Homeಚಳವಳಿದಿಲ್ಲಿಯಲ್ಲಿ ನಾನುಗೌರಿ ವಿಶೇಷ ವರದಿ: ಚಳಿ-ಮಳೆಗೆ ಅಳುಕದೆ ಅದೇ ಉತ್ಸಾಹದಲ್ಲಿ ಅನ್ನದಾತರು

ದಿಲ್ಲಿಯಲ್ಲಿ ನಾನುಗೌರಿ ವಿಶೇಷ ವರದಿ: ಚಳಿ-ಮಳೆಗೆ ಅಳುಕದೆ ಅದೇ ಉತ್ಸಾಹದಲ್ಲಿ ಅನ್ನದಾತರು

ಪತ್ರಕರ್ತರಾಗಿ ಎದುರಾದ ಕಷ್ಟವೆಂದರೆ, ನಾವು ಮಾಧ್ಯಮದವರು ಎಂದ ಕೂಡಲೇ ರೈತರು ಮಾತನಾಡಲು ಹಿಂದೇಟು ಹಾಕುತ್ತಾರೆ. ಪ್ರಗತಿಪರ-ಜನಪರ ಮಾಧ್ಯಮ ಎಂದು ಖಾತ್ರಿಪಡಿಸಿಕೊಂಡ ನಂತರವೇ ಅವರು ಮಾತಿಗಿಳಿಯುತ್ತಾರೆ. ಸಣ್ಣ ಮಕ್ಕಳೂ ಸಹ..

- Advertisement -
- Advertisement -

ವಿವಾದಿತ ಕೃಷಿ ಕಾನೂನುಗಳ ರದ್ದತಿಗೆ ಆಗ್ರಹಿಸಿ ದೆಹಲಿ ಗಡಿಯಲ್ಲಿ ಕಳೆದ 42 ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ರೈತ ಹೋರಾಟಗಾರರ ಕುರಿತು ಬೆಂಗಳೂರಿನಲ್ಲಿ ಕುಳಿತು ವರದಿ ಮಾಡುತ್ತಿದ್ದ ನಾವುಗಳು, ಸುದ್ದಿಗಾಗಿ ದೆಹಲಿ ಕೇಂದ್ರಿತ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳ ಕೆಲವು ಅಥೆಂಟಿಕ್ ಮೂಲಗಳನ್ನು ಅರಸುತ್ತಿದ್ದೆವು. ಕೆಲವು ಮಾಧ್ಯಮಗಳು ರೈತ ಪ್ರತಿಭಟನೆಯ ಬಗ್ಗೆ ನೈಜ ವಿಚಾರಗಳನ್ನು ವರದಿ ಮಾಡುತ್ತಿದ್ದರೆ, ಮತ್ತೆ ಕೆಲವು ಕಾರ್ಪೊರೆಟ್ ಹಿಂಬಾಲಕ ಮಾಧ್ಯಮಗಳು ರೈತರ ಬಗ್ಗೆ, ರೈತ ಪ್ರತಿಭಟನೆಯ ತಪ್ಪು ಮತ್ತು ಸುಳ್ಳು ಮಾಹಿತಿಗಳನ್ನು ಪ್ರಚಾರ ಮಾಡಲೆಂದೇ ವರದಿ ಮಾಡುತ್ತಿವೆ. ಈ ಹಿನ್ನೆಲೆಯಲ್ಲಿ ನ್ಯಾಯಪಥ – ನಾನುಗೌರಿ.ಕಾಂ ತಂಡ ದೆಹಲಿಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಗಳ ಬಗ್ಗೆ ಪ್ರತ್ಯಕ್ಷವಾಗಿ ಕಂಡು ಓದುಗರಿಗೆ ತಿಳಿಸುವ ಪ್ರಯತ್ನಕ್ಕೆ ಮುಂದಾಗಿದೆ.

