Homeಅಂಕಣಗಳುಮಾರಣಹೋಮದ ಪೂರ್ವ ತಯಾರಿ!

ಮಾರಣಹೋಮದ ಪೂರ್ವ ತಯಾರಿ!

- Advertisement -
- Advertisement -

ಸ್ತ್ರಿದ್ವೇಷ ಮತ್ತು ಧರ್ಮಾಂಧತೆ ಈ ನೆಲಕ್ಕೆ ಹೊಸ ಆವಿಷ್ಕಾರಗಳೇನೂ ಅಲ್ಲ. ಆದರೆ ’ಬೇಟೀ ಬಚಾವೊ, ಬೇಟಿ ಪಢಾವೋ’ (ಮಗಳನ್ನು ಕಾಪಾಡಿರಿ, ಆಕೆಗೆ ಅಕ್ಷರ ಕಲಿಸಿರಿ) ಎಂಬುದು ಖುದ್ದು ಪ್ರಧಾನಮಂತ್ರಿಯವರೇ ವರ್ಷಗಳ ಹಿಂದೆ ನೀಡಿದ ಘೋಷಣೆ. ಎಲ್ಲಿ ನಾರಿಯರು ಪೂಜಿಸಲ್ಪಡುವರೋ ಅಲ್ಲಿ ದೇವಾನುದೇವತೆಗಳೂ ರಮಿಸುವರು ಎಂದು ಅಡಿಗಡಿಗೆ ಹೇಳಿಕೊಳ್ಳಲಾಗುತ್ತದೆ. ಮುಸ್ಲಿಮ್ ನಾರಿಯರು, ದಲಿತ ದಮನಿತ ಆದಿವಾಸಿ ನಾರಿಯರು, ಕ್ರೈಸ್ತ ನಾರಿಯರು, ಕಡೆಗೆ ಉಗ್ರ ಹಿಂದುತ್ವವನ್ನು ಒಪ್ಪದಿರುವ ಹಿಂದೂ ನಾರಿಯರು ನಾರಿಯರೇ ಅಲ್ಲವೇ? ಅವರನ್ನು ಹೀನಾಮಾನ ನಿಂದಿಸಲುಬಹುದೇ? ಮುಸಲ್ಮಾನರೂ ಸೇರಿದಂತೆ ಎಲ್ಲ ದೇಶವಾಸಿಗಳ ಡಿ.ಎನ್.ಎ. ಒಂದೇ ಎಂದು ಸರಸಂಘಚಾಲಕರು ನೀಡಿದ ಹೇಳಿಕೆಗೆ ಅರ್ಥವೇನು?

ಪ್ರಧಾನಿಯಾಗಲಿ, ದೇಶದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿ ಅವರೇ ಇರಲಿ, ಮುಸಲ್ಮಾನ ಹೆಣ್ಣುಮಕ್ಕಳ ಡಿಜಿಟಲ್ ಹರಾಜಿನ ಕುರಿತು ಈತನಕ ತುಟಿ ಬಿಚ್ಚಿಲ್ಲ. ಬೆಚ್ಚಿಬೀಳಿಸುವ ಆತಂಕಕಾರಿ ಅರ್ಥಗರ್ಭಿತ ಮೌನವಿದು. ಸಮ್ಮತಿಯಲ್ಲದೆ ಇನ್ನೇನೆಂದು ಅರ್ಥೈಸಬೇಕು?

