Homeಅಂಕಣಗಳುಪುಸ್ತಕ ಪರಿಚಯ; 'ನೀಲವ್ವ': ಆಗುವಿಕೆಯನ್ನು ತೋರುವ ಕತೆಗಳು

ಪುಸ್ತಕ ಪರಿಚಯ; ‘ನೀಲವ್ವ’: ಆಗುವಿಕೆಯನ್ನು ತೋರುವ ಕತೆಗಳು

- Advertisement -
- Advertisement -

’ನೀಲವ್ವ’ ಸಂಕಲನದ ಕತೆಗಳು ಒಂದು ಸಹಜ ಮಾನವ ಸಂಬಂಧ, ಜೀವಸಂಬಂಧಕ್ಕೂ ಎಡೆಯಿಲ್ಲದಿರುವ ಬದುಕಿನ ವಿಕಾರವನ್ನು ಚಿತ್ರಿಸುತ್ತಲೇ, ಇದಕ್ಕೆ ಮದ್ದರೆಯುವ ಜೀವಸೆಲೆಯನ್ನು ಹುಡುಕುತ್ತಾ ಹೋಗುತ್ತದೆ. ’ನೀಲಿ’ ಎನ್ನುವುದು ಅರಿವು ಮತ್ತು ಎಚ್ಚರ ಸಂಕೇತದಂತೆ ಕಾಣುತ್ತದೆ. ಇಲ್ಲಿನ ಕತೆಗಳಿಗೆ, ನೇರ ಪ್ರತಿರೋಧಕ್ಕಿಂತ ಹೆಚ್ಚಾಗಿ ಆತ್ಮಸಾಕ್ಷಿಯನ್ನು ಕಲಕುವ ಗುಣವಿದೆ. ಬದಲಾವಣೆ, ಕ್ರಾಂತಿಯ ದಾರಿಯ ಹಾಗೆಯೇ ನಿರಂತರ ಎಚ್ಚರದ, ಸಾವಧಾನದ ಹಾದಿಯಿದೆ. ಈ ಹಾದಿಯಲ್ಲಿ ನೋವಿದೆ, ಆಕ್ರೋಶ ಇದೆ, ಎಚ್ಚರ ಇದೆ, ವಿವೇಕ ಇದೆ, ಬದಲಾಗಬಲ್ಲದೆಂಬ ಭರವಸೆ ಇದೆ. ‘ನೀಲವ್ವ’ ಸಂಕಲನದ ಕತೆಗಳು ನಮ್ಮನ್ನು ಆವರಿಸಿಬಿಡುವುದು ಹೀಗೇ.

ಇಲ್ಲಿ ಜಡೆಪ್ಪ, ಹುಲುಗ, ಸುಂಕ, ಭರಮಪ್ಪನ ಮಗ, ಉಮಾಶಂಕರ್ ಮುಂತಾದ ಪಾತ್ರಗಳು ತಾವು ಅನುಭವಿಸುತ್ತಿರುವ ಅಪಮಾನ, ಹಸಿವು, ನೋವುಗಳಿಂದ ಅನೇಕ ಸವಾಲುಗಳಿಗೆ ಎದುರಾಗುತ್ತಾ ಹೊಸಬದುಕಿನತ್ತ ಮುಖಮಾಡುತ್ತವೆ. ಇದು ಅವರ ವೈಯಕ್ತಿಕ ಬಿಡುಗಡೆಯ ಹಾದಿಯಷ್ಟೇ ಅಲ್ಲ ಅಥವಾ ಕೇವಲ ಅವರ ಸಮುದಾಯದ ಬಿಡುಗಡೆಯ ದಾರಿಯಷ್ಟೇ ಅಲ್ಲ; ಬದಲಿಗೆ ಒಟ್ಟು ಸಮಾಜವೇ ತನಗಂಟಿದ ಕ್ರೌರ್ಯದಿಂದ ಮುಕ್ತಗೊಳ್ಳುವ ದಾರಿಯೂ ಆಗಿದೆ. ‘ಒಂದು ಹೆಜ್ಜೆ’ ಕತೆಯಲ್ಲಿ ಬರುವ ಈಶ್ವರ್ ಸರ್, ‘ತೆರೆಮರೆಯ ಯೋಧ’ದ ದಿನೇಶ್, ‘ದೇವರಬಾವಿ’ಯ ವೈದ್ಯ ಇವರೆಲ್ಲ ತಮ್ಮನ್ನು ಕವಿದುಕೊಂಡಿದ್ದ ಮೌಢ್ಯದ ಪೊರೆ ಹರಿದು ಮಿಡಿಯುವುದು ಇದನ್ನು ಸಾಬೀತುಪಡಿಸುತ್ತದೆ. ‘ನೀಲವ್ವ’ಳ ಪ್ರಖರ ನ್ಯಾಯಪ್ರಜ್ಞೆ, ದೌರ್ಜನ್ಯವನ್ನು ಎದುರಾಗಬೇಕಾದ ಬಗೆಯನ್ನು ಕಾಣಿಸುವ ರೀತಿ ವಿಶಿಷ್ಟವಾಗಿದೆ. ಹೀಗಾಗಿ ಇಲ್ಲಿನ ಕತೆಗಳು ಚಲನೆಯನ್ನು, ಆಗುತ್ತಿರುವ ಬಗೆಯನ್ನು ಹಿಡಿದಿಡುವ ಕತೆಗಳಾಗಿ ನಮ್ಮೊಳಗನ್ನೂ ಕಲಕಿ ಪ್ರಶ್ನಿಸಿ ಜೊತೆಗೆ ಒಯ್ಯುತ್ತವೆ.

