Homeಮುಖಪುಟಹಲಾಲ್, ಜಟ್ಕಾ ವಿವಾದದ ಸುಳಿಯಲ್ಲಿ - ದೇವನೂರ ಮಹಾದೇವ

ಹಲಾಲ್, ಜಟ್ಕಾ ವಿವಾದದ ಸುಳಿಯಲ್ಲಿ – ದೇವನೂರ ಮಹಾದೇವ

ಹಿಂದು-ಮುಸ್ಲಿಂ ಸಹಬಾಳ್ವೆಯ ಖಂಡುಗ ಹಾಲಿಗೆ ಒಂದು ಸೊಲಗ ವಿಷದ ಹೆಪ್ಪು ಹಾಕಿ ಸಮಾಜ ಛಿದ್ರಗೊಳಿಸಿ, ಧರ್ಮ ಕೋಮು ಧೃವೀಕರಣದ ಓಟು ಬ್ಯಾಂಕ್ ರಾಜಕಾರಣ ಮಾಡಲಾಗುತ್ತಿದೆ.

- Advertisement -
- Advertisement -

ಇಂದು, ಮಾಂಸವನ್ನು ಎಂದೂ ತಿನ್ನದ ಪ.ಮಲ್ಲೇಶ್ ಅವರು ಹಲಾಲ್ ಮಾಂಸ ಕೊಂಡುಕೊಂಡಿದ್ದಾರೆ! ಇದು ನಿಜಕ್ಕೂ ಚಾರಿತ್ರಿಕ. ಮಲ್ಲೇಶ್ ಇಂದಿನ ವಿಷಮಯ ವಾತಾವರಣ ಕಂಡು ಜಿಗುಪ್ಸೆಗೊಂಡು ಈ ರೀತಿ ಅಭಿವ್ಯಕ್ತಿ ವ್ಯಕ್ತಪಡಿಸಿದ್ದಾರೆ. ನೊಂದವರಿಗೆ ಏನೋ ಒಂದಿಷ್ಟು ಸಾಂತ್ವಾನ ನೀಡಿದ್ದಾರೆ. ಇದು ಸಣ್ಣ ಕ್ರಿಯೆಯಾದರೂ ಅದು ಹಣತೆಯ ಬೆಳಕಿನಂತೆ.

ನಮ್ಮ ಹಳ್ಳಿ ಕಡೆ ಒಂದು ಮಾತಿದೆ – “ಆಯ್ದುಕೊಂಡು ತಿನ್ನೋ ಕೋಳಿಗೆ ಕಾಲು ಮುರಿಯಬಾರದು” ಅಂತ. ಹಾಗೇ ಇನ್ನೊಂದು ಮಾತೂ ಇದೆ – “ಹೊಟ್ಟೆಗೆ ಹೊಡೆಯಬಾರದು, ಅದು ಅಧರ್ಮ, ಪಾಪ” ಅಂತ. ಇಂದು ನಮ್ಮ ಸುತ್ತಮುತ್ತ ಇವೇ ಆಗುತ್ತಿವೆ. ಒಂದು ಉದಾಹರಣೆ – ಹಳೇಪೇಪರ್, ಖಾಲಿಬಾಟಲ್, ಹಾಲಿನ ಕವರ್ ಮಾರಲು ನಾನು ಕಾಯುತ್ತಿದ್ದೇನೆ. ಕೊಂಡುಕೊಳ್ಳುವವರು ಯಾರೊಬ್ಬರೂ ಕಾಣುತ್ತಿಲ್ಲ. ಕಲುಷಿತ ವಾತಾವರಣದಿಂದ ನಿಶ್ಯಬ್ಧರಾಗಿದ್ದಾರೆ. ಎಲ್ಲಿದ್ದಾರೋ ಏನು ಮಾಡುತ್ತಿದ್ದಾರೊ ಗೊತ್ತಿಲ್ಲ.

