Homeಮುಖಪುಟಭಾರತದ ಜಾತಿ ವೃಕ್ಷದ ವಿಷಕಾರಿ ಹಣ್ಣು ಖೈರ್ಲಾಂಜಿಯನ್ನು ಮರೆಯಬಾರದು...

ಭಾರತದ ಜಾತಿ ವೃಕ್ಷದ ವಿಷಕಾರಿ ಹಣ್ಣು ಖೈರ್ಲಾಂಜಿಯನ್ನು ಮರೆಯಬಾರದು…

ಭಾರತದಲ್ಲಿ ದಲಿತರ ಮೇಲೆ ಸರಿಸುಮಾರು ಹದಿನೆಂಟು ನಿಮಿಷಗಳಿಗೊಂದು ದೌರ್ಜನ್ಯಗಳು ನಡೆಯುತ್ತಿವೆ. ಪ್ರತಿ ದಿನ ಸರಾಸರಿ ಮೂರು ದಲಿತ ಮಹಿಳೆಯರ ಮೇಲೆ ಅತ್ಯಾಚಾರವಾಗುತ್ತದೆ. ದಲಿತರ ಎರಡು ಮನೆಗಳಿಗೆ ಬೆಂಕಿ ಹಚ್ಚಲಾಗುತ್ತದೆ.

- Advertisement -
- Advertisement -

ಆನಂದ್ ತೇಲ್ತುಂಬ್ಡೆ ವ್ರಣವಾಗಿರುವ ಭಾರತೀಯ ಸಮಾಜದ ಹೃದಯವನ್ನು ಬೆಳಕಿಗೆ ತಂದಿದ್ದಾರೆ ಎಂದು ಖೈರ್ಲಾಂಜಿ ಪುಸ್ತಕದ ಬಗ್ಗೆ ಆರುಂಧತಿ ರಾಯ್ ಹೇಳಿದ್ದರು. ಮಹಾರಾಷ್ಟ್ರದ ಖೈರ್ಲಾಂಜಿಯಲ್ಲಿ ಆದ ಜಾತಿ ದೌರ್ಜನ್ಯದ ವಿವರ ಮತ್ತು ವಿಶ್ಲೇಷಣೆಯನ್ನು ಒಳಗೊಂಡಿರುವ ಪುಸ್ತಕವಿದು. 2006 ಸೆಪ್ಟೆಂಬರ್ 29ರಂದು ಆದ ಹೀನಾಯ ಘಟನೆಯೊಂದರ ದಾಖಲೆ ಮಾತ್ರವಲ್ಲ, ನಮ್ಮ ಭಾರತದಲ್ಲಿ ಅಲ್ಲಲ್ಲಿ, ಆಗ್ಗಿಂದಾಗ್ಗೆ ಘಟಿಸುತ್ತಲೇ ಇರುವ ಸಂಗತಿಗಳ ಉಪಮಾ ರೂಪಕ ಇದು. ಕಂಬಾಲಪಲ್ಲಿಯಲ್ಲಿ ದಲಿತರ ಇಡೀ ಕುಟುಂಬವನ್ನೇ ಸುಟ್ಟರು. ಸಾಕ್ಷ್ಯಗಳಿಲ್ಲವೆಂದು ಆರೋಪಿಗಳೆಲ್ಲಾ ಬಿಡುಗಡೆಗೊಂಡು ಏನೂ ನಡೆದೇ ಇಲ್ಲವೆಂಬಂತೆ ನಡೆದಾಡಿಕೊಂಡಿದ್ದಾರೆ. ಈ ದೌರ್ಜನ್ಯದಲ್ಲಿ ಸುಟ್ಟುಕರಕಲಾದವರು ಯಾವ ನ್ಯಾಯವನ್ನೂ ಪಡೆಯದೇ ಜೀವ ಮತ್ತು ಜೀವನಗಳು ವ್ಯರ್ಥವಾಗಿ ಬೂಧಿಯಾಗಿ ಹೋದವು.