ಬದಲಾಗುತ್ತಿರುವ ಪರಿಸರದಲ್ಲಿ ಶೋಷಣೆಯ ಆಯಾಮಗಳೂ ಬದಲಾಗಿರುವುದನ್ನು ಇಲ್ಲಿನ ಕೆಲವು ಕತೆಗಳು ಸೂಕ್ಷ್ಮವಾಗಿ ಹಿಡಿದಿಟ್ಟಿವೆ. ’ಒಂದು ಹೆಜ್ಜೆ’ ಕತೆಯ ಉಮಾಶಂಕರ್, ವಿದ್ಯೆ, ಉದ್ಯೋಗ ಗಳಿಸುವ ಮೂಲಕ ಹಿಂದಿನ ತಲೆಮಾರಿಗಿಂತ ಭಿನ್ನವಾಗಿದ್ದಾನೆ. ಜೊತೆಗೆ ಅದೇ ತಾರತಮ್ಯ ಹೊಸ ರೂಪದಲ್ಲಿ ಅವನನ್ನು ಹಿಂಡುತ್ತಿದೆ. ಇದನ್ನು ತನ್ನದೇ ಆದ ರೀತಿಯಲ್ಲಿ ಎದುರಿಸುವ ಉಮಾಶಂಕರ್ ಹಾಗೂ ಅವನ ತಾಯಿಯ ನಡೆ ನಾವು ಈಗ ತಾರತಮ್ಯದ ನೆಲೆಗಳನ್ನು ಹೊಸ ಬಗೆಯಲ್ಲಿ ಎದುರಾಗಬೇಕು ಎನ್ನುವುದನ್ನು ಸೂಚಿಸುವಂತಿದೆ. ಶೋಷಕರ ಹೊಸ ಮುಖವಾಡಗಳಂತೆಯೇ ಶೋಷಣೆಯನ್ನು ರಮ್ಯಗೊಳಿಸುವ ಪರಿಭಾಷೆಯೂ ನಮ್ಮ ನಡುವೆ ಇದೆ. ‘ತೆರೆಮರೆಯ ಯೋಧ’ ಕತೆಯ ಕೊನೆಯಲ್ಲಿ ಯೋಧ ದಿನೇಶ್ ಪೌರಕಾರ್ಮಿಕನಾದ ಭರಮಪ್ಪನನ್ನು ‘ಕಾಣದ ಶತ್ರುಗಳನ್ನು ನಿವಾರಿಸುವ ತೆರೆಮರೆಯ ಯೋಧ’ ಎಂದು ಅಭಿನಂದಿಸಿದ ಸಂದರ್ಭಲ್ಲಿ ಭರಮಪ್ಪ ಮೈಕ್ ತೆಗೆದುಕೊಂಡು ‘ನನ್ನ ಮಗನಿಗೆ ಕೆಲಸ ಸಿಕ್ಕೈತೆ. ನಾಳೆಯಿಂದ ಈ ಕೆಲ್ಸ ಮಾಡಕ್ಕಿಲ್ಲ’ ಎನ್ನುವುದು ನಮ್ಮೆಲ್ಲರ ಒಳಗನ್ನೂ ಚುಚ್ಚುತ್ತದೆ.

