Homeಮುಖಪುಟತಮಿಳು ನಾಡು: ಕೋಮುವಾದ ಬಿತ್ತಿದರೂ ಫಲ ನೀಡದ ಬಿಜೆಪಿಗರ ಸಂಕಟ

ತಮಿಳು ನಾಡು: ಕೋಮುವಾದ ಬಿತ್ತಿದರೂ ಫಲ ನೀಡದ ಬಿಜೆಪಿಗರ ಸಂಕಟ

- Advertisement -
- Advertisement -

ಕೋಮವಾದವನ್ನು ಬಿತ್ತಿ ಕೋಮು ಧ್ರುವೀಕರಣದ ಬೆಳೆ ತೆಗೆವ ಬಿಜೆಪಿ ಪಕ್ಷ ಆ ಯೋಜನೆಗಳ ಮೂಲಕವೇ ದೇಶದ ಹಲವೆಡೆ ಅಧಿಕಾರದ ಚುಕ್ಕಾಣಿ ಹಿಡಿದಿರುವುದಕ್ಕೆ ಸಾಕಷ್ಟು ಉದಾಹರಣೆಗಳಿವೆ. 1990 ಸೆಪ್ಟೆಂಬರ್ 25ರಂದು ಲಾಲ್ ಕೃಷ್ಣ ಅಡ್ವಾನಿ ಸೋಮನಾಥದಿಂದ ಅಯೋಧ್ಯೆಯವರೆಗೆ ರಥಯಾತ್ರೆ ಆರಂಭಿಸಿದ್ದರು. ಆ ರಥಯಾತ್ರೆ ನಡೆದ ದಾರಿಯಲ್ಲೆಲ್ಲ ರಕ್ತದ ಕಲೆಗಳಿವೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ರಥಯಾತ್ರೆಯ ಬೆನ್ನಿಗೆ 1992ರ ಬಾಬರಿ ಮಸೀದಿ ಧ್ವಂಸ ಹಾಗೂ ನಂತರ ನಡೆದ ಗಲಭೆಗಳ ರಕ್ತಪಾತದಲ್ಲಿ ಮೃತಪಟ್ಟವರ ಸಂಖ್ಯೆ 10,000ಕ್ಕೂ ಹೆಚ್ಚು ಎನ್ನುತ್ತವೆ ಹಲವು ವರದಿಗಳು. ಇನ್ನು ಗಾಯಗೊಂಡವರ ಮತ್ತು ಆಸ್ತಿಪಾಸ್ತಿ ಕಳೆದುಕೊಂಡವರ ಸಂಖ್ಯೆ ಅಸಂಖ್ಯಾತ.

2002ರ ಗುಜರಾತಿನ ಗೋದ್ರಾ ಹತ್ಯಾಕಾಂಡವನ್ನು ಈ ದೇಶ ಅಷ್ಟು ಸುಲಭಕ್ಕೆ ಮರೆಯಲು ಸಾಧ್ಯವೇ? ಈ ಎರಡೂ ಹತ್ಯಾಕಾಂಡಕ್ಕೆ ಕಾರಣವಾದದ್ದು ಬಿಜೆಪಿಯ ಕೋಮುವಾದ ಎಂಬ ಏಕೈಕ ಅಜೆಂಡ ಮತ್ತು ಈ ಅಜೆಂಡ ನೀಡಿದ ಫಲವೇ ಇಂದು ಉತ್ತರಪ್ರದೇಶ ಮತ್ತು ಗುಜರಾತಿನಲ್ಲಿ ದೀರ್ಘಾವಧಿಯ ಅಧಿಕಾರದ ಚುಕ್ಕಾಣಿ. 2017ರ ಉತ್ತರಪ್ರದೇಶ ಚುನಾವಣೆಗೆ ಪೂರ್ವಭಾವಿಯಾಗಿ 2013ರಲ್ಲೇ ಬಿಜೆಪಿಯಿಂದ ಪ್ರಯೋಜಿಸಲ್ಪಟ್ಟಿದ್ದ, 80 ಜನರ ಸಾವಿಗೆ ಕಾರಣವಾಗಿದ್ದ ಮುಜಫರ್ ನಗರದ ಕೋಮುಗಲಭೆಯನ್ನೂ ಇಲ್ಲಿ ಸ್ಮರಿಸಬಹುದು.

