ಇಂದಿನಿಂದ ರಾಜ್ಯದಲ್ಲಿ ಹೋಟೆಲ್-ರೆಸ್ಟೋರೆಂಟ್-ಕೈಗಾಡಿಗಳಲ್ಲಿನ ಊಟ-ತಿಂಡಿ ದರ ಶೇ.10 ರಷ್ಟು ಹೆಚ್ಚಾಗಿದೆ. ಪ್ರತಿ ಪ್ಲೇಟ್ ಊಟ ತಿಂಡಿಯ ಮೇಲೆ 10 ರೂ ನಿಂದ 50 ರೂವರೆಗೆ ಏರಿಸಲಾಗಿದೆ. ಅದೇ ರೀತಿಯಾಗಿ ಕಾಫಿ-ಟೀ ಬೆಲೆ ಕೂಡ ಏರಿಕೆಯಾಗಿದೆ.
ಕಳೆದ ಮೂರು-ನಾಲ್ಕು ವರ್ಷಗಳಿಂದ ಹೋಟೆಲ್ ಊಟದ ದರದಲ್ಲಿ ತಟಸ್ಥತೆಯನ್ನು ಕಾಯ್ದುಕೊಂಡು ಬರಲಾಗಿತ್ತು. ಅದರಲ್ಲಿಯೂ ರಸ್ತೆ ಬದಿಯಲ್ಲಿರುವ ಚಿಕ್ಕ ಪುಟ್ಟ ಹೋಟೆಲ್ಗಳು, ಮೆಸ್ಗಳು ಮತ್ತು ಕೈಗಾಡಿಗಳು ಕೈಗೆಟುಕುವ ದರದಲ್ಲಿ ಊಟ- ತಿಂಡಿ ಮಾರುತ್ತಿದ್ದವು. ಈಗ ಅವುಗಳು ಸಹ ಬೆಲೆ ಏರಿಸಿವೆ. 30-35 ರೂಗಳಿಗೆಲ್ಲ ಬೆಳಗ್ಗಿನ ತಿಂಡಿ ತಿನ್ನಬಹುದಾಗಿತ್ತು. ಈಗ 50ರೂಗಳ ಗಡಿ ದಾಟಿದೆ. ಇನ್ನು ರೆಸ್ಟೋರೆಂಟ್ಗಲ್ಲಿ ಒಂದು ತಿಂಡಿಗೆ ಕನಿಷ್ಟ 100 ರೂ ಖರ್ಚು ಮಾಡಬೇಕಾಗಿದೆ.
ಕಾರಣವೇನು?
ಕೊರೊನಾ ಕಾರಣಕ್ಕೆ ಈ ಎರಡು ವರ್ಷ ಹೋಟೆಲ್ ಉದ್ಯಮ ಸಮರ್ಪಕವಾಗಿ ನಡೆದುದ್ದೆ ಇಲ್ಲ. ಲಾಕ್ಡೌನ್ ಕಾರಣಕ್ಕೆ ಹಲವಾರು ತಿಂಗಳುಗಳು ಮುಚ್ಚಿದ್ದರೆ ಇನ್ನುಳಿದ ಸಮಯದಲ್ಲಿ ಶೇ.50 ರಷ್ಟು ಜನಕ್ಕೆ ಮಾತ್ರ ಅನುಮತಿ, ಪಾರ್ಸೆಲ್ ಮಾತ್ರ ಎಂಬ ನಿಬಂಧನೆಗಳಿಗೆ ಒಳಪಟ್ಟಿತ್ತು. ಈಗ ಕೋವಿಡ್ ಮುಗಿದ ನಂತರ ಪೂರ್ಣ ಪ್ರಮಾಣದಲ್ಲಿ ಹೋಟೆಲ್ಗಳು ಆರಂಭವಾಗಿವೆ. ಆದರೆ ಹೋಟೆಲ್ ನಡೆಸಲು ಬೇಕಾಗುವ ಎಲ್ಲಾ ಸಾಮಾಗ್ರಿಗಳ ಬೆಲೆ ಏರಿಕೆಯಾಗಿದೆ. ಅಡುಗೆ ಎಣ್ಣೆ, ಗ್ಯಾಸ್, ತರಕಾರಿ, ದಿನಸಿ ಬೆಲೆ ದಿನೇ ದಿನೇ ಏರುತ್ತಿರುವುದರಿಂದ ಅನಿವಾರ್ಯವಾಗಿ ಬೆಲೆ ಏರಿಕೆ ಮಾಡಬೇಕಾಗಿದೆ.
