Homeಚಳವಳಿದ್ರಾವಿಡ ನಾಡಿನ ಮರೆಯಲಾಗದ ಅಸ್ಮಿತೆ ಪೆರಿಯಾರ್ ಕುರಿತು...

ದ್ರಾವಿಡ ನಾಡಿನ ಮರೆಯಲಾಗದ ಅಸ್ಮಿತೆ ಪೆರಿಯಾರ್ ಕುರಿತು…

ಇಂದು ಪೆರಿಯಾರ್ ರಾಮಸ್ವಾಮಿಯವರ ಜನ್ಮದಿನ.. ಅವರ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ ಬನ್ನಿ

- Advertisement -
- Advertisement -

ಇಂದು ನಾವು ವಿಚಿತ್ರವಾದ ಸಂಕೀರ್ಣ ಸ್ಥಿತಿಯಲ್ಲಿದ್ದೇವೆ. ಎಲ್ಲವೂ ಸಂಕೀರ್ಣ. ‘ಮಾತುಗಳೆಲ್ಲಾ ಶಬ್ಧ ಸೂತಕ’. ಬರೀ ಆಟಾಟೋಪ. ವರ್ತಮಾನದ ಮನುಷ್ಯ ಧರ್ಮ ಜಾತಿ ಮತ್ತು ಜನಾಂಗ ದ್ವೇಷಗಳ ಹುದುಲಲ್ಲಿ ಸಿಲುಕಿಕೊಂಡಿದ್ದಾನೆ. ಇಂತಹ ಸಂದರ್ಭದಲ್ಲಿ ಸ್ವಾಭಿಮಾನವೆನ್ನುವುದು, ನಿಜದ ಹೋರಾಟವೆನ್ನುವುದು, ಸ್ವಂತಿಕೆಯೆನ್ನುವುದು, ವಿಚಾರಕ್ರಾಂತಿ ಎನ್ನುವುದು ಪಳೆಯುಳಿಕೆಗಳಾಗಿ ಬಿಡಬಹುದಾದ ಅಪಾಯಗಳ ಸಂದರ್ಭದಲ್ಲಿ ಪೆರಿಯಾರ್ ಮತ್ತೆ ಮತ್ತೆ ಕಾಡುತ್ತಾರೆ…. ಸ್ವಾಭಿಮಾನ, ಸ್ವಾವಲಂಬನೆ ಮತ್ತು ಬದುಕನ್ನು ಬದಲಿಸುವ ಹಠಯೋಗಿಯಾಗಿ ಪೆರಿಯಾರ್ ಇಂದಿಗೂ ಪ್ರಸ್ತುತ ಎನ್ನಿಸುತ್ತಾರೆ.

ದ್ರಾವಿಡತ್ವವನ್ನು ತನ್ಮೂಲಕ ಈ ನೆಲದ ನಿಜದ ದೇಸೀಯತೆಯನ್ನ ಕಾಯ್ದುಕೊಂಡ ಪ್ರಯೋಗ ಭೂಮಿಯಾಗಿ ತಮಿಳುನಾಡು ಈ ದೇಶವನ್ನು ಪ್ರಭಾವಿಸಿದ್ದಕ್ಕೆ ಒಬ್ಬ ವ್ಯಕ್ತಿ ಕಾರಣವಾಗಿದ್ದ ಎನ್ನುವುದು ವಾಸ್ತವ ಮತ್ತು ಚಾರಿತ್ರಿಕ ಸತ್ಯ. 17ನೇ ಸೆಪ್ಟೆಂಬರ್ 1879 ರಲ್ಲಿ ತಮಿಳ್ನಾಡಿನ ಈರೋಡು ನಗರದಲ್ಲಿ ವೆಂಕಟ ನಾಯಕರು ಮತ್ತು ಚಿನ್ನತಾಯಮ್ಮಾಳ್ ಎಂಬ ದಂಪತಿಗಳ ಮಗನಾಗಿ ಜನಿಸಿದವರು ಈ.ವೆ.ರಾ ಅಂದರೆ ಈರೋಡು ವೆಂಕಟರಾಮಸ್ವಾಮಿ ನಾಯಕರ್. ಈರೋಡು ನಗರದ ಮುಖ್ಯ ವರ್ತಕರೆಂದೇ ಗುರುತಿಸಲ್ಪಟ್ಟ ವೆಂಕಟ ನಾಯಕರು ಮೂಲತಃ ಕನ್ನಡದವರು ಹಾಗಾಗಿಯೇ ಅವರ ಮನೆಮಾತು ಕನ್ನಡ. ಒಬ್ಬ ಅಣ್ಣ ಮತ್ತು ಇಬ್ಬರು ತಂಗಿಯರ ವಾತ್ಸಲ್ಯ ಪಡೆದವರು ‘ಪೆರಿಯಾರ್’. ತಮಿಳಿನಲ್ಲಿ ತುಂಬಾ ಗೌರವದಿಂದ ದೊಡ್ಡವರು ಎಂದು ಗುರುತಿಸುವ ಪದವೇ ಪೆರಿಯಾರ್. ಇದು ತನಗೆ ತಾನು ಅಥವಾ ಯಾವುದೇ ಸಂಸ್ಥೆ ಅವರಿಗೆ ಕೊಡಮಾಡಿದ ಬಿರುದಲ್ಲ, ಸಮುದಾಯಕ್ಕಾಗಿ ದುಡಿದು, ಅವರ ಮಧ್ಯೆಯೇ ಬೆಳೆದು, ಬಹುಜನರ ಹಿತಾಸಕ್ತಿಗಾಗಿ ಬದುಕನ್ನೇ ಸವೆಸಿದ ವ್ಯಕ್ತಿಯನ್ನ ಜನ ಅಭಿಮಾನದಿಂದ ಕರೆದದ್ದು ‘ಪೆರಿಯಾರ್’ ಎಂದು.