ದಲಿತನೊಬ್ಬ ತನ್ನ ಮದುವೆಯಲ್ಲಿ ಕುದುರೆಯನ್ನೇರಿ ಮೆರವಣಿಗೆ ಹೊರಟನೆಂದು, ದಲಿತ ಬಾಲಕನೊಬ್ಬ ಪ್ರಸಾದದ ಪಾತ್ರೆ ತಗುಲಿಸಿದನೆಂದು, ದೇವಸ್ಥಾನದೊಳಗೆ ದಲಿತ ವೃದ್ಧನೊಬ್ಬ ಪ್ರವೇಶಿಸಿದನೆಂದು ಸುಟ್ಟು ಕೊಂದ, ಬಡಿದು ಕೊಂದ ಪ್ರಕರಣಗಳು ಯಾವುದೋ ಓಬೀರಾಯನ ಕಾಲದ ಮೌಖಿಕ ಇತಿಹಾಸವಲ್ಲ. ಇದೇ ವರ್ಷ ವರದಿಯಾದ ಪ್ರಕರಣಗಳು. ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ ದಾಖಲಿಸುವಂತೆ, ಲೆಕ್ಕಕ್ಕೆ ಅಂಕಿ ಅಂಶಗಳು ಸಿಗುವಂತೆ ಭಾರತದಲ್ಲಿ ದಲಿತರ ಮೇಲೆ ಸರಿಸುಮಾರು ಹದಿನೆಂಟು ನಿಮಿಷಗಳಿಗೊಂದು ದೌರ್ಜನ್ಯಗಳು ನಡೆಯುತ್ತಿವೆ. ಪ್ರತಿ ದಿನ ಸರಾಸರಿ ಮೂರು ದಲಿತ ಮಹಿಳೆಯರ ಮೇಲೆ ಅತ್ಯಾಚಾರವಾಗುತ್ತದೆ. ದಲಿತರ ಎರಡು ಮನೆಗಳಿಗೆ ಬೆಂಕಿ ಹಚ್ಚಲಾಗುತ್ತದೆ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡೇ ಆನಂದ್ ಸವಿಸ್ತಾರವಾಗಿ ಖೈರ್ಲಾಂಜಿಯನ್ನು ವಿಶ್ಲೇಷಿಸಿದ್ದಾರೆ.

ಖೈರ್ಲಾಂಜಿಯಲ್ಲಿ ಆದದ್ದೇನು? ಖೈರ್ಲಾಂಜಿ ಮಹಾರಾಷ್ಟ್ರದ ನಾಗಪುರದ ಸಮೀಪವಿರುವ ಒಂದು ಹಳ್ಳಿ. ಸವರ್ಣೀಯ ಭ್ರಮೆಯ ಶೂದ್ರರು ದಲಿತ ಕುಟುಂಬದ ಮೇಲೆ ದಾಳಿ ಮಾಡಿ ನಡೆಸಿದ ಕ್ರೂರ ದೌರ್ಜನ್ಯದ ಕತೆಯಿದು. ಭೈಯಾಲಾಲ್ ಭೋತ್ಮಾಂಗೆ, ಹೆಂಡತಿ ಸುರೇಖಾ, ಆಕೆಯ ಮಗಳು ಪ್ರಿಯಾಂಕ, ಇಬ್ಬರು ಗಂಡು ಮಕ್ಕಳು ರೋಷನ್ ಮತ್ತು ಸುಧೀರ್ ಇರುವಂತಹ ಐದು ಜನರ ಕುಟುಂಬ. ದುಡಿಮೆಯಲ್ಲಿ ಹಣ ಉಳಿಸಿ, ಸೇರಿಸಿ, ಶಿಕ್ಷಣ ಪಡೆಯುತ್ತಾ ಸ್ವಾಭಿಮಾನದಲ್ಲಿ ಬದುಕುತ್ತಿದ್ದ ಅವರು ತಮ್ಮದೇ ಆದ ಜಮೀನನ್ನು ಹೊಂದಿದ್ದರು. ಅವರ ಆ ಜಮೀನಿನಲ್ಲಿ ತಾವು ನಡೆದಾಡೆವ ದಾರಿಯನ್ನು ರೂಪಿಸಿಕೊಳ್ಳುವ ನೆಪದಲ್ಲಿ ಸವರ್ಣೀಯರು ಕಿರುಕುಳಗಳನ್ನು ಕೊಡುತ್ತಿದ್ದರು. ಅದರ ಜೊತೆಗೆ ಭಾರತದಲ್ಲಿ ಅಸ್ಪೃಷ್ಯರನ್ನು ನಡೆಸಿಕೊಳ್ಳುವ ಸಾಂಪ್ರದಾಯಕ ಅಪಮಾನಗಳಿಂದಲೂ ಇವರೇನು ಹೊರತಾಗಿರಲಿಲ್ಲ. ಇವರ ಜಮೀನು ವ್ಯಾಜ್ಯವು ಕೋರ್ಟ್ ಮೆಟ್ಟಿಲೇರಿ ಹಲವು ಹಂತಗಳ ಬಳಿಕ ಈ ದಲಿತ ಕುಟುಂಬವು ಜಯಗಳಿಸಿತ್ತು.

