ಒಳಮೀಸಲಾತಿಯನ್ನು ಕೇವಲ ಒಂದು ಸವಲತ್ತಿನ ಕಾರ್ಯಸೂಚಿಯಾಗಿ ನೋಡದೆ ಸಾಮಾಜಿಕ ಆಯಾಮಗಳಿಂದಲೂ ಅವಲೋಕಿಸಿ ನೋಡಿದಾಗ ಅಸ್ಪೃಶ್ಯ ಬದುಕಿನ ಸತ್ಯ ದರ್ಶನವಾಗುತ್ತದೆ. ಪರಿಶಿಷ್ಟ ಜಾತಿಯ 101 ಜಾತಿಗಳಲ್ಲಿ ಸ್ಪೃಶ್ಯ-ಅಸ್ಪೃಶ್ಯ ಸ್ತರಗಳನ್ನು ಮೊದಲು ಮನಗಾಣಬೇಕು. ಹೊಲೆ-ಮಾದಿಗರು ಹೊರಗಿಟ್ಟ ಸಮುದಾಯವಾಗಿಯೇ ಬದುಕುತ್ತಿರುವ ಕಾಲ ಇನ್ನೂ ಜೀವಂತವಾಗಿದೆ. ಪರಿಶಿಷ್ಟ ಜಾತಿಯಲ್ಲಿನ ಬಹುತೇಕ ಬಲಾಢ್ಯ ಸ್ಪೃಶ್ಯಜಾತಿಗಳು ಮಾದಿಗರನ್ನು ಹೊಸ್ತಿಲ ಒಳಗೂ ಬಿಟ್ಟುಕೊಳ್ಳದೆ, ತಮ್ಮ ಹೊಲ, ಗದ್ದೆಗಳ ಜೀತಕ್ಕೂ ಇಟ್ಟುಕೊಂಡ ಪ್ರಕರಣಗಳು ಇವೆ. ಮಾದಿಗ ಸಮುದಾಯ ನಾಗರಿಕ ಸಮಾಜದ ಹೇಲು-ಉಚ್ಚೆ ಬಾಚಿ ಬಳಿಯುವ ದಾರುಣ ಬದುಕಿನಿಂದ ಮತ್ತು ಈ ಕಾಲಕ್ಕೂ ಪುಟ್ಬಾತ್ನಲ್ಲಿ ಅಂಬೇಡ್ಕರ್, ಬಾಬು ಜಗಜೀವನ ರಾಂ ಹೆಸರಿನಲ್ಲಿ ಪೆಟ್ಟಿಗೆಗಳನ್ನಿಟ್ಟುಕೊಂಡು ಚಪ್ಪಲಿ ಹೊಲಿಯುವ ಕಸುಬಿನಿಂದ ಈಗಿನ ತಲೆಮಾರುಗಳು ಇನ್ನೂ ಮುಕ್ತಿಹೊಂದಿಲ್ಲ. ಪರಿಶಿಷ್ಟ ಜಾತಿಗಳಲ್ಲಿನ ಸ್ಪೃಶ್ಯ-ಅಸ್ಪೃಶ್ಯ ಜಾತಿಗಳಿಗೆ ಒಟ್ಟು ಮೀಸಲಾತಿ ಅನ್ವಯವಾಗಿರುವಾಗ ಈ ಇಬ್ಬರ ನಡುವೆ ಇಂತಹ ಅಮಾನುಷ ಅಂತರ ಏಕಿದೆ ಎಂಬುದನ್ನು ಒಳಮೀಸಲಾತಿ ವಿರೋಧಿಸುವ ಸಹೋದರರು ಯೋಚಿಸಬೇಕಾಗಿದೆ.
