| ಗೌರಿ ಲಂಕೇಶ್ |
03 ಡಿಸೆಂಬರ್, 2008 ( ಕಂಡಹಾಗೆ ಸಂಪಾದಕೀಯದಿಂದ)
ಮೊದಲೇ ಒಂದು ಅಂಶವನ್ನು ಸ್ಪಷ್ಟಪಡಿಸಬೇಕಿದೆ. ಅದೇನೆಂದರೆ ಮಾಲೆಗಾಂವ್ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅರೆಸ್ಟ್ ಆಗಿರುವ ಸಾಧ್ವಿ ಪ್ರಗ್ಯಾ, ಲೆಫ್ಟಿನೆಂಟ್ ಶ್ರೀಕಾಂತ್ ಪುರೋಹಿತ ಮತ್ತು ಇತರರ ಮೇಲೆ ಪೊಲೀಸ್ ದೌರ್ಜನ್ಯ ನಿಲ್ಲಬೇಕು. ಅವರೆಲ್ಲರಿಗೆ ಸೂಕ್ತ ಕಾನೂನು ನೆರವು ನೀಡಬೇಕು. ಅವರ ಮೇಲೆ ಪೊಲೀಸರು ಮಾಡಿರುವ ಆರೋಪಗಳನ್ನು ಸಾಬೀತುಪಡಿಸುವತ್ತ ಸರ್ಕಾರ ನೋಡಿಕೊಳ್ಳಬೇಕು. ಅಕಸ್ಮಾತ್ ಸಾಧ್ವಿ ಮತ್ತಾಕೆಯ ತಂಡ ನಿರ್ದೋಷಿಗಳಾಗಿದ್ದರೆ ಅದನ್ನೂ ಸಾಬೀತುಪಡಿಸಲು ಅವರಿಗೆ ಎಲ್ಲ ಅವಕಾಶಗಳನ್ನು ಮಾಡಿಕೊಡಬೇಕು. ಇದೆಲ್ಲ ಸರಿಯಾಗಿ ನಡೆದ ನಂತರ ಎಲ್ಲರೂ ನ್ಯಾಯಾಲಯದ ತೀರ್ಪಿಗೆ ಬದ್ಧರಾಗಿರಬೇಕು.
ನಾವಾಗಲಿ, ಕಾನೂನು ವ್ಯವಸ್ಥೆಯಲ್ಲಿ ನಂಬಿಕೆ ಹೊಂದಿರುವವರಾಗಲಿ, ಮಾನವ ಹಕ್ಕುಗಳ ಹೋರಾಟಗಾರರಾಗಲಿ ಇದನ್ನು ಮೊದಲ ಬಾರಿ ಹೇಳುತ್ತಿಲ್ಲ. ಬಹಳ ವರ್ಷಗಳಿಂದ ನಮ್ಮೆಲ್ಲರ ನಿಲುವು ಇದೇ ಆಗಿದೆ. ಬಾಂಬ್ ಸ್ಪೋಟ ಆರೋಪಿಗಳ ಮೇಲೆ, ಸಿಮಿ ಸದಸ್ಯರು ಎಂಬ ಸಂಶಯದ ಮೇಲೆ, ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರಬಹುದು ಎಂಬ ನೆಪದಲ್ಲಿ ಸಾವಿರಾರು ಮುಸಲ್ಮಾನರನ್ನು ಪೊಲೀಸರು ಬಂಧಿಸಿದಾಗ ನಾವು ಹೇಳಿದ್ದು ಇದನ್ನೇ. ಈಗ ಸಾಧ್ವಿ, ಪುರೋಹಿತ್ ಮತ್ತು ಇತರರನ್ನು ಕುರಿತು ಹೇಳುವುದೂ ಇದೇ ಮಾತನ್ನೇ.
ಆದರೆ ಆರ್ಎಸ್ಎಸ್, ಬಿಜೆಪಿ, ವಿಶ್ವಹಿಂದೂ ಪರಿಷತ್, ಭಜರಂಗದಳ, ಅಭಿನವ ಭಾರತ್ ಮತ್ತು ಸಂಘ ಪರಿವಾರದ ಇತರೆ ತುಂಡುಗಳು ಮಾತ್ರ ಮೊದಲಿನಿಂದಲೂ ಹೇಗೆ ವರ್ತಿಸಿವೆ ನೋಡಿ.