ಬೆಂಗಳೂರಿನಿಂದ ದೆಹಲಿಗೆ ಹೊರಟ ನಮಗೆ ರೈಲು ಪ್ರಯಾಣದಲ್ಲಿ ಸಿಕ್ಕ ಹಲವಾರು ಸಹ ಪ್ರಯಾಣಿಕರ ಮಾತು ರೈತರ ಪ್ರತಿಭಟನೆಗಳ ಬಗ್ಗೆ, ಪಂಜಾಬ್ ಮತ್ತು ಹರಿಯಾಣ ರೈತರು ದೆಹಲಿಯ ಗಡಿಗಳನ್ನು ಬಂದ್ ಮಾಡಿದ್ದರ ಬಗ್ಗೆಯೇ ಇದ್ದವು. ಯಾರೊಬ್ಬರೂ ಈ ಪ್ರತಿಭಟನೆಗಳ ಬಗ್ಗೆ ಅಪಸ್ವರವೆತ್ತಿದ್ದು ಕೇಳಿಸಲಿಲ್ಲ. ಬದಲಿಗೆ ರೈತರ ಹೋರಾಟವನ್ನು ಎಲ್ಲರೂ ಸಮರ್ಥಿಸುತ್ತಿದ್ದವರೆ. ನಾವು ರೈತರ ಮಕ್ಕಳು ಎಂದು ಕೆಲವರು ಹೇಳಿದರೆ, ಈಗ ನಾವು ಕೃಷಿ ಮಾಡದೇ ಇರಬಹುದು ಹಾಗೆಂದು ರೈತರೇ ಇಲ್ಲದಿದ್ದರೆ ಹೊಟ್ಟೆಗೆ ತಿನ್ನುವುದಾದರೂ ಏನು ಎಂಬ ಸಾಮಾನ್ಯ ತಿಳಿವಳಿಕೆಯ ಮಾತುಗಳು ಕೇಳುತ್ತಿದ್ದವು. ಇದರಿಂದಲೇ ಗೊತ್ತಾಗಿದ್ದು: ಟ್ರೋಲ್ ಸೇನೆಗಳ ರೈತರ ವಿರುದ್ಧದ ಸಂಚು ಫಲ ನೀಡಿಲ್ಲವೆಂದು.

“ರೈತರು ಏಕೆ ಕಾಯ್ದೆಗಳನ್ನು ವಿರೋಧಿಸುತ್ತಿದ್ದಾರೆ ಎಂಬುದನ್ನು ಸರ್ಕಾರ ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು. ಮಸೂದೆಗಳು ರೈತರ ಪರವಾಗಿವೆ ಎಂದು ಸರ್ಕಾರ ಹೇಳುತ್ತಿದೆ. ಆದರೆ, ರೈತರೇ ನಮಗೆ ಆ ಮಸೂದೆಗಳು ಬೇಡ ಎನ್ನುವಾಗ ಸರ್ಕಾರ ಯಾರಿಗಾಗಿ ಕಾನೂನುಗಳನ್ನು ಜಾರಿಗೊಳಿಸಿದೆ” ಎಂಬುದು ರೈಲಿನಲ್ಲಿ ಸಹ ಪ್ರಯಾಣಿಕರಾಗಿದ್ದ ಪಶ್ಚಿಮ ಬಂಗಾಳದ ಹಿಂದಿ ಶಿಕ್ಷಕಿಯೊಬ್ಬರ ಪ್ರಶ್ನೆ.

PC : naanugauri.com

ದೆಹಲಿ ತಲುಪಿದ ನಮಗೆ ಅಲ್ಲಿನ ಚಳಿ ಮತ್ತು ಮಳೆ ಎರಡೂ ಒಟ್ಟಿಗೆ ಸ್ವಾಗತ ಕೋರಿದವು. ಇಂತಹ ವಾತಾವರಣದಲ್ಲಿ ರೈತರು ಆ ಬಟಾಬಯಲಿನಲ್ಲಿ ಯಾವ ರೀತಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂಬ ಪ್ರಶ್ನೆ ಮತ್ತು ಸೋಜಿಗ ನಮ್ಮನ್ನು ಕಾಡದೆ ಇರಲಿಲ್ಲ. ಮದ್ಯಾಹ್ನದ ಹೊತ್ತಿಗೆ ದೊಡ್ಡ ಮಟ್ಟದಲ್ಲಿ ರೈತರು ಜಮೆಯಾಗಿರುವ ಸಿಂಘು ಗಡಿಗೆ ತಲುಪಿದೆವು. ಅಲ್ಲಿನ ಪರಿಸ್ಥಿತಿ ನಮ್ಮ ತಂಡಕ್ಕೆ ಅತೀವ ಆಶ್ಚರ್ಯವನ್ನು ತಂದಿದ್ದು ನಿಜ.

