Homeಮುಖಪುಟವಿಶ್ಲೇಷಣೆ: ಯುಪಿಯಲ್ಲಿ ಒಬಿಸಿ ನಾಯಕರು ಬಿಜೆಪಿ ತೊರೆಯುತ್ತಿರುವುದು ಏತಕ್ಕೆ? ಎಸ್‌ಪಿಗೆ ಗೆಲುವು ಸುಲಭವೇ?

ವಿಶ್ಲೇಷಣೆ: ಯುಪಿಯಲ್ಲಿ ಒಬಿಸಿ ನಾಯಕರು ಬಿಜೆಪಿ ತೊರೆಯುತ್ತಿರುವುದು ಏತಕ್ಕೆ? ಎಸ್‌ಪಿಗೆ ಗೆಲುವು ಸುಲಭವೇ?

- Advertisement -
- Advertisement -

ಉತ್ತರ ಪ್ರದೇಶದ ಚುನಾವಣಾ ಚರ್ಚೆಯಲ್ಲಿ ದೊಡ್ಡ ಪ್ರಶ್ನೆಯೊಂದು ಮುನ್ನಲೆಗೆ ಬಂದಿದೆ. ಯಾದವೇತರ ಇತರೆ ಹಿಂದುಳಿದ ವರ್ಗದ ಸಮುದಾಯಗಳನ್ನು ಬಿಜೆಪಿಯಿಂದ ದೂರವಿಡುವ ಪ್ರಯತ್ನದಲ್ಲಿ ಸಮಾಜವಾದಿ ಪಕ್ಷ (ಎಸ್‌ಪಿ) ಅಂತಿಮವಾಗಿ ಯಶಸ್ಸು ಪಡೆಯಬಹುದೇ?- ಎಂಬುದು ಸದ್ಯದ ಪ್ರಶ್ನೆ.

ರಾಜ್ಯದ ಚುನಾವಣಾ ಫಲಿತಾಂಶವು ಈ ನಿರ್ಣಾಯಕ ಅಂಶದ ಮೇಲೆ ಅವಲಂಬಿತವಾಗಿದೆ ಎಂದು ರಾಜಕೀಯ ವಿಶ್ಲೇಷಕರು ನಿರೀಕ್ಷಿಸಿದ್ದಾರೆ.

ಕಳೆದ ಕೆಲವು ಚುನಾವಣೆಗಳಲ್ಲಿ ಅತ್ಯಂತ ಹಿಂದುಳಿದ ವರ್ಗಗಳನ್ನು ಒಟ್ಟುಗೂಡಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಈ ವರ್ಗಗಳಲ್ಲಿ ಬಹುದೊಡ್ಡ ಮತದಾರರಿದ್ದಾರೆ. ಆ ಸಂಖ್ಯೆ ಒಟ್ಟು ಮತದಾರರ ಪೈಕಿ ಶೇ.30 ಎನ್ನಲಾಗುತ್ತದೆ. ಯಾದವರ ವಿರುದ್ಧ ಈ ವರ್ಗಗಳನ್ನು ಬಿಜೆಪಿ ಸಂಘಟಿಸಿತ್ತು.

ಇದನ್ನೂ ಓದಿ:ಉತ್ತರ ಪ್ರದೇಶ ಚುನಾವಣೆ: ಉನ್ನಾವೋ ಅತ್ಯಾಚಾರ ಸಂತ್ರಸ್ತೆಯ ತಾಯಿಗೆ ಕಾಂಗ್ರೆಸ್‌ನಿಂದ ಟಿಕೆಟ್

ರಾಜ್ಯ ರಾಜಕೀಯದಲ್ಲಿ ಇಲ್ಲಿಯವರೆಗೆ ಕಡಿಮೆ ಪ್ರಾತಿನಿಧ್ಯವನ್ನು ಹೊಂದಿದ್ದ ಕುರ್ಮಿ, ಲೋಧ್ ರಜಪೂತ್, ಪಾಲ್ಸ್, ಸೈನಿ, ಕಶ್ಯಪ್, ಮೌರ್ಯ ಥರದ ಅತ್ಯಂತ ಹಿಂದುಳಿದ ವರ್ಗಗಳು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯಲ್ಲಿ ಹೆಚ್ಚು ನಿರೀಕ್ಷೆಯನ್ನು ಹೊಂದಿದ್ದವು. ಅಲ್ಲದೆ ನರೇಂದ್ರ ಮೋದಿ ಅವರು ಕೂಡ ಪ್ರಬಲವಲ್ಲದ ಒಬಿಸಿ ಸಮುದಾಯಕ್ಕೆ ಸೇರಿದವರು.