ಇನ್ನು ಕರ್ನಾಟಕದಲ್ಲೂ ಹುಬ್ಬಳ್ಳಿಯ ಈದ್ಗಾ ಮೈದಾನದ ಗಲಾಟೆ, ಚಿಕ್ಕಮಗಳೂರಿನ ದತ್ತಪೀಠ ವಿವಾದ ಬಿಜೆಪಿ ಪಾಲಿಗೆ ಚಿನ್ನದ ಗಣಿ ಎನ್ನಲು ಅಡ್ಡಿ ಇಲ್ಲ. ಈ ವಿವಾದಗಳು ಹುಟ್ಟಿದ ವರ್ಷಗಳನ್ನೂ ಹಾಗೂ ಕರ್ನಾಟಕದಲ್ಲಿ ಬಿಜೆಪಿಯ ಅಧಿಕಾರದ ಹಿಡಿದು ಗಟ್ಟಿಯಾಗುತ್ತಾ ಸಾಗಿದ್ದನ್ನು ತುಲನೆ ಮಾಡಿ ಗಮನಿಸಿದರೆ ಕೋಮುಗಲಭೆ ಮತ್ತು ಅಧಿಕಾರದ ಜೊತೆಗಿನ ಬಿಜೆಪಿಯ ನಯವಾದ ಆಟ ಸ್ಪಷ್ಟವಾಗಿ ಅರ್ಥವಾಗುತ್ತದೆ. ಬಿಜೆಪಿಯ ಈ ತಂತ್ರಗಾರಿಕೆ ಹಲವು ರಾಜ್ಯಗಳಲ್ಲಿ ಅವರ ಕೈಹಿಡಿದಿದೆ ನಿಜ. ಆದರೆ, ತಮಿಳುನಾಡು ಮಾತ್ರ ಜಪ್ಪಯ್ಯ ಎಂದರೂ ಇವರ ಆಟಕ್ಕೆ ಜಗ್ಗುತ್ತಿಲ್ಲ.

2020ರಲ್ಲಿ ಅಣ್ಣಾಮಲೈ ಎಂಬ ಮಾಜಿ ಐಪಿಎಸ್ ಅಧಿಕಾರಿಯನ್ನು ತಮಿಳುನಾಡಿನ ಬಿಜೆಪಿಗೆ ರಾಜ್ಯಾದ್ಯಕ್ಷನನ್ನಾಗಿ ನೇಮಕ ಮಾಡಲಾಗಿತ್ತು. ಬಿಜೆಪಿಯ ಸಾಂಪ್ರದಾಯಿಕ ಅಸ್ತ್ರವನ್ನೇ ಅಲ್ಲೂ ಪ್ರಯೋಗಿಸಿದ್ದ ಅಣ್ಣಾಮಲೈ 2021ರಲ್ಲಿ ಕ್ರೈಸ್ತರ ಶಾಲೆಯೊಂದರಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣವನ್ನೇ ಮುಂದಿಟ್ಟು, ಇದೊಂದು ಕೊಲೆ ಎಂದು ಜನಾಭಿಪ್ರಾಯ ರೂಪಿಸಿ ಧ್ರುವೀಕರಣ ಮಾಡಲು ಮುಂದಾಗಿ ಕೊನೆಗೆ ಜನರಿಂದಲೇ ಛೀಮಾರಿ ಹಾಕಿಸಿಕೊಂಡಿದ್ದರು. ಇದರ ಬೆನ್ನಿಗೆ ಸಾಲುಸಾಲು ಕೋಮುವಾದಿ ಗಲಭೆಗಳಿಗೆ ಅವರು ಬೀಜ ಬಿತ್ತಿದ್ದರೇನೋ ನಿಜ; ಆದರೆ, ಅದ್ಯಾವುದೂ ನಿರೀಕ್ಷಿತ ಫಲ ಕೊಡಲಿಲ್ಲ. ಪರಿಣಾಮ ಅಣ್ಣಾಮಲೈ ಇದೀಗ ಬಿಜೆಪಿಯ ಮತ್ತೊಂದು ಪ್ರಮುಖ ಅಸ್ತ್ರವಾದ ಸುಳ್ಳು ಸುದ್ದಿಯ ಮೊರೆ ಹೋಗಿದ್ದಾರೆ. ತಮಿಳರಿಂದ ಬಿಹಾರಿ ಕಾರ್ಮಿಕರ ಮೇಲೆ ದಾಳಿ ಎಂಬ ಬುರುಡೆ (ಸುಳ್ಸುದ್ದಿ) ಬಿಟ್ಟು ತಮಿಳರ ಸ್ವಾಭಿಮಾನವನ್ನು ಕೆಣಕಿ ಪೇಚಿಗೆ ಸಿಲುಕಿದ್ದಾರೆ. ಪರಿಣಾಮ ಇದೀಗ ಅವರ ರಾಜಕೀಯ ಭವಿಷ್ಯವೇ ಡೋಲಾಯಮಾನವಾಗಿದೆ.

