Homeಅಂಕಣಗಳುಮಾರಣಹೋಮದ ಪೂರ್ವ ತಯಾರಿ!

ಮಾರಣಹೋಮದ ಪೂರ್ವ ತಯಾರಿ!

- Advertisement -
- Advertisement -

ಸ್ತ್ರಿದ್ವೇಷ ಮತ್ತು ಧರ್ಮಾಂಧತೆ ಈ ನೆಲಕ್ಕೆ ಹೊಸ ಆವಿಷ್ಕಾರಗಳೇನೂ ಅಲ್ಲ. ಆದರೆ ’ಬೇಟೀ ಬಚಾವೊ, ಬೇಟಿ ಪಢಾವೋ’ (ಮಗಳನ್ನು ಕಾಪಾಡಿರಿ, ಆಕೆಗೆ ಅಕ್ಷರ ಕಲಿಸಿರಿ) ಎಂಬುದು ಖುದ್ದು ಪ್ರಧಾನಮಂತ್ರಿಯವರೇ ವರ್ಷಗಳ ಹಿಂದೆ ನೀಡಿದ ಘೋಷಣೆ. ಎಲ್ಲಿ ನಾರಿಯರು ಪೂಜಿಸಲ್ಪಡುವರೋ ಅಲ್ಲಿ ದೇವಾನುದೇವತೆಗಳೂ ರಮಿಸುವರು ಎಂದು ಅಡಿಗಡಿಗೆ ಹೇಳಿಕೊಳ್ಳಲಾಗುತ್ತದೆ. ಮುಸ್ಲಿಮ್ ನಾರಿಯರು, ದಲಿತ ದಮನಿತ ಆದಿವಾಸಿ ನಾರಿಯರು, ಕ್ರೈಸ್ತ ನಾರಿಯರು, ಕಡೆಗೆ ಉಗ್ರ ಹಿಂದುತ್ವವನ್ನು ಒಪ್ಪದಿರುವ ಹಿಂದೂ ನಾರಿಯರು ನಾರಿಯರೇ ಅಲ್ಲವೇ? ಅವರನ್ನು ಹೀನಾಮಾನ ನಿಂದಿಸಲುಬಹುದೇ? ಮುಸಲ್ಮಾನರೂ ಸೇರಿದಂತೆ ಎಲ್ಲ ದೇಶವಾಸಿಗಳ ಡಿ.ಎನ್.ಎ. ಒಂದೇ ಎಂದು ಸರಸಂಘಚಾಲಕರು ನೀಡಿದ ಹೇಳಿಕೆಗೆ ಅರ್ಥವೇನು?

ಪ್ರಧಾನಿಯಾಗಲಿ, ದೇಶದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿ ಅವರೇ ಇರಲಿ, ಮುಸಲ್ಮಾನ ಹೆಣ್ಣುಮಕ್ಕಳ ಡಿಜಿಟಲ್ ಹರಾಜಿನ ಕುರಿತು ಈತನಕ ತುಟಿ ಬಿಚ್ಚಿಲ್ಲ. ಬೆಚ್ಚಿಬೀಳಿಸುವ ಆತಂಕಕಾರಿ ಅರ್ಥಗರ್ಭಿತ ಮೌನವಿದು. ಸಮ್ಮತಿಯಲ್ಲದೆ ಇನ್ನೇನೆಂದು ಅರ್ಥೈಸಬೇಕು?

ಅಲ್ಪಸಂಖ್ಯಾತರು, ಹೆಣ್ಣುಮಕ್ಕಳು, ದಲಿತ ದಮನಿತರು ಭಯದ ನೆರಳಿನಲ್ಲಿ ಬದುಕುವ ದ್ವೇಷ ರಾಜಕಾರಣದ ವಾತಾವರಣವನ್ನು ಕಳೆದ ಕೆಲವು ವರ್ಷಗಳಲ್ಲಿ ಕಟ್ಟಿ ಬೆಳೆಸಲಾಗಿದೆ. ಹೊಸ ದ್ವೇಷಗಳ ವಿಷದ ಕಳೆಗೆ ಯಥೇಚ್ಛ ನೀರು ಗೊಬ್ಬರ ನಿರ್ಭೀತಿ ನಿರ್ಲಜ್ಜೆಯನ್ನು ಎರೆಯತೊಡಗಿದೆ ಈ ವಾತಾವರಣ. ಮುಸಲ್ಮಾನರ ನರಮೇಧಕ್ಕೆ ಬಹಿರಂಗ ಕರೆ ನೀಡುವವರನ್ನು ಮುಟ್ಟಲೂ ಆಗದೆ ಅಸಹಾಯಕವಾಗಿ ಕೈಕಟ್ಟಿ ಕುಳಿತಿದೆ ಕಾನೂನು.

