Homeಅಂಕಣಗಳುಬ್ರಾಹ್ಮಣ್ಯ ಎಂಬುದು ಪ್ರಭುತ್ವದ ಸಾಂಸ್ಕೃತಿಕ ಪರಿಭಾಷೆ :  ಮಾಧ್ಯಮ ಇದರ ಸೇವಕ

ಬ್ರಾಹ್ಮಣ್ಯ ಎಂಬುದು ಪ್ರಭುತ್ವದ ಸಾಂಸ್ಕೃತಿಕ ಪರಿಭಾಷೆ :  ಮಾಧ್ಯಮ ಇದರ ಸೇವಕ

- Advertisement -
- Advertisement -

| ಬಿ. ಪೀರ್ ಬಾಷ |

1920ರ ದಶಕದಲ್ಲಿಯೆ ಮಾಧ್ಯಮದ ಹಿಡಿತ ಬ್ರಾಹ್ಮಣ್ಯದ ಕೈಯಲ್ಲಿತ್ತು. ಅಂಬೇಡ್ಕರರು ಪತ್ರಿಕೆ ಆರಂಭಿಸುತ್ತಾರೆಂಬ ಸುದ್ದಿಯೇ ಬಾಲಗಂಗಾಧರ ತಿಲಕರ ಹೊಟ್ಟೆಯೊಳಗೆ ಹುಳಿ ಹೆಚ್ಚುವಂತೆ ಮಾಡಿತ್ತು. ಆಗಲೇ ಜಾಹಿರಾತುಗಳನ್ನು ಪ್ರಕಟಿಸುತ್ತಿದ್ದ ಹಿಂದೂವಾದಿ ‘ಕೇಸರಿ’ ಪತ್ರಿಕೆ, ಅಂಬೇಡ್ಕರರ ‘ಮೂಕನಾಯಕ’ ಪತ್ರಿಕೆಯ ಜಾಹಿರಾತನ್ನು ಪ್ರಕಟಿಸಲು ನಿರಾಕರಿಸಿತ್ತು.

ಕರ್ನಾಟಕದಲ್ಲಿ ‘ಬ್ರಾಹ್ಮಣ ಮಾಧ್ಯಮ’ದ ಸಾರ್ವಭೌಮತ್ವ ಮತ್ತು ಅದರ ಕ್ಷುದ್ರ ನಡವಳಿಕೆ ಕುರಿತಂತೆ ಸಂವಾದದ ಅಗತ್ಯವನ್ನು ‘ನ್ಯಾಯಪಥ’ ಸಂಪಾದಕೀಯ ತನ್ನ ಈ ಹಿಂದಿನ ಸಂಚಿಕೆಯಲ್ಲಿ ವ್ಯಕ್ತಪಡಿಸಿದೆ. ರಾಜ್ಯದ ಪತ್ರಿಕಾರಂಗದಲ್ಲಿ ಶೇ.90ರಷ್ಟು ಮುಖ್ಯಸ್ಥರು ಹವ್ಯಕ ಬ್ರಾಹ್ಮಣರಾಗಿದ್ದು, ಕನ್ನಡದ ಯಾವುದೇ ಮಾಧ್ಯಮ ಸಂಸ್ಥೆಗೆ ಹೋದರೆ ಅಲ್ಲೆಲ್ಲಾ ಹವ್ಯಕ ಬ್ರಾಹ್ಮಣ ಹುಡುಗರೇ ಕಾಣುತ್ತಿದ್ದು ಅವರ ಸಂಖ್ಯೆ ಇನ್ನೂ ಹೆಚ್ಚಾಗಬೇಕೆಂದು ಹವ್ಯಕ ಬ್ರಾಹ್ಮಣ ಸಮ್ಮೇಳನದಲ್ಲಿ, ವಿಶ್ವೇಶ್ವರ ಭಟ್ ಹೇಳಿರುವುದನ್ನು ಉಲ್ಲೇಖಿಸಿದೆ. ಮುಖ್ಯವಾಗಿ, ದೇಶದ ಮಾಜಿ ಪ್ರಧಾನಿಗಳಾದ ದೇವೇಗೌಡರೇ, ಸ್ವತಃ ಬ್ರಾಹ್ಮಣ ವರದಿಗಾರಿಕೆಯ ಬಗ್ಗೆ ರೋಸಿಹೋಗಿ, ‘ನಾನು ಶೂದ್ರ ಅಷ್ಟೇನೆ’ ಎಂದಿರುವ ವಿಡಿಯೋವನ್ನು ಉಲ್ಲೇಖಿಸುತ್ತಾ, ‘ಬಹುಪಾಲು ಮಾಧ್ಯಮಗಳು ಶೂದ್ರ ರಾಜಕಾರಣಿ-ರಾಜಕಾರಣವನ್ನು ಹಣಿಯುತ್ತಿವೆ’ ಎಂಬುದನ್ನು ಪ್ರಸ್ತಾಪಿಸಿದೆ.