ಏನಿದು ಸುಳ್ಳು ಸುದ್ದಿ ಪ್ರಕರಣ?

ಮಾರ್ಚ್ 1 ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರ ಹುಟ್ಟುಹಬ್ಬ. ಸ್ಟಾಲಿನ್ ಹುಟ್ಟುಹಬ್ಬಕ್ಕೆ ಶುಭ ಕೋರಲೆಂದು ಬಿಹಾರದ ಉಪಮುಖ್ಯಮಂತ್ರಿ ಹಾಗೂ ಆರ್‌ಜೆಡಿ ಪಕ್ಷದ ನಾಯಕ ತೇಜಸ್ವಿ ಯಾದವ್ ತಮಿಳುನಾಡಿಗೆ ಆಗಮಿಸಿದ್ದರು.

ಆದರೆ, ಇದೇ ದಿನ ಬಿಹಾರದ ಬಿಜೆಪಿ ಪಕ್ಷದ ಅಧಿಕೃತ ಟ್ವಿಟರ್ ಖಾತೆಯಲ್ಲಿ “ತಮಿಳುನಾಡಿನಲ್ಲಿ ಹಿಂದಿ ಮಾತನಾಡಿದ್ದಕ್ಕಾಗಿ 12 ಜನರನ್ನು ಒಂದೇ ಕೋಣೆಯಲ್ಲಿ ಕೂಡಿಹಾಕಿ ನೇಣು ಬಿಗಿದು ಕೊಲ್ಲಲಾಗಿದೆ” ಎಂದು ಒಂದು ವಿಡಿಯೋವನ್ನು ಹಂಚಿಕೊಳ್ಳಲಾಗಿತ್ತು.

ಇದರ ಬೆನ್ನಿಗೆ “ಮನೀಶ್ ಕಶ್ಯಪ್” (Manish Kashyap Son of Bihar) ಎಂಬ ವ್ಯಕ್ತಿಯಂತು ಒಂದು ಹೆಜ್ಜೆ ಮುಂದೆ ಹೋಗಿ ತನ್ನ ಯೂಟ್ಯೂಬ್ ಚಾನೆಲ್ ಮತ್ತು ಫೇಸ್ಬುಕ್ ಅಕೌಂಟ್‌ನಲ್ಲಿ, ’ತಮಿಳುನಾಡಿನಲ್ಲಿ ಬಿಹಾರಿ ಕಾರ್ಮಿಕರನ್ನು ಕಂಡಕಂಡಲ್ಲಿ ಮಚ್ಚಿನಿಂದ ಕೊಚ್ಚಿ ಕೊಲ್ಲಲಾಗುತ್ತಿದೆ’ ಎಂದು ಬಾಯಿಗೆ ಬಂದಂತೆ ಬಡಬಡಿಸತೊಡಗಿದ. ಆತನ ವಿಡಿಯೋವನ್ನು 6 ಮಿಲಿಯನ್ ಜನ ವೀಕ್ಷಿಸಿದ್ದರು. ನೋಡನೋಡುತ್ತಿದ್ದಂತೆ ಆ ವಿಡಿಯೋ ವೈರಲ್ ಆಗಿತ್ತು.

