Homeಅಂಕಣಗಳುಗೌರಿ ಕಾರ್ನರ್; ’ಅಂಡರ್ ಗ್ರೌಂಡ್’: ತಲ್ಲಣಗೊಳಿಸುವ ಚಿತ್ರವೊಂದರ ಕತೆ..

ಗೌರಿ ಕಾರ್ನರ್; ’ಅಂಡರ್ ಗ್ರೌಂಡ್’: ತಲ್ಲಣಗೊಳಿಸುವ ಚಿತ್ರವೊಂದರ ಕತೆ..

- Advertisement -
- Advertisement -

ಅವರಿಬ್ಬರೂ ಆತ್ಮೀಯ ಸ್ನೇಹಿತರು. ಕದಿಯುವುದರಲ್ಲಿ, ಮಜಾ ಉಡಾಯಿಸುವುದರಲ್ಲಿ, ಕುಡಿದು ಕುಪ್ಪಳಿಸುವುದರಲ್ಲಿ ನಿಷ್ಣಾತರು. ಒಬ್ಬ ಮಾರ್ಕೋ, ಮಗದೊಬ್ಬ ಬ್ಲಾಕಿ. ಜೋಕರ್‌ಗಳ ತರಹ ವರ್ತಿಸುವ ಇವರಿಬ್ಬರೂ ಒಂದು ರೀತಿಯಲ್ಲಿ ಬ್ಲ್ಯಾಕ್ ಕಾಮಿಡಿಯೊಂದರ ಹೀರೋಗಳು. ಅವರಿರುವ ಯುಗೋಸ್ಲಾವಿಯಾ ದೇಶದಲ್ಲಿ ಆಗ ತಾನೇ ಕಮ್ಯುನಿಸ್ಟರು ಸಂಘಟಿತರಾಗುತ್ತಿದ್ದಾರೆ. ಆ ಚಳವಳಿಯನ್ನು ಸೇರಿಕೊಳ್ಳುವ ಮಾರ್ಕೋ ತನ್ನೊಂದಿಗೆ ಬ್ಲಾಕಿಯನ್ನು ಕರೆತರುತ್ತಾನೆ. ಅದೇ ಸಮಯಕ್ಕೆ ಎರಡನೇ ಮಹಾಯುದ್ಧ ಪ್ರಾರಂಭವಾಗಿ ಹಿಟ್ಲರ್‌ನ ಸೈನ್ಯ ಯುಗೋಸ್ಲಾವಿಯಾ ದೇಶದ ಮೇಲೆ ದಾಳಿ ಇಡುತ್ತದೆ. ಹೇಗಾದರೂ ಸರಿಯೇ ’ಹಾದರಕ್ಕೆ ಹುಟ್ಟಿದ ಫ್ಯಾಸಿಸ್ಟರನ್ನು’ ಸೋಲಿಸಬೇಕು ಎಂದು ತೀರ್ಮಾನಿಸುವ ಮಾರ್ಕೋ ಮತ್ತು ಬ್ಲಾಕಿ ತಮ್ಮ ಚಾಣಾಕ್ಷತೆಯನ್ನು ಉಪಯೋಗಿಸಿ ಶಸ್ತ್ರಾಸ್ತ್ರಗಳನ್ನು ಕದ್ದು ಕಮ್ಯುನಿಸ್ಟರಿಗೆ ಸರಬರಾಜು ಮಾಡುವುದರಲ್ಲಿ ನಿರತರಾಗುತ್ತಾರೆ. ಯುದ್ಧದಲ್ಲಿ ಮಾರ್ಕೋ ಸಹೋದರನ ಮೃಗಾಲಯ ನಾಶಗೊಂಡರೆ ಬ್ಲಾಕಿಯ ಪ್ರೇಯಸಿ ಹಿಟ್ಲರ್‌ನ ಸೈನ್ಯಾಧಿಕಾರಿಯೊಬ್ಬನ ವಶಕ್ಕೆ ಬೀಳುವ ಅಂಚಿನಲ್ಲಿದ್ದಾಳೆ. ಆನಂತರ ಹಿಟ್ಲರ್‌ನ ಸೈನ್ಯ ನಾಶಮಾಡದೇ ಇದ್ದುದ್ದನ್ನು ಮೈತ್ರಿಕೂಟ ನೆಲಸಮ ಮಾಡುತ್ತದೆ.

