Homeಪುಸ್ತಕ ವಿಮರ್ಶೆಪುಸ್ತಕ ಪರಿಚಯ; ಶಯ್ಯಾಗೃಹದ ಪಿಸುಮಾತುಗಳಿಗೆ ಕಿವುಡಾಗೇ ಇರುವ ಗಂಡು ಜಗತ್ತು!

ಪುಸ್ತಕ ಪರಿಚಯ; ಶಯ್ಯಾಗೃಹದ ಪಿಸುಮಾತುಗಳಿಗೆ ಕಿವುಡಾಗೇ ಇರುವ ಗಂಡು ಜಗತ್ತು!

- Advertisement -
- Advertisement -

ಡಾ. ಶೋಭಾ ನಾಯಕ ಅವರ ’ಶಯ್ಯಾಗೃಹದ ಸುದ್ದಿಗಳು’ ಕವನಸಂಕಲನ ಓದಿ ಮುಗಿಸಿದಾಗ ನನಗೆ ನೆನಪಾಗಿದ್ದು ಇಬ್ಬರು. ಒಬ್ಬ ಚಾರ್ಲ್ಸ್ ಬುಕೋಸ್ಕಿ ಮತ್ತೊಬ್ಬರು ಬೆಲ್ ಹುಕ್ಸ್.

ಚಾರ್ಲ್ಸ್ ಬುಕೋಸ್ಕಿ, ತನ್ನ ಮುಕ್ತ ಕಾವ್ಯದ ಮೂಲಕ ದಿಢೀರನೆ ಜನಪ್ರಿಯತೆ ಪಡೆದ ಅಮೆರಿಕದ ಕವಿ. ಆತನ ಜನಪ್ರಿಯತೆ ಕಾರಣ, ತನ್ನ ಕಾವ್ಯದ ಮುಕ್ತತೆ, ಸೋಗಿಲ್ಲದ ಮತ್ತು ಪ್ರಾಮಾಣಿಕ ಅಭಿವ್ಯಕ್ತಿ. ತನ್ನ ಹೆಣ್ಣುಬಾಕುತನ, ಆಷಾಢಭೂತಿನದ ಬಗ್ಗೆ ಇದ್ದ ತೀವ್ರ ಅಸಹನೆ, ಜನರ ಒಣಪ್ರತಿಷ್ಠೆಗಳ ಬಗ್ಗೆ ಮರ್ಮಾಘಾತವಾಗುವಂತೆ ಕವಿತೆಯಲ್ಲಿ ಕಾಲೆಳೆದು, ಟೀಕಿಸಿ, ಬರೆದಾತ. ತನ್ನ ತೀರಾ ಖಾಸಗಿಯದ್ದನ್ನು ನಿರ್ಭಿಡೆಯಿಂದ ಹೇಳುವಂತಹ ಬುಕೋಸ್ಕಿಯ ಕಾವ್ಯದಂತೆಯೇ, ಶೋಭಾ ನಾಯಕರ ಕಾವ್ಯದಲ್ಲಿರುವುದು, ಕೇಳುವವ ತನ್ನೊಳಗೆ ತಾನು ನೋಡಿಕೊಳ್ಳುವಂತೆ ಮಾಡುವ ಅಭಿವ್ಯಕ್ತಿಯ ವಿಧಾನ.