ಇದನ್ನೂ ಓದಿ: ‘ನಕಲಿ ಪ್ರಚಾರ’ ಆರೋಪ; ಅಣ್ಣಾಮಲೈ ವಿರುದ್ಧ ಎಫ್‌ಐಆರ್‌ ದಾಖಲು

ಬಿಹಾರದ ವಿಧಾನಸಭೆಯಲ್ಲೂ ಈ ವಿಚಾರವಾಗಿ ಭಾರಿ ಚರ್ಚೆಯಾಗಿತ್ತು. ಅಲ್ಲಿನ ವಿರೋಧ ಪಕ್ಷವಾದ ಬಿಜೆಪಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ರಾಜೀನಾಮೆಗೆ ಪಟ್ಟುಹಿಡಿದಿತ್ತು. ವಿರೋಧ ಪಕ್ಷದ ನಾಯಕ ವಿಜಯ್ ಸಿನ್ಹ ಈ ಮನೀಶ್ ಕಶ್ಯಪ್ ಎಂಬ ವ್ಯಕ್ತಿಯ ಯೂಟ್ಯೂಬ್ ಚಾನೆಲ್‌ಗೆ ಸಂದರ್ಶನ ನೀಡಿ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಮತ್ತು ಅವರ ಹುಟ್ಟುಹಬ್ಬಕ್ಕೆ ಶುಭಕೋರಿದ್ದ ತೇಜಸ್ವಿ ಯಾದವ್ ಬಗ್ಗೆ ಅವಹೇಳನಕಾರಿಯಾದಂತಹ ಮಾತುಗಳನ್ನಾಗಿದ್ದರು. “ಇಂತವರ ಸರ್ಕಾರ ಬಿಹಾರಕ್ಕೆ ಬೇಕೆ? ತೇಜಸ್ವಿ ಯಾದವ್ ಸ್ಟಾಲಿನ್‌ಗೆ ಕೇಕ್ ತಿನ್ನಿಸುವ ದಿನದಲ್ಲೇ ನಮ್ಮ ಬಿಹಾರಿಗಳು ಕೊಲೆಯಾಗುತ್ತಿದ್ದಾರೆ” ಎಂದು ಜನರನ್ನು ಪ್ರಚೋದಿಸಿದ್ದರು.

ಇನ್ನೂ ಟಿಆರ್‌ಪಿ ಗೀಳಿಗೆ ಬಿದ್ದ ದೃಶ್ಯ ಮಾಧ್ಯಮಗಳ ಬಗ್ಗೆ ಕೇಳಬೇಕೆ! ಬಿಜೆಪಿ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದ ವಿಡಿಯೋ ವೈರಲ್ ಆಗಿದ್ದೆ ತಡ ಇಡೀ ದಿನ ಹಿಂದಿ ಮತ್ತು ಆಂಗ್ಲ ದೃಶ್ಯ ಮಾಧ್ಯಮಗಳು ತಮಿಳುನಾಡಿನ ವಿರುದ್ಧ ಸಾಲುಸಾಲು ವರದಿಗಳನ್ನು ಬಿತ್ತರಿಸಿದವು. ತಮಿಳುನಾಡಿನಲ್ಲಿ ಬಿಹಾರಿ ಮತ್ತು ಉತ್ತರಪ್ರದೇಶ ಸೇರಿದಂತೆ ಹಿಂದಿ ಭಾಷಿಕರಿಗೆ ರಕ್ಷಣೆ ಇಲ್ಲ, ಅಲ್ಲಿನ ಸರ್ಕಾರವೇ ತಮಿಳು ಉಗ್ರಗಾಮಿಗಳ ಬೆನ್ನಿಗೆ ನಿಂತಿದೆ ಎಂದು ವಿಷಕಾರಲು ಆರಂಭಿಸಿದವು. ಪರಿಣಾಮ ಪ್ರಕರಣದ ತನಿಖೆಗೆ ಸಿಎಂ ನಿತೀಶ್ ಕುಮಾರ್ ಒಂದು ತಂಡವನ್ನು ರಚಿಸಿ ತಮಿಳುನಾಡಿಗೂ ಕಳಿಸಿದ್ದರು.

