ಪ್ರೀತಿಯ ಕಂಗನಾ,
ಈ ಪತ್ರವು ನಿನಗೆ ತಲುಪುತ್ತದೆ ಎಂದು ನಾನು ಭಾವಿಸುತ್ತೇನೆ. ಆದ್ದರಿಂದ ನಿನ್ನ ಟ್ವೀಟ್ಗೆ ಪ್ರತಿಕ್ರಿಯಿಸಲು ಬಯಸಿದ್ದೇನೆ.
ಆಗಸ್ಟ್ 23 ರಂದು ’ದಿ ಪ್ರಿಂಟ್’ ನ ಸಂಸ್ಥಾಪಕ ಶೇಖರ್ ಗುಪ್ತರವರು ಪತ್ರಕರ್ತ ದಿಲೀಪ್ ಮಂಡಲ್ರವರ ಲೇಖನ ‘oprah winfrey sent a book on caste to 100 US CEO’s but Indians still wont talk about it’ ಅನ್ನು ಹಂಚಿಕೊಂಡಿದ್ದರು.
ನೀನದಕ್ಕೆ ಪ್ರತಿಕ್ರಿಯಿಸುತ್ತಾ ಜಾತಿಪದ್ಧತಿಯನ್ನು ಆಧುನಿಕ ಭಾರತೀಯರು ತಿರಸ್ಕರಿಸಿದ್ದು, ಅದನ್ನು ಕಾನೂನು ಮತ್ತು ಸುವ್ಯವಸ್ಥೆ ಒಪ್ಪಿಕೊಳ್ಳುವುದಿಲ್ಲವೆಂಬುದು ಸಣ್ಣ ಪಟ್ಟಣದ ಪ್ರತಿಯೊಬ್ಬರಿಗೂ ತಿಳಿದಿದೆ ಹಾಗೂ ಅದು ಕೆಲವರಿಗಷ್ಟೇ ವಿಕೃತಿ ಆನಂದವನ್ನು ನೀಡುತ್ತಿದೆ. ನಮ್ಮ ಸಂವಿಧಾನ ಮಾತ್ರ ಮೀಸಲಾತಿಯ ವಿಷಯದಲ್ಲಿ ಅದನ್ನು ಹಿಡಿದಿಟ್ಟುಕೊಂಡಿದೆ, ಅದನ್ನು ಹೋಗಲು ಬಿಟ್ಟು ಅದರ ಬಗ್ಗೆ ಮಾತನಾಡೋಣ ಎಂದು ಬರೆದಿರುವೆ. ಮುಂದುವರೆದು ವಿಶೇಷವಾಗಿ ವೈದ್ಯರು, ಇಂಜಿನಿಯರ್, ಪೈಲಟ್ ವೃತ್ತಿಗಳಿಗೆ ಹೆಚ್ಚು ಅರ್ಹರಾದ ವ್ಯಕ್ತಿಗಳು ಮೀಸಲಾತಿಯಿಂದಾಗಿ ಕಷ್ಟಗಳನ್ನು ಎದುರಿಸುತ್ತಿದ್ದಾರೆ. ಒಂದು ರಾಷ್ಟ್ರವಾಗಿ ನಾವು ಕಳಪೆ ಮತ್ತು ಚುರುಕುತನ ಎರಡರಿಂದಲೂ ಬಳಲುತ್ತಾ ಇಷ್ಟವಿಲ್ಲದಿದ್ದರೂ ಯುನೈಟೆಡ್ ಸ್ಟೇಟ್ಸ್ಗೆ ಓಡಿಹೋಗುತ್ತಿದ್ದೇವೆ.. ನಾಚಿಕೆಗೇಡು.. ಎಂದಿರುವೆ.