ನಿಜ, ಇದೆಲ್ಲವೂ ಸತ್ಯ. ಆದರಿದು ಹೊಸತಾದುದಾಗಲಿ, ಅಚ್ಚರಿಪಡುವಂಥದ್ದಾಗಲಿ ಅಲ್ಲ ಎಂಬುದು ನಮಗೆ ತಿಳಿದಿರುವಂಥದ್ದೇ. ಆದರೆ ಜನತೆಗೆ ಕೇಡು ಬಗೆಯುತ್ತಿರುವ ಬ್ರಾಹ್ಮಣ್ಯ-ಬಂಡವಾಳಿಗ ಮಾಧ್ಯಮದ ಅನೀತಿಯನ್ನು ಅನಾವರಣಗೊಳಿಸುವುದು ಹಾಗೂ ಪರ್ಯಾಯ ಮಾಧ್ಯಮವನ್ನು ಬಲಗೊಳಿಸುವ ಅಗತ್ಯ ಸಂಪಾದಕೀಯದ ಆಶಯವಾಗಿದೆ ಎಂದುಕೊಂಡಲ್ಲಿ ಈ ವಿಷಯವನ್ನು ಗಂಭೀರವಾಗಿ ಚರ್ಚಿಸಲು ಸಾಧ್ಯವಿದೆ

1920ರ ದಶಕದಲ್ಲಿಯೆ ಮಾಧ್ಯಮದ ಹಿಡಿತ ಬ್ರಾಹ್ಮಣ್ಯದ ಕೈಯಲ್ಲಿತ್ತು. ಅಂಬೇಡ್ಕರರು ಪತ್ರಿಕೆ ಆರಂಭಿಸುತ್ತಾರೆಂಬ ಸುದ್ದಿಯೇ ಬಾಲಗಂಗಾಧರ ತಿಲಕರ ಹೊಟ್ಟೆಯೊಳಗೆ ಹುಳಿ ಹೆಚ್ಚುವಂತೆ ಮಾಡಿತ್ತು. ಆಗಲೇ ಜಾಹಿರಾತುಗಳನ್ನು ಪ್ರಕಟಿಸುತ್ತಿದ್ದ ಹಿಂದೂವಾದಿ ‘ಕೇಸರಿ’ ಪತ್ರಿಕೆ, ಅಂಬೇಡ್ಕರರ ‘ಮೂಕನಾಯಕ’ ಪತ್ರಿಕೆಯ ಜಾಹಿರಾತನ್ನು ಪ್ರಕಟಿಸಲು ನಿರಾಕರಿಸಿತ್ತು. ಬೇರೆ ಪತ್ರಿಕೆಗಳಿಗೆ ಸಿಗುತ್ತಿದ್ದ ಜಾಹಿರಾತುಗಳು ಮೂಕನಾಯಕ ಪತ್ರಿಕೆಗೆ ಸಿಗುತ್ತಿರಲಿಲ್ಲ. ಇಂತಹ ಅನುಭವದ ಹಿನ್ನೆಲೆಯಲ್ಲಿಯೇ ಅಂಬೇಡ್ಕರರು; ‘ಭಾರತದಲ್ಲಿ ಒಮ್ಮೆ ಪತ್ರಿಕೋದ್ಯಮ ಒಂದು ವೃತ್ತಿಯಾಗಿತ್ತು. ಈಗ ಅದು ವ್ಯಾಪಾರವಾಗಿದೆ. ಸಾಬೂನು ಉತ್ಪಾದಿಸುವುದಕ್ಕಿಂತ ಹೆಚ್ಚಿನ ನೈತಿಕ ಹೊಣೆ ಅದಕ್ಕಿಲ್ಲ’ ಎಂದಿದ್ದರು. ಈ ಮಾತು ಈ ಹೊತ್ತಿನ ಮಾಧ್ಯಮದ ಸ್ವರೂಪವನ್ನು ಕುರಿತೇ ಹೇಳಿದಂತಿದೆ ಎಂದೆನಿಸಿದರೂ ಇದು ಆ ಹೊತ್ತೇ ಇದ್ದ ಪರಿಸ್ಥಿತಿ ಎಂಬುದನ್ನು ಗಮನಿಸಬೇಕು. ಆಗಲೂ ಸ್ಪಷ್ಟವಾಗಿ ಮಾಧ್ಯಮರಂಗದಲ್ಲಿ ಯಜಮಾನಿಕೆ ಸ್ಥಾಪಿಸಿದ್ದು ಇದೇ ಬ್ರಾಹ್ಮಣ್ಯ. ಇದು ಹತ್ತಿಕ್ಕಿದ್ದು ಇದೇ ಶೂದ್ರರನ್ನು. ಅಷ್ಟುಮಾತ್ರವಲ್ಲ, ಆಗಲೂ ಈ ಬ್ರಾಹ್ಮಣ್ಯ-ಬಂಡವಾಳಿಗ ಮಾಧ್ಯಮ ತನ್ನ ಹೆಚ್ಚುಗಾರಿಕೆ ಸಾರಿದ್ದು-ಹೇರಿದ್ದು ಇದೇ ‘ರಾಷ್ಟ್ರವಾದ’ದ  ಮುಖವಾಡದ ಮೂಲಕವೇ. ಆಗಲೂ ಇದರ ವಿರೋಧಿಗಳು ಹೆಸರಿಗಷ್ಟೇ ಬ್ರಿಟಿಷರು, ನಿಜವೆಂದರೆ ಈಗ ಯಾರೋ ಆಗಲೂ ಅವರೇ! ಆದರೆ ಬದಲಾವಣೆ ಆಗಿರುವುದೇನೆಂದರೆ ಆಗ ಈ ಶಕ್ತಿ ತನ್ನ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಲು ಹೆಣಗುತ್ತಿತ್ತು. ಆದರೀಗ ಇದಕ್ಕೆ ಆಳುವ ಅಧಿಕಾರ ದಕ್ಕಿದ ಬಳಿಕ ಇದು ದಮನಕಾರಿಯಾಗಿದೆ.

ವಸಾಹತುಶಾಹಿ ಆಡಳಿತದ ಅವಧಿಯಲ್ಲಿ ತಾನು ಬದುಕುಳಿಯಲು ಹೆಣಗುತ್ತಿದ್ದ ಬ್ರಾಹ್ಮಣ್ಯ-ಮಾಧ್ಯಮ-ಬಂಡವಾಳ ‘ಸ್ವಾತಂತ್ರ್ಯಯ’ ಸಿಗುತ್ತಲೇ ತಾನು ಸಂಪೂರ್ಣ ಸ್ವಾತಂತ್ರ್ಯಯ ಪಡೆದು ಕಳೆದ ಮುಕ್ಕಾಲು ಶತಮಾನದಲ್ಲಿ ಬೇರು ಬಿಟ್ಟು ಇದೀಗ ತನ್ನ ಕೊಕ್ಕು-ಪಂಜುಗಳನ್ನು ಚೂಪು ಮಾಡಿಕೊಂಡಿದೆ. ಈಗಿದು ‘ರಾಷ್ಟ್ರ’ದೊಳಗಿನ ಪ್ರಜೆಗಳನ್ನು ‘ಗಿರಾಕಿ’ಗಳನ್ನಾಗಿಸಿಕೊಳ್ಳುತ್ತಿದೆ. ಮಾಧ್ಯಮವಂತೂ ಗಿರಾಕಿಗಳಾದವರ ಮೆದುಳಿಗೇ ಗೆದ್ದಲು ಹಿಡಿಸಿ ಪತ್ರಿಕೆಯ ಬರೆಹ ಮತ್ತು ಟಿ.