ವಿಡಿಯೋ ಅಸಲಿ ಕಥೆ, ಅಣ್ಣಾಮಲೈ ಎಂಬ ಮತಿಗೇಡಿ

ಈ ಸುಳ್ಳು ಸುದ್ದಿಯ ಬಿಸಿ ಬಿಹಾರದಿಂದ ಅಷ್ಟೇ ಶೀಘ್ರವಾಗಿ ತಮಿಳುನಾಡನ್ನೂ ಮುಟ್ಟಿತ್ತು. ಆದರೆ, ವಿಷಯದ ಸತ್ಯಾಸತ್ಯತೆಯನ್ನು ಪರಿಶೀಲಿಸದ ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಕರ್ನಾಟಕದ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಬಿಹಾರಿಗಳ ಮೇಲಿನ ದಾಳಿಯ ’ಸುಳ್ಳು’ ವಿಡಿಯೋವನ್ನು ಹಂಚಿಕೊಂಡಿದ್ದರು. ಅಲ್ಲದೆ, “ಹಿಂದಿ ಭಾಷಿಕರ ಮತ್ತು ಉತ್ತರ ಭಾರತೀಯರ ವಿರುದ್ಧ ತಮಿಳರಲ್ಲಿ ಆಕ್ರೋಶ ಮನೆಮಾಡಲು ಡಿಎಂಕೆ ಪಕ್ಷ ಕಾರಣ” ಎಂದು ಆರೋಪಿಸಿದ್ದರು. ಈ ಬಗ್ಗೆ ಸಾಲುಸಾಲು ಟ್ವೀಟ್ ಮಾಡುತ್ತಾ ಡಿಎಂಕೆ ಪಕ್ಷದ ವಿರುದ್ಧ ದ್ವೇಷ ಪ್ರಚಾರದಲ್ಲಿ ತೊಡಗಿದ್ದರು.

ಮನೀಶ್ ಕಶ್ಯಪ್

ಆದರೆ, ಘಟನೆಯ ಮರುದಿನವೇ ಫ್ಯಾಕ್ಟ್‌ಚೆಕ್ ಸಹ ಸಂಸ್ಥಾಪಕ ಮೊಹಮ್ಮದ್ ಜುಬೇರ್ ಸುಳ್ಳಿನ ಚರ್ಮ ಸುಲಿದಿದ್ದರು, “ಈ ಹಲ್ಲೆ ತಮಿಳುನಾಡಿನಲ್ಲಿ ನಡೆದದ್ದಲ್ಲ. ಇದೊಂದು ಸುಳ್ಳು ಸುದ್ದಿಯಾಗಿದ್ದು, ತಮಿಳುನಾಡಿನಲ್ಲಿ ಯಾವುದೇ ಬಿಹಾರಿ ಕಾರ್ಮಿಕರ ಮೇಲೆ ಹಲ್ಲೆಯಾಗಿಲ್ಲ ಎಂದು ಸಾಕ್ಷಿ ಸಮೇತ ಸರಣಿ ಟ್ವೀಟ್ ಮಾಡಿದ್ದರು.

ಈ ಟ್ವೀಟ್ ಮೂಲಕ ಬಿಜೆಪಿಯ ಅಸಲಿ ತಂತ್ರಗಾರಿಕೆ ಜಗಜ್ಜಾಹೀರಾಗಿತ್ತು. ಒಂದೇ ಸುಳ್ಳು ಸುದ್ದಿಯ ಮೂಲಕ ಬಿಹಾರದಲ್ಲಿ ನಿತೀಶ್ ಕುಮಾರ್ ವಿರುದ್ಧ ಜನಾಭಿಪ್ರಾಯ ರೂಪಿಸುವುದು, ಮತ್ತು ಬಿಜೆಪಿಯೇತರ ಸರ್ಕಾರವಿರುವ ತಮಿಳುನಾಡಿನ ವಿರುದ್ಧ ರಾಷ್ಟ್ರೀಯ ಮಟ್ಟದಲ್ಲಿ ಅಪಪ್ರಚಾರ ಮಾಡುವುದು ಬಿಜೆಪಿಯ ಗುರಿಯಾಗಿತ್ತು. ಇದಕ್ಕೆ ಅವರು ಸಿಎಂ ಸ್ಟಾಲಿನ್ ಹುಟ್ಟುದಿನ ಮತ್ತು ತೇಜಸ್ವಿ ಯಾದವ್ ಭೇಟಿಯನ್ನೇ ಬಳಸಿಕೊಂಡು ಒಂದು ಅದ್ಭುತವಾದ ಚಿತ್ರಕಥೆಯನ್ನು ಸಿದ್ಧಪಡಿಸಿದ್ದರು ಎಂಬ ಅಂಶ ಬಟಾಬಯಲಾಗಿತ್ತು.

