Homeಅಂತರಾಷ್ಟ್ರೀಯಜಾಗತಿಕವಾಗಿ ಮೂರು ವರ್ಷಗಳಲ್ಲಿ 600 ಪರಿಸರ ರಕ್ಷಕರ ಹತ್ಯೆ: ವಿಶ್ವಸಂಸ್ಥೆ ತೀವ್ರ ಕಳವಳ: ಜಾಗತಿಕ ತಾಪಮಾನಕ್ಕೆ...

ಜಾಗತಿಕವಾಗಿ ಮೂರು ವರ್ಷಗಳಲ್ಲಿ 600 ಪರಿಸರ ರಕ್ಷಕರ ಹತ್ಯೆ: ವಿಶ್ವಸಂಸ್ಥೆ ತೀವ್ರ ಕಳವಳ: ಜಾಗತಿಕ ತಾಪಮಾನಕ್ಕೆ ಸಾಕ್ಷಿಯಾಗುತ್ತಿರುವ ಭಾರತ

- Advertisement -
- Advertisement -

ಜೂನ್ 5 ವಿಶ್ವ ಪರಿಸರ ದಿನ. ಜಗತ್ತಿನಾದ್ಯಂತ ಗಿಡ ನೆಡುವ, ಹಸಿರು ಭಾಷಣ ಬಿಗಿಯುವ ಮತ್ತು ಪರಿಸರ ಕಾಳಜಿಯ ಸಡಗರದ ಆಚರಣೆಗಳು ಎಲ್ಲೆಡೆ ವಿಭಿನ್ನ ರೀತಿಗಳಲ್ಲಿ ವಿಜೃಂಭಿಸುತ್ತಿವೆ. ಆದರೆ, ಇದೇ ಹೊತ್ತಿನಲ್ಲಿ ವಿಶ್ವಸಂಸ್ಥೆಯು ಇಡೀ ಮಾನವಕುಲ ತಲೆತಗ್ಗಿಸುವಂತಹ ಮತ್ತು ಬೆಚ್ಚಿಬೀಳಿಸುವಂತಹ ಕಟು ವಾಸ್ತವದ ವರದಿಯೊಂದನ್ನು ಬಿಡುಗಡೆ ಮಾಡಿದೆ. ನಾವು ಪರಿಸರ ದಿನವನ್ನು ಕೇವಲ ವಾರ್ಷಿಕ ಆಚರಣೆಯಾಗಿ ಆಚರಿಸುತ್ತಿರುವಾಗ, ಭೂಮಿಯ ಶ್ವಾಸಕೋಶಗಳನ್ನು ಮತ್ತು ಮುಂದಿನ ಪೀಳಿಗೆಯ ಭವಿಷ್ಯವನ್ನು ಉಳಿಸಲು ಹೋರಾಡುತ್ತಿರುವ ನಿಜವಾದ ರಕ್ಷಕರು ಜಾಗತಿಕವಾಗಿ ಮೌನವಾಗಿ ಕೊಲ್ಲಲ್ಪಡುತ್ತಿದ್ದಾರೆ!

ವಿಶ್ವ ಪರಿಸರ ದಿನದ ಹಿನ್ನೆಲೆಯಲ್ಲಿ ಜಾಗತಿಕ ಬಿಕ್ಕಟ್ಟಿನ ಬಗ್ಗೆ ತೀವ್ರ ಎಚ್ಚರಿಕೆ ನೀಡಿರುವ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮುಖ್ಯಸ್ಥರು, ಕಳೆದ ಮೂರು ವರ್ಷಗಳಲ್ಲಿ ವಿಶ್ವಾದ್ಯಂತ ಸುಮಾರು 600 ಭೂ ಮತ್ತು ಪರಿಸರ ರಕ್ಷಕರು ಕೊಲ್ಲಲ್ಪಟ್ಟಿದ್ದಾರೆ ಅಥವಾ ನಿಗೂಢವಾಗಿ ಕಣ್ಮರೆಯಾಗಿದ್ದಾರೆ ಎಂಬ ಆಘಾತಕಾರಿ ಮಾಹಿತಿಯನ್ನು ಹೊರಹಾಕಿದ್ದಾರೆ. ಕಾರ್ಪೊರೇಟ್ ಹಿತಾಸಕ್ತಿ ಮತ್ತು ಸರ್ಕಾರದ ನೀತಿಗಳ ವಿರುದ್ಧ ಪ್ರಕೃತಿಯನ್ನು ಕಾಯಲು ನಿಲ್ಲುವ ಈ ಕಾರ್ಯಕರ್ತರಿಗೆ ಈಗ ಬಲವಾದ ರಕ್ಷಣೆ ನೀಡುವ ತುರ್ತು ಅಗತ್ಯವಿದೆ ಎಂದು ಅವರು ಜಾಗತಿಕ ಸಮುದಾಯಕ್ಕೆ ಕರೆ ನೀಡಿದ್ದಾರೆ.

