Homeಅಂಕಣಗಳುಗೌರಿ ಕಾರ್ನರ್; ’ಅಂಡರ್ ಗ್ರೌಂಡ್’: ತಲ್ಲಣಗೊಳಿಸುವ ಚಿತ್ರವೊಂದರ ಕತೆ..

ಗೌರಿ ಕಾರ್ನರ್; ’ಅಂಡರ್ ಗ್ರೌಂಡ್’: ತಲ್ಲಣಗೊಳಿಸುವ ಚಿತ್ರವೊಂದರ ಕತೆ..

- Advertisement -
- Advertisement -

ಅವರಿಬ್ಬರೂ ಆತ್ಮೀಯ ಸ್ನೇಹಿತರು. ಕದಿಯುವುದರಲ್ಲಿ, ಮಜಾ ಉಡಾಯಿಸುವುದರಲ್ಲಿ, ಕುಡಿದು ಕುಪ್ಪಳಿಸುವುದರಲ್ಲಿ ನಿಷ್ಣಾತರು. ಒಬ್ಬ ಮಾರ್ಕೋ, ಮಗದೊಬ್ಬ ಬ್ಲಾಕಿ. ಜೋಕರ್‌ಗಳ ತರಹ ವರ್ತಿಸುವ ಇವರಿಬ್ಬರೂ ಒಂದು ರೀತಿಯಲ್ಲಿ ಬ್ಲ್ಯಾಕ್ ಕಾಮಿಡಿಯೊಂದರ ಹೀರೋಗಳು. ಅವರಿರುವ ಯುಗೋಸ್ಲಾವಿಯಾ ದೇಶದಲ್ಲಿ ಆಗ ತಾನೇ ಕಮ್ಯುನಿಸ್ಟರು ಸಂಘಟಿತರಾಗುತ್ತಿದ್ದಾರೆ. ಆ ಚಳವಳಿಯನ್ನು ಸೇರಿಕೊಳ್ಳುವ ಮಾರ್ಕೋ ತನ್ನೊಂದಿಗೆ ಬ್ಲಾಕಿಯನ್ನು ಕರೆತರುತ್ತಾನೆ. ಅದೇ ಸಮಯಕ್ಕೆ ಎರಡನೇ ಮಹಾಯುದ್ಧ ಪ್ರಾರಂಭವಾಗಿ ಹಿಟ್ಲರ್‌ನ ಸೈನ್ಯ ಯುಗೋಸ್ಲಾವಿಯಾ ದೇಶದ ಮೇಲೆ ದಾಳಿ ಇಡುತ್ತದೆ. ಹೇಗಾದರೂ ಸರಿಯೇ ’ಹಾದರಕ್ಕೆ ಹುಟ್ಟಿದ ಫ್ಯಾಸಿಸ್ಟರನ್ನು’ ಸೋಲಿಸಬೇಕು ಎಂದು ತೀರ್ಮಾನಿಸುವ ಮಾರ್ಕೋ ಮತ್ತು ಬ್ಲಾಕಿ ತಮ್ಮ ಚಾಣಾಕ್ಷತೆಯನ್ನು ಉಪಯೋಗಿಸಿ ಶಸ್ತ್ರಾಸ್ತ್ರಗಳನ್ನು ಕದ್ದು ಕಮ್ಯುನಿಸ್ಟರಿಗೆ ಸರಬರಾಜು ಮಾಡುವುದರಲ್ಲಿ ನಿರತರಾಗುತ್ತಾರೆ. ಯುದ್ಧದಲ್ಲಿ ಮಾರ್ಕೋ ಸಹೋದರನ ಮೃಗಾಲಯ ನಾಶಗೊಂಡರೆ ಬ್ಲಾಕಿಯ ಪ್ರೇಯಸಿ ಹಿಟ್ಲರ್‌ನ ಸೈನ್ಯಾಧಿಕಾರಿಯೊಬ್ಬನ ವಶಕ್ಕೆ ಬೀಳುವ ಅಂಚಿನಲ್ಲಿದ್ದಾಳೆ. ಆನಂತರ ಹಿಟ್ಲರ್‌ನ ಸೈನ್ಯ ನಾಶಮಾಡದೇ ಇದ್ದುದ್ದನ್ನು ಮೈತ್ರಿಕೂಟ ನೆಲಸಮ ಮಾಡುತ್ತದೆ.