ಅವರಿಗೆ ನೆರವಾಗಲು ರಾಜಕೀಯ ಮತ್ತು ವ್ಯವಸ್ಥೆಗಳಲ್ಲಿ ಕೊಂಚ ಅನುಭವವಿದ್ದ ಸಿದ್ಧಾರ್ಥ್ ಎಂಬ ವ್ಯಕ್ತಿ ಅವರ ಬೆನ್ನಿಗಿದ್ದರು. ಅಂತೆಯೇ ಊರಿನವರ ಜೊತೆಗೆ ಸಖ್ಯವನ್ನು ಕಾಪಾಡಿಕೊಳ್ಳಲು ಇವರಿಂದಲೇ ಹತ್ತಡಿ ಜಾಗಬಿಡಿಸಿ ರಾಜಿ ಪಂಚಾಯತಿ ಎಲ್ಲಾ ಆದವು (ಎಲ್ಲಾ ವಿವರಗಳು ಕೃತಿಯಲ್ಲಿವೆ). ಅಷ್ಟಾದರೂ ಇವರ ಅಂದರೆ ಈ ಕೀಳು ಜಾತಿಯವರಿಂದ ತಾವು ಸೋಲನ್ನು ಅನುಭವಿಸಿದೆವು ಎಂಬ ಅಪಮಾನದ ಉರಿಯಲ್ಲಿ ಸೇಡನ್ನು ತೀರಿಸಿಕೊಳ್ಳಲು ಸಮುದಾಯದ ಸಾಮೂಹಿಕ ಗುಪ್ತ ಚರ್ಚೆಗಳಾಗಿ ಸೆಪ್ಟೆಂಬರ್ 29, 2006ರಂದು ರಾತ್ರಿ ಇವರ ಮನೆಯ ಮೇಲೆ ದಾಳಿ ಮಾಡಿದರು. ಭೈಯಾಲಾಲ್ ಮನೆಯಲ್ಲಿರಲಿಲ್ಲ. ಇನ್ನುಳಿದ ನಾಲ್ವರನ್ನೂ ಮನೆಯಿಂದ ಹೊರಗೆ ಎಳೆದು ಹಾಕಿ, ಗ್ರಾಮಸ್ಥರು ಅವರನ್ನು ಬೆತ್ತಲೆ ಮಾಡಿ ಕೊಚ್ಚಿ ಕೊಂದುಹಾಕಿದರು. ಕಚ್ಚಿ, ಪರಚಿ, ಅಟ್ಟಾಡಿಸಿಕೊಂಡು ಹೊಡೆದಿದ್ದರು. ಎಲ್ಲರ ಕಣ್ಣೆದುರೇ ಅವರು ಜೀವ ಬಿಡುವ ತನಕ ಒಂದು ಗಂಟೆಗೂ ಹೆಚ್ಚು ಕಾಲ, ಸಾಮೂಹಿಕ ಅತ್ಯಾಚಾರ ನಡೆಸಿದರು. ಅವರ ಮರ್ಮಾಂಗದೊಳಗೆ ದೊಣ್ಣೆಯನ್ನು ತುರುಕಲಾಗಿತ್ತು. ಗಂಡು ಮಕ್ಕಳನ್ನು ಒದ್ದು ಒದ್ದು ತಿವಿದೂ ತಿವಿದೂ ಕೊಂದರು. ಅವರ ಮರ್ಮಾಂಗವನ್ನು ಕತ್ತರಿಸಲಾಯಿತು. ಅವರ ಮುಖವನ್ನು ವಿರೂಪಗೊಳಿಸಿ ಸಾಯುವ ತನಕ ಅವರನ್ನು ಮೇಲೆ ಎಸೆದೆಸೆದು ನೆಲಕ್ಕಪ್ಪಳಿಸಿದರು. ಇಷ್ಟಾದ ಮೇಲೆ ಸತ್ತ ಸುರೇಖಾಳ ಚಾರಿತ್ರ್ಯವಧೆ ಮಾಡುತ್ತಾ ಅವಳ ಅಕ್ರಮ ಸಂಬಂಧದ ಕಾರಣದಿಂದ ಇದಾಯಿತು ಎಂದು ಕತೆ ಕಟ್ಟಿದರು.

