Homeಮುಖಪುಟಆನ್‌ಸ್ಕ್ರೀನ್‌ನಲ್ಲಿ ಮಾತ್ರ ಪ್ರತಿಭಾವಂತ ನಟ; ಉಳಿದಂತೆ ಅಂತಃಕರಣವುಳ್ಳ ಸಾಮಾನ್ಯ ಮನುಷ್ಯನಾಗಿದ್ದ ಸಂಚಾರಿ ವಿಜಯ್

ಆನ್‌ಸ್ಕ್ರೀನ್‌ನಲ್ಲಿ ಮಾತ್ರ ಪ್ರತಿಭಾವಂತ ನಟ; ಉಳಿದಂತೆ ಅಂತಃಕರಣವುಳ್ಳ ಸಾಮಾನ್ಯ ಮನುಷ್ಯನಾಗಿದ್ದ ಸಂಚಾರಿ ವಿಜಯ್

- Advertisement -
- Advertisement -

“This quiet dust was gentleman and ladies” ಎನ್ನುವ ಎಮಿಲಿ ಡಿಕೆಸ್ನೆನ್‌ನ ಪದ್ಯದ ಸಾಲಿನಂತೆಯೇ ಸಂಚಾರಿ ವಿಜಯ್ ತಮ್ಮೂರಿನ ತೋಟದ ಮಣ್ಣು ಸೇರಿದರು. ಹೌದು, ಅವರೊಬ್ಬ ಜಂಟಲ್‌ಮನ್. ಕೇವಲ ಸಿನಿಮಾ ಕಾರಣಕ್ಕಂತೂ ಅಲ್ಲ. “ರಾಷ್ಟ್ರ ಪ್ರಶಸ್ತಿ ಎಂಬುದು ಶಾಶ್ವತವಾದ ಟ್ಯಾಗ್‌ಲೈನ್ ಅಲ್ಲ ಸರ್. ಅದೊಂದು ಸಿನಿಮಾದ ಒಂದು ಪಾತ್ರಕ್ಕೆ ಆ ವರ್ಷದಲ್ಲಿ ಬಂದ ಪ್ರಶಸ್ತಿ ಅಷ್ಟೆ. ಪ್ರತೀ ಸಿನಿಮಾಗೂ ಹೊಸ ಪಾತ್ರ, ಹೊಸ ಅನುಭವ ಬೇಕು. ಇದು ನನ್ನನ್ನು ಕಂಪಾರ್ಟ್‌ಮೆಂಟಲೈಸ್ ಮಾಡಿಬಿಡುತ್ತದೆಂಬ ಭಯ ನನಗೆ” ಎನ್ನುತ್ತಿದ್ದರು ಸಂಚಾರಿ ವಿಜಯ್. ಒಬ್ಬ ನಟನಾಗಿ ಚಿತ್ರರಂಗಕ್ಕೆ ಎಷ್ಟು ಅವಶ್ಯವಿದ್ದರೋ ಅದಕ್ಕಿಂತ ಹೆಚ್ಚಾಗಿ ಅವರ ಸಾಮಾಜಿಕ ಬದ್ಧತೆ ಮತ್ತು ಕಾಳಜಿಯ ಮನಸ್ಸಿದ್ದ ಕಾರಣಕ್ಕಾಗಿ ಅವರು ನಮ್ಮೊಡನೆ ಇರಲೇಬೇಕಿತ್ತು.

ಕಳೆದ ವರ್ಷದ ಕೋವಿಡ್ ಸಂದರ್ಭದ ಲಾಕ್‌ಡೌನ್‌ನಲ್ಲಿ ಶುರುವಾದ ಅವರ ಸಮಾಜಸೇವಾ ಕಾರ್ಯ, ಈ ವರ್ಷವಂತೂ ನಿರಂತರವಾಗಿ ಸಾಗಿತ್ತು. ಚಿತ್ರರಂಗದ ಬಹಳ ಜನ ಈ ಸಮಯದಲ್ಲಿ ತಮ್ಮ ’ಶಕ್ತ್ಯಾನುಸಾರ’ ಸೇವೆ ಮಾಡಿರಬಹುದು.