ಜಾಗತಿಕ ತಾಪಮಾನ ಏರಿಕೆಯ ಭೀಕರತೆ ಒಂದೆಡೆಯಾದರೆ, ಪರಿಸರಕ್ಕಾಗಿ ಧ್ವನಿ ಎತ್ತುವವರನ್ನು ಕ್ರಿಮಿನಲ್‌ಗಳಂತೆ ಬಿಂಬಿಸುತ್ತಿರುವ ಇಂದಿನ ವ್ಯವಸ್ಥೆ ಮತ್ತೊಂದೆಡೆ ಜಗತ್ತನ್ನು ಆವರಿಸಿಕೊಳ್ಳುತ್ತಿದೆ. ಈ ಕಹಿ ಸತ್ಯ ಕೇವಲ ವಿದೇಶಗಳಿಗಷ್ಟೇ ಸೀಮಿತವಾಗಿಲ್ಲ; ತಾಪಮಾನದ ಭೀಕರತೆ ಮತ್ತು ಕಾಡುಗಳ ಲೂಟಿಯಿಂದ ನಲುಗುತ್ತಿರುವ ಭಾರತದ ಇಂದಿನ ವಾಸ್ತವಕ್ಕೂ ಇದು ಕನ್ನಡಿ ಹಿಡಿದಂತಿದೆ.

ಫ್ರಾನ್ಸ್‌ನ ಸ್ಟ್ರಾಸ್‌ಬರ್ಗ್‌ನಲ್ಲಿ ನಡೆದ ‘ಪರಿಸರ ಮಾನವ ಹಕ್ಕುಗಳ ರಕ್ಷಕರ ಕುರಿತಾದ ಮೊದಲ ಯುರೋಪಿಯನ್ ವೇದಿಕೆ’ಯನ್ನುದ್ದೇಶಿಸಿ ಮಾತನಾಡಿದ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈ ಕಮಿಷನರ್ ವೋಲ್ಕರ್ ಟರ್ಕ್ ಈ ಆಘಾತಕಾರಿ ಸತ್ಯವನ್ನು ಬಹಿರಂಗಪಡಿಸಿದ್ದಾರೆ. ಕನಿಷ್ಠ 55 ದೇಶಗಳಲ್ಲಿ, ಪರಿಸರ ರಕ್ಷಕರನ್ನು ಕೇವಲ ಅವರ ಸಕ್ರಿಯ ಹೋರಾಟ ಹಾಗೂ ಕ್ರಿಯಾಶೀಲತೆಗಾಗಿಯೇ ಜೈಲಿಗಟ್ಟಲಾಗಿದೆ ಎಂದು ಅವರು ವಿಷಾದಿಸಿದ್ದಾರೆ.

“ನಮ್ಮ ಮಕ್ಕಳ ಭವಿಷ್ಯವನ್ನು ಮತ್ತು ಪ್ರಕೃತಿಯನ್ನು ರಕ್ಷಿಸಲು ಹೋರಾಡುತ್ತಿರುವ ಜನರ ಮೇಲೆ, ಭಯೋತ್ಪಾದನೆ ಮತ್ತು ಸಂಘಟಿತ ಅಪರಾಧಗಳನ್ನು ಮಟ್ಟಹಾಕಲು ರೂಪಿಸಲಾದ ಕಠಿಣ ಕಾನೂನುಗಳ ಅಡಿಯಲ್ಲಿ ಮೊಕದ್ದಮೆ ಹೂಡಿ ಕಾನೂನು ಕ್ರಮ ಜರುಗಿಸಲಾಗುತ್ತಿದೆ. ಇದು ಅತ್ಯಂತ ಆಘಾತಕಾರಿ ಸಂಗತಿ” ಎಂದು ವೋಲ್ಕರ್ ಟರ್ಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಎಲ್ಲಾ ಸರ್ಕಾರಗಳು ಪರಿಸರ ರಕ್ಷಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಬೇಕು ಮತ್ತು ಅವರ ಮೇಲಿನ ದೌರ್ಜನ್ಯಗಳಿಗೆ ಹೊಣೆಗಾರಿಕೆಯನ್ನು ನಿಗದಿಪಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಯುರೋಪ್‌ನಲ್ಲೂ ಹೆಚ್ಚುತ್ತಿದೆ ತಾಪಮಾನ, ಪ್ರತಿಭಟನೆಗೆ ನಿರ್ಬಂಧ

ಇದೇ ವೇದಿಕೆಯಲ್ಲಿ ಮಾತನಾಡಿದ ವೋಲ್ಕರ್ ಟರ್ಕ್, ಯುರೋಪ್ ಖಂಡವನ್ನು “ಭೂಮಿಯ ಮೇಲೆ ಅತ್ಯಂತ ವೇಗವಾಗಿ ಬೆಚ್ಚಗಾಗುತ್ತಿರುವ ಖಂಡ” ಎಂದು ಬಣ್ಣಿಸಿದ್ದಾರೆ. ಅಲ್ಲಿನ ತಾಪಮಾನವು ಜಾಗತಿಕ ಸರಾಸರಿಗಿಂತ ಎರಡು ಪಟ್ಟು ವೇಗವಾಗಿ ಹೆಚ್ಚುತ್ತಿದೆ ಎಂದು ಎಚ್ಚರಿಸಿರುವ ಅವರು, ತೀವ್ರ ಹವಾಮಾನ ವೈಪರೀತ್ಯ, ಅಸುರಕ್ಷಿತ ಗಾಳಿ ಮತ್ತು ಪರಿಸರ ಅವನತಿ ಖಂಡದಾದ್ಯಂತದ ಸಮುದಾಯಗಳ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ ಎಂದಿದ್ದಾರೆ. ಅನೇಕ ಯುರೋಪಿಯನ್ ರಾಷ್ಟ್ರಗಳು ಹವಾಮಾನ ಬದಲಾವಣೆಯ ನಿಯಂತ್ರಣಕ್ಕೆ ಬದ್ಧತೆ ಹೊಂದಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದರೂ, ಅಲ್ಲಿನ ಸರ್ಕಾರಗಳು ಪರಿಸರಕ್ಕಾಗಿ ನಡೆಯುವ ಶಾಂತಿಯುತ ಪ್ರತಿಭಟನೆಗಳನ್ನು ಅಪರಾಧೀಕರಿಸುವ ಕಾನೂನುಗಳನ್ನು ಜಾರಿಗೊಳಿಸುತ್ತಿರುವುದನ್ನು ಹೈಕಮಿಷನರ್ ಬೆಟ್ಟು ಮಾಡಿದ್ದಾರೆ. ನ್ಯಾಯಾಲಯದ ತೀರ್ಪುಗಳನ್ನು ಗೌರವಿಸಲು ಮತ್ತು ಪರಿಸರ ಚಳುವಳಿಯ ಮುಂಚೂಣಿಯಲ್ಲಿರುವವರಿಗೆ ಬಲವಾದ ಪ್ರಾದೇಶಿಕ ರಕ್ಷಣಾ ವ್ಯವಸ್ಥೆಯನ್ನು ನಿರ್ಮಿಸಲು ಅವರು ಅಧಿಕಾರಿಗಳಿಗೆ ಕರೆ ನೀಡಿದ್ದಾರೆ.

