ಈ ಬಾರಿ ಜನವರಿ 26 ರಂದು ದೆಹಲಿಯ ಕೆಂಪುಕೋಟೆಯ ಮೇಲೆ ಪ್ರಧಾನಿ ಮೋದಿಯವರಿಗೆ ಧ್ವಜಾರೋಹಣ ಮಾಡಲು ಬಿಡುವುದಿಲ್ಲ. ಕೆಂಪು ಕೋಟೆಯ ಮೇಲೆ ಈ ಬಾರಿ ರೈತರು ತಮ್ಮ ಧ್ವಜ ಹಾರಿಸಲಿದ್ದಾರೆ ಎಂದು ರೈತ ಮುಖಂಡರೊಬ್ಬರು ತಿಳಿಸಿದ್ದಾರೆ.
ಗಣರಾಜ್ಯೋತ್ಸವದ ಪೂರ್ವಭಾವಿಯಾಗಿ ಇಂದು ದೆಹಲಿಯ ಗಡಿಗಳಲ್ಲಿ ಟ್ರಾಕ್ಟರ್ ರ್ಯಾಲಿ ಆರಂಭಿಸಿದ ರೈತರು “ಸರ್ಕಾರಕ್ಕೆ ಕಾಳಜಿಯಿದ್ದರೆ ಜನವರಿ 26ರೊಳಗೆ ಈ ಕರಾಳ ಕಾಯ್ದೆಗಳನ್ನು ವಾಪಸ್ ಪಡೆಯಲಿ. ಇಲ್ಲದಿದ್ದರೆ ಮುಂದೆ ನಡೆಯುವ ಹೋರಾಟಗಳಿಗೆ ಸರ್ಕಾರವೇ ಹೊಣೆ” ಎಂದಿದ್ದಾರೆ.
ಇಂದಿನ ಟ್ರ್ಯಾಕ್ಟರ್ ರ್ಯಾಲಿಗೆ ಪಂಜಾಬ್ ಮತ್ತು ಹರಿಯಾಣ ಮೂಲದ ಸುಮಾರು 85 ಸಾವಿರಕ್ಕೂ ಹೆಚ್ಚು ಟ್ರ್ಯಾಕ್ಟರ್ಗಳು ಭಾಗವಹಿಸಿವೆ. ಈಗಾಗಲೇ ಸಿಂಘು, ಟಿಕ್ರಿ ಮತ್ತು ಗಾಜಿಪೂರ್ ಪ್ರತಿಭಟನಾ ಸ್ಥಳಗಳಿಂದ ರ್ಯಾಲಿ ಹೊರಟಿದ್ದು, ಪಂಜಾಬ್, ಹರಿಯಾಣ, ಉತ್ತರ ಪ್ರದೇಶದ ರೈತರು ತಮ್ಮ ಟ್ರ್ಯಾಕ್ಟರ್ಗಳೋಂದಿಗೆ ರ್ಯಾಲಿಯ ಜೊತೆಗೂಡಿದ್ದಾರೆ.
ಈ ಕುರಿತು ನಾನುಗೌರಿ.ಕಾಂ ನೊಂದಿಗೆ ಮಾತನಾಡಿದ ರೈತ ಮುಖಂಡ ರಿಜಿಂದರ್ ಸಿಂಗ್, “ನಾವು ನವೆಂಬರ್ 27ಕ್ಕೆ ಇಲ್ಲಿಗೆ ಬಂದೆವು. ಸರ್ಕಾರ ನಮ್ಮನ್ನು ತಡೆಯಲು ಹಳ್ಳ ತೋಡಿತು, ಮುಳ್ಳುತಂತಿ, ಬ್ಯಾರಿಕೇಡ್ಗಳನ್ನು ಅಡ್ಡ ನಿಲ್ಲಿಸಿತು. ಆದರೂ ಸರ್ಕಾರ ಒಡ್ಡಿದ ಸವಾಲುಗಳನ್ನು ಎದುರಿಸಿ ನಾವು ಇಲ್ಲಿಗೆ ಬಂದಿದೇವೆ. ಇಂದು ಶಾಂತಿಯುತವಾಗಿ ಟ್ರ್ಯಾಕ್ಟರ್ ರ್ಯಾಲಿ ಮಾಡುತ್ತೇವೆ. ಆದರೆ, ಸರ್ಕಾರ ಅದಕ್ಕೂ ತಡೆ ಹಾಕಿದರೇ ಬ್ಯಾರಿಕೇಡ್ಗಳನ್ನು ಉರುಳಿಸಿ ಮುನ್ನುಗ್ಗುತ್ತೇವೆ” ಎನ್ನುತ್ತಾರೆ.