ಆದರೆ ಒಬ್ಬ ನಾಯಕ ನಟನಾಗಿದ್ದ ವಿಜಯ್ “Stay Home, Stay Safe” ಎಂಬ ಸೊಫೆಸ್ಟಿಕೇಟೆಡ್ ಸ್ಲೋಗನ್ ಹೇಳಿಕೊಂಡು ಮನೆಯೊಳಗೆ ಸೇರಲಿಲ್ಲ. ಹೊರಗೆ ಬಂದು ಅವಶ್ಯವಿರುವವರ ಸೇವೆಗಾಗಿ ನಿಂತರು.

ಕೋವಿಡ್ ಪೇಷಂಟ್ ಯಾರಿಗಾದರೂ ಬೆಡ್ ಕೊಡಿಸಲು ಸಾಧ್ಯವಾಗದೆ ಹೋದರೆ ಚಡಪಡಿಸಿಬಿಡುತ್ತಿದ್ದರು. ಐದಾರು ತಿಂಗಳ ಹಿಂದೆ ಸಿನಿಮಾದ ಮುಹೂರ್ತವೊಂದನ್ನು ಮುಗಿಸಿ ಮಾತಾಡುತ್ತಾ ಕೂತಾಗ ಹೊಸ ಕಾರು ಕೊಂಡಿದ್ದೀರಿ ಪಾರ್ಟಿ ಎಲ್ಲಿ ಎಂದದ್ದಕ್ಕೆ “ನನ್ನ ಕಾರಿನ ವಿಷಯ ಹಾಗಿರಲಿ, ಮೊನ್ನೆ ಒಂದು ಚಿಕ್ಕ ಹುಡುಗಿಗೆ ಅದೆಂಥದೋ ಜಗತ್ತಿನ ಅಪರೂಪದ ಕಾಯಿಲೆ ಬಂದಿದೆಯಂತೆ. ಐದು ಲಕ್ಷದಲ್ಲಿ ಒಬ್ಬರಿಗೆ ಬರುವಂಥ ಈ ಕಾಯಿಲೆಗೆ ವಿಪರೀತ ಖರ್ಚಾಗುತ್ತಂತೆ. ಪಾಪ, ಆ ತಂದೆತಾಯಿಗಳಿಗೆ ಲಾಕ್‌ಡೌನ್‌ನಿಂದಾಗಿ ಜೀವನ ನಡೆಸುವುದೇ ಕಷ್ಟ ಆಗಿದೆ. ಇನ್ನು ಇದ್ಹೇಗೆ ಮ್ಯಾನೇಜ್ ಮಾಡ್ತಾರೆ. ಒಂದಷ್ಟು ಜನಕ್ಕೆ ಮಾತಾಡಿದ್ದೀನಿ. ಏನಾದ್ರೂ ಸಹಾಯ ಮಾಡಲೇಬೇಕು” ಎಂದಿದ್ದರು. ಆ ಪ್ರಯತ್ನ ಮಾಡಿದರು ಕೂಡ. ಆದರೆ ಕೆಲ ದಿನಗಳ ನಂತರ ಆ ಹುಡುಗಿ ಸಾವನ್ನಪ್ಪಿದಾಗ ಕರೆ ಮಾಡಿ ಸಂಕಟಪಟ್ಟಿದ್ದರು. ಈ ಮನುಷ್ಯ ಏಕೆ ಹೀಗೆ? ಎಂದು ಅಂತ ಸಂದರ್ಭದಲ್ಲೆಲ್ಲ ಯೋಚಿಸುತ್ತಿದ್ದೆ. ಈಗ ಅವರ ದೇಹದ ಅಂಗಾಂಗಳನ್ನು ದಾನ ಮಾಡಿರುವುದು ನಿಜಕ್ಕೂ ಅವರ ವ್ಯಕ್ತಿತ್ವಕ್ಕೆ ತಕ್ಕುದಾದ ನಿರ್ಧಾರ. ಸಂಜಯ ಗಾಂಧಿ ಆಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನ್ ದರ ಕಡಿಮೆ ಎಂಬ ಸುದ್ದಿ ನೋಡಿ, ಅವಶ್ಯವಿದ್ದ ಪರಿಚಿತರ ಯಾರನ್ನೋ ಕರೆದೊಯ್ದಾಗ, “ಎಷ್ಟೊಂದು ವಯಸ್ಸಾದ ಜನ ಸಾಲಿನಲ್ಲಿ ಇದ್ದರು. ಇವರನ್ನೆಲ್ಲ ಬಿಟ್ಟು ನಾವು ಪ್ರಭಾವ ಬಳಸಿ ಒಳಗೆ ಹೋಗೋದು ಎಷ್ಟು ಸರಿ? ಹಾಗಾಗಿ ವಾಪಾಸ್ ಬಂದೆ” ಎಂದು ಹೇಳಿಕೊಂಡಿದ್ದರು ವಿಜಯ್.