ಇನ್ನೊಂದು ಹೆಸರು ಬೆಲ್ ಹುಕ್ಸ್. ಸ್ತ್ರೀವಾದಕ್ಕೆ ಭಿನ್ನ ಒಳನೋಟಗಳನ್ನು ನೀಡಿದ ಲೇಖಕಿ ಇವರು. ಇವರ ’ಕಮ್ಯುನಿಯನ್: ದಿ ಫೀಮೇಲ್ ಸರ್ಚ್ ಫಾರ್ ಲವ್ ಕೃತಿಯಲ್ಲಿ ಒಂದೆಡೆ, “ಸತ್ಯ ಹೇಳುವ ಸಮಯ ಬಂದಿದೆ. ಮತ್ತೆ, ನ್ಯಾಯವಿಲ್ಲದ ಪ್ರೀತಿ ಇರಲಾರದು. ಹೆಣ್ಣು ಮತ್ತು ಗಂಡಿಗೆ, ತಾವು ಆತ್ಮೀಯವಾಗಿ ಬೆರೆಯುವ, ಎಲ್ಲರೊಂದಿಗೆ ಮತ್ತು ಪ್ರತಿಯೊಬ್ಬರೊಂದಿಗೂ ಪರಸ್ಪರರ ಪ್ರೀತಿಯನ್ನು ಅರಿಯುವ ಸ್ವಾತಂತ್ರ್ಯ ನಿರಾಕರಿಸಲಾಗುವುದಿಲ್ಲ. ಒಂದುವೇಳೆ ಪ್ರೀತಿಯನ್ನು ಒಂದು ಮಾಡುವ ನೀತಿಯನ್ನು ನಾವು ಗುರುತಿಸದೇ ಹೋದಲ್ಲಿ, ಅದು ಅಧಿಕಾರವನ್ನು ಅರಸುವಂತೆ ಮತ್ತು ಜಾಣ್ಮೆಯಿಂದ ಬಳಸುವಂತೆ ಮಾಡುತ್ತದೆ. ಹೀಗಾದರೆ ನಾವು ಸಾಂಸ್ಕೃತಿಕ ಯಜಮಾನಿಕೆಯೊಂದಿಗೆ ಬೆಸೆದುಕೊಳ್ಳುತ್ತೇವೆ, ಪ್ರೀತಿಯ ಬದಲು ಅಧಿಕಾರವನ್ನು ಆಯ್ಕೆಮಾಡಿಕೊಳ್ಳುತ್ತೇವೆ” ಎನ್ನುತ್ತಾರೆ. ಪಿತೃಪ್ರಧಾನ ಮನಸ್ಥಿತಿ ಹೇಗೆ ಗಂಡು-ಹೆಣ್ಣಿನ ಪ್ರೇಮ ಮತ್ತು ಕಾಮದ ಸಂಬಂಧವನ್ನು ನಿರ್ಧರಿಸುತ್ತದೆ, ಆಳುತ್ತದೆ ಎಂಬುದನ್ನು ಬೆಲ್ ಹುಕ್ಸ್ ತಮ್ಮ ಹಲವು ಕೃತಿಗಳಲ್ಲಿ ಚರ್ಚಿಸಿದ್ದಾರೆ, ವಿಶ್ಲೇಷಿಸಿದ್ದಾರೆ.

ಶೋಭಾ ನಾಯಕ ಅವರ ಕವಿತೆಗಳಲ್ಲಿ ತೀವ್ರವಾಗಿ ಆವರಿಸಿರುವ ’ಲಾಂಗಿಂಗ್’ (ಬಯಕೆ ತೀವ್ರತೆಯ ನಿರೀಕ್ಷೆ), ಅಕ್ಕ ಹೇಳುವ, ಸಾವಿಲ್ಲದ ಕೇಡಿಲ್ಲ, ರೂಹಿಲ್ಲದ ಚೆಲುವನಿಗೆ ಕಾತರಿಸುವಂತಹದ್ದು. ಅಂತಹ ಪ್ರೇಮಿಯೊಬ್ಬನ ಧ್ಯಾನ ಇಲ್ಲಿದೆ. ಅಡುಗೆ ಒಗ್ಗರಣೆಯ ಪಾತ್ರೆಗಳ ಸದ್ದಿನಲ್ಲಿ ಕಳೆದುಹೋಗುವ ಹೆಣ್ಣಿನ ಮನೋಲೋಕದ ಮಾತುಗಳನ್ನು ಗಂಡು-ಹೆಣ್ಣು ಮಲಗುವ ಕೋಣೆಯಲ್ಲಿ ಪಿಸುಮಾತಿನಲ್ಲಿ, ತುಸುಕೋಪದಲ್ಲಿ, ತುಸು ರಮಿಸುವಂತೆ ಹಂಚಿಕೊಳ್ಳಬೇಕು. ಗಂಡು ತಾನು ಗಂಡಾಗದೆ, ಹೆಣ್ಣು ತಾನು ಹೆಣ್ಣಾಗದೆ, ಗಂಡು ಹೆಣ್ಣಾಗುತ, ಹೆಣ್ಣು ಗಂಡಾಗುತ ಬೆರೆತು ಕಲೆತು ಹೋಗುವ ಏಕಾಂತವದು. ನಿಜಕ್ಕೂ ಮಲಗುವ ಕೋಣೆಯ ಏಕಾಂತ ಹಾಗಿರುತ್ತದೆಯೇ?