ತಮಿಳುನಾಡಿನ ದೃಶ್ಯ ಮತ್ತು ಮುದ್ರಣ ಮಾಧ್ಯಮಗಳು ಬಿಜೆಪಿಯ ಈ ಸುಳ್ಳು ಸುದ್ದಿಯ ಬಗ್ಗೆ ಬಿಸಿಬಿಸಿ ಚರ್ಚೆ ಶುರು ಮಾಡುತ್ತಿದ್ದಂತೆ ಅಣ್ಣಾಮಲೈ ತನ್ನ ಖಾಸಗಿ ಟ್ವಿಟರ್ ಖಾತೆಯಿಂದ ಆ ವಿಡಿಯೋವನ್ನು ಡಿಲೀಟ್ ಮಾಡಿದ್ದರೇನೋ ನಿಜ. ಆದರೆ, “ಹಿಂದಿ ಭಾಷಿಕರ ವಿರುದ್ಧ ತಮಿಳರಲ್ಲಿ ಆಕ್ರೋಶ ಇದೆ, ಇದಕ್ಕೆ ಕಾರಣ ಡಿಎಂಕೆ ಪಕ್ಷ” ಎಂಬ ತಮ್ಮ ನಿಲುವನ್ನು ಮತ್ತೆ ಮತ್ತೆ ಸರಣಿ ಟ್ವೀಟ್ ಮೂಲಕ ಸಮರ್ಥಿಸಿಕೊಂಡಿದ್ದರು.

ಬಿಜೆಪಿ ಪ್ರಾಯೋಜಿತ ರಾಷ್ಟ್ರೀಯ ಮಾಧ್ಯಮಗಳು ತಮಿಳುನಾಡಿನ ವಿರುದ್ಧ ಹೀಗೆ ವಿಷಕಾರುವುದು ಹೊಸದೇನಲ್ಲ. ತಮಿಳರಿಗೆ ಅದು ಅಭ್ಯಾಸವಾಗಿಹೋಗಿದೆ. ಆದರೆ, ಈ ಸುಳ್ಳನ್ನೇ ಸತ್ಯ ಎಂದು ಅಲ್ಲಿನ ಜನರನ್ನು ನಂಬಿಸಲು ಸ್ವತಃ ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಮುಂದಾದದ್ದು ಮತ್ತು ತಮಿಳರ ವಿರುದ್ಧವೇ ಅಪಪ್ರಚಾರ ಮಾಡಿದ್ದು, ಇದೀಗ ತಮಿಳರ ಆಕ್ರೋಶಕ್ಕೆ ಕಾರಣವಾಗಿದೆ.

ಸುಳ್ಳು ಸುದ್ದಿಯ ಪರಿಣಾಮವೇನು?

ತಮಿಳುನಾಡು ಬಿಜೆಪಿಯಲ್ಲೇ ಅಣ್ಣಾಮಲೈ ಓರ್ವ ವಿವಾದಿತ ವ್ಯಕ್ತಿಯಾಗಿ ಛಾಪು ಮೂಡಿಸಿದ್ದಾರೆ. ಪಕ್ಷದಲ್ಲಿ ತನಗೆ ಪೈಪೋಟಿಯಾಗಿದ್ದ ಹಿರಿಯ ನಾಯಕ ಕೆ.ಟಿ ರಾಘವನ್ ಎಂಬುವವರನ್ನು ಅಶ್ಲೀಲ ಸಿಡಿ ಕೇಸ್‌ನಲ್ಲಿ ಸಿಲುಕಿಸಿ ಅವರ ರಾಜಕೀಯ ಜೀವನವನ್ನೇ ಮುಗಿಸಿದ ಆರೋಪ ಅಣ್ಣಾಮಲೈ ಮೇಲಿದೆ. ಇದಲ್ಲದೆ, ಪಕ್ಷದಲ್ಲಿ ತನಗೆ ಪೈಪೋಟಿಯಾಗಿರುವ ಇತರೆ ಹಿರಿಯ ನಾಯಕರದ್ದೂ ಅಶ್ಲೀಲ ವಿಡಿಯೋ ಮತ್ತು ಆಡಿಯೋ ಮಾಡಿಟ್ಟುಕೊಂಡಿದ್ದಾರೆ ಎನ್ನಲಾಗಿದೆ.