ಬಿಜೆಪಿಯು ಈ ಸಮುದಾಯಗಳ ನಾಯಕರಿಗೆ ಚುನಾವಣಾ ಕಣದಲ್ಲಿ ಇತರ ಪಕ್ಷಗಳಿಗಿಂತ ಹೆಚ್ಚಿನ ಪ್ರಾತಿನಿಧ್ಯವನ್ನು ನೀಡಿತು. ಭಾರೀ ಅಂತರದಿಂದ ಗೆಲುವು ಸಾಧಿಸಿ ಅಧಿಕಾರಕ್ಕೆ ಬಂತು. ಆದರೆ ಕಳೆದ ಕೆಲವು ವರ್ಷಗಳಲ್ಲಿ ಅತ್ಯಂತ ಹಿಂದುಳಿದ ಸಮುದಾಯಗಳು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನಾಯಕತ್ವವನ್ನು ನೋಡಿದ ರೀತಿ ಬೇರೆಯಾಗಿತ್ತು.

ಬಿಜೆಪಿ ನಾಯಕರ ಇತ್ತೀಚಿನ ವಲಸೆಯು ಬಹುಶಃ ಇದನ್ನು ಎತ್ತಿ ಹಿಡಿಯುತ್ತದೆ. ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ ಎಲ್ಲಾ ಹಾಲಿ ಬಿಜೆಪಿ ಶಾಸಕರು (ಸಚಿವರು ಸೇರಿದಂತೆ ಒಟ್ಟು 15 ಮಂದಿ) ಪ್ರಾಬಲ್ಯವಿಲ್ಲದ ಹಿಂದುಳಿದ ಸಮುದಾಯಗಳಿಗೆ ಸೇರಿದವರು. ರಾಜ್ಯದ ಕಾರ್ಮಿಕ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ಮತ್ತು ಅವರ ನಾಲ್ಕು ಸಹೋದ್ಯೋಗಿಗಳ ರಾಜೀನಾಮೆಗಳು ಹೆಚ್ಚಿನ ಗಮನ ಸೆಳೆದಿವೆ. ಆದರೆ ಹೆಚ್ಚಿನ ಹಿಂದುಳಿದ ವರ್ಗಗಳ ನಾಯಕರಲ್ಲಿ ಬಂಡಾಯ ಪ್ರವೃತ್ತಿ ಕೋವಿಡ್‌ ಎರಡನೇ ಅಲೆಯ ಸಮಯದಲ್ಲಿಯೇ ವ್ಯಕ್ತವಾಗಿತ್ತು.

ಇದನ್ನೂ ಓದಿ: ಉತ್ತರ ಪ್ರದೇಶ ಚುನಾವಣೆ: ಸಚಿವ ಸ್ಥಾನ ತೊರೆದು ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಯಾದ ಬಿಜೆಪಿಯ ಸ್ವಾಮಿ ಪ್ರಸಾದ್ ಮೌರ್ಯ

ಸಾಂಕ್ರಾಮಿಕ ರೋಗವನ್ನು ಸರಿಯಾಗಿ ನಿಭಾಯಿಸದಿರುವ ಬಗ್ಗೆ ಭಿನ್ನಾಭಿಪ್ರಾಯಗಳು ವ್ಯಕ್ತವಾದವು. ರಾಜ್ಯ ಸರ್ಕಾರದ ವಿರುದ್ಧದ ಹೆಚ್ಚಿನ ಭಿನ್ನಾಭಿಪ್ರಾಯವು ಯಾದವೇತರ ಒಬಿಸಿ ಸಮುದಾಯಗಳಿಗೆ ಸೇರಿದ ನಾಯಕರಿಂದ, ಸ್ವಲ್ಪ ಮಟ್ಟಿಗೆ ಬ್ರಾಹ್ಮಣ, ಜಾಟರು ಅಲ್ಲದ ದಲಿತರಿಂದ ಹೊರಹೊಮ್ಮಿದೆ. ಎಲ್ಲಾ ಜಾತಿ ಗುಂಪುಗಳು ಆದಿತ್ಯನಾಥ್ ವಿರುದ್ಧ ಅಸಮಾಧಾನ ಹೊಂದಿವೆ. ಬಿಜೆಪಿಯ ಇಬ್ಬರು ಶಾಸಕರಾದ ರಾಕೇಶ್ ರಾಥೋಡ್ (ತೇಲಿ ಸಮುದಾಯ) ಮತ್ತು ಮಾಧುರಿ ವರ್ಮಾ (ಕುರ್ಮಿ ​​ಸಮುದಾಯ) ಈಗಾಗಲೇ ಸಮಾಜವಾದಿ ಪಕ್ಷಕ್ಕೆ ಸೇರಿದ್ದರು. ಮೌರ್ಯ ಮತ್ತು ಅವರ ಅನುಯಾಯಿಗಳು ಬಿಜೆಪಿ ಪಾಳಯದಲ್ಲಿ ಎಲ್ಲವೂ ಸರಿಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಬಿಜೆಪಿ ತೊರೆದ ಶಾಸಕರು ಹಿಂದುಳಿದ ಸಮುದಾಯಗಳಲ್ಲಿನ ಬೇಸರವನ್ನು ಸ್ಪಷ್ಟವಾಗಿ ಹೇಳಲು ಯತ್ನಿಸಿದ್ದಾರೆ.