ಒಳಮೀಸಲಾತಿಯ ಕೂಗು ಇಂದು – ನೆನ್ನೆಯದಲ್ಲ. 1994-95 ರಲ್ಲಿ ಆಂಧ್ರದಲ್ಲಿ ಆರಂಭಗೊಂಡ ಒಳಮೀಸಲಾತಿಯ ಕೂಗಿನ ಹಿಂದೆ ಜನಸಂಖ್ಯೆ ಆಧರಿಸಿ ಬಹುಸಂಖ್ಯಾತರಾಗಿದ್ದ ಅಸ್ಪೃಶ್ಯ ಜಾತಿಗಳು ಮೀಸಲಾತಿಯ ಫಲವನ್ನು ದಕ್ಕಿಸಿಕೊಳ್ಳಲಾಗದ ನೋವು ಸ್ಫೋಟಗೊಂಡಿತು. ಆಂಧ್ರದಲ್ಲಿ ಭುಗಿಲೆದ್ದ ಹೋರಾಟದ ಪರಿಣಾಮ ಅಂದಿನ ಆಂಧ್ರ ಸರ್ಕಾರ ಜಸ್ಟೀಸ್ ರಾಮಚಂದ್ರ ರಾವ್ ಆಯೋಗವನ್ನು ರಚಿಸಿದ್ದು, ಆಯೋಗವು ಮಾದಿಗ ಮತ್ತು ಸಂಬಂಧಿತ ಅಸ್ಪೃಶ್ಯ ಜಾತಿಗಳಿಗೆ ಒಳಮೀಸಲಾತಿ ನೀಡುವ ಅಗತ್ಯತೆಯನ್ನು ಸ್ಪಷ್ಟವಾಗಿ ವೈಜ್ಞಾನಿಕ ಕೋನದಲ್ಲಿ ಮಂಡಿಸಿತು. ಸರ್ಕಾರ ಕೂಡ ಇದನ್ನು ಅನುಷ್ಠಾನಗೊಳಿಸಲು ಮುಂದಾದಾಗ ಆರ್ಥಿಕವಾಗಿ ಪ್ರಬಲವಾಗಿದ್ದ ಮಾಲ ಸಮುದಾಯವು ನ್ಯಾಯಾಲಯಕ್ಕೆ ಮೊರೆಹೋಗಿದ್ದರಿಂದ ಉದ್ದೇಶಿತ ಒಳಮೀಸಲಾತಿಗೆ ಹಿನ್ನಡೆಯಾಯಿತು.
ಆಂಧ್ರದ ಚಳವಳಿಯಿಂದ ಪ್ರೇರಣೆಗೊಂಡು ಕರ್ನಾಟಕದಲ್ಲೂ ಒಳಮೀಸಲಾತಿ ಹೋರಾಟ ಆರಂಭಗೊಂಡಿತು. ಅದರ ಪರಿಣಾಮದಿಂದ ರಚನೆಯಾದ ಜಸ್ಟಿಸ್ ಸದಾಶಿವ ಆಯೋಗದ ವರದಿಯಲ್ಲಿ ಜನಸಂಖ್ಯೆಗನುಗುಣವಾಗಿ ಮೀಸಲು ಹಂಚಿಕೆಯ ಮಾನದಂಡವೊಂದು ಪ್ರಸ್ತಾಪಿತವಾಗಿದೆ. ಒಟ್ಟು ಮೀಸಲು ಪ್ರಮಾಣ ಶೇ. 15ರಲ್ಲಿ – ಶೇ. 33.47 ರಷ್ಟಿರುವ ಮಾದಿಗ ಸಮುದಾಯಕ್ಕೆ ಶೇ. 6, ಶೇ. 32 ರಷ್ಟು ಪ್ರಮಾಣದ ಜನಸಂಖ್ಯೆ ಹೊಂದಿರುವ ಬಲಗೈ ಸಮುದಾಯಕ್ಕೆ ಶೇ. 5 ಉಳಿದ ಸ್ಪೃಶ್ಯ ಮತ್ತು ಸಂಬಂಧಿತ ಜಾತಿಗಳಿಗೆ ಶೇ. 3 ಮತ್ತು ಇತರೆ ಜಾತಿಗಳಿಗೆ ಶೇ. 1 ರಷ್ಟು ಮೀಸಲಾತಿಯ ಹಂಚಿಕೆಯನ್ನು ಪ್ರತಿಪಾದಿಸಿದೆ. ಜನಸಂಖ್ಯೆ ಆಧರಿಸಿ ಮೀಸಲು ಪ್ರಮಾಣ ಹಂಚಿಕೆಯಾಗುವುದು ನ್ಯಾಯಸಮ್ಮತವೂ ಮತ್ತು ಹಕ್ಕು ಆಗಿರುವಾಗ ಇದನ್ನು ವಿರೋಧಿಸುವುದು ಸಾಮಾಜಿಕ ನ್ಯಾಯದ ಉಲ್ಲಂಘನೆಯೂ ಆಗುತ್ತದೆ. ಮೀಸಲಾತಿಯ ಬಗೆಗಿನ ವೈಜ್ಞಾನಿಕವಾದ ಮತ್ತು ಪ್ರಜಾತಾಂತ್ರಿಕವಾದ ನಿಲುವನ್ನು ಬಿತ್ತುವ ಮತ್ತು ಹೊಂದುವ ಅಗತ್ಯ ಎಲ್ಲಾ ಕಾಲಕ್ಕೂ ಇರತಕ್ಕದ್ದು. ಅದು ಒಳಮೀಸಲಾತಿಗೂ ವಿಸ್ತರಿಸಬೇಕು. ಈ ಮೂಲಕ ಹಂಚುಣ್ಣುವ ಮನೋಧರ್ಮವನ್ನು ಧರಿಸಲು ಸಾಧ್ಯ.
