Homeಮುಖಪುಟ2021 ವಿಶೇಷವಾಗಿ ಮರೆಯಲೇಬೇಕಾದ ವರ್ಷ

2021 ವಿಶೇಷವಾಗಿ ಮರೆಯಲೇಬೇಕಾದ ವರ್ಷ

- Advertisement -
- Advertisement -

ಐರ್‍ಲೆಂಡಿನಲ್ಲಿ 1916ರಲ್ಲಿ ನಡೆದ, ಹಿಂಸೆ ಮತ್ತು ಅನೇಕ ಯುವಜನರ ಸಾವಿಗೆ ಕಾರಣವಾದ ’ಈಸ್ಟರ್ ಬಂಡಾಯ’ವನ್ನು ಕುರಿತು ಐರಿಷ್ ಕವಿ ಡಬ್ಲ್ಯೂ.ಬಿ.ಯೇಟ್ಸ್ “ಪ್ರತಿಯೊಂದೂ ಬದಲಾಯಿತು, ತೀವ್ರವಾಗಿ ಬದಲಾಯಿತು, ಹಾಗೂ ಒಂದು ಭಯಂಕರವಾದ ಸೌಂದರ್ಯ ಉದ್ಭವಿಸಿತು” ಎಂದು ಸ್ಮರಣೀಯ ಮಾತುಗಳಲ್ಲಿ ಉದ್ಗರಿಸಿ ಇಂದಿಗೆ ಒಂದು ಶತಮಾನಕ್ಕಿಂತಲೂ ಸ್ವಲ್ಪ ಹೆಚ್ಚು ಕಾಲವಾಯಿತು. ಈ ಮಾತು ನಮ್ಮ ಕಾಲಕ್ಕೂ ಸಮರ್ಪಕವಾಗಿ ಅನ್ವಯಿಸುತ್ತದೆ. 21ನೇ ಶತಮಾನದ ಮೊದಲ ಎರಡು ದಶಕಗಳು ಜಗತ್ತನ್ನು ಅನೇಕ ಮೂಲಭೂತ ರೀತಿಗಳಲ್ಲಿ ಬದಲಾಯಿಸಿದವು; 2021ನೇ ವರ್ಷವು ಆ ಬದಲಾವಣೆಗಳ ವೇಗವನ್ನು ಮತ್ತಷ್ಟು ಹೆಚ್ಚಿಸಿದೆ. ಸಾರ್ವಜನಿಕ ಚರ್ಚೆಯು ಈ ಬದಲಾವಣೆಗಳನ್ನು ಸಮರ್ಪಕವಾಗಿ ಪ್ರತಿಫಲಿಸಿಲ್ಲದಿರಬಹುದು; ಆದರೆ ಅವು ಸಂಭವಿಸಿಯೇ ಇಲ್ಲ ಎಂದು ಇದರರ್ಥವಲ್ಲ.
ನಿಜವಾಗಿ ಹೇಳಬೇಕೆಂದರೆ, ವಾಸ್ತವ ಸ್ಥಿತಿ ಮತ್ತು ಅದನ್ನು ಕುರಿತ ಗ್ರಹಿಕೆ ಇವುಗಳ ನಡುವೆ ಏನು ಕಂದರವಿದೆಯೋ, ಅದೂ ಸಹ ಈ ಬದಲಾವಣೆಯ ಒಂದು ಭಾಗವೇ ಆಗಿದೆ.

