Homeಕರ್ನಾಟಕಕೆಜಿಎಫ್: ದಲಿತ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ- 10 ದಿನ ಕಳೆದರೂ ಆರೋಪಿಗಳನ್ನು ಬಂಧಿಸದ ಪೊಲೀಸರು!

ಕೆಜಿಎಫ್: ದಲಿತ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ- 10 ದಿನ ಕಳೆದರೂ ಆರೋಪಿಗಳನ್ನು ಬಂಧಿಸದ ಪೊಲೀಸರು!

“ಇದು ತುಂಬಾ ಸೂಕ್ಷ್ಮವಾದ ವಿಷಯವಾಗಿದ್ದು, ತನಿಖೆಯಿಂದ ಸತ್ಯಾಂಶ ಹೊರ ಬರಲಿದೆ. ಅದಕ್ಕೂ ಮೊದಲೇ ಏನನ್ನೂ ಹೇಳಲು ಇಚ್ಚಿಸುವುದಿಲ್ಲ” ಎಂದು ಕೆಜಿಎಫ್ ಶಾಸಕರಾದ ರೂಪ ಶಶಿಧರ್ ಹೇಳಿದ್ದಾರೆ.

- Advertisement -
- Advertisement -

ದಲಿತರೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ, ಜಾತಿ ನಿಂದನೆ ಮಾಡಿರುವ ಘಟನೆ ಕೆಜಿಎಫ್ ನ ಕೆ.ಸಿ.ರೆಡ್ಡಿ ಗಾಂಡ್ಲ ಹಳ್ಳಿಯಲ್ಲಿ ನಡೆದಿದೆ ಎಂದು ತಾಲೂಕಿನ ಆಂಡರ್‌ಸನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆಗೊಳಗಾದ ವ್ಯಕ್ತಿ ಶಿವರಾಮಪ್ಪ, ಈ ಸಂಬಂಧ ತನ್ನದೇ ಗ್ರಾಮದವರಾದ ಮಂಜುನಾಥ ರೆಡ್ಡಿ ಮತ್ತು ಚಂದ್ರಾ ರೆಡ್ಡಿ ಎಂಬುವವರ ಮೇಲೆ ದೂರು ನೀಡಿದ್ದು, ಐಪಿಸಿ ಸೆಕ್ಷನ್ 323, 324, 504, 506 ಮತ್ತು 34 ಹಾಗೂ SC, ST ದೌರ್ಜನ್ಯ ಪ್ರತಿಬಂಧಕ ಕಾಯ್ದೆ-2005 (ತಿದ್ದುಪಡಿ)ರ ಅಡಿಯಲ್ಲಿ ಎಫ್.ಐ.ಆರ್ ದಾಖಲಾಗಿದೆ.

ಆಗಸ್ಟ್ 29, 2020 ರಂದು ಪ್ರಕರಣ ದಾಖಲಿಸಿದ್ದರೂ ಸಹ, ಆರೋಪಿಗಳನ್ನು ಇನ್ನೂ ಬಂಧಿಸಲಾಗಿಲ್ಲ ಎಂದು ಶಿವರಾಮಪ್ಪನವರ ಸಹೋದರರಾದ ನಾರಾಯಣ್ ಕ್ಯಾಸಂಬಳ್ಳಿ ಆರೋಪಿಸಿದ್ದಾರೆ.

“ಆಗಸ್ಟ್ 29 ರಂದು ಬೆಳಿಗ್ಗೆ 9 ಗಂಟಗೆ ಈ ಪ್ರಕರಣದ ದೂರನ್ನು ಪೊಲೀಸ್ ಠಾಣೆಗೆ ನೀಡಿದ್ದರೂ, ಅಂದು ಸಂಜೆಯವರೆಗೂ ಯಾವುದೇ ರೀತಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳದೇ, ಯಾವುದೇ ಕ್ರಮ ಕೈಗೊಂಡಿರಲಿಲ್ಲ. ನಂತರ ಉನ್ನತ ಅಧಿಕಾರಿಗಳಿಂದ ಒತ್ತಡ ಹಾಕಿಸಿದ್ದರಿಂದ ಅಂದು ರಾತ್ರಿ 11 ಗಂಟೆಗೆ ಪ್ರಕರಣ ದಾಖಲಿಸಿ ಎಫ್.ಐ.ಆರ್ ಹಾಕಿದ್ದಾರೆ” ಎಂದು ಅವರು ಹೇಳಿದರು.