ವಿಕಾಸ್‌ ಆರ್‌.ಮೌರ್ಯ

ಸಂಕಲನದಲ್ಲಿ ನಮ್ಮನ್ನು ಹಿಡಿದಿಡುವ ಇನ್ನೊಂದು ಕತೆ ‘ಚಿನ್ನದ ಕನ್ನಡಕ’. ಅಂಬೇಡ್ಕರ್ ಜಯಂತಿಯಂದು ಅವರ ಮೂರ್ತಿಗೆ ಚಿನ್ನದ ಕನ್ನಡಕ ತೊಡಿಸುವ ಸಂಭ್ರಮ, ಮೆರವಣಿಗೆಯ ಹಿನ್ನೆಲೆಯಲ್ಲಿ ಈ ಸಂಭ್ರಮದ ಅಸಂಗತತೆ, ಬದಲಾಗದ ಬದುಕುಗಳನ್ನು ಕಾಣಿಸುತ್ತಾ ಹೋಗುತ್ತದೆ. ಆಶಯ ಮತ್ತು ವಸ್ತುಸ್ಥಿತಿಗಳ ನಡುವಣ ಬಿರುಕನ್ನು ಕತೆಗಾರ ವಿಕಾಸ್ ಶಕ್ತವಾಗಿ ಹಿಡಿದಿಡುತ್ತಾ ಹೋಗುತ್ತಾರೆ. ಅಂಬೇಡ್ಕರ್ ಜಯಂತಿಗೆ ಶುಭಕೋರುವ ಬ್ಯಾನರ್‌ನಲ್ಲಿ ಮುಂಡವಿಲ್ಲದ ರುಂಡಗಳಂತೆ ಕಾಣುವ ಶುಭಕೋರುವವರ ಚಿತ್ರಗಳು, ಸ್ವಾಧೀನ ಕಳೆದುಕೊಂಡ ನೀಲವ್ವ, ಭಾರ ಕಳೆದುಕೊಳ್ಳದ ಊಟದ ಬುತ್ತಿ, ಜನರ ಮುಗಿಯದ ನೋವಿನ ನಡುವೆಯೇ ಅಂಬೇಡ್ಕರ್‌ಗೆ ಹಾಕಿದ ಚಿನ್ನದ ಕನ್ನಡಕ ಮುಂತಾದ ಪ್ರತಿಮೆಗಳು ವರ್ತಮಾನದ ವ್ಯಂಗ್ಯವನ್ನು ಸಮರ್ಥವಾಗಿ ಹಿಡಿದಿಟ್ಟಿವೆ. ‘ತಲೆ ತಲಾಂತರ’ ಕತೆ ಬೇರುಗಳನ್ನು ಕಳೆದುಕೊಂಡ ಸಮುದಾಯ, ತನ್ನ ಅಧೀನತೆಯನ್ನು ತೊರೆದು ಮೂಲಸಂಸ್ಕೃತಿಗೆ ಮರಳುವ ಮೂಲಕ ನೀಗಿಕೊಳ್ಳುವ ಹಾದಿ ತೋರುತ್ತದೆ.