ಇಂತಹ ಪರಿಸ್ಥಿತಿಯಲ್ಲಿ ಬದುಕುಳಿಯಲು ಬ್ಲಾಕಿ, ಆತನ ಹೆಂಡತಿಗೆ ಹುಟ್ಟಿದ ಹಸಿಗೂಸು, ಮಾರ್ಕೋನ ಸಹೋದರ ಎಲ್ಲರೂ ಮನೆಯೊಂದರ ನೆಲಮಾಳಿಗೆಯಲ್ಲಿ ಅವಿತುಕೊಳ್ಳುತ್ತಾರೆ. ಬ್ಲಾಕಿಯ ಪ್ರೇಯಸಿಯ ಮೇಲೆ ಕಣ್ಣಿಟ್ಟಿರುವ ಮಾರ್ಕೋ ಹೊರಗಡೆ ಬಂದು ಒಂದೇ ಏಟಿಗೆ ಎಲ್ಲವನ್ನೂ ತನ್ನದಾಗಿಸಿಕೊಳ್ಳುವ ಸಂಚನ್ನು ರೂಪಿಸುತ್ತಾನೆ. ಬ್ಲಾಕಿಯ ಪ್ರೇಯಸಿಯನ್ನು ವರಿಸುತ್ತಲೇ, ಬ್ಲಾಕಿ ನೆಲಮಾಳಿಗೆಯಲ್ಲೇ ಶಾಶ್ವತವಾಗಿ ಉಳಿಯುವಂತೆ ಮಾಡುತ್ತಾನೆ. ಹೊರ ಪ್ರಪಂಚದಲ್ಲಿ ಏನಾಗುತ್ತಿದೆ ಎಂದು ಅರಿಯದ ಬ್ಲಾಕಿ ಮತ್ತು ಇತರರು ಸೋತು ಸುಣ್ಣವಾಗಿರುವ ’ಹಾದರಕ್ಕೆ ಹುಟ್ಟಿದ ಫ್ಯಾಸಿಸ್ಟ್’ ಜರ್ಮನಿಯ ವಿರುದ್ಧ ಇನ್ನೂ ಯುದ್ಧ ನಡೆಯುತ್ತಿದೆ ಎಂಬ ಭ್ರಮೆಯಲ್ಲೇ 20 ವರ್ಷಗಳ ಕಾಲ ಜೀವಿಸುತ್ತಾರೆ. ಆದರೆ ವಾಸ್ತವವಾಗಿ ಬ್ಲಾಕಿಯ ಪ್ರೇಯಸಿಯನ್ನು ಮದುವೆಯಾಗಿರುವ ಮಾರ್ಕೋ, ಅಧಿಕಾರಕ್ಕೆ ಬಂದಿರುವ ಟೀಟೋನ ಸಂಪುಟದಲ್ಲಿ ಸಚಿವನಾಗಿರುತ್ತಾನೆ; ಬ್ಲಾಕಿ ತಂಡ ನೆಲಮಾಳಿಗೆಯಲ್ಲಿ ತಯಾರಿಸುತ್ತಿರುವ ಆಯುಧಗಳನ್ನು ಕಾಳಸಂತೆಯಲ್ಲಿ ಮಾರಿ ಆಗರ್ಭ ಶ್ರೀಮಂತನಾಗಿರುತ್ತಾನೆ.