ಅಲ್ಪಸಂಖ್ಯಾತರು, ಹೆಣ್ಣುಮಕ್ಕಳು, ದಲಿತ ದಮನಿತರು ಭಯದ ನೆರಳಿನಲ್ಲಿ ಬದುಕುವ ದ್ವೇಷ ರಾಜಕಾರಣದ ವಾತಾವರಣವನ್ನು ಕಳೆದ ಕೆಲವು ವರ್ಷಗಳಲ್ಲಿ ಕಟ್ಟಿ ಬೆಳೆಸಲಾಗಿದೆ. ಹೊಸ ದ್ವೇಷಗಳ ವಿಷದ ಕಳೆಗೆ ಯಥೇಚ್ಛ ನೀರು ಗೊಬ್ಬರ ನಿರ್ಭೀತಿ ನಿರ್ಲಜ್ಜೆಯನ್ನು ಎರೆಯತೊಡಗಿದೆ ಈ ವಾತಾವರಣ. ಮುಸಲ್ಮಾನರ ನರಮೇಧಕ್ಕೆ ಬಹಿರಂಗ ಕರೆ ನೀಡುವವರನ್ನು ಮುಟ್ಟಲೂ ಆಗದೆ ಅಸಹಾಯಕವಾಗಿ ಕೈಕಟ್ಟಿ ಕುಳಿತಿದೆ ಕಾನೂನು.

ಮನೆಯಲ್ಲಿ ಉಳಿದು ಮಕ್ಕಳನ್ನು ಹೆತ್ತು ಪೋಷಿಸುವ ಪಾತ್ರವನ್ನು ಮಹಿಳೆ ನಿಭಾಯಿಸಬೇಕೆಂಬ ಮಾತನ್ನು ಆರೆಸ್ಸೆಸ್ ಮುಖ್ಯಸ್ಥರು ಕೂಡ ಹೇಳುತ್ತಾರೆ. ಹಿಂದೂಗಳು ಹೆಚ್ಚು ಮಕ್ಕಳನ್ನು ಹೆರಬೇಕೆಂಬ ಕರೆಯನ್ನು ವಿಶ್ವಹಿಂದೂ ಪರಿಷತ್ ನೀಡುತ್ತಲೇ ಬಂದಿದೆ. ತೀವ್ರ ಹಿಂದುತ್ವವಾದಿ ನರಸಿಂಘಾನಂದ್ ಹೆಚ್ಚು ಮಕ್ಕಳನ್ನು ಹೆರದಿರುವ ಹಿಂದೂ ಮಹಿಳೆಯರನ್ನು ರಾಕ್ಷಸಿಯರು ಮತ್ತು ನಾಗಿಣಿಯರು ಎಂದು ಜರೆದರು. ಸಾಧು ಸಂತರು ಎರಡೆರಡು ಸಲ ಮದುವೆಯಾಗಿ ’ಶುದ್ಧ ಹಿಂದೂ ಡಿ.ಎನ್.ಎ’ ವೃದ್ಧಿಸಬೇಕು ಎಂದು ಕರೆ ನೀಡಿದರು. ಕುಣಾಲ್ ಶರ್ಮ ಎಂಬ ಈತನ ಶಿಷ್ಯನೊಬ್ಬನು ಬಡತನದ ಹಿನ್ನೆಲೆಯ ಮುಸ್ಲಿಮ್ ಹೆಣ್ಣುಮಕ್ಕಳ ಮೊಬೈಲು ಫೋನು ನಂಬರುಗಳ ಪಟ್ಟಿಯೊಂದನ್ನು ಹೊರಡಿಸಿ ಅವರನ್ನು ರೇಪ್ ಮಾಡುವಂತೆ ಹಿಂದೂ ಗಂಡಸರಿಗೆ ಕರೆ ನೀಡಿದ. ಮುಸ್ಲಿಮ್ ಹುಡುಗಿಯರ ಮದುವೆ ಮಾಡಿಕೊಂಡು ಅವರನ್ನು ಸರ್ಕಾರಿ ಆಸ್ತಿಯೆಂದು ಬಳಸಿರಿ, ಖುದ್ದು ಭೋಗಿಸಿ ಇತರರಿಗೂ ಕೊಡಿಸಿರಿ. ಆಗ ಮಾತ್ರವೇ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ (ಸರ್ವರಿಗೂ ನ್ಯಾಯ) ಸಿಕ್ಕೀತು ಎಂದು ಸಾಮಾಜಿಕ
ಜಾಲತಾಣಗಳಲ್ಲಿ ಬೊಗಳಿದ್ದ. ಒಂದನ್ನೊಂದು ಮೀರಿಸುವ ಇಂತಹದೇ ಕಾರ್ಕೋಟಕ ನಂಜಿನ ಹೇಳಿಕೆಗಳಿಂದ ಕಿಕ್ಕಿರಿದಿವೆ ಸಾಮಾಜಿಕ ಜಾಲತಾಣಗಳು.

