ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿದ್ದ ಅಗ್ರಹಾರ ಕೃಷ್ಣಮೂರ್ತಿ ಅಮಾನತುರದ್ದಾಗಿದೆ. ಬರೋಬ್ಬರಿ ಒಂದು ದಶಕ ನಡೆದ ಕುಸ್ತಿಯಲ್ಲಿ ಈ ಜಟ್ಟಿ ಜಯಗಳಿಸಿದ್ದಾರಲ್ಲಾ.
ಅಗ್ರಹಾರದಿಂದ ಬಂದವನಿರಬೇಕು; ಗೋದಿ ಮುದ್ದೆಯಂತಿದ್ದ ಆಕಾರ ಬೇರೆ; ಕೃಷ್ಣಮೂರ್ತಿ ಹೆಸರು, ಈತ ಭೂಸುರೋತ್ತಮನಾದ ವಿಪ್ರನೇ ಇರಬೇಕು ಎಂದು ನಮ್ಮ ಜಾತಿ ಮನಸ್ಸುಗಳಿಗೆ ಸಾಕ್ಷಿಯೊದಗಿಸಿತ್ತು. ಆಗ ನಮಗೆ ಅಗ್ರಹಾರಗಳನ್ನ ಕಂಡರೆ ಆಗುತ್ತಿರಲಿಲ್ಲ. ನಮಗೇ ಏನು, ನಾಯಿ ಹಂದಿಗಳಿಗೂ ಹಿಡಿಸುತ್ತಿರಲಿಲ್ಲ. ಕಾರಣ ಅಲ್ಲಿನ ಅಂಗಳದಲ್ಲಿ ಯಾವ ಮೂಳೆಯೂ ಸಿಗುತ್ತಿರಲಿಲ್ಲ. ಇನ್ನ ಹಂದಿಗಳಿಗಂತೂ ತೊಳೆದು ಎಸೆದಂತಹ ಇಸ್ತ್ರಿ ಎಲೆಯಿಂದ ಏನೂ ಪ್ರಯೋಜನವಾಗದೆ ವಾಪಸ್ಸು ಬರುತ್ತಿದ್ದವು. ಇಂತಹ ನಮ್ಮ ಪೂರ್ವಾಗ್ರಹದ ಕಾಲದಲ್ಲಿ ಲಂಕೇಶರ ಎದುರು ಪ್ರಕಾಶ್ ಬೆಳವಾಡಿಯಿಂದ ಹಿಡಿದು ಮಹಾಬಲ, ಸತ್ಯ, ಸದಾಶಿವ ಇವರೆಲ್ಲ ಕುಳಿತು ಬ್ರಾಹ್ಮಣದ ಟೀಕೆಯನ್ನು ಅನುಮಾನ ಬರದಂತೆ ಸಹಿಸಿಕೊಳ್ಳುತ್ತಿದ್ದರು. ಅಂತವರ ಪೈಕಿ ಅಗ್ರಹಾರದ ಕೃಷ್ಣಮೂರ್ತಿಯೂ ಎಂದು ನಂಬಿದ್ದೆವು. ಲಂಕೇಶರ ವಿಶೇಷ ಪ್ರೀತಿಗೆ ಪಾತ್ರವಾಗಿ ನಮ್ಮಲ್ಲೊಂದಿಷ್ಟು ಅಸಹನೆ ಮೂಡುತ್ತಿರುವಾಗಲೆ ಕೃಷ್ಣಮೂರ್ತಿ ಅಗ್ರಹಾರದಿಂದ ಬಂದ ಅಸಾಮಿಯಲ್ಲ, ಅರಮನೆ ಎದುರು ಮಹಾರಾಜರ ಸಮ್ಮುಖದಲ್ಲಿ ಮುಷ್ಠಿಯಿಂದ ಎದುರಾಳಿಯ ವಿರುದ್ಧ ಹೋರಾಡುವವರೆಂದು ಗೊತ್ತಾಗಿ ಹೋಯ್ತಲ್ಲಾ, ಥೂತ್ತೇರಿ.
