Homeನ್ಯಾಯ ಪಥJNU: ಕಟ್ಟಲು ಬರೀ ಕೆಲವರು! ಕೆಡವಲು ಮಾತ್ರ ಹಲವರು - ಸುಕನ್ಯಾ ಕನಾರಳ್ಳಿ

JNU: ಕಟ್ಟಲು ಬರೀ ಕೆಲವರು! ಕೆಡವಲು ಮಾತ್ರ ಹಲವರು – ಸುಕನ್ಯಾ ಕನಾರಳ್ಳಿ

ಭಾರತ ಎಂಬ ರಾಷ್ಟ್ರ, ಜೆಯೆನ್ಯು ಎಂಬ ರಾಷ್ಟ್ರೀಯ ವಿಶ್ವವಿದ್ಯಾಲಯ, ಕನ್ನಡ ಎಂಬ ಅಧ್ಯಯನ ಪೀಠ, ಹೀಗೆ ಎಲ್ಲವೂ ಅಸ್ತಿತ್ವಕ್ಕೆ ಬರುವುದು ದೀರ್ಘವಾದ ಬೌದ್ಧಿಕ ಸಂಧಾನಗಳಿಂದ; ಕಟ್ಟುವುದರಲ್ಲಿ ತಮ್ಮನ್ನು ತೊಡಗಿಸಿಕೊಂಡ ಎಷ್ಟೋ ಮಂದಿಯ ಶ್ರಮ ಮತ್ತು ತ್ಯಾಗಗಳಿಂದ ಎನ್ನುವ ಸರಳ ಸತ್ಯ ಬಹುಶಃ ಪ್ರಜ್ಞಾವಂತರಿಗೆ ಮಾತ್ರ ಗೊತ್ತಿರುವಂಥದ್ದು.

- Advertisement -
- Advertisement -

ಈ ಲೇಖನವನ್ನು ಬೆಚ್ಚಗಿನ ದೂರದಿಂದ ಬರೆಯುತ್ತಿಲ್ಲ. ನನ್ನ ವೈಯಕ್ತಿಕ ಕೆಲಸಗಳ ಸಲುವಾಗಿ ಬೆಂಗಳೂರಿಗೆ ಬಂದಿದ್ದರಿಂದ ಮೊನ್ನೆ ದೆಹಲಿಯ ಜೆಯೆನ್ಯುವಿನ ಕನ್ನಡ ಅಧ್ಯಯನ ಪೀಠ ಏರ್ಪಡಿಸಿದ್ದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನಾಲ್ಕು ಮಾತನಾಡಲು ನನ್ನನ್ನೂ ಆಹ್ವಾನಿಸಲಾಗಿತ್ತು. ಕನ್ನಡ ಪೀಠ ಅಸ್ತಿತ್ವಕ್ಕೆ ಬರುವ ಸ್ವಲ್ಪ ಮುಂಚೆಯೇ ನಾನು ಜೆಯೆನ್ಯು ಬಿಟ್ಟಾಗಿದ್ದರಿಂದ ಅದು ನಡೆಸುತ್ತಿದ್ದ ಹತ್ತು ಹಲವು ಕಾರ್ಯಕ್ರಮಗಳನ್ನು ದೂರದಿಂದಲೇ ‘ಛೆ, ನಾನಿರುವಾಗ ಈ ಪೀಠ ಇದ್ದಿದ್ದರೆ ನನ್ನ ಕನ್ನಡಕ್ಕೆ ಸಂಬಂಧಿಸಿದ ಬೌದ್ಧಿಕ ಮತ್ತು ಭಾವನಾತ್ಮಕ ಒಂಟಿತನ ಸ್ವಲ್ಪ ಮಟ್ಟಿಗಾದರೂ ಕಮ್ಮಿಯಾಗಿರುತ್ತಿತ್ತೋ ಏನೋ’ ಅಂತ ಹಳಹಳಿಸಿಕೊಳ್ಳುತ್ತಲೇ ಉತ್ಸಾಹದಿಂದ ಗಮನಿಸುತ್ತಿದ್ದೆ. ಈಗ ಕನ್ನಡ ಪೀಠಕ್ಕೆ ಭೇಟಿ ನೀಡಿ ಕಣ್ಣಾರೆ ನೋಡುವ ಮತ್ತು ಒಂದೇ ರೀತಿಯ ಪ್ರೀತಿಯಿಂದ ಹಲವಾರು ವಿದ್ವಾಂಸರನ್ನು ಮತ್ತು ವಿದ್ಯಾರ್ಥಿಗಳನ್ನು ಒಳಗೊಂಡಿರುವ ಈ ಪೀಠದ ರಾಜ್ಯೋತ್ಸವದಲ್ಲಿ ಭಾಗಿಯಾಗುವ ಉತ್ಸಾಹ ನನ್ನಲ್ಲಿ ಲವಲವಿಕೆಯನ್ನು ಮೂಡಿಸಿತ್ತು.

