Homeಮುಖಪುಟಭೋಜಶಾಲಾ-ಕಮಲ್ ಮೌಲಾ ಪ್ರಕರಣದಲ್ಲಿ ಹಿಂದೂಗಳ ಪರ ತೀರ್ಪು...ಮಸೀದಿಯಲ್ಲ ದೇವಸ್ಥಾನವೆಂದ ಕೋರ್ಟ್ : ಏನಿದು ವಿವಾದ?

ಭೋಜಶಾಲಾ-ಕಮಲ್ ಮೌಲಾ ಪ್ರಕರಣದಲ್ಲಿ ಹಿಂದೂಗಳ ಪರ ತೀರ್ಪು…ಮಸೀದಿಯಲ್ಲ ದೇವಸ್ಥಾನವೆಂದ ಕೋರ್ಟ್ : ಏನಿದು ವಿವಾದ?

- Advertisement -
- Advertisement -

ಸುಮಾರು 100 ವರ್ಷಗಳ ಹಳೆಯ ವಿವಾದವಾದ ಭೋಜಶಾಲಾ-ಕಮಲ್ ಮೌಲಾ ಮಸೀದಿ ಪ್ರಕರಣದಲ್ಲಿ ಶುಕ್ರವಾರ (ಮೇ 15) ಮಧ್ಯಪ್ರದೇಶ ಹೈಕೋರ್ಟ್ ತೀರ್ಪು ನೀಡಿದ್ದು, ಭೋಜಶಾಲಾದಲ್ಲಿರುವ ಐತಿಹಾಸಿಕ ಸ್ಥಳವು ಸರಸ್ವತಿ ದೇವಿಗೆ ಸಮರ್ಪಿತವಾದ ದೇವಾಲಯವಾಗಿದೆ ಎಂದು ಘೋಷಿಸಿದೆ.

ಮುಸ್ಲಿಮರಿಗೆ ನಮಾಝ್ ಮಾಡಲು ಅಥವಾ ಮಸೀದಿ ನಿರ್ಮಿಸಲು ಪರ್ಯಾಯ ಭೂಮಿಯನ್ನು ಮಂಜೂರು ಮಾಡುವ ಕುರಿತು ಪರಿಗಣಿಸುವಂತೆ ನ್ಯಾಯಾಲಯ ಸರ್ಕಾರಕ್ಕೆ ಸೂಚಿಸಿದೆ.

ಭೋಜಶಾಲಾ-ಕಮಲ್ ಮೌಲಾ ವಿವಾದವು ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿರುವ ಒಂದೇ ಐತಿಹಾಸಿಕ ಕಟ್ಟಡದ ಮಾಲೀಕತ್ವ ಮತ್ತು ಪೂಜಾ ಹಕ್ಕಿಗೆ ಸಂಬಂಧಿಸಿದ್ದಾಗಿದೆ. ಹಿಂದೂಗಳು ಇದನ್ನು ಸರಸ್ವತಿ ದೇವಸ್ಥಾನ (ಭೋಜಶಾಲಾ) ಎಂದರೆ, ಮುಸ್ಲಿಮರು ಕಮಲ್ ಮೌಲಾ ಮಸೀದಿ ಎಂದು ವಾದಿಸಿಕೊಂಡು ಬಂದಿದ್ದಾರೆ.

11ನೇ ಶತಮಾನದಲ್ಲಿ ರಾಜ ಭೋಜನು ಇದನ್ನು (ವಿವಾದಿತ ಸ್ಮಾರಕವನ್ನು) ಸರಸ್ವತಿ ದೇವಿಯ ಆರಾಧನಾ ಕೇಂದ್ರ ಮತ್ತು ಸಂಸ್ಕೃತ ವಿಶ್ವವಿದ್ಯಾಲಯವಾಗಿ ನಿರ್ಮಿಸಿದನು. ನಂತರ ಬಂದ ಮುಸ್ಲಿಂ ಆಡಳಿತಗಾರರು ಅದನ್ನು ಧ್ವಂಸಗೊಳಿಸಿ ಮಸೀದಿಯಾಗಿ ಪರಿವರ್ತಿಸಿದರು ಎಂಬುವುದು ಹಿಂದೂ ಪಕ್ಷಕಾರರ ವಾದವಾಗಿದೆ.