ಮನೆಯಲ್ಲಿ ಉಳಿದು ಮಕ್ಕಳನ್ನು ಹೆತ್ತು ಪೋಷಿಸುವ ಪಾತ್ರವನ್ನು ಮಹಿಳೆ ನಿಭಾಯಿಸಬೇಕೆಂಬ ಮಾತನ್ನು ಆರೆಸ್ಸೆಸ್ ಮುಖ್ಯಸ್ಥರು ಕೂಡ ಹೇಳುತ್ತಾರೆ. ಹಿಂದೂಗಳು ಹೆಚ್ಚು ಮಕ್ಕಳನ್ನು ಹೆರಬೇಕೆಂಬ ಕರೆಯನ್ನು ವಿಶ್ವಹಿಂದೂ ಪರಿಷತ್ ನೀಡುತ್ತಲೇ ಬಂದಿದೆ. ತೀವ್ರ ಹಿಂದುತ್ವವಾದಿ ನರಸಿಂಘಾನಂದ್ ಹೆಚ್ಚು ಮಕ್ಕಳನ್ನು ಹೆರದಿರುವ ಹಿಂದೂ ಮಹಿಳೆಯರನ್ನು ರಾಕ್ಷಸಿಯರು ಮತ್ತು ನಾಗಿಣಿಯರು ಎಂದು ಜರೆದರು. ಸಾಧು ಸಂತರು ಎರಡೆರಡು ಸಲ ಮದುವೆಯಾಗಿ ’ಶುದ್ಧ ಹಿಂದೂ ಡಿ.ಎನ್.ಎ’ ವೃದ್ಧಿಸಬೇಕು ಎಂದು ಕರೆ ನೀಡಿದರು. ಕುಣಾಲ್ ಶರ್ಮ ಎಂಬ ಈತನ ಶಿಷ್ಯನೊಬ್ಬನು ಬಡತನದ ಹಿನ್ನೆಲೆಯ ಮುಸ್ಲಿಮ್ ಹೆಣ್ಣುಮಕ್ಕಳ ಮೊಬೈಲು ಫೋನು ನಂಬರುಗಳ ಪಟ್ಟಿಯೊಂದನ್ನು ಹೊರಡಿಸಿ ಅವರನ್ನು ರೇಪ್ ಮಾಡುವಂತೆ ಹಿಂದೂ ಗಂಡಸರಿಗೆ ಕರೆ ನೀಡಿದ. ಮುಸ್ಲಿಮ್ ಹುಡುಗಿಯರ ಮದುವೆ ಮಾಡಿಕೊಂಡು ಅವರನ್ನು ಸರ್ಕಾರಿ ಆಸ್ತಿಯೆಂದು ಬಳಸಿರಿ, ಖುದ್ದು ಭೋಗಿಸಿ ಇತರರಿಗೂ ಕೊಡಿಸಿರಿ. ಆಗ ಮಾತ್ರವೇ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ (ಸರ್ವರಿಗೂ ನ್ಯಾಯ) ಸಿಕ್ಕೀತು ಎಂದು ಸಾಮಾಜಿಕ
ಜಾಲತಾಣಗಳಲ್ಲಿ ಬೊಗಳಿದ್ದ. ಒಂದನ್ನೊಂದು ಮೀರಿಸುವ ಇಂತಹದೇ ಕಾರ್ಕೋಟಕ ನಂಜಿನ ಹೇಳಿಕೆಗಳಿಂದ ಕಿಕ್ಕಿರಿದಿವೆ ಸಾಮಾಜಿಕ ಜಾಲತಾಣಗಳು.