ಅಡುಗೆ ಎಣ್ಣೆ:
80 ರೂಗಳಿಗೆ ಸಿಗುತ್ತಿದ್ದ ಒಂದು ಲೀಟರ್ ಅಡುಗೆ ಎಣ್ಣೆ ಈಗ 160-170 ರೂಗಳಿಗೆ ಏರಿಕೆಯಾಗಿದೆ. ಅಂದರೆ ಡಬಲ್ ಆಗಿದೆ. ಇದು ಹೋಟೆಲ್ ಉದ್ಯಮ ನಡೆಸುವವರಿಗೆ ಹೊರೆಯಾಗಿದೆ.
ವಾಣಿಜ್ಯ ಬಳಕೆಯ ಗ್ಯಾಸ್ ಬೆಲೆ ಏರಿಕೆ:
19 ಕೆಜಿಯ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಮೊನ್ನೆಯಷ್ಟೆ 250 ರೂ ಹೆಚ್ಚಳ ಮಾಡಲಾಗಿದೆ. ಹಾಗಾಗಿ ಬೆಂಗಳೂರಿನಲ್ಲಿ ಅದರ ಬೆಲೆ 2317.00 ರೂ.ಗೆ ಏರಿಕೆಯಾಗಿದೆ. ರೆಸ್ಟೋರೆಂಟ್ಗಳು, ಹೋಟೆಲ್ಗಳು, ಟೀ ಸ್ಟಾಲ್ಗಳು ಮತ್ತು ಇತರ ವಾಣಿಜ್ಯ ಕೆಫೆಗಳು ಇದೇ 19 ಕೆಜಿ ಸಿಲಿಂಡರ್ ಅನ್ನು ಬಳಸಲಾಗುತ್ತವೆ. 2021ರ ನವೆಂಬರ್ ನಲ್ಲಿ 1700 ರೂ ಇದ್ದ ಗ್ಯಾಸ್ ಬೆಲೆ ಈಗ 2300 ರೂಗೆ ಏರಿದೆ. ಅಂದರೆ ಆರು ತಿಂಗಳಲ್ಲಿ 600 ರೂ ಹೆಚ್ಚಾಗಿದೆ!
ಪೆಟ್ರೋಲ್ -ಡೀಸೆಲ್ ಬೆಲೆಯಲ್ಲಿ ನಿರಂತರ ಏರಿಕೆ
2020ರ ಜೂನ್ನಲ್ಲಿ ಲೀಟರ್ ಪೆಟ್ರೋಲ್ ಬೆಲೆ 73.55ರೂ ಇತ್ತು. ಈಗ ಅದು 110 ರೂಗೆ ಏರಿದೆ. ಅಂದರೆ 36.50 ರೂ ಹೆಚ್ಚಳವಾಗಿದೆ. ಅಂದರೆ ಶೇ.50 ರಷ್ಟು ಏರಿಕೆಯಾಗಿದೆ. ಡೀಸೆಲ್ ಬೆಲೆ ಸಹ 66 ರೂ ಇದ್ದುದ್ದು ಈಗ 94 ರೂಗೆ ಏರಿಕೆಯಾಗಿದೆ. ಈ ಬೆಲೆ ಏರಿಕೆಯಿಂದ ಎಲ್ಲಾ ಸಾಗಣೆ ವಾಹನಗಳು ಬಾಡಿಗೆ ಏರಿಸಬೇಕಾಗುತ್ತದೆ. ಇದರಿಂದ ಆಹಾರ, ತರಕಾರಿ, ದಿನಸಿ, ಹಣ್ಣು ಸೇರಿದಂತೆ ದಿನಬಳಕೆಯ ಪ್ರತಿಯೊಂದು ವಸ್ತುಗಳ ಬೆಲೆ ಏರುತ್ತಿದೆ.
ಅದೇ ರೀತಿಯಾಗಿ ಟ್ರ್ಯಾಕ್ಟರ್, ಟಿಲ್ಲರ್, ಲಗೇಜ್ ವಾಹನಗಳಿಗೆ ಡೀಸೆಲ್ ಬೇಕಿರುವುದರಿಂದ ಕೃಷಿಯ ಮೇಲಿನ ಹೂಡಿಕೆ ಹೆಚ್ಚಾಗುತ್ತದೆ. ರೈತರಿಗೆ ಹೊರೆಯಾಗುತ್ತಿದೆ.
ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಗೆ ಕಾರಣವೇನು?