ಈ ದೇಶವನ್ನ ಎಂದಿಗಾದರೂ ಶತಮಾನಗಳಷ್ಟು ಹಿಂದಕ್ಕೆ ಸರಿಸಿಬಿಡಬಹುದಾದ ಶಕ್ತಿ ಇರುವುದು ಇಲ್ಲಿನ ಕೋಮುವಾದ ಮತ್ತು ಜಾತಿವಾದಗಳಿಗಿದೆ. ಇದು ಈ ನೆಲದ ಅಮಾನವೀಯ ‘ವರ್ಣಾಶ್ರಮ’ದ ಪರಿಕಲ್ಪನೆಯ ಫಲಿತ. ಮೊದಲಿಗೆ ಸಹಜ ಸಮಾನತೆಯಿಂದ ಬದುಕಿನ ಮೂಲ ಸಂಸ್ಕೃತಿಗೆ ವಲಸೆ ಸಂಸ್ಕೃತಿ ಬೆರೆಸಿದ ವಿಷವೇ ‘ಜಾತಿ’ ಎಂಬ ಸತ್ಯ ಎಲ್ಲರಿಗೂ ಅರ್ಥವಾಗಿರುವ ಸಂಗತಿ. ಇದನ್ನ ಬಾಲ್ಯದಲ್ಲಿ ಗ್ರಹಿಸಿ, ಪ್ರಶ್ನಿಸಿ, ಪ್ರತಿಭಟಿಸಿ, ನಿಜದ ಲೋಕಜ್ಞಾನಕ್ಕೆ ಮುಖಾಮುಖಿಯಾದವರೇ ಈ ‘ಪೆರಿಯಾರ್’. ದೇವರ ಕಥನಗಳನ್ನೆಲ್ಲಾ ಸಹಜ ಪ್ರಶ್ನೆಗಳಿಂದಲೇ ಎದುರಾಗುವ ಬಾಲಕ ಅಂದಿಗೆ ಗುರುಗಳಿಗೆ ನಿತ್ಯ ಸಮಸ್ಯೆಯಂತಾದದ್ದು ನಿಜದ ಜ್ಞಾನದ ಹುಡುಕಾಟವೇ ಆಗಿತ್ತು. ಇದನ್ನೇ ಬುದ್ಧ, ಬಸವ, ಕನಕ, ಅಂಬೇಡ್ಕರ್, ಕುವೆಂಪು ಅವರೆಲ್ಲಾ ಮಾಡಿದ್ದು ಎನ್ನುವುದು ಗಮನಾರ್ಹ.

ಪುರಾಣದ ಕಥೆಗಳು ಆರ್ಯರ ಶ್ರೇಷ್ಠತೆಯ ಪ್ರತಿಪಾದನೆ ಮತ್ತು ಈ ನೆಲದ ನಿಜದ ಜನರಾದ ದ್ರಾವಿಡರ ಶೋಷಣೆ ಎನ್ನುವುದನ್ನು ಬಹಳ ಬೇಗನೇ ಅರ್ಥೈಸಿಕೊಂಡ ಪೆರಿಯಾರರು ತಮ್ಮ ಈ ಬಗೆಯ ಚಿಂತನೆಗಳ ಕಾರಣಕ್ಕೂ ಎಲ್ಲರಿಂದಲೂ ‘ಬುದ್ಧಿ ಮಾತು’ ಕೇಳಿಸಿಕೊಳ್ಳುವ ವಿಪರ್ಯಾಸಕ್ಕೆ ಒಳಗಾಗಬೇಕಿತ್ತು. ಮೌಢ್ಯತೆಗಳ ವಿರೋಧವೆನ್ನುವುದು ಇಂದಿನ ಆಧುನಿಕ ಉತ್ಕರ್ಷದ ಕಾಲಕ್ಕೆ ವಿಚಿತ್ರ ಮತ್ತು ಅಪರಾಧ ಎನ್ನುವ ಸ್ಥಿತಿ ಇರುವಾಗ ಪಾಪ ಅಂದಿನ ಏಕಾಂಗಿ ಚಿಂತಕ, ವೈಜ್ಞಾನಿಕ ವೈಚಾರಿಕ ಮನಸ್ಥಿತಿಯ ‘ಪೆರಿಯಾರ್’ ಪರಿಸ್ಥಿತಿಯಾದರೂ ಏನಾಗಬಹುದಿತ್ತು? ಇದು ಒಂದು ಹಂತಕ್ಕೆ ಮನೆ ತ್ಯಜಿಸುವ ಅನಿವಾರ್ಯತೆಯನ್ನ ಸೃಷ್ಟಿಸಿತ್ತು.