ಇಲ್ಲ, ಶೋಭಾ ನಾಯಕ್ ಅವರು ಅದನ್ನು ಪುರಾಣಕಾಲದಿಂದ ಕುರುಕ್ಷೇತ್ರದವರೆಗಿನ ಸ್ತ್ರೀಯರನ್ನು ನೆನಪಿಸುವ ಮೂಲಕ ಗಟ್ಟಿಯಾಗಿ ಹೇಳುತ್ತಾರೆ. ರಾಜ್ಯಕಾರಣ ಕವಿತೆಯಲ್ಲಿ ಸೀತೆ, ಮರಿಯಾ ಮ್ಯಾಗ್ಡಲೀನ್, ದ್ರೌಪದಿ, ರಾಧೆಯರನ್ನು ಅವರ ಪತಿ, ಪ್ರಿಯಕರರು ಅತಂತ್ರವಾಗಿಸಿದ್ದನ್ನು ಬಿಚ್ಚಿಡುತ್ತಾರೆ.

ಗಂಡಿನ ಅಹಂಕಾರವನ್ನು ’ಅಹಂ’ನಲ್ಲಿ ಅನಾವರಣ ಮಾಡುತ್ತಾರೆ. ’ಮಂಚವೆಂದರೆ ಸಮರಾಂಗಣ’ ಎಂದೂ, ’ನಾನು ನರಳುವಾಗ/ ನಿನಗೆ ಸಿಗುವ/ ಸುಖದ ಹೆಸರು: ಅಹಂ’ ಎಂದೂ ವ್ಯಾಖ್ಯಾನಿಸುತ್ತಾರೆ.

ಆದರೆ ಪ್ರೇಮ ಧ್ಯಾನದಲ್ಲಿ ತನ್ನ ನಿಜವಾದ ಸಂಗಾತಿಯನ್ನು ಹುಡುಕುವ ಕವಿ, ತನ್ನೊಳಗೆ ಪುಳಕವನ್ನು ಹುಟ್ಟಿಸಿದವನನ್ನು ನೆನಪಿಸಿಕೊಳ್ಳುತ್ತಾರೆ ಮತ್ತು ಹಂಬಲಿಸುತ್ತಾರೆ.

ಡಾ. ಶೋಭಾ ನಾಯಕ

ಆಡುವಾಗ ಜಡೆಯೆಳೆದವನು
ತರಗತಿಯಲ್ಲಿ ಲಂಗ ಜಗ್ಗಿದವನು
ಓಣಿ ಇಕ್ಕಟ್ಟಿನಲಿ ಜಾಲಿ ಮಾತ ಕಲಿಸಿದವನು
ಮುಗಳುನಗೆಯಲಿ ಕನಸು ಹುಟ್ಟಿಸಿದವನು
ಮೊದಲು ಚುಂಬಿಸಿದ ಅವನು
ಮೈಯರಳಿಸಿದ ಇವನು..

ಎಂದು ’ನಿನ್ನ ಪ್ರೇಮದಲ್ಲಿ ಎಚ್ಚರವಿದ್ದೇನೆ’ ಎಂದು ಘೋಷಿಸುತ್ತಾರೆ. ಈ ಎಚ್ಚರ ಮತ್ತು ಕಾಯುವಿಕೆಯ ನಿರಂತರ ಚಡಪಡಿಕೆಯ ಕುದಿಯನ್ನು ಅಷ್ಟೇ ತಣ್ಣಗೆ ದಾಟಿಸುತ್ತಾರೆ.

ಕಪ್ಪಿನ ಬಿಸಿ ಚ್ಹಾದೊಳಕ್ಕೆ
ಪ್ರತಿ ಅದ್ದಿಗೂ
ಇಷ್ಟಿಷ್ಟೇ ಕರಗಿಬೀಳುವ
ಬಿಸ್ಕೆಟಿನಂತೆ
ನಿನ್ನ ಪ್ರತಿ ಅಗಲಿಕೆಯಲೂ
ನರಕದಾಳಕ್ಕೆ
ಇಷ್ಟಿಷ್ಟೇ ಮುರಿದುಬೀಳುತ್ತೇನೆ.
ಆದರೆ,
ಈ ಕಪ್ಪಿನ ತಳ ಕಲಕಿ ಕುಡಿಯಲು ಬರುವ
ಯಾವನಿಗಾದರೂ ಕಾದಿರುತ್ತದೆ
ಮುರಿದು ಬಿದ್ದ
ಮರಣದ ಆ ತುತ್ತು.