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇಂಧನಗಳ ಮೇಲಿನ ತೆರಿಗೆ ಹೆಚ್ಚು ಮಾಡುತ್ತಿದೆ. ಒಂದು ಲೀಟರ್ ಪೆಟ್ರೋಲ್ನ ಮೂಲ ಬೆಲೆ 38 ರೂಪಾಯಿಗಳಿದ್ದರೆ ಅದರ ಮೇಲೆ ಕೇಂದ್ರ ಸರ್ಕಾರವೊಂದೇ 37 ರೂ ಅಬಕಾರಿ ಸುಂಕ ವಿಧಿಸುತ್ತದೆ. ರಾಜ್ಯಗಳು ಸುಮಾರು 27 ರೂಪಾಯಿಯಷ್ಟು ವ್ಯಾಟ್ ತೆರಿಗೆ ವಿಧಿಸುತ್ತವೆ. ಸಾಗಣೆ, ಸಂಸ್ಕರಣೆ ಮತ್ತು ಡೀಲರ್ ಕಮಿಷನ್ 8ರೂ ಆಗುತ್ತದೆ. ಅಲ್ಲಿಗೆ ಪೆಟ್ರೋಲ್ ಬೆಲೆ 110 ರೂ ದಾಟುತ್ತದೆ.
ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ನಂತರ ಇಂಧನಗಳ ಮೇಲಿನ ತೆರಿಗೆಯಿಂದಲೇ 26,51,919 ಕೋಟಿ ರೂ ಸಂಗ್ರಹಿಸಿದ್ದಾರೆ! 26 ಲಕ್ಷ ಕೋಟಿ ರೂಗಳೆಂದರೆ ಕಳೆದ 10 ವರ್ಷದ ಇಡಿ ಕರ್ನಾಟಕ ಬಜೆಟ್ಗೆ ಸರಿಸಮವಾಗುತ್ತದೆ.
ನಾವು ವಾಹನಗಳನ್ನು ಬಳಸುತ್ತಿಲ್ಲ, ಹೀಗಾಗಿ ಪೆಟ್ರೋಲ್ ಬೆಲೆ ಏರಿಕೆಯಿಂದ ನಮಗೆ ತೊಂದರೆ ಇಲ್ಲ ಎಂದು ಯಾರಾದರೂ ಅಂದುಕೊಂಡರೆ ಅವರ ತಿಳಿವಳಿಕೆ ತಪ್ಪು ಎನ್ನುವುದರಲ್ಲಿ ಎರಡು ಮಾತಿಲ್ಲ. ಬೇಡಿ ಬದುಕುವವರೂ ಸೇರಿದಂತೆ ಈ ದೇಶದ ಪ್ರತಿಯೊಬ್ಬ ಪ್ರಜೆಯ ಜೀವನವೂ ಪ್ರತಿದಿನ ತುಟ್ಟಿಯಾಗುತ್ತಿದೆ.
ಕರ್ನಾಟಕದಲ್ಲಿ 2 ಕೋಟಿಗೂ ಅಧಿಕ ನೋಂದಾಯಿತ ವಾಹನಗಳಿವೆ. ಇವುಗಳ ಮಾಲಿಕರು ನೇರವಾಗಿ ಪೆಟ್ರೋಲ್ ಬೆಲೆ ಏರಿಕೆಯಿಂದ ಬಾಧಿತರಾದರೆ ಕರ್ನಾಟಕದ ಉಳಿದ 5 ಕೋಟಿ ಜನರು ಸಹ ಪೆಟ್ರೋಲ್ ಬೆಲೆ ಏರಿಕೆಯ ದುಷ್ಪರಿಣಾಮಗಳನ್ನು ಅನುಭವಿಸಬೇಕಾಗಿದೆ. ಇದರಿಂದ ಪಾರಾಗಲು ಇಂಧನಗಳ ಮೇಲಿನ ತೆರಿಗೆ ಇಳಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರುವುದೊಂದೆ ಜನರಿಗೆ ಉಳಿದಿರುವ ದಾರಿಯಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹50 ₹100 ₹500 ₹1000 Others
ಇದನ್ನೂ ಓದಿ: ಮತ್ತೆ ಇಂಧನ ಬೆಲೆ ಏರಿಕೆ; ಎರಡು ವಾರಗಳಲ್ಲಿ ಪೆಟ್ರೋಲ್ ಬೆಲೆ 10 ರೂ. ಹೆಚ್ಚಳ