ಮೋದಿ ಜಿಂದಾಬಾದ್ ಮತ್ತು ಜೈ ಶ್ರೀ ರಾಮ್ ಎಂದು ಕೂಗಲು ನಿರಾಕರಿಸಿದ ರಾಜಸ್ಥಾನದ ಸಿಕಾರ್ ಜಿಲ್ಲೆಯ 52 ವರ್ಷದ ಮುಸ್ಲಿಂ ಆಟೋರಿಕ್ಷಾ ಚಾಲಕನ ಮೇಲೆ ತೀವ್ರ ಹಲ್ಲೆ ಮಾಡಲಾಗಿದೆ. ಇದರ ವಿರುದ್ಧ ಗಫ್ಫಾರ್ ಅಹ್ಮದ್ ಕಚ್ಚಾವಾ ಅವರು ದೂರು ದಾಖಲಿಸಿದ್ದಾರೆ.
ನನ್ನ ಹಲ್ಲುಗಳು ಮುರಿದಿವೆ, ಕಣ್ಣಿಗೆ ಬಲವಾದ ಪೆಟ್ಟು ಬಿದ್ದು ಊದಿಕೊಂಡಿದೆ. ಕೆನ್ನೆಗೆ ಮೂಗುಪೆಟ್ಟು ಬಿದ್ದಿದೆ ಹಲ್ಲೆ ಸಮಯದಲ್ಲಿ ತನ್ನ ವಾಚ್ ಮತ್ತು ಹಣವನ್ನು ದೋಚಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಗಫ್ಫಾರ್ ಅಹ್ಮದ್ ಕಚ್ಚಾವಾ ಅವರು ಶುಕ್ರವಾರ ಬೆಳಿಗ್ಗೆ 4 ಗಂಟೆ ಸುಮಾರಿಗೆ ಪ್ರಯಾಣಿಕರನ್ನು ಹತ್ತಿರದ ಹಳ್ಳಿಗೆ ಬಿಟ್ಟು ಹಿಂದಿರುಗುತ್ತಿದ್ದಾಗ SUV ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಅವರನ್ನು ತಂಬಾಕು ಕೇಳುವ ನೆಪದಲ್ಲಿ ತಡೆದರು. ನಂತರ ತಂಬಾಕು ನೀಡಲು ಮುಂದಾದಾಗ ಗಡ್ಡವನ್ನು ನೋಡಿ “ಮೋದಿ ಜಿಂದಾಬಾದ್” ಎಂದು ಹೇಳುವಂತೆ ಒತ್ತಾಯಿಸಿದರು. ಅವರು ನಿರಾಕರಿಸಿದಾಗ, ಆರೋಪಿಗಳು ಕಪಾಳಕ್ಕೆ ಹೊಡೆದಿದ್ದಾರೆ, ಪಾಕಿಸ್ತಾನಕ್ಕೆ ಹೋಗು ಎಂದು ಗದರಿದ್ದಾರೆ ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.
ಕಚ್ಚಾವಾ ಅಲ್ಲಿಂದ ತಪ್ಪಿಸಿಕೊಳ್ಳಲೆತ್ನಿಸಿದರೂ ಸಹ ಅವರು ಹಿಂಬಾಲಿಸಿ ಥಳಿಸಿದ್ದಾರೆ. ಧಾರ್ಮಿಕ ಘೋಷಣೆಗಳನ್ನು ಕೂಗುವಂತೆ ಒತ್ತಾಯಿಸಿದ್ದಾರೆ. ನಂತರ ಅವನ ಪರ್ಸ್, ವಾಚ್ ಮತ್ತು 700 ರೂ ಹಣವನ್ನು ಸಹ ಕಿತ್ತುಕೊಂಡಿದ್ದಾರೆ ಎಂದು ಪೊಲೀಸ್ ಅಧೀಕ್ಷಕ ಗಗನ್ದೀಪ್ ಸಿಂಗ್ಲಾ ತಿಳಿಸಿದ್ದಾರೆ.
“ನನ್ನ ಎಡಗಣ್ಣು, ಕೆನ್ನೆ ಮತ್ತು ತಲೆಯ ಮೇಲೆ ಗಂಭೀರವಾದ ಗಾಯಗಳಾಗಿದ್ದು, ಅವರು ನನ್ನ ಮೇಲೆ ಕೋಲಿನಿಂದ ಹಲ್ಲೆ ಮಾಡಿದ್ದಾರೆ. ನನ್ನನ್ನು ಹೊಡೆದ ನಂತರ, ನನ್ನನ್ನು ಪಾಕಿಸ್ತಾನಕ್ಕೆ ಕಳುಹಿಸಿದ ನಂತರವೇ ವಿಶ್ರಾಂತಿ ಪಡೆಯುತ್ತೇವೆ ಎಂದು ಹೇಳಿದರು” ಎಂದು ಅವರು ದೂರು ನೀಡಿದ್ದಾರೆ.
“ಎಫ್ಐಆರ್ ದಾಖಲಾದ ನಂತರ, ಶಂಭು ದಯಾಳ್ ಜಾಟ್(35), ರಾಜೇಂದ್ರ ಜಾಟ್ (30) ಎಂಬ ಇಬ್ಬರನ್ನು ನಾವು ನಿನ್ನೆ ಬಂಧಿಸಿದ್ದೇವೆ. ಪ್ರಾಥಮಿಕ ತನಿಖೆಯಿಂದ ಈ ಇಬ್ಬರು ತಮ್ಮ ವಾಹನವನ್ನು ನಿಲ್ಲಿಸಿ ಮದ್ಯ ಸೇವಿಸುತ್ತಿದ್ದರು. ನಂತರ ಕಚ್ಚಾವಾ ಮೇಲೆ ಹಲ್ಲೆ ಮಾಡಿದ್ದಾರೆ” ಎಂದು ಸಾದರ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ ಪುಷ್ಪೇಂದ್ರ ಸಿಂಗ್ ತಿಳಿಸಿದ್ದಾರೆ.
295 ಎ (ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳು, ಯಾವುದೇ ವರ್ಗದ ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವ ಮೂಲಕ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶದಿಂದ) ಮತ್ತು 504 (ಶಾಂತಿ ಉಲ್ಲಂಘನೆಯನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ) ಸೇರಿದಂತೆ ಭಾರತೀಯ ದಂಡ ಸಂಹಿತೆಯ ಅನೇಕ ವಿಭಾಗಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಇದನ್ನೂ ಓದಿ: ಬೈಕ್ ಮುಟ್ಟಿದ್ದಕ್ಕೆ ದಲಿತ ಯುವಕನನ್ನು ಅರೆಬೆತ್ತಲುಗೊಳಿಸಿ ಹಲ್ಲೆ: 13ಕ್ಕು ಹೆಚ್ಚು ಜನರ ವಿರುದ್ಧ FIR, ಬಂಧನಕ್ಕೆ ಒತ್ತಾಯ