PC : FilmAffinity

ಕೊನೆಗೂ ಒಂದು ದಿನ ಬ್ಲಾಕಿ ತನ್ನ ಮಗನೊಂದಿಗೆ ನೆಲಮಾಳಿಗೆಯಿಂದ ಹೊರಬಂದು ನೇರವಾಗಿ ಯುದ್ಧದಲ್ಲಿ ತೊಡಗುವುದಾಗಿ ನಿರ್ಧರಿಸುತ್ತಾನೆ. ಈಗ 20 ವರ್ಷದ ಯುವಕನಾಗಿರುವ ಬ್ಲಾಕಿಯ ಮಗ ಇದೇ ಮೊದಲನೆ ಬಾರಿ ಹೊರ ಪ್ರಪಂಚವನ್ನು ನೋಡುತ್ತಿದ್ದಾನೆ. ರಾತ್ರಿಯ ಆಕಾಶದಲ್ಲಿ ಚಂದಿರನನ್ನು ಕಂಡು “ಅಪ್ಪ ನೋಡು ಸೂರ್ಯ ಎಂದು ಬೆರಗಾಗುತ್ತಾನೆ. ಮಾರನೆ ದಿನ ಸೂರ್ಯ ಉದಯವಾಗುವುದನ್ನು ಕಂಡು “ಈ ಜಗತ್ತು ಎಷ್ಟು ಸುಂದರ!” ಎಂದು ಉದ್ಗಾರವೆತ್ತುತ್ತಾನೆ. ಆದರೆ ತಂದೆ-ಮಗನನ್ನು ದಂಗೆಕೋರರೆಂದು ಭಾವಿಸಿ ಸರ್ಕಾರದ ಸೈನಿಕರೇ ಅವರನ್ನು ಕೊಲ್ಲಲೆತ್ನಿಸುತ್ತಾರೆ. ಈ ಘಟನೆಯಲ್ಲಿ ಬ್ಲಾಕಿಯ ಮಗ ನೀರುಪಾಲಾಗಿ ಸಾವನ್ನಪ್ಪುತ್ತಾನೆ.

ಬ್ಲಾಕಿ ಹೊರಬಂದ ನಂತರ ತನಗೆ ಇನ್ನು ಯಾವುದೇ ಮಾರ್ಗವಿಲ್ಲ ಎಂದು ಭಾವಿಸಿ ಮಾರ್ಕೋ ಭೂಗತನಾಗುತ್ತಾನೆ. ಇದೆಲ್ಲದರ ಮಧ್ಯೆ ಮಾರ್ಕೋನ ತಮ್ಮ ನೆಲಮಾಳಿಗೆಯಿಂದ ತಪ್ಪಿಸಿಕೊಂಡಿರುವ ತನ್ನ ಕೋತಿಯನ್ನು ಹುಡುಕುತ್ತಾ ಅದೇ ’ಹಾದರಕ್ಕೆ ಹುಟ್ಟಿದ ಫ್ಯಾಸಿಸ್ಟ್’ರ ದೇಶವಾದ ಜರ್ಮನಿಗೆ ಬರುತ್ತಾನೆ. ಆದರೆ ಯುದ್ಧ ಮುಗಿದು ಅದೆಷ್ಟೋ ಕಾಲವಾಗಿ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿದೆ. ತನ್ನ ಅಣ್ಣ ಮಾರ್ಕೋನೇ ತನ್ನನ್ನು ಮತ್ತು ಇತರರನ್ನು ನೆಲಮಾಳಿಗೆಯಲ್ಲಿ ಬಂಧಿಸಿಟ್ಟಿದ್ದ ಎಂದು ಅವನಿಗೆ ಗೊತ್ತಾಗಿ ದುಃಖಿಸುತ್ತಾನೆ. ಆತ ಯುಗೋಸ್ಲಾವಿಯಾಗೆ ಹಿಂದಿರುಗಿದಾಗ, ಅಲ್ಲಿ ಆಂತರಿಕ ಯುದ್ಧ ಪ್ರಾರಂಭವಾಗಿದೆ. ಮಾರ್ಕೋ ಭೂಗತನಾದ ನಂತರ ಸರ್ವಾಧಿಕಾರಿ ಟೀಟೋ ಸತ್ತು ಹೋಗಿದ್ದಾನೆ. ಯುಗೋಸ್ಲಾವಿಯಾ ದೇಶವೇ ಛಿದ್ರಗೊಂಡು, ಕ್ರೋಏಶಿಯನ್ನರು, ಬೋಸ್ನಿಯನ್ನರು ಮತ್ತು ಸರ್ಬಿಯನ್ನರು ಪರಸ್ಪರ ಯುದ್ಧದಲ್ಲಿ ಮುಳುಗಿದ್ದಾರೆ. ಇಂತಹ ಸಂದರ್ಭದಲ್ಲೂ ಮಾರ್ಕೋ ತನ್ನ ಶಸ್ತ್ರಾಸ್ತ್ರಗಳ ಕಳ್ಳ ಸಾಗಾಣಿಕೆಯಲ್ಲಿ ತೊಡಗಿದ್ದಾನೆ. ಗುಂಡೇಟಿನಿಂದ ಕುಂಟನಾಗಿರುವ ಮಾರ್ಕೋ ಒಮ್ಮೆ ತನ್ನ ವೀಲ್‌ಚೇರ್‌ನಲ್ಲಿ ಹೋಗುತ್ತಿರುವುದನ್ನು ನೋಡುವ ಅವನ ಸಹೋದರ ಬಂದು ಮಾರ್ಕೋನನ್ನು ಇನ್ನಿಲ್ಲದಂತೆ ಹೊಡೆಯುತ್ತಾನೆ. ಆದರೂ ಮಾರ್ಕೋ ತನಗೆ ಏನೂ ಆಗಿಲ್ಲವೆಂಬಂತೆ ಕೂತಿರುವುದನ್ನು ಕಂಡು ರೋಸಿ ಹೋಗುವ ಸಹೋದರ ಹತ್ತಿರದಲ್ಲಿರುವ ಚರ್ಚ್ ಒಂದರಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಸಾವನ್ನಪ್ಪುತ್ತಾನೆ.