 

ಇಷ್ಟು ನಿಷ್ಕರುಣವಾದ ನಿಷ್ಕರ್ಷೆಯ ಹಿಂದೆ ಮುಂದೆ ಬೇಕಾದಷ್ಟು ಸಂಗತಿಗಳ ಎಳೆಗಳಿವೆ. ಇದರಲ್ಲಿ ರಾಜಕೀಯ, ಜಾತಿ ಮದ, ತಳಜಾತಿಯ ಬಗ್ಗೆ ಇರುವ ಅಸಹನೆ, ದಲಿತರು ಶಿಕ್ಷಣ ಪಡೆಯುವ – ಉತ್ತಮ ಜೀವನ ನಡೆಸುವುದರ ಬಗ್ಗೆ ಇರುವ ಅಸೂಯೆ, ಮಾಧ್ಯಮದವರ ಮೋಸ, ರಾಜಕೀಯದವರ ಪಗಡೆಯಾಟ; ಹೀಗೆ ಹತ್ತು ಹಲವು ಬರಿಯ ಜಾತಿ ಅಸಹನೆಯ ಸುತ್ತವೇ ಇರುವುದು ಎಂದರೆ ಈ ಜಾಗತಿಕ ಯುಗದಲ್ಲಿ ಭಾರತದ ಹೃದಯ ವ್ರಣದಿಂದ ಕೂಡಿದೆ ಎಂದ ಆರುಂಧತಿಯವರ ಮಾತು ತಪ್ಪೇನಿಲ್ಲ.

ನಾವು ಖೈರ್ಲಾಂಜಿ ಘಟನೆಯನ್ನು ಒಂದು ದುರದೃಷ್ಟಕರ ಘಟನೆಯೆಂದೋ, ಒಂದು ಅಪವಾದವೆಂದೋ ಅಥವಾ ಯಾವುದೋ ವಿಳಾಸವಿಲ್ಲದ ಕೋರ್ಟೊಂದರಲ್ಲಿ ಕೇಳುವವರಿಲ್ಲದ ಪ್ರಕರಣವಾಗಿಯೋ ಮರೆತುಹೋಗಲು ಬಿಟ್ಟುಬಿಡಬಾರದು. ಈ ದೇಶದ ಜಾತಿ ವೃಕ್ಷವು ಎಂಥ ವಿಚಿತ್ರ ಹಣ್ಣುಗಳನ್ನು ಬಿಟ್ಟಿದೆಯೆಂದು ಅರ್ಥ ಮಾಡಿಕೊಳ್ಳುವ ಅಗತ್ಯ ಪ್ರಪಂಚಕ್ಕಿದೆ. ಈ ಜಾತಿ ವೃಕ್ಷದ ಬೇರಿನಲ್ಲೂ ರಕ್ತವಿದೆ. ಎಲೆಗಳಲ್ಲೂ ರಕ್ತವಿದೆ. ಈ ಪುಸ್ತಕವು ಇದ್ದಕ್ಕಿದ್ದಂತೆ ಹಬ್ಬುತ್ತಿರುವ ಸುಡುತ್ತಿರುವ ಮಾಂಸದ ವಾಸನೆಯನ್ನು ಜಗತ್ತಿಗೆ ಪರಿಚಯಿಸುತ್ತದೆ.

