಜಕೀಯ ವಾಗ್ವಾದ ಭುಗಿಲೆದ್ದಿದೆ. ಹೊಸ ಮಾರ್ಗಸೂಚಿಗಳ ಕುರಿತು...

ಜನಸೇನಾ ಶಾಸಕನಿಂದ ಅತ್ಯಾಚಾರ, ಬಲವಂತದ ಗರ್ಭಪಾತ : ಮಹಿಳೆ ಆರೋಪ

ಆಂಧ್ರ ಪ್ರದೇಶದ ರೈಲ್ವೆ ಕೊಡೂರು ವಿಧಾನಸಭಾ ಕ್ಷೇತ್ರದ ಜನ ಸೇನಾ ಶಾಸಕ ಮತ್ತು ಸರ್ಕಾರಿ ಸಚೇತಕ ಅರವ ಶ್ರೀಧರ್ ವಿರುದ್ಧ ಮಹಿಳೆಯೊಬ್ಬರು ಅತ್ಯಾಚಾರ ಮತ್ತು ಬಲವಂತದ ಗರ್ಭಪಾತ ಆರೋಪ ಮಾಡಿದ್ದಾರೆ. ಈ ಕುರಿತು ವಿಡಿಯೋ...

ಬಾರಾಮತಿ ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ನಿಧನ; ಸಂತಾಪ ಸೂಚಿಸಿದ ಪ್ರಮುಖರು

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ಐವರು ಜನರು ಪ್ರಯಾಣಿಸುತ್ತಿದ್ದ ವಿಮಾನ ಬುಧವಾರ ಬೆಳಿಗ್ಗೆ ಪುಣೆ ಜಿಲ್ಲೆಯಲ್ಲಿ ಪತನಗೊಂಡು ಸಾವನ್ನಪ್ಪಿದ್ದಾರೆ. ಎನ್‌ಸಿಪಿ ನಾಯಕರಾದ ಅಜಿತ್ ಪವಾರ್ (66) ಮತ್ತು ಇತರರನ್ನು ಹೊತ್ತೊಯ್ಯುತ್ತಿದ್ದ...