ವಿವಾದಿತ ಸ್ಮಾರಕ ಸೂಫಿ ಸಂತ ಹಝರತ್ ಕಮಲ್ ಶಾ ವಲಿ ಅವರ ದರ್ಗಾ ಮತ್ತು ಮಸೀದಿಯಾಗಿದೆ. ಇಲ್ಲಿ ಶತಮಾನಗಳಿಂದಲೂ ನಮಾಝ್ ಮಾಡಲಾಗುತ್ತಿದೆ ಎಂಬುವುದು ಮುಸ್ಲಿಂ ಪಕ್ಷಕಾರರ ವಾದವಾಗಿದೆ.

ಮುಸ್ಲಿಂ ಸಮುದಾಯವು 1935ರಲ್ಲಿ ಧಾರ್ ಸಂಸ್ಥಾನದ ರಾಜರು ತಮಗೆ ನಮಾಝ್ ಮಾಡಲು ನೀಡಿದ್ದ ಆದೇಶವನ್ನು (ಐಲಾನ್) ಪ್ರಮುಖ ಸಾಕ್ಷ್ಯವಾಗಿ ಮಂಡಿಸಿತ್ತು.

ಆದರೆ, ನ್ಯಾಯಾಲಯವು, “ಈ ಇಡೀ ಜಾಗವನ್ನು 1904ರಲ್ಲೇ ಬ್ರಿಟಿಷ್ ಕಾನೂನಿನಡಿ ‘ಸಂರಕ್ಷಿತ ಸ್ಮಾರಕ’ ಎಂದು ಘೋಷಿಸಲಾಗಿತ್ತು. ಹಾಗಾಗಿ 1935ರಲ್ಲಿ ಧಾರ್ ರಾಜರು ಅಂತಹ ಆದೇಶ ನೀಡಲು ಕಾನೂನಾತ್ಮಕವಾಗಿ ಅಧಿಕಾರ ಹೊಂದಿರಲಿಲ್ಲ” ಎಂದು ಹೇಳಿ ಆ ವಾದವನ್ನು ತಿರಸ್ಕರಿಸಿದೆ ಎಂದು ವರದಿಯಾಗಿದೆ.

1306-07ರಲ್ಲಿ ಹಜರತ್ ಮೌಲಾನಾ ಕಮಾಲುದ್ದೀನ್ ಚಿಸ್ತಿ ಅವರು ಇಲ್ಲಿ ಮಸೀದಿಗೆ ಅಡಿಪಾಯ ಹಾಕಿದ್ದರು ಎಂಬ ಮುಸ್ಲಿಂ ಸಮುದಾಯದ ವಾದವನ್ನು ಕೋರ್ಟ್ ಒಪ್ಪಿಲ್ಲ.

ಪುರಾತತ್ವ ಇಲಾಖೆಯ ವೈಜ್ಞಾನಿಕ ವರದಿಯನ್ನು ಆಧರಿಸಿ, “ಕ್ರಿಸ್ತಶಕ 1034 ಕ್ಕಿಂತ ಮುಂಚೆ ಇಲ್ಲಿ ಮಸೀದಿ ಇತ್ತು ಅನ್ನಲು ಯಾವುದೇ ಆಧಾರಗಳಿಲ್ಲ. ಈಗಿರುವ ರಚನೆಯನ್ನು ಮೊದಲೇ ಅಲ್ಲಿದ್ದ ಹಿಂದೂ ದೇವಾಲಯದ ಕಂಬಗಳು ಮತ್ತು ಕೆತ್ತನೆಗಳ ಮೇಲೆಯೇ ಕಟ್ಟಲಾಗಿದೆ” ಎಂದು ಕೋರ್ಟ್ ಸ್ಪಷ್ಟಪಡಿಸಿದೆ.

ಅಲ್ಲದೆ, ಈ ಜಾಗವು ಇಸ್ಲಾಮಿಕ್ ಕಾನೂನಿನಡಿ ಎಂದಿಗೂ ‘ವಕ್ಫ್ ಆಸ್ತಿ’ ಆಗಿರಲಿಲ್ಲ ಎಂದೂ ನ್ಯಾಯಾಲಯ ಹೇಳಿದೆ. 

ವಿವಾದ ಪ್ರಾರಂಭಗೊಂಡಿದ್ದು ಯಾವಾಗ?