ಹಳೇಪೇಪರ್, ಹಾಲಿನ ಕವರ್, ಖಾಲಿ ಬಾಟಲ್ ಮಾರಾಟದಿಂದಾಗಿ ಇವುಗಳ ಪುನರ್ ಬಳಕೆಯಾಗುತ್ತಿತ್ತು. ಈಗ ಈ ಕಾಯಕ ನಿಂತಿದೆ. ಇದರಿಂದಾಗಿ, ಪೇಪರ್‌ಗಾಗಿ ಮರ ಕಡಿಯುವುದು ಹೆಚ್ಚುತ್ತದೆ. ಪರಿಣಾಮವಾಗಿ ಬಿಸಿಲು ಏರುತ್ತದೆ. ಕಾರ್ಬಲ್ ಡೈಆಕ್ಸೈಡ್ ಹೆಚ್ಚುತ್ತದೆ. ಭೂಮಿ ಬೇಯುತ್ತದೆ. ಪ್ಲಾಸ್ಟಿಕ್ ತ್ಯಾಜ್ಯ ಭೂಮಿಗೆ ಸೇರುವುದರಿಂದಲೂ ಭೂಮಿ ಅನಾರೋಗ್ಯವಾಗುತ್ತದೆ. ಇದನ್ನು ಸ್ವಲ್ಪಮಟ್ಟಿಗೆ ತಪ್ಪಿಸುತ್ತಿದ್ದ ಹಳೆಪೇಪರ್ ಮಾರಾಟದ ಕಾಯಕ ಜೀವಿಗಳು ಮಾಡುತ್ತಿದ್ದುದು ನಿಜಕ್ಕೂ ಭೂಮಿ ಸೇವೆ. ಇದೇ ದೇಶಸೇವೆ. ಇದು ಬಹುಶಃ ಆ ಕಾಯಕ ಜೀವಿಗಳಿಗೂ ಗೊತ್ತಿಲ್ಲ. ಸಮಾಜಕ್ಕೂ ಗೊತ್ತಿಲ್ಲ. ಇದು ದುರಂತ. ಆಯ್ತು, ಕಾವಿ ಬಟ್ಟೆ ತೊಟ್ಟು, ಇಂದು ಆರ್ಭಟಿಸುತ್ತಿರುವ ಮಠಮಾನ್ಯ ಸಂಘಟನೆಗಳು ತಮ್ಮ ಮರಿಗಳಿಂದ ‘ಅಹಂಕಾರ ನಿರಸನ ಕ್ರಿಯೆ’ಗಾಗಿ ಈ ಕಾಯಕ ಮಾಡಿಸಬಹುದಲ್ಲ?

