Homeಮುಖಪುಟಮಾದಕ ವ್ಯಸನ : 10 ವರ್ಷದಲ್ಲಿ ಐವರು ಗಂಡು ಮಕ್ಕಳನ್ನು ಕಳೆದುಕೊಂಡ ವೃದ್ಧ ದಂಪತಿ

ಮಾದಕ ವ್ಯಸನ : 10 ವರ್ಷದಲ್ಲಿ ಐವರು ಗಂಡು ಮಕ್ಕಳನ್ನು ಕಳೆದುಕೊಂಡ ವೃದ್ಧ ದಂಪತಿ

- Advertisement -
- Advertisement -

ಡ್ರಗ್ ಕಾರಣದಿಂದ ವೃದ್ದ ದಂಪತಿ ತನ್ನ ಐವರು ಗಂಡು ಮಕ್ಕಳನ್ನು ಕಳೆದುಕೊಂಡ ಹೃದಯ ವಿದ್ರಾವಕ ಮತ್ತು ಆಘಾತಕಾರಿ ವರದಿ ಪಂಜಾಬ್‌ನ ಕಪುರ್ಥಲಾ ಜಿಲ್ಲೆಯ ಸುಲ್ತಾನ್‌ಪುರ ಲೋಧಿಯಿಂದ ಬಂದಿದೆ.

ಸುಲ್ತಾನ್‌ಪುರ ಲೋಧಿಯ ಪಂಡೋರಿ ಮೊಹಲ್ಲಾ ಎಂಬ ಪ್ರದೇಶದಲ್ಲಿ ವಾಸಿಸುತ್ತಿರುವ ಜೋಗಿಂದರ್ ಪಾಲ್ ಸಿಂಗ್ ಮತ್ತು ಮಂಜಿತ್ ಕೌರ್ ದಂಪತಿ ಮಕ್ಕಳನ್ನು ಕಳೆದುಕೊಂಡವರು.

ದಂಪತಿಯ ಹಿರಿಯ ಮಗ ಜಸ್ವಿಂದರ್ ಸಿಂಗ್ 2015ರಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾಗ ಮೃತಪಟ್ಟಿದ್ದ. ಈತ, ಮಾದಕ ವಸ್ತುಗಳ ನಿಯಂತ್ರಣ ಕಾಯ್ದೆಯ (NDPS Act) ಅಡಿಯಲ್ಲಿ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧನಕ್ಕೊಳಗಾಗಿದ್ದ.

ಏಳು ವರ್ಷಗಳ ಹಿಂದೆ ((2017-18ರಲ್ಲಿ) ಎರಡನೇ ಮಗ ಬಲ್ವಿಂದರ್ ಸಿಂಗ್ ಕೂಡ ಸಾವನ್ನಪ್ಪಿದ್ದ. ಈತ ತನ್ನ ಮನೆಯಲ್ಲೇ ಸಂಭವಿಸಿದ ಅಗ್ನಿ ಅವಘಡಕ್ಕೆ ಬಲಿಯಾಗಿದ್ದ. ಬಲ್ವಿಂದರ್ ಮಾದಕ ವ್ಯಸನಿಯಾಗಿದ್ದ. ಘಟನೆ ನಡೆದ ದಿನ ಮಾದಕ ವಸ್ತು ಸೇವಿಸಿದ ನಂತರ ಸಿಗರೇಟ್ ಸೇದುತ್ತಾ ಕೋಣೆಯಲ್ಲಿ ಮಲಗಿದ್ದಾಗ ಹಾಸಿಗೆಗೆ ಬೆಂಕಿ ತಗುಲಿ ಇಡೀ ಕೋಣೆ ಸುಟ್ಟು ಹೋಗಿತ್ತು ಎಂದು ವರದಿಯಾಗಿದೆ.