ಇದೇ ಹೊತ್ತಿಗೆ ಬ್ಲಾಕಿ ಯುದ್ಧದಲ್ಲಿ ಹೋರಾಡುತ್ತಿರುವ ಪಂಗಡವೊಂದರ ನಾಯಕನಾಗಿ ’ಹಾದರಕ್ಕೆ ಹುಟ್ಟಿದ ಫ್ಯಾಸಿಸ್ಟ್’ಗಳ ವಿರುದ್ಧ ಇನ್ನೂ ಕೆಂಡಕಾರುತ್ತಿದ್ದಾನೆ. ಮಾರ್ಕೋನನ್ನು ಹಿಡಿಯುವ ಬ್ಲಾಕಿಯ ಅಧೀನ ಅಧಿಕಾರಿಯೊಬ್ಬ “ಶಸ್ತ್ರಾಸ್ತ್ರಗಳ ಕಳ್ಳ ವ್ಯವಹಾರಿ ಮತ್ತು ಆತನ ಹೆಂಡತಿ ಸೆರೆ ಸಿಕ್ಕಿದ್ದಾರೆ, ಅವರನ್ನು ಏನು ಮಾಡಲಿ?” ಎಂದು ಕೇಳುತ್ತಾನೆ. ಮರುಚಿಂತೆ ಮಾಡದೆ “ಅವರಿಬ್ಬರನ್ನು ತಕ್ಷಣವೇ ಕೊಂದು ಹಾಕು” ಎಂದು ಬ್ಲಾಕಿ ಆದೇಶಿಸುತ್ತಾನೆ. ಅಗ್ನಿಗೆ ಬಲಿಯಾದ ಅವರಿಬ್ಬರ ಪಾಸ್‌ಪೋರ್ಟ್‌ಗಳನ್ನು ನೋಡಿದ ನಂತರವೇ ತಾನು ತನ್ನ ಸ್ನೇಹಿತ ಮತ್ತು ಮಾಜಿ ಪ್ರೇಯಸಿಯನ್ನು ಕೊಲ್ಲಿಸಿದ್ದೇನೆ ಎಂದು ಬ್ಲಾಕಿಗೆ ಗೊತ್ತಾಗುತ್ತದೆ.