ಇಸ್ಲಾಮ್ ಕ್ಷಿಪ್ರ ವಿಷವೆಂದೂ, ಕ್ರೈಸ್ತ ಧರ್ಮ ನಿಧಾನ ವಿಷವೆಂದೂ ಎರಡನ್ನೂ ಇಳೆಯಿಂದಲೇ ಅಳಿಸಿಹಾಕಬೇಕೆಂದೂ, ತೀವ್ರ ಹಿಂದುತ್ವವಾದಿಗಳು ಪ್ರಚಾರ ಮಾಡುತ್ತಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಕಿಕ್ಕಿರಿದಿರುವ ಧರ್ಮಾಂಧ ಖಾತೆಗಳು ತಾವು ’ಕಾಲಿಫ್ಲವರ್ ಫಾರ್ಮರ್’ (ಹೂಕೋಸು ರೈತ) ಎಂಬ ಬಣ್ಣನೆ ಹೊಂದಿರುತ್ತಿದ್ದವು. ಈಗಲೂ ಇಂತಹ ಲೆಕ್ಕವಿಲ್ಲದಷ್ಟು ಖಾತೆಗಳು ಕಾಣಸಿಗುತ್ತವೆ. 1989ರ ಭಗಲ್ಪುರ ಕೋಮುಗಲಭೆಗಳಲ್ಲಿ ಒಂದು ಕೋಮಿನವರು ಮತ್ತೊಂದು ಕೋಮಿಗೆ ಸೇರಿದವರನ್ನು ಕೊಂದು ಹೊಲಗಳಲ್ಲಿ ಹುಗಿದು ಮೇಲೆ ಹೂಕೋಸು ಬೆಳೆಯಲಾಗಿತ್ತು. ಹೂಕೋಸು ಕೃಷಿಯ ಈ ಕ್ರೂರ ರೂಪಕ ಇದೀಗ ಪುನಃ ಚಾಲ್ತಿಗೆ ಬಂದಿದೆ.

ಅರವತ್ತು ಲಕ್ಷ ಯಹೂದಿಗಳ ನರಮೇಧ ಸರಣಿಗೆ ಮುನ್ನ ಜರ್ಮನಿ ಇಂತಹುದೇ ದ್ವೇಷದ ಕೃಷಿ ಜರ್ಮನಿಯಲ್ಲಿ ನಡೆದಿತ್ತು. ಶ್ರೇಷ್ಠ ಜರ್ಮನ್ ಜನಾಂಗೀಯ ಶುದ್ಧಿಯ ವ್ಯಸನದ ಬಲೆಗೆ ಸಿಲುಕಿದ್ದ ಹಿಟ್ಲರ್. ಅವನ ನಾಜೀವಾದವು ಕ್ರೌರ್ಯದ ಪರಮಾವಧಿಯನ್ನು ಮುಟ್ಟಿತ್ತು.

ಜರ್ಮನರ ಆರ್ಯಜನಾಂಗೀಯ ’ಶುದ್ಧ ಶ್ರೇಷ್ಠ ರಕ್ತ’ವನ್ನು ಯಹೂದಿಗಳ ’ಕೀಳು ರಕ್ತ’ದಿಂದ ಕಲುಷಿತವಾಗದಂತೆ ’ಸಂರಕ್ಷಿಸುವುದು’ ನಾಜೀವಾದದ ಗುರಿಯಾಗಿತ್ತು.

ಒಬ್ಬ ಮನುಷ್ಯನ ರಕ್ತ ಶ್ರೇಷ್ಠ ಅಥವಾ ಮತ್ತೊಬ್ಬನದು ಕನಿಷ್ಠ ಎಂಬ ವಾದಕ್ಕೆ ವೈಜ್ಞಾನಿಕ ಸಮರ್ಥನೆ ಇಲ್ಲ. ಆದರೆ ಹಿಟ್ಲರ್ ಅದಕ್ಕೆಲ್ಲ ಸೊಪ್ಪು ಹಾಕಲಿಲ್ಲ. ಜರ್ಮನ್ ರಕ್ತ ಹೊಂದಿರುವವರಿಗೆ ಮಾತ್ರವೇ ಜರ್ಮನ್ ನಾಗರಿಕತೆ ಮೀಸಲು. ಹೀಗಾಗಿ ಅನ್ಯ ಜನಾಂಗವಾಗಿದ್ದ ಯಹೂದಿಗಳು ಜರ್ಮನ್ ನಾಗರಿಕತೆಗೆ ಅರ್ಹರಲ್ಲ ಎಂದು ಸಾರಲಾಯಿತು. ಅವರ ನಾಗರಿಕ ಹಕ್ಕುಗಳನ್ನು ಕಿತ್ತುಕೊಳ್ಳಲಾಯಿತು. ಯಹೂದಿಗಳು ಮತ್ತು ಜರ್ಮನರ ನಡುವೆ ವಿವಾಹ ಮತ್ತು ವಿವಾಹೇತರ ಸಂಬಂಧವನ್ನು ನಿಷೇಧಿಸಲಾಯಿತು.