ಇಸ್ಲಾಮ್ ಕ್ಷಿಪ್ರ ವಿಷವೆಂದೂ, ಕ್ರೈಸ್ತ ಧರ್ಮ ನಿಧಾನ ವಿಷವೆಂದೂ ಎರಡನ್ನೂ ಇಳೆಯಿಂದಲೇ ಅಳಿಸಿಹಾಕಬೇಕೆಂದೂ, ತೀವ್ರ ಹಿಂದುತ್ವವಾದಿಗಳು ಪ್ರಚಾರ ಮಾಡುತ್ತಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಕಿಕ್ಕಿರಿದಿರುವ ಧರ್ಮಾಂಧ ಖಾತೆಗಳು ತಾವು ’ಕಾಲಿಫ್ಲವರ್ ಫಾರ್ಮರ್’ (ಹೂಕೋಸು ರೈತ) ಎಂಬ ಬಣ್ಣನೆ ಹೊಂದಿರುತ್ತಿದ್ದವು. ಈಗಲೂ ಇಂತಹ ಲೆಕ್ಕವಿಲ್ಲದಷ್ಟು ಖಾತೆಗಳು ಕಾಣಸಿಗುತ್ತವೆ. 1989ರ ಭಗಲ್ಪುರ ಕೋಮುಗಲಭೆಗಳಲ್ಲಿ ಒಂದು ಕೋಮಿನವರು ಮತ್ತೊಂದು ಕೋಮಿಗೆ ಸೇರಿದವರನ್ನು ಕೊಂದು ಹೊಲಗಳಲ್ಲಿ ಹುಗಿದು ಮೇಲೆ ಹೂಕೋಸು ಬೆಳೆಯಲಾಗಿತ್ತು. ಹೂಕೋಸು ಕೃಷಿಯ ಈ ಕ್ರೂರ ರೂಪಕ ಇದೀಗ ಪುನಃ ಚಾಲ್ತಿಗೆ ಬಂದಿದೆ.

ಅರವತ್ತು ಲಕ್ಷ ಯಹೂದಿಗಳ ನರಮೇಧ ಸರಣಿಗೆ ಮುನ್ನ ಜರ್ಮನಿ ಇಂತಹುದೇ ದ್ವೇಷದ ಕೃಷಿ ಜರ್ಮನಿಯಲ್ಲಿ ನಡೆದಿತ್ತು. ಶ್ರೇಷ್ಠ ಜರ್ಮನ್ ಜನಾಂಗೀಯ ಶುದ್ಧಿಯ ವ್ಯಸನದ ಬಲೆಗೆ ಸಿಲುಕಿದ್ದ ಹಿಟ್ಲರ್. ಅವನ ನಾಜೀವಾದವು ಕ್ರೌರ್ಯದ ಪರಮಾವಧಿಯನ್ನು ಮುಟ್ಟಿತ್ತು.

ಜರ್ಮನರ ಆರ್ಯಜನಾಂಗೀಯ ’ಶುದ್ಧ ಶ್ರೇಷ್ಠ ರಕ್ತ’ವನ್ನು ಯಹೂದಿಗಳ ’ಕೀಳು ರಕ್ತ’ದಿಂದ ಕಲುಷಿತವಾಗದಂತೆ ’ಸಂರಕ್ಷಿಸುವುದು’ ನಾಜೀವಾದದ ಗುರಿಯಾಗಿತ್ತು.