ಪೊಲೀಸ್ ಮತ್ತು ಸರ್ಕಾರಿ ಅಧಿಕಾರಿಗಳ ವರದಿಯ ಪ್ರಕಾರ, ಬಲ್ವಿಂದರ್ ಸಿಂಗ್ ಸಾವು ನೇರವಾಗಿ ಡ್ರಗ್ಸ್ ಸೇವನೆಯಿಂದ ಆಗಿದ್ದಲ್ಲ, ಬದಲಾಗಿ ಬೆಂಕಿ ಮತ್ತು ಸುಟ್ಟ ಗಾಯಗಳಿಂದ ಸಂಭವಿಸಿದೆ ಎಂದು ದಾಖಲಿಸಲಾಗಿದೆ. ಆದರೂ, ಪರೋಕ್ಷವಾಗಿ ಆತನ ಮಾದಕ ವಸ್ತು ಸೇವನೆಯೇ ಸಾವಿಗೆ ಕಾರಣ ಎಂದು ಕುಟುಂಬ ಹೇಳುತ್ತಿದೆ.

ದಂಪತಿಯ ಮೂರನೇ ಮಗ ರವಿ ಸಿಂಗ್ 2021ರಲ್ಲಿ ಮಾದಕ ವ್ಯಸನಕ್ಕೆ ಬಲಿಯಾಗಿದ್ದ. ರವಿ ದೀರ್ಘಕಾಲದ ಮಾದಕ ವ್ಯಸನದಿಂದ ಬಳಲುತ್ತಿದ್ದ. ಅತಿಯಾದ ಮಾದಕ ವಸ್ತುಗಳ ಸೇವನೆಯಿಂದಾಗಿ ಸಾವಿಗೀಡಾದ ಎನ್ನಲಾಗಿದೆ.

ಸಾವಿಗೂ ಮೊದಲು ರವಿ ಅವರ ಮೇಲೆ ಮಾದಕ ವಸ್ತುಗಳ ನಿಯಂತ್ರಣ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ರವಿ ಸಾವಿನ ನಂತರ, 2023ರಲ್ಲಿ ನಾಲ್ಕನೇ ಮಗ ಮಿಥುನ್ ಕೂಡ ಡ್ರಗ್ಸ್‌ಗೆ ಬಲಿಯಾದ. ಮಿಥುನ್ ದೀರ್ಘಕಾಲದಿಂದ ಡ್ರಗ್ಸ್‌ಗೆ ದಾಸನಾಗಿದ್ದ. ಅತಿಯಾದ ಮಾದಕ ವಸ್ತು ಸೇವನೆಯಿಂದಾಗಿ ಆರೋಗ್ಯ ಕ್ಷೀಣಿಸಿ ಮೃತಪಟ್ಟ ಎನ್ನಲಾಗಿದೆ.

ಮಿಥುನ್ ಮೇಲೆ ಮಾದಕ ವಸ್ತುಗಳ ಮಾರಾಟ ಅಥವಾ ಬಳಕೆಗೆ ಸಂಬಂಧಿಸಿದಂತೆ ಮಾದಕ ವಸ್ತುಗಳ ನಿಯಂತ್ರಣ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಜೋಗಿಂದರ್ ಪಾಲ್ ಸಿಂಗ್ ಮತ್ತು ಮಂಜಿತ್ ಕೌರ್ ಅವರ ಐದನೇ ಮತ್ತು ಕೊನೆಯ ಮಗ ಸೋನು (32), ಮಂಗಳವಾರ (ಏಪ್ರಿಲ್ 8, 2026) ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಸೋನು ದೀರ್ಘಕಾಲದ ಮಾದಕ ವ್ಯಸನದಿಂದಾಗಿ ತೀವ್ರವಾದ ಲಿವರ್ ಸೋಂಕು, ಎದೆನೋವು ಮತ್ತು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಎನ್ನಲಾಗಿದೆ.

