ಬೆಂಗಳೂರಿನಲ್ಲಿ ಕೊರೊನಾ ಸಾಂಕ್ರಾಮಿಕದ ನಡುವೆಯೇ ಎಲ್ಲಾ ಮುನ್ನೆಚ್ಚರಿಕೆ ತೆಗೆದುಕೊಂಡು ಜನರಿಗೆ ರಂಗಭೂಮಿಯ ಸವಿಯೂಣಿಸಲು 15 ರಂಗತಂಡಗಳು ಸಜ್ಜಾಗಿವೆ. ಬರೋಬ್ಬರಿ 15 ದಿನಗಳು, 15 ನಾಟಕಗಳು, 15 ನಿರ್ದೇಶಕರು ಮತ್ತು ವಿಭಿನ್ನ ಬರಹಗಾರರು ಸೇರಿ ಜ. 3 ರಿಂದ ಜ. 18ರ ವರೆಗೆ ’ಯುವರಂಗ ನಾಟಕೋತ್ಸವ 2021’ ಕಾರ್ಯಕ್ರಮ ಆಯೋಜಿಸಿವೆ.
ಕೊರೊನಾ ಭಯವನ್ನು ಪಕ್ಕಕಿಟ್ಟು, ಜವಾಬ್ದಾರಿಯನ್ನು ಹೆಗಲಿಗೆ ಹೊತ್ತು ಸದ್ದು ಮಾಡಲು ರಂಗಭೂಮಿ ಮತ್ತೆ ಸಜ್ಜಾಗಿದೆ. ’ಯುವರಂಗ ನಾಟಕೋತ್ಸವ 2021’ ವೇದಿಕೆ ಮೂಲಕ ಕೊರೊನಾ ಸಾಂಕ್ರಾಮಿಕದಿಂದ ಹೊಡೆತ ತಿಂದಿರುವ ರಂಗಭೂಮಿಯ ಹಲವು ಬಳಗಗಳು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಿವೆ.
“ಪ್ರೇಕ್ಷಕರ ಮೇಲೆ ನಂಬಿಕೆ ಇಟ್ಟು, 15 ದಿನಗಳ ಕಾಲ 15 ನಾಟಕಗಳು ಬರೀ ಜನರನ್ನ ಮಾತ್ರ ನಂಬಿ ನಾಟಕಗಳನ್ನು ಪ್ರಸ್ತುತ ಪಡಿಸಲು ನಿರ್ಧರಿಸಿದ್ದೆವೆ. ಮುಂದಿನ ಬದುಕಿನ ಯೋಚನೆಗೆ ಬಿದ್ದೋ, ಇಷ್ಟು ದಿನಗಳ ಖಾಲಿ ಕೈ ಬರ್ತಿ ಮಾಡಲಿಕ್ಕೋ, ಅವಮಾನಿಸಿದವರಿಗೆ ಉತ್ತರಿಸಲೆಂದೋ, ಹಸಿವನ್ನೋ, ದೇವರನ್ನು ಪ್ರಾರ್ಥಿಸಲೋ ಈ ಕಾಯಕಕ್ಕೆ ಇಳಿದಿದ್ದೇವೆ” ಎಂದು ರಂಗ ತಂಡಗಳು ಮನವಿ ಮಾಡಿವೆ.
ಇದನ್ನೂ ಓದಿ: ಐತಿಹಾಸಿಕ ರೈತ ಹೋರಾಟದೊಂದಿಗೆ ಕೈಜೋಡಿಸಿದ ದೊಡ್ಡ ಸಂಖ್ಯೆಯ ಕೃಷಿ ಕಾರ್ಮಿಕರು!
“ನಮ್ಮ ಈ ಪ್ರಯೋಗ ಹುಚ್ಚು ಸಾಹಸ ಎಂದೆನ್ನಿಸಬಹುದು. ಆದರೆ ಬಣ್ಣವನ್ನೇ ಬದುಕಾಗಿಸಿಕೊಂಡವರಿಗೆ ಸಾಹಸಗಳನ್ನು ಮಾಡಿ ಅಭ್ಯಾಸ ಇರುತ್ತದೆ. ರಂಗಭೂಮಿ ಕಲಿಸೋದು ಹೋರಾಡು ಅಂತ. ಸಮಾಜಕ್ಕೆ ಕನ್ನಡಿ ರಂಗಭೂಮಿ ಎನ್ನುತ್ತಾರೆ. ಅದರಂತೆಯೇ 15 ಬಗೆಯ ವಿಭಿನ್ನ ಪ್ರಯೋಗಗಳನ್ನ ನಿಮ್ಮ ಮುಂದೆ ಇಡೋಕೆ ಯುವರಂಗ ಅನ್ನೋ ವೇದಿಕೆ ಸಿದ್ಧವಾಗಿದೆ. ಹೊಸ ವರ್ಷಕ್ಕೆ ಹೊಸ ಹೊಸ ಕನಸುಗಳನ್ನು ಹೊತ್ತು ಜನವರಿ 03 ರಿಂದ 18 ನೇ ತಾರೀಖಿನ 15ನ ದಿನಗಳು, 15 ತಂಡಗಳು ನಿಮ್ಮ ಮುಂದೆ ಬರುತ್ತಿವೆ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಯಡಿಯೂರಪ್ಪ ವಿರುದ್ಧ ಭ್ರಷ್ಟಾಚಾರ ಪ್ರಕರಣ: FIR ರದ್ದತಿ ಕೋರಿದ್ದ ಮನವಿ ತಿರಸ್ಕರಿಸಿದ ಹೈಕೋರ್ಟ್
ದೃಶ್ಯಕಾವ್ಯ, ಖಾಲಿರಂಗ, ಥೇಮಾ, ರಂಗಭಾಸ್ಕರ, ಸವಿರಂಗ, ರಂಗವಿಜಯ, ನೆನಪುತಂಡ, ಅಶ್ವಘೋಷ ಥಿಯೇಟರ್ ಟ್ರಸ್ಟ್, ರಂಗನಿರಂತರ, ಸೈಡ್ ವಿಂಗ್, ವಿಶ್ವಪಥ ಕಲಾ ಸಂಗಮ, ಥಿಯೇಟರ್ ಥೇರಪಿ, ಸ್ಪಷ್ಟ, ಪ್ರವರ ಥಿಯೇಟರ್ ಮತ್ತು ರಂಗಪಯಣ ತಂಡಗಳು ಯುವರಂಗ ನಾಟಕೋತ್ಸವದಲ್ಲಿ ಪಾಲ್ಗೊಳ್ಳಲಿವೆ.