ಒಬ್ಬ ಮನುಷ್ಯನ ರಕ್ತ ಶ್ರೇಷ್ಠ ಅಥವಾ ಮತ್ತೊಬ್ಬನದು ಕನಿಷ್ಠ ಎಂಬ ವಾದಕ್ಕೆ ವೈಜ್ಞಾನಿಕ ಸಮರ್ಥನೆ ಇಲ್ಲ. ಆದರೆ ಹಿಟ್ಲರ್ ಅದಕ್ಕೆಲ್ಲ ಸೊಪ್ಪು ಹಾಕಲಿಲ್ಲ. ಜರ್ಮನ್ ರಕ್ತ ಹೊಂದಿರುವವರಿಗೆ ಮಾತ್ರವೇ ಜರ್ಮನ್ ನಾಗರಿಕತೆ ಮೀಸಲು. ಹೀಗಾಗಿ ಅನ್ಯ ಜನಾಂಗವಾಗಿದ್ದ ಯಹೂದಿಗಳು ಜರ್ಮನ್ ನಾಗರಿಕತೆಗೆ ಅರ್ಹರಲ್ಲ ಎಂದು ಸಾರಲಾಯಿತು. ಅವರ ನಾಗರಿಕ ಹಕ್ಕುಗಳನ್ನು ಕಿತ್ತುಕೊಳ್ಳಲಾಯಿತು. ಯಹೂದಿಗಳು ಮತ್ತು ಜರ್ಮನರ ನಡುವೆ ವಿವಾಹ ಮತ್ತು ವಿವಾಹೇತರ ಸಂಬಂಧವನ್ನು ನಿಷೇಧಿಸಲಾಯಿತು.

ಮತ ಚಲಾಯಿಸುವ ಹಕ್ಕು, ಸಾರ್ವಜನಿಕ ಸ್ಥಾನಮಾನಗಳಿಗೆ ಮತ್ತು ಚುನಾವಣೆಗಳಲ್ಲಿ ಸ್ಪರ್ಧಿಸುವ ಹಕ್ಕುಗಳನ್ನು ಯಹೂದಿಗಳಿಗೆ ನಿರಾಕರಿಸಲಾಯಿತು. ಅವರು ರಾಜ್ಯವಿಲ್ಲದ ಪ್ರಜೆಗಳಾದರು. ಪಾಸ್‌ಪೋರ್ಟುಗಳು ವೀಸಾಗಳನ್ನೂ ಅವರು ಹೊಂದುವಂತಿರಲಿಲ್ಲ. ಅಂತಿಮವಾಗಿ ಯಹೂದಿಗಳ ಮಾರಣಹೋಮಕ್ಕೆ ನಡೆಸಲಾದ ಪೂರ್ವಭಾವಿ ತಯಾರಿಯಾಗಿತ್ತು ಇದು.

ಹೆಚ್ಚುಹೆಚ್ಚು ಮಕ್ಕಳನ್ನು ಹೆರುವ ಮೂಲಕ ಶುದ್ಧ ಆರ್ಯ ಜರ್ಮನ್ ಜನಾಂಗದ ಸಂಖ್ಯೆಯನ್ನು ವೃದ್ಧಿಸಬೇಕೆಂದು ಜರ್ಮನ್ ಮಹಿಳೆಯರ ಮೇಲೆ ಅತೀವ ಒತ್ತಡ ಹೇರಲಾಯಿತು. ಸ್ತ್ರೀವಾದಿ ಆಂದೋಲನವನ್ನು ಹೀಗಳೆಯಲಾಯಿತು. ಮಹಿಳೆಯು ಕೇವಲ ಮಕ್ಕಳ ಹೆರುವ ಯಂತ್ರವಾಗಿ ಮನೆಯ ನಾಲ್ಕು ಗೋಡೆಗಳ ಉಳಿಯಬೇಕೆಂದು ನಿರೀಕ್ಷಿಸಲಾಯಿತು. ಹೆರಲು ಅಸಮರ್ಥರಾದ ಹೆಂಡತಿಯರಿಗೆ ವಿಚ್ಛೇದನ ನೀಡಿ ಯುವತಿಯರನ್ನು ವರಿಸಿ ಮಕ್ಕಳ ಹುಟ್ಟಿಸುವಂತೆ ಜರ್ಮನ್ ಪುರುಷರನ್ನು ಪ್ರೋತ್ಸಾಹಿಸಲಾಯಿತು.