ಕೊರೊನಾ ಒಂದು ಹೊಸ ವೈರಸ್ ಆಗಿದ್ದರೂ, ಒಟ್ಟಾರೆ ಮಹಾ ಸಾಂಕ್ರಾಮಿಕದ ಅನುಭವವೇನೂ ಮಾನವ ಕುಲಕ್ಕೆ ಹೊಸದಲ್ಲ. ಈ ಹಿಂದೆಯೂ ಜಗತ್ತಿನಲ್ಲಿ ಇತರ ಮಹಾ ಸಾಂಕ್ರಾಮಿಕಗಳು, ಪ್ಲೇಗುಗಳು ಹಾಗೂ ನೈಸರ್ಗಿಕ ವಿಕೋಪಗಳು ಸಂಭವಿಸಿವೆ. ಆದರೆ ಈ ಬಾರಿ ಕೊರೊನಾಕ್ಕೆ ಜಗತ್ತಿನಾದ್ಯಂತ ಸಾರ್ವಜನಿಕ ವಲಯಗಳಲ್ಲಿ ನೀಡಲಾದ ಗಮನ ಮಾತ್ರ ಹಿಂದೆಂದೂ ಕಾಣದಿದ್ದಂತಹದು. 2020 ಮತ್ತು 2021ರ ಎರಡು ವರ್ಷಗಳಲ್ಲಿ ಟಿವಿಗಳ ಸಮಯವು ಪ್ರಧಾನವಾಗಿ ಸಾರ್ವಜನಿಕ ಆರೋಗ್ಯ ಮತ್ತು ಸರ್ಕಾರಿ ನಿಯಂತ್ರಣಗಳನ್ನು ಕುರಿತ ಚರ್ಚೆಗಳ ಸುತ್ತಲೇ ಸುತ್ತಿದೆ. ಆದಾಗ್ಯೂ, ಇಷ್ಟೇ ಗಮನಕ್ಕೆ ಅರ್ಹವಾದ ಇನ್ನಿತರ ವಿಚಾರಗಳೂ ಇವೆ. ಅವುಗಳಲ್ಲಿ: ಪ್ರಜಾಪ್ರಭುತ್ವದಂತಹ 20ನೇ ಶತಮಾನದ ಚಿಂತನೆಗಳಿಗೆ ಎಷ್ಟುಮಾತ್ರಕ್ಕೂ ಆಶಾದಾಯಕವಲ್ಲದ ರಾಜಕೀಯ ವಾತಾವರಣ; ಮಾನವರ ಚಿಂತನಾ ಸಾಮರ್ಥ್ಯದ ಮೇಲೆ ಕೃತಕ ಬುದ್ಧಿಮತ್ತೆಯ ಬಿಗಿ ಹಿಡಿತ; ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ನಿಂದ ಪಾಶ್ಚಿಮಾತ್ಯ ಪಡೆಗಳಿಗೆ ಸೋಲು; ಹಾಗೂ ಎಲ್ಲಕ್ಕಿಂತ ಹೆಚ್ಚಾಗಿ, ಅತ್ಯಂತ ದುರ್ಗತಿಗೆ ಈಡಾಗಿರುವ ಭೂ ಪರಿಸರ – ಇವೆಲ್ಲವೂ ಸೇರಿವೆ. ಜಗತ್ತನ್ನೊಂದು ’ಜಾಗತಿಕ ಗ್ರಾಮ’ವನ್ನಾಗಿಸುವ ಆಶಾಭಾವನೆಯನ್ನು, ’ಬ್ರೆಕ್ಸಿಟ್’ನ ಹಣೆಬರಹವನ್ನು ಅಂತಿಮಗೊಳಿಸುವ ಮೂಲಕ ನಿರ್ಣಾಯಕವಾಗಿ ಹೊಸಕಿ ಹಾಕಿದ್ದು 2021ರಲ್ಲೇ. ಕೋವಿಡ್‌ನಿಂದಾಗಿ ಒಂದಾದ ಮೇಲೊಂದು ದೇಶಗಳು ತಮ್ಮದೇ ದೇಶಗಳ ಒಳಗೂ ಸಹ ಜನರ ಮುಕ್ತ ಓಡಾಟಕ್ಕೆ ನಿರ್ಬಂಧಗಳನ್ನು ವಿಧಿಸುತ್ತಿದ್ದು, ಜಗತ್ತನ್ನು ಕೋವಿಡ್ ಹಿಂದೆಂದಿಗಿಂತಲೂ ಹೆಚ್ಚು ದೂರದೂರ ಮಾಡಿಟ್ಟಿದೆ.