ನಾನು ದಲಿತ ಸಮುದಾಯದಿಂದ ಬಂದವಳಾಗಿದ್ದೇನೆ. ನನ್ನ ಕುಟುಂಬದಲ್ಲಿ ವಿದ್ಯಾಭ್ಯಾಸದ ಜೊತೆಗೆ ಎಂ.ಫಿಲ್ ಮಾಡಿದವರಲ್ಲಿ ನಾನೇ ಮೊದಲಿಗಳು. ನನ್ನ ಪೋಷಕರು ಪೌರ ಕಾರ್ಮಿಕರು. ಈಗಲೂ ನನ್ನ ತಾಯಿ ಅದನ್ನು ಮುಂದುವರೆಸಿದ್ದಾರೆ. ಕೆಂಡದಂತೆ ಉರಿಯುತ್ತಿರುವ ಬೇಸಿಗೆಯ ಬಿಸಿಲಿನಲ್ಲಿ ಅವರು ಬಹಳಷ್ಟು ಮರಳು ಮತ್ತು ಕಲ್ಲುಗಳನ್ನು ಕಟ್ಟಡದ ಕೆಲಸಗಳಿಗಾಗಿ ಹೊರುತ್ತಾರೆ. ನನ್ನ ತಂದೆ ತಾಯಿಯು ವಿದ್ಯಾಭ್ಯಾಸ ಮಾಡಿದವರಲ್ಲ, ಆದರೆ ತಮ್ಮ ಮಕ್ಕಳಿಗಾಗಿ ವಿದ್ಯೆಯನ್ನು ಕಲಿಸಲು ಯಾವುದಾದರೂ ಒಂದು ದಾರಿಯನ್ನು ಖಚಿತವಾಗಿ ಹುಡುಕಿಕೊಡುತ್ತಾರೆ.
ನನ್ನ ಒಡಹುಟ್ಟಿದವರಲ್ಲಿ ನಾನೇ ಹೆಚ್ಚು ಓದಿರುವುದು. ಚಿಕ್ಕವಯಸ್ಸಿನಲ್ಲಿಯೇ ನನನಗೆ ಭರವಸೆಯಿತ್ತು, ಎಲ್ಲಿಯವರೆಗೆ ಅವಕಾಶವಾಗುತ್ತದೆಯೋ ಅಲ್ಲಿಯವರೆಗೆ ನನ್ನ ವಿದ್ಯಾಭ್ಯಾಸವನ್ನು ಮುಂದುವರೆಸುತ್ತೇನೆಂದು. ಆದರೆ ದಿನಗಳು ಕಳೆಯುತ್ತಾ ನನಗೆ ತಿಳಿಯಿತು. ನನ್ನ ಜೀವನದಲ್ಲಿ ಏರುತ್ತಿರುವ ಏಣಿಯು ಮುಳ್ಳು ಹಾಗೂ ಸಿಕ್ಕುಗಳಿಂದ ಕೂಡಿಕೊಂಡಿದೆ ಎಂದು. ನೀನು ನಂಬಿರುವೆ, ಆಧುನಿಕ ಭಾರತೀಯರು ಜಾತಿಪದ್ಧತಿಯನ್ನು ನಿರಾಕರಿಸಿದ್ದಾರೆಂದು. ಆದರೆ ಇಂದಿಗೂ ಕೂಡ ಪ್ರಗತಿಪರ-ಉದಾರವಾದಿ ಅಂತಾರಾಷ್ಟ್ರೀಯ ಮಾದ್ಯಮ ಸಂಸ್ಥೆಗಳಲ್ಲಿನ ಆಧುನಿಕ ಭಾರತೀಯರು ಜಾತಿಪದ್ಧತಿಯನ್ನು ಆಚರಿಸುತ್ತಾರೆ. ಒಂದೇ ತಂಡದಲ್ಲಿ ಕೆಲಸ ಮಾಡುತ್ತಿದ್ದರೂ ಸಹ ಅವರು ನನ್ನನ್ನು ಸಮಾನಳಾಗಿ ಕಾಣಲಾರರು. ಆದ್ದರಿಂದ ಅಲ್ಲಿ ನಾನು ಹೆಚ್ಚು ಕಾಲ ಕೆಲಸ ಮಾಡಲಾರೆ. ಏಕೆಂದರೆ ನಾನು ’ದಲಿತೆ’ ಎಂಬುದನ್ನು ನಂಬುತ್ತೇನೆ.
ಸಿನೆಮಾ ರಂಗದಲ್ಲಿ ಒಂದೇ ಒಂದು ತಳಸಮುದಾಯದ ಎದ್ದುಕಾಣುವ ಹೆಸರಿಲ್ಲ. ಆಧುನಿಕ ಭಾರತೀಯರು ಜಾತಿಪದ್ಧತಿಯನ್ನು ತಿರಸ್ಕರಿಸಿದ್ದರೆ ಅದೇಕೆ ಹೀಗಾಗುತ್ತಿತ್ತು?