ಯುದ್ಧ ಆತನಲ್ಲಿ ಭ್ರಮನಿರಸನವನ್ನುಂಟು ಮಾಡುತ್ತದೆ. ಆತ ದ್ವೇಷಿಸುತ್ತಿದ್ದ “ಹಾದರಕ್ಕೆ ಹುಟ್ಟಿದ ಫ್ಯಾಸಿಸ್ಟ್” ವೈರಿಗಳು ಬದಲಾಗುತ್ತಾ ಹೋಗುತ್ತಾರೆಯೇ ಹೊರತು ಯುದ್ಧ ಮಾತ್ರ ನಿರಂತರವಾಗಿ ಸಾಗುತ್ತದೆ ಎಂದು ಬ್ಲಾಕಿಗೆ ಗೊತ್ತಾಗುತ್ತದೆ. ತನ್ನ ದೇಶ, ಚಳವಳಿ, ಕನಸು, ಸ್ನೇಹಿತ, ಪ್ರೇಯಸಿ, ಮಗ…. ಎಲ್ಲವನ್ನು ಕಳೆದುಕೊಂಡ ಬ್ಲಾಕಿ ಮತ್ತೆ ಅದೇ ನೆಲಮಾಳಿಗೆಯಲ್ಲಿ ಸ್ವಬಂಧನವನ್ನು ಅರಸುತ್ತಾನೆ.

ಎಲ್ಲರೂ ಸತ್ತಿದ್ದಾರೆ, ಎಲ್ಲವೂ ನಾಶಗೊಂಡಿದೆ, ದೇಶ ಛಿದ್ರಗೊಂಡಿದೆ. ಹೋರಾಡಲು, ಪ್ರೀತಿಸಲು, ಆಶ್ರಯಿಸಲು, ಬೆಂಬಲಿಸಲು ಈಗ ಏನೂ ಉಳಿದಿಲ್ಲ. ಒಂದು ಸ್ತರದಲ್ಲಿ ಕಾಮಿಡಿ ರೀತಿಯಲ್ಲಿ ಬಿಚ್ಚಿಕೊಳ್ಳುತ್ತಾ ಹೋಗುವ ಈ ಕತೆ ಇನ್ನೊಂದು ಸ್ತರದಲ್ಲಿ ಅಸಂಗತ ನಾಟಕದಂತೆಯೂ, ವಾಸ್ತವದ ವಿಮರ್ಶೆಯಾಗಿಯೂ ಸಾಗುತ್ತದೆ. ಕೊನೆ ದೃಶ್ಯದಲ್ಲಿ ಸತ್ತಿರುವ ಎಲ್ಲರೂ ಸಮುದ್ರದ ದಡದಲ್ಲಿ ಸೇರಿದ್ದಾರೆ. ಅಲ್ಲಿ ಸಂಗೀತ, ನೃತ್ಯದಲ್ಲಿ ಎಲ್ಲಾ ದ್ವೇಷಾಸೂಯೆಗಳನ್ನು ಮರೆತು ಸಂತೋಷದ ಅಮಲಿನಲ್ಲಿ ತೇಲಾಡುತ್ತಿದ್ದಾರೆ. ನಿಧಾನವಾಗಿ ನೆಲದಲ್ಲಿ ಬಿರುಕೊಂದು ಮೂಡಿ ಸಮುದ್ರದ ದಡವೇ ಪ್ರತ್ಯೇಕ ದ್ವೀಪವಾಗಿ ದೂರಕ್ಕೆ ಚಲಿಸಲಾರಂಭಿಸುತ್ತದೆ….. ಆಗ ಮಾರ್ಕೋನ ಸಹೋದರ ನಮ್ಮತ್ತ ದಿಟ್ಟಿಸುತ್ತಾ; “ಮುಂದೊಂದು ದಿನ ನಮ್ಮ ಮಕ್ಕಳಿಗೆ ಹೀಗೊಂದು ಕತೆ ಹೇಳಬಹುದು: ಒಂದಾನೊಂದು ಕಾಲದಲ್ಲಿ ಒಂದು ದೇಶ ಇತ್ತು…..”

ಇದು ಎಮಿರ್ ಕುಸ್ಟಿರಿಕಾ ಎಂಬಾತ ನಿರ್ದೇಶಿಸಿರುವ ’ಅಂಡರ್‌ಗ್ರೌಂಡ್’ ಸಾರಾಂಶ. ಯುಗೋಸ್ಲಾವಿಯಾ ಎಂಬ ದೇಶದ ದುರಂತವನ್ನು ಸೆರೆ ಹಿಡಿದಿರುವ ’ಅಂಡರ್‌ಗ್ರೌಂಡ್’ ಚಿತ್ರಕ್ಕೆ ಪ್ರತಿಷ್ಠಿತ ಕಾನ್ ಚಿತ್ರೋತ್ಸವದಲ್ಲಿ ಗೋಲ್ಡನ್ ಪಾಮ್ ಸೇರಿದಂತೆ ಹಲವಾರು ಪ್ರಶಸ್ತಿಗಳು ಲಭಿಸಿವೆ.