ಅವರಿಗೆ ರಾಷ್ಟ್ರ ಪ್ರಶಸ್ತಿ ಬಂದಾಗಲೇ ನಾನವರ ಹೆಸರ ಕೇಳಿದ್ದು. ಅದಾಗಿ ಒಂದು ವರ್ಷದ ನಂತರ ನಮ್ಮ ಹೊಂಗಿರಣ ತಂಡದಿಂದ, ಸಾಸ್ವೆಹಳ್ಳಿ ಸತೀಶ್ ನಿರ್ದೇಶನದಲ್ಲಿ ನನ್ನ ಕಥೆಯೊಂದನ್ನು ಕಿರುಚಿತ್ರ ಮಾಡಲು ಕರೆ ಮಾಡಿ ಕೇಳಿಕೊಂಡಾಗ ನಿರಾಸಕ್ತಿಯಿಂದಲೇ ಸಿನಾಪ್ಸಿಸ್ ಕಳಿಸಿ ನೋಡೋಣ ಎಂದವರು, ಅದೇ ಸಂಜೆ ಕಾಲ್ ಮಾಡಿ ನಾನು ಈ ಪಾತ್ರ ಮಾಡುತ್ತೇನೆ. ಭೇಟಿ ಮಾಡೋಣ ಅಂದರು. ಮೂವತ್ತು ನಿಮಿಷದ ಕಿರುಚಿತ್ರಕ್ಕೆ ಜೊತೆಯಾದ ನಾವು ಆನಂತರ ಹತ್ತಿರದ ಗೆಳೆಯರಾದೆವು.

ಓದುವ ಹವ್ಯಾಸ ನಿರಂತರ

ಒಮ್ಮೆ ಬೆಂಗಳೂರಿಂದ ಶಿವಮೊಗ್ಗಕ್ಕೆ ಕಾರ್ಯಕ್ರಮವೊಂದಕ್ಕೆ ಪ್ರಯಾಣಿಸಿದಾಗ ’ಆಧ್ಯಾತ್ಮ ಡೈರಿ’ ಪುಸ್ತಕವನ್ನು ಕಾರಿನ ಪ್ರಯಾಣದಲ್ಲೇ ಓದಿ ಮುಗಿಸಿದರು. ಯಾವುದಾದರೂ ಪುಸ್ತಕ ಓದಿದ ಮೇಲೆ ಕಾಲ್ ಮಾಡಿ ಅದರ ಬಗ್ಗೆ ಮಾತಾಡುತ್ತಿದ್ದರು. ಅವರಿಗೆ ಅಪಘಾತವಾಗುವ ಹಿಂದಿನ ದಿನ ಕುಂ.ವೀ.ಯವರ ’ಗಾಂಧಿ ಕ್ಲಾಸ್’ ಪುಸ್ತಕದ ಫೋಟೋ ಜೊತೆಗೆ ಇದನ್ನು ಓದುತ್ತಿದ್ದೇನೆ ಎಂಬ ಮೆಸೇಜ್ ಕಳಿಸಿದ್ದರು. ಬಹುಶಃ ಈ ವಾರದ ಕಾಲ್‌ನಲ್ಲಿ ಅದರ ಬಗ್ಗೆ ಮಾತಾಡುತ್ತಿದ್ದರೇನೋ. ಅವರೊಂದಿಗಿನ ಸಂಭಾಷಣೆಯಲ್ಲಿ ಕನ್ನಡ ಪದಗಳನ್ನು ಅವರು ತುಂಡು ಮಾಡಿ ಹೊಸ ರೀತಿಯ ಪದಗಳನ್ನು ಹುಟ್ಟು ಹಾಕುತ್ತಿದ್ದರು. ಅವು ತಮಾಷೆಯಾಗಿರುತ್ತಿದ್ದವು. ಇತ್ತೀಚಿಗೆ ಗಿರೀಶ್ ಕಾರ್ನಾಡರ ’ಆಡಾಡುತ ಮನುಷ್ಯ’ ಆಡಿಯೋ ಬುಕ್‌ಗೆ ಧ್ವನಿ ಕೊಡುವಾಗ ತುಂಬಾ ಪ್ರಾಕ್ಟೀಸ್ ಮಾಡಿಹೋಗ್ತೀನಿ, ಅಂಥ ದೊಡ್ಡವರ ಪುಸ್ತಕ ಇದು ಎನ್ನುವ ಎಚ್ಚರ ಅವರಲ್ಲಿತ್ತು.