ಕಂಗನಾ, ಜಾತಿಯನ್ನು ತಿರಸ್ಕರಿಸುವುದು ಎಂದರೇನು? ಇದನ್ನೊಮ್ಮೆ ಅರ್ಥ ಮಾಡಿಕೊಳ್ಳೋಣ. ಮೊದಲು ನೀನು ನಿನ್ನ ರಜಪೂತ ಹಿರಿಮೆಯನ್ನು ತಿರಸ್ಕರಿಸು. ನಿನ್ನಂತೆ ತಮ್ಮ ಅಸ್ಮಿತೆಗಳಿಗೆ ಹೆಮ್ಮೆ ಪಡುವವರು ಮತ್ತೊಂದು ಸಮುದಾಯದ ಹೆಸರನ್ನೇ ಬೈಗುಳವನ್ನಾಗಿ ಬಳಸುತ್ತಿರುತ್ತಾರೆ. ನಿನಗಿದು ನೆನಪಿದೆಯೇ ಸಲ್ಮಾನ್ ಖಾನ್, ಶಿಲ್ಪಾ ಶೆಟ್ಟಿ, ಸೋನಾಕ್ಷಿ ಸಿನ್ಹಾ ಮತ್ತು ಯುವರಾಜ್ ಸಿಂಗ್ನಂತಹ ಆಧುನಿಕ ಭಾರತೀಯರು ’ಭಂಗಿ’ಯಂತೆ ಕಾಣುತ್ತೇನೆಂದು ಹೇಳಿಕೊಂಡಿದ್ದರು. ನಿಜವಾಗಿಯೂ ಆ ಹೆಸರಿನ ಜನರಿದ್ದಾರೆ. ಆ ಕಾರಣಕ್ಕಾಗಿಯೇ ಆಧುನಿಕ ಭಾರತೀಯರಿಂದ ಹೀಗೆ ನಿಂದನೆಗೊಳಗಾಗುತ್ತಾರೆ.
ಇಂತಹ ಘಟನೆಗಳು ಖಾಸಗಿ ಕ್ಷೇತ್ರದ ತುಂಬಾ ಹಬ್ಬಿಕೊಂಡಿದೆ. ಭಾರತದ ಸುಪ್ರಿಂ ಕೋರ್ಟಿನ 31 ನ್ಯಾಯಾಧೀಶರಲ್ಲಿ ಒಬ್ಬರು ಮಾತ್ರ ದಲಿತರಿದ್ದಾರೆ. ಇಬ್ಬರು ಹಿಂದುಳಿದ ವರ್ಗದವರಿದ್ದಾರೆ. ಒಬ್ಬ ಆದಿವಾಸಿಯೂ ಇಲ್ಲ. ಪ್ರಮುಖ ಮಾಧ್ಯಮ ರಂಗದಲ್ಲಿ ಒಬ್ಬರೂ ದಲಿತ ಸಂಪಾದಕರಿಲ್ಲ. ನಾವು ಕಾಲಿಡಲು ಇರುವ ಸ್ಥಳಾವಕಾಶವೆಂದರೆ ಸರ್ಕಾರಿ ಕ್ಷೇತ್ರ ಒಂದೇ. ಏಕೆಂದರೆ ಅಲ್ಲಿ ಮೀಸಲಾತಿ ಇದೆ.
ನವ ದೆಹಲಿಯಲ್ಲಿ ಬೆಳೆದು ದೊಡ್ಡವಳಾಗಿರುವ ನಾನು ನನ್ನ ಸ್ವಂತ ಅನುಭವದಿಂದ ಮೀಸಲಾತಿಯ ಪ್ರಾಮುಖ್ಯತೆಯನ್ನು ಹೇಳಬಲ್ಲೆ. ಶಿಕ್ಷಣ ಪಡೆಯುವುದಿರಲಿ ಅಥವಾ ಮೀಸಲಾತಿ ಸೌಲಭ್ಯಗಳನ್ನು ಗಳಿಸುಕೊಳ್ಳುವುದು ಒತ್ತಟ್ಟಿಗಿರಲಿ, ಕೋಟಿಗಟ್ಟಲೆ ದಲಿತ ಮತ್ತು ಹಿಂದುಳಿದ ಜಾತಿಗಳ ಜನರು ಸವರ್ಣೀಯ ಮೇಲ್ಜಾತಿ ಜನರೆದುರು ಮಾತನಾಡಲೂ ಸಹ ಹೆದರುತ್ತಾರೆ.
