ಒಮ್ಮೆ ದಟ್ಟ ಕಾಡೊಂದಕ್ಕೆ ಬೆಂಕಿ ಬಿದ್ದಿರುತ್ತೆ. ದೊಡ್ಡದೊಡ್ಡ ಮರಗಳು ಒತ್ತಿ ಉರಿದು ಬೂದಿಯಾಗುತ್ತಿದ್ದರೆ, ಪ್ರಾಣಿಪಕ್ಷಿಗಳು ಸುಟ್ಟು ಕರಕಲಾಗುತ್ತಿರುತ್ತವೆ. ಆಗ ಒಂದು ಕೋಗಿಲೆ ತನ್ನ ಪುಟ್ಟ ಕೊಕ್ಕಿನಲ್ಲಿ ನೀರನ್ನು ತುಂಬಿತಂದು, ಸುರಿದು ಬೆಂಕಿ ನಂದಿಸಲು ಯತ್ನಿಸುತ್ತಿರುತ್ತೆ. ಇಡೀ ಜಗತ್ತಿಗೇ ಗೊತ್ತು ಅದರ ಕೊಕ್ಕಿನಿಂದ ಹೊರಬರುವ ನೀರಿನಿಂದ ಏನೂ ಆಗದು ಎಂದು. ಆಗ ಕಾಗೆಯೊಂದು ಕೇಳುತ್ತೆ, “ನೀನು ನೀರು ಸುರಿದುಬಿಟ್ಟರೆ ಬೆಂಕಿ ನಂದಿ ಬಿಡುತ್ತಾ. ಬೆಂಕಿ ಬಿದ್ದಿದೆ ಎಂದರೆ ಅದು ಆರಲೇ ಬೇಕು. ಕಾಲವೇ ಅದನ್ನು ನಂದಿಸುತ್ತೆ. ಮಳೆ ಸುರಿದೋ, ಕಾಡು ಬರಿದಾಗೋ ಬೆಂಕಿ ಆರಿಹೋಗುತ್ತೆ. ಆಮೇಲೆ ಜೀವನ ಯಥಾಪ್ರಕಾರ ಪುನರಾರಂಭವಾಗುತ್ತೆ. ವೃಥಾ ನೀನ್ಯಾಕೆ ಮೈನೋವು ಮಾಡಿಕೊಳ್ಳುತ್ತೀಯ?.” ಕೋಗಿಲೆ ತನ್ನ ಕಾಯಕದಲ್ಲಿ ನಿರತವಾಗಿಯೇ ಉತ್ತರಿಸುತ್ತೆ “ಹೌದು. ನನ್ನ ನೀರಿನಿಂದ ಏನೂ ಆಗುವುದಿಲ್ಲ. ಕಾಲವೇ ಇದನ್ನು ನಂದಿಸುತ್ತೆ. ಆದರೆ ಮುಂದೊಂದು ದಿನ ಎಲ್ಲಾ ಸರಿಯಾದಾಗ, ಮುಂದಿನ ಪೀಳಿಗೆಯವರು ‘ಹೌದು ಕಾಡಿಗೆ ಬೆಂಕಿ ಬಿದ್ದಾಗ ನೀನೇನು ಮಾಡುತ್ತಿದ್ದೆ?’ ಎಂದು ಪ್ರಶ್ನಿಸಿದಾಗ ಕೈಕಟ್ಟಿ ಕೂತಿದ್ದೆ ಎಂದು ಅಪರಾಧಿ ಆಗುವುದಕ್ಕಿಂತ ಬೆಂಕಿ ನಂದಿಸಲು ನನ್ನಿಂದಾದ ಪ್ರಯತ್ನ ಮಾಡುತ್ತಿದ್ದೆ ಎಂದು ಹೆಮ್ಮೆಯಿಂದ ಹೇಳಬಹುದಲ್ಲವೇ! ಕಡೇಪಕ್ಷ ಅಪರಾಧಿ ಸ್ಥಾನದಲ್ಲಾದರು ನನ್ನ ಹೆಸರು ಇರೋದಿಲ್ಲ” ಎಂದು ತನ್ನ ಕಾರ್ಯ ಮುಂದುವರೆಸುತ್ತೆ.
ನಮ್ಮ ದೇಶಕ್ಕೆ ಕೆಟ್ಟ ಘಳಿಗೆ ಬಂದಿದೆ; ಇದನ್ನು ಕಾಲವೇ ಸರಿ ಮಾಡುತ್ತೆ ಅಂತ ನಾವು ಕೈಕಟ್ಟಿ ಕೂತರೆ ನಾವೂ ಅಪರಾಧಿಗಳಾಗುತ್ತೇವೆ. ಮುಂದಿನ ಪೀಳಿಗೆ “ಆಗ ನೀನೇನು ಮಾಡುತ್ತಿದ್ದೆ?” ಎಂದು ಕೇಳಿದರೆ ಕೆಟ್ಟ ಕಾಲವನ್ನು ಹಿಮ್ಮೆಟ್ಟಿಸಲು ನನ್ನಿಂದಾದ ಪ್ರಯತ್ನದಲ್ಲಿ ನಿರತನಾಗಿದ್ದೆ ಎಂದು ಉತ್ತರ ನೀಡುವಷ್ಟಾದರು ಈಗ ಕಾರ್ಯಪ್ರವೃತ್ತರಾಗಬೇಕಿದೆ….