ಭೋಜಶಾಲಾ-ಕಮಲ್ ಮೌಲಾ ವಿವಾದವು ಪ್ರಾರಂಭಗೊಂಡಿದ್ದು 1902-1903ರ ಹೊತ್ತಿಗೆ. ಧಾರ್ ಸಂಸ್ಥಾನದ ಶಿಕ್ಷಣ ಮತ್ತು ಪುರಾತತ್ವ ಅಧಿಕಾರಿಯಾಗಿದ್ದ ಕೆ.ಕೆ. ಲೆಲೆ ಎಂಬುವವರು ಈ ವಿವಾದಿತ ಕಟ್ಟಡದ ನೆಲದ ಮೇಲೆ ಮತ್ತು ಗೋಡೆಗಳಲ್ಲಿ ಸಂಸ್ಕೃತ ಶ್ಲೋಕಗಳು ಹಾಗೂ ಶಾಸನಗಳನ್ನು ಪತ್ತೆಹಚ್ಚಿದರು ಎನ್ನಲಾಗಿದೆ.

ನಂತರ ಈ ಕಟ್ಟಡವೇ ರಾಜ ಭೋಜನ ಕಾಲದ ಐತಿಹಾಸಿಕ ‘ಭೋಜಶಾಲಾ’ ಕಲಿಕಾ ಕೇಂದ್ರ ಎಂದು ಅವರು ವರದಿ ನೀಡಿದಾಗ ವಿವಾದದ ಕಿಡಿ ಹೊತ್ತಿಕೊಂಡಿತು. ಕಾಲಕ್ರಮೇಣ ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ನಡುವೆ ಇಲ್ಲಿನ ಪೂಜಾ ಹಕ್ಕಿಗಾಗಿ ತೀವ್ರ ಜಗಳಗಳು ಆರಂಭವಾದವು. 1935ರಲ್ಲಿ ಧಾರ್ ಸಂಸ್ಥಾನದ ದಿವಾನರು ಈ ಜಾಗದಲ್ಲಿ ಮುಸ್ಲಿಮರಿಗೆ ಶುಕ್ರವಾರದ ನಮಾಝ್ ಮಾಡಲು ಅಧಿಕೃತ ಆದೇಶ ಹೊರಡಿಸಿದಾಗ ವಿವಾದ ಮತ್ತಷ್ಟು ತೀವ್ರವಾಯಿತು.

ಸ್ವಾತಂತ್ರ್ಯದ ನಂತರ, ಅಂದರೆ 1951ರಲ್ಲಿ ಭಾರತೀಯ ಪುರಾತತ್ವ ಇಲಾಖೆ ಈ ಇಡೀ ಸಂಕೀರ್ಣವನ್ನು ‘ರಾಷ್ಟ್ರೀಯ ಮಹತ್ವದ ಸಂರಕ್ಷಿತ ಸ್ಮಾರಕ’ ಎಂದು ಘೋಷಿಸಿ, ತನ್ನ ಸಂಪೂರ್ಣ ನಿಯಂತ್ರಣಕ್ಕೆ ತೆಗೆದುಕೊಂಡಿತು. ಆದರೂ, ಮಸೀದಿ-ದೇವಸ್ಥಾನ ಎಂಬ ವಿವಾದ ಹಾಗೆಯೇ ಮುಂದುವರಿಯಿತು.

ವಿವಾದ ತಾರಕಕ್ಕೇರಿದಾಗ, ಅದನ್ನು ಶಮನ ಮಾಡಲು ಪುರಾತತ್ವ ಇಲಾಖೆ 2003ರಲ್ಲಿ ಮಧ್ಯಂತರ ಮಾರ್ಗವೊಂದನ್ನು ರೂಪಿಸಿತು.

ಅದರ ಪ್ರಕಾರ, ವಿವಾದಿತ ಜಾಗದಲ್ಲಿ ಪ್ರತಿ ಮಂಗಳವಾರ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಪೂಜೆ ಮತ್ತು ಹವನ ಮಾಡಲು ಹಿಂದೂಗಳಿಗೆ ಅವಕಾಶ ನೀಡಿತು. ಪ್ರತಿ ಶುಕ್ರವಾರ ಮಧ್ಯಾಹ್ನ 1 ರಿಂದ 3 ಗಂಟೆಯವರೆಗೆ ನಮಾಝ್ ಮಾಡಲು ಮುಸ್ಲಿಮರಿಗೆ ಅವಕಾಶ ನೀಡಿತು. ಉಳಿದ ದಿನಗಳಲ್ಲಿ ಕೇವಲ ಒಂದು ರೂಪಾಯಿ ಟಿಕೆಟ್ ಇಟ್ಟು ಸಾರ್ವಜನಿಕ ವೀಕ್ಷಣೆಗೆ ಅವಕಾಶ ಮಾಡಿಕೊಟ್ಟಿತ್ತು.