ಮಿಸ್ ರಣಾವತ್, ನೀವು ಎಂದಾದರೂ ನಿಮ್ಮ ಮನೆಯ ಚರಂಡಿಯನ್ನು ಸ್ವಚ್ಚಗೊಳಿಸುವವರ ಜಾತಿ ಕೇಳಿದ್ದೀರಾ? ನಾನು ಹೇಳುತ್ತೇನೆ ಕೇಳಿ, ಅವರೆಲ್ಲರೂ ದಲಿತರೇ. ತಮ್ಮನ್ನು ತಾವು ಮೇಲ್ಜಾತಿ ಎಂದುಕೊಳ್ಳುವವರು ನಿನಗಾಗಿ ಈ ಕೆಲಸವನ್ನು ಏಕೆ ಮಾಡುವುದಿಲ್ಲ. ಆ ಅಮಾನವೀಯ ಕೆಲಸಗಳಲ್ಲಿ ಏಕೆ ಬದುಕಿ ಸಾಯುವುದಿಲ್ಲ? ನಮ್ಮ ಸಮಾಜದ ಇಂತಹ ನೈಜತೆಗಳನ್ನು ತಿಳಿಯುವುದು ಕಷ್ಟಸಾಧ್ಯ.
ಇದನ್ನೂ ಓದಿ: ಕಂಗನಾ, ಪದ್ಮಶ್ರೀ ಮತ್ತು ತುಕ್ಡೇಗ್ಯಾಂಗ್
ಈಗಲೂ ನಿನಗೆ ಮನವರಿಕೆಯಾಗದಿದ್ದರೆ, ಯಾವುದಾದರೂ ದಿನ ಪತ್ರಿಕೆಯನ್ನು ಆಯ್ದುಕೋ. ನಾನು ಖಾತರಿ ನೀಡುತ್ತೇನೆ. ನಿನಗೆ ಒಂದಾದರೂ ಜಾತಿಯಾಧಾರಿತ ದೌರ್ಜನ್ಯದ ವರದಿ ಸಿಗುತ್ತದೆ. ಜಾತಿ ಕಾರಣಕ್ಕೆ ಕೊಲೆಯಾಗುತ್ತವೆ. ಅದರಲ್ಲಿ ಕೆಲವು ’ಸಾಂಸ್ಥಿಕ ಕೊಲೆಗಳು’. ವಿದ್ಯಾರ್ಥಿಗಳಾದ ರೋಹಿತ್ ವೇಮುಲಾ ಹಾಗೂ ಪಾಯಲ್ ತಾಡ್ವಿ ಇಬ್ಬರನ್ನೂ ಜಾತೀಯ ಸಮಾಜ ಆತ್ಮಹತ್ಯೆಗೆ ದೂಡಿತು. ನಾನು ಇವರ ಹೆಸರಿನೊಂದಿಗೆ ಇನ್ನಷ್ಟು ಸೇರಿಸುವ ಹಾದಿಯಲ್ಲಿದ್ದೇನೆ. ಆಧುನಿಕ ಭಾರತೀಯರು ನಮ್ಮನ್ನು ಕೀಳಾಗಿ ನೋಡುವ ಹಾಗೂ ಕಿರುಕುಳ ನೀಡುವ ಒಂದು ಅವಕಾಶವನ್ನೂ ತಪ್ಪಿಸಿಕೊಳ್ಳುವುದಿಲ್ಲ. ಅದಾಗ್ಯೂ ಇಂತಹ ಧಮನಗಳನ್ನು ಮೀರಿ ಬೆಳೆದಾಗಲೂ ಸಮಾಜ ನಮ್ಮಿಂದ ಆ ಯಶಸ್ಸನ್ನು ಕಿತ್ತುಕೊಳ್ಳಲು ಸಂಚು ರೂಪಿಸುತ್ತಲೇ ಇರುತ್ತದೆ.
