Homeಮುಖಪುಟಪೂರ್ಣಚಂದ್ರ ತೇಜಸ್ವಿಯವರ ಜನ್ಮದಿನದಂದು ಅವರ ಜೀವನದ ಕುರಿತೊಂದು ಆಪ್ತ ಬರಹ..

ಪೂರ್ಣಚಂದ್ರ ತೇಜಸ್ವಿಯವರ ಜನ್ಮದಿನದಂದು ಅವರ ಜೀವನದ ಕುರಿತೊಂದು ಆಪ್ತ ಬರಹ..

- Advertisement -
- Advertisement -

ಕನ್ನಡದ ಮಹತ್ವದ ಲೇಖಕ ಪೂರ್ಣಚಂದ್ರ ತೇಜಸ್ವಿಯವರ 82ನೇ ಜನ್ಮದಿನ ಇಂದು. ಅವರ ಬರಹಗಳು ಸಾಕಷ್ಟು ಜನರನ್ನು ಪ್ರಭಾವಿಸಿವೆ. ಅಂತಹ ಲೇಖಕನ ಬದುಕಿನ ಒಂದು ಮುಖ್ಯ ಭಾಗದ ಕುರಿತು ಶಿಕ್ಷಕರು ಮತ್ತು ಪ್ರತಿಭಾವಂತ ಛಾಯಾಗ್ರಾಹಕರಾದ ಕಲೀಮ್ ಉಲ್ಲಾ ರವರು ಕಳೆದ ವರ್ಷ ಬರೆದಿದ್ದ ಆಪ್ತಬರಹವೊಂದನ್ನು ಮರುಮುದ್ರಿಸುತ್ತಿದ್ದೇವೆ.

ತೇಜಸ್ವಿಯವರು ತೀರಿಕೊಂಡ ಮೇಲೆ ಮನಸ್ಸಿನ ಕಳವಳ ಹೆಚ್ಚಾಗಿತ್ತು. ಅದೇಕೋ ಶ್ರೀಮತಿ ರಾಜೇಶ್ವರಿ ಅವರನ್ನು ಕಂಡು ಮಾತಾಡಿಸುವ ಆಸೆ ಹೆಚ್ಚಾಗಿತ್ತು. ನಮ್ಮೊಳಗೂ ತೇಜಸ್ವಿ ಸಾವಿನ ನೋವು ಜೀರ್ಣವಾಗಿರಲಿಲ್ಲ. ತವರಿನ ಜನ ತಮ್ಮಕ್ಕನಿಗೆ ಭಾವನ ಅಗಲಿಕೆಯ ಸಾಂತ್ವನ ಹೇಳಲು ಹೊಸ ಸೀರೆ ಕೊಂಡು ಹೋಗುತ್ತಾರೆ. ನಾವೆಲ್ಲಾ ಅದೇ ಥರ ನಿರುತ್ತರಕ್ಕೆ ಹೋದೆವು. ಮಾತಿನಲ್ಲಿ ಅವರನ್ನು ಸಮಾಧಾನ ಪಡಿಸುವ ಶಕ್ತಿ ನಮಗಿರಲಿಲ್ಲ. ಮಾತುಗಳ ಕೇಂದ್ರ ಸೆಳೆತ ಸಹಜವಾಗಿ ತೇಜಸ್ವಿಯೇ ಆಗಿದ್ದರು. ಸಹಜವಾಗಿ ಇರಲು ಯತ್ನಿಸುತ್ತಿದ್ದ ರಾಜೇಶ್ವರಿಯವರ ಆಳದಲ್ಲಿ ಕಣ್ಣೀರ ಝರಿ ಸದ್ದಿಲ್ಲದೆ ಹರಿಯುತ್ತಿತ್ತು. ಯಾವ ಕ್ಷಣದಲ್ಲಾದರೂ ಅವರ ದುಃಖ ಸ್ಪೋಟಗೊಂಡೀತು ಎಂಬ ದುಗಡದಲ್ಲೇ ಇದ್ದೆವು. ತೇಜಸ್ವಿ ಅವರ ಬದುಕಿನ ವಿಶೇಷಗಳ ಹೇಳುತ್ತಾ ಸಹಜವಾಗಿದ್ದ ಮೇಡಂ ತಮ್ಮ ಮನೆ ನಾಯಿ ‘ಕಿವಿಯ’ ವಿಷಯ ಬಂದಾಗ ಮಾತ್ರ ತಡೆಯಲಾರದೆ ಹೋದರು.