ಅಮೃತಸರದ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ನಡೆಸಿದ ಪರೀಕ್ಷೆಗಳ ಪ್ರಕಾರ, ಸೋನುಗೆ ಹೆಚ್‌ಐವಿ ಪಾಸಿಟಿವ್ ಆಗಿತ್ತು. ಆತನ ಶ್ವಾಸಕೋಶದಲ್ಲಿ ನೀರು ತುಂಬಿಕೊಂಡಿತ್ತು. ಅಂತಿಮವಾಗಿ ಮಂಗಳವಾರ ಮಧ್ಯಾಹ್ನ ಸುಮಾರು 3 ಗಂಟೆಗೆ ಹೃದಯಾಘಾತದಿಂದ ಆತ ಮೃತಪಟ್ಟಿದ್ದಾನೆ.

ಸೋನು ಸ್ಥಿತಿ ಗಂಭೀರವಾಗಿದ್ದಾಗ ಅವರ ತಾಯಿ ಮಂಜಿತ್ ಕೌರ್ ಕಣ್ಣೀರಿಟ್ಟ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ತಕ್ಷಣ ಪಂಜಾಬ್ ಸರ್ಕಾರ ಸೋನು ಅನ್ನು ಅಮೃತಸರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯ ವೆಚ್ಚ ಭರಿಸುವುದಾಗಿ ಘೋಷಿಸಿತ್ತು. ಆದರೆ, ಆಸ್ಪತ್ರೆಗೆ ದಾಖಲಾದ 24 ಗಂಟೆಗಳ ಒಳಗೆ ಆತ ಕೊನೆಯುಸಿರೆಳೆದಿದ್ದಾನೆ ಎಂದು ವರದಿಯಾಗಿದೆ.

ಸೋನು ಪತ್ನಿ ಮತ್ತು ಇಬ್ಬರು ಪುಟ್ಟ ಮಕ್ಕಳನ್ನು (ಒಂದು ಎರಡು ವರ್ಷದ ಮಗ ಮತ್ತು ಆರು ತಿಂಗಳ ಮಗಳು) ಅಗಲಿದ್ದಾನೆ. ಈ ಸಾವಿನೊಂದಿಗೆ ಜೋಗಿಂದರ್ ಪಾಲ್ ಸಿಂಗ್ ಮತ್ತು ಮಂಜಿತ್ ಕೌರ್ ದಂಪತಿಯ ಐವರು ಪುತ್ರರೂ ಮಾದಕ ವ್ಯಸನದ ಜಾಲಕ್ಕೆ ಬಲಿಯಾದಂತಾಗಿದೆ.

“ಸೋಮವಾರ (ಏ.6) ವೈದ್ಯಕೀಯ ಕಾಲೇಜಿಗೆ ಬಂದ ನಂತರ ಅವರನ್ನು (ಸೋನು) ವೆಂಟಿಲೇಟರ್‌ನಲ್ಲಿ ಇರಿಸಲಾಗಿತ್ತು. ಮಂಗಳವಾರ ಬೆಳಿಗ್ಗೆ ಚೇತರಿಕೆಯ ಲಕ್ಷಣಗಳು ಕಂಡುಬಂದರೂ, ನಂತರ ಪರಿಸ್ಥಿತಿ ಕ್ಷೀಣಿಸಿ ಮಧ್ಯಾಹ್ನ 3 ಗಂಟೆ ಸುಮಾರಿಗೆ ಅವರು ಮೃತಪಟ್ಟರು. ಕುಟುಂಬದ ಆರ್ಥಿಕ ಸಂಪನ್ಮೂಲಗಳು ಈಗಾಗಲೇ ಖಾಲಿಯಾಗಿದ್ದರಿಂದ, ನಾನು ವೈದ್ಯಕೀಯ ಕಾಲೇಜು ಅಧಿಕಾರಿಗಳಿಗೆ ವಿನಂತಿಸಿದೆ. ಅವರು ಮೃತದೇಹವನ್ನು ಮನೆಗೆ ಕಳುಹಿಸಲು ವ್ಯವಸ್ಥೆ ಮಾಡಿದರು” ಎಂದು ಕಪುರ್ಥಲಾದ ಸಿವಿಲ್ ಸರ್ಜನ್ ಸಂಜೀವ್ ಭಗತ್ ಹೇಳಿರುವುದಾಗಿ timesofindia.indiatimes.com ಬುಧವಾರ (ಏ.8) ವರದಿ ಮಾಡಿದೆ.