ಕೈ ಮೀರುತ್ತಿದೆ ಜಾಗತಿಕ ತಾಪಮಾನ: ಯುಎನ್ ಎಚ್ಚರಿಕೆ

ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ (UNEP) ನೇತೃತ್ವದಲ್ಲಿ ವಾರ್ಷಿಕವಾಗಿ ಜೂನ್ 5 ರಂದು ಆಚರಿಸಲಾಗುವ ವಿಶ್ವ ಪರಿಸರ ದಿನದ ಮುನ್ನಾದಿನದಂದೇ ವಿಶ್ವಸಂಸ್ಥೆಯ ನಾಯಕರು ಈ ಗಂಭೀರ ಎಚ್ಚರಿಕೆಗಳನ್ನು ನೀಡಿದ್ದಾರೆ. ಜಾಗತಿಕ ತಾಪಮಾನವು ಕೈಗಾರಿಕಾ ಪೂರ್ವ ಮಟ್ಟಕ್ಕಿಂತ 1.5°C ಗಿಂತ ಹೆಚ್ಚಾಗದಂತೆ ತಡೆಯಲು ಎಲ್ಲಾ ರಾಷ್ಟ್ರಗಳು ಯುದ್ಧೋಪಾದಿಯಲ್ಲಿ ಕಾರ್ಯನಿರ್ವಹಿಸಬೇಕೆಂದು UNEP ಕಾರ್ಯನಿರ್ವಾಹಕ ನಿರ್ದೇಶಕಿ ಇಂಗರ್ ಆಂಡರ್ಸನ್ ಒತ್ತಾಯಿಸಿದ್ದಾರೆ. “ನಾವು ತಾಪಮಾನವನ್ನು ಕಡಿಮೆ ಮಾಡಲೇಬೇಕು. ಒಂದು ವೇಳೆ ನಾವು 1.5°C ಮಿತಿಯನ್ನು ದಾಟಿದರೂ, ಅದನ್ನು ಮತ್ತೊಮ್ಮೆ ಶೀಘ್ರವಾಗಿ ಕೆಳಕ್ಕೆ ತರುವುದನ್ನು ಖಚಿತಪಡಿಸಿಕೊಳ್ಳಬೇಕು. ನಾವದನ್ನು ಮಾಡಲು ಸಾಧ್ಯವಿದೆ, ಏಕೆಂದರೆ ಅದಕ್ಕೆ ಬೇಕಾದ ಎಲ್ಲಾ ಪರಿಹಾರಗಳು ನಮ್ಮ ಬಳಿ ಇವೆ” ಎಂದು ಅವರು ಧೀಮಂತ ನುಡಿಗಳನ್ನಾಡಿದ್ದಾರೆ.

ಮತ್ತೊಂದೆಡೆ, ಕಳೆದ 11 ವರ್ಷಗಳು ಇತಿಹಾಸದಲ್ಲೇ ಅತ್ಯಂತ ಗರಿಷ್ಠ ತಾಪಮಾನ ದಾಖಲಾದ ವರ್ಷಗಳಾಗಿವೆ ಎಂದು ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರೆಸ್ ಎಚ್ಚರಿಸಿದ್ದಾರೆ. ತಾಪಮಾನ ಏರಿಕೆಯ “ಒಂದು ಡಿಗ್ರಿಯ ಪ್ರತಿಯೊಂದು ಭಾಗವೂ ಹೆಚ್ಚಿನ ಹಾನಿಯನ್ನುಂಟುಮಾಡುತ್ತದೆ – ವಿಶೇಷವಾಗಿ ಅತ್ಯಂತ ದುರ್ಬಲ ವರ್ಗದವರ ಮೇಲೆ ಇದು ತೀವ್ರ ಪರಿಣಾಮ ಬೀರುತ್ತದೆ” ಎಂದಿರುವ ಅವರು, ಹೆಚ್ಚುತ್ತಿರುವ ಪರಿಸರ ಬಿಕ್ಕಟ್ಟನ್ನು ಪರಿಹರಿಸಲು ತಕ್ಷಣದ ಕ್ರಮ ಕೈಗೊಳ್ಳುವಂತೆ ಜಗತ್ತಿಗೆ ಕರೆ ನೀಡಿದ್ದಾರೆ.