ಇಂತಹ ಪರಿಸ್ಥಿತಿಯಲ್ಲಿ ಬದುಕುಳಿಯಲು ಬ್ಲಾಕಿ, ಆತನ ಹೆಂಡತಿಗೆ ಹುಟ್ಟಿದ ಹಸಿಗೂಸು, ಮಾರ್ಕೋನ ಸಹೋದರ ಎಲ್ಲರೂ ಮನೆಯೊಂದರ ನೆಲಮಾಳಿಗೆಯಲ್ಲಿ ಅವಿತುಕೊಳ್ಳುತ್ತಾರೆ. ಬ್ಲಾಕಿಯ ಪ್ರೇಯಸಿಯ ಮೇಲೆ ಕಣ್ಣಿಟ್ಟಿರುವ ಮಾರ್ಕೋ ಹೊರಗಡೆ ಬಂದು ಒಂದೇ ಏಟಿಗೆ ಎಲ್ಲವನ್ನೂ ತನ್ನದಾಗಿಸಿಕೊಳ್ಳುವ ಸಂಚನ್ನು ರೂಪಿಸುತ್ತಾನೆ. ಬ್ಲಾಕಿಯ ಪ್ರೇಯಸಿಯನ್ನು ವರಿಸುತ್ತಲೇ, ಬ್ಲಾಕಿ ನೆಲಮಾಳಿಗೆಯಲ್ಲೇ ಶಾಶ್ವತವಾಗಿ ಉಳಿಯುವಂತೆ ಮಾಡುತ್ತಾನೆ. ಹೊರ ಪ್ರಪಂಚದಲ್ಲಿ ಏನಾಗುತ್ತಿದೆ ಎಂದು ಅರಿಯದ ಬ್ಲಾಕಿ ಮತ್ತು ಇತರರು ಸೋತು ಸುಣ್ಣವಾಗಿರುವ ’ಹಾದರಕ್ಕೆ ಹುಟ್ಟಿದ ಫ್ಯಾಸಿಸ್ಟ್’ ಜರ್ಮನಿಯ ವಿರುದ್ಧ ಇನ್ನೂ ಯುದ್ಧ ನಡೆಯುತ್ತಿದೆ ಎಂಬ ಭ್ರಮೆಯಲ್ಲೇ 20 ವರ್ಷಗಳ ಕಾಲ ಜೀವಿಸುತ್ತಾರೆ. ಆದರೆ ವಾಸ್ತವವಾಗಿ ಬ್ಲಾಕಿಯ ಪ್ರೇಯಸಿಯನ್ನು ಮದುವೆಯಾಗಿರುವ ಮಾರ್ಕೋ, ಅಧಿಕಾರಕ್ಕೆ ಬಂದಿರುವ ಟೀಟೋನ ಸಂಪುಟದಲ್ಲಿ ಸಚಿವನಾಗಿರುತ್ತಾನೆ; ಬ್ಲಾಕಿ ತಂಡ ನೆಲಮಾಳಿಗೆಯಲ್ಲಿ ತಯಾರಿಸುತ್ತಿರುವ ಆಯುಧಗಳನ್ನು ಕಾಳಸಂತೆಯಲ್ಲಿ ಮಾರಿ ಆಗರ್ಭ ಶ್ರೀಮಂತನಾಗಿರುತ್ತಾನೆ.