‘ಸಾಧ್ವಿ ಪ್ರಗ್ಯಾಗೆ ಪೊಲೀಸರು ದೈಹಿಕ ಹಿಂಸೆ ನೀಡಿದ್ದಾರೆ’ ಎಂದು ಅರಚಾಡುತ್ತಿರುವ ಚೆಡ್ಡಿಗಳಿಗೆ ಅದೇ ಪೊಲೀಸರು ಮುಸಲ್ಮಾನ ಆರೋಪಿಗಳ ಮೇಲೆ ದೌರ್ಜನ್ಯ ನಡೆಸಿದ್ದು ಕಾಣಿಸಲಿಲ್ಲ. ಈಗ ಪ್ರಗ್ಯಾಳಿಗೆ ಕಾನೂನು ನೆರವು ನೀಡಲು ವಕೀಲರ ಸಂಘಗಳನ್ನು ರೂಪಿಸಿರುವ, ಆಕೆಯ ಪರವಾಗಿ ಕಾನೂನು ಸಮರಕ್ಕೆ ಹಣ ಸಂಗ್ರಹಿಸುತ್ತಿರುವ ಚೆಡ್ಡಿಗಳು ಪ್ರಗ್ಯಾಳಂತೆಯೇ ಭಯೋತ್ಪಾದನೆ ಆರೋಪದ ಮೇಲೆ ಮುಸಲ್ಮಾನ ಯುವಕರನ್ನು ಬಂಧಿಸಿದಾಗ ಪ್ರತಿಕ್ರಿಯಿಸಿದ್ದು ಹೇಗೆ? ಅಫಜಲ್ಗುರು ಪರವಾಗಿ ಯಾವ ವಕೀಲನೂ ವಕಾಲತ್ತು ವಹಿಸಬಾರದೆಂದು ದೆಹಲಿಯ ವಕೀಲರ ಸಂಘ ಫತ್ವಾ ಹೊರಡಿಸಿತ್ತು. ಕೊನೆಗೆ ನ್ಯಾಯಾಲಯವೇ ಅಫಜಲ್ಗುರುಗೆ ಓರ್ವ ವಕೀಲನನ್ನು ನೇಮಿಸಿತ್ತಾದರೂ ಆತ ಎಂದೂ ಆಫಜಲ್ಗುರು ಪರವಾಗಿ ನ್ಯಾಯಾಲಯದಲ್ಲಿ ದನಿ ಎತ್ತಲಿಲ್ಲ. ಪರಿಣಾಮವಾಗಿ ಆತನಿಗೆ ಗಲ್ಲುಶಿಕ್ಷೆ ನೀಡಲಾಯ್ತು.
ಸಂಘ ಪರಿವಾರ ಯಾಕೆ ತನಗೊಂದು ನ್ಯಾಯ, ಇತರರಿಗೊಂದು ನ್ಯಾಯ ಎಂದು ವಾದಿಸುತ್ತದೆ?
ಬೆಂಗಳೂರಿನ ಡಾ.ಹನೀಫ್ರನ್ನು ಸುಳ್ಳು ಅರೋಪಗಳ ಮೇಲೆ ಆಸ್ಟ್ರೇಲಿಯಾದ ಪೊಲೀಸರು ಬಂಧಿಸಿದಾಗ ಹನೀಪರ ಹೆಂಡತಿ ಮತ್ತು ತಾಯಿ ಕಣ್ಣೀರಿಟ್ಟಿದ್ದನ್ನು ನೋಡಿ ತನಗೆ ನಿದ್ದೆ ಬರಲಿಲ್ಲ ಎಂದು ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದರು. ಆ ವಾಕ್ಯವನ್ನು ಚೆಡ್ಡಿಗಳು ಹಲವಾರು ಬಾರಿ ಲೇವಡಿ ಮಾಡಿದ್ದಾರೆ. ಯಾವ ಪರಿ ಎಂದರೆ ಜೈಪುರದಲ್ಲಿ ಸರಣಿ ಬಾಂಬ್ ಸ್ಪೋಟಗೊಂಡಾಗ ‘ಈಗ ನಿಮಗೆ ನೆಮ್ಮದಿಯ ನಿದ್ರೆ ಬರುತ್ತಿದೆಯೇ?’ ಎಂದು ಹಂಗಿಸಿದ್ದರು. ವಾಸ್ತವವಾಗಿ, ಆ ಬಾಂಬ್ ಸ್ಪೋಟಗಳ ‘ಮಸ್ಟರ್ ಮೈಂಡ್’ಗಳೆಂದು ಬಂಧಿಸಲಾಗಿದ್ದ ಹತ್ತಾರು ಮುಸಲ್ಮಾನ ಯುವಕರ ವಿರುದ್ಧ ಯಾವ ಮಾಹಿತಿಯೂ ಇಲ್ಲ ಎಂದು ರಾಜಸ್ತಾನದ ಮುಖ್ಯಮಂತ್ರಿ ವಸುಂಧರ ರಾಜೆ ಅವರ ಬಿಜೆಪಿ ಸರ್ಕಾರವೇ ಬಿಡುಗಡೆಗೊಳಿಸಿದೆ.