ಮೌರ್ಯ ಮತ್ತು ಅವರ ಅನುಯಾಯಿಗಳ ರಾಜೀನಾಮೆ ಪತ್ರಗಳು ಹಿಂದುಳಿದ ಸಮುದಾಯಗಳಿಗೆ ರಾಜಕೀಯ ಸಂದೇಶವನ್ನು ನೀಡಲೆಂದೇ ಒಂದೇ ರೀತಿ ಇವೆ. “ಕಳೆದ ನಾಲ್ಕು ವರ್ಷಗಳಲ್ಲಿ ಬಿಜೆಪಿ ಸರ್ಕಾರವು ದಲಿತ, ಹಿಂದುಳಿದ ಸಮುದಾಯಗಳು ಮತ್ತು ಅಲ್ಪಸಂಖ್ಯಾತರಿಗೆ ಸೇರಿದ ನಾಯಕರನ್ನು ನಿರ್ಲಕ್ಷಿಸಿದೆ. ದಲಿತರು, ಹಿಂದುಳಿದ ಸಮುದಾಯಗಳು, ನಿರುದ್ಯೋಗಿ ಯುವಕರು, ಸಣ್ಣ ಮತ್ತು ಮಧ್ಯಮ ಉದ್ಯಮಿಗಳ ಕಳವಳಗಳನ್ನು ನಿರ್ಲಕ್ಷಿಸಲಾಗಿದೆ” ಎಂದು ಅವರ ಪತ್ರಗಳಲ್ಲಿ ಹೇಳಲಾಗಿದೆ.

ಇದನ್ನೂ ಓದಿ:ಉತ್ತರ ಪ್ರದೇಶ: ಪೊಲೀಸರರು ಅತ್ಯಂತ ಪ್ರಾಮಾಣಿಕರು, ಹಣ ತೆಗೆದುಕೊಂಡರೆ ಕೆಲಸ ಮಾಡುತ್ತಾರೆ ಎಂದು ಲಂಚಕ್ಕೆ ಉತ್ತೇಜಿಸಿದ್ದ ಪೊಲೀಸ್ ಅಮಾನತು

ರಾಜಕೀಯ ತಜ್ಞರು ಹೇಳುವ ಪ್ರಕಾರ ಹಿಂದುಳಿದ ಸಮುದಾಯಗಳ ಬೇಸರಕ್ಕೆ ಎರಡು ಕಾರಣಗಳಿವೆ.

ಮೊದಲನೆಯದಾಗಿ, ಬಿಜೆಪಿಯು ಎಲ್ಲರನ್ನೂ ಒಳಗೊಳ್ಳುವ ವರ್ಚಸ್ಸಿಗೆ ತಕ್ಕಂತೆ ಉಳಿಯಲಿಲ್ಲ. “ಸಬ್ಕಾ ಸಾಥ್, ಸಬ್ಕಾ ವಿಶ್ವಾಸ್ [ಎಲ್ಲರಿಗಾಗಿ ಮತ್ತು ಅಭಿವೃದ್ಧಿ] ಎಂದ ಬಿಜೆಪಿಯು ಅದರಂತೆ ನಡೆದುಕೊಳ್ಳಲಿಲ್ಲ. ಬಿಜೆಪಿಯು ಕೇವಲ ಮೇಲ್ಜಾತಿ ಗುಂಪುಗಳ ನೇತೃತ್ವದ ಪಕ್ಷವಾಯಿತು. ಠಾಕೂರ್ ನಾಯಕ ಆದಿತ್ಯನಾಥ್ ಅವರು ಆಡಳಿತದ ಚುಕ್ಕಾಣಿ ಹಿಡಿಯುವ ಮೂಲಕ ಇದು ಮೇಲ್ಜಾತಿ ಪ್ರಣೀತ ಪಕ್ಷವೆಂಬ ಗ್ರಹಿಕೆಯನ್ನು ಹಿಂದುಳಿದ ಸಮುದಾಯಗಳಲ್ಲಿ ಬಿಜೆಪಿ ಮತ್ತೆ ಮೂಡಿಸಿತು. ಆದಿತ್ಯನಾಥ್ ಸ್ವತಃ ಠಾಕೂರ್ ನಾಯಕ ಎಂದು ಬಿಂಬಿಸಿಕೊಳ್ಳಲು ಹಿಂದೆ ಸರಿಯಲಿಲ್ಲ” ಎಂದು ಗೋರಖ್‌ಪುರ ಮೂಲದ ಹಿರಿಯ ಪತ್ರಕರ್ತ ಮನೋಜ್ ಸಿಂಗ್ ಹೇಳುತ್ತಾರೆ.