PC : FilmAffinity

ಕೊನೆಗೂ ಒಂದು ದಿನ ಬ್ಲಾಕಿ ತನ್ನ ಮಗನೊಂದಿಗೆ ನೆಲಮಾಳಿಗೆಯಿಂದ ಹೊರಬಂದು ನೇರವಾಗಿ ಯುದ್ಧದಲ್ಲಿ ತೊಡಗುವುದಾಗಿ ನಿರ್ಧರಿಸುತ್ತಾನೆ. ಈಗ 20 ವರ್ಷದ ಯುವಕನಾಗಿರುವ ಬ್ಲಾಕಿಯ ಮಗ ಇದೇ ಮೊದಲನೆ ಬಾರಿ ಹೊರ ಪ್ರಪಂಚವನ್ನು ನೋಡುತ್ತಿದ್ದಾನೆ. ರಾತ್ರಿಯ ಆಕಾಶದಲ್ಲಿ ಚಂದಿರನನ್ನು ಕಂಡು “ಅಪ್ಪ ನೋಡು ಸೂರ್ಯ ಎಂದು ಬೆರಗಾಗುತ್ತಾನೆ. ಮಾರನೆ ದಿನ ಸೂರ್ಯ ಉದಯವಾಗುವುದನ್ನು ಕಂಡು “ಈ ಜಗತ್ತು ಎಷ್ಟು ಸುಂದರ!” ಎಂದು ಉದ್ಗಾರವೆತ್ತುತ್ತಾನೆ. ಆದರೆ ತಂದೆ-ಮಗನನ್ನು ದಂಗೆಕೋರರೆಂದು ಭಾವಿಸಿ ಸರ್ಕಾರದ ಸೈನಿಕರೇ ಅವರನ್ನು ಕೊಲ್ಲಲೆತ್ನಿಸುತ್ತಾರೆ. ಈ ಘಟನೆಯಲ್ಲಿ ಬ್ಲಾಕಿಯ ಮಗ ನೀರುಪಾಲಾಗಿ ಸಾವನ್ನಪ್ಪುತ್ತಾನೆ.

ಬ್ಲಾಕಿ ಹೊರಬಂದ ನಂತರ ತನಗೆ ಇನ್ನು ಯಾವುದೇ ಮಾರ್ಗವಿಲ್ಲ ಎಂದು ಭಾವಿಸಿ ಮಾರ್ಕೋ ಭೂಗತನಾಗುತ್ತಾನೆ. ಇದೆಲ್ಲದರ ಮಧ್ಯೆ ಮಾರ್ಕೋನ ತಮ್ಮ ನೆಲಮಾಳಿಗೆಯಿಂದ ತಪ್ಪಿಸಿಕೊಂಡಿರುವ ತನ್ನ ಕೋತಿಯನ್ನು ಹುಡುಕುತ್ತಾ ಅದೇ ’ಹಾದರಕ್ಕೆ ಹುಟ್ಟಿದ ಫ್ಯಾಸಿಸ್ಟ್’ರ ದೇಶವಾದ ಜರ್ಮನಿಗೆ ಬರುತ್ತಾನೆ. ಆದರೆ ಯುದ್ಧ ಮುಗಿದು ಅದೆಷ್ಟೋ ಕಾಲವಾಗಿ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿದೆ. ತನ್ನ ಅಣ್ಣ ಮಾರ್ಕೋನೇ ತನ್ನನ್ನು ಮತ್ತು ಇತರರನ್ನು ನೆಲಮಾಳಿಗೆಯಲ್ಲಿ ಬಂಧಿಸಿಟ್ಟಿದ್ದ ಎಂದು ಅವನಿಗೆ ಗೊತ್ತಾಗಿ ದುಃಖಿಸುತ್ತಾನೆ. ಆತ ಯುಗೋಸ್ಲಾವಿಯಾಗೆ ಹಿಂದಿರುಗಿದಾಗ, ಅಲ್ಲಿ ಆಂತರಿಕ ಯುದ್ಧ ಪ್ರಾರಂಭವಾಗಿದೆ. ಮಾರ್ಕೋ ಭೂಗತನಾದ ನಂತರ ಸರ್ವಾಧಿಕಾರಿ ಟೀಟೋ ಸತ್ತು ಹೋಗಿದ್ದಾನೆ. ಯುಗೋಸ್ಲಾವಿಯಾ ದೇಶವೇ ಛಿದ್ರಗೊಂಡು, ಕ್ರೋಏಶಿಯನ್ನರು, ಬೋಸ್ನಿಯನ್ನರು ಮತ್ತು ಸರ್ಬಿಯನ್ನರು ಪರಸ್ಪರ ಯುದ್ಧದಲ್ಲಿ ಮುಳುಗಿದ್ದಾರೆ. ಇಂತಹ ಸಂದರ್ಭದಲ್ಲೂ ಮಾರ್ಕೋ ತನ್ನ ಶಸ್ತ್ರಾಸ್ತ್ರಗಳ ಕಳ್ಳ ಸಾಗಾಣಿಕೆಯಲ್ಲಿ ತೊಡಗಿದ್ದಾನೆ. ಗುಂಡೇಟಿನಿಂದ ಕುಂಟನಾಗಿರುವ ಮಾರ್ಕೋ ಒಮ್ಮೆ ತನ್ನ ವೀಲ್‌ಚೇರ್‌ನಲ್ಲಿ ಹೋಗುತ್ತಿರುವುದನ್ನು ನೋಡುವ ಅವನ ಸಹೋದರ ಬಂದು ಮಾರ್ಕೋನನ್ನು ಇನ್ನಿಲ್ಲದಂತೆ ಹೊಡೆಯುತ್ತಾನೆ. ಆದರೂ ಮಾರ್ಕೋ ತನಗೆ ಏನೂ ಆಗಿಲ್ಲವೆಂಬಂತೆ ಕೂತಿರುವುದನ್ನು ಕಂಡು ರೋಸಿ ಹೋಗುವ ಸಹೋದರ ಹತ್ತಿರದಲ್ಲಿರುವ ಚರ್ಚ್ ಒಂದರಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಸಾವನ್ನಪ್ಪುತ್ತಾನೆ.