ಇತ್ತೀಚೆಗೆ ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ರವರ ‘Waiting for VISA’ ವನ್ನು ಓದಿದೆ. ಅದರಲ್ಲಿ ಕೇವಲ ಜಾತಿಯ ಕಾರಣಕ್ಕೆ ಅವರ ಪದವಿಗಳು, ಅವರ ಅರ್ಹತೆ, ಅವರ ಶಿಕ್ಷಣ, ಅವರ ಸಾಮರ್ಥ್ಯ ಎಲ್ಲವನ್ನೂ ಗುಡಿಸಿ ಹಾಕಲಾಗಿತ್ತು. ಆ ಖಚಿತ ಅನುಭವಗಳೇ ಸಂವಿಧಾನದಲ್ಲಿ ಮೀಸಲಾತಿಯನ್ನು ಪ್ರತಿಷ್ಠಾಪಿಸಿತು. ಹಾಗಿಲ್ಲದಿದ್ದರೆ ತಳಸಮುದಾಯದವರು ಎಂದಿಗೂ ಮುನ್ನಡೆಯಲು ಸಾಧ್ಯವಾಗುತ್ತಿರಲಿಲ್ಲ. ನಾನು ಇಷ್ಟು ದೂರ ಇಲ್ಲಿಯವರೆಗೂ ಬಂದಿರುವುದಕ್ಕೆ ಕಾರಣ ಮೀಸಲಾತಿಯಾಗಿದೆ. ಅವರಿದ್ದಿದ್ದಕ್ಕೆ ನಾವಿಂದು ಬದುಕಿದ್ದೇವೆ.
ಸಮಾಜ ಹೇಳುತ್ತದೆ, ನನ್ನ ಸಮುದಾಯದವರಿಗೆ ಕನಸು ಕಾಣುವ ಹಕ್ಕಿಲ್ಲವೆಂದು. ಅದಾಗ್ಯೂ ನಾವು ಶಿಕ್ಷಣ ಪಡೆದು ಒಳ್ಳೆಯ ಜೀವನ ಕಟ್ಟಿಕೊಂಡರೆ ’ಆಧುನಿಕ’ ಭಾರತೀಯರು ನಮ್ಮ ಅವನತಿಗೆ ಹವಣಿಸುತ್ತಿರುತ್ತಾರೆ. ನಾನೊಬ್ಬಳು ಬಲಿಪಶು, ಈ ಸತ್ಯ ನುಡಿಯಲು ನನಗೆ ಭಯವಿಲ್ಲ. ಏಕೆಂದರೆ ಆ ಶಕ್ತಿಯನ್ನು ನಾನು ಬಾಬಾಸಾಹೇಬರ ಸಂವಿಧಾನದಿಂದ ಪಡೆದಿದ್ದೇನೆ.
ಮೀಸಲಾತಿಯು ಕೊನೆಗೊಳ್ಳಬೇಕೆಂದರೆ, ನಿನ್ನ ಮತ್ತು ನಿನ್ನಂತಹ ಮೇಲ್ಜಾತಿಯೆಂದು ಕರೆಯಲ್ಪಡುವವರ ಬದಲಾವಣೆಯಿಂದ ಮಾತ್ರ. ನಿನಗೆ ತಲುಪಿರುವ ಎಲ್ಲಾ ಪ್ರತಿಕ್ರಿಯೆಗಳು ನಿನಗಿದರ ಬಗ್ಗೆ ಯೋಚಿಸಲು ಸಹಾಯ ಮಾಡುತ್ತವೆ ಎಂದು ಭಾವಿಸುತ್ತೇನೆ.
ಇಂತಿ ನಿನ್ನ
ಮೀನಾ ಕೊತ್ವಾಲ್, (ದೆಹಲಿ ಮೂಲದ ಸ್ವತಂತ್ರ ಪತ್ರಕರ್ತೆ)
ಕನ್ನಡಾನುವಾದ : ಸಹನ ಎಸ್, ಸಂಜನ ಎಸ್. ಮೌರ್ಯ
ಕೃಪೆ: The Wire
ಇದನ್ನೂ ಓದಿ: ಭಾರತದ ಜಾತಿ ವೃಕ್ಷದ ವಿಷಕಾರಿ ಹಣ್ಣು ಖೈರ್ಲಾಂಜಿಯನ್ನು ಮರೆಯಬಾರದು…