ಸೋನು ಸಾವಿನ ವಿಚಾರವನ್ನು ಮಂಗಳವಾರ ಸಂಜೆ ತಡವಾಗಿ ಆತನ ತಾಯಿಗೆ ತಿಳಿಸಲಾಯಿತು. ಈ ವೇಳೆ ಅವರು ಕುಸಿದು ಬಿದ್ದರು. ತನ್ನ ಐವರು ಮಕ್ಕಳನ್ನೂ ಮಾದಕ ವ್ಯಸನಕ್ಕೆ ಬಲಿ ಕೊಟ್ಟೆ ಎಂದು ಅಳಲು ತೋಡಿಕೊಂಡರು. ಸೋಮವಾರ ಆಡಳಿತಾರೂಢ ಆಮ್‌ ಆದ್ಮಿ ಪಕ್ಷ (ಎಎಪಿ) ಮತ್ತು ಕಪುರ್ಥಲಾ ಪೊಲೀಸರು ತಾಯಿಯ ಹೇಳಿಕೆಯನ್ನು ವಿರೋಧಿಸಿ ಪ್ರತ್ಯೇಕ ಹೇಳಿಕೆ ನೀಡಿದ್ದರು. ಆಕೆಯ ಉಳಿದ ನಾಲ್ವರು ಮಕ್ಕಳು ಎಂಟು ವರ್ಷಗಳ ಅವಧಿಯಲ್ಲಿ ಬೇರೆ ಬೇರೆ ಕಾರಣಗಳಿಂದ ಸಾವನ್ನಪ್ಪಿದ್ದಾರೆ. ಅದರಲ್ಲಿ ಒಬ್ಬ ಮಾದಕ ವ್ಯಸನದಿಂದ ಮತ್ತು ಇನ್ನೊಬ್ಬ ಮಾದಕ ದ್ರವ್ಯ ಪ್ರಕರಣದಲ್ಲಿ ಜೈಲಿನಲ್ಲಿದ್ದಾಗ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದರು. ಆದರೆ ಆ ತಾಯಿ ಮಾತ್ರ, “ನನ್ನ ಎಲ್ಲಾ ಮಕ್ಕಳು ‘ಚಿಟ್ಟಾ’ (ಮಾದಕ ದ್ರವ್ಯ) ವ್ಯಸನಿಗಳಾಗಿದ್ದರು” ಎಂಬುವುದಾಗಿ ಕಣ್ಣೀರಿಡುತ್ತಿದ್ದರು ಎಂದು ವರದಿ ವಿವರಿಸಿದೆ.

ತನ್ನ ಐವರು ಮಕ್ಕಳೂ ಮಾದಕ ವ್ಯಸನಿಗಳಾಗಿದ್ದರು ಎಂಬ ಹೇಳಿಕೆಯನ್ನು ಪೊಲೀಸರು ಅಲ್ಲಗಳೆದಿದ್ದು ಆ ತಾಯಿಯ ಆಕ್ರೋಶ ಮತ್ತು ಆಕ್ರಂದನಕ್ಕೆ ಕಾರಣವಾಯಿಗಿತ್ತು. “ನನ್ನ ಮಗನ ಚಿಕಿತ್ಸೆಗೆ ಸಹಾಯ ಮಾಡಿದ್ದಕ್ಕಾಗಿ ನಾನು ಮುಖ್ಯಮಂತ್ರಿ ಭಗವಂತ್ ಮಾನ್ ಅವರನ್ನು ಶ್ಲಾಘಿಸುತ್ತೇನೆ, ಆದರೆ ಪೊಲೀಸರನ್ನು ಕೆಟ್ಟವರೆಂದೇ ಕರೆಯುತ್ತೇನೆ. ಕಪುರ್ಥಲಾದ ಪೊಲೀಸ್ ಅಧಿಕಾರಿಯೊಬ್ಬರು ನಾನು ಸುಳ್ಳು ಸುದ್ದಿ ಹರಡುತ್ತಿದ್ದೇನೆ ಎಂದು ಹೇಳಿಕೆ ನೀಡಿದ್ದಾರೆ. ಅವರಿಗೆ ಒಬ್ಬ ತಾಯಿಯ ನೋವು ಅರ್ಥವಾಗುವುದಿಲ್ಲ” ಎಂದು ತಾಯಿ ಹೇಳಿರುವುದಾಗಿ ವರದಿ ಉಲ್ಲೇಖಿಸಿದೆ.