“ಅಣ್ಣಾಮಲೈ ತನ್ನ ವಿಡಿಯೋ ಮಾಡಿಟ್ಟುಕೊಂಡು ಸಾಮಾಜಿಕ ಜಾಲತಾಣ ಪಡೆಯ ಮೂಲಕ ನನ್ನ ಮೇಲೆ ವ್ಯಯಕ್ತಿಕ ದಾಳಿ ನಡೆಸುತ್ತಿದ್ದಾರೆ” ಎಂದು ಆರೋಪಿಸಿ ಬಿಜೆಪಿ ಪಕ್ಷದ ಕಲೆ ಸಾಂಸ್ಕೃತಿಕ ವಿಭಾಗದ ಅಧ್ಯಕ್ಷೆ ಮಾಜಿ ನಟಿ ಗಾಯತ್ರಿ ರಘುರಾಮ್ ಕಳೆದ ವರ್ಷ ಪಕ್ಷದಿಂದಲೇ ಹೊರ ನಡೆದಿದ್ದರು. ಇದೇ ಆರೋಪವನ್ನು ಮುಂದಿಟ್ಟು ಸೂರ್ಯ ಶಿವ ಎಂಬ ಮತ್ತೊಬ್ಬ ಬಿಜೆಪಿ ನಾಯಕನೂ ಇತ್ತೀಚೆಗೆ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಇಬ್ಬರೂ ಅಣ್ಣಾಮಲೈ ವಿರುದ್ಧ ಸಾರ್ವಜನಿಕವಾಗಿ ಕಿಡಿಕಾರಿದ್ದರು. ಅಂದಿನಿಂದ ತಮಿಳುನಾಡಿನಲ್ಲಿ ಬಿಜೆಪಿ ಪಕ್ಷವನ್ನು “ಆಡಿಯೋ ವಿಡಿಯೋ ಪಕ್ಷ” ಎಂದೇ ಕರೆಯಲಾಗುತ್ತಿದೆ.

ತಮಿಳುನಾಡಿನಲ್ಲಿ ಬಿಹಾರಿ ಕಾರ್ಮಿಕರ ಮೇಲೆ ಹಲ್ಲೆ ಎನ್ನಲಾದ ನಕಲಿ ವಿಡಿಯೋ

ಈ ನಡುವೆ ಬಿಹಾರಿ ಕಾರ್ಮಿಕರ ಮೇಲಿನ ದಾಳಿ ಸಂಬಂಧಿಸಿದ ಸುದ್ದಿ ಸುಳ್ಳು ಎಂಬುದು ಜಗಜ್ಜಾಹೀರಾಗುತ್ತಿದ್ದಂತೆ ತಮಿಳುನಾಡಿನ ಬಿಜೆಪಿ ಐಟಿ ವಿಂಗ್ ಮುಖ್ಯಸ್ಥ ಸಿಟಿಆರ್ ನಿರ್ಮಲ್ ಕುಮಾರ್ ಸೇರಿದಂತೆ 11 ಜನ ನಿರ್ವಾಹಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ “ಎಡಿಎಂಕೆ” ಪಕ್ಷಕ್ಕೆ ಸೇರಿದ್ದಾರೆ. ಅಲ್ಲದೆ, ಈ ಸಂದರ್ಭದಲ್ಲಿ ನಿರ್ಮಲ್ ಕುಮಾರ್ ಬಿಡುಗಡೆ ಮಾಡಿರುವ ಹೇಳಿಕೆಯೊಂದು ತಮಿಳುನಾಡು ರಾಜಕೀಯದಲ್ಲಿ ಪ್ರಸ್ತುತ ಸಾಕಷ್ಟು ಸದ್ದು ಮಾಡುತ್ತಿದೆ.