ದ್ವೇಷ ಅಸಹನೆಯ ಕುಸಂಸ್ಕೃತಿಯ ರಂಗಪ್ರವೇಶವು ‘ಹಿಜಾಬ್ ನಿಷೇಧವಾಗಬೇಕು’ ಎಂಬ ದಾಂಧಲೆಯಿಂದ ಆರಂಭವಾಗುತ್ತದೆ. ಯಾರಿಗೊ ಒಬ್ಬರಿಗೆ ಕೋರ್ಟ್ ತೀರ್ಪು ವಿರುದ್ಧವಾದಾಗ ಆ ವ್ಯಕ್ತಿ ಹಾಗೂ ಆ ಕುಟುಂಬದವರು ಸಂಭ್ರಮಿಸಬೇಕಿತ್ತೆ? ಅವರು ತಮ್ಮ ದುಃಖಕ್ಕೆ ತಮ್ಮ ಮನೆ ಬಾಗಿಲು ಮುಚ್ಚಿಕೊಂಡು ಮೌನವಾದರು ಎಂದಿಟ್ಟುಕೊಳ್ಳೋಣ. ಇದು ನ್ಯಾಯಾಂಗದ ಆದೇಶ ಉಲ್ಲಂಘನೆಯಾಗುತ್ತದೆಯೆ? ಇಲ್ಲೂ ಇದೇ ರೀತಿ ಆಯ್ತು. ಹಿಜಾಬ್ ವಿರುದ್ಧ ಕೋರ್ಟ್ ತೀರ್ಪು ವಿರುದ್ಧವಾದಾಗ- 17-03-2022ರಂದು ಬಂದ್ ಸತ್ಯಾಗ್ರಹಕ್ಕೆ ಮುಸ್ಲಿಂ ಸಂಘಟನೆಗಳ ಒಕ್ಕೂಟ ಕರೆ ನೀಡುತ್ತದೆ. ಮುಸ್ಲಿಂ ಸಂಘಟನೆಗಳ ಒಕ್ಕೂಟ ತಮ್ಮ ಕರಪತ್ರದಲ್ಲಿ ಹೀಗೆ ಹೇಳುತ್ತಾರೆ – “ಇಂದು ನಡೆಯುತ್ತಿರುವ ಬಂದ್ ಯಾರ ವಿರುದ್ಧವಾದುದೂ ಅಲ್ಲ. ಯಾರಿಗೂ ತೊಂದರೆ ಕೊಡುವಂಥದ್ದೂ ಅಲ್ಲ. ‘ಉಪವಾಸ ಸತ್ಯಾಗ್ರಹ’ದ ರೀತಿ ನಾವು ‘ಬಂದ್ ಸತ್ಯಾಗ್ರಹ’ ನಡೆಸುತ್ತಿದ್ದೇವೆ ಅಷ್ಟೆ. ನಾವು ನಮ್ಮ ಅಂಗಡಿ ಮುಂಗಟ್ಟುಗಳನ್ನು ತೆರೆಯದೆ ನಮಗಾಗಿರುವ ನೋವನ್ನು ಅಭಿವ್ಯಕ್ತಿ ಪಡಿಸುತ್ತಿದ್ದೇವೆ. ಯಾರಿಗೂ ಬಲವಂತ ಮಾಡುತ್ತಿಲ್ಲ. ಬೀದಿಗೆ ಇಳಿಯುತ್ತಿಲ್ಲ. ಘೋಷಣೆಯನ್ನೂ ಹಾಕುತ್ತಿಲ್ಲ. ನಾವು ಬಹಳ ಬಹಳ ನೊಂದಿದ್ದೇವೆ ಎಂದಷ್ಟೆ ಎಲ್ಲಾ ಧರ್ಮದ ಬಂಧುಗಳಿಗೆ ಹೇಳಬಯಸುತ್ತೇವೆ” – ಇದಿಷ್ಟೇ ಮುಸ್ಲಿಂ ಸಂಘಟನೆಗಳ ಒಕ್ಕೂಟದ ಮಾತುಗಳು. ಹಾಗೆ ನೋಡುವುದಾದರೆ ಈ ಮುಸ್ಲಿಂ ಸಂಘಟನೆಗಳ ಒಕ್ಕೂಟದ ಬಂದ್ ನಾಗರೀಕವಾದ ಒಂದು ಘನತೆಯ ಮಾದರಿಯನ್ನು ಸೃಷ್ಟಿಸಿದೆ. ಆದರೆ ಒಲ್ಲದ ಗಂಡನಿಗೆ ಮೊಸರಲ್ಲೂ ಕಲ್ಲು ಎಂಬಂತೆ ಕೆಲವರಿಗೆ ಕಂಡಿದೆ! ಹಾಗಾಗಿ ಈ ಬಂದ್ ನೆಪಮಾಡಿಕೊಂಡು ಜಾತ್ರೆಯಲ್ಲಿ ಮುಸ್ಲಿಮ್ ವ್ಯಾಪಾರಕ್ಕೆ ತಗಾದೆ ತೆಗೆದರು. ಇಂದು ಆ ಗುಂಪೇ ಹಲಾಲ್ ಮಾಂಸಕ್ಕೆ ಮುಗಿಬಿದ್ದಿದ್ದಾರೆ. ಮಾಂಸ ತಿನ್ನದವರೇ ಹೆಚ್ಚಾಗಿ ಹಲಾಲ್ ಮಾಂಸಕ್ಕೆ ಯಕ್ಷಗಾನ, ನಾಟಕ ಮಾಡುತ್ತಿದ್ದಾರೆ. ಧರ್ಮದ ಮುಖವಾಡದಲ್ಲಿ ಅದರೊಳಗೆ ಅಧರ್ಮ, ದ್ವೇಷ ಕುಣಿದು ಕುಪ್ಪಳಿಸುತ್ತಿದೆ. ಯಾಕಾಗಿ? ಹಿಂದು-ಮುಸ್ಲಿಂ ಸಹಬಾಳ್ವೆಯ ಖಂಡುಗ ಹಾಲಿಗೆ ಒಂದು ಸೊಲಗ ವಿಷದ ಹೆಪ್ಪು ಹಾಕಿ ಸಮಾಜ ಛಿದ್ರಗೊಳಿಸಿ, ಧರ್ಮ ಕೋಮು ಧೃವೀಕರಣದ ಓಟು ಬ್ಯಾಂಕ್ ರಾಜಕಾರಣದ ಗೆಲುವಿಗಾಗಿ. ಇದಕ್ಕಾಗಿ ಅಧರ್ಮವೇ ಧರ್ಮದ ಮುಖವಾಡದಲ್ಲಿ ದ್ವೇಷ ಅಸಹನೆಯನ್ನು ಬಿತ್ತಿ, ಬೆಳೆದು, ಕೊಂದು, ಉಂಡು, ತಿಂದು ಕೊಬ್ಬುತ್ತಿದೆ. (ಇದನ್ನೆಲ್ಲಾ ನೋಡಿದಾಗ ಕುವೆಂಪು ಅವರು ಹೇಳಿದ ಒಂದು ರೂಪಕ ನೆನಪಾಗುತ್ತಿದೆ – “ಲಂಗೋಟಿ ಕಟ್ಟಿಕೊಂಡು ಕುಸ್ತಿ ಮಾಡುವವರೊಟ್ಟಿಗೆ ಕುಸ್ತಿ ಮಾಡಬಹುದು. ಆದರೆ ಲಂಗೋಟಿ ಬಿಚ್ಚಿ ಕುಸ್ತಿ ಮಾಡುವವರ ಜೊತೆ ಹೇಗೆ ಕುಸ್ತಿ ಮಾಡುವುದು? ನಾವು ಆ ನಿರ್ಲಜ್ಜ ಅಖಾಡಕ್ಕೆ ಹೋಗಲೇಬಾರದು”.) ಇಂದು ಲಂಗೋಟಿ ಇಲ್ಲದೆ, ನಿರ್ಲಜ್ಜವಾಗಿ ಕುಸ್ತಿ ಆಡುವವರೇ, ಎತ್ತ ನೋಡಿದರೂ ಕಾಣಿಸುತ್ತಿದ್ದಾರೆ. ನಾವು ಕುಸ್ತಿ ಆಡುವುದೆಂತು?