ಇದೇ ಹೊತ್ತಿಗೆ ಬ್ಲಾಕಿ ಯುದ್ಧದಲ್ಲಿ ಹೋರಾಡುತ್ತಿರುವ ಪಂಗಡವೊಂದರ ನಾಯಕನಾಗಿ ’ಹಾದರಕ್ಕೆ ಹುಟ್ಟಿದ ಫ್ಯಾಸಿಸ್ಟ್’ಗಳ ವಿರುದ್ಧ ಇನ್ನೂ ಕೆಂಡಕಾರುತ್ತಿದ್ದಾನೆ. ಮಾರ್ಕೋನನ್ನು ಹಿಡಿಯುವ ಬ್ಲಾಕಿಯ ಅಧೀನ ಅಧಿಕಾರಿಯೊಬ್ಬ “ಶಸ್ತ್ರಾಸ್ತ್ರಗಳ ಕಳ್ಳ ವ್ಯವಹಾರಿ ಮತ್ತು ಆತನ ಹೆಂಡತಿ ಸೆರೆ ಸಿಕ್ಕಿದ್ದಾರೆ, ಅವರನ್ನು ಏನು ಮಾಡಲಿ?” ಎಂದು ಕೇಳುತ್ತಾನೆ. ಮರುಚಿಂತೆ ಮಾಡದೆ “ಅವರಿಬ್ಬರನ್ನು ತಕ್ಷಣವೇ ಕೊಂದು ಹಾಕು” ಎಂದು ಬ್ಲಾಕಿ ಆದೇಶಿಸುತ್ತಾನೆ. ಅಗ್ನಿಗೆ ಬಲಿಯಾದ ಅವರಿಬ್ಬರ ಪಾಸ್‌ಪೋರ್ಟ್‌ಗಳನ್ನು ನೋಡಿದ ನಂತರವೇ ತಾನು ತನ್ನ ಸ್ನೇಹಿತ ಮತ್ತು ಮಾಜಿ ಪ್ರೇಯಸಿಯನ್ನು ಕೊಲ್ಲಿಸಿದ್ದೇನೆ ಎಂದು ಬ್ಲಾಕಿಗೆ ಗೊತ್ತಾಗುತ್ತದೆ.