ಜರ್ಮನಿಯಲ್ಲಿ ದಫನ್ ಆದದ್ದು ಹಿಟ್ಲರನ ಭೌತಿಕ ಶರೀರ ಮಾತ್ರ. ಕುಲೀನ ಹಸಿರು ರಕ್ತದ ಆರ್ಯ ಜನಾಂಗೀಯ ಮೇಲ್ಮೆಯನ್ನು ಮತ್ತೆ ಸ್ಥಾಪಿಸುವ ಅವನ ಧೋರಣೆಗಳು ದಫನಾಗಿಲ್ಲ. ಅವು ಗಾಳಿಯಲ್ಲಿ ನೀರಿನಲ್ಲಿ ತೇಲಿ ದೇಶ ದೇಶಗಳನ್ನು ಮುಟ್ಟಿವೆ. ಪ್ರಚಂಡ ನಾಯಕರ ಒಡಲುಗಳನ್ನು ಮೆದುಳುಗಳನ್ನು ಸೇರಿಹೋಗಿವೆ. ಜನಾಂಗೀಯ ಶ್ರೇಷ್ಠತೆಯ ಹುಸಿ ಹೆಮ್ಮೆಯನ್ನೂ, ಅನಾರ್ಯ ರಕ್ತದ ಮೇಲೆ ದ್ವೇಷದ ಕಿಚ್ಚನ್ನೂ ಹೊತ್ತಿಸಿ ಉರಿಸತೊಡಗಿವೆ.

“Birth, Sex and Abuse: Women`s Vioces Under Nazi Rule’’ ಎಂಬ ಹೆಸರಿನ
ಹೊತ್ತಿಗೆಯೊಂದಿದೆ. ಹೊಟ್ಟೆ ತೊಳಸಿ ಬರುವ ಭಯಾನಕ ಅತ್ಯಾಚಾರಗಳ ವಿವರಗಳಿಂದ ಅದು ತುಂಬಿಹೋಗಿದೆ. ಓದುವುದು ಕಡುಕಠಿಣ. ಡಾ.ಬೀವರ್ಲೀ ಛಾಮರ್ಸ್ ಎಂಬಾಕೆ ಈ ಪುಸ್ತಕದ ಲೇಖಕಿ.

ಯಾತನಾ ಶಿಬಿರಗಳಲ್ಲಿ ಯಹೂದಿ ಮಹಿಳೆಯರ ಮೇಲೆ ನಾಜೀಗಳು ನಡೆಸುವ ಅತ್ಯಾಚಾರಗಳನ್ನೂ, ಅಮಾನುಷ ವೈದ್ಯಕೀಯ ಪ್ರಯೋಗಗಳನ್ನೂ, ಅವರನ್ನು ಸೂಳೆಗಾರಿಕೆಗೆ ಬಳಸಿ ಕೊಲ್ಲುವುದನ್ನೂ ಇಲ್ಲಿ ದಾಖಲಿಸಲಾಗಿದೆ. ಕೌಸರ್ ಬೀಬಿಯ ಬಸಿರನ್ನು ಖಡ್ಗದಿಂದ ಬಗೆದು ಭ್ರೂಣವನ್ನು ಎತ್ತಿ ಹಿಡಿದ ಪೈಶಾಚಿಕತೆಯ ಪೂರ್ವನಿದರ್ಶನಗಳು ಇಲ್ಲಿ ಹೇರಳ.

