ಪ್ರಧಾನಿ ನರೇಂದ್ರ ಮೋದಿಯವರು ಪಂಚರಾಜ್ಯ ಚುನಾವಣೆಗೆ ಕೊಟ್ಟ ಗಮನವನ್ನು ಕೊರೊನಾ ನಿಯಂತ್ರಣಕ್ಕೆ ನೀಡಿದ್ದರೇ ದೇಶದಲ್ಲಿ ಈ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರ ಮೋದಿಯವರು ಪಂಚರಾಜ್ಯಗಳ ಚುನಾವಣೆ ಕಡೆ ಹೆಚ್ಚು ಗಮನ ಕೊಟ್ಟರು. ಚುನಾವಣೆಗೆ ಕೊಟ್ಟಷ್ಟು ಕೊರೊನಾ ಬಗ್ಗೆ ಗಮನ ಕೊಡಲಿಲ್ಲ. ಚುನಾವಣೆ ಬದಲು ಕೊರೊನಾ ಕಡೆ ಗಮನ ಕೊಟ್ಟಿದ್ದರೆ ಪರಿಸ್ಥಿತಿ ಹೀಗಾಗುತ್ತಿರಲಿಲ್ಲ. ಚುನಾವಣೆಯಲ್ಲಿ ಗೆಲ್ಲಲೇಬೇಕು ಎಂದು, ಪ್ರಚಾರ ಸಭೆ, ಸಮಾರಂಭಗಳಿಗೆ ಹೆಚ್ಚು ಆದ್ಯತೆ ನೀಡಿದರು. ಚುನಾವಣೆ ಗಮನದಲ್ಲಿ ಸೋಂಕು ನಿರ್ವಹಣೆ ಮರೆತರು ಎಂದು ಪ್ರಧಾನಿ ಮೋದಿ ವಿರುದ್ದ ಕಿಡಿ ಕಾರಿದ್ದಾರೆ.
ಜಾತ್ಯಾತೀತ ಜನತಾದಳದ ಕಚೇರಿ ಜೆಪಿ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ’ಕುಮಾರಸ್ವಾಮಿ ಸರ್ಕಾರದ ವೈಫಲ್ಯದ ಬಗ್ಗೆ ಮಾತನಾಡುತ್ತಿದ್ದಾರೆ. ಟ್ವಿಟರ್ ಮೂಲಕ ಸಲಹೆ ನೀಡುವ ಕೆಲಸ ಮಾಡ್ತಿದ್ದಾರೆ. ಅವರೇ ಇಡೀ ರಾಜ್ಯದ ಕೆಲಸ ಮುಂದುವರಿಸುತ್ತಾರೆ’ ಎಂದಿದ್ದಾರೆ.
ಇದನ್ನೂ ಓದಿ: ಮೃತಪಟ್ಟ ಎಲ್ಲಾ ಶಿಕ್ಷಕರನ್ನು ಕೊರೊನಾ ವಾರಿಯರ್ಸ್ ಎಂದು ಪರಿಗಣಿಸಿ 50 ಲಕ್ಷ ರೂ. ಪರಿಹಾರ ನೀಡಿ- ಕುಮಾರಸ್ವಾಮಿ
“ಕೊರೊನಾ ನಿರ್ವಹಣೆ ವಿಚಾರದಲ್ಲಿ ಪ್ರಧಾನಿ ಮೋದಿಯವರಿಗೆ ಪತ್ರ ಬರೆದು ಸಲಹೆ ಕೊಟ್ಟಿದ್ದೇನೆ. ನಾನು ಕೊಟ್ಟಿದ್ದ 12 ಸಲಹೆಗಳಲ್ಲಿ 6 ಸಲಹೆಗಳನ್ನು ಕಾರ್ಯಗತ ಮಾಡುತ್ತಿದ್ದಾರೆ. ಮೊದಲ ಅಲೆಗಿಂತ ಎರಡನೇ ಅಲೆಯಲ್ಲಿ ಸೋಂಕು ತೀವ್ರವಾಗಿ ಹೆಚ್ಚಳ ಆಗಿದೆ. ಜೊತೆಗೆ ಬ್ಲಾಕ್ ಮತ್ತು ವೈಟ್ ಫಂಗಸ್ ಬಗ್ಗೆ ಆತಂಕ ಹುಟ್ಟುಕೊಂಡಿದೆ. ಇದರಿಂದ ದೇಶದ ಜನ ಸಮಸ್ಯೆಗೆ ಸಿಲುಕಿದ್ದಾರೆ. ಸರ್ಕಾರ ತಕ್ಷಣ ಇದನ್ನ ಸರಿಪಡಿಸುವ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ.
’ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಕೇಂದ್ರದಿಂದ ಲಸಿಕೆ, ಔಷಧಿ, ವೆಂಟಿಲೇಟರ್ , ಆಕ್ಸಿಜನ್ ನೀಡುವುದರಲ್ಲಿ ಮಲತಾಯಿ ಧೋರಣೆ ತೋರಿದೆ. ಈ ವಿಚಾರದ ಈ ಬಗ್ಗೆ ನಾನು ಮೋದಿ ಅವರಿಗೆ ಪತ್ರ ಬರೆದಿದ್ದೇನೆ. ಹಣಕಾಸು ಹಂಚಿಕೆಯಲ್ಲಿಯೂ ನಮಗೆ ಅನ್ಯಾಯ ಆಗಿದೆ. ಚಿಕ್ಕ ರಾಜ್ಯಗಳಿಗೆ ಹೆಚ್ಚು ಹಣ ಬಿಡುಗಡೆ ಮಾಡ್ತಾರೆ. ನಮಗೆ ಕಡಿಮೆ ಹಣ ಬಿಡುಗಡೆ ಮಾಡಿದ್ದಾರೆ’ ಎಂದಿದ್ದಾರೆ.
ಇದನ್ನೂ ಓದಿ: ಟಿಎಂಸಿ ನಾಯಕರ ಗೃಹಬಂಧನಕ್ಕೆ ಅವಕಾಶ: ಹೈಕೋರ್ಟ್ ಆದೇಶ ವಿರೋಧಿಸಿ ಸುಪ್ರೀಂಗೆ ಹೋದ ಸಿಬಿಐ