ಯಾದವರು ಮತ್ತು ಮುಸ್ಲಿಮರ ನೇತೃತ್ವದ ಪಕ್ಷವಾಗಿ ಎಸ್‌ಪಿ ಬೆಳೆದಿತ್ತು. ಬಹುಜನ ಸಮಾಜ ಪಕ್ಷವು ಜಾಠವರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿತ್ತು. ಹೀಗಾಗಿ ಬಿಜೆಪಿಯು ಇತರ ಹಿಂದುಳಿದ ಸಮುದಾಯಗಳ ಆಕಾಂಕ್ಷೆಗಳನ್ನು ಈಡೇರಿಸಬಹುದೆಂದು ಈ ಸಮುದಾಯಗಳು ಮತ್ತು ಜಾಠವೇತರರು ನಿರೀಕ್ಷಿಸಿದ್ದರು. ಈ ಸಮುದಾಯಗಳ ನಡುವೆ ವ್ಯಾಪಕ ಪ್ರಚಾರ ಕಾರ್ಯಕ್ರಮವನ್ನು ಬಿಜೆಪಿ ನಡೆಸಿತು. ಆದರೆ ಬಿಜೆಪಿ ಸರ್ಕಾರವನ್ನು ರಚಿಸಿದ ನಂತರ, ಈ ಗುಂಪುಗಳನ್ನು ಪ್ರತಿನಿಧಿಸುವ ನಾಯಕರಿಗೆ ಸರಿಯಾದ ಸ್ಥಾನ ಮಾನ ನೀಡಲಿಲ್ಲ. ಪ್ರಮುಖವಲ್ಲದ ಖಾತೆಗಳು ಮತ್ತು ಸ್ಥಾನಗಳಿಗೆ ‌ಈ ಸಮುದಾಯಗಳ ನಾಯಕರನ್ನು ಕೂರಿಸಿತು.

ಎರಡನೆಯದಾಗಿ, ಸಂಘಪರಿವಾರದ ಹಿಂದುತ್ವದ ರಾಜಕೀಯ ಮಾರ್ಗವನ್ನು ಮುನ್ನೆಲೆಗೆ ತರುವ ಪ್ರಯತ್ನದಲ್ಲಿ ಪ್ರಾತಿನಿಧ್ಯ ಮತ್ತು ಸಾಮಾಜಿಕ ನ್ಯಾಯದ ಎಲ್ಲಾ ಕಾಳಜಿಗಳನ್ನು ಕಟ್ಟರ್ ಹಿಂದುತ್ವದ ನಾಯಕ ಎಂದೇ ಬಿಂಬಿತವಾಗಿರುವ ಆದಿತ್ಯನಾಥ್‌ ಮರೆತರು. ಆದಿತ್ಯನಾಥ್ ಅವರ ಹಿಂದುತ್ವದ ಕಾರ್ಯಚಟುವಟಿಕೆ ಸಾಮಾಜಿಕ ನ್ಯಾಯದ ಕಾಳಜಿಯನ್ನು ಸಂಪೂರ್ಣವಾಗಿ ಹಿಮ್ಮೆಟ್ಟಿಸುತ್ತದೆ ಎಂದು ಹಿಂದುಳಿದ ಸಮುದಾಯಗಳು ಗ್ರಹಿಸಿವೆ.

ಮೇಲ್ಜಾತಿ ಗುಂಪುಗಳು, ಯಾದವೇತರ ಒಬಿಸಿಗಳು ಮತ್ತು ಜಾಠವೇತರ ದಲಿತರಿಂದ ಕೂಡಿದ ಬಿಜೆಪಿಯ ಸಾಮಾಜಿಕ ತಳಹದಿಯು ಕುಸಿಯುತ್ತಿರುವುದು ಖಚಿತ.

ಇದನ್ನೂ ಓದಿ:ಚುನಾವಣಾ ದಿನಾಂಕ ಘೋಷಣೆ: ಉತ್ತರ ಪ್ರದೇಶದ ನಾಲ್ಕು ಪ್ರಮುಖ ಪಕ್ಷಗಳ ಫಸ್ಟ್ ರಿಯಾಕ್ಷನ್ ಏನು?

ಸಮಾಜವಾದಿ ಪಾರ್ಟಿ ಮುಂದಿವೆ ಸವಾಲು

ಆದರೆ ಸಮಾಜವಾದಿ ಪಕ್ಷದ ನಾಯಕರು ಗೆಲುವು ಸಾಧಿಸುವುದೂ ಸವಾಲಿನ ಸಂಗತಿಯೇ ಸರಿ. ಅತ್ಯಂತ ಹಿಂದುಳಿದ ಸಮುದಾಯಗಳ ನಾಯಕರು ಎಸ್‌ಪಿಗೆ ಸೇರುವ ಸಾಧ್ಯತೆಯಿದೆಯಾದರೂ, ಯಾದವೇತರ ಒಬಿಸಿಗಳು ಮತ್ತು ದಲಿತರಿಗೆ ತಮ್ಮ ಹಾವಭಾವಗಳು ಪ್ರಾಮಾಣಿಕವೆಂದು ಮನವರಿಕೆ ಮಾಡುವ ಪ್ರಯತ್ನವನ್ನು ಅಖಿಲೇಶ್ ದೊಡ್ಡ ಮಟ್ಟದಲ್ಲಿ ಮಾಡಬೇಕಿದೆ.