ಕೋಮು ದಂಗೆಗಳೂ ಸೇರಿದಂತೆ ಚರಿತ್ರೆ ಮತ್ತು ವರ್ತಮಾನ ಕಾಲದ ಧಾರ್ಮಿಕ, ಜನಾಂಗೀಯ, ರಾಜಕೀಯ, ಆರ್ಥಿಕ ಹಿತಾಸಕ್ತಿಯ ಕದನಗಳು, ಯುದ್ಧಗಳಿಗೆ ಲಕ್ಷಲಕ್ಷ ಹೆಣ್ಣು ದೇಹಗಳು ಕದನ ಭೂಮಿಗಳಾಗಿ ಪರಿಣಮಿಸಿದ್ದು ನಾಚಿಕೆಗೇಡಿನ ನಿಜ. ಬುಲ್ಲೀಬಾಯಿ ಸುಲ್ಲೀಡೀಲ್ಸ್ ಹರಾಜಿನ ಅಧಮ ಕೃತ್ಯದ ಹಿಂದೆ ಈ ಬಗೆಯ ಗಂಡಾಳಿಕೆಯೂ ಹೆಡೆಯಾಡಿದೆ.

ಅಪಾಯಕಾರಿ ವ್ಯಾಧಿಯ ನಿಚ್ಚಳ ಲಕ್ಷಣಗಳು ಸಮಕಾಲೀನ ಭಾರತದಲ್ಲಿ ಭುಸುಗುಟ್ಟಿವೆ. ಸೌಹಾರ್ದ ಸಾಮರಸ್ಯದ ಬಹುಮುಖೀ ಸಂಸ್ಕೃತಿಯ ಸಾಮಾಜಿಕ ಹಂದರವನ್ನು ಛಿದ್ರಗೊಳಿಸಿ ದೇಶವನ್ನು ದುರ್ಬಲಗೊಳಿಸುವ ರೋಗದ ಚಿಹ್ನೆಗಳಿವು.

ಈ ರೋಗ ಬಡಿದಿದ್ದ ಜರ್ಮನಿಯು ಕಂಡ ನೀಚಾತಿನೀಚ ನರಮೇಧಗಳ ತಾಜಾ ಉದಾಹರಣೆ ನಮ್ಮ ಕಣ್ಣಮುಂದೆಯೇ ಇದೆ. ಹಗಲು ಕಂಡ ಈ ಭಾವಿಗೆ ರಾತ್ರಿ ಬೀಳತೊಡಗಿದೆ ಭಾರತ.


ಇದನ್ನೂ ಓದಿ: ’ಬುಲ್ಲಿ ಭಾಯ್’ – ಗುಂಪುದಾಳಿ ಮನಸ್ಥಿತಿ ವರ್ಚುವಲ್ ಸ್ಪೇಸ್‌ನೊಳಗೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....

ಪಿಟಿಸಿಎಲ್‌ ಕಾಯ್ದೆ ತಿದ್ದುಪಡಿ- ಕೋರ್ಟ್‌ಗಳಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ

ಪಿಟಿಸಿಎಲ್‌ ಕಾಯ್ದೆ, 1978ರ 2023ರ ತಿದ್ದುಪಡಿ ಕಾಯ್ದೆಯ ವಿರೋಧಿಸಿ ಹಾಗೂ ಕಂದಾಯ ಇಲಾಖೆಯ ಎಸಿ, ಡಿಸಿ ನ್ಯಾಯಾಲಯಗಳು ಹಾಗೂ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ...

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್‌ಗೆ ಜಾಮೀನು

ಪತ್ತನಂತಿಟ್ಟ: ಈ ತಿಂಗಳ ಆರಂಭದಲ್ಲಿ ಬಂಧಿಸಲ್ಪಟ್ಟ ಮೂರನೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್ ಅವರಿಗೆ ಕೇರಳ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ. ಶಾಸಕರು ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ್ದ ಪತ್ತನಂತಿಟ್ಟ...