ದಕ್ಷಿಣದಿಂದ ಉತ್ತರದೆಡೆಗೆ ಏಕಾಂಗಿ ಸಂಚಾರ ಆದರೆ ಎಲ್ಲೆಂದರಲ್ಲಿ ಅವಕಾಶ ಸಿಕ್ಕಿದಲ್ಲೆಲ್ಲಾ ಮತ್ತೆ ಮತ್ತೆ ವಿಚಾರವಾದದ, ಮೌಢ್ಯವಿರೋಧದ, ಪುರಾಣ ಭಂಜಕತೆಯ ವ್ಯಾಖ್ಯಾನ, ಪ್ರಶ್ನೋತ್ತರ ಮತ್ತೆ ಮತ್ತೆ ಎಲ್ಲಾ ನೆಲೆಯಲ್ಲಿಯೂ ಎದುರಿಸಿದ್ದು ಶೂದ್ರತನದ ಅಪಮಾನ ಮತ್ತು ಬ್ರಾಹ್ಮಣ್ಯತ್ವದ ಶ್ರೇಷ್ಠತೆಯ ಪ್ರತಿಪಾದನೆ.

ಅವರಿಗೆ ಮುಂದಿನ ಗುರಿ ನಿಚ್ಚಳವಾಯ್ತು. ಯಾವುದು ಅಸಮಾನತೆಯ ಮೂಲ ಎನ್ನುವುದು ಸ್ಪಷ್ಟವಾಯ್ತು. ಬ್ರಾಹ್ಮಣಶಾಹಿಯ ಶೋಷಣೆಯ ರೂಪುರೇಷೆಯನ್ನ ಸ್ಪಷ್ಟಪಡಿಸಿಕೊಂಡರು. ತನ್ನ ಊರಿಗೆ, ನಾಡಿಗೆ ಹಿಂದಿರುಗುವಾಗ ಅವರು ನಾಳೆ ದಿನಗಳಲ್ಲಿ ತಾನು ಏನಾಗಬೇಕು ಎಂಬುದನ್ನ ಗಟ್ಟಿಮಾಡಿಕೊಂಡಿದ್ದರು. ಸಮಾಜಸೇವೆಯ ಮಹಾಮಾರ್ಗದಿಂದಲೇ ಅವರು ಹೋರಾಟದೆಡೆಗೆ ದಾಪುಗಾಲಿಟ್ಟರು. ಈರೋಡಿನಲ್ಲಿ ಅಂದಿನ ಮಹಾರೋಗವೆನಿಸಿಕೊಂಡಿದ್ದ ಪ್ಲೇಗು ಕಾಣಿಸಿಕೊಂಡು ನೂರಾರು ಮಂದಿ ಸತ್ತು ಸಾವಿರಾರು ಮಂದಿ ಊರು ತೊರೆದಾಗ, ಅದೊಂದು ಸಾಂಕ್ರಾಮಿಕ ರೋಗ ಎಂಬ ಕಾರಣಕ್ಕೆ ಬಂಧುಬಾಂಧವರೂ ಸಂಸ್ಕಾರಕ್ಕೆ ಹಿಂಜರಿಯುವಾಗ ಹಲವರ ಹೆಣಗಳನ್ನು ಹೆಗಲ ಮೇಲೆ ಹೊತ್ತು ಸ್ಮಶಾನಕ್ಕೆ ಸಾಗಿಸಿದ ನಿಜದ ಮಹಾಮನುಷ್ಯ ಪೆರಿಯಾರ್…

ಕ್ರಮೇಣ ಪೆರಿಯಾರರ ಚಿಂತನೆಗಳಿಗೆ ಒಂದಿಷ್ಟು ಆಶಾವಾದದ ಪ್ರತಿಕ್ರಿಯೆ ತೋರಿಸುವ, ಅವರೊಳಗೊಂದಾಗುವ ಜನರೂ ದೊರೆತರು. ಜ್ಞಾನದ ಹಣತೆ ನಿಧಾನವಾಗಿ ಬೆಳಕು ಚೆಲ್ಲತೊಡಗಿತು. ವ್ಯಕ್ತಿತ್ವ ದೊಡ್ಡದಾದ್ದರಿಂದ ಅವರು ಕ್ರಮೇಣ ಇತರರ ಗಮನ ಸೆಳೆಯ ತೊಡಗಿ ಹಲವಾರು ಗೌರವಾನ್ವಿತ ಹುದ್ದೆಗಳಿಗೆ ಅನಿವಾರ್ಯ ಎನ್ನುವಂತಾದರು. ತಮ್ಮ ಸಹೋದರಿಯ ಒಂಬತ್ತು ವರ್ಷದ ಮಗಳು ವಿಧವೆಯಾದಾಗ ಬಹುದೊಡ್ಡ ವಿರೋಧಗಳ ನಡುವೆಯೂ ಬಾಲವಿಧವೆಗೆ ಮರುಮದುವೆ ಮಾಡಿಸುವಲ್ಲಿ ಯಶಸ್ವಿಯಾದ ಪೆರಿಯಾರರಿಗೆ, ಆದರ್ಶ ಕೇವಲ ಹೇಳುವುದಷ್ಟೇ ಆಗಿರಲಿಲ್ಲ. ಹಾಗಾಗಿಯೇ ಮುಂದೆ ಈ ನೆಲದ ಬಹುಜನರು ಪುರೋಹಿತರ ಮಧ್ಯಸ್ಥಿಕೆ ಇಲ್ಲದೆ ವಿವಾಹವಾಗುವ ಆದರ್ಶ ಸರಳ ವಿವಾಹವೊಂದನ್ನು ಪರಿಕಲ್ಪಿಸಿ ಅವರೇ ಅದರ ನೇತೃತ್ವವಹಿಸಿ ನೂರಾರು ಮದುವೆಗಳಿಗೆ ಸಾಕ್ಷಿಯಾದರು. ಆದರ್ಶವಾದಿ, ಕನಸುಗಾರ ಮತ್ತು ವಸ್ತುನಿಷ್ಟ ಬದಲಾವಣೆಯ ಕಡೆಗೆ ನಿರಂತರವಾಗಿ ತುಡಿಯುತ್ತಿದ್ದರು.