ಅಮೆರಿಕದಲ್ಲೇನೋ ಡೊನಾಲ್ಡ್ ಟ್ರಂಪ್‌ನ ಅಧ್ಯಕ್ಷಗಿರಿ ಕೊನೆಗೊಂಡಿದೆಯಾದರೂ, ಸಾಂಪ್ರದಾಯಿಕತೆ ಮತ್ತು ಸಂಪ್ರದಾಯವಾದಗಳು ಜಗತ್ತಿನಾದ್ಯಂತ ತೀವ್ರ ರೀತಿಯಲ್ಲಿ ಗಟ್ಟಿಗೊಳ್ಳುತ್ತಲೇ ಸಾಗಿವೆ. ಅಲ್ಲಿಇಲ್ಲಿ ಉಳಿದುಕೊಂಡಿರುವ ಪ್ರಜಾಪ್ರಭುತ್ವವು ಅರ್ಥವಾಗದಂತಹ ಸುಸ್ತಿನ ಚಿಹ್ನೆಗಳನ್ನು ಈ ವರ್ಷ ತೋರ್ಪಡಿಸಿತು. ಈ ವರ್ಷದುದ್ದಕ್ಕೂ ನಾಗರಿಕ ಹಕ್ಕುಗಳು ಮೊಟಕುಗೊಳ್ಳುತ್ತಲೇ ಬಂದವು. ಮೂಲಭೂತವಾದಿಗಳು ಮತ್ತು ಅವರ ಖಾಸಗಿ ’ಸೇನೆ’ಗಳು ಸಾಮಾಜಿಕ ಕ್ಷೇತ್ರಗಳು ಮತ್ತು ಸಾಂಸ್ಥಿಕ ಆಶ್ರಯತಾಣಗಳನ್ನು ಆಕ್ರಮಿಸುವುದರಲ್ಲಿ ಹೆಚ್ಚುಹೆಚ್ಚು ಯಶಸ್ವಿಯಾದವು. ಆಘಾತಕಾರಿ ಪ್ರಮಾಣದ ಮೃಗೀಯ ಕ್ರೂರತೆಯ ಹಿಂಸೆ ಮತ್ತು ಅನೇಕ ಛಾಯೆಗಳ ಭಯೋತ್ಪಾದನೆ ದಿನನಿತ್ಯದ ವಿದ್ಯಮಾನವಾಯಿತು. ಪ್ರಭುತ್ವದ ಗೂಢಚಾರಿಕೆ ಹಾಗೂ ನಾಗರಿಕರ ಖಾಸಗಿತನದ ಮೇಲೆ ಪ್ರಭುತ್ವದ ಆಕ್ರಮಣ ಮಾಮೂಲಿ ಸಂಗತಿಯಾಯಿತು. ಅಡೆತಡೆಯಿಲ್ಲದೆ ಹರಿದಾಡುವ (ಸಟ್ಟಾ) ಬಂಡವಾಳ ಹಾಗೂ ತೆರಿಗೆಗಳ್ಳತನಕ್ಕೆ ಅವಕಾಶ ನೀಡುವ ಡಿಜಿಟಲ್ ಕರೆನ್ಸಿ ಒಟ್ಟಾಗಿ ಜಗತ್ತಿನ ಜನಸಂಖ್ಯೆಯ ಬಹುದೊಡ್ಡ ಭಾಗಕ್ಕೂ ಅತಿ ಶ್ರೀಮಂತರಿಗೂ ನಡುವಿನ ಕಂದರವನ್ನು ಮತ್ತಷ್ಟು ಹಿಗ್ಗಿಸಿವೆ. ಒಂದೆಡೆ ಬಹುತೇಕ ದೇಶಗಳಲ್ಲಿ ಉದ್ಯೋಗಾವಕಾಶಗಳು ಪಾತಾಳ ಕಂಡರೆ, ಮತ್ತೊಂದೆಡೆ ಕೆಲವೇ ಕುಬೇರರ ಸಂಪತ್ತು ಸಾಮಾನ್ಯರ ಊಹೆಗೂ ನಿಲುಕದಷ್ಟು