ಪುರಾತತ್ವ ಇಲಾಖೆಯ ಆದೇಶದ ಬಳಿಕ ಏನಾಯಿತು?

2003ರಲ್ಲಿ ಭಾರತೀಯ ಪುರಾತತ್ವ ಇಲಾಖೆ ನೀಡಿದ ಪೂಜಾ ಹಂಚಿಕೆ ಆದೇಶದ (ಮಂಗಳವಾರ ಹಿಂದೂಗಳಿಗೆ ಪೂಜೆ, ಶುಕ್ರವಾರ ಮುಸ್ಲಿಮರಿಗೆ ನಮಾಝ್) ಬಳಿಕ, ಧಾರ್ ಜಿಲ್ಲೆಯಲ್ಲಿ ತಾತ್ಕಾಲಿಕ ಶಾಂತಿ ನೆಲೆಸಿದರೂ ಕಾನೂನು ಹೋರಾಟ ಮತ್ತು ಸಾಮಾಜಿಕ ಉದ್ವಿಗ್ನತೆ ನಿರಂತರವಾಗಿ ಮುಂದುವರಿಯಿತು.

ಪುರಾತತ್ವ ಇಲಾಖೆಯ ಆದೇಶದ ಪ್ರಕಾರ ಹಿಂದೂ ಮತ್ತು ಮುಸ್ಲಿಮರಿಗೆ ದಿನಗಳನ್ನು ಹಂಚಲಾಗಿದ್ದರೂ, ಹಿಂದೂಗಳ ಪವಿತ್ರ ಹಬ್ಬ ‘ವಸಂತ ಪಂಚಮಿ’ ಶುಕ್ರವಾರ ಬಂದಾಗಲೆಲ್ಲಾ ತೀವ್ರ ವಿವಾದ ಸೃಷ್ಟಿಯಾಗುತ್ತಿತ್ತು.

2003, 2006, 2013, 2016 ಮತ್ತು 2026ರಲ್ಲಿ ವಸಂತ ಪಂಚಮಿ ಹಬ್ಬವು ಶುಕ್ರವಾರದಂದೇ ಬಂದಿತ್ತು. ಈ ಸಂದರ್ಭದಲ್ಲಿ ಹಿಂದೂ ಸಂಘಟನೆಗಳು ಆ ದಿನ ಇಡೀ ದಿನ ಪೂಜೆ ಮಾಡಲು ಪಟ್ಟು ಹಿಡಿದರೆ, ಮುಸ್ಲಿಮರು ನಮಾಝ್‌ಗಾಗಿ ಜಾಗ ಬಿಟ್ಟುಕೊಡುವಂತೆ ಒತ್ತಾಯಿಸುತ್ತಿದ್ದರು. ಇದರಿಂದಾಗಿ ಹಲವಾರು ಬಾರಿ ಧಾರ್ ಜಿಲ್ಲೆಯಲ್ಲಿ ಕರ್ಫ್ಯೂ, ಲಾಠಿಚಾರ್ಜ್ ಮತ್ತು ವ್ಯಾಪಕ ಪ್ರತಿಭಟನೆಗಳು ನಡೆದಿದ್ದವು.

ಪುರಾತತ್ವ ಇಲಾಖೆಯ 2003ರ ಆದೇಶವನ್ನು ವಿರೋಧಿಸಿ ‘ಹಿಂದೂ ಫ್ರಂಟ್ ಫಾರ್ ಜಸ್ಟಿಸ್’ ಎಂಬ ಸಂಘಟನೆಯು 2022ರಲ್ಲಿ ಮಧ್ಯಪ್ರದೇಶ ಹೈಕೋರ್ಟ್‌ನಲ್ಲಿ ಹೊಸ ಅರ್ಜಿ ಸಲ್ಲಿಸಿತ್ತು. ಈ ಇಡೀ ಸಂಕೀರ್ಣವು ಹಿಂದೂ ದೇವಸ್ಥಾನವಾಗಿದ್ದು, ಮುಸ್ಲಿಮರಿಗೆ ನಮಾಝ್ ಮಾಡಲು ನೀಡಿರುವ ಆದೇಶವನ್ನು ರದ್ದುಗೊಳಿಸಬೇಕು ಮತ್ತು ವೈಜ್ಞಾನಿಕ ಸಮೀಕ್ಷೆ ನಡೆಸಬೇಕು ಎಂದು ಅದು ಕೋರಿತ್ತು.