2026 ರ ಪರಿಸರ ದಿನದ ವಿಶೇಷ ಅಭಿಯಾನ: ‘ಹವಾಮಾನಕ್ಕೆ ಬದ್ಧರಾಗಿರಿ’

2026 ರ ವಿಶ್ವ ಪರಿಸರ ದಿನದ ಅಂಗವಾಗಿ, UNEP ಜಾಗತಿಕವಾಗಿ ‘ಲಿಂಬೊ ನೃತ್ಯ ಸವಾಲನ್ನು’ (Limbo Dance Challenge) ಪ್ರಾರಂಭಿಸಿದ್ದು, ಎಲ್ಲೆಡೆ ಜನರು “ಹವಾಮಾನಕ್ಕೆ ಬದ್ಧರಾಗಿರಿ” (Stay Committed to Climate) ಎಂದು ಕರೆ ನೀಡಿದೆ. UNEPಯ ‘ವಾಟರ್ ಬಿಲೋ ಲೈಫ್‌’ ಅಭಿಯಾನದ ವಕೀಲರೂ ಹಾಗೂ ಪ್ರಸಿದ್ಧ ನಟರೂ ಆದ ಜೇಸನ್ ಮೊಮೊವಾ ಈ ಜಾಗತಿಕ ಅಭಿಯಾನಕ್ಕೆ ತಮ್ಮ ಬೆಂಬಲವನ್ನು ಸೂಚಿಸಿದ್ದು, ಈ ಚಳುವಳಿಯು ಕೇವಲ ಆಚರಣೆಯಲ್ಲ, ಇದು ಪ್ರಕೃತಿಯೊಂದಿಗಿನ ಕಥೆ, ಗೌರವ ಮತ್ತು ಸಂಪರ್ಕವನ್ನು ಹೊಂದಿದೆ ಎಂದು ಒತ್ತಿ ಹೇಳಿದ್ದಾರೆ.

ವಿಶ್ವಸಂಸ್ಥೆಯು ಜಾಗತಿಕ ಮಟ್ಟದ ಪರಿಸರ ವಿನಾಶ ಮತ್ತು ತಾಪಮಾನ ಏರಿಕೆಯ ಬಗ್ಗೆ ನೀಡಿರುವ ಈ ಆಘಾತಕಾರಿ ಎಚ್ಚರಿಕೆಗಳು ಭಾರತದ ಇಂದಿನ ವಾಸ್ತವಕ್ಕೆ ಕನ್ನಡಿ ಹಿಡಿದಂತಿವೆ. ಜಾಗತಿಕ ತಾಪಮಾನ ಏರಿಕೆಯ ಭೀಕರ ಪರಿಣಾಮಗಳನ್ನು ಇಂದು ಇಡೀ ಭಾರತ ಪ್ರತ್ಯಕ್ಷವಾಗಿ ಅನುಭವಿಸುತ್ತಿದೆ. ಉತ್ತರ ಭಾರತದಿಂದ ಹಿಡಿದು ದಕ್ಷಿಣದ ತುದಿಯವರೆಗೆ ಬೇಸಿಗೆಯ ತಾಪಮಾನವು 45 ಡಿಗ್ರಿ ಸೆಲ್ಸಿಯಸ್‌ನಿಂದ 50 ಡಿಗ್ರಿ ಸೆಲ್ಸಿಯಸ್‌ನ ಗಡಿ ದಾಟುತ್ತಿದ್ದು, ಕಡು ಬೇಸಿಗೆಯ ದಿನಗಳು ನರಕಸದೃಶವಾಗುತ್ತಿವೆ. ಹವಾಮಾನ ವೈಪರೀತ್ಯದ ಕಾರಣದಿಂದಾಗಿ ಮುಂಗಾರು ಸಂಪೂರ್ಣ ಏರುಪೇರಾಗಿದ್ದು, ಒಂದು ಕಡೆ ತೀವ್ರ ಬರಗಾಲದಿಂದ ಜಲಮೂಲಗಳು ಒಣಗಿ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗುತ್ತಿದ್ದರೆ, ಮತ್ತೊಂದೆಡೆ ಅಕಾಲಿಕ ಹಾಗೂ ಅತ್ಯಧಿಕ ಮಳೆಯಿಂದಾಗಿ ನಗರಗಳು ಮುಳುಗುತ್ತಿವೆ ಮತ್ತು ಗುಡ್ಡಗಳು ಕುಸಿಯುತ್ತಿವೆ. ಹಿಮಾಲಯದ ಹಿಮನದಿಗಳು ಜಾಗತಿಕ ತಾಪಮಾನದ ತೀವ್ರತೆಗೆ ವೇಗವಾಗಿ ಕರಗುತ್ತಿದ್ದು, ಇದು ಇಡೀ ದೇಶದ ಜೀವನಾಡಿಗಳಾಗಿರುವ ನದಿಗಳು ಭವಿಷ್ಯದಲ್ಲಿ ಒಣಗಿಹೋಗುವ ಭೀತಿಯನ್ನು ಸೃಷ್ಟಿಸಿದೆ.