ಹೌದು, ಹನಿಯುತ್ತಿರುವ ಜಿಟಿ ಜಿಟಿ ಮಳೆಯಲ್ಲಿಯೇ ರೈತರು ಪ್ರತಿಭಟನೆ ನಡೆಸುತ್ತಿದ್ದರು. ಸೇವೆ ಮಾಡುವ ಉದ್ದೇಶದಿಂದ ಬಂದಿರುವ ಹಲವಾರು ಮಂದಿ ಸ್ವಯಂಸೇವಕರು ಮಳೆ ಎನ್ನದೆ ತಮ್ಮ ಸೇವೆ ಮುಂದುವರೆಸುತ್ತಿದ್ದಾರೆ. ರೈತರಿಗೆ ರೈನ್ ಕೋಟ್‌ ಕೊಡುತ್ತಿದ್ದಾರೆ. ವೇದಿಕೆ ಮೇಲೆ ಮಾತನಾಡುತ್ತಿದ್ದವರ ಧ್ವನಿಯಲ್ಲಾಗಲಿ, ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದ ರೈತರಲ್ಲಾಗಲಿ 42 ದಿನಗಳ ಪ್ರತಿಭಟನೆಯ ಸುಸ್ತು ಕಾಣಿಸುತ್ತಿರಲಿಲ್ಲ. ಯಾವ ಸಂಗತಿಯೂ ರೈತರನ್ನು ಎದೆಗುಂದಿಸಿಲ್ಲ.

ಸಿಂಘು ಗಡಿಯ ಪ್ರತಿಭಟನೆಯ ಸ್ಥಳದಲ್ಲಿ ಶಸ್ತ್ರಸಜ್ಜಿತ ಪೊಲೀಸರ ಸಂಖ್ಯೆ ಹೆಚ್ಚಾಗಿದೆ. ಯಾವ ಕ್ಷಣದಲ್ಲಿ ಏನಾಗಲಿದೆಯೋ ಎಂಬಂತೆ ವಾಹನಗಳನ್ನು ಸಿದ್ಧಮಾಡಿಕೊಂಡು ಕಾಯುತ್ತಿದ್ದಾರೆ. ಇವರ್‍ಯಾರಿಗೂ ರೈತರು ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ. ತಮ್ಮ ಪಾಡಿಗೆ ತಾವು ಪ್ರತಿಭಟಿಸುತ್ತಾ, ಪ್ರತಿಭಟನೆಗೆ ಬಂದವರಿಗೆ ಊಟ, ಚಹಾ, ಇರಲು ಸ್ಥಳದ ವ್ಯವಸ್ಥೆ ಮಾಡುತ್ತಿದ್ದಾರೆ.

ಸ್ಥಳದಲ್ಲಿ ಪ್ರತಿಭಟನಾಕಾರರ ಸಂಖ್ಯೆಯಷ್ಟೇ ಸ್ವಯಂ ಸೇವಕರ ಸಂಖ್ಯೆಯು ಇದೆ.

ದೆಹಲಿಯಲ್ಲಿ ಎಂಥವರೂ ಕಾಯಿಲೆ ಬೀಳುವಂತ ವಾತಾವರಣ ಇದೆ. ಹೀಗಾಗಿ ರೈತರ ಆರೋಗ್ಯವನ್ನು ನೋಡಿಕೊಳ್ಳಲು ಪ್ರತಿಭಟನೆ ಆರಂಭವಾದ ದಿನದಿಂದಲೂ ಆಂಬುಲೆನ್ಸ್ ಜೊತೆಗೆ, ಸೇವೆಗೆ ಸಿದ್ಧವಾಗಿ ವೈದ್ಯರ ತಂಡಗಳು ಇಲ್ಲಿವೆ. ಉಚಿತವಾಗಿ ಔಷಧೋಪಚಾರ ಮಾಡಲಾಗುತ್ತಿದೆ. ಭ್ರಾತೃತ್ವದ ಭಾವನೆ ಕಣ್ಣಾರೆ ಕಾಣಸಿಗುವ ಜಾಗ ಇದಾಗಿದೆ.

ರೈತರ ಬಟ್ಟೆ ಒಗೆದುಕೊಡಲು ವಾಷಿಂಗ್ ಮಿಷಿನ್‌ಗಳನ್ನು ಇಟ್ಟುಕೊಂಡಿರುವ ಮೂರು ತಂಡಗಳಿವೆ. ಈ ತಂಡದ ಸದಸ್ಯರು ರೈತರ ಬಟ್ಟೆಗಳನ್ನು ಒಗೆದು, ಒಣಗಿಸಿಕೊಡುವುದನ್ನು ಮಾಡುತ್ತಾರೆ. ಬಟ್ಟೆ ಹರಿದುಕೊಂಡವರಿಗೆ ಹೊಲಿಗೆ ಹಾಕಿ ಕೊಡಲು ಎರಡು ಕಡೆಗಳಲ್ಲಿ ಹೊಲಿಗೆ ಯಂತ್ರಗಳನ್ನು ಇಟ್ಟುಕೊಂಡು ಕುಳಿತಿರುವ ಸ್ವಯಂಸೇವಕರಿದ್ದಾರೆ. ಗಮನಿಸಬೇಕಾದ ವಿಚಾರವೆಂದರೆ ಇವರ್‍ಯಾರು ಲಕ್ಷಾಂತರ ರುಪಾಯಿ ಸಂಬಳ ಪಡೆಯುವವರಲ್ಲ. ಹೊಟ್ಟೆಪಾಡಿಗೆ ಬಟ್ಟೆ ಹೊಲಿಯುತ್ತಿದ್ದವರು. ಇದೊಂದು ಸೇವೆ ಎಂದು ಹೇಳುತ್ತಾರೆ ಈ ಮಂದಿ.

PC : naanugauri.com

ಪ್ರತಿಭಟನಾ ಸ್ಥಳದಲ್ಲಿ ಬರೀ ಪುರುಷರಷ್ಟೇ ಅಲ್ಲ. ರೈತ ಮಹಿಳೆಯರು, ಅವರ ಮಕ್ಕಳು, ವಿದ್ಯಾರ್ಥಿನಿಯರು ಇದ್ದಾರೆ. ಇವರುಗಳಿಗಾಗಿ ಪ್ರತ್ಯೇಕವಾದ ಟೆಂಟ್‌ಗಳನ್ನು ಹಾಕಲಾಗಿದೆ. ಕೆಲವು ಮಹಿಳಾ ಸಂಘಟನೆಗಳು ತಾವೇ ಟೆಂಟ್‌ಗಳನ್ನು ನಿರ್ಮಿಸಿಕೊಂಡಿದ್ದರೆ, ಮತ್ತೆ ಕೆಲವರು ಸ್ಥಳದಲ್ಲಿ ಮಹಿಳೆಯರಿಗೆ ಮಾತ್ರ ಮೀಸಲಿರುವ ಜಾಗಗಳಲ್ಲಿ ವಾಸವಿದ್ದು, ರೈತ ಪ್ರತಿಭಟನೆಗೆ ತಮ್ಮ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.