ಸ್ವಾತಂತ್ರ್ಯ ಚಳವಳಿ ಮತ್ತು ಗಾಂಧಿಯವರಿಂದ ಪ್ರಭಾವಿತರಾದ ಪೆರಿಯಾರರು ಅವರೊಂದಿಗೆ ನಿಕಟ ಸಂಬಂಧ ಹೊಂದಿದ್ದರು. ಹಾಗಾಗಿಯೇ ಗಾಂಧಿಯವರು ಈರೋಡಿಗೆ ಬಂದಾಗ ಪೆರಿಯಾರರ ಮನೆಯಲ್ಲಿಯೇ ಉಳಿಯುತ್ತಿದ್ದರು. ಗಂಡಸರ ಕುಡಿತದಿಂದಾಗಿ ದುರಂತಕ್ಕೀಡಾಗುವ ಮಹಿಳೆಯರ ದಾರುಣ ಬದುಕಿನ ಕುರಿತು ಪೆರಿಯಾರ್ ಗಾಂಧಿಯವರೊಂದಿಗೆ ಚರ್ಚಿಸಿದರು. ಗಾಂಧಿಯವರ ಮದ್ಯಪಾನ ವಿರೋಧಿ ಚಳವಳಿಯ ರೂಪುರೇಷೆಯೊಂದು ಇಲ್ಲಿಯೇ ಅಸ್ತಿತ್ವಕ್ಕೆ ಬಂದಿತು. ಈ ಚಳವಳಿಯಲ್ಲಿ ಮುಂದೆ ಪೆರಿಯಾರ್, ಅವರ ಹೆಂಡತಿ ಮತ್ತು ಸಹೋದರಿ ಪಾಲ್ಗೊಂಡರು. ಗಾಂಧಿಯ ಪ್ರಭಾವ, ಖಾದಿ ಪ್ರಚಾರದಲ್ಲೆಲ್ಲಾ ತೊಡಗಿಕೊಂಡ ಪೆರಿಯಾರರು ಮುಂದೆ ಗಾಂಧಿಯವರ ಈ ನೆಲದ ಜಾತಿವ್ಯವಸ್ಥೆ ಕುರಿತ ಧೋರಣೆಗಳಿಂದ ಬೇಸತ್ತು ಗಾಂಧಿ ಮತ್ತು ಕಾಂಗ್ರೆಸ್‍ಗಳೆರಡಕ್ಕೂ ವಿಮುಖರಾದದ್ದು ಅವರ ದೃಢ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ.

ಅಲ್ಪಸಂಖ್ಯಾತರಾದ ಜಾತಿ ಶ್ರೇಷ್ಠತೆಯ ಬ್ರಾಹ್ಮಣರು ಈ ನೆಲದ ಬಹುಜನರನ್ನು ಶೂದ್ರರೆಂದು ಗುರುತಿಸಿ ನಿರಂತರ ಶೋಷಿಸಿದ ಬಗೆಗೆ ಅಖಂಡವಾದ ಆಕ್ರೋಶವನ್ನ, ಪ್ರತಿಭಟನೆಯನ್ನ ನಿರಂತರವಾಗಿ ತಮ್ಮ ಸಿಟ್ಟಿನ ಮೊನಚು ಮಾತುಗಳಿಂದಲೇ ದಾಖಲಿಸುತ್ತಾ ಬಂದ ಪೆರಿಯಾರ್ ಈ ನೆಲದ ಬಹುಜನರ ನಿಜವಾದ ನಾಯಕ ಎನ್ನುವುದು ಖಂಡಿತಾ ಉತ್ಪ್ರೇಕ್ಷೆಯಾಗಬೇಕಿಲ್ಲ.

ವ್ಯಕ್ತಿತ್ವ ಪ್ರತಿಯೊಬ್ಬರ ಹಕ್ಕಾಗಬೇಕು, ಕರ್ತವ್ಯವಾಗಬೇಕು ಎಂಬ ಸದಾಶಯದೊಂದಿಗೆ ರೂಪುಗೊಂಡ ಅವರ ಅದ್ಭುತವಾದ ಪರಿಕಲ್ಪನೆಯೇ ‘ಸ್ವಮರ್ಯಾದಾ ಚಳವಳಿ’. ಇದನ್ನ ಅವರು ಈ ನೆಲದ ನಿಜವಾದ ಮೂಲ ನಿವಾಸಿಗಳಾದ ದ್ರಾವಿಡರ ಆತ್ಮಗೌರವದ ಚಳವಳಿಯೆಂದೇ ಗುರುತಿಸುತ್ತಾರೆ. ಇದನ್ನು ಬೆಳೆಸಿ ಅಸ್ತಿತ್ವ ಒದಗಿಸಲು ನಿರಂತರ ಶ್ರಮಿಸುತ್ತಾರೆ. ಇಂದಿಗೂ ತಮಿಳುನಾಡಿನಲ್ಲಿ ‘ಡಿಎಂಕೆ’ ಎಂಬ ಹೆಸರುಗಳು ರಾಜಕಾರಣದ ಅನಿವಾರ್ಯತೆಯ ಭಾಗವೇ ಆಗಿರುವುದರ ಹಿಂದಿನ ಶಕ್ತಿ ಪೆರಿಯಾರ್ ಅವರು ಎನ್ನುವುದನ್ನು ನಾವು ಮರೆಯುವಂತಿಲ್ಲ.