ಹೈಕೋರ್ಟ್ ಅರ್ಜಿಯನ್ನು ಪುರಸ್ಕರಿಸಿ, ಇಡೀ ಸಂಕೀರ್ಣದ ಮೂಲ ಸ್ವರೂಪ ಪತ್ತೆಹಚ್ಚಲು ವೈಜ್ಞಾನಿಕ ಸಮೀಕ್ಷೆ ನಡೆಸುವಂತೆ 2024 ಮಾರ್ಚ್‌ನಲ್ಲಿ ಪುರಾತತ್ವ ಇಲಾಖೆಗೆ ಆದೇಶಿಸಿತ್ತು.

ಪುರಾತತ್ವ ಇಲಾಖೆಯು ಜಿಪಿಆರ್ ತಂತ್ರಜ್ಞಾನದ ಮೂಲಕ 98 ದಿನಗಳ ಸಮೀಕ್ಷೆ ನಡೆಸಿ, ಜುಲೈ 2024ರಲ್ಲಿ 2,000ಕ್ಕೂ ಹೆಚ್ಚು ಪುಟಗಳ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಪ್ರಸ್ತುತ ಇರುವ ಮಸೀದಿಯಂತಹ ರಚನೆಯನ್ನು ಹಿಂದೂ ದೇವಾಲಯದ ಅವಶೇಷಗಳ ಮೇಲೆಯೇ ನಿರ್ಮಿಸಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಿತ್ತು.

ಹೈಕೋರ್ಟ್ ತೀರ್ಪು

ಪುರಾತತ್ವ ಇಲಾಖೆಯ ಸಮೀಕ್ಷೆಯ ವರದಿಯ ಆಧಾರದ ಮೇಲೆ ಮಧ್ಯಪ್ರದೇಶ ಹೈಕೋರ್ಟ್ ಶುಕ್ರವಾರ (ಮೇ 15, 2026) ತೀರ್ಪು ನೀಡಿದೆ. 2003ರ ಆದೇಶದ ಮೂಲಕ ಪುರಾತತ್ವ ಇಲಾಖೆ ಮುಸ್ಲಿಮರಿಗೆ ಶುಕ್ರವಾರ ನಮಾಝ್ ಮಾಡಲು ನೀಡಿದ್ದ ಅನುಮತಿಯನ್ನು ನ್ಯಾಯಾಲಯ ಸಂಪೂರ್ಣವಾಗಿ ರದ್ದುಗೊಳಿಸಿದೆ.

ಇಡೀ ವಿವಾದಿತ ಸಂಕೀರ್ಣವು ‘ವಾಗ್ದೇವಿ (ಸರಸ್ವತಿ) ದೇವಸ್ಥಾನ’ ಎಂದು ನ್ಯಾಯಾಲಯ ಘೋಷಿಸಿದೆ. : ಲಂಡನ್‌ನ ಬ್ರಿಟಿಷ್ ಮ್ಯೂಸಿಯಂನಲ್ಲಿರುವ ಮೂಲ ವಾಗ್ದೇವಿ ವಿಗ್ರಹವನ್ನು ಭಾರತಕ್ಕೆ ಮರಳಿ ತರಲು ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. 

ಹೀಗೆ, 2003ರಲ್ಲಿ ಪುರಾತತ್ವ ಇಲಾಖೆ ಜಾರಿಗೆ ತಂದಿದ್ದ ತಾತ್ಕಾಲಿಕ ‘ಹಂಚಿಕೆ ಸೂತ್ರ’ವು 23 ವರ್ಷಗಳ ಸುದೀರ್ಘ ಕಾನೂನು ಪ್ರಕ್ರಿಯೆಯ ನಂತರ ಸಂಪೂರ್ಣವಾಗಿ ರದ್ದಾಗಿದ್ದು, ಇಡೀ ಸಂಕೀರ್ಣದ ಮಾಲೀಕತ್ವವು ಈಗ ಹಿಂದೂ ಸಮುದಾಯಕ್ಕೆ ಲಭಿಸಿದೆ. 