ವಿಯ ದೃಶ್ಯಗಳನ್ನು ‘ಮಾದಕ’ವಾಗಿ ಮಾರ್ಪಡಿಸಿದೆ. ಈ ಮಾದಕ ವ್ಯಸನದ ಫಲವಾಗಿ ಈ ಹೊತ್ತು ‘ರಾಷ್ಟ್ರವಾದ’ ಎಂಬುದು ವಿವೇಚನಾರಹಿತ ಆವೇಶವಾಗಿ ವ್ಯಕ್ತವಾಗುತ್ತಿದೆ. ಪ್ರಜಾಪ್ರಭುತ್ವದ ಸರ್ವೋನ್ನತ ಜವಾಬ್ದಾರಿಯ ಪ್ರಧಾನ ಸ್ಥಾನವೆಂಬುದು ಪ್ರಶ್ನಾತೀತ ಭಾವೋನ್ಮಾದಿ ಪ್ರತಿಮೆಯಾಗಿದೆ. ಇದೆಲ್ಲವೂ ಪಕ್ಕಾ ಅವರ ಲೆಕ್ಕಾಚಾರದಂತೆಯೇ ನಡೆಯುತ್ತಿದೆ. ಆದರೆ ‘ನಾವು’ ಎಂದುಕೊಂಡ ನಮಗೆ, ಅವರ ಲೆಕ್ಕ ತಪ್ಪಿಸುವ ಅಥವಾ ನಮ್ಮದೇ ಆದ ‘ಲೆಕ್ಕಾಚಾರ’ ಎಂಬುದೊಂದು ಇದೆಯೇ? ಇದು ಮುಖ್ಯ ಪ್ರಶ್ನೆ.

ಕನಿಷ್ಟ ಕಾಮನ್ಸೆನ್ಸ್ ಇದ್ದವರಿಗೂ ತಿಳಿಯುತ್ತದೆ; ಸುದ್ದಿವಾಹಿನಿಗಳಲ್ಲಿ ಪ್ರಸಾರವಾಗುವ ವಿಶೇಷ ವರದಿಗಳ ಶೀರ್ಷಿಕೆಯೇ ಇದು ಯಾರನ್ನು ಎತ್ತಿಕಟ್ಟಲು ಅಥವಾ ಹಣಿಯಲು ಹೆಣೆಯಲಾದ ಕತೆ ಎಂಬುದನ್ನು ಹೇಳಿಬಿಡುತ್ತದೆ. ಸ್ಟುಡಿಯೋಗಳಲ್ಲಿ ನಡೆಸುವ ‘ಚರ್ಚೆ’ (ತಲೆ ಹರಟೆ)ಗಳ ನಿರೂಪಕರ ನಾಟಕೀಯ ಪಾಂಡಿತ್ಯ, ಹೇಸಿಗೆ ತರಿಸುವ ಅವರ ಧ್ವನಿ ವಿನ್ಯಾಸ-ಕುಹಕ, ನಿರೂಪಕನೇ ವಿಚಾರಣಾಧಿಕಾರಿಯಾಗುವ, ವಕೀಲನಾಗುವ, ನ್ಯಾಯಾಧೀಶನಾಗುವ ಏಕಪಾತ್ರಾಭಿನಯದ ಎದುರು ಪ್ಯಾನಲಿಸ್ಟರು ಸ್ಟುಡಿಯೋ ಎಂಬ ಶೋರೂಮಿನ ಗೊಂಬೆಗಳಾಗಿರುತ್ತಾರೆ. ಮೊದಲೇ ನಿಶ್ಚಯಿಸಿಕೊಂಡಂತೆ ತಮ್ಮ ಪರವಿರುವವರಿಗೆ ಮಾತಾಡಲು ಹೆಚ್ಚು ಅವಕಾಶ ಕೊಡುವುದು, ತಮ್ಮ ಪೂರ್ವನಿಶ್ಚಿತ ಉದ್ದೇಶಕ್ಕೆ ಪ್ರತಿಯಾಗಿ ಮಾತಾಡುವವರ ಮಾತು ಇದ್ದಕ್ಕಿದ್ದಂತೆ ಮೊಟಕು ಮಾಡುವುದು ಇಲ್ಲವೇ ‘ಬ್ರೇಕ್’-ವಿರಾಮ ಬೀಳುವುದು ಇದೆಲ್ಲ ಸ್ಪಷ್ಟವಾಗಿ ‘ಒಬ್ಬ’ರ ಪರವಾಗಿದೆ ಎಂದು ಯಾರಿಗೆ ತಿಳಿಯುವುದಿಲ್ಲ? ಚುನಾವಣಾ ಕ್ಷೇತ್ರಗಳಲ್ಲಿ ವಿಶ್ಲೇಷಣೆಯ ಸಂದರ್ಭದಲ್ಲಿಯೂ ವರದಿಗಾರರ ಮೈಕುಗಳು ಯಾರ ಮುಂದೆ ಹೆಚ್ಚುಹೊತ್ತು ನಿಲ್ಲುತ್ತವೆ, ಯಾರ ಮಾತಿಗೆ ತಕ್ಷಣ ಸರಿದು ಬಿಡುತ್ತವೆ ಎಂಬುದೂ ಈಗ ಆಯಾ ವರದಿಗಾರರಿಗೂ ನಾಚಿಕೆಯಾಗುವ ವಿಷಯವಾಗಿ ಉಳಿದಿಲ್ಲ. ಅಷ್ಟುಮಾತ್ರವಲ್ಲ ಸ್ಪಷ್ಟವಾಗಿ ಹೇಳಬೇಕೆಂದರೆ ಸಿದ್ದರಾಮಯ್ಯನವರ ಸರಕಾರವನ್ನು ಕೆಡಹುವಲ್ಲಿ ಪ್ರಧಾನ ಪಾತ್ರವಹಿಸಿರುವುದು ಮತ್ತು ಕುಮಾರಸ್ವಾಮಿಯವರ ಸರಕಾರವನ್ನು ಕೆಡಹುವುದೇ ತಮ್ಮ ಮುಂದಿನ ಗುರಿ ಮಾಡಿಕೊಂಡಿರುವುದು ರಾಜ್ಯದ ಬಿ.ಜೆ.ಪಿ. ಅಲ್ಲ, ಬದಲಿಗೆ ಬೆರಳೆಣಿಕೆಯ ಮಾಧ್ಯಮಗಳು ಎನ್ನುವುದು ಆ ಮಾಧ್ಯಮಗಳ ‘ಶಕ್ತಿ’ಗೆ ಕೊಡುವ ಪ್ರಮಾಣಪತ್ರವಲ್ಲ ಬದಲಿಗೆ ಅವುಗಳ ದೈತ್ಯಶಕ್ತಿಯ ಸರಿ ಅಂದಾಜು ಎಂದು ಭಾವಿಸುವ ಅಗತ್ಯವಿದೆ.  ಈ ಹೊತ್ತು ಬ್ರಾಹ್ಮಣ-ಬನಿಯಾ ಮಾಲಕತ್ವದ ದೃಶ್ಯ-ಮುದ್ರಣ ಮಾಧ್ಯಮಗಳು ನಿಕ್ಕಿ ಫ್ಯಾಸಿಸಮ್ಮಿನ ಮುಖವಾಣಿಯಾಗಿವೆ.