ಇಡೀ ತಮಿಳುನಾಡಿನ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯ, ನ್ಯಾಯಾಂಗ, ಧರ್ಮ, ಜನಜೀವನ ಹೀಗೆ ಸಾಧ್ಯವಿರುವ ಎಲ್ಲಾ ನೆಲೆಗಳಲ್ಲಿಯೂ ಪೆರಿಯಾರರ ಪ್ರಭಾವವಿರುವುದನ್ನ ಚರಿತ್ರೆ ಎಂದಿಗೂ ಮರೆಮಾಚುವುದಾಗುವುದಿಲ್ಲ. ಬದುಕುವ ಮಾರ್ಗಗಳಲ್ಲಿ ನಮ್ಮತನವೇ ಅತ್ಯಂತ ಮುಖ್ಯ ಎಂದು, ದೇವರು-ದೆವ್ವಗಳ ನಂಬಿಕೆಗಳ ಮೇಲೆ ಪ್ರಾಯೋಗಿಕವಾದ ಹಲವಾರು ಕ್ರಿಯೆಗಳ ಮೂಲಕ ದಾಳಿ ಮಾಡಿ ವಾಸ್ತವವನ್ನು ಮನದಟ್ಟು ಮಾಡಲೆತ್ನಿಸಿದ ನಿಜವಾದ ಸಮಾಜವಿಜ್ಞಾನಿ ಪೆರಿಯಾರ್.

‘ವೈಕಂ’ ದೇವಸ್ಥಾನದ ಸುತ್ತಮುತ್ತಲ ರಸ್ತೆಗಳಲ್ಲಿ ‘ಅವರ್ಣೀಯರು’ ನಡೆಯಲೇಬಾರದೆಂಬ ಕಾನೂನನ್ನು ಮುರಿಯುವ ಹೋರಾಟಕ್ಕೂ ಪೆರಿಯಾರ್ ಅನಿವಾರ್ಯವಾದದ್ದು, ಆ ಕಾರಣಕ್ಕೆ ಅದಕ್ಕೊಂದು ಪರಿಹಾರ ದೊರೆಯುವಂತಾದದ್ದು, ಈ ಘಟನೆ ಇಡೀ ದೇಶದ ಗಮನ ಸೆಳೆಯುವಂತಾದ್ದು ಪೆರಿಯಾರರ ವ್ಯಕ್ತಿತ್ವ ಮತ್ತು ಅದಕ್ಕಿದ್ದ ಶಕ್ತಿಯನ್ನ ಹೇಳುವಂತಹದ್ದು. ಇದೊಂದು ಮಾನವ ಹಕ್ಕುಗಳಿಗಾಗಿ ನಡೆದ ನಿಜವಾದ ಹೋರಾಟವಾಗಿತ್ತು. ಅಸ್ಪೃಶ್ಯತೆಯ ವಿರುದ್ಧದ ಮಹತ್ವದ ಹೋರಾಟವೂ ಇದಾಗಿತ್ತೆನ್ನುವುದು ಮುಖ್ಯ. ‘ವೇಕಮ್ ವೀರ’ ಎಂಬ ಪ್ರಶಸ್ತಿಗೆ ಅವರು ಭಾಜನರಾದದ್ದು ವ್ಯಕ್ತಿ, ಶಕ್ತಿಯಾಗುವತ್ತ ನಡೆದಿದ್ದ ಫಲಿತವೇ ಆಗಿತ್ತು.

ದೇಶ ಸ್ವಾತಂತ್ರ್ಯ ಚಳವಳಿಯ ಹೆಸರಿನಲ್ಲಿ ಬ್ರಿಟಿಷರ ವಿರುದ್ಧ ಹೋರಾಟ ನಡೆಸುತ್ತಿದ್ದಾಗ, ನಿಜದ ಸಮಾನತೆ ಸ್ವಾತಂತ್ರ್ಯಕ್ಕಾಗಿ ಸ್ವಾಭಿಮಾನದ ಹೋರಾಟವನ್ನು ಉಳ್ಳವರ ಶೋಷಣೆ, ಬಡತನ, ಅಜ್ಞಾನ, ಅನಕ್ಷರತೆ, ಮೌಢ್ಯತೆ, ಜಾತಿಯತೆಯ ವಿಷ, ಲಿಂಗತಾರತಮ್ಯ ಮೊದಲಾದ ದೇಶದ ಒಳಗಿನ ಸಂಕೋಲೆಗಳ ವಿರುದ್ಧ ನಡೆಸಿದ ಪೆರಿಯಾರರ ಹೋರಾಟ ಇಡೀ ತಮಿಳುನಾಡು ತನ್ಮೂಲಕ ದಕ್ಷಿಣ ಭಾರತದ ಜಾಗೃತಿಯ ರೂಪಕವಾಗಿದ್ದದ್ದು ಗಮನಾರ್ಹವಾದುದು.