ದಿ ವೈರ್‌ ಜಾಲತಾಣ ಅತ್ಯಂತ ಹಿಂದುಳಿದ ಸಮುದಾಯಗಳ ಜನರನ್ನು ಮಾತನಾಡಿಸಿ ವಾಸ್ತವಾಂಶಗಳನ್ನು ವರದಿ ಮಾಡಿದೆ. “ನಮ್ಮ ಮತಕ್ಕಾಗಿ ಬಿಜೆಪಿಯವರು ನಮ್ಮನ್ನು ಬಳಸಿಕೊಂಡಿದ್ದಾರೆ ಎಂದು ಭಾವಿಸುತ್ತೇವೆ. ಆದರೆ ನಮಗೆ ಉತ್ತಮ ಪರ್ಯಾಯವೂ ಕಾಣುತ್ತಿಲ್ಲ” ಎಂದು ಕನೌಜ್‌ನ ತಿರ್ವಾ ವಿಧಾನಸಭಾ ಕ್ಷೇತ್ರದಲ್ಲಿನ ಲೋಧ್ ಸಮುದಾಯಕ್ಕೆ ಸೇರಿದ ಅರವಿಂದ್ ಕುಮಾರ್ ಹೇಳುತ್ತಾರೆ.

“ಕನಿಷ್ಠ ಈ ಆಡಳಿತದಲ್ಲಿ ಪೊಲೀಸರು ನಮ್ಮಿಂದ ಸುಲಿಗೆ ಮಾಡುವುದನ್ನು ನಿಲ್ಲಿಸಿದ್ದಾರೆ. ಎಸ್ಪಿ ಆಡಳಿತಾವಧಿಯಲ್ಲಿ ಪೊಲೀಸರು ಬಡವರಿಂದ ಹಣ ವಸೂಲಿ ಮಾಡುವ ಕುಖ್ಯಾತಿಗೆ ಹೆಸರಾಗಿದ್ದರು. ನೀವು ಯಾದವರಾಗಿದ್ದರೆ ಮಾತ್ರ ಪೊಲೀಸರು ನಿಮ್ಮಿಂದ ದೂರ ಉಳಿಯುತ್ತಿದ್ದರು. ಆ ಅಭ್ಯಾಸಗಳು ಈಗ ನಿಂತುಹೋಗಿವೆ” ಎನ್ನುತ್ತಾರೆ.

ಇದನ್ನೂ ಓದಿ:ಉತ್ತರ ಪ್ರದೇಶದ ಬಿಜೆಪಿ ಶಾಸಕನ ಕೆನ್ನೆಗೆ ಬಾರಿಸಿದ ರೈತ: ಕಾರಣವೇನು?

ಬಿಲ್ಹೌರ್ ವಿಧಾನಸಭಾ ಕ್ಷೇತ್ರದಲ್ಲಿ ಮತ್ತೊಬ್ಬ ಕುರ್ಮಿ ಸಮುದಾಯದ ​​ವ್ಯಕ್ತಿ ಶಶಾಂಕ್ ವರ್ಮಾ ಹೀಗೆ ಹೇಳುತ್ತಾರೆ: “ಅಖಿಲೇಶ್ ಅವರು ಸಾಫ್ ಚಾವಿ ವಾಲಾ ನೇತಾ (ಕ್ಲೀನ್ ಇಮೇಜ್ ಹೊಂದಿರುವ ನಾಯಕ). ಆದರೆ ಪಕ್ಷದಲ್ಲಿ ಅವರಿಗಿಂತ ಕೆಳಗಿರುವವರು ನಿಜವಾದ ದಂಗೆಕೋರರು. ಎಸ್‌ಪಿ ನಾಯಕರು ಈಗ ಕೆಳಗಿಳಿದು ಮಾತನಾಡಿಸುತ್ತಾರೆ. ಆದರೆ ಅವರು ಅಧಿಕಾರಕ್ಕೆ ಬಂದ ಮರುಕ್ಷಣವೇ ಗೂಂಡಾಗಿರಿ ತೋರಿಸುತ್ತಾರೆ ಎಂಬುದು ನಮಗೆ ಗೊತ್ತಿದೆ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ತಳ್ಳೋ ಗಾಡಿಯಲ್ಲಿ ಆಹಾರವನ್ನು ಮಾರುತ್ತಾ ಜೀವನ ನಡೆಸುತ್ತಿರುವ ಲಖೀಂಪುರದ ತೇಲಿ ಜಾತಿಯ ಪ್ರಶಾಂತ್ ರಾಥೋಡ್ ಹೀಗೆ ಹೇಳುತ್ತಾರೆ: “ಕಳೆದ ಐದು ವರ್ಷಗಳಲ್ಲಿ ಆದಿತ್ಯನಾಥ್ ಸರ್ಕಾರದಿಂದ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಅಖಿಲೇಶ್ ಸರ್ಕಾರ ಉತ್ತಮ ದಾಖಲೆ ಹೊಂದಿದೆ. ಆದರೆ ನನ್ನ ಮತ ಇನ್ನೂ ಬಿಜೆಪಿಗೆ. ಅಖಿಲೇಶ್‌ ಆಡಳಿತಕ್ಕೆ ಹೋಲಿಸಿದರೆ ಈಗ ಶಾಂತಿ ಇದೆ. ಈಗ ಯಾರೂ ಬಂದು ಉಚಿತವಾಗಿ ತಿನ್ನುವುದಿಲ್ಲ.”