ನಾಯಿ `ಕಿವಿಗೆ’ ವಯೋ ಸಹಜ ಕೊನೆಗಾಲ ಸಮೀಪಿಸಿತ್ತು. ಅದು ನಡೆಯಲಾಗದೆ ದೃಷ್ಟಿ ಮಂದವಾಗಿ ಕೂತಲ್ಲೇ ಚಡಪಡಿಸುತ್ತಿತ್ತು. ಕಾಲಿಗೆ ಚಕ್ರ ಕಟ್ಟಿಕೊಂಡು ಕಾಡೆಲ್ಲ ಸುತ್ತುತ್ತಿದ್ದ ತೇಜಸ್ವಿ ಅವರ ಚಲನೆಯನ್ನೂ ಕಿವಿ ಕಟ್ಟಿ ಹಾಕಿತ್ತು. ಚಲನೆ ನಿಂತ ಕಿವಿ ಮಂಕಾಗಿತ್ತು. ಅದರ ಸಾವು ನಿಶ್ಚಯವಾದ ಕೊನೇ ದಿನ ತೇಜಸ್ವಿ ಅದನ್ನು ಮಗುವಿನಂತೆ ಎದೆಗವುಚಿಕೊಂಡು ಮನೆ, ತೋಟ ಎಲ್ಲಾ ಕಡೆ ಸುತ್ತಾಡಿಸಿದರಂತೆ.

“ನೋಡೋ ಕಿವಿ ಈ ಜಾಗದಲ್ಲಿ ನೀನು ಹಾವೊಂದನ್ನು ಹೆದರಿ ಓಡಿಸಿದ್ದೆ. ಅಗೋ ಆ ತಾವಿನಲ್ಲಿ ನಿನ್ನ ಗಂಟಲಲ್ಲಿ ಸಿಕ್ಕ ಮೂಳೆ ಚೂರು ನಾನು ಎಳೆದು ತೆಗೆದಿದ್ದೆ. ಪ್ಯಾರನ ಜತೆ ನೀನಿಲ್ಲಿ ತಕರಾರು ಮಾಡಿದ್ದೆ. ಇಗೋ ಅಲ್ಲಿ ಜೇನುನೊಣಗಳು ನಿನ್ನ ಕಚ್ಚಿ ಸತಾಯಿಸಿದ್ದವು. ಈ ಕಿರುದಾರಿಯಲ್ಲೇ ನಾನು ನೀನು ಕಾಡಿಗೆ ಹೋಗುತ್ತಿದ್ದೆವು. ಇದೆಲ್ಲ ನಿನಗೆ ನೆನಪಿದೆ ಅಲ್ವೇನೋ” ಎಂದು ಮಮತೆ ತುಂಬಿ ಕಿವಿಯನ್ನು ಒಪ್ಪಿಸುತ್ತಿದ್ದರು. ಏಕಪಾತ್ರಾಭಿನಯದಂತೆ ಕಾಣುತ್ತಿದ್ದ ಈ ಘಟನೆಯಲ್ಲಿ ತೇಜಸ್ವಿಯ ನಿರಂತರ ಮಾತು, ಕಿವಿಯ ಭಯಾನಕ ಮೌನ ಇಡೀ ಸಂದರ್ಭದ ಸಂಕಟ ಹೆಚ್ಚಿಸಿತ್ತು. ಹೀಗೆ ಸಾಕು ನಾಯಿಯ ಹೊತ್ತುಕೊಂಡು ಅಲೆದಾಡಿ ಚಡಪಡಿಸಿದ ಸಂದರ್ಭ ಕೇಳುತ್ತಾ ರಾಜೇಶ್ವರಿ ಮೇಡಂ ಗೊಳೋ ಎಂದು ರೋಧಿಸತೊಡಗಿದರು. ಆ ಕ್ಷಣ ನಾವೆಲ್ಲಾ ಮಾತು ಮರೆತು ಥಂಡ ಹೊಡೆದು ಕೂತೆವು. ತುಂಬಾ ಹೊತ್ತು ನೀರವ ಮೌನ ಆವರಿಸಿತು. ಮನಸ್ಸಿನಲ್ಲಿ ತೇಜಸ್ವಿ ಗೆಳೆತನಕ್ಕೆ ಅಷ್ಟು ಹತ್ತಿರವಾಗಿದ್ದ ಆ ಕಿವಿಯ ಅದೃಷ್ಟ ನೆನೆದು ಹೆಮ್ಮೆ ಎನಿಸಿತು.