ಇವರು ಕೇವಲ ಲೋಕಜ್ಞಾನಕೆ ಮುಖಾಮುಖಿಯಾದ ಸಮಾಜ ವಿಜ್ಞಾನಿ ಮಾತ್ರ ಆಗಿರಲಿಲ್ಲ. ಅವರು ಮನುಷ್ಯ, ವಿಜ್ಞಾನದ ಮೂಲಕ, ಆವಿಷ್ಕಾರದ ಮೂಲಕ ಮುಂದೊಂದು ದಿನ ಅಸೀಮವಾದುದನ್ನೆ ಸಾಧಿಸಬಲ್ಲೆವು ಎನ್ನುವುದನ್ನ ವಿವರಿಸಿದ್ದರು. ಅವೆಲ್ಲವೂ ಇಂದು ನಮ್ಮೊಂದಿಗಿವೆ, ನಮ್ಮ ಆಧುನಿಕತೆಯ ಫಲಿತಗಳಾಗಿವೆ. ಪಾಶ್ಚಾತ್ಯ ದೇಶಗಳಲ್ಲಿ ಶಿಕ್ಷಣದೊಂದಿಗೆ ವೈಚಾರಿಕತೆ ಎನ್ನುವುದು ಹಾಸುಹೊಕ್ಕಾಗಿರುವುದನ್ನ ಅವರು ಮತ್ತೆ ಮತ್ತೆ ಪ್ರಸ್ತಾಪಿಸುತ್ತಾರೆ. “ಪಾಶ್ಚಾತ್ಯ ದೇಶಗಳಲ್ಲಿನ ಶಿಕ್ಷಣವು ಮುಖ್ಯವಾಗಿ ವೈಚಾರಿಕತೆಯನ್ನು ವಿಜ್ಞಾನವನ್ನು, ಸಂಶೋಧನೆಯನ್ನು ಒಳಗೊಂಡಿದೆ. ಮಾತ್ರವಲ್ಲದೇ ಅವುಗಳಿಗೆ ಅನುಗುಣವಾಗಿಯೇ ಅಲ್ಲಿ ಶಿಕ್ಷಣವನ್ನ ನೀಡಲಾಗುತ್ತದೆ’’ ಎಂದು ಪೆರಿಯಾರ್ ಹೇಳಿದ್ದರು. ಮುಂದುವರೆದು “ಮತವನ್ನೋ ಧಾರ್ಮಿಕ ಸಂಬಂಧವಾದ ಭಕ್ತಿಯನ್ನೋ ಶಿಕ್ಷಣದಲ್ಲಿ ಅವರು ಕಡ್ಡಾಯವಾಗಿ ತಂದು ಹಾಕುವುದಿಲ್ಲ. ಪಾಶ್ಚಾತ್ಯ ವಿದ್ಯಾವಂತನು ಒಬ್ಬ ವಿಚಾರವಾದಿಯೋ, ಲೋಕಾನುಭವುಳ್ಳವನಾಗಿಯೋ, ಒಬ್ಬ ವಿಜ್ಞಾನಿಯಾಗಿಯೂ, ಒಬ್ಬ ಸಂಶೋಧಕನಾಗಿಯೂ ಇರುತ್ತಾನೆ ಹೊರತಾಗಿ ಎಂದಿಗೂ ಧರ್ಮಗುರುವಾಗಿಯೋ ಮೂಢನಂಬಿಕೆಯುಳ್ಳವನಾಗಿಯೋ, ವೇದಾಂತಿಯಾಗಿಯೋ, ಪರಮತ ವೈರಿಯಾಗಿಯೋ ಸಂಕುಚಿತ ಬುದ್ಧಿಯುಳ್ಳವನಾಗಿಯೋ ಇರುವುದಿಲ್ಲ” (ಪೆರಿಯಾರ್, ಡಾ. ಎಸ್. ವೇಲುಸ್ವಾಮಿ. (ಅನು) ಶ್ರೀ ಕೃಷ್ಣಭಟ್ ಅರ್ತಿಕ ಜೆ. ಪು.7) ಈ ಬಗೆಯ ವಸ್ತುನಿಷ್ಟವಾದ ಚಿಂತನೆಗಳೇ ಪೆರಿಯಾರ್ ಅವರನ್ನ ವರ್ತಮಾನಕ್ಕೆ ನಿರಂತರ ಮುಖಾಮುಖಿಯಾಗಿಸುವ ತುರ್ತನ್ನು ಹೇಳುವಂತಹುದು…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ನಾನು ಹಿಂದೂ ಅಲ್ಲ, ಮನುಷ್ಯ’: ಎಸ್‌ಪಿ ನಾಯಕ ಶಿವರಾಜ್ ಸಿಂಗ್ ಯಾದವ್ ಹೇಳಿಕೆ ತಿರುಚಿ ವಿವಾದ ಸೃಷ್ಟಿಸಿದ ಬಿಜೆಪಿ ಬೆಂಬಲಿಗರು

ಸಮಾಜವಾದಿ ಪಕ್ಷದ ನಾಯಕ, ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಆಪ್ತ ಸಹಾಯಕ ಹಾಗೂ ಉತ್ತರ ಪ್ರದೇಶದ ಫಿರೋಜಾಬಾದ್‌ನ ಸಮಾಜವಾದಿ ಪಕ್ಷದ ಜಿಲ್ಲಾಧ್ಯಕ್ಷ ಶಿವರಾಜ್ ಸಿಂಗ್ ಯಾದವ್ ‘ನಾನು ಹಿಂದೂ ಅಲ್ಲ, ನಾನು...