ಮತ ಚಲಾಯಿಸುವ ಹಕ್ಕು, ಸಾರ್ವಜನಿಕ ಸ್ಥಾನಮಾನಗಳಿಗೆ ಮತ್ತು ಚುನಾವಣೆಗಳಲ್ಲಿ ಸ್ಪರ್ಧಿಸುವ ಹಕ್ಕುಗಳನ್ನು ಯಹೂದಿಗಳಿಗೆ ನಿರಾಕರಿಸಲಾಯಿತು. ಅವರು ರಾಜ್ಯವಿಲ್ಲದ ಪ್ರಜೆಗಳಾದರು. ಪಾಸ್‌ಪೋರ್ಟುಗಳು ವೀಸಾಗಳನ್ನೂ ಅವರು ಹೊಂದುವಂತಿರಲಿಲ್ಲ. ಅಂತಿಮವಾಗಿ ಯಹೂದಿಗಳ ಮಾರಣಹೋಮಕ್ಕೆ ನಡೆಸಲಾದ ಪೂರ್ವಭಾವಿ ತಯಾರಿಯಾಗಿತ್ತು ಇದು.

ಹೆಚ್ಚುಹೆಚ್ಚು ಮಕ್ಕಳನ್ನು ಹೆರುವ ಮೂಲಕ ಶುದ್ಧ ಆರ್ಯ ಜರ್ಮನ್ ಜನಾಂಗದ ಸಂಖ್ಯೆಯನ್ನು ವೃದ್ಧಿಸಬೇಕೆಂದು ಜರ್ಮನ್ ಮಹಿಳೆಯರ ಮೇಲೆ ಅತೀವ ಒತ್ತಡ ಹೇರಲಾಯಿತು. ಸ್ತ್ರೀವಾದಿ ಆಂದೋಲನವನ್ನು ಹೀಗಳೆಯಲಾಯಿತು. ಮಹಿಳೆಯು ಕೇವಲ ಮಕ್ಕಳ ಹೆರುವ ಯಂತ್ರವಾಗಿ ಮನೆಯ ನಾಲ್ಕು ಗೋಡೆಗಳ ಉಳಿಯಬೇಕೆಂದು ನಿರೀಕ್ಷಿಸಲಾಯಿತು. ಹೆರಲು ಅಸಮರ್ಥರಾದ ಹೆಂಡತಿಯರಿಗೆ ವಿಚ್ಛೇದನ ನೀಡಿ ಯುವತಿಯರನ್ನು ವರಿಸಿ ಮಕ್ಕಳ ಹುಟ್ಟಿಸುವಂತೆ ಜರ್ಮನ್ ಪುರುಷರನ್ನು ಪ್ರೋತ್ಸಾಹಿಸಲಾಯಿತು.

ಜರ್ಮನಿಯಲ್ಲಿ ದಫನ್ ಆದದ್ದು ಹಿಟ್ಲರನ ಭೌತಿಕ ಶರೀರ ಮಾತ್ರ. ಕುಲೀನ ಹಸಿರು ರಕ್ತದ ಆರ್ಯ ಜನಾಂಗೀಯ ಮೇಲ್ಮೆಯನ್ನು ಮತ್ತೆ ಸ್ಥಾಪಿಸುವ ಅವನ ಧೋರಣೆಗಳು ದಫನಾಗಿಲ್ಲ. ಅವು ಗಾಳಿಯಲ್ಲಿ ನೀರಿನಲ್ಲಿ ತೇಲಿ ದೇಶ ದೇಶಗಳನ್ನು ಮುಟ್ಟಿವೆ. ಪ್ರಚಂಡ ನಾಯಕರ ಒಡಲುಗಳನ್ನು ಮೆದುಳುಗಳನ್ನು ಸೇರಿಹೋಗಿವೆ. ಜನಾಂಗೀಯ ಶ್ರೇಷ್ಠತೆಯ ಹುಸಿ ಹೆಮ್ಮೆಯನ್ನೂ, ಅನಾರ್ಯ ರಕ್ತದ ಮೇಲೆ ದ್ವೇಷದ ಕಿಚ್ಚನ್ನೂ ಹೊತ್ತಿಸಿ ಉರಿಸತೊಡಗಿವೆ.

