ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ಶೂದ್ರ ಸಮೂದಾಯದ ಹಿರಿಯ ಮಿತ್ರರೊಬ್ಬರು ನನಗೆ ‘ನೀವು ತುಂಬ ತೀಕ್ಷ್ಣವಾಗಿ ಚಿಂತನೆ ಮಾಡುತ್ತಿರಿ(ಸುಳ್ಳು). ಆದರೆ ನೀವು ಹೆಚ್ಚು ಜಾತಿ ಬಗ್ಗೆಯೇ ಮಾತನಾಡುತ್ತ, ಬ್ರಾಹ್ಮಣರ ಬಗ್ಗೆಯೇ ಹೆಚ್ಚು ದ್ವೇಷ ಮಾಡುತ್ತಿರಿ. ಅದು ಸರಿಯೇ’? ಎಂದರು. ನಾನು ಗಾಬರಿಯಾದೆ. ನನಗೆ ಇದು ಹೊಸ ಆರೋಪವಾಗಿತ್ತು ಮತ್ತು ಅವರಿಗೆ ಉತ್ತರಿಸಲು ಸಾಕಷ್ಟು ಸಮಯದ ಅಗತ್ಯ ಇದ್ದುದರಿಂದ ನಾನು ಅವರ ಮುಖವನ್ನೊಮ್ಮೆ ದಿಟ್ಟಿಸಿ ನೋಡಿ ನಾನು ಈ ವಿಷಯದ ಕುರಿತು ನಂತರ ಮಾತನಾಡುತ್ತೇನೆ ಎಂದು ಹೇಳಿ ಅಲ್ಲಿಂದ ಬಂದು ಬಿಟ್ಟೆ.
ಆ ನನ್ನ ಮಿತ್ರರಿಗೆ ಉತ್ತರ ಇಷ್ಟೇ.
ಭಾರತದಲ್ಲಿ ಯಾವ ವಿಷಯಗಳೂ ಜಾತಿ ಪರೀದಿಯನ್ನು ದಾಟಿ ಬೆಳೆದಿಲ್ಲಿ. ಅದು ಸಾಮಾಜಿಕ ಇರಬಹುದು, ರಾಜಕೀಯ ಇರಬಹುದು , ಅರ್ಥ ವ್ಯವಸ್ಥೆ, ಶಿಕ್ಷಣ, ಸಂಸ್ಕೃತಿ ಯಾವುದನ್ನೇ ತೆಗೆದುಕೊಂಡರೂ ಅದು ಜಾತಿ ಪರಿಮಿತಿಯಲ್ಲೇ ಹರಡಿಕೊಂಡಿದೆ. ನಮ್ಮ ಸಾಮಾಜಿಕ ಸಂಬಂಧಗಳು, ಭೂ ಸಂಬಂಧಗಳು, ವೈವಾಹಿಕ ಸಂಬಂಧಗಳನ್ನು ತೆಗೆದುಕೊಂಡರೂ ಅವುಗಳ ಬೆಳವಣಿಗೆ ಜಾತಿ ಪರಿದಿಯ ಮಿತಿಯಲ್ಲೇ ಇರುತ್ತದೆ. ಶಾಲೆಯಲ್ಲಿ ಸರ್ವಜನಾಂಗದ ತೋಟದಂತೆ ಕಲೆತು ಬೆರೆತು ಕಲಿಯುವ ಮಕ್ಕಳು ಶಾಲೆ ಮುಗಿದ ತಕ್ಷಣ ಹೊರಡುವುದು ಎಲ್ಲಿಗೆ? ಜಾತಿ ಆಧಾರಿತವಾಗಿ ಪ್ರತೇಕವಾಗಿರುವ ತಮ್ಮ ಜಾತಿ ವಾಸಸ್ಥಾನಗಳಿಗೆ. ಅವು ಎಲ್ಲ ರೀತಿಯಲ್ಲೂ ಪ್ರತ್ಯೇಕ ಜಗತ್ತುಗಳೇ ಆಗಿವೆ. ಒಂದಕ್ಕೊಂದು ತೆರೆದುಕೊಳ್ಳಲು ಸಾಧ್ಯವಾಗದಷ್ಟು ಬಿಗಿಯಾಗಿವೆ. ಮಕ್ಕಳು ಬೆಳೆದಂತೆ ಜಾತಿ ಪ್ರಜ್ಞೆ ಕೂಡ ಬಲಿಯುತ್ತ ಹೋಗುತ್ತದೆ. ಜಾತಿ ಪರೀದಿ ದಾಟಿ ಏನು ಬೆಳೆದಿದೆ ಇಲ್ಲಿ?