ನಾವು ಈ ಸರ್ಕಾರಕ್ಕೆ ಇದಿಷ್ಟನ್ನಾದರೂ ಕೇಳಬೇಕು – “ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ” ಇದೆಯಾ? ಇಲ್ಲವೇ ಇಲ್ಲ, ಬಿಲ್‌ಕುಲ್ ಕಾಣುತ್ತಿಲ್ಲ. ಛೂಬಿಟ್ಟ ಗುಂಪು, ತಾವೆ ಕಾನೂನು ಕೈಗೆತ್ತಿಕೊಂಡು, ತಾವೇ ನ್ಯಾಯಾಧೀಶರಂತೆ ಪೊಲೀಸ್‌ರಂತೆ ವರ್ತಿಸುತ್ತಿವೆ. ಆಯ್ತು, ಸರ್ಕಾರವಾದರೂ ಇದೆಯಾ? ನನಗಂತು ಇದೆ ಅಂತ ಅನ್ನಿಸುತ್ತಿಲ್ಲ. ಅಥವಾ ಬಜರಂಗದಳ, ಶ್ರೀರಾಮಸೇನೆ, ಕೆಲ ಮಠಗಳಿಗೆ ಸರ್ಕಾರವೇ ಕಣ್ಸನ್ನೆ ಮಾಡಿ ಲಾ & ಆರ್ಡರ್ ಹದಗೆಡಿಸಲು ಛೂ ಬಿಟ್ಟಿದಿಯಾ? ಇದಲ್ಲದೆ ಇನ್ನೇನು? ಬಜರಂಗದಳದ ಅಮಾಯಕ ಹುಡುಗರಿಗೆ ಉದ್ಯೋಗ ನೀಡಿದ್ದರೂ ಇಷ್ಟೆಲ್ಲಾ ಗಲಭೆ ಆಗುತ್ತಿರಲಿಲ್ಲ. ಈಗ ಇನ್ನೊಂದು ಪಿಶಾಚಿ ಇಣುಕುತ್ತಿದೆ – ಅದೇ ಪ್ರಾಣಿವಧೆ ಮಾಡುವಾಗ ಅದನ್ನು ಹೇಗೆ ಕೊಲ್ಲಬೇಕು ಅಂತ, ಕೆಲವರು ಮಾನವೀಯತೆಯಿಂದ ಕೊಲ್ಲಬೇಕು ಅಂತ ಅನ್ನುತ್ತಿದ್ದಾರೆ. ಪ್ರಾಣಿ ಕೊಲ್ಲುವುದೇ ಅದರ ಮಾಂಸ ತಿನ್ನುವುದಕ್ಕಾಗಿ. ಇದರಲ್ಲಿ ‘ಮಾನವೀಯತೆ’ ಪದಬಳಕೆ ಯಾಕೆ? ಪ್ರಾಣಿವಧೆ ಹೇಗೆ ಮಾಡಬೇಕೆಂಬ ಈ ವಿವಾದ ಹೆಚ್ಚಿದರೆ, ನೆನಪಿರಲಿ, ಅದರೊಳಗೆ ಮನುಷ್ಯ ವಧೆ ಬಚ್ಚಿಟ್ಟುಕೊಂಡಿದೆ. “ಒಂದು ಹಿಂದೂ ಹೆಣಬಿದ್ದರೆ ಅಲ್ಲಿ ಬಿಜೆಪಿ ಗೆಲವು ಗ್ಯಾರಂಟಿ” ಎಂಬ ಮನಸ್ಥಿತಿ ಇರುವಾಗ ಯಾವುದು ಅಸಾಧ್ಯ? ಮಾಂಸಾಹಾರಿಗಳು ಪ್ರಾಣಿವಧೆ ಮಾಡುತ್ತಿದ್ದರೆ ಸರ್ಕಾರ ನರಬಲಿ ಕೇಳುತ್ತಿದೆ, ತನ್ನ ಗೆಲುವಿಗಾಗಿ.