ಭಾರತದಲ್ಲಿ ಸಂಭವಿಸುವ ಎಲ್ಲಾ ಭಯೊತ್ಪಾದಕ ಕೃತ್ಯಗಳ ಹಿಂದೆ ಮುಸಲ್ಮಾನರೇ ಇರುತ್ತಾರೆಂಬ ಭಾವನೆ ನಮ್ಮ ಪೊಲೀಸ್ ಮತ್ತು ಮಾಧ್ಯಮಗಳಲ್ಲಿ ಆಳವಾಗಿ ಬೇರುಬಿಟ್ಟಿದೆ. ಆದ್ದರಿಂದಲೇ ಹೈದರಾಬಾದಿನ ಮೆಕ್ಕಾ ಮಸೀದಿಯಲ್ಲಿ ಬಾಂಬ್ ಸ್ಪೋಟಗೊಂಡು ಆರು ಜನ ಮುಸಲ್ಮಾನರೆ ಸತ್ತರೂ, ಮಾಲೆಗಾಂವ್ನ ಮಸೀದಿಯ ಹತ್ತಿರ ಶುಕ್ರವಾರದ ನಮಾಜಿನ ಮೇಲೆ ಬಾಂಬ್ ಸ್ಪೋಟಿಸಿ 37 ಜನ ಮುಸಲ್ಮಾನರೇ ಸಾವಿಗೀಡಾಗಿದ್ದರೂ, ಸಂಜೋತಾ ಟ್ರೈನಿನಲ್ಲಿ ಸ್ಪೋಟ ಸಂಭವಿಸಿ ಸತ್ತ 68 ಜನರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸಲ್ಮಾನರೇ ಇದ್ದರೂ ಆ ಎಲ್ಲಾ ಪ್ರಕರಣಗಳ ಹಿಂದೆ ಮುಸಲ್ಮಾನ್ ಸಂಘಟನೆಗಳೇ ಇದ್ದವು ಎಂಬಂತೆ ಪೊಲೀಸರು ಮತ್ತು ಮಾಧ್ಯಮಗಳು ಬಿಂಬಿಸಿದ್ದವು. ಸಾಮಾನ್ಯ ಜ್ಞಾನ ಇದ್ದವನಿಗೂ ಕೂಡ ಮುಸಲ್ಮಾನ ಭಯೋತ್ಪಾದಕರೇ ಯಾಕೆ ತಮ್ಮ ಪ್ರರ್ಥನಾ ಸ್ಥಳಗಳನ್ನು ಸ್ಪೋಟಿಸುತ್ತಾರೆ. ತಮ್ಮ ಸಮುದಾಯದವರನ್ನು ಕೊಲ್ಲುತ್ತಾರೆ, ಇದರ ಹಿಂದೆ ಬೇರೆ ಸಂಘಟನೆಗಳ ಕೈವಾಡವಿದೆ ಎಂದು ಹೊಳೆಯುತ್ತದೆ. ಆದರೆ ಪೊಲೀಸರು ಮಾತ್ರ ಎಂದಿನಂತೆ ಸಿಮಿ, ಲಷ್ಕರ್, ಜೈಷ್, ತಾಲಿಬಾನ್ ಎಂದೇ ಬಾಯಿಬಡಿದುಕೊಳ್ಳುತ್ತಿರುತ್ತಾರೆ.