ಜಾತಿ ಸಮಸ್ಯೆ ಅಂದಾಕ್ಷಣ ದಲಿತ ಮತ್ತು ಸವರ್ಣೀಯರ ಸಂಘರ್ಷ ಅಂತ ಭಾವಿಸಬೇಕಿಲ್ಲ. ಬ್ರಾಹ್ಮಣ ಒಳ ಪಂಗಡಗಳ ಒಳಗೇ ಮೇಲರಿಮೆಗಾಗಿ ಎಷ್ಟು ಸಂಘರ್ಷ ಇದೆ ಎಂಬುದನ್ನು ನಾವು ತಿಳಿಯಬೇಕು. ವೈಶ್ಯ, ಶೂದ್ರ ಸಮುದಾಯಗಳು ಒಳ ಪಂಗಡಗಳಲ್ಲಿ ತಮ್ಮ ತಮ್ಮ ಶ್ರೇಷ್ಠತೆಗಾಗಿ ನಡೆಸುವ ಕಚ್ಚಾಟಗಳನ್ನು ನಾವು ಗಮನಿಸಬೇಕು. ದಲಿತರ ಒಳ ಪಂಗಡಗಳಲ್ಲಿರುವ ಪ್ರತ್ಯೇಕತೆಗಳನ್ನು ನೋಡಬೇಕು. ಇವೆಲ್ಲವೂ ಭಾರತೀಯರನ್ನೂ ಪ್ರತಿ ವಿಷಯದಲ್ಲೂ ಸಾವಿರಾರು ಪ್ರತ್ಯೇಕ ಸಮುದಾಯಗಳನ್ನಾಗಿ ಬೇರ್ಪಡಿಸಿ ವಿಕಾಸಗೊಳಿಸಿವೆ. ಹೀಗಾಗಿ ಇಲ್ಲಿ ಭೀಕರವಾದ ಅಸಮಾನತೆ ಎಲ್ಲ ಹಂತದಲ್ಲೂ ತಾಂಡವಾಡುತ್ತಿರುವುದರಿಂದ ಇದಕ್ಕೆಲ ಜಾತಿ ವ್ಯವಸ್ಥೆಯೇ ಕಾರಣವಾಗಿರುವುರಿಂದ, ಎಲ್ಲವೂ ಜಾತಿ ಆಧಾರಿತವಾಗಿರುವುದರಿಂದ ನಾನು ವಿಷಯಾಧಾರಿತವಾಗಿ ಮಾತನಾಡುವಾಗ ಜಾತಿ ಬಿಟ್ಟು ಮಾತನಾಡಲು ಸಾಧ್ಯವಿಲ್ಲ.
ಇನ್ನೂ ಬ್ರಾಹ್ಮಣರನ್ನು ದ್ವೇಷ ಮಾಡುತ್ತಿರಿ ಎಂಬುದು. ನಾನು ಎಂದೂ ಜನರನ್ನು ದ್ವೇಷಿಸುವುದಿಲ್ಲ. ನಿಲುವುಗಳನ್ನು ಟೀಕಿಸುವುದು, ವಿರೋಧಿಸುವುದು ದ್ವೇಷವಾಗುವುದಿಲ್ಲ. ಆಗಬಾರದು. ಹಾಗೇ ನೋಡಿದರೆ ನಾನು ಜಾತಿ ವ್ಯವಸ್ಥೆ ಬಗ್ಗೆ ಮಾತನಾಡುವಾಗ ಹೆಚ್ಚು ವರ್ತಮಾನದ ವಾಸ್ತವದ ಬಗ್ಗೆ ಮಾತನಾಡುತ್ತೇನೆ. ಅದರ ಬಗ್ಗೆ ಮಾತನಾಡುವಾಗ ನಾನು ಹೆಚ್ಚು ಟೀಕಿಸಿದ್ದು ಶೂದ್ರ ಸಮುದಾಯಗಳನ್ನು. ಜಾತಿ ಕ್ರೌರ್ಯ, ಮತ್ತು ಆಚರಣೆಯಲ್ಲಿ ಯಾರು ಮುಂದಿದ್ದಾರೆ ಎಂಬ ಕನಿಷ್ಠ ತಿಳುವಳಿಕೆ ನನಗಿದೆ. ದಲಿತರೊಂದಿಗೆ ನಡೆದಿರುವ, ನಡೆಯುತ್ತಿರುವ ಅಂತರ್ಜಾತಿ ಮದುವೆಗಳ ಸಂಬಂಧಗಳನ್ನು ಅತಿ ಹೆಚ್ಚು ಉಳಿಸಿಕೊಳ್ಳುತ್ತಿರುವುದು ಬ್ರಾಹ್ಮಣರೇ. ಅತಿ ಕ್ರೂರವಾಗಿ ಅಂತ್ಯಗೊಳ್ಳುತ್ತಿರುವ ಸಂಬಂಧಗಳು ಶೂದ್ರರೊಂದಿಗಿನ ಸಂಬಂಧಗಳೇ ಆಗಿವೆ. ಆದಾಗ್ಯೂ ಕೂಡ ಜಾತಿ ವ್ಯವಸ್ಥೆ ಬಗ್ಗೆ ಮಾತನಾಡುವಾಗ ಅದರ ಹುಟ್ಟು, ಬೆಳವಣಿಗೆ, ಆಚರಣೆ ಕುರಿತು ಮಾತನಾಡಲೇ ಬೇಕು. ಅಲ್ಲಿ ನಾವು ಬ್ರಾಹ್ಮಣರ ಕುರಿತು ಅಲ್ಲದಿದ್ದರೂ ಬ್ರಾಹ್ಮಣ್ಯದ ಕುರಿತು ಮಾತನಾಡಲೇ ಬೇಕಾಗುತ್ತದೆ. ಅದು ಆ ಸಮುದಾಯವೇ ಹುಟ್ಟು ಹಾಕಿದಂಥ ಒಂದು ಸಿದ್ದಾಂತ. ಅದರ ಹುಟ್ಟನ್ನು ಅವರಿಂದ ಬೇರ್ಪಡಿಸಿ ಮಾತನಾಡಲು ಸಾಧ್ಯವಿಲ್ಲ ಹಾಗಾಗಿ ಬ್ರಾಹ್ಮಣ್ಯದ ಹುಟ್ಟು ಬೆಳವಣಿಗೆ ಬಗ್ಗೆ ಆ ಸಮುದಾಯವನ್ನು ಬಿಟ್ಟು ಮಾತನಾಡಲು ಸಾಧ್ಯವಿಲ್ಲ. ಅದರ ಅರ್ಥ ಸಮುದಾಯವೊಂದು ಇತಿಹಾಸದ ಒಂದು ಕಾಲಘಟ್ಟದಲ್ಲಿ ನಿರ್ಮಿಸಿದ ವ್ಯವಸ್ಥೆಯೊಂದಕ್ಕೆ ಆ ಸಮುದಾಯದಿಂದ ಬಂದಿರುವ ಈಗಿನ ಜನರೆಲ್ಲರೂ ಪ್ರಾಯಶ್ಚಿತ ಪಡಬೇಕು ಅಥವಾ ಅದರ ಜವಾಬ್ದಾರಿ ಹೊರಬೇಕು ಎಂಬುದು ಅತ್ಯಂತ ತರ್ಕವಿಲ್ಲದ ಮಾತು. ಆದರೆ ಅದರ ಹುಟ್ಟನ್ನು ಕುರಿತು ಮಾತನಾಡುವಾಗ ಆ ಸಮುದಾಯವನ್ನು ಗುರುತಿಸಲೇ ಬೇಕಾಗುತ್ತದೆ. ಈಗಲೂ ಆ ಸಮುದಾಯದ ಜನ ತಮ್ಮ ಪೂರ್ವಜರು ಮಾಡಿದ್ದು ಸರಿಯಾದದ್ದು, ಅದರ ಫಲಾನುಭವ ತಮ್ಮ ಹಕ್ಕು ಎಂದು ಭಾವಿಸುವುದಾದರೆ ಖಂಡಿತ ಅಂತಹ ವ್ಯಕ್ತಿಗಳ ಮನಸ್ಥಿತಿಯನ್ನು ನಾನು ವಿರೋಧಿಸುತ್ತೇನೆ.