ಅದೇನೇ ಇದ್ದರೂ, ಅಖಿಲೇಶ್ ಯಾದವ್‌‌ ಜಾತಿಗಳಾದ್ಯಂತ ಜನಪ್ರಿಯವಾಗಿದ್ದಾರೆ. ಅಖಿಲೇಶ್ ಅಧಿಕಾರಾವಧಿಯಲ್ಲಿ ರಾಜ್ಯದಲ್ಲಿ ಹೆಚ್ಚಿನ ಅಭಿವೃದ್ಧಿ ಕಾರ್ಯಗಳಾಗಿವೆ ಎಂಬುದನ್ನು ಎಲ್ಲ ಜಾತಿಯ ಗುಂಪುಗಳು ಒಪ್ಪುತ್ತವೆ. ಆದರೆ ಅದು ಸಾಕಾಗದೇ ಇರಬಹುದು, ಏಕೆಂದರೆ ಯುಪಿ ಚುನಾವಣೆಯಲ್ಲಿ ಜಾತಿ ಧ್ರುವೀಕರಣಕ್ಕೆ ಐತಿಹಾಸಿಕ ಮಹತ್ವವಿದೆ. ಸಮಾಜವಾದಿ ಪಕ್ಷ ಗೆಲ್ಲಬೇಕಾದರೆ ಬಿಜೆಪಿಯ ಸಾಮಾಜಿಕ ತಳಹದಿಯನ್ನು ತೀವ್ರವಾಗಿ ಕೆಡಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಸಮಾಜವಾದಿ ಪಾರ್ಟಿಯು ಪ್ರಬಲ ಒಬಿಸಿಗಳ ಕೈ ಮೇಲಾಗದಂತೆ ಎಚ್ಚರಿಕೆ ವಹಿಸಿದೆ ಎಂಬುದನ್ನು ಮನವರಿಕೆ ಮಾಡಿಕೊಡಬೇಕು.

ಮೂಲ: ದಿ ವೈರ್ (ಅಜಯ್ ಆಶೀರ್ವಾದ್ ಮಹಾಪ್ರಶಾಸ್ತಾ)

ಇದನ್ನೂ ಓದಿರಿ: ದ್ವೇಷ ಭಾಷಣ ಕೇಸ್: ’ನೀವೆಲ್ಲರೂ ಸಾಯುತ್ತೀರಿ’ ಎಂದು ಪೊಲೀಸರಿಗೆ ಯತಿ ನರಸಿಂಗಾನಂದ ಬೆದರಿಕೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಎಪ್‌ಸ್ಟೀನ್‌ ಫೈಲ್ಸ್ ಜನಾಕ್ರೋಶ : ಎಐ ಶೃಂಗಸಭೆಯಿಂದ ದೂರ ಉಳಿದ ಬಿಲ್‌ ಗೇಟ್ಸ್‌

ಎಪ್‌ಸ್ಟೀನ್‌ ಫೈಲ್ಸ್‌ ಮುಂದಿಟ್ಟುಕೊಂಡು ಜನರು ತೀವ್ರ ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೇ, 'ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆ'ಯಿಂದ ಮೈಕ್ರೋಸಾಫ್ಟ್‌ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ದೂರ ಉಳಿದಿದ್ದಾರೆ. ಈ ಕುರಿತು ಗೇಟ್ಸ್ ಫೌಂಡೇಶನ್ ಇಂಡಿಯಾ ಗುರುವಾರ...

ಬೆಂಗಳೂರಿನಲ್ಲಿ ರಂಜಾನ್ ಆಹಾರ ಮೇಳ ನಡೆಸದಂತೆ ಹೋಟೆಲ್‌ಗಳಿಗೆ ಎಚ್ಚರಿಕೆ

ಬೆಂಗಳೂರು: ಫ್ರೇಸರ್ ಟೌನ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಎಂಎಂ ರಸ್ತೆಯಲ್ಲಿ ರಂಜಾನ್ ಆಹಾರ ಮೇಳ ನಡೆಸದಂತೆ ಹೋಟೆಲ್ ಮಾಲೀಕರಿಗೆ ಸ್ಥಳೀಯ ನಿವಾಸಿಗಳು ಎಚ್ಚರಿಕೆ ನೀಡಿದ್ದಾರೆ. ರಂಜಾನ್ ಆಹಾರ ಮೇಳದಿಂದ ಸಂಚಾರ ದಟ್ಟಣೆ. ಅವ್ಯವಸ್ಥೆಯ ಜೊತೆಗೆ...