ತನ್ನ ನಾಲ್ವರು ಗಂಡುಮಕ್ಕಳು ತಮ್ಮ 20ರ ಹರೆಯದಲ್ಲೇ ಸಾವನ್ನಪ್ಪಿದ್ದಾರೆ ಎಂದು ಆಕೆ (ತಾಯಿ) ಸೋಮವಾರ ತಿಳಿಸಿದ್ದರು. ಜೀವಂತವಾಗಿದ್ದ ಒಬ್ಬನೇ ಮಗ 30 ವರ್ಷ ದಾಟಿದ್ದರೂ, ಈಗ ಆತ ಕೂಡ ಮೃತಪಟ್ಟಿದ್ದಾನೆ. ಪ್ರಸ್ತುತ ವೃದ್ಧ ದಂಪತಿ ತಮ್ಮ ನಾಲ್ವರು ಮೊಮ್ಮಕ್ಕಳನ್ನು ಸಲಹುವ ಜವಾಬ್ದಾರಿಯೊಂದಿಗೆ ಅನಾಥರಾಗಿ ಉಳಿದಿದ್ದಾರೆ ಎಂದು ವರದಿ ಹೇಳಿದೆ.

“ನನ್ನ ಕೊನೆಯ ಮಗ ಕೂಡ ಮಾದಕ ವ್ಯಸನಿ ಎಂದು ತಿಳಿದಿದ್ದರೂ, ಆತನಿಗೆ ಮದುವೆ ಮಾಡಿಸಿದ್ದೆ. ನಾವು ಅವನಿಗೆ ಚಿಕಿತ್ಸೆ ಕೊಡಿಸಿದ್ದೆವು. ಆತ ಸ್ವಲ್ಪ ಸಮಯದವರೆಗೆ ಗುಣಮುಖನಾಗಿದ್ದ. ನನ್ನ ಕುಟುಂಬದ ಹೆಸರು ಮುಂದುವರಿಯಬೇಕೆಂದು ನಾನು ಬಯಸಿದ್ದೆ” ಎಂದು timesofindia.indiatimes.com ವರದಿ ವಿವರಿಸಿದೆ.

ಮೃತ ಸೋನು ತಾಯಿ ಸೇರಿದಂತೆ ಪಾಂಡೋರಿ ಮೊಹಲ್ಲಾದ ಇತರ ಮಹಿಳೆಯರು ತಮ್ಮ ಪ್ರದೇಶವು ಮಾದಕ ದ್ರವ್ಯದ ವ್ಯಸನಕ್ಕೆ ಸಿಲುಕಿದೆ. ಅದು ಈಗಾಗಲೇ ಅನೇಕ ಯುವಕರ ಜೀವಗಳನ್ನು ಬಲಿ ತೆಗೆದುಕೊಂಡಿದೆ ಎಂದು ಹೇಳಿದ್ದಾರೆ.