ಇದನ್ನೂ ಓದಿ: ಒಳಮೀಸಲಾತಿಯೆಂಬುದು ಅಣ್ಣನ ಪಾಲು ಅಣ್ಣನಿಗೆ, ತಮ್ಮನ ಪಾಲು ತಮ್ಮನಿಗೆ ಎಂಬ ಸರಳ ಸೂತ್ರ – ಅಂಬಣ್ಣ ಅರೋಲಿಕರ್
ನೆನಗುದಿಗೆ ಬಿದ್ದಿದ್ದ ಜಸ್ಟಿಸ್ ಸದಾಶಿವ ಆಯೋಗಕ್ಕೆ 2010ರಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪನವರು ಹಣಕಾಸು ನೀಡಿ ಚಾಲನೆ ನೀಡಿದರು. ಈಗ ಯಡಿಯೂರಪ್ಪನವರೆ ಮುಖ್ಯಮಂತ್ರಿಯಾಗಿದ್ದಾರೆ. ವರದಿ ಮಂಡನೆಯಾಗಿ ಎಂಟು ವರ್ಷಗಳು ಕಳೆದಿವೆ. ಆದರೆ ಈ ವರದಿ ಕೇವಲ ರಾಜಕೀಯ ಕಾರಣಕ್ಕಾಗಿ ಬಳಕೆಯಾಗದೆ ಉದ್ದೇಶಿತ ನ್ಯಾಯವನ್ನು ಜಾರಿಗೊಳಿಸುವ ಬದ್ಧತೆಯನ್ನು ತೋರಬೇಕಿದೆ. ಇಲ್ಲಿ ಮೂಲಭೂತವಾದ ಪ್ರಶ್ನೆಯೆಂದರೆ, ಜಸ್ಟಿಸ್ ಸದಾಶಿವ ಆಯೋಗದ ವರದಿಯನ್ನು ಒಪ್ಪುವುದು, ತಿರಸ್ಕರಿಸುವ ಹೊಣೆಗಾರಿಕೆ ಯಾರದ್ದು?!
ಈ ವರದಿಯ ಚರ್ಚೆ ಹಾದಿ – ಬೀದಿಯಲ್ಲಿ ನಡೆಯಬೇಕಾ? ಪರಿಶಿಷ್ಟ ಸಹೋದರರು ಪರ-ವಿರೋಧಗಳ ಹಗೆಗೆ ಬಿದ್ದು ಬೀದಿಗೆ ಬರಬೇಕಾ?
ಸುಪ್ರೀಂ ಕೋರ್ಟ್ ರಾಷ್ಟ್ರ ಮಟ್ಟದಲ್ಲೇ ಒಳಮೀಸಲಾತಿ ಕುರಿತಂತೆ ಸಕಾರಾತ್ಮಕವಾಗಿ ತನ್ನ ಅಭಿಪ್ರಾಯವನ್ನು ವ್ಯಕ್ತಿಪಡಿಸಿದೆ. ವಿಸ್ತೃತ ಪೀಠದ ಪರಿಶೀಲನೆಗೂ ಒಪ್ಪಿಸಿದೆ. ವಿಸ್ತೃತ ಸಂವಿಧಾನಿಕ ನ್ಯಾಯಪೀಠ ತನ್ನ ಅಂತಿಮ ತೀರ್ಪು ನೀಡುವವರೆಗೂ ಒಳಮೀಸಲು ವಂಚಿತ ಸಮುದಾಯಗಳು ರಾಜಕೀಯ ಪಕ್ಷಗಳ ಓಲೈಕೆಯ ಬಾಲಂಗೋಚಿಗಳಾಗಿ ಬದುಕುವಂತಾಗಬಹುದು. ಕೇಂದ್ರ ಸರ್ಕಾರ ಬ್ರಾಹ್ಮಣ ಸಮುದಾಯದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಶೇ10 ಮೀಸಲಾತಿಯನ್ನು ಸುಗ್ರೀವಾಜ್ಞೆ ಮೂಲಕ ತನ್ನ ಪರಮ ಕರ್ತವ್ಯದಂತೆ ದಿನಬೆಳಗಾಗುವುದರೊಳಗೆ ಅನುಷ್ಠಾನಗೊಳಿಸಿರುವಾಗ ಒಳಮೀಸಲಾತಿ ವಿಚಾರದಲ್ಲಿ ಯಾಕೆ ನ್ಯಾಯಾಲಯದ ಕಡೆ ಬೆರಳು ತೋರಿ ಕುಳಿತಿರುವುದು?