ಐ.ಕೆ.ಗುಜ್ರಾಲ್ ಅವರ ಸಹೋದರ ಅಂತಾರಾಷ್ಟ್ರೀಯ ಖ್ಯಾತ ಕಲಾವಿದ ಮತ್ತು ಶಿಲ್ಪಿ, ಸತೀಶ್ ಗುಜ್ರಾಲ್ ಅವರಿಗೆ ಬಾಲ್ಯದ ಅಪಘಾತದಿಂದಾಗಿ ಶಾಲೆಗೆ ಹೋಗಲು ಸಾಧ್ಯವಾಗದೆ ಹೋದಾಗ ಅವರ ತಂದೆ ಹೆಚ್ಚೆಚ್ಚು ಪುಸ್ತಕಗಳನ್ನು ತಂದು ಕೊಡುತ್ತಿದ್ದರಂತೆ. ಅವುಗಳನ್ನು ಓದಿದ ಬಾಲಕ ಸತೀಶ್ ’ಪುಸ್ತಕಗಳು ಹೊಸ ಜಗತ್ತನ್ನೇ ನನ್ನ ಮುಂದಿಟ್ಟವು. ಜಗತ್ತಿನಲ್ಲಿರುವ ಸಮಸ್ಯೆಗಳ ಮುಂದೆ ನನ್ನ ಈ ಸಮಸ್ಯೆ ಏನೇನೂ ಅಲ್ಲ ಎಂಬ ಅರಿವಾಯಿತು’ ಎನ್ನುತ್ತಿದ್ದರಂತೆ. ವಿಜಯ್ ಅವರಿಗೆ ಸಮಾಜದ, ತನ್ನ ಸುತ್ತಲಿನವರ ಸಂಕಷ್ಟಗಳು, ಅಸಮಾನತೆಯ ಬಗ್ಗೆ ನಿಲುವು ತಾಳಲು ಅವರ ಓದು ಕಾರಣ ಎಂದೇ ನಾನು ಭಾವಿಸುತ್ತೇನೆ.

ಒಮ್ಮೆ ಅವರು ಎಫ್‌ಬಿಯಲ್ಲಿ ಹಾಕಿದ ಇಂಗ್ಲಿಷ್ ಪೋಸ್ಟ್‌ನಲ್ಲಿ ಸಣ್ಣದೊಂದು ತಪ್ಪಾಗಿತ್ತು. ಅದನ್ನು ಮೆಸೇಜ್ ಮಾಡಿ ತಿಳಿಸಿದೆ. ನಾನು ಸಂಕೋಚದಿಂದಲೇ ಟೈಪಿಂಗ್ ಮಿಸ್ಟೇಕ್ ಇರಬೇಕು ಎಂದೆ. ಅದಕ್ಕವರು, ’ಇಲ್ಲ ನನಗೆ ಅದು ಗೊತ್ತಿರಲಿಲ್ಲ’ ಎಂದರು. ಆ ನಂತರದಲ್ಲಿ ದೀರ್ಘವಾಗಿ ಏನಾದರೂ ಇಂಗ್ಲಿಷ್‌ನಲ್ಲಿ ಹಾಕುವ ಪೋಸ್ಟ್‌ಗಳನ್ನು ಕಳಿಸಿ ’ನೋಡಿ ಹೇಳಿ ಪ್ಲೀಸ್’ ಎನ್ನುವ ಮೆಸೇಜು ಕಳಿಸುತ್ತಿದ್ದರು. ಹಾಗೆ ನೋಡಿದರೆ ಅವುಗಳಲ್ಲಿ ಏನೂ ತಪ್ಪುಗಳಿರುತ್ತಿರಲಿಲ್ಲ. ಆದರೆ ಅವರಿಗೆ ಖಾತರಿಪಡಿಸಿಕೊಳ್ಳುವ ಆ ಪ್ರಾಮಾಣಿಕತೆ ಇತ್ತು. ಇಂಥ ನಡುವಳಿಕೆಯನ್ನು ನಾವು ಎಷ್ಟು ಜನರಲ್ಲಿ ಕಾಣಬಹುದು? ಈ ವಿಚಾರವಾಗಿ, ’ನನ್ನನ್ನು ಬಿಗ್‌ಬಾಸ್‌ಗೆ ಕರೆಯುತ್ತಿದ್ದಾರೆ, ನಾನು ಬರಲ್ಲ ಎಂಬುದನ್ನು ಪೊಲೈಟ್ ಆಗಿ ಮತ್ತು ಡೀಸೆಂಟ್ ಆಗಿ ಹೇಳಬೇಕು ಅಂಥ ಮೆಸೇಜ್ ಡ್ರಾಫ್ಟ್ ಮಾಡಿ ಸರ್’ ಎಂದಾಗ ನಾನು “ಹೇ, ಯಾಕೆ ಸರ್? ಸೋಷಿಯಲ್ ಲೈಫ್ ಈಸ್ ಗೋಲ್ಡನ್ ಲೈಫ್. ನೀವು ಹೋಗಿ ಬನ್ನಿ’ ಎಂದಿದ್ದಕ್ಕೆ , ’ಯಾಕ್ ಸ್ವಾಮಿ, ನಾವು ಹೀಗಿರೋದು ನಿಮ್ಗೆ ಇಷ್ಟ ಇಲ್ವ?’ ಅಂದಿದ್ದರು. ಆಮೇಲೆ ನಾನು ಅಂದೆ, ’ನೀವು ಹೋಗ್ತೀನಿ ಅಂದ್ರೆ, ನಾನೇ ಅದರ ವಿರುದ್ಧ ಕ್ಯಾಂಪೇನ್ ಮಾಡ್ತೀನಿ’ ಎಂದಾಗ ನಕ್ಕಿದ್ದರು.

ಅವರ ಸುದ್ದಿ ಏನಾದರೂ ಟಿವಿಗಳಲ್ಲಿ ಬರುವಾಗ ನಮ್ಮ ಅವ್ಯಕ್ತ ಕಿರುಚಿತ್ರದ ಫುಟೇಜುಗಳು ಬಂದರೆ ತಕ್ಷಣ ಫೋಟೋ ಹೊಡೆದು ಕಳಿಸುತ್ತಿದ್ದೆ. ಅವರು ಆಸ್ಪತ್ರೆ ಸೇರಿದಾಗಿನಿಂದ ನಿರಂತರವಾಗಿ ಅವವೇ ಚಿತ್ರಗಳು ಪರದೆ ಮೇಲೆ ಮೂಡಿ ಬರುತ್ತಿದ್ದಾಗ ವಿಚಿತ್ರ ಸಂಕಟವಾಗುತ್ತಿತ್ತು. ಆ ಫೋಟೋಗಳನ್ನು ಅವರಿಗೆ ಕಳಿಸಿದರೆ ನೋಡುವುದಿಲ್ಲವಲ್ಲ!