ಸೋಮವಾರ ಪೊಲೀಸರು ಆ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸಿದಾಗ, ಅಲ್ಲಿನ ಮಹಿಳೆಯರು ಮಾದಕ ದ್ರವ್ಯಗಳ ಸುಲಭ ಲಭ್ಯತೆಯ ಬಗ್ಗೆ ತಮ್ಮ ಆಕ್ರೋಶ ಮತ್ತು ವೇದನೆಯನ್ನು ಹೊರಹಾಕಿದ್ದಾರೆ. ಚಿಕಿತ್ಸೆಗಾಗಿ ಮೂವರು ಮಾದಕ ವ್ಯಸನಿಗಳನ್ನು ಅವರ ಕುಟುಂಬದವರೇ ಪೊಲೀಸರಿಗೆ ಒಪ್ಪಿಸಿದ್ದಾರೆ. ಅದೇ ಮೊಹಲ್ಲಾದ ಮತ್ತೊಬ್ಬ ಮಹಿಳೆ ಚರಂಜಿತ್ ಕೌರ್, ತನ್ನ ಇಬ್ಬರು ಗಂಡು ಮಕ್ಕಳು ಕೂಡ ಮಾದಕ ವ್ಯಸನಕ್ಕೆ ಬಲಿಯಾಗಿರುವುದಾಗಿ ಹೇಳಿದ್ದಾರೆ. ಒಬ್ಬ ಏಳು ವರ್ಷಗಳ ಹಿಂದೆ ಮತ್ತು ಇನ್ನೊಬ್ಬ ಸುಮಾರು ಮೂರು ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ ಎಂಬುವುದಾಗಿ ತಿಳಿಸಿದ್ದಾರೆ ಎಂದು ವರದಿ ಹೇಳಿದೆ.




 



ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಫೇಕ್ ಮದುವೆ ಜಾಲಕ್ಕೆ ಬಿದ್ದ ಫೇಮಸ್ ಗೋರಕ್ಷಕ ‘ಬಿಟ್ಟು ಬಜರಂಗಿ’

ಹರಿಯಾಣದಲ್ಲಿ "ಲವ್ ಜಿಹಾದ್" ಮತ್ತು ಅಂತರ್ಧರ್ಮೀಯ ವಿವಾಹಗಳ ವಿರುದ್ಧ ನಿರಂತರವಾಗಿ ಹೋರಾಡುತ್ತಾ, ತನ್ನದೇ ಆದ ಸಾರ್ವಜನಿಕ ಪ್ರಭಾವ ಬೆಳೆಸಿಕೊಂಡಿದ್ದ ರಾಜ್ ಕುಮಾರ್ ಅಲಿಯಾಸ್ ಬಿಟ್ಟು ಬಜರಂಗಿಗೆ ತನಗೆ ಇಂತಹದ್ದೊಂದು ಪರಿಸ್ಥಿತಿ ಎದುರಾಗಬಹುದು ಎಂಬ...

ಕರ್ನಾಟಕದ ಎಸ್‌ಐಆರ್ ಪ್ರಕ್ರಿಯೆಯಲ್ಲಿ ‘ಸಾಮೂಹಿಕ ಅಕ್ರಮ’ ಆರೋಪ: ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ದೂರು ನೀಡಿದ ಎನ್‌ಡಿಎ ನಿಯೋಗ

ಬೆಂಗಳೂರು: ಕರ್ನಾಟಕದಲ್ಲಿ ಸದ್ಯ ಚಾಲ್ತಿಯಲ್ಲಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಭಾರಿ ಪ್ರಮಾಣದ ಸಾಂಸ್ಥಿಕ ಅಕ್ರಮಗಳು ನಡೆಯುತ್ತಿವೆ ಎಂದು ಆರೋಪಿಸಿ, ರಾಜ್ಯದ ಪ್ರಮುಖ ವಿರೋಧ ಪಕ್ಷಗಳಾದ ಬಿಜೆಪಿ ಮತ್ತು...

SIR: ಮತದಾರರ ಹಕ್ಕು ರಕ್ಷಣೆಗೆ ಕಣಕ್ಕಿಳಿದ ‘ನಾಗರಿಕ ಮತ ಕಾವಲು ಸಮಿತಿ’

ರಾಜ್ಯದ ಶೋಷಿತ, ಹಿಂದುಳಿದ ಮತ್ತು ಅಂಚಿನಲ್ಲಿರುವ ಸಮುದಾಯಗಳ ಮತದಾನದ ಹಕ್ಕಿಗೆ ಯಾವುದೇ ಚ್ಯುತಿ ಬಾರದಂತೆ ತಡೆಯಲು ಬೂತ್ ಮಟ್ಟದಿಂದ ಹಿಡಿದು ರಾಜ್ಯ ಮಟ್ಟದವರೆಗೆ ‘ನಾಗರಿಕ ಮತ ಕಾವಲು ಸಮಿತಿ’ಯನ್ನು ಅಸ್ತಿತ್ವಕ್ಕೆ ತರಲಾಗಿದೆ. ಎಸ್‌ಐಆರ್...

ಮೋಹನ್‌ಲಾಲ್ ‘ದಂತ’ ಕಥೆ: ಅರಣ್ಯ ಇಲಾಖೆ ಮುಂದೆ 10 ಆನೆ ದಂತ, 13 ಮೂರ್ತಿಗಳ ಅಚ್ಚರಿಯ ಘೋಷಣೆ!

ನಟ ಮೋಹನ್‌ಲಾಲ್ ಅವರು ತಾವೇ ಕಾನೂನುಬಾಹಿರವಾಗಿ ವನ್ಯಜೀವಿ ವಸ್ತುಗಳನ್ನು ಹೊಂದಿರುವ ಆರೋಪದ ಮೇಲೆ ವಿಚಾರಣೆ ಎದುರಿಸುತ್ತಿದ್ದರೂ, ತಮ್ಮ ಬಳಿ 10 ಆನೆ ದಂತಗಳು ಮತ್ತು 13 ದಂತದ ಮೂರ್ತಿಗಳು ಇರುವುದಾಗಿ ಕೇರಳ ಅರಣ್ಯ...

ಅಯೋಧ್ಯೆ ರಾಮಮಂದಿರ ಹಗರಣ: ‘ಕದ್ದ ಹಣ’ ಹಂಚಿಕೆಯ ಮೊಬೈಲ್ ಚಾಟ್‌ಗಳು ಬಹಿರಂಗ; ತೀವ್ರಗೊಂಡ ತನಿಖೆ

ಲಕ್ನೋ: ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ನಿಧಿ ದುರುಪಯೋಗ ಮತ್ತು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಅತ್ಯಂತ ಸ್ಫೋಟಕ ಮಾಹಿತಿ ಹೊರಬಿದ್ದಿದ್ದು, ತನಿಖೆ ತೀವ್ರಗೊಂಡಿದೆ. ಪ್ರಕರಣದ ಪ್ರಮುಖ ಆರೋಪಿಗಳ ಮೊಬೈಲ್ ಫೋನ್‌ಗಳ...

ಅಪ್ರಾಪ್ತ ಬಾಲಕಿಯ ಅತ್ಯಾಚಾರ-ಕೊಲೆ ಆರೋಪ : ಪ. ಬಂಗಾಳದ ಬಾರುಯಿಪುರದಲ್ಲಿ ಹಿಂಸಾಚಾರ ; ಶಂಕಿತ ಆರೋಪಿಯ ಗುಂಪು ಹತ್ಯೆ

ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಬಾರುಯಿಪುರದಲ್ಲಿ ಶನಿವಾರ (ಜು.4) ಮಧ್ಯಾಹ್ನದಿಂದ ನಾಪತ್ತೆಯಾಗಿದ್ದ ಅಪ್ರಾಪ್ತ ಬಾಲಕಿಯೊಬ್ಬಳ ಶವ ಭಾನುವಾರ (ಜು.5) ಬೆಳಿಗ್ಗೆ ಕೆರೆಯಲ್ಲಿ ಪತ್ತೆಯಾಗಿದ್ದು, ಆ ಬಳಿಕ ಅಲ್ಲಿ ತೀವ್ರ ಹಿಂಸಾತ್ಮಕ...