ಪ್ರತಿಭಟನಾ ಸ್ಥಳ ಅದೇ ಒಂದು ಪಟ್ಟಣವಾಗಿ ಮಾರ್ಪಾಡಾಗಿರುವುದು ಒಂದು ವಿಶೇಷ ಸಂಗತಿ. ಇಷ್ಟು ದಿನ ಪಂಜಾಬ್, ಹರಿಯಾಣ, ಹಿಮಾಚಲ ಪ್ರದೇಶಗಳನ್ನು ದೆಹಲಿಗೆ ಕೂಡುವ ರಾಷ್ಟ್ರೀಯ ಹೆದ್ದಾರಿಗಳ ಜಾಗ, ಈಗ ಹೊಸ ಬಗೆಯಲ್ಲಿ, ಹೊಸದಾದ ರೈತರ ಪಟ್ಟಣವಾಗಿ ಬದಲಾಗಿದೆ. ಇಲ್ಲಿ ಹಲವು ರೀತಿಯ ವ್ಯವಸ್ಥೆಗಳು ಈಗ ತಲೆಯೆತ್ತಿವೆ. ಆಸ್ಪತ್ರೆ, ಹೋಟೆಲ್, ಗ್ರಂಥಾಲಯ, ಬಟ್ಟೆ, ಚಪ್ಪಲಿ, ಮೊಬೈಲ್ ಎಲ್ಲಾ ರೀತಿಯ ಅಂಗಡಿಗಳು ಆರಂಭವಾಗಿವೆ. ಕೆಲವು ಉಚಿತವಾಗಿದ್ದರೆ, ಮತ್ತೆ ಕೆಲವಕ್ಕೆ ಹಣ ಪಾವತಿಸಬೇಕು. ಎಲ್ಲೂ ಸುಲಿಗೆಯಿಲ್ಲ ಎನ್ನುವುದು ಮುಖ್ಯ.

ಇಷ್ಟೊಂದು ಜನ ಸೇರಿರುವ ಕಡೆ ಸ್ವಚ್ಛತೆ ಹೇಗೆ ಎಂಬ ಪ್ರಶ್ನೆ ನಮಗೂ ಕಾಡಿತ್ತು. ಅದಕ್ಕೆ ಉತ್ತರ ಅಲ್ಲಿ ಇಳಿದ ಕೂಡಲೇ ದೊರೆಯಿತು. ಸಾಲುಸಾಲಾಗಿ ಇ-ಶೌಚಾಲಯಗಳನ್ನು ಇರಿಸಲಾಗಿದೆ. ಕಸ ಬಾಚಲು, ಸ್ವಚ್ಛತೆ ಕಾಪಾಡಲು ನಗರಪಾಲಿಕೆಯ ನೌಕರಿಗಾಗಿ ಕಾಯುವುದಿಲ್ಲ ಇಲ್ಲಿ. ಸ್ವಯಂಸೇವಕರೆ ಎಲ್ಲಾ ಕೆಲಸಗಳನ್ನು ಮಾಡಿ ಮುಗಿಸುತ್ತಾರೆ. ಎಷ್ಟೇ ಸ್ವಚ್ಛತೆ ಮಾಡಿದರೂ ಮಳೆ ಮತ್ತೆ ಮತ್ತೆ ರೈತರನ್ನು ಕಾಡುತ್ತಿದೆ. ಮಳೆ, ಕೆಸರಿನಲ್ಲಿ ಓಡಾಡುವ, ಅಲ್ಲಿಯೇ ಮತ್ತೆ ಮತ್ತೆ ರ್‍ಯಾಲಿಗಳನ್ನು ಮಾಡುವ ಇವರ ಹೋರಾಟ ಎಂಥವರನ್ನು ಬೆರಗುಗೊಳಿಸುತ್ತದೆ.

