ಬೆಂಗಳೂರಿನ ಸರ್ಜಾಪುರದಲ್ಲಿರುವ ಅಜೀಂ ಪ್ರೇಮ್ ಜಿ ವಿಶ್ವವಿದ್ಯಾಲಯದಲ್ಲಿ ಎಬಿವಿಪಿ ಸದಸ್ಯರು ಮಂಗಳವಾರ (ಫೆ.24) ಸಂಜೆ ದಾಂಧಲೆ ನಡೆಸಿರುವ ಕುರಿತು ವರದಿಯಾಗಿದೆ.
ಆಲ್ ಇಂಡಿಯಾ ಸ್ಟೂಡೆಂಟ್ ಅಸೋಸಿಯೇಷನ್ (ಎಐಎಸ್ಎ) ಜೊತೆ ಸಂಯೋಜಿತವಾಗಿರುವ ವಿವಿಯ ವಿದ್ಯಾರ್ಥಿ ಸಂಘಟನೆ ‘ಸ್ಪಾರ್ಕ್’ 1991ರ ಜಮ್ಮು ಕಾಶ್ಮೀರದ ‘ಕುನಾನ್ ಪೋಶ್ಪೋರಾ’ ಘಟನೆಗೆ ಸಂಬಂಧಿಸಿದಂತೆ ಮಂಗಳವಾರ ಚರ್ಚಾ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.
ಈ ಕಾರ್ಯಕ್ರಮ ‘ದೇಶವಿರೋಧಿ’ ಚಟುವಟಿಕೆಯಾಗಿದೆ ಮತ್ತು ಭಾರತೀಯ ಸೇನೆಯನ್ನು ಅವಮಾನಿಸುವ ಉದ್ದೇಶ ಹೊಂದಿದೆ ಎಂದು ಆರೋಪಿಸಿದ ಎಬಿವಿಪಿ ಸದಸ್ಯರು, ಏಕಾಏಕಿ ವಿವಿ ಕ್ಯಾಂಪಸ್ಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ ಎಂದು ವರದಿಗಳು ಹೇಳಿವೆ.
ಪ್ರತಿಭಟನೆಯ ನೆಪದಲ್ಲಿ ಸುಮಾರು 20-25 ಎಬಿವಿಪಿ ಸದಸ್ಯರು ವಿವಿಯ ಆವರಣಕ್ಕೆ ನುಗ್ಗಿ, ಅದರ ನಾಮಫಲಕಕ್ಕೆ ಕಪ್ಪು ಮಸಿ ಬಳಿದಿದ್ದಾರೆ. ಅಲ್ಲದೆ, ಭದ್ರತಾ ಸಿಬ್ಬಂದಿ ಮತ್ತು ಒಬ್ಬ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಗಾಯಗೊಂಡ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ವರದಿಯಾಗಿದೆ.
ಘಟನೆ ಸಂಬಂಧ ಕಾನೂನು ಸುವ್ಯವಸ್ಥೆಗೆ ಭಂಗ ತಂದ ಆರೋಪದ ಮೇಲೆ ಸುಮಾರು 25 ಎಬಿವಿಪಿ ಸದಸ್ಯರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಇವರಲ್ಲಿ 21 ಜನರಿಗೆ ಬುಧವಾರ (ಫೆ.25) ಮುಂಜಾನೆ ಜಾಮೀನು ದೊರೆತಿದೆ ಎಂದು ವರದಿಗಳು ಹೇಳಿವೆ.
ಕ್ಯಾಂಪಸ್ನಲ್ಲಿ ಹೆಚ್ಚಿನ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆಯಾಗಿ ಕೆಎಸ್ಆರ್ಪಿ ತುಕಡಿಗಳನ್ನು ನಿಯೋಜಿಸಲಾಗಿದೆ.
ವಿದ್ಯಾರ್ಥಿಗಳಿಂದ ಕೌಂಟರ್ ಪ್ರತಿಭಟನೆ
ವಿವಿಯ ನೂರಾರು ವಿದ್ಯಾರ್ಥಿಗಳು ಕ್ಯಾಂಪಸ್ ಒಳಗೆ ಕೌಂಟರ್ ಪ್ರತಿಭಟನೆ ನಡೆಸಿ, ಶೈಕ್ಷಣಿಕ ಸ್ವಾತಂತ್ರ್ಯಕ್ಕೆ ರಕ್ಷಣೆ ನೀಡಬೇಕು ಮತ್ತು ದಾಳಿ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಸಿಎಂ, ಕೇಂದ್ರ ಗೃಹ ಸಚಿವರಿಗೆ ಪತ್ರ
ವಿದ್ಯಾರ್ಥಿಗಳ ಗುಂಪು ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದು, ವಿವಿ ಮೇಲೆ ದಾಳಿ ನಡೆಸುವ ಸಂಘಟನೆಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದೆ. ಮತ್ತೊಂದೆಡೆ, ಎಬಿವಿಪಿ ಸದಸ್ಯರು ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆದು, ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಸಂಘಟನೆಗಳ ಮೇಲೆ ನಿಷೇಧ ಹೇರಬೇಕು ಎಂದು ಆಗ್ರಹಿಸಿದ ಬಗ್ಗೆ ವರದಿಯಾಗಿದೆ.