ಯುದ್ಧ ಆತನಲ್ಲಿ ಭ್ರಮನಿರಸನವನ್ನುಂಟು ಮಾಡುತ್ತದೆ. ಆತ ದ್ವೇಷಿಸುತ್ತಿದ್ದ “ಹಾದರಕ್ಕೆ ಹುಟ್ಟಿದ ಫ್ಯಾಸಿಸ್ಟ್” ವೈರಿಗಳು ಬದಲಾಗುತ್ತಾ ಹೋಗುತ್ತಾರೆಯೇ ಹೊರತು ಯುದ್ಧ ಮಾತ್ರ ನಿರಂತರವಾಗಿ ಸಾಗುತ್ತದೆ ಎಂದು ಬ್ಲಾಕಿಗೆ ಗೊತ್ತಾಗುತ್ತದೆ. ತನ್ನ ದೇಶ, ಚಳವಳಿ, ಕನಸು, ಸ್ನೇಹಿತ, ಪ್ರೇಯಸಿ, ಮಗ…. ಎಲ್ಲವನ್ನು ಕಳೆದುಕೊಂಡ ಬ್ಲಾಕಿ ಮತ್ತೆ ಅದೇ ನೆಲಮಾಳಿಗೆಯಲ್ಲಿ ಸ್ವಬಂಧನವನ್ನು ಅರಸುತ್ತಾನೆ.

ಎಲ್ಲರೂ ಸತ್ತಿದ್ದಾರೆ, ಎಲ್ಲವೂ ನಾಶಗೊಂಡಿದೆ, ದೇಶ ಛಿದ್ರಗೊಂಡಿದೆ. ಹೋರಾಡಲು, ಪ್ರೀತಿಸಲು, ಆಶ್ರಯಿಸಲು, ಬೆಂಬಲಿಸಲು ಈಗ ಏನೂ ಉಳಿದಿಲ್ಲ. ಒಂದು ಸ್ತರದಲ್ಲಿ ಕಾಮಿಡಿ ರೀತಿಯಲ್ಲಿ ಬಿಚ್ಚಿಕೊಳ್ಳುತ್ತಾ ಹೋಗುವ ಈ ಕತೆ ಇನ್ನೊಂದು ಸ್ತರದಲ್ಲಿ ಅಸಂಗತ ನಾಟಕದಂತೆಯೂ, ವಾಸ್ತವದ ವಿಮರ್ಶೆಯಾಗಿಯೂ ಸಾಗುತ್ತದೆ. ಕೊನೆ ದೃಶ್ಯದಲ್ಲಿ ಸತ್ತಿರುವ ಎಲ್ಲರೂ ಸಮುದ್ರದ ದಡದಲ್ಲಿ ಸೇರಿದ್ದಾರೆ. ಅಲ್ಲಿ ಸಂಗೀತ, ನೃತ್ಯದಲ್ಲಿ ಎಲ್ಲಾ ದ್ವೇಷಾಸೂಯೆಗಳನ್ನು ಮರೆತು ಸಂತೋಷದ ಅಮಲಿನಲ್ಲಿ ತೇಲಾಡುತ್ತಿದ್ದಾರೆ. ನಿಧಾನವಾಗಿ ನೆಲದಲ್ಲಿ ಬಿರುಕೊಂದು ಮೂಡಿ ಸಮುದ್ರದ ದಡವೇ ಪ್ರತ್ಯೇಕ ದ್ವೀಪವಾಗಿ ದೂರಕ್ಕೆ ಚಲಿಸಲಾರಂಭಿಸುತ್ತದೆ….. ಆಗ ಮಾರ್ಕೋನ ಸಹೋದರ ನಮ್ಮತ್ತ ದಿಟ್ಟಿಸುತ್ತಾ; “ಮುಂದೊಂದು ದಿನ ನಮ್ಮ ಮಕ್ಕಳಿಗೆ ಹೀಗೊಂದು ಕತೆ ಹೇಳಬಹುದು: ಒಂದಾನೊಂದು ಕಾಲದಲ್ಲಿ ಒಂದು ದೇಶ ಇತ್ತು…..”

ಇದು ಎಮಿರ್ ಕುಸ್ಟಿರಿಕಾ ಎಂಬಾತ ನಿರ್ದೇಶಿಸಿರುವ ’ಅಂಡರ್‌ಗ್ರೌಂಡ್’ ಸಾರಾಂಶ. ಯುಗೋಸ್ಲಾವಿಯಾ ಎಂಬ ದೇಶದ ದುರಂತವನ್ನು ಸೆರೆ ಹಿಡಿದಿರುವ ’ಅಂಡರ್‌ಗ್ರೌಂಡ್’ ಚಿತ್ರಕ್ಕೆ ಪ್ರತಿಷ್ಠಿತ ಕಾನ್ ಚಿತ್ರೋತ್ಸವದಲ್ಲಿ ಗೋಲ್ಡನ್ ಪಾಮ್ ಸೇರಿದಂತೆ ಹಲವಾರು ಪ್ರಶಸ್ತಿಗಳು ಲಭಿಸಿವೆ.