ಮುಸ್ಲಿಂ ಸಮುದಾಯದ ಧಾರ್ಮಿಕ ಹಕ್ಕುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ನ್ಯಾಯಾಲಯವು ಅಯೋಧ್ಯೆ ತೀರ್ಪಿನ ಮಾದರಿಯನ್ನು ಅನುಸರಿಸಿದೆ. ಮುಸ್ಲಿಂ ಸಮುದಾಯವು ಹೊಸದಾಗಿ ಮಸೀದಿ ನಿರ್ಮಿಸಿಕೊಳ್ಳಲು ಧಾರ್ ಜಿಲ್ಲೆಯಲ್ಲೇ ಬೇರೆ ಕಡೆ ಸೂಕ್ತವಾದ ಪರ್ಯಾಯ ಜಾಗವನ್ನು ಕೇಳಿದರೆ ಮಂಜೂರು ಮಾಡುವ ಕುರಿತು ಪರಿಗಣಿಸುವಂತೆ ಮಧ್ಯಪ್ರದೇಶ ಸರ್ಕಾರಕ್ಕೆ ನ್ಯಾಯಾಲಯ ಸೂಚಿಸಿದೆ. 

ಈ ತೀರ್ಪಿನ ವಿರುದ್ಧ ಮುಸ್ಲಿಂ ಸಂಘಟನೆಗಳು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ಸಾಧ್ಯತೆಗಳಿವೆ.

ಹಿಂದೂ-ಮುಸ್ಲಿಂ ಪಕ್ಷಕಾರರು ಹೇಳಿದ್ದೇನು?

“ಏಪ್ರಿಲ್ 7, 2003ರ ಪುರಾತತ್ವ ಇಲಾಖೆಯ ಆದೇಶವನ್ನು ಭಾಗಶಃ ರದ್ದುಗೊಳಿಸುವ ಮೂಲಕ ನ್ಯಾಯಾಲಯವು ಐತಿಹಾಸಿಕ ತೀರ್ಪು ನೀಡಿದೆ” ಎಂದು ಹಿಂದೂ ಪಕ್ಷಕಾರರ ಪರ ವಕೀಲ ವಿಷ್ಣುಶಂಕರ್ ಜೈನ್ ಮಾಧ್ಯಮಗಳ ಮುಂದೆ ಹೇಳಿದ್ದಾರೆ.

“ಭೋಜಶಾಲಾ ಸಂಕೀರ್ಣವು ರಾಜ ಭೋಜನಿಗೆ ಸೇರಿದ್ದು ಎಂದು ಗುರುತಿಸಿ, ಹಿಂದೂಗಳಿಗೆ ಪೂಜೆ ಸಲ್ಲಿಸುವ ಹಕ್ಕನ್ನು ಹೈಕೋರ್ಟ್ ನೀಡಿದೆ” ಎಂದು ತಿಳಿಸಿದ್ದಾರೆ.

ವರದಿಗಳ ಪ್ರಕಾರ, ಮುಸ್ಲಿಂ ಪಕ್ಷಕಾರರು ಮತ್ತು ಅವರ ಪರ ವಕೀಲರು ಹೈಕೋರ್ಟ್ ತೀರ್ಪನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ. ನ್ಯಾಯಾಲಯದ ಆದೇಶ ಹೊರಬಿದ್ದ ಬೆನ್ನಲ್ಲೇ ತಮ್ಮ ಅಸಮಾಧಾನ ಮತ್ತು ಮುಂದಿನ ಕಾನೂನು ನಡೆಯನ್ನು ಅವರು ಸ್ಪಷ್ಟಪಡಿಸಿದ್ದಾರೆ.