‘ದಿ ಕೇರಳ ಸ್ಟೋರಿ-2’ ಚಲನಚಿತ್ರ ಜಾತ್ಯತೀತತೆಗೆ ಬೆದರಿಕೆ: ಮುಖ್ಯಮಂತ್ರಿ ಪಿಣರಾಯಿ ವಿಜಯನ್

'ದಿ ಕೇರಳ ಸ್ಟೋರಿ' ಚಿತ್ರದ ಎರಡನೇ ಭಾಗ ಬಿಡುಗಡೆಯಾಗುತ್ತಿರುವ ಬಗ್ಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕಳವಳ ವ್ಯಕ್ತಪಡಿಸಿದ್ದು, ಇದರ ಮೊದಲ ಭಾಗವು "ರಾಜ್ಯದ ವಿರುದ್ಧ ದ್ವೇಷವನ್ನು ಹರಡುವ ಮತ್ತು ನಮ್ಮ ಜಾತ್ಯತೀತ...

ಬಿಜೆಪಿ ಸೇರಲು ಸಿದ್ದರಾದ ಭೂಪೇನ್ ಬೋರಾ : ಪ್ರಿಯಾಂಕಾ, ಡಿಕೆಶಿ ಸೇರಿದಂತೆ ‘ಕೈ ಟ್ರಬಲ್ ಶೂಟರ್‌ಗಳು’ ಅಸ್ಸಾಂಗೆ ದೌಡು

ರಾಜ್ಯ ಕಾಂಗ್ರೆಸ್‌ ಘಟಕದ ಮಾಜಿ ಅಧ್ಯಕ್ಷ ಭೂಪೇನ್ ಬೋರಾ ಬಿಜೆಪಿಗೆ ಹಾರಲು ಸಿದ್ದರಾಗಿರುವ ನಡುವೆ ಪ್ರಿಯಾಂಕಾ ಗಾಂಧಿ, ಡಿ.ಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್‌ನ ಟ್ರಬಲ್ ಶೂಟರ್‌ಗಳ ತಂಡ ಅಸ್ಸಾಂಗೆ ದೌಡಾಯಿಸಿದೆ. ಅಸ್ಸಾಂ ಕಾಂಗ್ರೆಸ್ ಅಭ್ಯರ್ಥಿಗಳ...

ಸರ್ಕಾರದ ಭರವಸೆಗೆ ಮಣಿಯದ ಸಾರಿಗೆ ಸಿಬ್ಬಂದಿ : ಮುಷ್ಕರ ಮುಂದುವರಿಸಲು ನಿರ್ಧಾರ

ಹಿಂಬಾಕಿ ಪಾವತಿ, ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ರಾಜ್ಯದ ನಾಲ್ಕು ಸಾರಿಗೆ ನಿಗಮಗಳಾದ ಕೆಎಸ್‌ಆರ್‌ಟಿಸಿ, ಕೆಕೆಆರ್‌ಟಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿ ಹಾಗೂ ಬಿಎಂಟಿಸಿಯ ನೌಕರರು ಇಂದು (ಫೆ.19) ಮುಷ್ಕರಕ್ಕೆ ಕರೆ ಕೊಟ್ಟಿದ್ದಾರೆ. ನೌಕರರ ಪ್ರತಿಭಟನೆ...

ಬೆಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲಿ ಪತ್ನಿಯ ಕತ್ತು ಹಿಸುಕಿ ಕೊಂದ ನಿವೃತ್ತ ಇಸ್ರೋ ಉದ್ಯೋಗಿ ಬಂಧನ

ಬೆಂಗಳೂರು: ಆಘಾತಕಾರಿ ಘಟನೆಯೊಂದರಲ್ಲಿ, 72 ವರ್ಷದ ನಿವೃತ್ತ ಇಸ್ರೋ ಉದ್ಯೋಗಿಯೊಬ್ಬರು ವೈಟ್‌ಫೀಲ್ಡ್ ವಿಭಾಗದ ಆವಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಬುಧವಾರ ಪತ್ನಿಯನ್ನು ಕತ್ತು ಹಿಸುಕಿ ಕೊಂದಿರುವುದಾಗಿ ವರದಿಯಾಗಿದೆ.  ಬೊಮ್ಮನಹಳ್ಳಿಯ ಅಪಾರ್ಟ್‌ಮೆಂಟ್‌ನಲ್ಲಿ ಬೆಳಿಗ್ಗೆ...