PC : Elle, (ಎಮಿರ್ ಕುಸ್ಟಿರಿಕಾ)

ಇಲ್ಲಿ ಯುಗೋಸ್ಲಾವಿಯಾ ಬದಲಿಗೆ ಭಾರತವನ್ನೇ ಚಿತ್ರಿಸಿಕೊಳ್ಳಿ. ಎರಡನೇ ಮಹಾಯುದ್ಧದ ನಂತರ ದೇಶದ ವಿಭಜನೆ, ಆನಂತರ ಪಾಕಿಸ್ತಾನ ಮತ್ತು ಭಾರತದ ನಡುವಿನ ನಾಲ್ಕು ಯುದ್ಧಗಳು, ಅಲ್ಲಿನ ಕ್ರೋಏಶಿಯರು, ಸರ್ಬಿಯನ್ನರು ಮತ್ತು ಬೋಸ್ನಿಯಾದವರ ನಡುವಿನ ಕಾಳಗದಂತೆ ಇಲ್ಲಿನ ಹಿಂದೂ ಮತ್ತು ಮುಸ್ಲಿಮರ ನಡುವಿನ ಕೋಮುಗಲಭೆಗಳು…. ’ಅಂಡರ್ ಗ್ರೌಂಡ್’ ಚಿತ್ರದಲ್ಲಿ ಒಂದು ಸಾಲಿದೆ. ತನ್ನ ತಮ್ಮನಿಂದ ಏಟುಗಳನ್ನು ತಿನ್ನುತ್ತಿರುವ ಮಾರ್ಕೋ ಹೇಳುತ್ತಾನೆ: “ಸಹೋದರರು ಒಬ್ಬರನ್ನೊಬ್ಬರು ಸಾಯಿಸುವವರೆಗೂ ಯಾವ ಯುದ್ಧವೂ ಸಂಪೂರ್ಣವಾದ ಯುದ್ಧವಾಗುವುದಿಲ್ಲ. ಇದು ಇವತ್ತಿನ ಭಾರತಕ್ಕೂ ಅನ್ವಯಿಸುತ್ತದಲ್ಲವೇ?

ಅಂದಹಾಗೆ, ಛಿದ್ರಗೊಂಡ ಯುಗೋಸ್ಲಾವಿಯಾದಲ್ಲಿನ ಯುದ್ಧವನ್ನು ಕಂಡು ಯಾರೋ ಒಬ್ಬರು “ವಿವಿಧ ಬುಡಕಟ್ಟು ಮತ್ತು ಧರ್ಮೀಯರ ನಡುವೆ ಭಾರತದಲ್ಲೇನಾದರೂ ಯುದ್ಧ ಶುರುವಾದರೆ ಇವತ್ತು ಯುಗೋಸ್ಲಾವಿಯಾದಲ್ಲಾಗುತ್ತಿರುವುದು ಒಂದು ಪುಟ್ಟ ಪಿಕ್‌ನಿಕ್‌ನಂತೆ ಕಾಣಿಸುತ್ತದೆ” ಎಂದಿದ್ದರು.

ಈ ಚಿತ್ರವನ್ನು ನೋಡುತ್ತಿದ್ದಾಗ ಅವರು ಆಡಿದ್ದ ಭವಿಷ್ಯವಾಣಿ ನೆನಪಾಯಿತು.

(ಗೌರಿ ಲಂಕೇಶ್ ಅವರ ಕಂಡಹಾಗೆ ಅಂಕಣವೊಂದರ ಮರುಪ್ರಕಟಣೆ ಇದು)


ಇದನ್ನೂ ಓದಿ: ಗೌರಿ ಕಾರ್ನರ್; ಲಿವ್ ಅಂಡ್ ಬಿಕಮ್ ಸಿನಿಮ: ಪ್ರೀತಿಗಿರುವಷ್ಟು ಶಕ್ತಿ ಇನ್ಯಾವುದಕ್ಕಿದೆ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...