 

ರಾಷ್ಟ್ರೀಯತೆ ಎಂಬ ಪರಿಕಲ್ಪನೆಯ ಬಗ್ಗೆ ಮಹತ್ವದ ಒಳನೋಟಗಳನ್ನು ನೀಡುವ ಜಾರ್ಜ್ ಲುಕಾಚ್ ಎಂಬ ಚಿಂತಕನ ಪ್ರಕಾರ ಆಧುನಿಕ ಅರ್ಥದಲ್ಲಿ ರಾಷ್ಟ್ರ ಎಂಬ ಪರಿಕಲ್ಪನೆಯ ಹಿಂದೆ ಸುಲಭವಾಗಿ ಊಹೆಗೆ ನಿಲುಕದ ಅಗಾಧವಾದ ಬೌದ್ಧಿಕ ಶ್ರಮವಿದೆ. ಅದನ್ನು ಒಂದು ಸ್ಥಿತಿಯಿಂದ ಇನ್ನೊಂದು ಹಂತಕ್ಕೆ ನಯವಾಗಿ ಸಾಗುವ ಸಾಮಾಜಿಕ ಸಾತತ್ಯ ಎಂಬ ಪರಿಕಲ್ಪನೆಗೆ ಸುಲಭವಾಗಿ ತಳುಕು ಹಾಕಲು ಬಾರದು.

ರಾಷ್ಟ್ರೀಯ ಹೋರಾಟದ ಆಳ ಅಗಲಗಳನ್ನು ಗ್ರಹಿಕೆಗೆ ದಕ್ಕಿಸಿಕೊಳ್ಳಬಲ್ಲವರಿಗೆ ಮಾತ್ರ ಜೆಯೆನ್ಯು ಎನ್ನುವುದು ಭಾರತವೆಂಬ ರಾಷ್ಟ್ರವನ್ನು ಕಟ್ಟುವಾಗಿನ ಆಶಯ ಮತ್ತು ಕಾಳಜಿಗಳ ಸಾರಸಂಗ್ರಹ ಎಂದು ಅರ್ಥವಾಗಬಲ್ಲದು. ಅಂತೆಯೇ ಜೆಯೆನ್ಯು ಭಾರತ ಎಂಬ ರಾಷ್ಟ್ರದ ನೈತಿಕ ಪಡಿಜೀವ ಅಥವಾ ಆತ್ಮಸಮ ಎನ್ನುವ ಸತ್ಯ ಅರ್ಥವಾಗುವುದು ಒಂದೋ ರಾಷ್ಟ್ರೀಯ ಹೋರಾಟದಲ್ಲಿ ಪ್ರಾಣವನ್ನೂ ಪಣಕ್ಕಿಟ್ಟು ಮಾಡಿ ಮಡಿದವರಿಗೇ ಹೊರತು ಅದರಿಂದ ಪಲಾಯನ ಮಾಡಿದವರಿಗಲ್ಲ.