ಹೀಗೆ ಧ್ಯಾನಿಸುವ ಕವಿ, ತಮ್ಮ ತೀವ್ರ ಅಭೀಪ್ಸೆಯನ್ನು ಹೆಣ್ಣಿನ ದೇಹ ಮತ್ತು ವಾಂಚೆಯ ರೂಪಕಗಳ ಮೂಲಕ ತಮ್ಮ ಪ್ರೇಮಾಂಕ್ಷೆ, ಸಾಂಗತ್ಯದ ಬಯಕೆಗಳನ್ನು ಕಟ್ಟಿಕೊಡುತ್ತಾರೆ. ಈ ಪ್ರತಿಮೆ-ರೂಪಕಗಳ ಹಸಿತನ ಹೆಣ್ಣಿನ ಅಭಿವ್ಯಕ್ತಿಗೆ ಈಗಲೂ ಇರುವ ಚೌಕಟ್ಟನ್ನು ಒಡೆಯುವ ಸಾಹಸ ಮಾಡುತ್ತವೆ. ಗಂಡಿನ ಅಹಂಕಾರವನ್ನು ಕೆಣುಕಲೆಂದೇ ಇಲ್ಲಿ ನಿರ್ಭಿಡೆಯಿಂದ ತನ್ನ ಮನದ ಮಾತುಗಳನ್ನು ಶಯ್ಯಾಗೃಹದ ಪಲ್ಲಂಗದ ಮೇಲೆ ಹರಡಿದಂತೆ ಹೊರಬಂದಿವೆ. ಈ ಪಿಸುಮಾತುಗಳನ್ನು ಕೇಳಿಸಿಕೊಳ್ಳುವ ಗಂಡಿಗೆ ಧ್ಯಾನಿಸುತ್ತವೆ.

ಶೃಂಗಾರ, ಪ್ರಣಯ, ಪ್ರೇಮದ ದಟ್ಟ ರೂಪಕಗಳು, ನುಡಿಗಟ್ಟು ಹೆಣ್ಣಿನ ಅತ್ಯಂತಿಕ ಭಾವಲೋಕವನ್ನು ಬೆಚ್ಚಿಬೀಳಿಸುವ ಉತ್ಕಟತೆಯೊಂದಿಗೆ ಹೊರಹೊಮ್ಮಿಸುತ್ತವೆ. ಶಯ್ಯಾಗೃಹದ ಸುದ್ದಿಗಳು, ಧ್ಯಾನಸ್ಥ ಶಿವ, ಯಯಾತಿಗೊಂದು ಪತ್ರ, ಹಾಲೆದೆ, ಚರಿತ್ರೆ ಮತ್ತು ಕವಿತೆ, ಕನ್ನಡಿಯ ಚೂರು, ಅನುಭವ ಮಂಟಪ, ಮಂಡೋದರಿ, ಸವರಾತ್ರಿಯ ಸಂಲಗ್ನ, ಶಯ್ಯಾಗೃಹದ ಎಲ್ಲಾ ರಾತ್ರಿಗಳು ಮುಗಿದ ಮೇಲೆ, ಕಲ್ಲಾದವರ ನೆತ್ತಿಯ ಮೇಲೆ, ನಾನು ನೀನು ಕವಿತೆಗಳು ಇಷ್ಟವಾಗುವ ಕವಿತೆಗಳು.