ಮಧ್ಯಪ್ರದೇಶದಲ್ಲಿ ಶಾಸಕ ರಾಜಾ ಸಿಂಗ್‌ನಿಂದ ದ್ವೇಷ ಭಾಷಣ; ಪ್ರಚೋದನಕಾರಿ ‘ಶಿರಚ್ಛೇದನ’ ಹೇಳಿಕೆಗೆ ವಿರೋಧ

ತಮ್ಮ ಪ್ರಚೋದನಕಾರಿ ಹೇಳಿಕೆಗಳಿಂದಲೇ ಕುಖ್ಯಾತರಾಗಿರುವ ಹೈದರಾಬಾದ್‌ನ ಗೋಶಮಹಲ್ ಶಾಸಕ ಟಿ ರಾಜಾ ಸಿಂಗ್ ಸಾರ್ವಜನಿಕ ರ‍್ಯಾಲಿಯಲ್ಲಿ ಮತ್ತೊಮ್ಮೆ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ಮಧ್ಯಪ್ರದೇಶದಲ್ಲಿ ಅವರು ಆಡಿದ ಮಾತುಗಳು ವಿವಾದಕ್ಕೆ ಕಾರಣವಾಗಿದೆ. "ಪ್ರತಿಯೊಬ್ಬ ಬಜರಂಗಿಗಳು...

ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಜಾತಿ ಆಧಾರಿತ ತಾರತಮ್ಯ ಆರೋಪ; ‘ಬಡ್ತಿ ವಿಳಂಬವಾಗಿದೆ..’; ಎಂದ ದಲಿತ ಪ್ರಾಧ್ಯಾಪಕ

ಪಂಜಾಬ್ ವಿಶ್ವವಿದ್ಯಾಲಯದ ದಲಿತ ಸಹಾಯಕ ಪ್ರಾಧ್ಯಾಪಕ ಹರ್‌ಪ್ರೀತ್ ಸಿಂಗ್ ಅವರು ವಿಶ್ವವಿದ್ಯಾಲಯದಲ್ಲಿ ಜಾತಿ ಆಧಾರಿತ ತಾರತಮ್ಯ ಇದೆ ಎಂದು ಸಾರ್ವಜನಿಕವಾಗಿ ಆರೋಪಿಸಿದ್ದಾರೆ. ತನ್ನ ಜಾತಿಯ ಕಾರಣದಿಂದಾಗಿ ಉದ್ದೇಶಪೂರ್ವಕವಾಗಿ ಬಡ್ತಿ ವಿಳಂಬ ಮಾಡಲಾಗಿದೆ...

ಮಹಾರಾಷ್ಟ್ರ: ತಾಯಿ, ಸಹೋದರನ ಕಣ್ಣಿಗೆ ಮೆಣಸಿನ ಪುಡಿ ಎರೆಚಿ ಮದುವೆ ಸಿದ್ಧತೆಯಲ್ಲಿದ್ದ 21 ವರ್ಷದ ಯುವತಿಯ ಅಪಹರಣ

ಮುಂಬೈ: ಆಘಾತಕಾರಿ ಘಟನೆಯೊಂದರಲ್ಲಿ, ಮಹಾರಾಷ್ಟ್ರದ ಪುಣೆ ಜಿಲ್ಲೆಯ ಇಂದಾಪುರ ತಹಸಿಲ್‌ನ ಭಿಗ್ವಾನ್‌ನಲ್ಲಿ 21 ವರ್ಷದ ಯುವತಿಯನ್ನು ಆಕೆಯ ತಾಯಿ ಮತ್ತು ಸಹೋದರನ ಮುಂದೆಯೇ ಇಬ್ಬರು ವ್ಯಕ್ತಿಗಳು ಅಪಹರಿಸಿದ್ದಾರೆ ಎಂದು ಆರೋಪಿಸಲಾಗಿದೆ.ಮದುವೆ ಸಿದ್ಧತೆಯಲ್ಲಿದ್ದ ಯುವತಿ...

KERALA SIR | ಬಿಜೆಪಿ ಮುಖಂಡನ ದೂರು: ಪೌರತ್ವ ಸಾಬೀತುಪಡಿಸುವಂತೆ ಮುಸ್ಲಿಂ ವ್ಯಕ್ತಿಗೆ ನೋಟಿಸ್!

ಬಿಜೆಪಿ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಲೋಕೇಶ್ ನೋಂಡಾ ಎಂಬಾತನ ದೂರಿನ ಮೇರೆಗೆ ಹಿರಿಯ ವಯಸ್ಸಿನ ಮುಸ್ಲಿಂ ವ್ಯಕ್ತಿಯೊಬ್ಬರಿಗೆ ಭಾರತೀಯ ಪೌರತ್ವ ಸಾಬೀತುಪಡಿಸುವಂತೆ ಚುನಾವಣಾ ನೋಂದಣಿ ಅಧಿಕಾರಿ (ಇಆರ್‌ಒ) ನೋಟಿಸ್ ಜಾರಿ ಮಾಡಿದ್ದು, ಆ...