ಜಾತಿ ಬೀಜವು ಹುಟ್ಟಿ ಹಾಕಿರುವ ವಿಚಿತ್ರ ಹಾಗೂ ವಿಷಪೂರಿತ ಬೆಳೆಯ ಮಧ್ಯೆ ಈ ಪುಸ್ತಕ ನಿಮ್ಮನ್ನು ಕರೆದೊಯ್ಯುತ್ತದೆ ಎಂದು ಆನಂದ್ ತಮ್ಮ ಪ್ರಸ್ತಾವನೆಯಲ್ಲಿ ಹೇಳಿದ್ದಾರೆ. ಹೌದು, ಮನುಷ್ಯರು ತಮ್ಮ ಜೀವನ ಮಟ್ಟವನ್ನು ಉತ್ತಮಗೊಳಿಸಿಕೊಳ್ಳಲು ಬೇಕಾದ ಮೂಲಭೂತ ಅಗತ್ಯಗಳಾದ ಆಹಾರ, ಆರೋಗ್ಯ, ಶಿಕ್ಷಣ, ವಸತಿ, ಉದ್ಯೋಗ, ಸಂಬಂಧ ಇತ್ಯಾದಿಗಳ ಬಗ್ಗೆ ತುಡಿಯುವ ಮತ್ತು ದುಡಿದು ಕಾರ್ಯರೂಪಕ್ಕೆ ತರುವ ಬದಲು ಅನಗತ್ಯವೂ, ಅವೈಚಾರಿಕವೂ ಮತ್ತು ಅವೈಜ್ಞಾನಿಕವೂ, ಎಲ್ಲದ್ದಕ್ಕಿಂತ ಮುಖ್ಯವಾಗಿ ಈ ಹೊತ್ತಿಗೆ ಅಪ್ರಸ್ತುತವೂ ಆಗಿರುವ ಜಾತಿಯತೆಯ ಸಂಘರ್ಷ ಮತ್ತು ಭ್ರಮೆಗಳಲ್ಲಿ ಜಗ್ಗಾಡುವುದನ್ನು ನೋಡಿದರೆ ಯಾವುದೇ ಪ್ರಜ್ಞಾವಂತರಿಗೆ ಇದು ಆಘಾತವೇ. ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕವಾಗಿ ಸಾಧಿಸಬೇಕಾದ ಹೊತ್ತಿನಲ್ಲಿ ಕ್ಷುಲ್ಲಕ ಶ್ರೇಷ್ಟತೆಯ ಗೀಳಿನ ಅಮಲಿನಲ್ಲಿ ತೇಲಾಡುತ್ತಿರುವುದು ಮತ್ತು ಅದರಿಂದ ಜೀವಗಳನ್ನು ನಾಶಪಡಿಸುತ್ತಾ ಬದುಕನ್ನು ಛಿದ್ರಗೊಳಿಸಿಕೊಳ್ಳುತ್ತಾ ಇರುವುದನ್ನು ನೋಡಿದರೆ ಈ ನಮ್ಮ ಭಾರತೀಯ ಸಮಾಜಕ್ಕೆ ಮುಕ್ತಿಯೇ ಇಲ್ಲವೇನೋ ಎಂಬ ಭಯವಾಗುತ್ತದೆ.

ಈ ಲೇಖನ ಬರೆಯಲು ಪುಸ್ತಕವನ್ನು ಮತ್ತೊಮ್ಮೆ ಕಣ್ಣಾಡಿಸಲು ಯತ್ನಿಸಿದಾಗ ಕರುಳು ಹಿಂಡಿದಂತಾಗಿ ಬರೆಯುವುದೇ ಬೇಡ ಎನ್ನಿಸಿದಂತೂ ನಿಜ. ಆದರೆ, ರೋಗ ಪತ್ತೆ ಹಚ್ಚಿ ಅದನ್ನು ತೋರದಿದ್ದರೆ ಅದಕ್ಕೆ ಚಿಕಿತ್ಸೆ ನೀಡುವುದಾದರೂ ಹೇಗೆ? ವ್ರಣ ಉಲ್ಬಣವಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಅರಿವಾಗುವುದಾದರೂ ಹೇಗೆ?