ಇದೊಂದು ರೈತ ಹೋರಾಟಗಾರರ ಶಕ್ತಿ ಪ್ರದರ್ಶನವಾಗಿದೆ. ಇದಕ್ಕೆ ಯಾವುದೇ ತೊಂದರೆಯಾಗದಂತೆ ಸರ್ಕಾರ ನೋಡಿಕೊಳ್ಳಬೇಕು. ದೆಹಲಿಯ ಎಲ್ಲಾ ಗಡಿಗಳಲ್ಲಿ 400 ಕಿ.ಮೀ ಆಸುಪಾಸಿನಲ್ಲಿ ರ್ಯಾಲಿ ನಡೆಯಲಿದೆ ಎಂದು ತಿಳಿಸಿದ್ದಾರೆ.
ಟ್ರಾಕ್ಟರ್ ರ್ಯಾಲಿಯಲ್ಲಿ ಭಾಗವಹಿಸಿರುವ ರೈತ ಮಹಿಳೆಯನ್ನು ಇನ್ನು ಎಷ್ಟು ದಿನ ಹೋರಾಟ ಮಾಡುತ್ತೀರಿ ಎಂದು ಕೇಳಿದರೆ “ನಾವು ಈ ಕಾಯ್ದೆಗಳು ರದ್ದಾಗುವವರೆಗೂ ಇಲ್ಲಿಯೇ ಇರುತ್ತೇವೆ. ಅದಕ್ಕಾಗಿ ಎಷ್ಟು ವರ್ಷಗಳು ತೆಗೆದುಕೊಂಡರೂ ಸರಿಯೇ ಹೋರಾಟದಿಂದ ಹಿಂದೆ ಸರಿಯುವುದಿಲ್ಲ” ಎಂದಿದ್ದಾರೆ.
ಹರಿಯಾಣದ ಇತರ ಭಾಗಗಳಲ್ಲೂ ರೈತರು ಮೂರು ಕೃಷಿ ಕಾನೂನುಗಳನ್ನು ವಿರೋಧಿಸಲು ಗುರುವಾರ ಟ್ರಾಕ್ಟರ್ ಮೆರವಣಿಗೆ ನಡೆಸಲಿದ್ದಾರೆ. ಅಲ್ಲದೆ, ರೈತರ ಟ್ರ್ಯಾಕ್ಟರ್ ಮೆರವಣಿಗೆಯಿಂದಾಗಿ ಕುಂಡ್ಲಿ ಗಡಿಯಿಂದ ಟಿಕ್ರಿ ಗಡಿಯವರೆಗೆ ಸುಮಾರು ನಾಲ್ಕು ಗಂಟೆಗಳ ಕಾಲ ಸಾಮಾನ್ಯ ಸಂಚಾರದ ಮೇಲೆ ಪರಿಣಾಮ ಬೀರಲಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
“ನಾವು ರೈತ ಮೆರವಣಿಗೆಯನ್ನು ಸುರಕ್ಷಿತವಾಗಿ ನಡೆಯುವಂತೆ ಮತ್ತು ಜನರಿಗೆ ಹೆಚ್ಚಿನ ಅನಾನುಕೂಲತೆ ಉಂಟುಮಾಡದೆ ನಡೆಯುವಂತೆ ನೋಡಿಕೊಳ್ಳಲು ಪ್ರಯತ್ನಿಸುತ್ತೇವೆ” ಎಂದು ಹರಿಯಾಣ ಡಿಜಿಪಿ ಮನೋಜ್ ಯಾದವ್ ತಿಳಿಸಿದ್ದಾರೆ.
ಇದನ್ನೂ ಓದಿ: ರೈತ ಹೋರಾಟದ ಕೇಂದ್ರಗಳಾದ ಟಿಕ್ರಿ- ಸಿಂಘು ಗಡಿಗಳು ಹೇಗಿವೆ? ಅವುಗಳ ಹಿನ್ನೆಲೆಯೇನು?