ಹಿಂದೂತ್ವವಾದಿಗಳ ಭಂದತನ ಯಾವ ಮಟ್ಟದ್ದೆಂದರೆ ಅದರ ಮುಖವಾಣಿಯಾದ ಪಾಂಚಜನ್ಯದ ಸಂಪಾದಕ ತರುಣ್ ವಿಜಯ್ ಎಂಬಾತ ‘ಒಬ್ಬನೇ ಒಬ್ಬ ಹಿಂದೂ ಕೂಡ ಭಯೋತ್ಪಾದನೆಯನ್ನು ಸಮರ್ಥಿಸುವುದಿಲ್ಲ. ಅದು ನಮ್ಮ ವಂಶವಾಹಿಯಲ್ಲೇ ಇಲ್ಲ. ಈ ವಿಷಯದಲ್ಲಿ ನಮ್ಮ ರಕ್ತವರ್ಗವೇ ಬೇರೆಯದ್ದು’ ಎಂದು ವಾದಿಸಿದ್ದಾನೆ. ಅಷ್ಟೇ ಅಲ್ಲದೆ ‘ಸಾಧ್ವಿ ಪ್ರಗ್ಯಾ ಈಗ ಹೀರೋ ಆಗಿದ್ದಾಳೆ’ ಎಂದು ಹೇಳಿದ್ದಾನೆ. ಇ ತರುಣ್ ವಿಜಯ್ನನ್ನು ಯಾರಾದರೂ ಪ್ರಶ್ನಿಸಬೇಕಿದೆ: ‘ನೀಣೇ ಹೇಳಿರುವಂತೆ ಹಿಂದೂಗಳ ಅನುವಂಶದಲ್ಲಿ ಮತ್ತು ರಕ್ತವರ್ಗದಲ್ಲಿ ಭಯೋತ್ಪಾದನೆ ಇಲ್ಲ ಎಂಬುಬು ನಿಜವಾದರೆ, ಭಯೋತ್ಪಾದನೆ ಇಲ್ಲ ಎಂಬುದು ನಿಜವಾದರೆ, ಬಯೋತ್ಪಾದನೆ ಆರೊಪ ಹೊತ್ತಿರುವ ಪ್ರಗ್ಯಾ ಹಿಂದೂ ಅಲ್ಲ ಎಂದಾಯಿತಲ್ಲವೇ?’
ಈತನಂತೆ ಇನ್ನೊಬ್ಬ ಹಿಂದೂತ್ವವಾದಿ ನಾನಾ ವಾಡೇಕರ್ ಎಂಬಾತ, ಈಗ ಭಾರತ ಸೇನೆಗೆ ಕಳಂಕದಂತಾಗಿರುವ ಲೆಫ್ಟಿನೆಂಟ್ ಕರ್ನಲ್ ಪುರೋಹಿತನನ್ನು ಕ್ರಾಂತಿಕಾರಿ ಮಂಗಲ್ ಪಾಂಡೆಗೆ ಹೋಲಿಸಿದ್ದಾನಲ್ಲದೆ, ‘ಪ್ರಗ್ಯಾ ಮತ್ತು ಪುರೋಹಿತ್ ಬಾಂಬ್ ಸ್ಫೊಟದಲ್ಲಿ ಭಾಗವಹಿಸಿದ್ದು ನಿಜವಾದರೆ ಅವರ ಬಗ್ಗೆ ನಾವು ಹೆಮ್ಮೆಪಡುತ್ತೇವೆ’ ಎಂದಿದ್ದಾನೆ. ಅಮಾಯಕರನ್ನು ಕೊಲ್ಲುವುದು ಅದು ಹೇಗೆ ಹೆಮ್ಮೆಯ ವಿಷಯವಾಗುತ್ತದೆ? ಆದರೆ ತರುಣ್ ವಿಜಯ್ ಮತ್ತು ವಾಡೇಕರ್ ತರಹದವರು ಭೈರಪ್ಪ ಮತ್ತು ಚಿಮೂನ ಸಂತತಿಯವರೇ ಆಗಿರುವುದರಿಂದ ಇವೆಲ್ಲ ಅವರಿಗೆ ಅರ್ಥವಾಗುವುದಿಲ್ಲ ಬಿಡಿ.