ಹೊಸಪಟ್ಟುಗಳ ಮೂಲಕ ಶೋಷಣೆಯ ಹಿಡಿತವನ್ನು ಬಿಗಿಮಾಡುತ್ತಿರುವ ವ್ಯವಸ್ಥೆ, ತನ್ನ ಹಿತಾಸಕ್ತಿ ಕಾಪಾಡಿಕೊಳ್ಳುವುದಕ್ಕೆ ಸುಂಕ ಬಾವಿಗೆ ಹಾರಿ ಶಾರದೆಯ ಮಗುವನ್ನು ಕಾಪಾಡಲು ಅನುವು ಮಾಡಿಕೊಟ್ಟು ಅದಕ್ಕೆ ಪ್ರಾಯಶ್ಚಿತ್ತವನ್ನೂ ಮಾಡುತ್ತದೆ. ಅದೇ ಸುಂಕನನ್ನು ಮನುಷ್ಯನೆಂದು ನೋಡಲು ನಿರಾಕರಿಸುತ್ತದೆ. ಎಲ್ಲವನ್ನೂ ಸಂಕೇತಗಳನ್ನಾಗಿಸಿಕೊಂಡು ಅವುಗಳ ವಿಜೃಂಭಣೆಯಲ್ಲೇ ಆಶಯಗಳನ್ನು ಮರೆತ ಜನಸಮೂಹವೂ ಇದೆ. ಈ ಎಲ್ಲದರ ನಡುವೆ ಸುಂಕ, ಗಂಟಪ್ಪ, ನೀಲವ್ವ ಎಲ್ಲ ನೋವುಗಳನ್ನು ನುಂಗಿಯೂ ಎಲ್ಲೂ ಎಚ್ಚರ ಕಳೆದುಕೊಳ್ಳುವುದಿಲ್ಲ. ‘ತೆರೆಮರೆಯ ಯೋಧ’ ಕತೆಯಲ್ಲಿ ಭರಮಪ್ಪನ ಮಗ ಓದಿ ಕೆಲಸ ತೆಗೆದುಕೊಳ್ಳುವುದು, ‘ಒಂದು ಹೆಜ್ಜೆ’ ಕತೆಯಲ್ಲಿ ಪೂರ್ಣಿಮಾ ಮೇಡಂಗೆ ಉಮಾಶಂಕರ್ ಹೋಳಿಗೆಯ ಬಾಕ್ಸ್ ಕೊಡುವುದು, ‘ದೇವರ ಬಾವಿ’ ಕತೆಯಲ್ಲಿ ಶಾರದೆ ಸುಂಕರಿಗೆ ನೆರವಾಗುವ ವೈದ್ಯರು ಎಲ್ಲದರ ಮಧ್ಯೆ ಭರವಸೆಯಂತೆ ಕಾಣುತ್ತಾರೆ.

ಬೆಳಗಿನ ವಾಕ್‌ಗೆ ಉಳ್ಳವರು ನಡೆದು ಬರುವ ಬಗೆಯನ್ನು ‘ದಢೂತಿ ದೇಹಗಳು ನೀರು ತುಂಬಿದ ಪ್ಲಾಸ್ಟಿಕ್ ಕವರುಗಳಂತೆ ತುಳುಕುತ್ತಾ ನಡೆದು ಬರುತ್ತಿದ್ದವು’ ಎಂದು ವಿಕಾಸ್ ಬರೆಯುತ್ತಾರೆ. ಜಡೆಪ್ಪ ಪಾಟಿಚೀಲ ಹೊತ್ತು ಬರುತ್ತಿರುವುದನ್ನು ನೋಡಿದ ರಮ್ಯ ಮತ್ತು ಲಚುಮಿಯ ಮೊಗಗಳು ‘ಬಾಡು ಕಂಡಂತಾದವು’ ಎಂಬ ಸೊಗಸಾದ ಹೋಲಿಕೆ ನೀಡುತ್ತಾರೆ. ಕತೆಗಳ ಹೆಣಿಗೆ ಅಲ್ಲಲ್ಲಿ ಸಡಿಲವಾದಂತೆನಿಸಿದರೂ ಸುತ್ತಲಿನ ಪರಿವೇಶವನ್ನು ಕತೆಗೆ ಪೂರಕವಾಗಿ ಕಟ್ಟಿಕೊಡುವ ಪ್ರಯತ್ನದಿಂದ ಇವರು ಇದನ್ನು ಮೀರುವ ಯತ್ನದಲ್ಲಿದ್ದಾರೆ.