ಒಂದೆಡೆ ಗಂಡಿನ ಅಹಂಕಾರಕ್ಕೆ ಹೆಣ್ಣಿನ ಕನಿಷ್ಠ ಪ್ರತಿರೋಧದ ಅಗತ್ಯವನ್ನು ಹೇಳುತ್ತಾರೆ;

“ಕಲ್ಲಾದವರ ನೆತ್ತಿಯ ಮೇಲೆ
ಕಾಗೆ ಗೂಬೆ ಹೇತುಹೋಗುತ್ತವೆ.
ಮಿಸುಕಾಡಬೇಕು
ಮಾತಾಡಬೇಕು”

ಹಾಗೆಯೇ ಅರಿತು ಬೆರೆತು ಸಮಾನರೆನಿಸಿದಾಗ ಪೂರ್ಣತಯು ಎಂಬುದನ್ನೂ ಕವಿ ನೆನಪಿಸುತ್ತಾರೆ;

ಸುಖ
ಕೇವಲ ಒಂದು
ಹೊಂಗನಸಲ್ಲ
ನಾವಾಗೇ ಬರೆದು
ಪೂರ್ಣಗೊಳಿಸಬೇಕಾದ ವರ್ಣಚಿತ್ರ.

ಪ್ರೇಮಕ್ಕೆ ಮರಳಲು, ನಾವೆಂದೂ ಪಡೆಯದ, ಆದರೆ ಸದಾ ಹಂಬಲಿಸಿದ ಪ್ರೀತಿ ಪಡೆಯಲು, ನಾವು ಕೊಡಬೇಕಾದ ಪ್ರೀತಿಯನ್ನು ಹಂಚಿಕೊಳ್ಳಲು ಸಿದ್ಧರಾಗದ ನಾವು ರಮ್ಯ ಸಂಬಂಧಗಳತ್ತ ವಾಲುತ್ತೇವೆ. ಈ ಸಂಬಂಧಗಳು ಉಳಿದ ಯಾವುದೇ ಸಂಬಂಧಗಳಿಗಿಂತ ಹೆಚ್ಚಾಗಿ ನಮ್ಮನ್ನು ವಿಮೋಚನೆಯತ್ತ, ಬಿಡುಗಡೆಯತ್ತ ಕರೆದೊಯ್ಯುತ್ತವೆ ಎಂದು ನಂಬಿರುತ್ತೇವೆ. ಆದರೆ ನಿಜವಾದ ಪ್ರೀತಿ, ನಾವು ವಿಮೋಚನೆಗೆ ಸಿದ್ಧರಾಗಿದ್ದರಷ್ಟೆ, ಸ್ವತಂತ್ರಗೊಳಿಸುವ ಶಕ್ತಿಯನ್ನು ಹೊಂದಿರುತ್ತದೆ. ನಾವು ಉಳಿಯಬೇಕೆಂದಿದ್ದರೆ ಮಾತ್ರ ಪ್ರೀತಿ ನಮ್ಮನ್ನು ಉಳಿಸುತ್ತದೆ ಎಂದು ಬೆಲ್ ಹುಕ್ಸ್ ಹೇಳುತ್ತಾರೆ.

ಎಲ್ಲ ಅಹಮಿಕೆಯ ಪದರಗಳನ್ನು ಕಳಚಿದಾಗ ಮಾತ್ರ ಪ್ರೇಮ ಸಾಧ್ಯ. ಅದು ಬಿಡುಗಡೆಯ ಹಾದಿ. ಅಂತಹ ಧ್ಯಾನ ಶೋಭ ನಾಯ್ಕರ ಕವಿತೆಗಳಲ್ಲಿ ಇರುವುದರಿಂದಲೇ ಇವು ಇಲ್ಲಿರುವ ಶೃಂಗಾರದ ರೂಪಕಗಳಾಚೆಗೆ ಹಾರುತ್ತವೆ.

ಶಯ್ಯಾಗೃಹದ ಸುದ್ದಿಗಳು
ಡಾ. ಶೋಭಾ ನಾಯಕ
ಪುಟ: 92 | ಬೆಲೆ : 100/-
ಪ್ರಕಾಶನ: ಮನೋರಮಾ
ಬುಕ್ ಹೌಸ್, ಬೆಳಗಾವಿ

– ಎಸ್ ಕುಮಾರ್


ಇದನ್ನೂ ಓದಿ: ಪುಸ್ತಕ ವಿಮರ್ಶೆ; ಬದಿಕಿರುವುದೇ ಕಥೆ ಹೇಳಲಿಕ್ಕೆ ಎಂದು ಬರೆದು ಬದುಕಿದ ಲ್ಯಾಟಿನ್ ಅಮೆರಿಕನ್ ಲೇಖಕ ಮಾರ್ಕ್ವೆಜ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರಾವಳಿ ಸಮಸ್ಯೆಗೆ ಶಾಶ್ವತ ಪರಿಹಾರದ ಭರವಸೆ: ಸಚಿವ ಕೆ.ಎಸ್.ಬಸವಂತಪ್ಪ