ಇದನ್ನೂ ಓದಿ: ಜಾತಿ ಮತ್ತು ಮೀಸಲಾತಿ ಬಗ್ಗೆ ನಟಿ ಕಂಗನಾ ರಣಾವತ್ಗೊಂದು ಪತ್ರ
ಮಯನ್ಮಾರದ ಬೌದ್ಧರು ರೋಹಿಂಗ್ಯ ಮುಸಲ್ಮಾನರನ್ನು ನೆಡಸಿಕೊಂಡ ಅಮಾನವೀಯ ರೀತಿಯನ್ನು, ಶ್ರೀಲಂಕಾದ ಬೌದ್ಧರು ನಡೆಸಿದ ತಮಿಳರ ನರಹತ್ಯೆಯನ್ನೂ ನಾನು ಮನುಷ್ಯ ಸಮಾಜ ನಡೆಸಬಾರದ ಕೃತ್ಯಗಳೆಂದೆ ಖಂಡಿಸುತ್ತೇನೆ. ಹಾಗೇ ಬ್ರಾಹ್ಮಣ್ಯವನ್ನೂ, ಒಂದು ಕಾಲಘಟ್ಟದಲ್ಲಿ ಜಾತಿ ತಾರತಮ್ಯವನ್ನು ಹುಟ್ಟು ಹಾಕಿ ಜಾರಿಗೆ ತಂದ ಬ್ರಾಹ್ಮಣರ ಕೃತ್ಯವನ್ನೂ ಕೂಡ ವಿರೋಧಿಸುತ್ತೇನೆ. ನನ್ನ ಸಮುದಾಯದ ಮುಂದಿನ ತಲೆಮಾರಿನ ಜನರು ಒಂದು ವೇಳೆ ಮುಖ್ಯವಾಹಿನಿಯಲ್ಲಿ ಬೆರೆತು ಹೋಗಿದ್ದರೂ, ಜಾತಿ ಅಸ್ಥಿತ್ವ ಕಾಣೆಯಾದರೂ, ಅವರು ಇತಿಹಾಸದ ಪುಟಗಳಲ್ಲಿ, ದೇಶದಲ್ಲಿ ಯಾರೂ ಮುಟ್ಟಿಸಿಕೊಳ್ಳದ, ಊರ ಹೊರಗಿಟ್ಟ, ಬದುಕುವ ಎಲ್ಲ ಅವಕಾಶಗಳನ್ನೂ ನಿರಾಕರಿಸಿ ಅತ್ಯಂತ ಕೀಳು ದರ್ಜೆಗೆ ತಳ್ಳಲ್ಪಟ್ಟಂಥ ಜನಸಮುದಾಯಗಳು ಇದ್ದವು ಎಂದು ಓದಿಕೊಳ್ಳಬೇಕಾಗಿ ಬಂದಾಗ, ಆ ಸಮುದಾಯಗಳು ಯಾವವು ಎಂದರೆ ಏನು ಹೇಳುತ್ತೀರಿ? ಆಗ ದಲಿತ ಸಮುದಾಯಗಳನ್ನೇ ಗುರುತಿಸಬೇಕಲ್ಲವೇ? ಆಗ ನಮ್ಮ ಪೀಳಿಗೆ, ಒಂದು ವೇಳೆ ತಮ್ಮ ಸಮುದಾಯಗಳು ಹೀಗೆ ಬದುಕಿದ್ದವು ಎಂಬುದು ತಮ್ಮ ಗೌರವಕ್ಕೆ ಧಕ್ಕೆ ತರುತ್ತದೆ ಎಂದು ವಿರೋಧಿಸಿದರೆ ಇತಿಹಾಸದ ವಾಸ್ತವವನ್ನು ಬದಲಿಸಿ ಬರೆಯಲು ಸಾಧ್ಯವೇ?.
– ಮಹಾಲಿಂಗಪ್ಪ ಆಲಬಾಳ. (ಯುವ ಬರಹಗಾರರು, ಸಾಮಾಜಿಕ ಕಾರ್ಯಕರ್ತರು. ಅಭಿಪ್ರಾಯಗಳು ವಯಕ್ತಿಕವಾದವು.)
ಇದನ್ನೂ ಓದಿ: ಭಾರತದ ಜಾತಿ ವೃಕ್ಷದ ವಿಷಕಾರಿ ಹಣ್ಣು ಖೈರ್ಲಾಂಜಿಯನ್ನು ಮರೆಯಬಾರದು…
Also Read: Mob of 200 People from Dominant Castes Attack Dalits in Ainlasari, Odisha