ಹಾಗೆಯೇ ಇರುವೆಗಳು ಕಣಕಣವನ್ನೂ ಹೊತ್ತು ಕಟ್ಟಿದ ಹುತ್ತದಲ್ಲಿ ಬಂದು ನೆಲೆಯೂರಿ ಬುಸ್ ಎಂದು ತಲೆಯೆತ್ತುವ ಹಾವಿನಂತಹ ಹುಸಿ ರಾಷ್ಟ್ರಪ್ರೇಮಿಗಳಿಗೂ ಅಲ್ಲ. ಅಂತಹ ಶ್ರಮ, ಭಾಷಾಪ್ರೀತಿ ಮತ್ತು ಜನಪರತೆಯನ್ನು ಅರ್ಥಮಾಡಿಕೊಳ್ಳಲು ಬೌದ್ಧಿಕ ಪ್ರಾಮಾಣಿಕತೆಯಾದರೂ ಬೇಕು. ಅದೂ ಇಲ್ಲದೇ ತೆರೆಮರೆಯಲ್ಲಿ ಅಡಗಿ ಹಸಿಹಸಿಯಾದ ಸುಳ್ಳುಗಳನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಹರಡುತ್ತಾ ದೇಶಪ್ರೇಮವನ್ನು ಮೆರೆಯುವ ಹುಸಿ ಸರದಾರರಿಗೆ ಒಂದು ವಿಶ್ವವಿದ್ಯಾಲಯದ ಸ್ಥಾಪನೆಗೆ ಅದೆಷ್ಟು ಕಾಲ ಮತ್ತು ಶ್ರಮ ವ್ಯಯವಾಗಿದೆ, ಅದು ಇಡೀ ದೇಶವನ್ನು ಹೇಗೆ ಒಳಗೊಂಡು ನಿಜವಾದ ಅರ್ಥದಲ್ಲಿ ರಾಷ್ಟ್ರೀಯ ಹರವನ್ನು ಪಡೆದುಕೊಂಡಿದೆ ಮತ್ತು ಅಂತಹ ವಿಶ್ವವಿದ್ಯಾಲಯ ದೇಶಕ್ಕೆ ಅದೆಷ್ಟರಮಟ್ಟಿಗೆ ಅತ್ಯುತ್ತಮ ಚಿಂತಕ ಮನಸ್ಸುಗಳನ್ನು ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿದ್ವಾಂಸರನ್ನು ನೀಡಿದೆ ಎನ್ನುವುದರ ಕಲ್ಪನೆ ಸುಲಭವಾಗಿ ದಕ್ಕಲಾರದು.

ಪ್ರೊ.ರಾಕೇಶ್ ಬಾಟಬ್ಯಾಲ್ ಬರೆದಿರುವ JNU: The Making of a University ಎಂಬ ಆಳವಾದ ಸಂಶೋಧನೆಯಿಂದ ಹೊರಹೊಮ್ಮಿದ ಕೃತಿ 2015ರಲ್ಲಿ ಪ್ರಕಟವಾಯಿತು. ಅದು 1964ರಲ್ಲಿ ಅಸ್ತಿತ್ವಕ್ಕೆ ಬಂದ ಈ ವಿಶ್ವವಿದ್ಯಾಲಯದ ಹಿಂದಿನ ಬೌದ್ಧಿಕ ಮತ್ತು ರಾಜಕೀಯ ಸಂಕಲ್ಪಶಕ್ತಿಯ ಚರಿತ್ರೆಯನ್ನು ನಿರೂಪಿಸುತ್ತಾ ಹೋಗುತ್ತದೆ. ಜೊತೆಗೆ 1989ರಿಂದ ಈ ಜೆಯೆನ್ಯು, ಪ್ರಾಬಲ್ಯವನ್ನು ಪಡೆದುಕೊಳ್ಳುತ್ತಿದ್ದ ರಾಜಕೀಯ ಶಕ್ತಿಗಳ ಹಿನ್ನೆಲೆಯಲ್ಲಿ ಹೇಗೆ ವಿರುದ್ಧ ನೆಲೆಗೆ ಜಾರಿಕೊಳ್ಳುತ್ತಿದೆ ಎನ್ನುವುದನ್ನೂ ನಿರಚಿಸುತ್ತಾ ಸಾಗುತ್ತದೆ. ಈ ಎಲ್ಲಾ ಸಂಘರ್ಷಗಳ ನಡುವೆಯೂ ಜೆಯೆನ್ಯುವಿನ ವಿದ್ವಾಂಸರು ಮತ್ತು ವಿದ್ಯಾರ್ಥಿಗಳು ಅದರ ರಾಷ್ಟ್ರೀಯ ಗುಣಗಳನ್ನು ಕಾಯ್ದುಕೊಳ್ಳುವ ಜೊತೆಗೆ ಅಂತಾರಾಷ್ಟ್ರೀಯ ಗುಣಮಟ್ಟದ ಬೌದ್ಧಿಕ ಸ್ಪಷ್ಟತೆಯನ್ನು ಕಾಪಾಡಿಕೊಂಡು ಹೋರಾಟದ ಸ್ವರೂಪವನ್ನು ಎಳೆಎಳೆಯಾಗಿ ಬಿಡಿಸುತ್ತಾ ಹೋಗುತ್ತದೆ. ಪಾರ್ಲಿಮೆಂಟರಿ ಚರ್ಚೆಗಳು, ಪತ್ರಿಕಾ ವರದಿಗಳು, ಸಂದರ್ಶನಗಳು, ಘೋಷಣಾ ಪತ್ರಗಳು…..