ಶಿವರಾಮಪ್ಪನವರು ತಮಗೆ ಸೇರಿದ ಖಾಲಿ ನಿವೇಶನದಲ್ಲಿ ಕಲ್ಲುಗಳಿಂದ ಕಾಂಪೌಂಡ್ ಕಟ್ಟುತ್ತಿದ್ದ ವೇಳೆ ಅದೇ ಊರಿನ ರಘುರಾಮ ರೆಡ್ಡಿ ಎಂಬುವವರ ಮಕ್ಕಳಾದ ಮಂಜುನಾಥ ರೆಡ್ಡಿ ಮತ್ತು ಚಂದ್ರಾ ರೆಡ್ಡಿ ಎಂಬುವವರು, ಶಿವರಾಮಪ್ಪನವರ ಮೇಲೆ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಸೈಜುಗಲ್ಲು ಎತ್ತಿ ಹಾಕಿ ದೊಣ್ಣೆ ಮತ್ತು ಮಚ್ಚುಗಳಿಂದ ಮಾರಣಾಂತಿಕವಾದ ಹಲ್ಲೆ ನಡೆಸಿದ್ದಾರೆ ಎಂದು ದೂರು ದಾಖಲಾಗಿದೆ.

ಇದನ್ನೂ ಓದಿ: ಮೋದಿ ಜಿಂದಾಬಾದ್, ಜೈ ಶ್ರೀ ರಾಮ್ ಎನ್ನಲು ನಿರಾಕರಿಸಿದ ಮುಸ್ಲಿಂ ಆಟೋ ಡ್ರೈವರ್ ಮೇಲೆ ಹಲ್ಲೆ

“ದೂರು ದಾಖಲಾಗಿ 10 ದಿನಗಳು ಕಳೆದರೂ, ಈವರೆಗೆ ಆರೋಪಿಗಳನ್ನು ಬಂಧಿಸದ ಪೋಲಿಸರ ವರ್ತನೆಯನ್ನು ಖಂಡಿಸಿ, ಜಿಲ್ಲೆ ಮತ್ತು ತಾಲ್ಲೂಕಿನ ದಸಂಸ ಮತ್ತು ಇತರ ದಲಿತ ಸಂಘಟನೆಗಳು ಕಳೆದ 8 ದಿನಗಳಿಂದ ಪ್ರತಿಭಟನೆ ಮಾಡುತ್ತಿದೆ. ಇಂದೂ ಕೂಡ ಕೆಜಿಎಫ್ ನ ತಾಲ್ಲೂಕು ಕಛೇರಿ ಮುಂಭಾಗ ದಲಿತ ಸಂಘಟನೆಗಳು ಜಂಟಿಯಾಗಿ ಪ್ರತಿಭಟನೆಯನ್ನು ಹಮ್ಮಿಕೊಂಡಿತ್ತು. ಎಲ್ಲಾ ಅಗತ್ಯ ದಾಖಲೆಗಳೂ ಹಲ್ಲೆಗೊಳಗಾದವರ ಪರವಾಗಿವೆ ಎಂದು ತಹಶೀಲ್ದಾರ್ ಅವರೇ ಹೇಳಿದ್ದಾರೆ. ಆದರೂ ಪೊಲೀಸರು ಆರೋಪಿಗಳನ್ನು ಬಂಧಿಸಿಲ್ಲ” ಎಂದು ನಾರಾಯಣ ಕ್ಯಾಸಂಬಳ್ಳಿ ಆರೋಪಿಸಿದ್ದಾರೆ.

ಈ ನಡುವೆ ಕೋಲಾರ ಜಿಲ್ಲಾ ಅಟ್ರಾಸಿಟಿ ಕಾಯ್ದೆಯಡಿ ದಲಿತ ದೌರ್ಜನ್ಯ ತಡೆ ಸಮಿತಿ ಗ್ರಾಮಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದೆ‌. ದೌರ್ಜನ್ಯಕ್ಕೆ ಒಳಗಾದ ಶಿವರಾಮಪ್ಪ ಕುಟುಂಬದವರಿಗೆ ಧೈರ್ಯವನ್ನು ತುಂಬಿದೆ.

ಪ್ರಸ್ತುತ ಪ್ರಕರಣದ ವಿವಾದಿತ ಖಾಲಿ ನಿವೇಶನವನ್ನು ಶಿವರಾಮಪ್ಪನವರ ಸಹೋದರರಾದ ಸತ್ಯಮೂರ್ತಿ ಅವರು 2013 ರಲ್ಲಿಯೇ ಖರೀದಿಸಿದ್ದರು. ಈ ನಿವೇಶನವು ಅದೇ ಗ್ರಾಮದವರಾದ ಕದಿರೆಪ್ಪ ಎಂಬುವವರಿಗೆ 1975ರಲ್ಲಿ ಪಂಚಾಯಿತಿಯ ಕಡೆಯಿಂದ ಮಂಜೂರಾಗಿದ್ದು, ಆಗಲೇ ಇದಕ್ಕೆ ಸಂಬಂಧಿಸಿದ ಹಕ್ಕು ಪತ್ರವನ್ನು ಪಡೆದುಕೊಂಡಿದ್ದರು.

“ಆದರೆ ಈಗ, ಆರೋಪಿಗಳು ಈ ಸ್ಥಳ ತಮಗೆ ಸೇರಿದ್ದೆಂದು ಹಲವು ದಿನಗಳಿಂದ ತೊಂದರೆ ಕೊಡುತ್ತಿದ್ದರು. ಇಲ್ಲಿ ನಾವು ಸಾವಿತ್ರಿಭಾಯಿ ಫುಲೆ ಅವರ ಹೆಸರಿನಲ್ಲಿ ಗ್ರಂಥಾಲಯವೊಂದನ್ನು ಕಟ್ಟಿಸಿ, ಪ್ರಗತಿಪರ ಚಟುವಟಿಕೆಗಳ ತಾಣವನ್ನಾಗಿ ಮಾಡಬೇಕು ಎಂಬ ಬಯಕೆಯನ್ನು ಹೊಂದಿದ್ದೆವು. ಆದರೆ ಆರೋಪಿಗಳು ಬಂದು ಇಲ್ಲಿ ದೇವಸ್ಥಾನ ಕಟ್ಟಿಸಬೇಕು ಎಂದು ದಲಿತರನ್ನೇ ದಲಿತರ ಮೇಲೆ ಎತ್ತಿಕಟ್ಟಿ ಪರಿಸ್ಥಿತಿ ಬಿಗಡಾಯಿಸುವಂತೆ ಮಾಡಿದ್ದಾರೆ” ಎಂದು ನಾರಾಯಣ್ ಕ್ಯಾಸಂಬಳ್ಳಿ ಹೇಳಿದ್ದಾರೆ.