ಕೆ. ವೈ ನಾರಾಯಣ ಸ್ವಾಮಿ, ಬೇಲೂರು ರಘುನಂದನ್, ರಾಮಕೃಷ್ಣಕಲ್ಚಾರ್, ಲಿಂಗ ದೇವರು ಹಳೆ ಮನೆ, ರಾಜಗುರು, ಶೈಲೇಶ್ ಕುಮಾರ್, ಹನುಮಂತ ಹಾಲಿಗೇರಿ, ಎಂ. ಎಸ್ ನರಸಿಂಹ ಮೂರ್ತಿ, ಕರಣಂ ಪವನ್ ಪ್ರಸಾದ್ ಸೇರಿದಂತೆ ಹಲವು ಬರವಣಿಗೆಗಾರರ ಬರಹ ನಾಟಕಗಳಿಗಿದೆ.
ನಿರ್ದೇಶನ ವಿಭಾಗದಲ್ಲಿ ಕೃಷ್ಣ ಮೂರ್ತಿ ಕವತ್ತಾರ್, ನಂಜುಂಡೇಗೌಡ, ನಿರಂಜನ್ ಖಾಲಿಕೊಡ, ಡಾ. ಎಸ್. ವಿ. ಸುಷ್ಮಾ, ಭಾಸ್ಕರ್ ಗೌಡ, ದಿಲೀಪ್ ಬಿ.ಎಂ, ನಂದೀಶ್ ದೇವ್, ಶೈಲೇಶ್ ಕುಮಾರ್, ಭಾಸ್ಕರ್ ನೀನಾಸಂ, ರಾಮಕೃಷ್ಣ ಬೆಳ್ತೂರ್, ಗಗನ್ ಪ್ರಸಾದ್, ಹನು ರಾಮಸಂಜೀವ, ರಾಜಗುರು ಸೇರಿದ್ದಾರೆ.
ಇದನ್ನೂ ಓದಿ: ರೈತರ ಸಮಸ್ಯೆ ಬಗೆಹರಿಯುವವರೆಗೂ ಇಂಗ್ಲೆಂಡ್ ಪ್ರಧಾನಿ ಭಾರತಕ್ಕೆ ಬರುವುದು ಬೇಡ: ರೈತ ಮುಖಂಡರ ಪತ್ರ
ಈ ಹದಿನೈದು ದಿನಗಳಲ್ಲಿ ನಾಟಕಗಳ ಜೊತೆಗೆ ಸಂವಾದ, ರಂಗಗೀತೆಗಳು, ಯುವರಂಗ 2021 ಪ್ರಶಸ್ತಿ ಪ್ರದಾನ ನಡೆಯಲಿದೆ. ಇದೆಲ್ಲದರ ಜೊತೆಗೆ ಜನವರಿ 11 ರಂದು ರಂಗನಿರಂತರ ತಂಡವು ಸಿಜಿಕೆ ಅವರ ಲಕೋಟೆಯನ್ನು ಬಿಡುಗಡೆ ಮಾಡಲಿದೆ ಎಂದು ರಂಗತಂಡಗಳು ಮಾಹಿತಿ ನೀಡಿದ್ದಾರೆ.
ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿರುವ ಸಂಸ ಬಯಲು ರಂಗಮಂದಿರದಲ್ಲಿ ನಾಟಕಗಳು ನಡೆಯಲಿವೆ. ಸರ್ಕಾರ ಬಿಡುಗಡೆ ಮಾಡಿರುವ ಎಲ್ಲಾ ಕೊರೊನಾ ನಿಯಮಗಳನ್ನು ಅನುಸರಿಸಲಾಗುವುದು, ಮಾಸ್ಕ್, ದೈಹಿಕ ಅಂತರ ಕಾಪಾಡುವುದು ಮುಖ್ಯ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪ್ರತಿ ನಾಟಕಕ್ಕೆ 100 ರೂಪಾಯಿ ಟಿಕೆಟ್ ದರ ಇರಲಿದೆ. ಹದಿನೈದು ದಿನಗಳ ಪಾಸ್ ಪಡೆದುಕೊಂಡವರಿಗೆ 1,000 ರೂಪಾಯಿಗೆ ಪಾಸ್ ದೊರೆಯಲಿದೆ.
ಇದನ್ನೂ ಓದಿ: ಪ.ಜಾತಿ, ಪ.ಪಂಗಡಗಳ ಬಡ್ತಿ ಸಮಸ್ಯೆ ನಿವಾರಿಸಿ, ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿಮಾಡಿ: ಸಿದ್ದರಾಮಯ್ಯ ಪತ್ರ