ಪ್ರಮಾಣಕ್ಕೆ ಹೆಚ್ಚಳವಾಗಿದೆ. ಕೃತಕ ಬುದ್ಧಿಮತ್ತೆಗೂ ಮನುಷ್ಯರ ಆಲೋಚನಾ ಶಕ್ತಿಗೂ ನಡುವಿನ ಕೊಂಡಿಯು ಮಾನವ ನಡವಳಿಕೆಯನ್ನು ಬದಲಿಸುವತ್ತಲೇ ನಡೆದಿದೆ. ನೆಲಮೂಲ ಭಾಷೆಗಳು ಸಾಮೂಹಿಕ ಮೂಗತನದ ಸ್ಥಿತಿಯನ್ನು ತಲುಪುತ್ತಿವೆ. ಸಾಹಿತ್ಯವು ಮಾಧ್ಯಮಗಳಿಗೆ ಹೆಚ್ಚೆಚ್ಚು ನಿಕಟವಾಗುತ್ತ, ಸಹಜ ಮತ್ತು ಡಿಜಿಟಲ್‌ಗಳ ಒಂದು ಅಮಲೇರಿಸುವಂಥ ಪೋಸ್ಟ್-ಟ್ರೂಥ್ ಮಿಶ್ರಣವನ್ನು ಹುಟ್ಟುಹಾಕುತ್ತಿದೆ. ಕಲೆ, ಸಿನಿಮಾ, ರಂಗಭೂಮಿಗಳು ಮಂಕಾಗಿದ್ದವು. ಇವೆಲ್ಲವೂ 2021ನ್ನು ಒಂದು ವಿಶೇಷವಾಗಿ ಮರೆಯಲೇಬೇಕಾದ ವರ್ಷ ಎನಿಸುವುದಕ್ಕೆ ಕಾರಣಗಳು.

ಚಿಂತನೆಗಳು, ವಿಚಾರಧಾರೆಗಳು ಹಾಗೂ ರಾಷ್ಟ್ರಗಳು ಸಿಲುಕಿಕೊಂಡಿರುವ ಬಿಕ್ಕಟ್ಟಿನ ಸ್ವರೂಪವನ್ನು 2021 ಎತ್ತಿತೋರಿಸಿತು. ಹಿಂದಿನ ಕಾಲಗಳಲ್ಲಿ ಅಸ್ಮಿತೆ (ಐಡೆಂಟಿಟಿ) ಎನ್ನುವುದು ಜನಾಂಗ, ಧರ್ಮ, ರಾಷ್ಟ್ರ, ಜೆಂಡರ್ ಹಾಗೂ ಭಾಷೆಗೆ ಸಂಬಂಧಿಸಿದ್ದಾಗಿತ್ತು. 2021ರಲ್ಲಿ ಅಸ್ಮಿತೆಯು ಹೆಚ್ಚುಹೆಚ್ಚಾಗಿ ತಂತ್ರಜ್ಞಾನಗಳ ಜೊತೆ ಬೆಸೆದುಕೊಳ್ಳುತ್ತಿದೆ; ಸಂಪರ್ಕ ತಂತ್ರಜ್ಞಾನ ಮತ್ತು ಡಿಜಿಟಲ್ ತಂತ್ರಜ್ಞಾನದ ಧಣಿಗಳು ಪ್ರಭುತ್ವಗಳಿಗಿಂತಲೂ ಪ್ರಬಲವಾಗಿವೆ. “ಇಪ್ಪತ್ತನೆಯ ಶತಮಾನದ ಕೊನೆಯ ಭಾಗದ, ದಂತಕತೆಯಂಥ ನಮ್ಮ ಕಾಲದಲ್ಲಿ ನಾವೆಲ್ಲರೂ ಸೂತ್ರೀಕರಣ ಮತ್ತು ಕೃತಕ ಸೃಷ್ಟಿಯ ಜಂಟಿ ಉತ್ಪನ್ನವಾಗಿರುವ, ಯಂತ್ರ ಮತ್ತು ಜೀವಿ ಈ ಎರಡರ ಮಿಶ್ರತಳಿಗಳಾಗಿದ್ದೇವೆ (Cyborgs). ನಮಗೆ ನಮ್ಮ ರಾಜಕೀಯವನ್ನು ನೀಡುತ್ತಿರುವುದು ಇದೇ” ಎಂದು ಡೋನಾ ಹ್ಯಾರಾವೇ ಹೇಳಿದ್ದರು. ಆ ಮಾತು 2021ರಲ್ಲಿ ಹಿಂದಿಗಿಂತಲೂ ಸತ್ಯವಾಗಿ ಕಾಣುತ್ತವೆ. ಈ ವರ್ಷ ರೋಬೋಗಳಿಗೆ ಪೌರತ್ವ ಗುರುತಿನ ಸಂಖ್ಯೆಗಳನ್ನು (citizenship identity numbers) ನೀಡುವ ಕಾರ್ಯ ಆರಂಭವಾಗಿದೆ; ಇದು ಸದ್ಯದ ಭವಿಷ್ಯದಲ್ಲೇ ಅವುಗಳನ್ನು ರಾಜಕೀಯ ಘಟಕಗಳಂತೆ (political entities) ಪರಿಗಣಿಸುವ ನಿಟ್ಟಿನ ಒಂದು ಹೆಜ್ಜೆಯಾಗಿದೆ. ಮನುಷ್ಯರ ನೆನಪನ್ನೆಲ್ಲಾ ಈಗ ಯಂತ್ರಗಳಿಗೆ ಔಟ್-ಸೋರ್ಸ್ ಮಾಡಲಾಗಿದೆ; ವರ್ತಮಾನದ ಕ್ಷಣಗಳೊಂದಿಗೆ ಅದರ ಸಂಬಂಧ ಜಡವಾದುದು, ಲೌಖಿಕ ಇಹಜೀವನಕ್ಕೆ ಸಂಬಂಧವಿಲ್ಲದ್ದು ಆಗಿರುತ್ತದೆ. ಚರಿತ್ರೆ, ಅಥವಾ ಚರಿತ್ರೆಯೆಂಬ ವಿಚಾರ ಈಗ ಹಾದಿಯ ಕೊನೆ ಮುಟ್ಟಿದಂತಿದೆ. ಇಹದ ನಿಶ್ಚಲತೆಯ ಈ ಕಾಲಘಟ್ಟದಲ್ಲಿ ಮಾನವ ಬುದ್ಧಿಶಕ್ತಿಯು ಮುಂದಕ್ಕೆ ಚಲಿಸುವ ಬದಲು ಅಡ್ಡಡ್ಡವಾಗಿ, ಮನುಷ್ಯ-ಯಂತ್ರ-ಮಿದುಳು ಎಂಬಂತಹ ಒಂದು ಹೊಸ ಸಂಸ್ಕೃತಿಯತ್ತ ಚಲಿಸುತ್ತಿರುವಂತಿದೆ.

ಈ ಜಾಗತಿಕ ಬದಲಾವಣೆಗಳಿಗೆ ಅನುಗುಣವಾಗಿ ಭಾರತದಲ್ಲಿ ಈ ಕೆಳಕಂಡ ಬೆಳವಣಿಗೆಗಳಾದವು: ಪ್ರಭುತ್ವಕ್ಕೂ ಅಂತರರಾಷ್ಟ್ರೀಯ ಐಟಿ ಕಾರ್ಪೊರೇಟ್ ವಲಯಕ್ಕೂ ನಡುವೆ ಕಿತ್ತಾಟಗಳು; ದೇಶದ ಒಕ್ಕೂಟ ರಚನೆಯನ್ನು ದುರ್ಬಲಗೊಳಿಸುವಿಕೆ ಹಾಗೂ ಸಂವಿಧಾನದಲ್ಲಿ ಅಂತರ್ಗತವಾಗಿರುವ ತತ್ವಗಳ ಮೇಲೆ ಹೆಚ್ಚೆಚ್ಚು ದಾಳಿಗಳು; ಸತತವಾಗಿ ಹೆಚ್ಚುತ್ತಿರುವ ನಿರುದ್ಯೋಗ ಹಾಗೂ ಇಂಧನ ಮತ್ತು ಗ್ಯಾಸ್ ಬೆಲೆಗಳ ತೀವ್ರ ಹೆಚ್ಚಳ; ದೇಶದೊಳಗಿನ ಉಪವಲಯಗಳಲ್ಲಿ ಆಂತರಿಕ ಮಿಲಿಟರೀಕರಣದ ಹೆಚ್ಚಳ ಹಾಗೂ ಸಶಸ್ತ್ರ ಪಡೆಗಳಿಗೂ ನಾಗರಿಕರಿಗೂ ನಡುವೆ ಹೆಚ್ಚಿದ ಘರ್ಷಣೆಗಳು; ಭಾರತೀಯರು ಎಂದು ಹೆಮ್ಮೆ ಪಡುವ ಕಾರಣಗಳಿಗಾಗಿ ಪುರಾತನ ಕಾಲದ ಕಡೆ ಹೊರಳುವುದು, ಮತ್ತೊಂದೆಡೆ ವಿಜ್ಞಾನ ಮತ್ತು ಔಷಧಿ ಕ್ಷೇತ್ರದಲ್ಲಿ ಶೋಚನೀಯ ಸಾಧನೆ; ಔಷಧೀಯ ಆಮ್ಲಜನಕ ಇರಬಹುದು, ನೈಸರ್ಗಿಕ ಆಮ್ಲಜನಕ ಇರಬಹುದು – ಅದರ ಕೊರತೆಯಿಂದ ಸಾವುಗಳು ಸಂಭವಿಸುತ್ತಿದ್ದರೆ ಪ್ರಭುತ್ವ ಅದನ್ನು ನಿರಾಕರಿಸುವುದು ಮತ್ತು ಅದರ ಅಂಕಿಅಂಶಗಳನ್ನು ತಿರುಚಿ ಜವಾಬ್ದಾರಿಯಿಂದ ನುಣುಚಿಕೊಳ್ಳುವುದು; ಇತ್ಯಾದಿ. ಎಲ್ಲಾ ದಿಕ್ಕಿನ ಇಂಥ ಕತ್ತಲೆಯಲ್ಲಿ ಮಿಂಚಿದ ಒಂದೇ ಒಂದು ಆಶಾಕಿರಣವೆಂದರೆ, ರೈತ ವಿರೋಧಿ ಕೃಷಿ ಮಸೂದೆಗಳನ್ನು ಹಿಂತೆಗೆಸಲು ಯಶಸ್ವಿಯಾದ ರೈತರ ಅಮೋಘವಾದ ಶಾಂತಿಯುತ ಚಳವಳಿ. ಸಾಮಾಜಿಕ ಪರಿವರ್ತನೆಗೆ ಪ್ರಜಾ ಚಳವಳಿ ಒಂದು ಹಾದಿ ಎಂಬ ನಂಬಿಕೆಯನ್ನು ಅದು ಜೀವಂತವಾಗಿರಿಸಿದೆ. ಅಂಥ ಇನ್ನೊಂದು ಬೆಳ್ಳಿ ಕಿರಣವೆಂದರೆ ಒಲಿಂಪಿಕ್ಸ್ ಮತ್ತಿತರ ಸ್ಪರ್ಧಾತ್ಮಕ ಆಟೋಟಗಳಲ್ಲಿ ಕ್ರೀಡಾಪಟುಗಳ ಸಾಧನೆಗಳು. ಆದಾಗ್ಯೂ ಇವು ಗಾಢವಾಗುತ್ತಿರುವ ಕತ್ತಲೆಯ ನಡುವಿನ ಬೆಳ್ಳಿ ಕಿರಣಗಳು ಮಾತ್ರ.