ಪ್ರತಿಭಟನೆ ಒಂದು ಜಾಗದಲ್ಲಿ, ಒಂದು ಕಡೆ ಅಥವಾ ಒಂದು ವೇದಿಕೆಯಲ್ಲಿ ಮಾತ್ರ ನಡೆಯುತ್ತಿಲ್ಲ. 10 ಕಿ.ಮೀಗಳಿಗೂ ಉದ್ದದ ಪ್ರತಿಭಟನೆ ನಡೆಯುತ್ತಿದೆ. ಇದರ ಉದ್ದ ಇನ್ನೂ ಜಾಸ್ತಿ ಇರಬಹುದು. ಎರಡು ಮುಖ್ಯ ವೇದಿಕೆಗಳಿದ್ದರೆ, ಅಲ್ಲಲ್ಲಿ ಪುಟ್ಟ, ಪುಟ್ಟ ವೇದಿಕೆಗಳು ಹಲವಾರಿವೆ. ಇಲ್ಲಿ ಜನರನ್ನು ಒಟ್ಟಾಗಿರಿಸಲು ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಚಳವಳಿಯ ಗೀತೆಗಳನ್ನು ಹಾಡಲಾಗುತ್ತದೆ. ವಿವಾದಿತ ಕೃಷಿ ಮಸೂದೆಗಳ ಬಗ್ಗೆ ಚರ್ಚೆ ನಡೆಸಲಾಗುತ್ತದೆ. ತಾವು ಯಾಕೆ ಕಾಯ್ದೆಯನ್ನು ವಿರೋಧಿಸುತ್ತಿದ್ದೇವೆ ಎಂಬುದನ್ನು ವಿವರವಾಗಿ ತಿಳಿಸಲಾಗುತ್ತದೆ. ರೈತರಿಂದ ಹಿಡಿದು ರೈತ ಮುಖಂಡರು, ಪ್ರತಿಭಟನೆ ಬೆಂಬಲಿಸುವವರು ಕೂಡ ವೇದಿಕೆ ಮೇಲೆ ಬಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಪ್ರತಿಭಟನಾಕಾರರಿಗೆ ಊಟದ ವ್ಯವಸ್ಥೆಯನ್ನು ಹಲವಾರು ಸಂಘಟನೆಗಳು, ಸ್ವಯಂ ಸೇವಾ ಸಂಘಗಳು ಮಾಡುತ್ತಿವೆ. ಮಾರು ದೂರಕ್ಕೊಂದರಂತೆ ಊಟದ ಲಂಗರ್‌ಗಳು ಕಾಣಿಸುತ್ತವೆ, ಒಂದೊಂದು ಲಂಗರ್‌ಗಳಲ್ಲೂ ಒಂದೊಂದು ಬಗೆಯ ಆಹಾರ ನೀಡಲಾಗುತ್ತದೆ. ಪ್ರತಿಭಟನಾ ಸ್ಥಳಕ್ಕೆ ಭೇಟಿ ಕೊಟ್ಟು ಯಾರನ್ನಾದರೂ ಮಾತನಾಡಿಸಲು ಆರಂಭಿಸುತ್ತಿದ್ದಂತೆ ಮೊದಲು ಹೇಳುವ ಮಾತು. ಪೆಹಲೇ ಖಾನಾ ಖಾಲಿಜಿಯೇ (ಮೊದಲು ಊಟ ಮಾಡಿ) ಎಂಬುದು. ಹಾಗಾಗಿ ಪ್ರತಿಭಟನಾ ಸ್ಥಳದಲ್ಲಿ ರೈತರಿಗೆ, ಪ್ರತಿಭಟನೆಯ ಬೆಂಬಲಿಗರಿಗೆ ಆಹಾರದ ಕೊರತೆ ಖಂಡಿತ ಇಲ್ಲ. ಆದರೆ ಕಂಪ್ಯೂಟರ್ ಪರದೆ ಮುಂದೆ ಕುಳಿತು ಇದರ ಬಗ್ಗೆ ಕುಹಕವಾಡಿದ ಮಂದಿಯೂ ಇದ್ದರು ಎಂಬುದನ್ನು ನಾವು ಮರೆಯುವಂತಿಲ್ಲ.

PC : naanugauri.com

ಪತ್ರಕರ್ತರಾಗಿ ತೆರಳಿದ ನಮಗೆ ಎದುರಾದ ಒಂದು ಕಷ್ಟ ಎಂದರೆ, ನಾವು ಮಾಧ್ಯಮದವರು ಎಂದಕೂಡಲೇ ಪ್ರತಿಭಟನಾಕಾರರು ಮಾತನಾಡಲು ಹಿಂದೇಟು ಹಾಕುವುದು. ಐಡಿ ಕಾರ್ಡ್ ನೋಡಿದ ಮೇಲೆಯೇ ಮತ್ತು ಪ್ರಗತಿಪರ-ಜನಪರ ಮಾಧ್ಯಮ ಎಂದು ಖಾತ್ರಿಪಡಿಸಿಕೊಂಡ ನಂತರವೇ ಅವರು ಮಾತನಾಡಲು ಆರಂಭಿಸುವುದು. ಚಿಕ್ಕ ವಯಸ್ಸಿನ ಮಕ್ಕಳು ಕೂಡ ಯಾವ ಮಾಧ್ಯಮ ಎಂಬುದನ್ನು ಖಚಿತಪಡಿಸಿಕೊಂಡು ನಂತರ ಮಾತನಾಡುತ್ತಾರೆ. ಈ ಮೂಲಕ ಗೋಧಿ ಮೀಡಿಯಾ ವಿರುದ್ಧ ತಾವೆಷ್ಟು ನಿಷ್ಠುರವಾಗಿದ್ದೇವೆ ಎಂಬುದನ್ನು ತಿಳಿಸುತ್ತಾರೆ.