*****
ಉನ್ನತ ಸ್ಥಾನಕ್ಕೆ ಹೋದಮೇಲೂ ವಿಪ್ರೋತ್ತಮರು ತಾವು ತಯಾರಾದ ಅಗ್ರಹಾರಕ್ಕೆ ಬಂದು ಹೋಗುವಂತೆ ಕೃಷ್ಣಮೂರ್ತಿ ಲಂಕೇಶರ ವಟಾರಕ್ಕೆ ಬಂದು ಹೋಗುತ್ತಿದ್ದರು. ಆಗ ಚೆನೈನಲ್ಲಿದ್ದ ಪ್ರಾದೇಶಿಕ ಕೇಂದ್ರ ಸಾಹಿತ್ಯ ಅಕಾಡೆಮಿ ಕಚೇರಿಯನ್ನ ಬೆಂಗಳೂರಿಗೆ ತಂದರು. ಸಾಹಿತ್ಯ ಪರಿಷತ್ ಕಾರ್ಯಕ್ರಮಗಳಿಗೆ ಹಣ ಕೊಟ್ಟರು, ಪುಸ್ತಕ ಕೊಟ್ಟರು. ಜರಗನಹಳ್ಳಿ ಶಿವಶಂಕರ್, ಲಂಕೇಶ್ ಶಿಷ್ಯ ದಳವಾಯಿಗೆ ಅಕಾಡೆಮಿ ಪುಸ್ತಕ ಕೊಟ್ಟರು. ದಳವಾಯಿಯಂತೂ ಹೋದವನು ಮತ್ತೆ ಬರಲೇ ಇಲ್ಲ. ತಮ್ಮ ಭಾಷೆ ಮತ್ತು ಪ್ರಾದೇಶಿಕ ಕಾಳಜಿಯ ಬಗ್ಗೆ ಪಕ್ಷಪಾತದ ಆಪಾದನೆ ಬಂದು ಅಗ್ರಹಾರ ತನಿಖೆ ಎದುರಿಸುವ ಸಮಯದಲ್ಲಿ ಫಲಾನುಭವಿಗಳ್ಯಾರೂ ಸಹಾಯಕ್ಕೆ ಬರಲಿಲ್ಲ. ತನಿಖಾಧಿಕಾರಿಗಳಿಗೆ ಒಂದು ಮನವಿಯನ್ನೂ ಕೊಡಲಿಲ್ಲ. ಇಂತಹ ಸಮಯದಲ್ಲಿ ಕವಿ ಸಿ.ಪ.ಶೆಟ್ಟಿಯ ಹಠದಿಂದಾಗಿ ಅಗ್ರಹಾರ ಅಮಾನತುಗೊಂಡರಂತಲ್ಲಾ, ಥೂತ್ತೇರಿ.
*****
ಕನ್ನಡದ ಕೆಲಸಕ್ಕಾಗಿ ಕನ್ನಡಿಗನಿಂದಲೇ ತೊಂದರೆಗೆ ಸಿಕ್ಕಿಕೊಂಡ ಅಗ್ರಹಾರ ಈ ಒಂದು ದಶಕದಲ್ಲಿ ಅರಾಮವಾಗಿಯೇ ಇದ್ದರು. ಪ್ರೆಸ್ಕ್ಲಬ್ಬಿನ ಗೆಳೆಯರ ಪಾರ್ಟಿಯ ಬಿಲ್ಲನ್ನು ತಾವೇ ಕೊಡುತ್ತಿದ್ದರು. ನಿವೃತ್ತಿಯ ಸವಲತ್ತುಗಳು ಸಿಗದಿದ್ದರೂ ಬೇಸರ ಮಾಡಿಕೊಳ್ಳದೆ ನಾನೊಬ್ಬ ಕಳಂಕ ಹೊತ್ತವನೆಂದು ಅರಾಮವಾಗಿಯೇ ಹೇಳುತ್ತಿದ್ದರು. ಈ ಜಟ್ಟಿಯ ವಿರುದ್ಧ ಹಠ ಸಾಧಿಸಿದ ಸಿ.ಪ.ಶೆಟ್ಟಿಯ ಒಂದು ಪ್ರಸಂಗ ಹೇಳುವುದಾದರೆ ನಮ್ಮ ಸಂಸ್ಕೃತಿ ಮತ್ತು ರಾಜಕಾರಣದ ನಡುವಿನ ಸೇತುವೆಯಂತಿದ್ದ ಎಂ.ಪಿ. ಪ್ರಕಾಶ್ ಅವರು ಸಿ.ಪ.ಶೆಟ್ಟರ ಕವಿತ್ವಕ್ಕೆ ಮಾರುಹೋಗಿ ಹೂವಿನಡಗಲಿಗೆ ಕರೆದು ಸನ್ಮಾನ ಮಾಡಿದರು. ಜರಿಪೇಟ ಜಗಮಗಿಸುವ ಶಾಲು ಪರಿಮಳ ಭರಿತ ಹಾರ ಹಾಕಿಸಿಕೊಂಡ ಸಿ.ಪ.ಶೆಟ್ಟಿ ’ಈ ಸನ್ಮಾನದ ಗೌರವ ಏನದಾವಲ್ಲ ಇವು ಭಾಳ ವೆಚ್ಚದವು, ಅದಕ ನಾನು ಈ ಸಭೆ ಮುಗಿಯೂ ಮಟ್ಟ ಇವನ್ನ ತೆಗೆಯೂದಿಲ್ಲ, ಹಾಗೇ ಕುಂದರತೀನಿ’ ಎಂದು ಹಾಗೇ ಕುಂತರು. ಆದರೆ ಅವರ ಅಕ್ಕಪಕ್ಕದಲ್ಲಿದ್ದ ಗೌರವಾನ್ವಿತರು ಹಾಗೆ ಮಾಡದೆ ಸನ್ಮಾನಕ್ಕೆ ಗೌರವ ತೋರಿದರು. ಸಭೆ ಗಂಟೆಗಟ್ಟಲೆ ಮುಂದುವರಿದಾಗ ಸಿ.ಪ.ಶೆಟ್ಟರು ಹಾಸ್ಯಸ್ಪದ ವ್ಯಕ್ತಿಯಂತೆ ಕಂಡರಂತಲ್ಲಾ, ಥೂತ್ತೇರಿ.
*****

ಈಗ ಕಾಲ ಬದಲಾಗಿದೆ. ಮುಂದೆ ಅಗ್ರಹಾರನಂತಹ ಕಾರ್ಯದರ್ಶಿ ಸಿ.ಪ.ಶೆಟ್ಟಿಯಂತಹ ಕವಿ ಎಲ್ಲವೂ ಅಪ್ರಸ್ತುತವಾಗಿರುವಂತಹ ಪ್ರಳಯ ಅರಂಭಗೊಂಡಿದೆಯಂತಲ್ಲಾ. ಈವರೆಗಿನ ಕನ್ನಡ ಸಾಹಿತ್ಯಕ್ಕೆ ಬದಲು ರಾಷ್ಟ್ರೋತ್ಥಾನ ಸಾಹಿತ್ಯ ಕನ್ನಡಿಗರ ಮೇಲೆ ಹೇರುವ ಸೂಚನೆಯಾಗಿ, ನಮ್ಮ ಮಕ್ಕಳು ಓದುವ ಪಠ್ಯ ಪುಸ್ತಕದೊಳಕ್ಕೆ ಹೆಡಗೇವಾರ್, ಗೋಳವಲ್ಕರ್, ದೀನದಯಾಳು, ಹೊ.ವೆ. ಶೇಷಾದ್ರಿ, ಸಾವರ್ಕರ್ ಸೇರಲಿದ್ದಾರಂತಲ್ಲಾ. ಇದು ಹಾಳುಬಿದ್ದು ಹೋಗಲಿ, ಲಂಕೇಶ್ ನಮ್ಮವರು ಎಂದು ಜಗಳ ಮಾಡುತ್ತಿದ್ದ ಅವರ ಒಂದು ಬಳಗ ಲಂಕೇಶರ ಪಾಠವನ್ನೆ ಕೈಬಿಟ್ಟ ಲಾಟಿ ವೀರರ ಬಗ್ಗೆ ಚಕಾರವೆತ್ತಿಲ್ಲವಂತಲ್ಲಾ. ಇದಕ್ಕೂ ಕಾರಣವಿದೆ. ಲಂಕೇಶ್ ಎಂದೂ ತನ್ನ ಜಾತಿ ಬಗ್ಗೆ ಹೇಳಿಕೊಳ್ಳಲಿಲ್ಲ, ಸ್ವಜಾತಿಯವರಿಗೆ ಸಹಾಯ ಮಾಡಲಿಲ್ಲ, ಹತ್ತಿರವೂ ಸೇರಿಸಲಿಲ್ಲ. ಅದ್ದರಿಂದ ಇವರ ಮೌನ ಸಹಜವಾದುದೆ. ಆದರೆ ಲಂಕೇಶ್ ಸೃಷ್ಟಿಸಿ ಹೋಗಿದ್ದ ಜನ ಈಗ ಮೌನಿಗಳಾಗಿರುವ ಬಗ್ಗೆ ಕೇಳಿದಾಗ “ನೋಡ್ರಿ ಹೆಡಗೆವಾರಲ್ಲ, ಪೆಟ್ಟಿಗೆವಾರನ್ನ ಪಠ್ಯಕ್ಕೆ ಸೇರಿಸಿದರೂ ಏನೂ ಆಗಲ್ಲ. 1969-70ನೇ ಇಸವಿಲಿ ಸರ್ ಎಂ. ವಿಶ್ವೇಶ್ವರಯ್ಯನವರ ಬಗ್ಗೆ ಎರಡೂ ವರ್ಷ ಪಠ್ಯ ಪುಸ್ತಕ ಮಾಡಿದ್ರು, ಏನಾಯ್ತು ಯಾವನಾದ್ರು ಒಬ್ಬ ಇಂಜಿನಿಯರ್ ಬಂದನೇ? ವಿಶ್ವೇಶ್ವರಯ್ಯನವರ ವಿಷಯ ಹೇಳುನೂ, ಅಂಗೆ ಈ ಹೆಡಗೆವಾರ್ ಲಾಟಿ ಲಡ್ಡಿದದು ಹೋಗುತ್ತೆ” ಎಂದರಲ್ಲಾ ಥೂತ್ತೇರಿ.
ಇದನ್ನೂ ಓದಿ: ಎರಡೂವರೆ ಸಾವಿರ ಕೋಟಿ ಹುಣಸಿ ಪಿಕ್ಕ ಅನಕೊಂಡಿರೇನ!