ಸಾಕು ನಾಯಿಯೊಂದು ಗೆಳೆಯನಂತಾಗಿ ಮನೆ ಯಜಮಾನನ ಮನಸ್ಸಿಗೆ ಆಪ್ತವಾಗುವ ಈ ಪ್ರೀತಿಯ ಸೆಲೆಯೇ ವಿಶಿಷ್ಟ ಎನಿಸುತ್ತದೆ. ಮಲೆನಾಡಿನ ಜನ ನಾಯಿಯನ್ನು ತಮ್ಮ ಪ್ರಾಣದಷ್ಟೇ ಗೌರವಿಸುತ್ತಾರೆ. ಅನೇಕ ಆಪತ್ಕಾಲಗಳಲ್ಲಿ ಅವು ಹಿತೈಷಿಗಿಂತ ಹೆಚ್ಚಾಗಿ ನಡೆದುಕೊಂಡಿರುತ್ತವೆ. ಕುಪ್ಪಳ್ಳಿಗೆ ಹೋದವರು ಕುವೆಂಪು ಬಾಲ್ಯದ ಫೋಟೋವೊಂದನ್ನು ಅಲ್ಲಿ ನೋಡಿರಬಹುದು. ಅಲ್ಲಿ ಪುಟ್ಟಪ್ಪನವರು ತಂದೆ ವೆಂಕಟಪ್ಪನವರ ಜೊತೆ ಕೂತು ತೆಗೆಸಿಕೊಂಡ ಅಪರೂಪದ ಫೋಟೋ ಒಂದಿದೆ. ಅಲ್ಲಿ ಕುಟುಂಬದ ಸದಸ್ಯರಂತೆ ಫೋಸು ಕೊಟ್ಟಿರುವ ಅನೇಕ ಶ್ವಾನಗಳನ್ನು ನೋಡಬಹುದು. ಇದು ಮಲೆನಾಡಿನ ಜನರ ಬದುಕಿನೊಳಗೆ ಪ್ರಾಣಿಲೋಕ ಮಿಳಿತಗೊಂಡು ಒಂದಾಗಿರುವ ಬಗೆ. ಕುವೆಂಪು ಕಾದಂಬರಿಯ ‘ಹುಲಿಯಾ’ ತೇಜಸ್ವಿ ಕಥನಗಳ ‘ಕಿವಿ’ ಎರಡೂ ಪ್ರಾಣಿಗಳು ಅವರ ಸಾಹಿತ್ಯದಲ್ಲಿ ಗಳಿಸಿರುವ ಪ್ರಾಮುಖ್ಯತೆಯೇ ಇದಕ್ಕೆ ಸಾಕ್ಷಿ. ಶಿಕಾರಿಯಲ್ಲಿ ಜತೆಯಾಗಿ, ಮನೆಗೆ ಕಾವಲಾಗಿ, ಕಾಡುಪ್ರಾಣಿಗಳ ಆಕ್ರಮಣದಿಂದ ಜೀವ ಕಾಪಾಡುವ ನಾಯಿಗಳ ನಿಯತ್ತು ಮಲೆನಾಡಿಗರಿಗೆ ಇಷ್ಟವಾಗಿದೆ. ಬಯಲು ಸೀಮೆಯ ಕುರಿ ಕಾಯುವ ಜನರೂ ನಾಯಿಗಳನ್ನು ಒಡಹುಟ್ಟಿದವರಂತೆ ಕಾಣುತ್ತಾರೆ. ಅವರ ಇಡೀ ಕುರಿಮಂದೆಯನ್ನು ಜೋಪಾನ ಮಾಡುವ ಬಯಲಿನ ಆಕ್ರಮಣಗಳಿಂದ ಅವರನ್ನು ಕಾಪಾಡುವ ಪ್ರಾಣಿಲೋಕವನ್ನು ಬಲು ಶ್ರದ್ಧೆಯಿಂದ ಗೌರವಿಸುತ್ತಾರೆ.

ತೇಜಸ್ವಿ ತಮ್ಮ ನಾಯಿ ಕಿವಿ ಕುರಿತು “ಕಿವಿ ನನ್ನ ಬಳಿ ಇದ್ದ ಒಂದು ಸ್ಪಾನಿಯಲ್ ಜಾತಿಯ ಬಿಳಿಯ ನಾಯಿ. ಮನೆ ಕಾಯುವುದರಿಂದ ಹಿಡಿದು ಶಿಕಾರಿಯವರೆಗೆ ಎಲ್ಲದರಲ್ಲೂ ಅದ್ವಿತೀಯನಾಗಿದ್ದ. ಅದರ ಗುಣ ಬುದ್ದಿವಂತಿಕೆಗಳನ್ನು ನೋಡಿ ಅನೇಕ ಬಾರಿ ನಾನೂ ಆಶ್ಚರ್ಯಪಡುತ್ತಿದ್ದೆ. ಕೇವಲ ಜಾನಪದ ಗೀತೆಗಳಲ್ಲಿ, ದಂತಕತೆಗಳಲ್ಲಿ ಮಾತ್ರ ಆ ರೀತಿಯ ನಾಯಿ ಇರುತ್ತದೆಂದು ಕೇಳಿದ್ದೆ. ಕಿವಿಯನ್ನು ಸಾಕಿದ ಅನಂತರ ಅದನ್ನು ಸಾಕ್ಷಾತ್ತಾಗಿ ನೋಡಿದಂತಾಗಿತ್ತು” ಎನ್ನುತ್ತಾರೆ.

ಪ್ರಾಣಿಲೋಕದಿಂದಲೂ ಮನುಷ್ಯ ಕಲಿಯಬೇಕಾದ ಜ್ಞಾನದ ಅನೇಕ ಪಾಠಗಳಿವೆ ಎನ್ನುತ್ತಿದ್ದರು ತೇಜಸ್ವಿ. ಪ್ರಕೃತಿ ಹಾಗೂ ಮನುಷ್ಯನ ನಡುವೆ ಅರ್ಥವಾಗದ ಅನೇಕ ಸಂಗತಿಗಳಿರುತ್ತವೆ. ಕೆಲವು ಮನುಷ್ಯನ ಅರಿವಿಗೆ ಬಾರದ ಸೂಕ್ಷ್ಮ ವಿಷಯಗಳು. ಇಂಥವನ್ನು ಮೊದಲು ಕಾಣುವ ಶಕ್ತಿ ನಾಯಿಗಿದೆ. ಈ ನಿಸರ್ಗದ ಸಣ್ಣ ಶಬ್ದ, ಭಿನ್ನ ನಡೆ, ಸೂಕ್ಷ್ಮ ಬದಲಾವಣೆಗಳನ್ನು ನಾಯಿ ಬಲು ಬೇಗ ಗ್ರಹಿಸುತ್ತದೆ. ನಾಯಿಯ ಈ ಪ್ರತಿಭೆಯಿಂದ ನಿಸರ್ಗದ ಜ್ಞಾನದ ಎಳೆಗಳನ್ನು ಹುಡುಕಬಹುದು. ನಾಯಿಯೆಂಬ ಪ್ರಾಣಿಯನ್ನು ನಿರ್ಲಕ್ಷ್ಯ ಮನೋಭಾವದಿಂದ ನೋಡುವ ಅನೇಕರಿಗೆ ನಾಯಿಯ ಕುರಿತ ಇಷ್ಟೊಂದು ವ್ಯಾಖ್ಯಾನಗಳು ವಿಚಿತ್ರ ಎನಿಸಬಹುದು.

ನಾಯಿಯನ್ನು ಕುರಿತ ವ್ಯಾಮೋಹ, ಅದನ್ನು ಸಾಕುವ ಕಳಕಳಿ ತೇಜಸ್ವಿ ಅವರಿಗೆ ಮೊದಲಿನಿಂದಲೂ ಇದ್ದ ಹಾಗೆ ಕಾಣುತ್ತದೆ. ಅವರ ಪರಿಸರದ ಕಥೆ ಶುರುವಾಗುವುದೇ ನಾಯಿಯ ಮೂಲಕ. ಅನ್ವೇಷಣೆ ಮಾಡುವ ಆನುಷಂಗಿಕ ಗುಣ ನಿರೂಪಕನಲ್ಲಿ ಹೆಚ್ಚಾಗಲು ನಾಯಿ ಜೊತೆಗಿನ ಗೆಳೆತನವೇ ಕಾರಣವಾಗಿರಬೇಕು. ಇದು ಮಲೆನಾಡಿನ ಸಾಕಷ್ಟು ಜನರಿಗೆ ಸಿಕ್ಕಿರುವ ಒಂದು ಪ್ರಾಕೃತಿಕ ವರ. ಕುವೆಂಪು ಅವರಿಗೆ ತೇಜಸ್ವಿ ಬಾಲಕರಾಗಿದ್ದಾಗ “ನಮಗೆ ಎರಡು ನಾಯಿ ಮರಿ ಬೇಕೇಬೇಕು. ಮಾವನಿಗೆ ಕಾಗದ ಬರೆಯುತ್ತಾ ನಮಗೆ ಒಂದು ಹೆಣ್ಣು ನಾಯಿ ಮರಿ ಬೇಕು ಎಂದು ಬರೆಯಿರಿ” ಎಂದು ಒತ್ತಾಯಿಸಿ ಬರೆದಿರುವ ಮೊದಲ ಪತ್ರ ಸಾಕಷ್ಟು ಕುತೂಹಲ ಹುಟ್ಟಿಸುತ್ತದೆ.

ತೇಜಸ್ವಿ ತಮ್ಮ ಮಿಲನಿಯಮ್ ಸರಣಿಯಲ್ಲಿ ‘ಜರ್ಮನ್ ಷಪರ್ಢ್’ ನಾಯಿಯ ಬಗ್ಗೆ ಬರೆಯುತ್ತಾರೆ. ನಮ್ಮಲ್ಲಿನ ‘ಪರಮವೀರ ಚಕ್ರ’ ಪ್ರಶಸ್ತಿಗೆ ಸಮನಾದ ‘ಡಿಕೆನ್ಸ್ ಕ್ರಾಸ್’ ಪ್ರಶಸ್ತಿಯನ್ನು ಈ ಜರ್ಮನ್ ನಾಯಿ ಗಳಿಸುತ್ತದೆ. ಅದಕ್ಕಿಟ್ಟ ಹೆಸರು ‘ಅಂಟಿಸ್’ ಎಂದು. ಯುದ್ಧದಲ್ಲಿ ತೋರಿದ ಧೈರ್ಯ, ಸಾಹಸ, ಪರಾಕ್ರಮಗಳಿಗೆ ಪ್ರಶಸ್ತಿ ಪಡೆಯುವ ಅಂಟಿಸ್ ಅಸಾಧಾರಣ ಬುದ್ಧಿಶಕ್ತಿಯ ನಾಯಿ ಎನಿಸಿತ್ತು, ಜನರ ಕಿವಿಗೆ ಕೇಳಿಸದ ನಿಗೂಢ ಸದ್ದು ಅದಕ್ಕೆ ಮೊದಲೇ ಕೇಳಿಸುತ್ತಿತ್ತು. ತನ್ನ ಅಧ್ಭುತ ಶಕ್ತಿಯಿಂದ, ಜ್ಞಾನಪ್ರತಿಭೆಯಿಂದ ನೂರಾರು ಜನರ ಹಾಗೂ ಸೈನಿಕರ ಪ್ರಾಣವನ್ನು ಯುದ್ಧದಲ್ಲಿ ಉಳಿಸಿದ ಈ ನಾಯಿಯ ಬಗ್ಗೆ ತೇಜಸ್ವಿ ಹೆಮ್ಮೆಯಿಂದ ಬರೆಯುತ್ತಾರೆ. ನಾಯಿಯ ಇಂದ್ರಿಯಗಳ ಅಸಾಧಾರಣ ಸೂಕ್ಷ್ಮಜ್ಞತೆ, ಅವುಗಳಿಗಿರುವ ಅಸಾಧಾರಣ ಬುದ್ಧಿಶಕ್ತಿಯ ಬಗ್ಗೆ ಹೆಚ್ಚು ಒಲವಿದ್ದ ಕಾರಣಕ್ಕೆ ತೇಜಸ್ವಿ ಕಥನಗಳು ನಾಯಿಯ ಕುರಿತು ಹೆಚ್ಚು ಶ್ರದ್ಧೆ ತೋರುತ್ತವೆ.

‘ಪರಿಸರ ಕಥೆ’ಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಹಾಗೂ ‘ಕರ್ವಾಲೊ’ ಕಾದಂಬರಿಯಲ್ಲಿ ಮುಖ್ಯ ಪಾತ್ರವಾಗಿ ಬರುವ ಕಿವಿ ಎಂಬ ನಾಯಿಯ ಪಾತ್ರವನ್ನು ತೇಜಸ್ವಿ ಬಲು ಜತನದಿಂದ ನಿರೂಪಿಸುತ್ತಾರೆ. ಕಾಡಿನ ಅರಿವನ್ನು ಕಲಿಸುವ ಒಬ್ಬ ಗುರುವಾಗಿ ನಾಯಿ ಇಲ್ಲಿ ಕಾಣುತ್ತದೆ. ಕಾಡಿನ ಸೂಕ್ಷ್ಮಾತಿಸೂಕ್ಷ್ಮ ಸಂಗತಿಗಳನ್ನು ಲೇಖಕರಿಗೆ ತಿಳಿಯುವಂತೆ ಮಾಡುವ ಕಿವಿ ಪ್ರಕೃತಿ ಹಾಗೂ ಮನುಷ್ಯನ ನಡುವೆ ಜ್ಞಾನದ ಕೊಂಡಿಯಾಗಿ ಕೆಲಸ ಮಾಡುತ್ತದೆ.

ಕೃಪೆ: ಅಂತರ್ಜಾಲ

“ನಾನು ತೋಟ ಮಾಡಲು ಆರಂಭಿಸಿದ ಮೊದಲ ವರ್ಷಗಳಲ್ಲಿ ಕೋವಿ ಹೆಗಲ ಮೇಲೆ ಹಾಕಿಕೊಂಡು ದಿನವಿಡೀ ಕಿವಿಯೊಂದಿಗೆ ಅಲೆಯುವುದು ನನ್ನ ಕೆಲಸವಾಗಿತ್ತು. ಓದುವುದು, ಬರೆಯುವುದು, ಎಲ್ಲದಕ್ಕೂ ತಿಲಾಂಜಲಿಯಿತ್ತು. ಹೀಗೆ ನಿರ್ಜನ ಕಾಡುಗಳಲ್ಲಿ ಗೊತ್ತು, ಗುರಿಯಿಲ್ಲದೆ ಅಲೆಯುತ್ತಿರುವ ನನ್ನನ್ನು ನೋಡಿ ಅನೇಕರು ಇವನು ಸಂಪೂರ್ಣ ಹಾಳಾದನೆಂದು ವ್ಯಸನ ಸೂಚಿಸಿದವರಿದ್ದಾರೆ. ಅನೇಕರು `ಎಂಥವರಿಗೆ ಎಂಥಾ ಮಗ’ ಎಂದು ವಿಷಾದಪಟ್ಟವರೂ ಅನೇಕರಿದ್ದಾರೆ. ಕೆಲವರು ‘ಈ ನಾಯಿಯ ದೆಸೆಯಿಂದ ಹಾಳಾದ’ ಎಂದು ಕಿವಿಯನ್ನೂ ದೂಷಿಸಿದವರೂ ಇದ್ದಾರೆ” ಎನ್ನುತ್ತಾರೆ ತೇಜಸ್ವಿ

ಕುವೆಂಪು ಸಾಹಿತ್ಯ ಪ್ರಕೃತಿಯ ವಿವರಗಳಿಂದ ಸೌಂದರ್ಯ ಮತ್ತು ಧ್ವನಿ ಪಡೆದು ಭಾವನಾತ್ಮಕವಾದರೆ, ಅದೇ ತೇಜಸ್ವಿ ಕಥನ ನಿಸರ್ಗದಲ್ಲಿ ಕಾಣದ ಬದುಕಿನ ವಿವರಗಳೆಡೆಗೆ ಆಸಕ್ತಿ ವಹಿಸಿ ಸೃಜನಾತ್ಮಕವಾಗುತ್ತದೆ. ಕುವೆಂಪು ಅವರ ನಾಯಿಗುತ್ತಿ ಪ್ರಕೃತಿಯ ನಡುವೆ ಒಂದು ಲಯವಾಗಿ ಬದುಕುವವನು. ಆತನ ನಾಯಿ ಹುಲಿಯ ನಿಸರ್ಗವನ್ನು ನೋಡುವ ಅವನ ನೋಟವನ್ನು ಹೆಚ್ಚು ಸೂಕ್ಷ್ಮಗೊಳಿಸುತ್ತದೆ. ಅವನಿಗೂ ನಿಸರ್ಗದ ಅರಿವಿನ ಪಾಠ ಹೇಳುವ ಸೂಕ್ಷ್ಮ ಜೀವಿ ಅದು. ಇದರ ಹಾಗೆಯೇ ತೇಜಸ್ವಿ ಕಥನದ ನಾಯಿ ‘ಕಿವಿ’ ಕೂಡ ನಿಸರ್ಗದ ಕಾಣದ ಅನೇಕ ಮುಖಗಳನ್ನು ತೋರಿಸುತ್ತಾ ಹೋಗುತ್ತದೆ. ಪ್ರಾಣಿಯಿಂದ ಮನುಷ್ಯ ಕೂಡ ಕಲಿಯುತ್ತಾನೆ ಮತ್ತು ಕಲಿಯಬೇಕು ಎಂಬ ಸಂಗತಿಯೇ ಇಲ್ಲಿ ಮುಖ್ಯ.

ಅಲೆದಾಟದಲ್ಲಿ, ಸಾಕು ಪ್ರಾಣಿಯೊಟ್ಟಿಗಿನ ಆಪ್ತತೆಯಲ್ಲಿ ಜ್ಞಾನ ಗಳಿಸುತ್ತಿದ್ದ ತೇಜಸ್ವಿ ಹೊರ ಜಗತ್ತಿಗೆ ಹಾಳಾದವರಂತೆ ಕಂಡಿರುವುದು ಉತ್ಪ್ರೇಕ್ಷೆಯ ಸಂಗತಿಯಲ್ಲ. ಮನುಷ್ಯ ತನ್ನೆಲ್ಲಾ ಸಂಬಂಧಗಳಷ್ಟೇ ಮಿಗಿಲಾಗಿ ಪ್ರಾಣಿಲೋಕದೊಂದಿಗೆ ಅವಿನಾಭಾವ ಸಂಬಂಧ ಇಟ್ಟುಕೊಳ್ಳುವುದು ಬಯಲ ಮತ್ತು ಕಾಡಿನ ಬದುಕಿನವರಿಗೆ ಎಷ್ಟು ಅನಿವಾರ್ಯ ಎನ್ನುವುದನ್ನು ತೇಜಸ್ವಿ ಕಥನಗಳು ಹೇಳುತ್ತವೆ.
ಮನುಷ್ಯನಿಗಿಂತ ಮಿಗಿಲಾದ ವಾಸನಾ ಜ್ಞಾನ, ಮತ್ತು ಎಚ್ಚರದ ಸ್ಥಿತಿ ಇರುವ ನಾಯಿ ತೇಜಸ್ವಿ ಅವರಿಗೆ ಹೊಸ ಸಂಗತಿಗಳನ್ನು ತಿಳಿಸುವ ಗುರುವಾಗಿದೆ. ತನ್ನ ಸೂಕ್ಷ್ಮ ಗ್ರಹಿಕೆಗಳಿಂದ ನಿರೂಪಕನ ಅರಿವನ್ನು ವಿಸ್ತಾರಿಸುವ ನಾಯಿ ಜಗದ ಕಣ್ಣಿಗೆ ಮಾತ್ರ ಸಾಮಾನ್ಯ ಪ್ರಾಣಿ. ಇಂಥ ಸಾಮಾನ್ಯ ಜೀವದಿಂದಲೂ ಕಲಿಯುವ ಸಾಕಷ್ಟು ಸಂಗತಿಗಳಿವೆ ಎಂಬ ಸರಳ ಸತ್ಯವನ್ನು ತೇಜಸ್ವಿ ಕಥನಗಳು ತೆರೆದಿಡುತ್ತವೆ. “ಮನುಷ್ಯನ ಮಿತ್ರ ಶೇಷ್ಠನಾದ ನಾಯಿ ನಮ್ಮ ಸಂಸ್ಕøತಿಯ ಅವಿಭಾಜ್ಯ ಅಂಗವಾಗಿ ನಮಗೆ ಪರಿಚಯವಾದಾಗ ಮಾತ್ರ ನಾಯಿಯ ಹಿರಿಮೆ ನಮಗೆ ಅರ್ಥವಾಗುತ್ತದೆ. ನಮ್ಮ ಅಂತಃಕರಣವನ್ನು ಈ ಜೀವಗಳು ಎಷ್ಟು ಕಲಕುತ್ತವೆ ಎಂದರೆ ಇದನ್ನು ಇತರರಿಗೆ ವಿವರಿಸಿ, ವಿಶ್ಲೇಷಿಸಿ ಹೇಳುವುದು ಕಷ್ಟ ಎನಿಸುತ್ತದೆ” ಎನ್ನುತ್ತಾರೆ ತೇಜಸ್ವಿ. ನಮ್ಮ ಪರಿಸರದಲ್ಲೇ ಬದುಕುವ ಜೀವಿಗಳ ಜೊತೆಗೆ ಸಹಜವಾಗಿ ಬಾಳುವ ಜೊತೆಗೆ ಅವುಗಳ ಅಂತಃಸತ್ವವನ್ನೂ ಅರಿತು ಗೌರವಿಸುವ ವಿವೇಕವನ್ನು ತೇಜಸ್ವಿ ಬರೆಹಗಳು ಕಲಿಸುತ್ತವೆ.