ಆದರೆ, ಇಷ್ಟೆಲ್ಲಾ ಜಾಗತಿಕ ಬಿಕ್ಕಟ್ಟುಗಳ ನಡುವೆಯೂ ಭಾರತದಲ್ಲಿ ಕೇಂದ್ರ ಸರ್ಕಾರವು ಕೈಕೊಳ್ಳುತ್ತಿರುವ ನಿರ್ಧಾರಗಳು ಪರಿಸರವನ್ನು ಮತ್ತಷ್ಟು ವಿನಾಶದ ಪ್ರಪಾತಕ್ಕೆ ತಳ್ಳುತ್ತಿವೆ. ದೇಶದ ಹಸಿರು ಹೊದಿಕೆಯಾಗಿರುವ ದಟ್ಟ ಅರಣ್ಯಗಳನ್ನು ಸಂರಕ್ಷಿಸುವ ಬದಲು, ಮೂಲಸೌಕರ್ಯ ಮತ್ತು ಅಭಿವೃದ್ಧಿಯ ಹೆಸರಿನಲ್ಲಿ ಲಕ್ಷಾಂತರ ಮರಗಳ ಮಾರಣಹೋಮ ನಡೆಸಲಾಗುತ್ತಿದೆ. 

ಅತ್ಯಂತ ಆತಂಕಕಾರಿ ಸಂಗತಿಯೆಂದರೆ, ಇತ್ತೀಚಿನ ವರ್ಷಗಳಲ್ಲಿ ಕೇಂದ್ರ ಸರ್ಕಾರವು ತಂದಿರುವ ಅರಣ್ಯ ಸಂರಕ್ಷಣಾ ಕಾಯ್ದೆಯ ತಿದ್ದುಪಡಿಗಳು ಮತ್ತು ಉದಾರೀಕರಣ ನೀತಿಗಳು ಕಾರ್ಪೊರೇಟ್ ಸಂಸ್ಥೆಗಳಿಗೆ ಮತ್ತು ಖಾಸಗಿ ಕಂಪನಿಗಳಿಗೆ ಕಾಡುಗಳನ್ನು ಲೂಟಿ ಮಾಡಲು ರತ್ನಗಂಬಳಿ ಹಾಸಿಕೊಟ್ಟಿವೆ. ಕಲ್ಲಿದ್ದಲು ಗಣಿಗಾರಿಕೆ, ವಾಣಿಜ್ಯ ನಗರೀಕರಣ ಮತ್ತು ಕೈಗಾರಿಕಾ ಕಾರಿಡಾರ್‌ಗಳ ಹೆಸರಿನಲ್ಲಿ ಶತಮಾನಗಳ ಇತಿಹಾಸವಿರುವ ದಟ್ಟ ಅರಣ್ಯ ಪ್ರದೇಶಗಳನ್ನು ಖಾಸಗಿ ಒಡೆತನಕ್ಕೆ ಒಪ್ಪಿಸಲಾಗುತ್ತಿದೆ. ಹಸಿರು ವಲಯಗಳನ್ನು ವಾಣಿಜ್ಯೀಕರಣಕ್ಕೆ ಮುಕ್ತಗೊಳಿಸಲು ಪರಿಸರ ಪ್ರಭಾವದ ಮೌಲ್ಯಮಾಪನ ನಿಯಮಗಳನ್ನು ಸಂಪೂರ್ಣವಾಗಿ ಸಡಿಲಗೊಳಿಸಲಾಗಿದ್ದು, ಪರಿಸರಕ್ಕೆ ಪೂರಕವಾದ ನಿಯಮಗಳನ್ನೆಲ್ಲಾ ಗಾಳಿಗೆ ತೂರಲಾಗುತ್ತಿದೆ.

ಸರ್ಕಾರ ಮತ್ತು ಖಾಸಗಿ ಕಂಪನಿಗಳ ಈ ಅಪವಿತ್ರ ಮೈತ್ರಿಯ ವಿರುದ್ಧ ದೇಶದ ಶ್ವಾಸಕೋಶದಂತಿರುವ ಕಾಡುಗಳನ್ನು ಮತ್ತು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಆದಿವಾಸಿಗಳು ಹಾಗೂ ಸ್ಥಳೀಯ ಬುಡಕಟ್ಟು ಸಮುದಾಯಗಳು ನಿರಂತರ ಹೋರಾಟ ನಡೆಸುತ್ತಿವೆ. ತಲೆಮಾರುಗಳಿಂದ ಪ್ರಕೃತಿಯನ್ನು ದೈವದಂತೆ ಆರಾಧಿಸುತ್ತಾ, ಕಾಡನ್ನೇ ನಂಬಿ ಬದುಕುತ್ತಿರುವ ಆದಿವಾಸಿಗಳನ್ನು ಅವರ ಮೂಲ ನೆಲೆಯಿಂದ ಬಲವಂತವಾಗಿ ಒಕ್ಕಲೆಬ್ಬಿಸಲಾಗುತ್ತಿದೆ. ತಮ್ಮ ಜಲ, ಜಮೀನು ಮತ್ತು ಜಂಗಲ್ ರಕ್ಷಣೆಗಾಗಿ ಆದಿವಾಸಿಗಳು ನಡೆಸುತ್ತಿರುವ ಶಾಂತಿಯುತ ಪ್ರತಿಭಟನೆಗಳನ್ನು ಉಕ್ಕಿನ ಹಸ್ತದಿಂದ ಹತ್ತಿಕ್ಕಲಾಗುತ್ತಿದೆ.