ಜಾತಿದ್ವೇಷದ ವರ್ತುಲವನ್ನು ಬಲಗೊಳಿಸಿರುವ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ವ್ಯವಸ್ಥೆಗಳ ವಿರುದ್ಧವಾಗಿ ಬಲವಾದ ಧ್ವನಿಯನ್ನು ಎತ್ತುತ್ತಿರುವುದರಿಂದಲೇ ಆನಂದ್ ತೇಲ್ತುಂಬ್ಡೆಯ ಮೇಲೆ ಆಪಾದನೆಗಳನ್ನು ಹೊರೆಸಿ ಅವರನ್ನು ಬಂಧಿಸಿರುವುದು. ಈ ದೇಶದಲ್ಲಿ ಜಾತಿಯತೆಯ ರೋಗವನ್ನು ನಿವಾರಿಸುವ ಮಾತಿರಲಿ, ರೋಗವಿದೆ ಎಂದು ಹೇಳಿದರೇನೇ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದರೆ, ಮುಂದಿನ ದುರ್ದಿನಗಳನ್ನು ಯಾರಾದರೂ ದೂರದೃಷ್ಟಿಯಿರುವವರು ಕಲ್ಪಿಸಿಕೊಳ್ಳಬಹುದು.

ಖೈರ್ಲಾಂಜಿ ಹತ್ಯಾಕಾಂಡವನ್ನು ಖಂಡಿಸಿ 2006ರ ನವಂಬರ್ ನಲ್ಲಿ ಮಹಾರಾಷ್ಟ್ರದಾದ್ಯಂತ ದಲಿತ ಸಮುದಾಯ ದಂಗೆ ಎದ್ದು ಕೆಲವೆಡೆ ಮಿಲಿಟೆಂಟ್ ಹೋರಾಟಗಳನ್ನು ನಡೆಸಿತು. ಈ ಪ್ರತಿರೋಧದಲ್ಲಿ ಇನ್ನಿತರ ಸಮುದಾಯಗಳ ಸಾಮಾಜಿಕ ಕಾರ್ಯಕರ್ತರು, ಬುದ್ಧಿಜೀವಿಗಳು, ಬರಹಗಾರರೂ ಪಾಲ್ಗೊಂಡಿದ್ದರು. ಆದರೆ ಸರ್ಕಾರ ಈ ಪ್ರತಿರೋಧವನ್ನು ಕ್ರೂರವಾಗಿ ದಮನಿಸಿತು. ಹೋರಾಟ ನಿರತರನ್ನು ಬಂಧಿಸಿ ಹಲವರ ವಿರುದ್ಧ ರಾಜದ್ರೋಹದ ಆರೋಪ ಹೊರಿಸಿ ಹಿಂಸಿಸಿತು. ಲಂಕೇಶ್ ಪ್ರಕಾಶನ ಸದಾ ನ್ಯಾಯದ ಪರ ನಿಲ್ಲುತ್ತದೆ ಮತ್ತು ಅಂತಹ ರಾಜದ್ರೋಹಿಗಳ ಪರ ನಿಲ್ಲಲು ಹಿಂಜರಿಯುವುದಿಲ್ಲ ಎಂದು ಗೌರಿ ಲಂಕೇಶ್ ಹೇಳಿದ್ದರು. ಶಿವಸುಂದರ್ ಸಂಪಾದಿಸಿರುವ ಖೈರ್ಲಾಂಜಿಯ ಕನ್ನಡಾನುವಾದ ತಪ್ಪದೇ ಓದಿ.


ಇದನ್ನೂ ಓದಿ: ಎಷ್ಟೇ ಕಷ್ಟ ಎದುರಾದರೂ ಅಧಿಕಾರಕ್ಕೆ ಸತ್ಯ ಹೇಳಲು ಹಿಂಜರಿಯದವರು – ಡಾ.ರಾಜೇಂದ್ರ ಚೆನ್ನಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...