’ನೀವು ಸಿನಿಮಾ ಒಪ್ಪಿಕೊಳ್ಳುವ ವಿಷಯದಲ್ಲಿ ಸ್ವಲ್ಪ ಚ್ಯೂಸಿ ಆಗಬೇಕು’ ಎಂದರೆ, ’ಅಯ್ಯೋ ಕೆಲಸ ಸಿಕ್ಕಾಗ ಮಾಡ್ತಾ ಇರಬೇಕು’ ಎನ್ನುತ್ತಿದ್ದವರ ಬಳಿ ಈಗ ಸುಮಾರು ಹದಿನೈದು ಸಿನಿಮಾಗಳಿದ್ದವು. ’ತಲೆದಂಡ’ ಸಿನಿಮಾದ ಪಾತ್ರವೂ ವಿಶೇಷವಾದ ಅಭಿನಯಕ್ಕೆ ಅವಕಾಶ ಕೊಟ್ಟಿರುವ ಪಾತ್ರವಾಗಿದೆ. ನನಗೆ ಅವರ ಸ್ನೇಹ ಸಿಕ್ಕಿದ್ದರ ಬಗ್ಗೆ ಬಹಳ ಹೆಮ್ಮೆಯಿದೆ. ನಮ್ಮನ್ನು ದುಃಖಕ್ಕೆ ತಳ್ಳಿದರು ಎಂಬ ಕೋಪವಿದೆ. ಆದರೆ ಸಿನಿಮಾ ನಟನೊಬ್ಬನಿಗೆ ಬಂದ ದೊಡ್ಡ ಪ್ರಶಸ್ತಿಯೊಂದು ಅವನನ್ನು ಜನರಿಂದ ದೂರ ಮಾಡಿಬಿಡುವ ಸಾಧ್ಯತೆಯೇ ಹೆಚ್ಚು. ಅಂಥದ್ದರಲ್ಲಿ ರಾಷ್ಟ್ರ ಪ್ರಶಸ್ತಿಯ ಹಮ್ಮು ಬಿಮ್ಮು ಎಂದೂ ಇಟ್ಟುಕೊಳ್ಳದೆ ಸಹಜವಾಗಿಯೇ ಸರಳವಾಗಿ ಬದುಕಿದ್ದ ಸಂಚಾರಿ ವಿಜಯ್, ಕನ್ನಡ ಚಿತ್ರರಂಗ ಮತ್ತು ಸಮಾಜ ಸದಾ ನೆನಪಿಟ್ಟುಕೊಳ್ಳಬೇಕಾದ ’ಸಾಮಾನ್ಯ ಮನುಷ್ಯ’. ಸಂಚಾರಿ ವಿಜಯ್ ಎಂದರೆ ಸಹಜ, ಸರಳ, ಸಜ್ಜನಿಕೆ ಮತ್ತು ಸಂಯಮ ಹೊಂದಿದ್ದ ಆನ್‌ಸ್ಕ್ರೀನ್‌ನಲ್ಲಿ ಮಾತ್ರ ನಟನಾಗಿದ್ದ ಪ್ರತಿಭಾವಂತ. ಸದಾ ಆಸ್ಪತ್ರೆಯಲ್ಲಿದ್ದವರ ಚಿಕಿತ್ಸೆಯ ಬಗ್ಗೆ ಯೋಚಿಸುತ್ತಿದ್ದ ವಿಜಯ್, ತಮ್ಮ ಅಂಗಾಂಗಗಳನ್ನು ಆಸ್ಪತ್ರೆಯಲ್ಲೇ ಬಿಟ್ಟು ಪರೋಪಕಾರಿಯಾಗಿದ್ದರೆಂಬ ಗರ್ವ ಇದ್ದಂತೆಯೇ ಆ ರಾತ್ರಿ ಹೆಲ್ಮೆಟ್ ಹಾಕಿರಲಿಲ್ಲ ಎಂದು ಗದರಿಸಬೇಕು ಅನ್ನಿಸುತ್ತದೆ. ಹಾಗೆಯೇ ಅವರಿಗಿದ್ದ ಜನರ ಪ್ರೀತಿಯನ್ನು ಕಾಣಿಸಬೇಕು ಅನ್ನಿಸುತ್ತಿದೆ. ಆದರೇನು ಮಾಡುವುದು?

He has met his maker!

  • ಶಿವಕುಮಾರ್ ಮಾವಲಿ
ಶಿವಕುಮಾರ್ ಮಾವಲಿ

ಶಿವಮೊಗ್ಗ ಮೂಲದ ಶಿವಕುಮಾರ್ ಕಥೆಗಾರ ಮತ್ತು ನಾಟಕಕಾರ. ಇಂಗ್ಲಿಷ್ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಶಿವಕುಮಾರ್ ಅವರ ’ದೇವರು ಅರೆಸ್ಟ್ ಆದ’, ’ಟೈಪಿಸ್ಟ್ ತಿರಸ್ಕರಿಸಿದ ಕಥೆ’ ಕಥಾಸಂಕಲನಗಳು ಪ್ರಕಟವಾಗಿವೆ.


ಇದನ್ನೂ ಓದಿ: ಸಂಚಾರಿ ವಿಜಯ್‌ ನಿಧನಕ್ಕೆ ಕನ್ನಡದಲ್ಲಿ ಸಂತಾಪ ಸೂಚಿಸಿದ ಅಮೆರಿಕಾ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...