“Birth, Sex and Abuse: Women`s Vioces Under Nazi Rule’’ ಎಂಬ ಹೆಸರಿನ
ಹೊತ್ತಿಗೆಯೊಂದಿದೆ. ಹೊಟ್ಟೆ ತೊಳಸಿ ಬರುವ ಭಯಾನಕ ಅತ್ಯಾಚಾರಗಳ ವಿವರಗಳಿಂದ ಅದು ತುಂಬಿಹೋಗಿದೆ. ಓದುವುದು ಕಡುಕಠಿಣ. ಡಾ.ಬೀವರ್ಲೀ ಛಾಮರ್ಸ್ ಎಂಬಾಕೆ ಈ ಪುಸ್ತಕದ ಲೇಖಕಿ.

ಯಾತನಾ ಶಿಬಿರಗಳಲ್ಲಿ ಯಹೂದಿ ಮಹಿಳೆಯರ ಮೇಲೆ ನಾಜೀಗಳು ನಡೆಸುವ ಅತ್ಯಾಚಾರಗಳನ್ನೂ, ಅಮಾನುಷ ವೈದ್ಯಕೀಯ ಪ್ರಯೋಗಗಳನ್ನೂ, ಅವರನ್ನು ಸೂಳೆಗಾರಿಕೆಗೆ ಬಳಸಿ ಕೊಲ್ಲುವುದನ್ನೂ ಇಲ್ಲಿ ದಾಖಲಿಸಲಾಗಿದೆ. ಕೌಸರ್ ಬೀಬಿಯ ಬಸಿರನ್ನು ಖಡ್ಗದಿಂದ ಬಗೆದು ಭ್ರೂಣವನ್ನು ಎತ್ತಿ ಹಿಡಿದ ಪೈಶಾಚಿಕತೆಯ ಪೂರ್ವನಿದರ್ಶನಗಳು ಇಲ್ಲಿ ಹೇರಳ.

ಕೋಮು ದಂಗೆಗಳೂ ಸೇರಿದಂತೆ ಚರಿತ್ರೆ ಮತ್ತು ವರ್ತಮಾನ ಕಾಲದ ಧಾರ್ಮಿಕ, ಜನಾಂಗೀಯ, ರಾಜಕೀಯ, ಆರ್ಥಿಕ ಹಿತಾಸಕ್ತಿಯ ಕದನಗಳು, ಯುದ್ಧಗಳಿಗೆ ಲಕ್ಷಲಕ್ಷ ಹೆಣ್ಣು ದೇಹಗಳು ಕದನ ಭೂಮಿಗಳಾಗಿ ಪರಿಣಮಿಸಿದ್ದು ನಾಚಿಕೆಗೇಡಿನ ನಿಜ. ಬುಲ್ಲೀಬಾಯಿ ಸುಲ್ಲೀಡೀಲ್ಸ್ ಹರಾಜಿನ ಅಧಮ ಕೃತ್ಯದ ಹಿಂದೆ ಈ ಬಗೆಯ ಗಂಡಾಳಿಕೆಯೂ ಹೆಡೆಯಾಡಿದೆ.

ಅಪಾಯಕಾರಿ ವ್ಯಾಧಿಯ ನಿಚ್ಚಳ ಲಕ್ಷಣಗಳು ಸಮಕಾಲೀನ ಭಾರತದಲ್ಲಿ ಭುಸುಗುಟ್ಟಿವೆ. ಸೌಹಾರ್ದ ಸಾಮರಸ್ಯದ ಬಹುಮುಖೀ ಸಂಸ್ಕೃತಿಯ ಸಾಮಾಜಿಕ ಹಂದರವನ್ನು ಛಿದ್ರಗೊಳಿಸಿ ದೇಶವನ್ನು ದುರ್ಬಲಗೊಳಿಸುವ ರೋಗದ ಚಿಹ್ನೆಗಳಿವು.

ಈ ರೋಗ ಬಡಿದಿದ್ದ ಜರ್ಮನಿಯು ಕಂಡ ನೀಚಾತಿನೀಚ ನರಮೇಧಗಳ ತಾಜಾ ಉದಾಹರಣೆ ನಮ್ಮ ಕಣ್ಣಮುಂದೆಯೇ ಇದೆ. ಹಗಲು ಕಂಡ ಈ ಭಾವಿಗೆ ರಾತ್ರಿ ಬೀಳತೊಡಗಿದೆ ಭಾರತ.


ಇದನ್ನೂ ಓದಿ: ’ಬುಲ್ಲಿ ಭಾಯ್’ – ಗುಂಪುದಾಳಿ ಮನಸ್ಥಿತಿ ವರ್ಚುವಲ್ ಸ್ಪೇಸ್‌ನೊಳಗೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...