ವಿಶ್ವಸಂಸ್ಥೆಯ ವರದಿಯಲ್ಲಿ ಉಲ್ಲೇಖವಾಗಿರುವ ಪರಿಸರ ರಕ್ಷಕರ ಮೇಲಿನ ದೌರ್ಜನ್ಯದ ಕಹಿ ಸತ್ಯ ಭಾರತದಲ್ಲೂ ತೀವ್ರವಾಗಿ ಗೋಚರಿಸುತ್ತಿದೆ. ದೇಶದಲ್ಲಿ ಪರಿಸರ ನಾಶದ ವಿರುದ್ಧ ದ್ವನಿ ಎತ್ತುವ ಸ್ಥಳೀಯ ಜನರನ್ನು, ಪ್ರಗತಿಪರ ಚಿಂತಕರನ್ನು ಮತ್ತು ಪರಿಸರವಾದಿಗಳನ್ನು ‘ಅಭಿವೃದ್ಧಿ ವಿರೋಧಿಗಳು’ ಅಥವಾ ‘ದೇಶದ್ರೋಹಿಗಳು’ ಎಂದು ಬಿಂಬಿಸುವ ಅಪಾಯಕಾರಿ ಪ್ರವೃತ್ತಿ ಹೆಚ್ಚಾಗುತ್ತಿದೆ. 

ಪ್ರಕೃತಿಯನ್ನು ರಕ್ಷಿಸಲು ಕಾನೂನಾತ್ಮಕ ಹೋರಾಟ ಅಥವಾ ಬೀದಿಗಿಳಿದು ಪ್ರತಿಭಟಿಸುವ ಪರಿಸರ ಕಾರ್ಯಕರ್ತರ ಮೇಲೆ ಸುಳ್ಳು ಮೊಕದ್ದಮೆಗಳನ್ನು ಹೂಡಲಾಗುತ್ತಿದೆ ಹಾಗೂ ಕಠಿಣ ಕಾನೂನುಗಳ ಅಡಿಯಲ್ಲಿ ಅವರನ್ನು ಜೈಲಿಗಟ್ಟುವ ಮೂಲಕ ಅವರ ದ್ವನಿಯನ್ನು ಅಡಗಿಸುವ ಯತ್ನಗಳು ವ್ಯವಸ್ಥಿತವಾಗಿ ನಡೆಯುತ್ತಿವೆ. 

ಕಾರ್ಪೊರೇಟ್ ಹಿತಾಸಕ್ತಿ ಮತ್ತು ರಾಜಕೀಯ ಲಾಭಕ್ಕಾಗಿ ಪ್ರಕೃತಿಯನ್ನು ಬಲಿಗೊಡುತ್ತಿರುವ ಇಂದಿನ ಪರಿಸ್ಥಿತಿಯಲ್ಲಿ, ನಮಗೆ ಉಸಿರಾಡಲು ಗಾಳಿ ಮತ್ತು ಕುಡಿಯಲು ನೀರು ಇಲ್ಲದಿದ್ದರೆ ನಾವು ಗಳಿಸುವ ಆರ್ಥಿಕ ಪ್ರಗತಿಗೆ ಯಾವುದೇ ಅರ್ಥವಿರುವುದಿಲ್ಲ. ಪ್ರಕೃತಿಯನ್ನು ಸಂಪೂರ್ಣವಾಗಿ ನಾಶಮಾಡಿ ಪಡೆಯುವ ಯಾವುದೇ ಅಭಿವೃದ್ಧಿಯೂ ಸುಸ್ಥಿರ ಅಭಿವೃದ್ಧಿ ಎನಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಸತ್ಯವನ್ನು ಸರ್ಕಾರಗಳು ಅರಿಯಬೇಕಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ವರ್ಷಕ್ಕೊಮ್ಮೆ ಜೂನ್ 5 ರಂದು ಗಿಡಕ್ಕೆ ನೀರು ಉಣ್ಣಿಸುವ ಫೋಟೋಗಳನ್ನು ಪತ್ರಿಕೆಗಳಲ್ಲಿ ಪ್ರಕಟಿಸಿಕೊಂಡರೆ ಪರಿಸರ ಸರಿಹೋಗುವುದಿಲ್ಲ. ಅಭಿವೃದ್ಧಿಯ ಹೆಸರಿನಲ್ಲಿ ಕಾಡುಗಳನ್ನು ಕಡಿದುರುಳಿಸುವ ನೀತಿಗಳಿಗೆ ಸರ್ಕಾರಗಳು ಬ್ರೇಕ್ ಹಾಕಬೇಕಿದೆ. ಪರಿಸರ ಉಳಿಸಲು ಹೋರಾಡುವವರನ್ನು ಅಪರಾಧಿಗಳಂತೆ ನೋಡುವುದನ್ನು ನಿಲ್ಲಿಸಿ, ಅವರಿಗೆ ಸೂಕ್ತ ರಕ್ಷಣೆ ನೀಡಿದಾಗ ಮಾತ್ರ ವಿಶ್ವ ಪರಿಸರ ದಿನದ ಆಚರಣೆಗೆ ನಿಜವಾದ ಅರ್ಥ ಬರಲು ಸಾಧ್ಯ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಿಡದಿ ರೈತರ ವಿಚಾರದಲ್ಲಿ ಸರ್ಕಾರದ ನಿರ್ಧಾರ ಸ್ವಾಗತಾರ್ಹ ಆದರೆ.., ಸಂಯುಕ್ತ ಹೋರಾಟ ಸಮಿತಿಯ ಎಚ್ಚರಿಕೆಯ ಮಾತು