1920ರ ಅಂಬೇಡ್ಕರರ ಅನುಭವದಿಂದ ಮೊದಲು ಮಾಡಿ 2020ರ ನಡುವಿನ ನೂರು ವರ್ಷಗಳ ಅವಧಿಯ ಇತಿಹಾಸ, ನಮ್ಮ ತಿಳಿವಳಿಕೆಗಿರುವ ಬಹುದೊಡ್ಡ ಪಠ್ಯ ಎಂಬುದನ್ನು ಅರಿತು ಅದನ್ನು ಪುನರಾವಲೋಕನ ಮಾಡಿದರೆ ಖಂಡಿತ ನಮಗೆ ಇಲ್ಲಿ ಪಾಠ ಇದೆ. ಉಧ್ಯಮದ ಸ್ವರೂಪ ಪಡೆದ ಮಾಧ್ಯಮ ಯಾವತ್ತೂ ಅದು ಪ್ರಭುತ್ವದ ಬಾಲಬಡುಕವೇ ಆಗಿರುತ್ತದೆ ಎಂಬುದು ತೀರಾ ‘ಸಣ್ಣ’ಮಾತು. ನಿಜವೆಂದರೆ ಇಂತಹ ಮಾಧ್ಯಮ ಪ್ರಜಾಪ್ರಭುತ್ವಕ್ಕೆ ಕಂಟಕಕಾರಿಯೇ ಆಗಿರುತ್ತದೆ. ಮಾಧ್ಯಮ ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎನ್ನುವ ಬಣ್ಣನೆಯ ಮಾತು ಈ ಹೊತ್ತು ಆತ್ಮವಂಚಕ ಮಾತಾಗುತ್ತದೆ. ‘ಮಾರುಕಟ್ಟೆ ಪ್ರಜಾಪ್ರಭುತ್ವ’ದಲ್ಲಿ ಮಾಧ್ಯಮ ಸ್ವಯಂ ಪ್ರಚಾರ ಸಾಮಗ್ರಿಯಾಗಿರುತ್ತದಷ್ಟೇ. ಸುದ್ದಿಯ ನಡುವಿನ ಜಾಹಿರಾತುಗಳ ಪ್ರಸಾರ ಮತ್ತು ಸುದ್ದಿಯ ಹೆಸರಿನಲ್ಲಿ ಬಂಡವಾಳಿಗರ ಪರವಾಗಿರುವ ರಾಜಕಾರಣಿಗಳ ಪ್ರಚಾರವೇ ದೃಶ್ಯಮಾಧ್ಯಮಗಳ ನಿಜವಾದ ಉದ್ದೆÃಶವಾಗಿರುತ್ತದೆ ಎಂಬುದನ್ನು ಪ್ರೇಕ್ಷಕ ಶ್ರೀಸಾಮಾನ್ಯನಿಗೆ ತಿಳಿಸಿಕೊಡಬೇಕಾದ ತುರ್ತು ಕೂಡ ಈ ಹೊತ್ತು ಜನಪರರ ಎದುರಿಗಿದೆ.

ಮುಖ್ಯವಾದ ಮಾತನ್ನಷ್ಟೇ ಹೇಳಿ ಮುಗಿಸುವೆ. ಬ್ರಾಹ್ಮಣ ಮಾಧ್ಯಮ ಎಂಬ ಮಾತಿನ ಸಂದರ್ಭದಲ್ಲಿ ಗಮನಿಸಬೇಕಿರುವುದು, ಭಾರತದ ಚರಿತ್ರೆಯಲ್ಲಿ ಈತನಕದ ಎಲ್ಲ ಪ್ರಸಾರ ಪ್ರಕಾರಗಳಲ್ಲೂ ಬ್ರಾಹ್ಮಣ್ಯ ಅವಿಭಜಿತ ಅಂಶವಾಗಿ ಚಾಲ್ತಿಯಲ್ಲಿದೆ. ಇನ್ನು ಅರ್ಥಮಾಡಿಕೊಳ್ಳಬೇಕಿರುವುದು ‘ಬ್ರಾಹ್ಮಣ್ಯ’ ಎಂಬುದರ ಅರ್ಥವೇ ಪ್ರಭುತ್ವ ಎನ್ನುವುದನ್ನು. ಬ್ರಾಹ್ಮಣ್ಯ ಎಂಬುದು ಪ್ರಭುತ್ವದ ಸಾಂಸ್ಕೃತಿಕ ಪರಿಭಾಷೆ ಎಂಬುದನ್ನು ಖಚಿತಪಡಿಸಿಕೊಳ್ಳದ ಹೊರತು ಭಾರತದಲ್ಲಿ ಪ್ರಜೆಗಳ ವಿಮೋಚನೆಯಾಗಲಿ, ಪ್ರಜಾಪ್ರಭುತ್ವದ ನಿರ್ಮಾಣವಾಗಲಿ ಸಾಧ್ಯವಿಲ್ಲ. ಇದರ ವಿವರಣೆಯಲ್ಲಿ ಬಂಡವಾಳವೂ ಬ್ರಾಹ್ಮಣ್ಯದ ಅಂತರ್ಗತ ಧಾತು ಎಂಬುದು ಮನವರಿಕೆಯಾಗುತ್ತದೆ. ಇಲ್ಲಿ ಮಾಧ್ಯಮವು ಇದರ ಹಿತದ ಪೋಷಣೆ ಮತ್ತು ರಕ್ಷಣೆಗಾಗಿ ತಾನು ದುಡಿಯುತ್ತದೆ.