PC : Elle, (ಎಮಿರ್ ಕುಸ್ಟಿರಿಕಾ)

ಇಲ್ಲಿ ಯುಗೋಸ್ಲಾವಿಯಾ ಬದಲಿಗೆ ಭಾರತವನ್ನೇ ಚಿತ್ರಿಸಿಕೊಳ್ಳಿ. ಎರಡನೇ ಮಹಾಯುದ್ಧದ ನಂತರ ದೇಶದ ವಿಭಜನೆ, ಆನಂತರ ಪಾಕಿಸ್ತಾನ ಮತ್ತು ಭಾರತದ ನಡುವಿನ ನಾಲ್ಕು ಯುದ್ಧಗಳು, ಅಲ್ಲಿನ ಕ್ರೋಏಶಿಯರು, ಸರ್ಬಿಯನ್ನರು ಮತ್ತು ಬೋಸ್ನಿಯಾದವರ ನಡುವಿನ ಕಾಳಗದಂತೆ ಇಲ್ಲಿನ ಹಿಂದೂ ಮತ್ತು ಮುಸ್ಲಿಮರ ನಡುವಿನ ಕೋಮುಗಲಭೆಗಳು…. ’ಅಂಡರ್ ಗ್ರೌಂಡ್’ ಚಿತ್ರದಲ್ಲಿ ಒಂದು ಸಾಲಿದೆ. ತನ್ನ ತಮ್ಮನಿಂದ ಏಟುಗಳನ್ನು ತಿನ್ನುತ್ತಿರುವ ಮಾರ್ಕೋ ಹೇಳುತ್ತಾನೆ: “ಸಹೋದರರು ಒಬ್ಬರನ್ನೊಬ್ಬರು ಸಾಯಿಸುವವರೆಗೂ ಯಾವ ಯುದ್ಧವೂ ಸಂಪೂರ್ಣವಾದ ಯುದ್ಧವಾಗುವುದಿಲ್ಲ. ಇದು ಇವತ್ತಿನ ಭಾರತಕ್ಕೂ ಅನ್ವಯಿಸುತ್ತದಲ್ಲವೇ?

ಅಂದಹಾಗೆ, ಛಿದ್ರಗೊಂಡ ಯುಗೋಸ್ಲಾವಿಯಾದಲ್ಲಿನ ಯುದ್ಧವನ್ನು ಕಂಡು ಯಾರೋ ಒಬ್ಬರು “ವಿವಿಧ ಬುಡಕಟ್ಟು ಮತ್ತು ಧರ್ಮೀಯರ ನಡುವೆ ಭಾರತದಲ್ಲೇನಾದರೂ ಯುದ್ಧ ಶುರುವಾದರೆ ಇವತ್ತು ಯುಗೋಸ್ಲಾವಿಯಾದಲ್ಲಾಗುತ್ತಿರುವುದು ಒಂದು ಪುಟ್ಟ ಪಿಕ್‌ನಿಕ್‌ನಂತೆ ಕಾಣಿಸುತ್ತದೆ” ಎಂದಿದ್ದರು.

ಈ ಚಿತ್ರವನ್ನು ನೋಡುತ್ತಿದ್ದಾಗ ಅವರು ಆಡಿದ್ದ ಭವಿಷ್ಯವಾಣಿ ನೆನಪಾಯಿತು.

(ಗೌರಿ ಲಂಕೇಶ್ ಅವರ ಕಂಡಹಾಗೆ ಅಂಕಣವೊಂದರ ಮರುಪ್ರಕಟಣೆ ಇದು)


ಇದನ್ನೂ ಓದಿ: ಗೌರಿ ಕಾರ್ನರ್; ಲಿವ್ ಅಂಡ್ ಬಿಕಮ್ ಸಿನಿಮ: ಪ್ರೀತಿಗಿರುವಷ್ಟು ಶಕ್ತಿ ಇನ್ಯಾವುದಕ್ಕಿದೆ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...