ವಿಕಾಸ್ ಮೌರ್ಯ ಅವರದು ಒಬ್ಬ ಹೋರಾಟಗಾರನ ಮನಸ್ಸು. ಅವರು ಸುತ್ತಲಿನ ಪರಿಸರವನ್ನು ನೋಡುವ ಬಗೆ, ದಾಖಲಿಸುವ ಬಗೆ ಒಂದು ಸೃಜನಶೀಲ ಅಭಿವ್ಯಕ್ತಿಯಾಗಿರುವಂತೆಯೇ, ಇದು ಯಾಕೆ ಇನ್ನೂ ಹೀಗಿದೆ, ಬದಲಾಗುವ ಬಗೆಯೆಂತು ಎಂಬ ವ್ಯಗ್ರತೆಯನ್ನು ಎಳೆಯಾಗಿ ಹೊಂದಿದೆ. ಹೀಗಾಗಿ ಇವರ ಕತೆಗಳ ಆಶಯ ನಿಚ್ಚಳವಾಗಿದೆ. ವಿಕಾಸ್ ಅವರೊಳಗಿನ ತಲ್ಲಣ, ವ್ಯಗ್ರತೆ ಬರಹಕ್ಕೆ ಒಂದು ಶಕ್ತಿ ಕೊಟ್ಟಹಾಗೆಯೇ, ಹೇಳುವ ಧಾವಂತ ಮೂಡಿಸುತ್ತವೆ. ಕತೆಯ ಮೂಲಕ ಕಾಣಿಸುವುದಕ್ಕಿಂತ ಒಳಗೇ ಕುದಿಯುತ್ತಿರುವ ವಿಚಾರವನ್ನು ಹೊರಹಾಕಬೇಕು ಎಂಬ ತುಡಿತದಲ್ಲಿ ಇಲ್ಲಿನ ಕತೆಗಳು ಮೂಡಿವೆ. ಹೀಗಾಗಿ ಇಲ್ಲಿನ ಪಾತ್ರಗಳ ರೂಪುರೇಷೆ ಸ್ಪಷ್ಟ. ಬದುಕಿನ ಸಂಕೀರ್ಣತೆ, ಅನಿರೀಕ್ಷಿತತೆ ಇಲ್ಲಿ ಕಾಣುವುದಿಲ್ಲ. ಆದರೆ ಇಷ್ಟೆಲ್ಲ ಹೋರಾಟಗಳ ನಡುವೆಯೂ ಅವೇ ವಿಕಾರಗಳು ಎಲ್ಲೆಡೆಯಲ್ಲಿಯೂ ಮತ್ತೆ ಮತ್ತೆ ಢಾಳಾಗಿ ಕಾಣುತ್ತಿರುವ ಸಂದರ್ಭದಲ್ಲಿ ಅದು ಒಳಗೇ ಚುಚ್ಚಿದ ಮುಳ್ಳಿನಂತೆ ಬಾಧಿಸುವುದರಿಂದ ಬಿಡುಗಡೆಯಿಲ್ಲ. ಬದುಕಿನಲ್ಲಿ, ಸಮಾಜದಲ್ಲಿ ಮಾಯದ ಗಾಯಗಳಿರುವವರೆಗೂ ಬರೆಯುತ್ತಲೇ ಇರಬೇಕಾಗುತ್ತದೆ.

ಡಾ. ಭಾರತೀದೇವಿ.ಪಿ

ಡಾ. ಭಾರತೀದೇವಿ.ಪಿ
ಭಾರತೀದೇವಿ ಅವರು ಹೊಳೆನರಸೀಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಉಪನ್ಯಾಸಕಿಯಾಗಿದ್ದು ಈ ಸದ್ಯ ಹಾಸನದಲ್ಲಿ ನೆಲೆಸಿದ್ದಾರೆ.


ಇದನ್ನೂ ಓದಿ: ಪುಸ್ತಕ ವಿಮರ್ಶೆ; ನಡೆ-ನುಡಿಗಳಲ್ಲಿ ಪ್ರಖರ ಬದ್ಧತೆ ತೋರಿದ ಹೋರಾಟಗಾರನ ಸಾಂಸ್ಕೃತಿಕ ಕಥನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...