ಛತ್ತೀಸ್‌ಗಢ : ಎಂಟು ಮಂದಿ ಬಂಗಾಳಿ ಮುಸ್ಲಿಂ ವಲಸೆ ಕಾರ್ಮಿಕರ ಮೇಲೆ ಬಜರಂಗದಳ ಕಾರ್ಯಕರ್ತರಿಂದ ಹಲ್ಲೆ; ವರದಿ

ಛತ್ತೀಸ್‌ಗಢದ ರಾಯ್‌ಪುರದಲ್ಲಿ ಭಾನುವಾರ (ಜ.4) ಬಜರಂಗದಳ ಕಾರ್ಯಕರ್ತರು ಎಂಟು ಮಂದಿ ಬಂಗಾಳಿ ಮಾತನಾಡುವ ಮುಸ್ಲಿಂ ವಲಸೆ ಕಾರ್ಮಿಕರ ಮೇಲೆ ಹಲ್ಲೆ ನಡೆಸಿದ್ದು, ಒಬ್ಬ ಕಾರ್ಮಿಕ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ರಾಯ್‌ಪುರ ಜಿಲ್ಲೆಯ ಕಟೋವಾಲಿ...

‘ಉಮರ್ ಮತ್ತು ಶಾರ್ಜಿಲ್ ಜಾಮೀನು ನಿರಾಕರಣೆ’: ಶಾಸಕಾಂಗ, ನ್ಯಾಯಾಂಗದ ಕಾರ್ಯವೈಖರಿಯಲ್ಲಿನ ವೈರುಧ್ಯಗಳಿಗೆ ಉದಾಹರಣೆ: ಶ್ರೀಪಾದ್ ಭಟ್

ಇಂಡಿಯನ್ ಎಕ್ಸ್ಪ್ರೆಸ್ ನಲ್ಲಿನ ವರದಿಯ ಪ್ರಕಾರ ಈ ಪ್ರಕರಣದ ವಿಚಾರಣೆಯಲ್ಲಿರುವ ಮುಖ್ಯ ಪ್ರಶ್ನೆ: ಬಂಧನವಾಗಿ ಐದು ವರ್ಷಗಳಾದರೂ ಸಹ ಇನ್ನೂ ವಿಚಾರಣೆ ಆರಂಭವಾಗಿಲ್ಲ. ದೀರ್ಘಕಾಲದ ಜೈಲುವಾಸವನ್ನು ಭಯೋತ್ಪಾದಕ ವಿರೋಧಿ ಕಾನೂನಿನ ಅಡಿಯಲ್ಲಿ ಸಮರ್ಥಿಸಬಹುದೇ?...

ಉತ್ತರ ಪ್ರದೇಶ SIR : ಮತದಾರರ ಪಟ್ಟಿಯಿಂದ 2.89 ಕೋಟಿ ಹೆಸರು ಡಿಲೀಟ್

ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐರ್‌) ಬಳಿಕ ಸುಮಾರು 2.89 ಕೋಟಿ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಉತ್ತರ ಪ್ರದೇಶದ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ನವದೀಪ್ ರಿನ್ವಾ...

ಕರೂರ್ ಕಾಲ್ತುಳಿತ ಪ್ರಕರಣ: ಟಿವಿಕೆ ನಾಯಕ ವಿಜಯ್‌ಗೆ ವಿಚಾರಣೆಗೆ ಹಾಜರಾಗುವಂತೆ ಸಿಬಿಐ ನೋಟಿಸ್

ಕರೂರ್ ಕಾಲ್ತುಳಿತ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಟಿವಿಕೆ ನಾಯಕ ವಿಜಯ್ ಅವರಿಗೆ ಸಿಬಿಐ ನೋಟಿಸ್ ಜಾರಿ ಮಾಡಿದೆ ಎಂದು ಪಿಟಿಐ ಮಂಗಳವಾರ ವರದಿ ಮಾಡಿದೆ. ಸೆಪ್ಟೆಂಬರ್ 27 ರಂದು ನಟ-ರಾಜಕಾರಣಿ ವಿಜಯ್ ಅವರ ತಮಿಳಗ...