“ನಾಯಿಗೆ ನಾವು ಮಾಡುವಂತೆ ಮಾನವೀಯ ವ್ಯಕ್ತಿತ್ವವನ್ನೂ ಆರೋಪಿಸಿ ನಮ್ಮಂತೆಯೇ ಅದು ಕೂಡ ಎಂದು ನೋಡುವುದರಿಂದ ನಾಯಿಗೆ ಸಂತೋಷವಾಗಲೀ, ಪ್ರಯೋಜನವಾಗಲೀ ಉಂಟೆ ಎಂದು ನನಗೆ ಅನುಮಾನ” ಎನ್ನುವ ತೇಜಸ್ವಿ ಮನುಷ್ಯ ಮತ್ತು ಪ್ರಾಣಿಲೋಕದ ನಡುವೆ ಇಕಾಲಜಿ ರೂಪಿಸಿರುವ ಮಿತಿಗಳನ್ನೂ ಗಮನಿಸಿ ಹೇಳಬಲ್ಲರು. ಪರಿಸರ ಲೋಕದ ಇಂಥ ಬೆಸುಕೊಂಡಿಗಳನ್ನು ನಮ್ಮ ನಮ್ಮ ಬುದ್ಧಿಶಕ್ತಿಯ ಮಿತಿಗೆ ತಕ್ಕಂತೆ ನಾವೆಲ್ಲಾ ವ್ಯಾಖ್ಯಾನಿಸಿಕೊಳ್ಳುತ್ತಿದ್ದೇವೆ. ಈ ಪ್ರಾಣಿಲೋಕವನ್ನು ಕರುಣೆ, ಸಹಾನುಭೂತಿಯಿಂದ ನೋಡಬೇಕೇ ಹೊರತು ನಮ್ಮಂತೆ ಅವೂ ಕೂಡ ಇರಬೇಕು ಎಂದು ಬಯಸುವುದು ಮನುಕುಲದ ಆಲೋಚನಾ ಪರಿಮಿತಿ.

ತನ್ನ ಜಾಣತನ, ನಿಷ್ಠ್ಠೆ ಮತ್ತು ಪ್ರತಿಭೆಗಳನ್ನು ತನ್ನ ಸಾಕುವ ಮಾಲೀಕನಿಗೆ ಪರಿಚಯಿಸಲು ಹೋಗಿ ಹತವಾದ ನಾಯಿಗಳ ಕಥೆ ಅನೇಕ ಇವೆ. ಹುಚ್ಚು ಸಾಹಸಗಳ ತೋರಿಸಲು ಹೋಗಿ ಶತ್ರುಗಳಿಂದ ಕೊಲ್ಲಲ್ಪಟ್ಟ ನಾಯಿಗಳಿವೆ. ಕಾಡಿನ ಪ್ರಾಣಿಗಳ ಜತೆ ಸೆಣೆಸಿ ಪ್ರಾಣ ಬಿಡುವ ಅನೇಕ ನಾಯಿ ಪಾತ್ರಗಳು ತೇಜಸ್ವಿ ಕಥೆಗಳಲ್ಲಿವೆ. ಭಿಕ್ಷುಕರು ಬಂದರೆ ಬೊಗಳುವುದು, ಸಿರಿವಂತರು ಬಂದರೆ ಗೌರವಿಸುವ ಗುಣ ತಮ್ಮ ನಾಯಿ ಕಿವಿ ಕಲಿತ ಬಗ್ಗೆ ತೇಜಸ್ವಿಯವರಿಗೆ ಆಶ್ಚರ್ಯವೆನಿಸುತ್ತದೆ. ತರತಮ ಭಾವ ಮನುಷ್ಯರಲ್ಲಿ ಸಹಜ. ಆದರೆ ನಾಯಿಯೂ ಇದನ್ನು ಪಾಲಿಸುವುದು ಹೇಗೆಂದು ಅವರಿಗೂ ಗೊತ್ತಾಗುವುದಿಲ್ಲ. “ಇದು ನಾಯಿಗೆ ಇರುವ ತಾರತಮ್ಯ ಭಾವವೋ, ಪ್ರಕೃತಿ ಅದಕ್ಕೆ ಕಲಿಸಿರುವ ಪಾಠವೋ ಗೊತ್ತಿಲ್ಲ. ಮನುಷ್ಯರಂತೆಯೇ ಬೇರೆ ಬೇರೆ ಸ್ವಭಾವ, ವರ್ತನೆ ಇರುವ ಪ್ರಾಣಿ ಲೋಕವೂ ಇರುತ್ತದೆ ಎನ್ನುವುದಕ್ಕೆ ನಾಯಿ ಕಿವಿಯೇ ಉದಾಹರಣೆ” ಎನ್ನುತ್ತಾರೆ.