ಹೀಗೆ ಹತ್ತು ಹಲವಾರು ಚಾರಿತ್ರಿಕ ಮೂಲಗಳಿಂದ ದಟ್ಟವಾದ ಮತ್ತು ಆಪ್ತವಾದ ವಿವರಗಳನ್ನು ನೀಡುವ ಈ ಕೃತಿ ಬರೀ ಒಂದು ವಿಶ್ವವಿದ್ಯಾಲಯದ ಚರಿತ್ರೆಯನ್ನು ನಿರೂಪಿಸುವುದಷ್ಟೇ ಅಲ್ಲ, ಅದು ಭಾರತವೆಂಬ ರಾಷ್ಟ್ರದ ಬೌದ್ಧಿಕ ಇತಿಹಾಸವನ್ನೂ ವಿದ್ವತ್ಪೂರ್ಣ ಆತ್ಮವಿಶ್ವಾಸದಲ್ಲಿ ನೀಡುತ್ತದೆ. ವಾಟ್ಸ್ ಆಪ್ ವಿಶ್ವವಿದ್ಯಾಲಯದ ಯೋಧರಿಗೆ ಆ ಮಟ್ಟಿಗಿನ ಸಂಶೋಧನೆ, ಸ್ಪಷ್ಟತೆ ಮತ್ತು ಬೌದ್ಧಿಕ ನಿಷ್ಠೆಗಳ ಅರಿವಿರಲು ಸಾಧ್ಯವೇ ಇಲ್ಲ. ಮರೆಯಲ್ಲಿ ನಿಂತು ಬಾಯಿಗುಂಡುಗಳನ್ನು ಹಾರಿಸುವುದೇ ದೇಶಪ್ರೇಮವೆಂದು ಕರೆಸಿಕೊಳ್ಳುವ ಕಾಲದಲ್ಲಿ ಯಾರಾದರೂ ಅಂತಹ ವಿದ್ವತ್ಪೂರ್ಣ ಕೃತಿಯನ್ನು ಓದುವುದಿರಲಿ, ಕಣ್ಣು ಹಾಯಿಸುವ ತಾಳ್ಮೆಯನ್ನೂ ಹೊಂದಿರುವುದಿಲ್ಲ.

ಇದೇ ರೀತಿಯ ಸನ್ನಿವೇಶವನ್ನು ಜೆಯೆನ್ಯು ಕನ್ನಡ ಅಧ್ಯಯನ ಪೀಠಕ್ಕೂ ಅನ್ವಯಿಸಬಹುದು. ‘ಕೆಡವು, ಕೊಚ್ಚು, ಕೊಲ್ಲು’ ಎಂಬ ಭಾರತೀಯ KKK ವೀರರ ಕಾರ್ಯತಂತ್ರ ಯಾವತ್ತಿಗೂ ಒಂದೇ ಆಗಿರುವುದರಿಂದ ಅದನ್ನು ಅರ್ಥೈಸಲು ಯಾವ ವಿದ್ವತ್ತಿನ ಹಂಗೂ ಇಲ್ಲವೆ! ಅವರ ಕೆಟ್ಟ ಕಣ್ಣೀಗ ಕನ್ನಡ ಅಧ್ಯಯನ ಪೀಠದ ಮೇಲೆ ತಿರುಗಿದೆ. ಕಟ್ಟುವಾಗ ತಮ್ಮ ಅಂತಃಶಕ್ತಿಯ ಬಲದಿಂದಲೇ ಮಾಯವಾದವರು ಕೆಡವುವ ಕೆಲಸಕ್ಕೆ ಮಾತ್ರ ತೋಳೇರಿಸಿಕೊಂಡು ಬರುವುದು ಚಾರಿತ್ರಿಕ ವ್ಯಂಗ್ಯಗಳಲ್ಲೇ ಒಂದು.