ಇದನ್ನೂ ಓದಿ: ಪೊಲೀಸರ ಎದುರೇ ದಲಿತರ ಮೇಲೆ ಹಲ್ಲೆ ಆರೋಪ: ಠಾಣೆ ಎದುರು ಪ್ರತಿಭಟನೆ

“ಸುಮಾರು 10 ದಿನಗಳಿಂದ ಇಷ್ಟೆಲ್ಲಾ ಬೆಳವಣಿಗೆಗಳಾದರೂ ಯಾವುದೇ ಜನಪ್ರತಿನಿಧಿಗಳು ಗ್ರಾಮದತ್ತ ಸುಳಿದು ಸಾಂತ್ವನ ಹೇಳುವ‌ ಕೆಲಸ ಮಾಡಿಲ್ಲ. ಆದರೆ ಕಳೆದ ಸೆಪ್ಟಂಬರ್ 4 ರಂದು ತನ್ನ ಬೆಂಬಲಿಗರೊಂದಿಗೆ ನಾಲ್ಕಾರು ಕಾರುಗಳಲ್ಲಿ ಗ್ರಾಮಕ್ಕೆ ದಿಢೀರ್ ಭೇಟಿಕೊಟ್ಟ ಕೆಜಿಎಫ್ ಕ್ಷೇತ್ರದ MLA ರೂಪ ಶಶಿಧರ್ ಅವರು, ನಮ್ಮನ್ನಾಗಲಿ ಅಥವಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಿವರಾಮಪ್ಪ ಅವರನ್ನಾಗಲಿ ಸೌಜನ್ಯಕ್ಕೂ ಭೇಟಿ ಮಾಡದೆ, ಆರೋಪಿಗಳ ತಂದೆಯಾದ ರಘುರಾಮ ರೆಡ್ಡಿ ಮತ್ತು ಅವರ ಬೆಂಬಲಿತರೂ ಸೇರಿದಂತೆ ಗ್ರಾಮದ ಸವರ್ಣೀಯ ಸಮುದಾಯದವರೊಂದಿಗೆ ಪಂಚಾಯತಿ ಮಾಡಿ ಹಲ್ಲೆಗೊಳಗಾದವರು ಕೇಸು ದಾಖಲಿಸಿದ್ದೇ ತಪ್ಪು ಎಂಬಂತೆ ಮಾತನಾಡಿರುವುದು ನಿಜಕ್ಕೂ ದುರಂತ” ಎಂದು ಕುಟುಂಬಸ್ಥರು ತಮ್ಮ ಅಳಲು ತೋಡಿಕೊಂಡಿದ್ದಾರೆ.

“ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ತಡೆದು ರಕ್ಷಣೆ ನೀಡಬೇಕಾದ, ಸ್ವತಃ ದಲಿತ ಸಮುದಾಯದವರೇ ಆದ ಶಾಸಕರೇ ಹಲ್ಲೆಮಾಡಿದ ಆರೋಪಿಗಳ ಪರವಾಗಿ ನಿಂತಿರುವುದು ಅಮಾನವೀಯ ಮತ್ತು ಖಂಡನೀಯ. ಆರೋಪಿಗಳಾದ ಮಂಜುನಾಥ ರೆಡ್ಡಿ ಮತ್ತು ಚಂದ್ರಾ ರೆಡ್ಡಿ ಮತ್ತು ಅವರ ಕುಟುಂಬಕ್ಕೆ ಬೆಂಬಲವಾಗಿ ನಿಂತಿರುವ MLA ರೂಪ ಶಶಿಧರ್ ಅವರ ದಲಿತ ವಿರೋಧಿ ನಡೆಯನ್ನು ಖಂಡಿಸಬೇಕಿದೆ” ಎಂದು ಕುಟುಂಬದವರು ಆರೋಪಿಸಿದ್ದಾರೆ.

ಈ ಕುರಿತು ನಾನುಗೌರಿ.ಕಾಂಗೆ ಪ್ರತಿಕ್ರಿಯಿಸಿದ ಕೆಜಿಎಫ್ ಶಾಸಕರಾದ ರೂಪ ಶಶಿಧರ್ ಅವರು, “ಇದು ತುಂಬಾ ಸೂಕ್ಷ್ಮವಾದ ವಿಷಯವಾಗಿದ್ದು, ತನಿಖೆಯಿಂದ ಸತ್ಯಾಂಶ ಹೊರ ಬರಲಿದೆ. ಅದಕ್ಕೂ ಮೊದಲೇ ಏನನ್ನೂ ಹೇಳಲು ಇಚ್ಚಿಸುವುದಿಲ್ಲ” ಎಂದು ಹೇಳಿದರು.