ಪ್ರಾಣಿ ಪಕ್ಷಿಗಳಿಗೆ ಮನುಷ್ಯರಂತೆ, ಬದುಕಿನ ವಿವರಗಳು, ಜಿದ್ದು, ನೆನಪು, ಭಾವುಕತೆ, ಉಪಕಾರ ಸ್ಮರಣೆ, ಸ್ನೇಹ, ನಂಬಿಕೆಗಳು, ಸಂಬಂಧಗಳನ್ನು ಕಾಪಾಡುವ ಜವಾಬ್ದಾರಿ ಇತ್ಯಾದಿಗಳು ಇರುತ್ತವೆಯೋ ಇಲ್ಲವೋ ಎನ್ನುವ ಚರ್ಚೆ ಅನೇಕ ಕಡೆ ಬರುತ್ತದೆ. ಮನುಷ್ಯ ಪ್ರತಿಯೊಂದು ಜೀವದ ಜತೆ ದಿನನಿತ್ಯದ ಸಖ್ಯ, ಒಡನಾಟ ಬೆಳೆಸಿಕೊಂಡರೆ ತನ್ನತನದ ಸ್ವರೂಪಗಳನ್ನು, ಮನುಷ್ಯನ ವ್ಯಕ್ತಿತ್ವಕ್ಕೆ ಹತ್ತಿರದ ಗುಣ ಸ್ವಭಾವಗಳನ್ನು ಪ್ರಾಣಿ ಪಕ್ಷಿಗಳಲ್ಲಿ ಹುಡುಕಲು ಆರಂಭಿಸುತ್ತಾನೆ. ಇದೊಂದು ಸಹಜ ಪ್ರಕ್ರಿಯೆ.

ಲೇಖಕರ ಕೈಯ್ಯಲ್ಲಿ ಕೋವಿ ನೋಡಿದರೆ ನಾಯಿ ಕಿವಿ ಬೆಳಗಾಗುವವರೆಗೂ ಹಿಂದಿರುಗದೆ ರಾತ್ರಿ ಎಲ್ಲಾ ಕಾಡೊಳಗೇ ಶಿಕಾರಿ ಹುಡುಕಿಕೊಂಡು ತಿರುಗುವ ಸ್ವಭಾವ ಹೊಂದಿದೆ. ತಿರುಗಾಟದ, ಶಿಕಾರಿಯ ಹಿಂದೆ ಅಲೆಯುವ ಸ್ವಭಾವ ಪ್ರಧಾನ ಗುಣವಾದ ಕಾರಣ ಲೇಖಕನಿಗೆ ಕಿವಿ ಮುಖ್ಯ ಸಂಗಾತಿ ಎನಿಸುತ್ತದೆ. ಶಿಕಾರಿ ಸಮಯದಲ್ಲಿ ಟಾರ್ಚ್ ಬೆಳಕನ್ನೂ, ನಿರೂಪಕನ ಧ್ವನಿಯನ್ನೂ ಕೇಳುತ್ತಲೇ ಅದನ್ನೇ ತನ್ನ ಪ್ರೋತ್ಸಾಹವೆಂದು ತಿಳಿದು ಮತ್ತಷ್ಟು ಜೋರಾಗಿ ಬೊಗಳುತ್ತಾ, ಪೊದೆಯ ಮುಳ್ಳು, ಅಪಾಯ ಒಂದನ್ನೂ ಲೆಕ್ಕಿಸದೆ ಪ್ರಾಣಿಯ ಮೇಲೆ ಹಾರಿ ಆಕ್ರಮಣ ಮಾಡುವ ಕಿವಿ ತನ್ನ ಈ ವಿಶೇಷ ಪ್ರತಿಭೆಯ ಕಾರಣಕ್ಕೆ ಹೆಚ್ಚು ಮನ್ನಣೆ ಪಡೆಯುತ್ತದೆ. ಮನುಷ್ಯರ ಜೊತೆ ಬದುಕುತ್ತಾ ಅವರ ಬೇಕು ಬೇಡಗಳನ್ನು ಅರಿತು ಅವರಂತಾಗುವ ವಿಶೇಷ ಗುಣ ನಾಯಿಗಳಿಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...