2015ರಲ್ಲಿ ಕನ್ನಡ ಅಧ್ಯಯನ ಪೀಠ ಅಸ್ತಿತ್ವಕ್ಕೆ ಬಂದದ್ದು ಯಾವ ಛೂಂಕಾಳಿ ಮಂತ್ರದಿಂದಲೂ ಅಲ್ಲ. ಭಾರತದಂತಹ ಬಹುಭಾಷಾ ರಾಷ್ಟ್ರದಲ್ಲಿ, ರಾಜಧಾನಿಯಲ್ಲಿರುವ ರಾಷ್ಟ್ರೀಯ ವಿಶ್ವವಿದ್ಯಾಲಯದಲ್ಲಿ, ಸಂವಿಧಾನದ ಮಾನ್ಯತೆಯನ್ನು ಪಡೆದುಕೊಂಡಿರುವ ಎಲ್ಲ ಭಾಷೆಗಳ ಅಧ್ಯಯನ ಪೀಠ ಇರಲೇಬೇಕು ಎನ್ನುವುದು ಅಕಡೆಮಿಕ್ ನೀತಿಸಂಹಿತೆಯಲ್ಲಿ ಅಡಕವಾಗಿರುವ ಒಂದು ಭಾಗ. ಭಾರತ ಎಂಬ ರಾಷ್ಟ್ರ, ಜೆಯೆನ್ಯು ಎಂಬ ರಾಷ್ಟ್ರೀಯ ವಿಶ್ವವಿದ್ಯಾಲಯ, ಕನ್ನಡ ಎಂಬ ಅಧ್ಯಯನ ಪೀಠ, ಹೀಗೆ ಎಲ್ಲವೂ ಅಸ್ತಿತ್ವಕ್ಕೆ ಬರುವುದು ದೀರ್ಘವಾದ ಬೌದ್ಧಿಕ ಸಂಧಾನಗಳಿಂದ; ಕಟ್ಟುವುದರಲ್ಲಿ ತಮ್ಮನ್ನು ತೊಡಗಿಸಿಕೊಂಡ ಎಷ್ಟೋ ಮಂದಿಯ ಶ್ರಮ ಮತ್ತು ತ್ಯಾಗಗಳಿಂದ ಎನ್ನುವ ಸರಳ ಸತ್ಯ ಬಹುಶಃ ಪ್ರಜ್ಞಾವಂತರಿಗೆ ಮಾತ್ರ ಗೊತ್ತಿರುವಂಥದ್ದು.

ಅಂತಹ ಭಾಷಾಪ್ರೀತಿ ಮತ್ತು ಬದ್ಧತೆಯ ಬಲದಿಂದ ಕನ್ನಡ ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರ ಹಾಗೂ ಜೆಯೆನ್ಯುಗಳು ಪರಸ್ಪರ ಮಾಡಿಕೊಂಡ ಒಪ್ಪಂದದ ಮೇರೆಗೆ ಅಸ್ತಿತ್ವಕ್ಕೆ ಬಂದಿರುವಂಥದ್ದು. ಕನ್ನಡ ಪೀಠದ ಮುಖ್ಯಸ್ಥ ಪ್ರೊ.ಪುರುಷೋತ್ತಮ ಬಿಳಿಮಲೆಯವರು ತಮ್ಮ ಅನುಭವಗಳನ್ನು ಹಂಚಿಕೊಳ್ಳುವಾಗ ಪೀಠ ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದ ಮೇಲೆಯೂ ಸುಮಾರು ತಿಂಗಳ ಮಟ್ಟಿಗೆ ಹೇಗೆ ತಮಗೊಂದು ಕೋಣೆಯೊಂದನ್ನು ಪಡೆದುಕೊಳ್ಳಲೂ ಒದ್ದಾಡಬೇಕಾಯಿತು ಎನ್ನುವುದನ್ನು ಹಗುರವಾದ ಹಾಸ್ಯದಲ್ಲಿ ವ್ಯಕ್ತಪಡಿಸುತ್ತಿದ್ದದ್ದು ನೆನಪಿಗೆ ಬರುತ್ತದೆ.