ಬಿಡದಿ ಟೌನ್‌ಶಿಪ್ ವಿಚಾರದಲ್ಲಿ ಬಲವಂತವಾಗಿ ಯಾವುದೇ ರೈತರ ಭೂಮಿ ಕಿತ್ತುಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳುತ್ತಿರುವುದು ಕೇವಲ ಮಾತಿನ ಜಾಣ್ಮೆಯಷ್ಟೇ. ಬಿಡದಿ ಭಾಗದ ಮೂರು ಗ್ರಾಮಗಳಿಗೆ ಹೊರಡಿಸಲಾಗಿರುವ ಭೂಸ್ವಾಧೀನದ ಅಂತಿಮ ಅಧಿಸೂಚನೆಯನ್ನು ಸಂಪೂರ್ಣವಾಗಿ...

“8.5 ಕೆಜಿ ತೂಕ ಇಳಿಸಿಕೊಂಡ ಸೋನಮ್ ವಾಂಗ್‌ಚುಕ್ ಜೀವಕ್ಕೆ ಅಪಾಯ: ಬಲವಂತ ಆಹಾರ ನೀಡುವಂತೆ ದೆಹಲಿ ಹೈಕೋರ್ಟ್‌ನಲ್ಲಿ ಪಿಐಎಲ್”

ದೇಶದ ಶೈಕ್ಷಣಿಕ ವ್ಯವಸ್ಥೆಯ ಭವಿಷ್ಯವನ್ನು ಗಾಳಿಗೆ ತೂರಿರುವ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಸಾಲು ಸಾಲು ಭ್ರಷ್ಟಾಚಾರದ ವಿರುದ್ಧ ಸಿಡಿದೆದ್ದು, ದೆಹಲಿಯ ಜಂತರ್ ಮಂತರ್‌ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಪ್ರಖ್ಯಾತ ಹವಾಮಾನ ಮತ್ತು...

ಇನ್‌ಸ್ಟಾಮಾರ್ಟ್‌ನಲ್ಲಿ ಸಿಗಲಿದೆ ಎಲ್‌ಪಿಜಿ ಸಿಲಿಂಡರ್: ಬೆಂಗಳೂರಿನಲ್ಲಿ ಹೊಸ ಸೇವೆ ಆರಂಭ!

ಬೆಂಗಳೂರು: ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರಿನ ಗ್ರಾಹಕರು ಇನ್ನು ಮುಂದೆ ಪ್ರಮುಖ ಕ್ವಿಕ್ ಕಾಮರ್ಸ್ ಸಂಸ್ಥೆಯಾದ 'ಇನ್‌ಸ್ಟಾಮಾರ್ಟ್' (Instamart) ಆ್ಯಪ್ ಮೂಲಕವೇ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳನ್ನು ಬುಕ್ ಮಾಡಬಹುದು. ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್...

ಬಿಡದಿ ರೈತರ ಹೋರಾಟಕ್ಕೆ ಜಯ: ಬಲವಂತವಾಗಿ ಒಬ್ಬೇ ಒಬ್ಬ ರೈತರ ಜಮೀನನ್ನೂ ಪಡೆಯಲ್ಲ ಸಿಎಂ ಡಿ.ಕೆ.ಶಿವಕುಮಾರ್

"ಬಿಡದಿ ಸ್ಮಾರ್ಟ್ ಸಿಟಿ/ಟೌನ್ ಶಿಪ್ ಯೋಜನೆಯ ಹೆಸರಿನಲ್ಲಿ ಬಲವಂತವಾಗಿ ಒಬ್ಬೇ ಒಬ್ಬ ರೈತರ ಅಥವಾ ರೈತ ಮಹಿಳೆಯರ ಜಮೀನನ್ನು ನಮ್ಮ ಸರ್ಕಾರ ಭೂಸ್ವಾಧೀನ ಮಾಡಿಕೊಳ್ಳುವುದಿಲ್ಲ," ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಬಿಡದಿ ಟೌನ್‌ಶಿಪ್...

ಪಶ್ಚಿಮ ಬಂಗಾಳ: TMC ಬಂಡಾಯ ನಾಯಕ ರಿತಬ್ರತ ಬ್ಯಾನರ್ಜಿಗೆ ವಿಪಕ್ಷ ಸ್ಥಾನ ನೀಡಿದ್ದಕ್ಕೆ ನ್ಯಾಯಾಧೀಶರ ತೀವ್ರ ಆಕ್ಷೇಪ

ತೃಣಮೂಲ ಕಾಂಗ್ರೆಸ್‌ನ ಬಂಡಾಯ ಬಣದ ಮುಖ್ಯಸ್ಥ ರಿತಬ್ರತ ಬ್ಯಾನರ್ಜಿ ಅವರನ್ನು ಪಶ್ಚಿಮ ಬಂಗಾಳದ ವಿಧಾನಸಭೆಯ ವಿರೋಧ ಪಕ್ಷದ ನಾಯಕರನ್ನಾಗಿ ನೇಮಕ ಮಾಡುವಲ್ಲಿ ಸ್ಪೀಕರ್ ರತೀಂದ್ರ ಬೋಸ್ ತೋರಿರುವ "ತರಾತುರಿ"ಯನ್ನು ಕಲ್ಕತ್ತಾ ಹೈಕೋರ್ಟ್‌ನ ನ್ಯಾಯಮೂರ್ತಿ...