ಇದನ್ನೂ ಓದಿ: ಅಣ್ಣಾಮಲೈ ನಾಯಕತ್ವದಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲ: ಬಿಜೆಪಿ ತೊರೆದ ತಮಿಳು ನಟಿ ಹೇಳಿಕೆ

“ಅಣ್ಣಾಮಲೈ ಪಕ್ಷದ ಅನೇಕ ಹಿರಿಯ ನಾಯಕರ ವಿರುದ್ಧ ಗೂಢಚರ್ಯೆ ನಡೆಸುತ್ತಿದ್ದಾರೆ. ಅಶ್ಲೀಲ ಆಡಿಯೋ ವಿಡಿಯೋ ಮೂಲಕ ಹಲವರನ್ನು ಬ್ಲಾಕ್‌ಮೇಲ್ ಮಾಡಲಾಗುತ್ತಿದೆ. ತಾನೊಬ್ಬನೇ ಏಕಮೇವ ಬಿಜೆಪಿ ನಾಯಕನಾಗಲು ಅವರು ಹೊರಟಿದ್ದು, ಸುಳ್ಳು ಹರಡುವುದೊಂದೆ ಅಣ್ಣಾಮಲೈ ಹಾಗೂ ಬಿಜೆಪಿ ಪಕ್ಷದ ಅಜೆಂಡವಾಗಿದೆ. ಇಂತಹ ಪಕ್ಷ ತಮಿಳರಿಗೆ ಮತ್ತು ತಮಿಳುನಾಡಿಗೆ ಅಪಾಯಕಾರಿಯಾದದ್ದು” ಎಂಬ ಅಂಶಗಳು ನಿರ್ಮಲ್ ಕುಮಾರ್ ಹೇಳಿಕೆಯಲ್ಲಿದ್ದು, ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ಒಂದು ಪಕ್ಷದ ರಾಜ್ಯಾಧ್ಯಕ್ಷನ ವಿರುದ್ಧ ಅದೇ ಪಕ್ಷದವರು ಬಿಡುಗಡೆ ಮಾಡಿರುವ ಅತ್ಯಂತ ಆಘಾತಕಾರಿ ಹೇಳಿಕೆ ಇದಾಗಿದೆ ಎಂದು ತಮಿಳುನಾಡಿನ ಮಾಧ್ಯಮಗಳು ವಿಶ್ಲೇಷಿಸುತ್ತಿವೆ.

ಒಟ್ಟಿನಲ್ಲಿ ದೇಶದ ಹಲವೆಡೆ ಕೆಲಸ ಮಾಡುವ ಬಿಜೆಪಿ ಪಕ್ಷದ ಸುಳ್ಳಿನ ತಂತ್ರಗಾರಿಕೆ ತಮಿಳು ನಾಡಿನಲ್ಲಿ ಕೈಕೊಟ್ಟಿರುವುದು ದೇಶದಲ್ಲಿಂದು ಚರ್ಚೆಗೆ ಗ್ರಾಸವಾಗಿದೆ.

ಅಶೋಕ್ ಕುಮಾರ್

ಅಶೋಕ್ ಕುಮಾರ್
ಮೂಲತಃ ಭದ್ರಾವತಿಯವರಾದ ಅಶೋಕ್, ಹಲವು ಮಾಧ್ಯಮಗಳಲ್ಲಿ ಕೆಲಸ ಮಾಡಿರುವ ಅನುಭವಿ ಯುವ ಪತ್ರಕರ್ತರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸತ್ನಾದಲ್ಲಿ ಆರು ಮಕ್ಕಳಿಗೆ ಎಚ್‌ಐವಿ ಪಾಸಿಟಿವ್: ಮಧ್ಯಪ್ರದೇಶ ಸರ್ಕಾರ ರಕ್ತ ನಿಧಿಯ ಮುಖ್ಯಸ್ಥ ಸೇರಿ ಮೂವರು ಅಮಾನತು

ಭೋಪಾಲ್: ಸತ್ನಾ ಜಿಲ್ಲೆಯ ಸರ್ದಾರ್ ವಲ್ಲಭಭಾಯಿ ಪಟೇಲ್ ಸರ್ಕಾರಿ ಆಸ್ಪತ್ರೆಯಲ್ಲಿ ಆರು ಮಕ್ಕಳಿಗೆ ಎಚ್‌ಐವಿ ಪಾಸಿಟಿವ್ ಬಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶ ಸರ್ಕಾರ ಗುರುವಾರ ರಕ್ತ ನಿಧಿಯ ಉಸ್ತುವಾರಿ ಮತ್ತು ಇಬ್ಬರು ಪ್ರಯೋಗಾಲಯ...

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....