ಲಂಡನ್‌ನಲ್ಲಿ ಪ್ಯಾಲೆಸ್ತೀನ್ ರಾಯಭಾರ ಕಚೇರಿ ಉದ್ಘಾಟನೆ : ‘ಐತಿಹಾಸಿಕ ಕ್ಷಣ’ ಎಂದ ರಾಯಭಾರಿ ಹುಸಾಮ್ ಝೊಮ್ಲೋಟ್

ಲಂಡನ್‌ನಲ್ಲಿ ಪ್ಯಾಲೆಸ್ತೀನ್ ದೇಶದ ರಾಯಭಾರಿ ಕಚೇರಿ ಅಧಿಕೃತವಾಗಿ ಉದ್ಘಾಟನೆಯಾಗಿದ್ದು, ಯುಕೆಯ ಪ್ಯಾಲೆಸ್ತೀನ್‌ ರಾಯಭಾರಿ ಇದನ್ನು 'ಐತಿಹಾಸಿಕ ಕ್ಷಣ' ಎಂದು ಬಣ್ಣಿಸಿದ್ದಾರೆ. ಸೋಮವಾರ (ಜ.5) ಪಶ್ಚಿಮ ಲಂಡನ್‌ನ ಹ್ಯಾಮರ್‌ಸ್ಮಿತ್‌ನಲ್ಲಿ ನಡೆದ ರಾಯಭಾರ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ...

ಬಾಂಗ್ಲಾದೇಶದಲ್ಲಿ ಹಿಂದೂ ಉದ್ಯಮಿ ಮತ್ತು ಪತ್ರಕರ್ತನಾಗಿದ್ದ ರಾಣಾ ಪ್ರತಾಪ್ ಬೈರಾಗಿ ತಲೆಗೆ ಗುಂಡಿಕ್ಕಿ ಹತ್ಯೆ 

ಬಾಂಗ್ಲಾದೇಶದ ಜೆಸ್ಸೋರ್ ಜಿಲ್ಲೆಯಲ್ಲಿ ಸೋಮವಾರ 38 ವರ್ಷದ ರಾಣಾ ಪ್ರತಾಪ್ ಬೈರಾಗಿ ಅವರ ತಲೆಗೆ ಅಪರಿಚಿತ ವ್ಯಕ್ತಿಗಳು ಗುಂಡು ಹಾರಿಸಿದ್ದಾರೆ ಎಂದು ಹಲವು ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿದೆ.  ಬೈರಾಗಿ ಒಬ್ಬ ಹಿಂದೂ ಉದ್ಯಮಿ ಮತ್ತು...

ತಿರುಪರನ್‌ಕುಂದ್ರಂ ಬೆಟ್ಟದ ಮೇಲೆ ದೀಪ ಬೆಳಗಿಸುವ ಆದೇಶ ಎತ್ತಿ ಹಿಡಿದ ಮದ್ರಾಸ್ ಹೈಕೋರ್ಟ್

ಮಧುರೈನ ತಿರುಪರನ್‌ಕುಂದ್ರಂ ಬೆಟ್ಟದ ಮೇಲಿರುವ ಕಲ್ಲಿನ ಕಂಬದಲ್ಲಿ ದೀಪ ಬೆಳಗಿಸಲು ಅನುಮತಿ ನೀಡಿ ಮದ್ರಾಸ್‌ ಹೈಕೋರ್ಟ್‌ನ ಮಧುರೈ ಪೀಠದ ಏಕ ಸದಸ್ಯ ನ್ಯಾಯಾಧೀಶರು ನೀಡಿದ ಆದೇಶವನ್ನು ವಿಭಾಗೀಯ ಪೀಠ ಎತ್ತಿಹಿಡಿದಿದೆ. ನ್ಯಾಯಮೂರ್ತಿ ಜಿ. ಜಯಚಂದ್ರನ್...

ಕರ್ನಾಟಕದ ದೀರ್ಘಾವಧಿಯ ಮುಖ್ಯಮಂತ್ರಿಯಾಗಿ ದಾಖಲೆ ಸೃಷ್ಟಿಸಿದ ಸಿದ್ದರಾಮಯ್ಯ

ಬೆಂಗಳೂರು: ಕರ್ನಾಟಕದ ಅತಿ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ದಿವಂಗತ ಡಿ.ದೇವರಾಜ್ ಅರಸ್ ಅವರ ದಾಖಲೆಯನ್ನು (7 ವರ್ಷ 239 ದಿನಗಳು) ಸಿದ್ದರಾಮಯ್ಯ ಮುರಿದಿದ್ದಾರೆ.  ದೇವರಾಜು ಅರಸು ಮತ್ತು ಸಿದ್ದರಾಮಯ್ಯ ಅವರು ಸಾಮಾಜಿಕ...

ಅಜ್ಮೀರ್ ದರ್ಗಾಕ್ಕೆ ಪ್ರಧಾನಿ ಚಾದರ್ ಅರ್ಪಿಸುವುದನ್ನು ತಡೆಯುವಂತೆ ಅರ್ಜಿ : ತಿರಸ್ಕರಿಸಿದ ಸುಪ್ರೀಂ ಕೋರ್ಟ್

ಉರೂಸ್ ಪ್ರಯುಕ್ತ ಅಜ್ಮೀರ್‌ನ ಸೂಫಿ ಸಂತ ಖ್ವಾಜಾ ಮುಯೀನುದ್ದೀನ್ ಹಸನ್ ಚಿಸ್ತಿ ಅವರ ದರ್ಗಾಕ್ಕೆ ಪ್ರಧಾನಿ ಚಾದರ್ ಅರ್ಪಿಸುವುದನ್ನು ಮತ್ತು ದರ್ಗಾಕ್ಕೆ ಸರ್ಕಾರದ ವತಿಯಿಂದ ನೀಡಲಾಗುವ ಗೌರವಗಳನ್ನು ತಡೆಯುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು...