ದೆಹಲಿಯ ಎಐ ಶೃಂಗಸಭೆಯಲ್ಲಿ ಅರೆಬೆತ್ತಲೆಯಾಗಿ ಪ್ರತಿಭಟಿಸಿದ ಯುವ ಕಾಂಗ್ರೆಸ್ ಕಾರ್ಯಕರ್ತರ ಬಂಧನ ವೇಳೆ ಭಾರೀ ಹೈಡ್ರಾಮ ನಡೆದಿದೆ. ಆರೋಪಿಗಳನ್ನು ಬಂಧಿಸಿ ಕರೆತರಲು ಹಿಮಾಚಲ ಪ್ರದೇಶದ ಶಿಮ್ಲಾ ಜಿಲ್ಲೆಗೆ ತೆರಳಿದ್ದ ದೆಹಲಿ ಪೊಲೀಸರನ್ನು ಅಲ್ಲಿನ ಪೊಲೀಸರು ವಶಕ್ಕೆ ಪಡೆದು, ಬಳಿಕ ಬಿಡುಗಡೆ ಮಾಡಿದ್ದಾರೆ.
ವರದಿಗಳ ಪ್ರಕಾರ, ಎಐ ಶೃಂಗಸಭೆಯ ಪ್ರತಿಭಟನೆಗೆ ಸಂಬಂಧಪಟ್ಟಂತೆ ಮೂವರು ಯುವ ಕಾಂಗ್ರೆಸ್ ಕಾರ್ಯಕರ್ತರಾದ ಸೌರಭ್, ಅರ್ಬಾಝ್ ಮತ್ತು ಸಿದ್ಧಾರ್ಥ್ ಎಂಬವರನ್ನು ಬಂಧಿಸಿ ಕರೆತರಲು ದೆಹಲಿ ಪೊಲೀಸರು ಬುಧವಾರ (ಫೆ.25) ಹಿಮಾಚಲ ಪ್ರದೇಶದ ಶಿಮ್ಲಾ ಜಿಲ್ಲೆಯ ರೋಹ್ರು ಪಟ್ಟಣಕ್ಕೆ ಹೋಗಿದ್ದರು.
ಅಲ್ಲಿನ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡದೆ ಸಿವಿಲ್ ಡ್ರೆಸ್ನಲ್ಲಿ ರೆಸಾರ್ಟ್ವೊಂದಕ್ಕೆ ನುಗ್ಗಿದ ದೆಹಲಿ ಪೊಲೀಸರು, ಆರೋಪಿಗಳಾದ ಮೂವರು ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸಿದ್ದರು ಮತ್ತು ರೆಸಾರ್ಟ್ನ ಸಿಸಿಟಿವಿ ಡಿವಿಆರ್ ವಶಕ್ಕೆ ಪಡೆದಿದ್ದರು. ಬಳಿಕ ಬಂಧಿತರು ಮತ್ತು ಸಿಸಿಟಿವಿ ಡಿವಿಆರ್ ಜೊತೆ ಕಾರಿನಲ್ಲಿ ದೆಹಲಿಗೆ ಹೊರಟ್ಟಿದ್ದರು.
ಈ ವೇಳೆ ರೋಹ್ರು ಪಟ್ಟಣ ಸಮೀಪದ ಚೆಕ್ ಪೋಸ್ಟ್ನಲ್ಲಿ ಅವರನ್ನು ತಡೆದ ಸ್ಥಳೀಯ ಪೊಲೀಸರು, ಕಾಂಗ್ರೆಸ್ ಕಾರ್ಯಕರ್ತರನ್ನು ಅಪಹರಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ದೆಹಲಿ ಪೊಲೀಸ್ ತಂಡದಲ್ಲಿದ್ದ ಸುಮಾರು 20 ಸಿಬ್ಬಂದಿಯನ್ನು ವಶಕ್ಕೆ ಪಡೆದಿದ್ದಾರೆ. ನಂತರ ಅವರನ್ನು ಸ್ಥಳೀಯ ಧಲ್ಲಿ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.
ದೆಹಲಿ ಪೊಲೀಸರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡದೆ ಸಿವಿಲ್ ಡ್ರೆಸ್ನಲ್ಲಿ ಬಂದು ಕಾಂಗ್ರೆಸ್ ಕಾರ್ಯಕರ್ತರನ್ನು ಅಪಹರಿಸಿದ್ದಾರೆ ಎಂದು ಆರೋಪಿಸಿ, ಅವರ ವಿರುದ್ಧ ಬಿಎನ್ಎಸ್ ಸೆಕ್ಷನ್ 365 (ಅಪಹರಣ) ಮತ್ತು 452 (ಅತಿಕ್ರಮಣ) ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.
ಆ ಬಳಿಕ, ದೆಹಲಿ ಪೊಲೀಸರು ನಿಜವಾಗಿಯೂ ಅಧಿಕೃತ ಕಾರ್ಯದ ಮೇಲೆ ಬಂದಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಅವರ ಗುರುತಿನ ಚೀಟಿಗಳನ್ನು ತಪಾಸಣೆ ಮಾಡಿದ್ದಾರೆ. ಸುಮಾರು 10-12 ಗಂಟೆಗಳ ಕಾಲ ಅವರನ್ನು ಠಾಣೆಯಲ್ಲೇ ಇರಿಸಿಕೊಂಡು ವಿಚಾರಣೆ ನಡೆಸಿದ್ದಾರೆ.
ಇದಾದ ಬಳಿಕ, ದೆಹಲಿ ಪೊಲೀಸರು ಬಂಧಿಸಿದ್ದ ಮೂವರು ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ತಮ್ಮ ವಶಕ್ಕೆ ಪಡೆದ ಸ್ಥಳೀಯ ಪೊಲೀಸರು, ಮಧ್ಯರಾತ್ರಿಯೇ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದ್ದಾರೆ. ದೆಹಲಿ ಪೊಲೀಸರು ಇವರನ್ನು ಕರೆದೊಯ್ಯಬೇಕಾದರೆ ಕಾನೂನುಬದ್ಧವಾಗಿ ‘ಟ್ರಾನ್ಸಿಟ್ ರಿಮಾಂಡ್’ ಪಡೆಯಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ.
ದೆಹಲಿ ಪೊಲೀಸರು ರೆಸಾರ್ಟ್ನಿಂದ ಕಾನೂನುಬಾಹಿರವಾಗಿ ವಶಪಡಿಸಿಕೊಂಡಿದ್ದರು ಎನ್ನಲಾದ ಸಿಸಿಟಿವಿ ಡಿವಿಆರ್ ಮತ್ತು ಇತರ ದಾಖಲೆಗಳನ್ನು ತಮ್ಮ ವಶಕ್ಕೆ ಪಡೆದಿದ್ದಾರೆ ಮತ್ತು ಅದರ ಬಗ್ಗೆ ಅಧಿಕೃತ ದಾಖಲೆ ನೀಡುವಂತೆ ಒತ್ತಾಯಿಸಿದ್ದಾರೆ.
ಅಂತಿಮವಾಗಿ, ತಡರಾತ್ರಿ ಸುಮಾರು 1:30ಕ್ಕೆ ನ್ಯಾಯಾಲಯವು ದೆಹಲಿ ಪೊಲೀಸರಿಗೆ ‘ಟ್ರಾನ್ಸಿಟ್ ರಿಮಾಂಡ್’ ನೀಡಿತು. ಅದರ ನಂತರ ದೆಹಲಿ ಪೊಲೀಸರು ಆರೋಪಿಗಳೊಂದಿಗೆ ಶಿಮ್ಲಾದಿಂದ ಹೊರಟರು. ಆದರೆ, ಅವರನ್ನು ಶಿಮ್ಲಾ ಹೊರವಲಯದ ಕನ್ಲೋಗ್ ಮತ್ತು ಶೋಗಿ ಎಂಬಲ್ಲಿ ಶಿಮ್ಲಾ ಪೊಲೀಸರು ಎರಡನೇ ಬಾರಿ ತಡೆದರು.
ಈ ಬಾರಿ ಶಿಮ್ಲಾ ಪೊಲೀಸರು ಕೇವಲ ತಡೆಯಲಿಲ್ಲ, ಬದಲಿಗೆ ದೆಹಲಿ ಪೊಲೀಸರ ವಾಹನಗಳ ಮುಂದೆ ಮತ್ತು ಹಿಂದೆ ತಮ್ಮ ಪೊಲೀಸ್ ವಾಹನಗಳನ್ನು ನಿಲ್ಲಿಸಿ ರಸ್ತೆಯನ್ನು ಸಂಪೂರ್ಣವಾಗಿ ಬ್ಲಾಕ್ ಮಾಡಿದರು.
ದೆಹಲಿ ಪೊಲೀಸರು ರೋಹ್ರು ರೆಸಾರ್ಟ್ನಿಂದ ಸಿಸಿಟಿವಿ ಡಿವಿಆರ್ ಮತ್ತು ಇತರ ಕೆಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. “ನಮ್ಮ ರಾಜ್ಯದ ವ್ಯಾಪ್ತಿಯಲ್ಲಿ ನೀವು ವಶಪಡಿಸಿಕೊಂಡ ವಸ್ತುಗಳ ಬಗ್ಗೆ ನಮಗೆ ಅಧಿಕೃತ ದಾಖಲೆ ನೀಡದೆ ನೀವು ಹೋಗುವಂತಿಲ್ಲ” ಎಂದು ಸ್ಥಳೀಯರು ಪೊಲೀಸರು ಪಟ್ಟು ಹಿಡಿದರು.
ನ್ಯಾಯಾಲಯದ ಆದೇಶ ಕೈಯಲ್ಲಿದ್ದರೂ ಸಹ, ದೆಹಲಿ ಪೊಲೀಸರನ್ನು ಸುಮಾರು 5 ಗಂಟೆಗಳ ಕಾಲ ರಸ್ತೆಯಲ್ಲೇ ತಡೆಹಿಡಿಯಲಾಗಿತ್ತು. ದೆಹಲಿ ಪೊಲೀಸರು ಮತ್ತು ಶಿಮ್ಲಾ ಪೊಲೀಸರ ನಡುವೆ ರಾಷ್ಟ್ರೀಯ ಹೆದ್ದಾರಿಯಲ್ಲೇ ತೀವ್ರ ವಾಗ್ವಾದ ನಡೆಯಿತು.
ಕೊನೆಗೆ ದೆಹಲಿ ಪೊಲೀಸರು ತಾವು ವಶಪಡಿಸಿಕೊಂಡ ವಸ್ತುಗಳ ಪಟ್ಟಿಯನ್ನು ಶಿಮ್ಲಾ ಪೊಲೀಸರಿಗೆ ಅಧಿಕೃತವಾಗಿ ಹಸ್ತಾಂತರಿಸಿದರು. ಈ ಪ್ರಕ್ರಿಯೆ ಮುಗಿದ ನಂತರ, ಅಂದರೆ ಗುರುವಾರ (ಫೆ.26) ಮುಂಜಾನೆ ಸುಮಾರು 6:50ಕ್ಕೆ ದೆಹಲಿ ಪೊಲೀಸರು ಹಿಮಾಚಲ ಪ್ರದೇಶದ ಗಡಿ ದಾಟಲು ಅನುಮತಿ ನೀಡಲಾಯಿತು.