ದೇಶಿ ಬಂಡವಾಳ ನೇತೃತ್ವದ ಜಾಗತಿಕ ಬಂಡವಾಳಿಗ ಮೈತ್ರಿಕೂಟದ ರಾಜಕೀಯ ಸಿದ್ಧಾಂತವಾದ ‘ಹಿಂದೂ-ರಾಷ್ಟ್ರವಾದ’ವು ಎದೆಸೆಟೆಸುತ್ತಿರುವ ಕಾಲಮಾನದಲ್ಲಿ ಮಾಧ್ಯಮದ ಬಗೆಗಿನ ಚರ್ಚೆ, ಸಶಕ್ತ ಪ್ರತಿರೋಧ ಮತ್ತು ಕ್ರಿಯಾತ್ಮಕ ಪರ್ಯಾಯದ ಕಣ್ಣೋಟವನ್ನು ಬಯಸುತ್ತದೆ. ಈ ಹೊತ್ತು ‘ಈ’ ಮಾಧ್ಯಮ ಜನಹಿತಾಸಕ್ತಿಗೆ ಘಾತಕವಾದುದು ಎಂಬುದನ್ನು, ಇದು ಸತ್ಯವನ್ನು ತಿರುಚುತ್ತದೆ, ಸುಳ್ಳನ್ನು ಹೇಳುತ್ತದೆ, ಇದು ಓದುಗ-ನೋಡುಗರ ಪ್ರಜ್ಞೆ ತಗ್ಗಿಸಿ ಗಿರಾಕಿಗಳನ್ನಾಗಿಸುತ್ತದೆ ಎಂಬುದನ್ನು ಜನತೆಗೆ ಮನವರಿಕೆ ಮಾಡಿಕೊಡುವುದು ಮತ್ತು ಪರ್ಯಾಯ ಮಾಧ್ಯಮ ಸಾಧ್ಯತೆಗಳನ್ನು ಕಂಡುಕೊಳ್ಳುವುದೂ ಅತಿ ಜರೂರಿನ ಕ್ರಿಯೆಯಾಗಿದೆ. ಈ ಬ್ರಾಹ್ಮಣ್ಯ ಮಾಧ್ಯಮವನ್ನು ಪ್ರಶ್ನಿಸುವ ಸಾಮರ್ಥ್ಯ, ಕಾರ್ಯಕ್ರಮ ಮತ್ತು ಸೇಡು ತೀರಿಸಿಕೊಳ್ಳುವ ಈ ಮಾಧ್ಯಮಗಳನ್ನು ಎದುರಿಸಿ ಗೆಲ್ಲುವ ವಿಧಾನಗಳ ಹುಡುಕಾಟ, ಕಾರ್ಯಗತಗೊಳಿಸುವಿಕೆ, ಮಾತ್ರವಲ್ಲ ಈ ಬಂಡವಾಳವನ್ನು ಮಣಿಸಿ ಜನಹಿತಕ್ಕೆ ಬಳಸಿಕೊಳ್ಳುವ ಸಂಭವನೀಯತೆಗಳ ಬಗ್ಗೆ ಈ ಹೊತ್ತು ಚಿಂತಿಸಬೇಕಿದೆ. ಅನುಸರಿಸಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...