ಆದರೂ ನಡೆದಂತೆ ಬಿಚ್ಚಿ ಬೆಳೆದ ಹಾದಿ ಏನೆಲ್ಲಾ ಕಾರ್ಯಕ್ರಮಗಳನ್ನು ಮತ್ತು ಎಷ್ಟೆಲ್ಲಾ ಜನರನ್ನು ಒಳಗೊಂಡಿತು ಎನ್ನುವುದು ಮಾತ್ರ ಕನ್ನಡತಿಯಾಗಿ ನನಗೆ ಹೆಮ್ಮೆಯನ್ನು ಮೂಡಿಸಿತ್ತು. ಕನ್ನಡ ಪೀಠ ಗಂಭೀರವಾದ ಜಿಜ್ಞಾಸೆಗಳಿಗೆ, ಗೋಷ್ಠಿಗಳಿಗೆ, ವಿಚಾರ ಸಂಕಿರಣಗಳಿಗೆ, ಕಮ್ಮಟಗಳಿಗೆ ಒದಗುವಂತೆಯೇ ಸಮಾನಮನಸ್ಕರು ಸುಮ್ಮನೇ ಸಂಧಿಸಿ, ಬಿಸಿಯಾದ ಸಮೋಸ ಮತ್ತು ಚಹಾಗಳನ್ನಿಟ್ಟುಕೊಂಡು ಯಾವುದಾದರೊಂದು ಉಪಯುಕ್ತ ವಿಷಯದ ಸುತ್ತ ಹೊಡೆಯುವ ಹರಟೆಗಳಿಗೂ ಸಾಕ್ಷಿಯಾಗಿತ್ತು ಎನ್ನುವುದು ಅವರು ಫೇಸ್‍ಬುಕ್ ಇತ್ಯಾದಿಗಳಲ್ಲಿ ಹಾಕುವ ಫೋಟೋ ಮತ್ತು ಆ ಹರಟೆಯಲ್ಲಿ ಹೊರಬಂದ ಒಳನೋಟಗಳ ಬಗ್ಗೆ ಓದುವಾಗ ತಿಳಿಯುತ್ತಿತ್ತು.