ಪರಿಶಿಷ್ಟ ಜಾತಿಗಳಲ್ಲಿನ ಸಮುದಾಯಗಳ ನಡುವೆ ಪರ-ವಿರೋಧದ ಸಂಗತಿ ಎನ್ನುವುದಕ್ಕಿಂತ ಸರ್ಕಾರದ ಇಚ್ಛಾಶಕ್ತಿಯ ಪ್ರಶ್ನೆಯೂ ಅಡಗಿದೆ. ರಾಜ್ಯ ಸರ್ಕಾರವೇ ರಚಿಸಿದ ಸದಾಶಿವ ಆಯೋಗವು ಸ್ಪಷ್ಟವಾಗಿ ವರದಿಯನ್ನು ನೀಡಿರುವಾಗ ಸರ್ಕಾರ ವರದಿಯನ್ನು ವಿಧಾನಮಂಡಲದಲ್ಲಿ ಮಂಡಿಸಿ ಚರ್ಚೆಗೊಳಪಡಿಸಲಿ. ವಿಧಾನಮಂಡಲ ಸಾಂವಿಧಾನಿಕ ವೇದಿಕೆಯಾಗಿರುವಾಗ ಒಳಮೀಸಲಾತಿ ಫಲಿತಾಂಶವೂ ಅಲ್ಲೆ ಇತ್ಯರ್ಥವಾಗಬಾರದೇಕೆ? ಸಂಬಂಧಿತ ಜಾತಿಗಳ ನಡುವೆ ಕಲಹಕ್ಕೆ ಎಡೆಮಾಡುವಂತೆ ವರದಿಯನ್ನು ತೇಲಿಸಿಬಿಟ್ಟು ಲಾಭ-ನಷ್ಟದ ಲೆಕ್ಕಾಚಾರದಲ್ಲಿ ಕೂರುವುದು ನಾಗರಿಕ ಸರ್ಕಾರದ ಹೊಣೆಗಾರಿಕೆಯಲ್ಲ. ಸದನದಲ್ಲಿ ವರದಿ ಮಂಡನೆಯಾಗಿ ಅದರಲ್ಲಿರಬಹುದಾದ ಭೂತ, ಹಾವು ಚೇಳುಗಳು ಹೊರಬರಲಿ. ಜೊತೆಗೆ ಹಲವರ ಬಣ್ಣಗಳೂ ಬಯಲಾಗಲಿ. ಒಳಮೀಸಲಾತಿ ಬಗ್ಗೆ ರಾಜ್ಯ ಸರ್ಕಾರ ತನ್ನ ನಿಲುವನ್ನು ಪ್ರಕಟಿಸುವ ಮೂಲಕ ಸಮಾಜದ ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳಬೇಕು.
ಒಳಮೀಸಲಾತಿಗೆ ಸಂಬಂಧಿಸಿದಂತೆ ಸದಾಶಿವ ಆಯೋಗದ ವರದಿ ಮತ್ತು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿ ಹಾಗೂ ಇತ್ತೀಚೆಗಷ್ಟೆ ಜಸ್ಟಿಸ್ ನಾಗಮೋಹನ ದಾಸ್ ಆಯೋಗದ (ಮೀಸಲು ಪ್ರಮಾಣ ಹೆಚ್ಚಳ) ವರದಿಯೂ ಸರ್ಕಾರದ ಮುಂದೆ ಇವೆ. ಈ ಮೂರು ಆಯೋಗದ ವರದಿಗಳಲ್ಲಿ ಜನಸಂಖ್ಯೆಗನುಗುಣವಾಗಿ ಮೀಸಲಾತಿ ಹಂಚುವ ಸಮಾನ ನ್ಯಾಯ ಪ್ರತಿಪಾದನೆಯಾಗಿರುವುದು ಮಹತ್ವದ ಸಂಗತಿ. ಒಳಮೀಸಲಾತಿ ಎಂಬುದು ಅಸ್ಪೃಶ್ಯ ಸಮುದಾಯವನ್ನು ವಂಚಿಸುವ ರಾಜಕೀಯ ಆಡುಂಬೊಲವಾಗದಿರಲಿ.