ಮುಂದೆ ಗುಂಡು ಇದೆ ಎಂದು ಗೊತ್ತಿದೆ ಹಾಗೆಂದು ಯುದ್ಧರಂಗದಿಂದ ವಾಪಾಸ್ ಆಗಲಾರೆ ಎನ್ನುವ ಭಿತ್ತಿಪತ್ರಗಳನ್ನು ಪ್ರದರ್ಶಿಸುತ್ತಾ ಅಂತಹ ಚಳಿ, ಗಾಳಿಯಲ್ಲಿ ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿರುವ ರೈತರು ಮತ್ತು ರೈತ ಮಕ್ಕಳ ಹೋರಾಟ ನಿಜಕ್ಕೂ ಕಣ್ಣಾಲಿಯಲ್ಲಿ ನೀರುಕ್ಕಿಸುತ್ತದೆ. ದೆಹಲಿಯಲ್ಲಿ ಚಳಿ ನಿಜಕ್ಕೂ ಕೊರಯುತ್ತಿದೆ. ಜೊತೆಗೆ ಮಳೆ ಬೇರೆ ಜಿನುಗುತ್ತಿದೆ. ಇವುಗಳ ನಡುವೆ ಅನ್ನದಾತರ ಪಟ್ಟು ಎಂಥವರನ್ನು ಒಮ್ಮೆ ಆಶ್ಚರ್ಯಕ್ಕೆ ನೂಕುತ್ತದೆ.


ಇದನ್ನೂ ಓದಿ: ಈ ಬಾರಿ ಕೆಂಪುಕೋಟೆಯಲ್ಲಿ ಮೋದಿ ಧ್ವಜಾರೋಹಣ ಮಾಡಲು ಬಿಡುವುದಿಲ್ಲ: ಟ್ರಾಕ್ಟರ್ ರ್ಯಾಲಿಯಲ್ಲಿ ರೈತರ ಎಚ್ಚರಿಕೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...

‘ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧಗೊಳಿಸಬೇಕು’; ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯ

ಭಾರತದಲ್ಲಿ ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು, ಹಂಚಿಕೆಯ ಆರೈಕೆ ಜವಾಬ್ದಾರಿಗಳನ್ನು ಒತ್ತಿಹೇಳಲು ಕಾನೂನನ್ನು ಜಾರಿಗೆ ತರಬೇಕೆಂದು ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಂದೆ ಉದ್ಯೋಗ...

ಬಿಜೆಪಿ ಇತರ ರಾಜ್ಯಗಳ ಅಕ್ರಮ ಮತದಾರರನ್ನು ಸೇರಿಸುತ್ತಿದೆ : ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಮಾ.31) ಬಿಜೆಪಿ ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಅಕ್ರಮ ಮತದಾರರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪಶ್ಚಿಮ...

ಬಿಹಾರ: ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ; ಹಲ್ಲೆ ಮಾಡಿ ವಿಡಿಯೋ ಹರಿಬಿಟ್ಟ ದುಷ್ಟರು: ಇಬ್ಬರ ಬಂಧನ 

ಬಿಹಾರದ ನಳಂದ ಜಿಲ್ಲೆಯಲ್ಲಿ ನಾಚಿಕೆಗೇಡಿನ ಮತ್ತು ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ನೂರ್ಸರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಮೂವರು ಪುರುಷರು ವಿವಾಹಿತ ಮಹಿಳೆಯ ಮೇಲೆ ಸಾರ್ವಜನಿಕವಾಗಿ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ದೌರ್ಜನ್ಯ ವಿರೋಧಿಸಿ...

‘ಹಿಂದುತ್ವ ಉಗ್ರವಾದವನ್ನು ಏಕೆ ನಿರ್ಲಕ್ಷಿಸಬೇಕು..?’; ಸಂಸತ್ತಿನಲ್ಲಿ ಪ್ರಶ್ನಿಸಿದ ರುಹುಲ್ಲಾ ಮೆಹದಿ

"ದೇಶದಲ್ಲಿ ಹೆಚ್ಚುತ್ತಿರುವ ಬಲಪಂಥೀಯ ಉಗ್ರವಾದವನ್ನು ನಿರ್ಲಕ್ಷಿಸಿ ಎಡಪಂಥೀಯ ಬೆದರಿಕೆಗಳ ಮೇಲೆ ಮಾತ್ರ ಗಮನಹರಿಸಲಾಗುತ್ತಿದೆ" ಎಂದು ಲೋಕಸಭೆಯಲ್ಲಿ ಜಮ್ಮು-ಕಾಶ್ಮೀರದ ಶ್ರೀನಗರ ಸಂಸದ ಆಗಾ ಸೈಯದ್ ರುಹುಲ್ಲಾ ಮೆಹದಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಲೆ...

ವಿರೋಧದ ನಡುವೆಯೂ ಟ್ರಾನ್ಸ್‌ಜೆಂಡರ್ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ

ತೀವ್ರ ವಿರೋಧಗಳ ನಡುವೆಯೂ ಟ್ರಾನ್ಸ್‌ಜೆಂಡರ್‌ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದಾರೆ ಎಂದು ಕೇಂದ್ರ ಕಾನೂನು ಸಚಿವಾಲಯ ಸೋಮವಾರ (ಮಾ. 30) ಗೆಜೆಟ್ ಅಧಿಸೂಚನೆಯಲ್ಲಿ...

ಮಶಾದ್ ವಿಮಾನ ನಿಲ್ದಾಣದ ಮೇಲೆ ಅಮೆರಿಕ ದಾಳಿ: ದೆಹಲಿಗೆ ತೆರಳುತ್ತಿದ್ದ ನೆರವು ವಿಮಾನಕ್ಕೆ ಡಿಕ್ಕಿ: ಇದು ‘ಯುದ್ಧ ಅಪರಾಧ’ ಎಂದ ಇರಾನ್ 

ಇರಾನ್‌ನ ಮಶಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಮೆರಿಕದ ವಾಯುದಾಳಿಯ ಸಂದರ್ಭದಲ್ಲಿ ನವದೆಹಲಿಗೆ ಹಾರಲು ನಿಗದಿಯಾಗಿದ್ದ ಮಹಾನ್ ಏರ್ ವಿಮಾನವು ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ.  ಈ ವಿಮಾನವು ಔಷಧಿಗಳು ಸೇರಿದಂತೆ ಮಾನವೀಯ ನೆರವು ಸಾಗಣೆಗೆ...

ಪ್ಯಾಲೆಸ್ತೀನಿಯರಿಗೆ ಮರಣದಂಡನೆ ವಿಧಿಸುವ ಕಾನೂನು ಅಂಗೀಕಾರ : ಇಸ್ರೇಲ್ ಕ್ರಮಕ್ಕೆ ಜಾಗತಿಕ ಖಂಡನೆ

ಮಾರಣಾಂತಿಕ ದಾಳಿಗಳ ಅಪರಾಧ ಸಾಬೀತಾದ ಪ್ಯಾಲೆಸ್ತೀನಿಯರಿಗೆ ಮರಣದಂಡನೆಯನ್ನು ಕಡ್ಡಾಯ ಶಿಕ್ಷೆಯನ್ನಾಗಿ ನಿಗದಿಪಡಿಸಿದ ಇಸ್ರೇಲ್‌ನ ಹೊಸ ಕಾನೂನನ್ನು ಮಾನವ ಹಕ್ಕುಗಳ ಸಂಘಟನೆಗಳು, ವಿವಿಧ ರಾಷ್ಟ್ರಗಳ ನಾಯಕರು ಸೇರಿದಂತೆ ಜಾಗತಿಕ ಸಮುಯದಾಯ ತೀವ್ರವಾಗಿ ವಿರೋಧಿಸಿದೆ. ಈ...