ವರ್ಷದ ಕೊನೆಯೆಂದರೆ ಸಾಮಾನ್ಯವಾಗಿ ಕ್ರಿಸ್ಮಸ್ ಸಂಭ್ರಮದ ಕಾಲ. ಆದರೆ 2021ರ ಕ್ರಿಸ್ಮಸ್ ಸಮಯದಲ್ಲಿ, ಸ್ಪಷ್ಟವಾಗಿ ಪ್ರಭುತ್ವದ ಬೆಂಬಲದೊಂದಿಗೆ ಹಿಂದುತ್ವ ಮೂಲಭೂತವಾದಿಗಳಿಂದ ಚರ್ಚ್‌ಗಳ ಧ್ವಂಸ, ಪ್ರಾರ್ಥನಾ ಸಭೆಗಳ ಮೇಲೆ ದಾಳಿ ನಡೆದಿವೆ. 2022ರ ವರ್ಷವು ಬದಲಾವಣೆಯನ್ನು ತರುವುದೆಂದು ನಾವು ಆಶಿಸಲು ಬಯಸುತ್ತೇವೆ. ಆದರೆ ಕೇವಲ ಚುನಾವಣಾ ಗೆಲುವುಗಳನ್ನು ಯಾವುದೇ ಬದಲಾವಣೆಯ ಚಿಹ್ನೆಗಳನ್ನಾಗಿ ನೋಡಲು ಸಾಧ್ಯವಿಲ್ಲ. ಭಾರತದ ಯುವ ಪೀಳಿಗೆಯ ಮನಸ್ಸುಗಳನ್ನು ದ್ವೇಷ ಮತ್ತು ತಿರಸ್ಕಾರದ ವಿಷದಿಂದ ತುಂಬಲಾಗಿದೆ. ಮಧ್ಯಮ ವರ್ಗದ ಕೆಲ ವಿಭಾಗಗಳಲ್ಲಿ ತಮ್ಮ ಸಾಪೇಕ್ಷ ಶ್ರೀಮಂತಿಕೆಯಿಂದಾಗಿ ಈಗಲೂ ದುರಹಂಕಾರ ತುಂಬಿದೆ. ಬಹುಪಾಲು ಭಾರತೀಯರು ಕಾಣಬಯಸುವ ಭವಿಷ್ಯ ಏನು ಎಂಬ ಬಗ್ಗೆ ರಾಜಕೀಯ ವರ್ಗಗಳಿಗೆ ಯಾವುದೇ ಸುಳಿವು ಇಲ್ಲ. 2022ರಲ್ಲಿ ಮತ್ತು ಅದರಾಚೆಗೂ ಸಹ ಈ ಪರಿಸ್ಥಿತಿಯನ್ನು ಬದಲಿಸಲು ನಾವೆಲ್ಲರೂ ಅನೇಕ ರಂಗಗಳಲ್ಲಿ ಶ್ರಮಿಸಬೇಕಿದೆ. ಅಂತಹ ಬದಲಾವಣೆಗಾಗಿ ದುಡಿಯುವ ತುಡಿತವಿರುವ ಎಲ್ಲರಿಗೂ 2022ರ ವರ್ಷವು ಸಾಧನೆಯ ವರ್ಷವಾಗಲಿ ಎಂದು ಹಾರೈಸುತ್ತೇನೆ.

ಉಲ್ಲೇಖಗಳು:
ಡೋನಾ ಹಾರಾವೇ: ’ಎ ಸೈಬೋರ್ಗ್ ಮ್ಯಾನಿಫೆಸ್ಟೊ’.
ಡಬ್ಲ್ಯೂ.ಬಿ.ಯೇಟ್ಸ್: ’ಈಸ್ಟರ್ 1916’.

  • (ಕನ್ನಡಕ್ಕೆ): ಸಿರಿಮನೆ ನಾಗರಾಜ್
ಪ್ರೊ ಜಿ ಎನ್ ದೇವಿ

ಪ್ರೊ ಜಿ ಎನ್ ದೇವಿ
ಭಾರತದ ಖ್ಯಾತ ಚಿಂತಕರಲ್ಲಿ ಒಬ್ಬರಾದ ದೇವಿ ಅವರು, ಪೀಪಲ್ ಲಿಂಗ್ವಿಸ್ಟಿಕ್ಸ್ ಸರ್ವೆ ಮೂಲಕ ಚಿರಪರಿಚಿತರು. ‘ಆಫ್ಟರ್ ಅಮ್ನೇಶಿಯಾ’ ಪುಸ್ತಕಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. ಚಳವಳಿಗಳ ಸಂಗಾತಿಯಾಗಿರುವ ದೇವಿ ಸದ್ಯಕ್ಕೆ ದಿ ಸೌತ್ ಫೋರಮ್‌ನ ಸಂಚಾಲಕರು.


ಇದನ್ನೂ ಓದಿ: ತಾಲಿಬಾನಿಗಳಿಂದ ಹತರಾದ ದಾನಿಶ್ ಸಿದ್ದೀಕಿಗೆ ಮರಣೋತ್ತರವಾಗಿ ’ವರ್ಷದ ಪತ್ರಕರ್ತ’ ಪ್ರಶಸ್ತಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...