ತನ್ನನ್ನು ಕೆಲವು ದಿನಗಳ ಕಾಲ ಕಸ್ಟಡಿಯಲ್ಲಿಟ್ಟುಕೊಂಡು ಚಿತ್ರಹಿಂಸೆ ನೀಡಿದ್ದಾರೆ ಎಂದು ಯುವಕನೊಬ್ಬ ಆರೋಪಿಸಿದ್ದು, ಟುಟಿಕೋರಿನ್ನ ಸಾಥನ್ಕುಳಂ ಪೊಲೀಸರ ಮೇಲೆ ಮತ್ತೊಂದು ಲಾಕಪ್ ದೌರ್ಜನ್ಯದ ಆರೋಪ ಕೇಳಿಬಂದಿದೆ.
ಆಗಸ್ಟ್ 23 ರಂದು ಇನ್ಸ್ಪೆಕ್ಟರ್ ಕ್ಸೇವಿಯರ್ ಮತ್ತು ಸಹಾಯಕ ಇನ್ಸ್ಪೆಕ್ಟರ್ ರಾಜಾ ಅವರು ತನ್ನನ್ನು ಥಳಿಸಿ ನಂತರ ಪೊಲೀಸ್ ಠಾಣೆಗೆ ಕರೆದುಕೊಂಡು ಹೊದರು ಎಂದು ಸಾಥನ್ಕುಳಂನ ತೈಕ್ಕಾ ಬೀದಿಯ ನಿವಾಸಿ ಮಾರ್ಟಿನ್ ಆರೋಪಿಸಿದ್ದಾರೆ.
ಥಳಿತದಿಂದ ಗಾಯಗೊಂಡ ತನ್ನನ್ನು, ಮರುದಿನ ತೂತುಕುಡಿ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಅವರು ಹೇಳಿದರು.
ಮ್ಯಾಜಿಸ್ಟ್ರೇಟ್ ಮುಂದೆ ಹಾಜರಾಗುವ ಮೊದಲು ಆಗಸ್ಟ್ 24 ರಿಂದ 28 ರವರೆಗೆ ತನ್ನನ್ನು ಬಂಧನದಲ್ಲಿಡಲಾಗಿತ್ತು. ನಂತರ ನಮ್ಮ ವಕೀಲರ ಕೋರಿಕೆಯ ಮೇರೆಗೆ ಜಾಮೀನು ನೀಡಿದ್ದರು ಎಂಬುದಾಗಿ ಮಾರ್ಟಿನ್ ಹೇಳಿದ್ದಾರೆ ಎಂದು ದಿ ಫೆಡರಲ್ ವರದಿ ಮಾಡಿದೆ.
ಆತನಿಗೆ ಚಿತ್ರಹಿಂಸೆ ನೀಡಿದ್ದಕ್ಕಾಗಿ, ಅದರಲ್ಲಿ ಭಾಗಿಯಾಗಿರುವ ಪೊಲೀಸರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಮಾರ್ಟಿನ್ ಅವರ ಕುಟುಂಬವು ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.
ಇದನ್ನೂ ಓದಿ: ತಮಿಳುನಾಡು ಲಾಕಪ್ ಡೆತ್: ಎರಡು ಪ್ರಕರಣಗಳನ್ನು ದಾಖಲಿಸಿದ ಸಿಬಿಐ
ತೂತುಕುಡಿಯ ಸಾಥನ್ಕುಳಂ ಠಾಣೆಯ ಪೊಲೀಸರು ಜಯರಾಜ್ ಹಾಗೂ ಅವರ ಮಗ ಫೆನಿಕ್ಸ್ ಎಂಬುವವರನ್ನು ‘ಮೊಬೈಲ್ ಅಂಗಡಿಯನ್ನು ಸಮಯಮೀರಿ ತೆರೆದಿದ್ದರು’ ಎಂಬ ಆರೋಪದಲ್ಲಿ ಬಂಧಿಸಲಾಗಿತ್ತು. ಅವರಿಬ್ಬರು ಮೂರು ದಿನಗಳ ನಂತರ ಪೊಲೀಸ್ ಠಾಣೆಯಿಂದ 100 ಕಿ.ಮೀ. ದೂರದ ಕೋವಿಲ್ಪಟ್ಟಿಯ ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿತ್ತು.
ಆದರೆ ಜಯರಾಜ್ ಪತ್ನಿ ಸೆಲ್ವಮಣಿ ಪೊಲೀಸರ ದೌರ್ಜನ್ಯದಿಂದ ತನ್ನ ಪತಿ ಹಾಗೂ ಮಗ ಸಾವಿಗೀಡಾಗಿದ್ದಾರೆ ಎಂದು ದೂರು ನೀಡಿದ್ದು, ಈ ಸಾವಿನ ಬಗ್ಗೆ ತಮಿಳುನಾಡಿನಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಮದ್ರಾಸ್ ಹೈಕೋರ್ಟಿನ ಮಧುರೈ ನ್ಯಾಯಪೀಠ ಸ್ವಯಂಪ್ರೇರಿತವಾಗಿ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡಿತ್ತು.
ಸಿಸಿಟಿವಿ ದೃಶ್ಯಾವಳಿಗಳು ಪೊಲೀಸರ ದೌರ್ಜನ್ಯಕ್ಕೆ ಸಾಕ್ಷಿಯಾಗಿದ್ದವು. ಹಾಗಾಗಿ ಕೆಲ ಪೊಲೀಸರನ್ನು ಅಮಾನತ್ತು ಮಾಡಲಾಗಿತ್ತು. ಅದರಲ್ಲಿ ಒಪ್ಪ ಪೊಲೀಸ್ ಕೊರೊನಾ ಸೋಂಕಿಗೆ ಬಲಿಯಾಗಿದ್ದರು.
ತಮಿಳುನಾಡಿನ ತೂತುಕುಡಿ ಜಿಲ್ಲೆಯಲ್ಲಿ ನಡೆದ ತಂದೆ ಮಗನ ಲಾಕಪ್ ಡೆತ್ ಘಟನೆಗೆ ದೇಶದಾದ್ಯಂತ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಹಾಗಾಗಿ ಈ ಪ್ರಕರಣವನ್ನು ಶೀಘ್ರದಲ್ಲೇ ಸಿಬಿಐಗೆ ತನಿಖೆಗಾಗಿ ಹಸ್ತಾಂತರಿಸಲಾಗಿತ್ತು.
ಇದನ್ನೂ ಓದಿ: ತಮಿಳುನಾಡು ಲಾಕಪ್ ಡೆತ್: ಭಾರತದ ಜಾರ್ಜ್ ಫ್ಲಾಯ್ಡ್ ಎಂದು ಆಕ್ರೋಶ ವ್ಯಕ್ತಪಡಿಸಿದ ನೆಟ್ವಿಗರು.