ಎರಡು ವರ್ಷಗಳಲ್ಲಿ 1,679 ಜನರನ್ನು ಬಾಂಗ್ಲಾದೇಶಕ್ಕೆ ಕಳುಹಿಸಲಾಗಿದೆ; ಇವರಲ್ಲಿ 193 ಮಂದಿ ವಿದೇಶಿಯರೆಂದು ಘೋಷಿತರು: ಅಸ್ಸಾಂ ಸರ್ಕಾರ

ಗುವಾಹಟಿ: ಕಳೆದ ಎರಡು ವರ್ಷಗಳ ಅವಧಿಯಲ್ಲಿ ಗಡೀಪಾರು, ಗಡಿಯಿಂದ ಆಚೆಗೆ ತಳ್ಳುವಿಕೆ (ಪುಶ್‌ಬ್ಯಾಕ್) ಅಥವಾ ಉಚ್ಚಾಟನೆ ಪ್ರಕ್ರಿಯೆಯ ಮೂಲಕ ಒಟ್ಟು 1,679 ಜನರನ್ನು ಬಾಂಗ್ಲಾದೇಶಕ್ಕೆ ಕಳುಹಿಸಲಾಗಿದೆ ಎಂದು ಅಸ್ಸಾಂ ಸರ್ಕಾರ ರಾಜ್ಯ ವಿಧಾನಸಭೆಗೆ...

17 ದಿನ, 9 ಕೆಜಿ ತೂಕ ಇಳಿಕೆ, ಸೋನಮ್ ವಾಂಗ್‌ಚುಕ್ ಆರೋಗ್ಯ ಸ್ಥಿತಿ ಗಂಭೀರ: ಉಪವಾಸ ಕೈಬಿಡುವಂತೆ ಅಖಿಲೇಶ್-ಕೇಜ್ರಿವಾಲ್ ಮನವಿ

ದೇಶದ ಶಿಕ್ಷಣ ವ್ಯವಸ್ಥೆಯನ್ನು ಜರ್ಜರಿತಗೊಳಿಸಿರುವ ಸರಣಿ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಭ್ರಷ್ಟಾಚಾರವನ್ನು ವಿರೋಧಿಸಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಖ್ಯಾತ ಪರಿಸರ ಕಾರ್ಯಕರ್ತ ಸೋನಮ್...

ಎನ್‌ಸಿಪಿಯ ಎರಡೂ ಬಣಗಳಲ್ಲೂ ಬಿರುಸಿನ ಬೆಳವಣಿಗೆ : ಬಿಜೆಪಿ ತೆಕ್ಕೆಗೆ ಮತ್ತೊಂದು ಪಕ್ಷ?

ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿಯ (ಎನ್‌ಸಿಪಿ) ಎರಡೂ ಬಣಗಳ ಮುಖ್ಯ ನಾಯಕರು ಮಂಗಳವಾರ (ಜು.14) ರಾತ್ರಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಈ ಸಭೆಯು ಶರದ್ ಪವಾರ್ ಅವರ...

ಮೋದಿಯ ಮೌನವನ್ನು ಪ್ರಶ್ನಿಸುವ ರಾಹುಲ್ ಗಾಂಧಿ, ಸಾರ್ವಜನಿಕ ಹಿತಾಸಕ್ತಿಯ ಈ ವಿಷಯಗಳಲ್ಲಿ ತಾವೇಕೆ ಮೌನ?

ಪ್ರಧಾನಿ ಮೋದಿಯವರದ್ದು ಜಾಣ ಮೌನ ಎಂದು ಈಗಾಗಲೇ ಈ ದೇಶದ ಜನಕ್ಕೆ ಮನವರಿಕೆಯಾಗಿದೆ. ಕಳೆದ 14ವರ್ಷದಲ್ಲಿ ಒಂದೇ ಒಂದು ಪ್ರೆಸ್ ಮೀಟ್‌ಅನ್ನು ಅಡ್ರೆಸ್ ಮಾಡದೆ ಇರುವವರ ಬಗ್ಗೆ ಜನ ಹೆಚ್ಚಿನದ್ದೇನನ್ನು ನಿರೀಕ್ಷಿಸಲಾರರು, ಆದರೆ...

ಹೊಸ ಮತದಾರರ ಫಾರಂ 6ಕ್ಕೆ ಪೋಷಕರ ಎಸ್‌ಐಆರ್ ಕಡ್ಡಾಯಗೊಳಿಸಿದ ಚು. ಆಯೋಗ : ಸಂಪೂರ್ಣ ಕಾನೂನುಬಾಹಿರ ಎಂದ ಸಂಸದ ಜಾನ್ ಬ್ರಿಟ್ಟಾಸ್

ಹೊಸ ಮತದಾರರನ್ನು ನೋಂದಾಯಿಸಲು ಬಳಸುವ ತನ್ನ ಆನ್‌ಲೈನ್ ಅರ್ಜಿಯಲ್ಲಿ ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್‌ಐಆರ್) ಸಂಬಂಧಿಸಿದ ಹೊಸ ವಿಭಾಗವನ್ನು ಸೇರಿಸುವ ಮೂಲಕ ಚುನಾವಣಾ ಆಯೋಗವು (ಇಸಿ) "ಸಂಪೂರ್ಣವಾಗಿ ಕಾನೂನು ಅಧಿಕಾರವಿಲ್ಲದೆ ಕಾರ್ಯನಿರ್ವಹಿಸಿದೆ" ಎಂದು...