ರಾಜ್ಯದ ಕರಾವಳಿ ಭಾಗದಲ್ಲಿ ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತಿರುವ ಕುರಿತು ಕಳವಳ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಮುಂದಾಗಿದೆ. ಕರಾವಳಿ ವ್ಯಾಪ್ತಿಯ ಬಂದರುಗಳು, ಮೀನು ಮಾರುಕಟ್ಟೆಗಳು, ಬ್ರೇಕ್‌ವಾಟರ್‌ಗಳು ಹಾಗೂ ಜೆಟ್ಟಿಗಳಿಗೆ...

SIR ಪ್ರಕ್ರಿಯೆಯಲ್ಲಿ ಯಾರ ಹೆಸರು ಬಿಟ್ಟುಹೋಗಬಾರದು: PRC ನೀಡಲು ವಿಳಂಬ ಬೇಡ ಡಾ. ಜಿ. ಪರಮೇಶ್ವರ್

ಉದ್ಯೋಗ ಅಥವಾ ವಿವಿಧ ಕಾರಣಗಳಿಂದಾಗಿ ತಮ್ಮ ಸ್ವಂತ ಊರು ತೊರೆದು ಬೇರೆಡೆಗೆ ಸ್ಥಳಾಂತರಗೊಂಡು ನೆಲೆಸಿರುವ ರಾಜ್ಯದ ಯಾವುದೇ ನಾಗರಿಕರು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ...

ಬಿಹಾರ ಪ್ರವಾಹದ ನಡುವೆ ಮೋದಿ ಹುಟ್ಟುಹಬ್ಬದ ಪ್ರಯುಕ್ತ ದೀಪೋತ್ಸವ; ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮಕ್ಕೆ ತೇಜಸ್ವಿ ಯಾದವ್ ಆಕ್ಷೇಪ

ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಸೆಪ್ಟೆಂಬರ್ 17ರಂದು ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮ ಆಯೋಜಿಸಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ರಾಜ್ಯದ 15 ಜಿಲ್ಲೆಗಳಲ್ಲಿ...

ಉಮರ್ ಖಾಲಿದ್ ಅವರನ್ನು ‘ದೇಶಪ್ರೇಮಿ’ ಎಂದ ಬಿ.ಕೆ. ಹರಿಪ್ರಸಾದ್; ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ (ಎನ್‌ಎಲ್‌ಎಸ್‌ಐಯು) ಯೂನಿವರ್ಸಿಟಿಯಲ್ಲಿ ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ನಡುವೆ, ಅವರನ್ನು "ರಾಷ್ಟ್ರಪ್ರೇಮಿ" ಎಂದು ಕರೆದಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ...

ಇಂದಿರಾ ಗಾಂಧಿಯಂತೆ ನೇರವಾಗಿ ನಿಲ್ಲಿ, ಟ್ರಂಪ್ ಮುಂದೆ ಮಂಡಿಯೂರುತ್ತಿದ್ದೀರಿ: ‘UPI ಟ್ಯಾಕ್ಸ್’ ಬಗ್ಗೆ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ!

ಯುಪಿಐ (UPI) ವಹಿವಾಟುಗಳಿಗೆ ಸಂಬಂಧಿಸಿದಂತೆ ಜಾರಿಯಾಗುತ್ತಿರುವ ಹೊಸ 'ಮರ್ಚೆಂಟ್ ಡಿಸ್ಕೌಂಟ್ ರೇಟ್' (MDR) ವ್ಯವಸ್ಥೆ ಇದೀಗ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಇದನ್ನು "ಬ್ಯಾಂಕ್‌ಗಳು ವಿಧಿಸುವ ಸೇವಾ ಶುಲ್ಕ" ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದ್ದರೂ,...