ಅಸ್ತಿತ್ವಕ್ಕೆ ಬಂದ ಈ ನಾಲ್ಕು ವರ್ಷಗಳಲ್ಲಿ (2014-2019) ಕನ್ನಡ ಅಧ್ಯಯನ ಪೀಠ ಎಷ್ಟೆಲ್ಲಾ ಕಟ್ಟುವ ಕೆಲಸಗಳನ್ನು ಹಮ್ಮಿಕೊಂಡು ಕಾರ್ಯರೂಪಕ್ಕೆ ತಂದಿದೆ ಎನ್ನುವುದು ಗೋಡೆ ಮೇಲಿನ ಬರಹದಷ್ಟು ಸ್ಪಷ್ಟವಾಗಿಯೇ ಇದೆ. ‘ಪ್ರಾಚೀನ ಪಠ್ಯಗಳು ಆಧುನಿಕ ಭಾಷೆಯಲ್ಲಿ ಬರದಿದ್ದರೆ ಆಪತ್ತು’ ಎನ್ನುವ ಆತ್ಮದೆಚ್ಚರದಲ್ಲಿ ಇಂಗ್ಲೀಷಿನಲ್ಲಿ ಪ್ರಕಟಿಸಿರುವ ರನ್ನನ ಗದಾಯುದ್ಧ, ಕವಿರಾಜಮಾರ್ಗ, ಏಣಗಿ ಬಾಳಪ್ಪ, ಅಮೀರ್ ಬಾಯಿ ಕರ್ನಾಟಕಿ ಮುಂತಾದವರ ಜೀವನ ಚರಿತ್ರೆಗಳು, ಕಾರಂತರ ಅಳಿದಮೇಲೆ, ತುಳು ಜನಪದ ಕತೆಗಳು; ನಡೆಸಿರುವ ಕನ್ನಡ, ಮಲೆಯಾಳಂ, ತೆಲುಗು ಮತ್ತು ಸಂಸ್ಕೃತ ಭಾಷೆಗಳಲ್ಲಿನ ಮಹಾಭಾರತಗಳ ಸಮೀಕ್ಷೆಯನ್ನು ಒಳಗೊಳ್ಳುವ ‘ಭಾರತೀಯ ಅಭಿಜಾತ ಭಾಷೆಗಳಲ್ಲಿ ಮಹಾಭಾರತ’, ಕನ್ನಡ, ಹಿಂದಿ, ಉರ್ದು ಮತ್ತು ಪಂಜಾಬೀ ಭಾಷೆಗಳ ವಿದ್ವಾಂಸರಿಂದ ಪ್ರಬಂಧಗಳನ್ನು ಮಂಡಿಸಿಕೊಂಡ ‘ಭಾರತೀಯ ಭಕ್ತಿ ಪರಂಪರೆ ಮತ್ತು ಕನಕದಾಸ’, ಮಾಧ್ಯಮಗಳು ಹಿಡಿಯುತ್ತಿರುವ ದಿಕ್ಕು, ತಾಯ್ನುಡಿಗಳು ಮತ್ತು ರಾಷ್ಟ್ರೀಯತೆ, ಕರ್ನಾಟಕದ ಪರಿಕಲ್ಪನೆ, ಬಹುಭಾಷಾ ಕವಿಗೋಷ್ಠಿ, ಕನ್ನಡದ ಮಹಿಳಾ ಅತ್ಮಕಥೆಗಳು, ಭಕ್ತಿಯ ಹಲವು ಮಾರ್ಗಗಳು ಇತ್ಯಾದಿ ವಿಷಯಗಳ ಸುತ್ತ ನಡೆದಿರುವ ರಾಷ್ಟ್ರೀಯ ವಿಚಾರ ಸಂಕಿರಣಗಳು, ಕಮ್ಮಟಗಳು, ಗೋಷ್ಠಿಗಳು, ಪುಸ್ತಕ ಪ್ರಕಟಣೆಗಳು, ಗೊಂಬೆಯಾಟ, ಗಮಕವಾಚನ, ಹರಿಕತೆ, ಯಕ್ಷಗಾನದಂತ ದೃಶ್ಯಪ್ರದರ್ಶನಗಳು; ಸುಮಾರು ಆರುಸಾವಿರ ಪುಸ್ತಕಗಳನ್ನು ಸಂಗ್ರಹಿಸಿ ಮುಖ್ಯ ಗ್ರಂಥಾಲಯದ ಆರನೆಯ ಮಹಡಿಯ ಮೇಲಕ್ಕೆ ಪುಸ್ತಕಗಳನ್ನು ಭುಜದ ಮೇಲೆ ಹೊತ್ತೊಯ್ದು ಸ್ಥಾಪಿಸಿರುವ ಕನ್ನಡ ಗ್ರಂಥಾಲಯ; ಕನ್ನಡ ಕಲಿಕೆಗೆ ರೂಪಿಸಿರುವ ಜಾಲತಾಣ; ನಡೆಸುತ್ತಿರುವ ಕನ್ನಡ ತರಗತಿಗಳು, ಇತ್ಯಾದಿ ಚಟುವಟಿಕೆಗಳ ಮೂಲಕ ಬೌದ್ಧಿಕ ಲವಲವಿಕೆಯನ್ನು ಹರಡಿದ, ಕನ್ನಡದ ನೆಲೆಯಿಂದ ಎಲ್ಲೋ ದೂರದಲ್ಲಿ ಭಾಷೆಯ ಜೀವಂತಿಕೆಗೆ ಶ್ರಮಿಸಿದ ಹಾಗೂ ಜೀವಪರ ಮನಸ್ಸುಗಳನ್ನು ಬೆಸೆಯಲು ತಾಣವೊಂದನ್ನು ಒದಗಿಸಿದ ಕನ್ನಡ ಪೀಠ ಈಗ ‘ಕೆಡವು ಕೊಚ್ಚು, ಕೊಲ್ಲು’ ಶಕ್ತಿಗಳ (ಅವು ನಿಜವಾಗಿಯೂ ‘ಶಕ್ತಿ’ಗಳೆ ಅಥವಾ ದೌರ್ಬಲ್ಯಗಳೆ ಎಂಬ ಜಿಜ್ಞಾಸೆಯನ್ನು ಸದ್ಯಕ್ಕೆ ಅತ್ತ ಸರಿಸಿ) ಅಪಪ್ರಚಾರಕ್ಕೆ ಗುರಿಯಾಗಿದೆ.