ಬೇಲಿಯೇ ಎದ್ದು ಹೊಲ ಮೇಯುತ್ತಾ ಇರುವಾಗ ಯಾರನ್ನು ಕೇಳುವುದು? ಉಳಿದಿರುವುದು ಒಂದೇ ದಾರಿ. ನಾಡಿನ ಯಾವುದೇ ಮೂಲೆಗೆ ಹೋದರೂ, ಯಾವುದೇ ಹಳ್ಳಿಗೆ ಹೋದರೂ ಸಕಲ ಹದಿನೆಂಟು ಜಾತಿ ಧರ್ಮಕ್ಕೆ ಸೇರಿದ ಸಹಬಾಳ್ವೆ ಬಯಸುವ ಮನುಷ್ಯರು ಸಿಕ್ಕೇ ಸಿಗುತ್ತಾರೆ. ನಾವೀಗ ಅವರ ಕಡೆ ನೋಡಬೇಕಿದೆ. ಎಲ್ಲಡೆಯೂ ‘ಸಕಲೆಂಟು ಜಾತಿ/ಮತ ಸಹಬಾಳ್ವೆ ಸಂಘ’ ಚಿಗುರಬೇಕಾಗಿದೆ. ನಾಡು ಉಳಿಯಬೇಕಾದರೆ ಅದು ಕ್ರಿಯಾಶೀಲವಾಗಬೇಕಾಗಿದೆ.

  • ದೇವನೂರ ಮಹಾದೇವ

(ಕನ್ನಡದ ಹಿರಿಯ ಸಾಹಿತಿಗಳು ಮತ್ತು ಜನಪರ ಹೋರಾಟಗಾರರು)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others


ಇದನ್ನೂ ಓದಿ; ಇಂದಿನಿಂದ ಹೋಟೆಲ್ ಊಟ-ತಿಂಡಿ ದರ ಏರಿಕೆ: ಕಾರಣವೇನು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ನಾಡೋಜ ದೇವನೂರು ಮಹದೇವ ಅವರ ಈ ಮಾನವೀಯ ಮಾತುಗಳು ಅಂದರಾದ ಜನರ ಕಣ್ಣು ತೆರೆಸಲಿ

LEAVE A REPLY

Please enter your comment!
Please enter your name here

- Advertisment -

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...

ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...

ಮಹಾರಾಷ್ಟ್ರ| 10 ದಿನಗಳ ಮಗುವಿನೊಂದಿಗೆ 12 ನೇ ತರಗತಿ ಪರೀಕ್ಷೆ ಬರೆದ ಮಹಿಳೆ

ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ 12 ನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ಮಹಿಳೆಯೊಬ್ಬರು ತನ್ನ 10 ದಿನಗಳ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ. ಮಹಿಳೆ ಪರೀಕ್ಷೆ ಬರೆಯುವ ಕಾರಣಕ್ಕೆ ಕೇಂದ್ರದ ವಿಶೇಷ...

ಒಡಿಶಾ| ದಲಿತರು ವಾಸಿಸುವ ಪ್ರದೇಶಕ್ಕೆ ಕುಡಿಯುವ ನೀರು-ವಿದ್ಯುತ್ ಸಂಪರ್ಕ ಕಡಿತ

ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಗ್ರಾಮದ ಅಧಿಕಾರಿಯೊಬ್ಬರು ಈ ಅಡಚಣೆಗೆ ಸ್ಥಳೀಯ ಕಲಹ ಕಾರಣ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ತುರೆಕೆಲಾ ಬ್ಲಾಕ್‌ನ ಡುಮೆರ್ಚುವಾನ್ ಗ್ರಾಮದಲ್ಲಿ...

ತಮಿಳುನಾಡು ವಿಧಾನಸಭಾ ಚುನಾವಣೆ: ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಡಿಎಂಡಿಕೆ ಸೇರ್ಪಡೆ

ಚೆನ್ನೈ: ದಿವಂಗತ ನಟ ವಿಜಯಕಾಂತ್ ಅವರ ದೇಶೀಯ ಮುರ್ಪೋಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಗುರುವಾರ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟ (ಎಸ್‌ಪಿಎ)ವನ್ನು 21ವರ್ಷಗಳ ಅಸ್ತಿತ್ವದ ನಂತರ ಮೊದಲ ಬಾರಿಗೆ...

ಟ್ರಕ್ ಚಾಲಕ ರಸ್ತೆಯಲ್ಲಿ ನಮಾಝ್ ಮಾಡಿದ್ದರಿಂದ ಟ್ರಾಫಿಕ್ ಜಾಮ್ ಎಂದು ಸುಳ್ಳು ಸುದ್ದಿ ಪ್ರಸಾರ : ಝೀ ನ್ಯೂಸ್‌ಗೆ 1 ಲಕ್ಷ ರೂ. ದಂಡ

ಮುಸ್ಲಿಂ ವ್ಯಕ್ತಿಯೊಬ್ಬರು ನಮಾಝ್ ಮಾಡಲು ಹೆದ್ದಾರಿ ಮಧ್ಯೆ ಟ್ರಕ್‌ ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್‌ ಉಂಟಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿದ ಝೀ ನ್ಯೂಸ್‌ ಚಾನೆಲ್‌ಗೆ ಸುದ್ದಿ ಪ್ರಸಾರಕರು ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ(ಎನ್‌ಬಿಡಿಎಸ್‌ಎ)...

ಗುಜರಾತ್‌| ಜಾತಿ ಆಧಾರಿತ ಜಗಳದಲ್ಲಿ ದಲಿತ ಯುವಕನ ಮೇಲೆ ಚಾಕುವಿನಿಂದ ದಾಳಿ

ಶನಿವಾರ ತಡರಾತ್ರಿ ರಾಣಿಪ್‌ನಲ್ಲಿ ನಡೆದ ಸಣ್ಣ ಭಿನ್ನಾಭಿಪ್ರಾಯವೊಂದು ಹಿಂಸಾಚಾರಕ್ಕೆ ತಿರುಗಿದ್ದು, 25 ವರ್ಷದ ದಲಿತ ಯುವಕ ಸಾಹಿಲ್ ವಘೇಲಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯು ಈ ಪ್ರದೇಶದಲ್ಲಿ...