ಲಿಯೋನೆಲ್ ಮೆಸ್ಸಿ ಕೇರಳ ಭೇಟಿ ಪ್ರಕರಣ: ಕೊಚ್ಚಿಯ ‘ರಿಪೋರ್ಟರ್ ಟಿವಿ’ ಕಚೇರಿಯಲ್ಲಿ ಪೊಲೀಸರಿಂದ ಶೋಧ

ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ಕೊಚ್ಚಿ ಪ್ರಧಾನ ಕಚೇರಿಯಲ್ಲಿ ಬುಧವಾರ (ಸೆ.16) ಮುಂಜಾನೆ ಪೊಲೀಸ್ ತಂಡವೊಂದು ಶೋಧ ಕಾರ್ಯ ನಡೆಸಿದ್ದು, ಇದರಿಂದಾಗಿ ತನ್ನ ಸುದ್ದಿ ಪ್ರಸಾರ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ವಾಹಿನಿ...

‘ಏಕರೂಪತೆ ಸಮಾನತೆಯಲ್ಲ’: 2029ಕ್ಕೂ ಮುನ್ನ 21 ರಾಜ್ಯಗಳಲ್ಲಿ ಯುಸಿಸಿ ಜಾರಿ ಘೋಷಿಸಿದ ಅಮಿತ್ ಶಾಗೆ ಪ್ರತಿಪಕ್ಷಗಳ ತೀವ್ರ ತಿರುಗೇಟು

ನವದೆಹಲಿ/ಮುಂಬೈ: 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಗಳಿರುವ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಾಗುವುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ...

KPSC ಅಧ್ಯಕ್ಷರ ಪುತ್ರಿಯ ನಕಲಿ ಪ್ರಮಾಣಪತ್ರ ಹಗರಣ: ಅಕ್ರಮಕ್ಕೆ ಸಾಥ್ ನೀಡಿದ್ದ ಅಧಿಕಾರಿಯ ಜಾಮೀನು ಅರ್ಜಿ ವಜಾ

ಕೆಪಿಎಸ್‌ಸಿ (KPSC) ಅಧ್ಯಕ್ಷರ ಪುತ್ರಿಗೆ ಅಕ್ರಮವಾಗಿ ನಕಲಿ ಆದಾಯ ಪ್ರಮಾಣಪತ್ರ ನೀಡಿದ ಆರೋಪ ಎದುರಿಸುತ್ತಿರುವ ಕಂದಾಯ ಅಧಿಕಾರಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ....

ಬಂಗಾಳದಲ್ಲಿ ಬಿಜೆಪಿ ಸರ್ಕಾರದ ನಿರ್ಬಂಧ; ನೆಲಕಚ್ಚಿದ ದನದ ಮಾಂಸ ವ್ಯಾಪಾರ

ಪಶು ಹತ್ಯೆಯ ಕುರಿತು ಮುಖ್ಯಮಂತ್ರಿ ಸುವೇಂಧು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಸೂಚನೆ ಹೊರಡಿಸಿದ ನಂತರ, ಮಾಂಸದ ವ್ಯಾಪಾರಿ ಮುಷ್ತಾಕ್ ಕಳೆದ ಮೂರು ತಿಂಗಳಿನಿಂದ ಒಂದು ಪೈಸೆಯನ್ನೂ ಗಳಿಸಿಲ್ಲ. "ಚುನಾವಣೆಯ ಕಾರಣದಿಂದ...

ತೀವ್ರಗೊಂಡ ಸೌದಿ-ಹೌತಿ ಸಂಘರ್ಷ : ಮಕ್ಕಾ ಗುರಿಯಾಗಿಸಿದ್ದ ಡ್ರೋನ್ ಹೊಡೆದುರುಳಿಸಿದ್ದೇವೆ ಎಂದ ಸೌದಿ; ತಳ್ಳಿಹಾಕಿದ ಹೌತಿ

ಯೆಮನ್‌ನ ರೆಬೆಲ್ ಗ್ರೂಪ್ ಹೌತಿ ಮತ್ತು ಸೌದಿ ಬೆಂಬಲಿತ ಪಡೆಗಳ ಸಂಘರ್ಷ ತೀವ್ರಗೊಂಡಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಮರ ಪವಿತ್ರ ನಗರ ಮಕ್ಕಾದಲ್ಲಿ ಸೌದಿ ಅರೇಬಿಯಾದ ನಾಗರಿಕ ರಕ್ಷಣಾ (ಸಿವಿಲ್ ಡಿಫೆನ್ಸ್) ಇಲಾಖೆಯು...