“ವಾಸ್ತವದಲ್ಲಿ ಏನಾಗಿದೆ ಎಂಬುದು ನನಗೂ ಗೊತ್ತಿಲ್ಲ. ಹಾಗಾಗಿ ನೀವು ಇದರ ಕುರಿತು ಪೊಲೀಸಿನವರನ್ನೇ ಕೇಳಬೇಕು. ಅವರು ಪ್ರಕರಣದ ಎಲ್ಲಾ ವಿಷಯಗಳ ವಿವರ ನೀಡುತ್ತಾರೆ. ಸಂಪೂರ್ಣವಾಗಿ ತಿಳಿದುಕೊಂಡು ನಂತರ ನನ್ನನ್ನು ಪ್ರಶ್ನಿಸಿ. ಅದಾಗ್ಯೂ, ದಲಿತರೊಬ್ಬರ ಮೇಲಿನ ಹಲ್ಲೆಯ ಈ ಪ್ರಕರಣವನ್ನು ಸೂಕ್ಷ್ಮವಾಗಿ ಬಗೆಹರಿಸಿ, ಯಾರಿಗೂ ತೊಂದರೆಯಾಗದಂತೆ ಕ್ರಮ ತೆಗೆದುಕೊಳ್ಳಬೇಕು. ಈಗ ಇದಕ್ಕೆ ಸಂಬಂಧಿದಂತೆ ಹೋರಾಟ ಮಾಡುತ್ತಿರುವ ಸಂಘಟನೆಗಳಿಗೆ ಇದು ಬೇಕಿಲ್ಲ. ಈ ಸಮಸ್ಯೆಯನ್ನು ಗ್ರಾಮಸ್ಥರ ಸಮ್ಮುಖದಲ್ಲೇ ಬಗೆಹರಿಸಬಹುದಿತ್ತು. ಆದರೆ ಇದರ ಹಿಂದೆ ಬೇರೆ ಉದ್ದೇಶವೇ ಇದೆ. ಹಾಗಾಗಿ ಇದಕ್ಕೆ ಸಂಬಂಧಿಸಿದಂತೆ ಈಗ ನಾನು ಪ್ರತಿಕ್ರಿಯಿಸುವುದಿಲ್ಲ” ಎಂದು ಶಾಸಕಿ ರೂಪ ಶಶಿಧರ್ ಹೇಳಿದ್ದಾರೆ.

“ವಿಳಂಬವಾಗಿ ದೂರು ದಾಖಲಿಸಿಕೊಂಡಿದ್ದೇ ಅಲ್ಲದೆ ಆರೋಪಿಗಳನ್ನ ಬಂಧಿಸಲು ವಿಳಂಬ ಮಾಡುತ್ತಿರುವ, ಪರೋಕ್ಷವಾಗಿ ಆರೋಪಿಗಳಿಗೆ ಸಹಕರಿಸುತ್ತಿರುವ KGFನ ಆಂಡ್ರಸನ್ ಪೇಟೆ ಪೋಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಮುನಿಯಪ್ಪ ಅವರನ್ನು ಕೂಡಲೇ ಸೇವೆಯಿಂದ ಅಮಾನತು ಮಾಡಲು ಒತ್ತಾಯಿಸೋಣ. ಅಲ್ಲದೆ ದಲಿತರೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ಮತ್ತು ಜಾತಿ ನಿಂದನೆ ಮಾಡಿರುವ ಆರೋಪಿಗಳಾದ ಮಂಜುನಾಥ ರೆಡ್ಡಿ ಮತ್ತು ಚಂದ್ರಾ ರೆಡ್ಡಿ ಅವರನ್ನು ಕೂಡಲೇ ಬಂಧಿಸಿ ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು. ಹಲ್ಲೆಗೊಳಗಾದ ಶಿವರಾಮಪ್ಪ ಕುಟುಂಬಕ್ಕೆ ಸೂಕ್ತ ನ್ಯಾಯ ಮತ್ತು ರಕ್ಷಣೆಯನ್ನು ಒದಗಿಸಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (DSS), ಜಿಲ್ಲೆ ಮತ್ತು ತಾಲೂಕಿನ ಎಲ್ಲಾ ದಲಿತಪರ ಸಂಘಟನೆಗಳ ಒಕ್ಕೂಟ ಹಾಗೂ ದಲಿತ ಮಾನವ ಹಕ್ಕುಗಳ ವೇದಿಕೆ  ಒತ್ತಾಯಿಸುತ್ತದೆ. ಮತ್ತು ಮುಂದಿನ ದಿನಗಳಲ್ಲಿ ಉಗ್ರ ಹೋರಾಟಕ್ಕೆ ಮುಂದಾಗಲಿವೆ” ಎಂದು ಗೋವಿಂದರಾಜ ಬೈಚಗುಪ್ಪೆ ಹೇಳಿದ್ದಾರೆ.


ಇದನ್ನೂ ಓದಿ: ಜಾತಿ-ತಾರತಮ್ಯ: ವರದಿ ಮಾಡಿದ್ದ ತಮಿಳುನಾಡಿನ ಪತ್ರಕರ್ತನ ಮೇಲೆ ಹಲ್ಲೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...