ಎಂದಿನಂತೆ ಈ ಅಪಪ್ರಚಾರ ಕನ್ನಡ ಪೀಠ ನಡೆಸುತ್ತಿರುವ ಕಾರ್ಯಕ್ರಮಗಳ ಗುಣಮಟ್ಟದ ಬಗ್ಗೆಯೋ ಅಥವಾ ಹೇಳಿಯೂ ಮಾಡದಿರುವ ಕೆಲಸಗಳ ಬಗ್ಗೆಯೋ ಎತ್ತಿರುವ ಪ್ರಶ್ನೆಯಾಗದೇ ಕೇವಲ ‘ಹಣದ ದುರ್ಬಳಕೆ’ ಎಂಬ ಸಾರಾಸಗಟಾದ ತೆರೆಮರೆಯ ಬಾಯಿಗುಂಡಾಗಿಯೇ ಮುಂದುವರೆದಿದೆ. ನಿಮಗೆ ಮಾಹಿತಿ ಬೇಕೆಂದಲ್ಲಿ ಕನ್ನಡ ಪೀಠದ ಮುಖ್ಯಸ್ಥರಿಗೇ ಬರೆಯಬಹುದಲ್ಲ? ಮಾಹಿತಿ ಹಕ್ಕು ಕಾಯ್ದೆಯ ಅಡಿ ವಿವರಗಳನ್ನು ತರಿಸಿಕೊಳ್ಳಬಹುದಲ್ಲ? ಎಂದು ಹೇಳಿದರೆ ಮೌನವೇ ಉತ್ತರವಾಗುತ್ತದೆ. ಬದಲಿಗೆ ಸುಲಭವಾಗಿ ನಂಬಬಲ್ಲ ಬಕರಾಗಳನ್ನು ಹುಡುಕುತ್ತಾ ಪ್ರಹಾರ ಬೇರೆ ದಿಕ್ಕುಗಳನ್ನು ಆಯ್ದುಕೊಳ್ಳುತ್ತದೆ. ಕಟ್ಟುವ ಕೆಲಸದಲ್ಲಿ ಮಗ್ನರಾಗಿರುವ ಪ್ರೊ.ಪುರುಷೋತ್ತಮ ಬಿಳಿಮಲೆಯವರು ಈ ಅಪಪ್ರಚಾರದ ಬಗ್ಗೆ ಮಂಡೆ ಬಿಸಿ ಮಾಡಿಕೊಳ್ಳಲೂ ಸಿದ್ಧರಿಲ್ಲ. ಸಾತ್ವಿಕ ನಿರ್ಲಕ್ಷ್ಯದಲ್ಲಿ ನಕ್ಕು ತಮ್ಮ ಕನ್ನಡದ ಕೆಲಸಕ್ಕೆ ಸಾಗುತ್ತಾರೆ.

ಇಂದಿನ ಸನ್ನಿವೇಶದಲ್ಲಿ ಯಾಕೋ ಯೇಟ್ಸ್ ಕವಿ ನೆನಪಾಗುತ್ತಾನೆ:

The best lack all conviction,
while the worst
Are full of passionate intensity!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...