SIR ಬಳಿಕ ಒಡಿಶಾದ ಕರಡು ಮತದಾರರ ಪಟ್ಟಿ ಪ್ರಕಟ : 20 ಲಕ್ಷ ಹೆಸರುಗಳು ಡಿಲೀಟ್

ವಿಶೇಷ ತೀವ್ರ ಪರಿಷ್ಕರಣೆಯ (ಎಸ್‌ಐಆರ್) ಗಣತಿ ಹಂತದ ಬಳಿಕ ಚುನಾವಣಾ ಆಯೋಗ ಭಾನುವಾರ (ಜು.5) ಒಡಿಶಾದ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಿದ್ದು, ಇದರಲ್ಲಿ 20 ಲಕ್ಷಕ್ಕೂ ಹೆಚ್ಚು ಜನರ ಹೆಸರುಗಳನ್ನು ಮತದಾರರ ಪಟ್ಟಿಯಿಂದ...

SIR: ಟಾರ್ಗೆಟ್ ಮತ್ತು ಒತ್ತಡದ ಕೆಲಸದಿಂದ ಮೂವರು ಸಿಬ್ಬಂದಿ ಸಾವು

ಕರ್ನಾಟಕದಲ್ಲಿ ನಡೆಯುತ್ತಿರುವ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯು ಕೆಳಹಂತದ ನೌಕರರ ಪಾಲಿಗೆ ಮರಣಶಾಸನವಾಗುತ್ತಿದೆಯೇ ಎಂಬ ಗಂಭೀರ ಪ್ರಶ್ನೆಯೊಂದು ಎದ್ದಿದೆ. ಅಧಿಕಾರಿಗಳು ನೀಡುತ್ತಿರುವ ಅತಿಯಾದ ಒತ್ತಡ ಮತ್ತು ಟಾರ್ಗೆಟ್ ಬೆನ್ನತ್ತುವ ಧಾವಂತದಿಂದಾಗಿ...

ಖಮೇನಿ ಅಂತ್ಯಕ್ರಿಯೆ ವೇಳೆ ಟ್ರಂಪ್ ಉದ್ಧಟತನದ ಹೇಳಿಕೆ: “ಇತಿಹಾಸ, ಗೌರವವಿಲ್ಲದ ದೇಶ ಅಮೆರಿಕ” ಎಂದು ಇರಾನ್ ತೀಕ್ಷ್ಣ ತಿರುಗೇಟು

ಟೆಹ್ರಾನ್: ಇರಾನ್‌ನ ಮಾಜಿ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ನಿಧನದ ನಂತರ ಜಾಗತಿಕ ರಾಜತಾಂತ್ರಿಕ ವಲಯದಲ್ಲಿ ಭಾರೀ ವಾಕ್ಸಮರ ಉಂಟಾಗಿದೆ. ಖಮೇನಿ ಅವರ ಅಂತ್ಯಕ್ರಿಯೆಯ ಸಂದರ್ಭದಲ್ಲಿ ಒಟ್ಟುಗೂಡಿರುವ ಇರಾನ್‌ನ ಇಡೀ...

ಮ್ಯಾಚ್ ಮಧ್ಯೆ ಕಾಂಡೊಮ್ ಜಾಹೀರಾತು: ಬಿಸಿಸಿಐ ವಿರುದ್ಧ ಕಿಡಿಕಾರಿದ ಮಾಜಿ ಕ್ರಿಕೆಟಿಗ, TMC ಸಂಸದ ಕೀರ್ತಿ ಆಜಾದ್

ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟಿ20 ಅಂತರರಾಷ್ಟ್ರೀಯ ಪಂದ್ಯದ ನೇರ ಪ್ರಸಾರದ ವೇಳೆ ಕಾಂಡೊಮ್ ಜಾಹೀರಾತುಗಳನ್ನು ಪ್ರಸಾರ ಮಾಡಿದ್ದನ್ನು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಮತ್ತು ಮಾಜಿ...