ಮುಸ್ಲಿಂ ಪಕ್ಷಕಾರರ ಪರವಾಗಿ ಧಾರ್ ನಗರದ ಖಾಜಿ ವಕಾರ್ ಸಾದಿಕ್ ಮತ್ತು ಅವರ ವಕೀಲರಾದ ಮುಷ್ತಾಕ್ ಅಹ್ಮದ್ ವಾರ್ಸಿ ಅವರು, “ನಾವು ಈ ತೀರ್ಪನ್ನು ಒಪ್ಪುವುದಿಲ್ಲ ಮತ್ತು ಇದನ್ನು ಪ್ರಶ್ನಿಸಿ ಆದಷ್ಟು ಬೇಗ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುತ್ತೇವೆ” ಎಂದು ಘೋಷಿಸಿದ್ದಾರೆ. ಸುಪ್ರೀಂ ಕೋರ್ಟ್ ತಮ್ಮ ವಾದವನ್ನು ಆಲಿಸಿ ತಮಗೆ ಮತ್ತೆ ನಮಾಝ್ ಮಾಡಲು ಅನುಮತಿ ನೀಡುತ್ತದೆ ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದ್ದಾರೆ. 

ಹೈಕೋರ್ಟ್ ಯಾವ ಪುರಾತತ್ವ ಇಲಾಖೆಯ ವರದಿಯನ್ನು ಆಧರಿಸಿ ತೀರ್ಪು ನೀಡಿದೆಯೋ, ಆ ಇಡೀ ಸಮೀಕ್ಷೆಯೇ ತಾರತಮ್ಯದಿಂದ ಕೂಡಿದೆ ಎಂದು ಮುಸ್ಲಿಂ ಪಕ್ಷಕಾರರು ಆರೋಪಿಸಿದ್ದಾರೆ.

“ಪುರಾತತ್ವ ಇಲಾಖೆ ನಡೆಸಿದ ವೈಜ್ಞಾನಿಕ ಸಮೀಕ್ಷೆ ಮತ್ತು ಸಿದ್ಧಪಡಿಸಿದ ವರದಿಯು ದೋಷಪೂರಿತವಾಗಿದೆ. ಅದು ಹಿಂದೂ ಅರ್ಜಿದಾರರ ವಾದವನ್ನು ಪುಷ್ಟೀಕರಿಸುವ ಉದ್ದೇಶದಿಂದಲೇ ಏಕಪಕ್ಷೀಯವಾಗಿ ತಯಾರಾಗಿದೆ” ಎಂದು ಮುಸ್ಲಿಂ ಸಂಘಟನೆಯಾದ ‘ಮೌಲಾನಾ ಕಮಾಲುದ್ದೀನ್ ವೆಲ್ಫೇರ್ ಸೊಸೈಟಿ’ ದೂರಿದೆ.

ಮುಸ್ಲಿಂ ಧಾರ್ಮಿಕ ಮುಖಂಡರು ಪ್ರತಿಕ್ರಿಯಿಸುತ್ತಾ, “ಹೈಕೋರ್ಟ್‌ನಲ್ಲಿ ನಮ್ಮ ಕಡೆಯ ವಾದಗಳು ಮತ್ತು ಪ್ರಮುಖ ಸಾಕ್ಷ್ಯಗಳನ್ನು ಸರಿಯಾಗಿ ಆಲಿಸಿಲ್ಲ ಅಥವಾ ಪರಿಗಣಿಸಿಲ್ಲ ಅನಿಸುತ್ತದೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಅಲ್ಲದೆ, ಇಂತಹ ಸಂಕೀರ್ಣವಾದ ಐತಿಹಾಸಿಕ ಮತ್ತು ವಿವಾದಿತ ಪ್ರಕರಣಗಳನ್ನು ಸಂವಿಧಾನದ ಆರ್ಟಿಕಲ್ 226ರ ಅಡಿಯಲ್ಲಿ (ನೇರವಾಗಿ ಹೈಕೋರ್ಟ್‌ನಲ್ಲಿ) ಇತ್ಯರ್ಥಪಡಿಸುವ ಬದಲು ಸಿವಿಲ್ ನ್ಯಾಯಾಲಯಕ್ಕೆ ಒಪ್ಪಿಸಬೇಕಿತ್ತು ಎಂಬುದು ಅವರ ವಾದವಾಗಿದೆ.

ಅಸಮಾಧಾನ ವ್ಯಕ್ತಪಡಿಸಿದ ಓವೈಸಿ

ಈ ತೀರ್ಪಿನ ಕುರಿತು ಎಐಎಂಐಎಂ ಮುಖ್ಯಸ್ಥ ಹಾಗೂ ಅಸಾದುದ್ದೀನ್ ಓವೈಸಿ ಕೂಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, “ಸುಪ್ರೀಂ ಕೋರ್ಟ್ ಈ ತೀರ್ಪನ್ನು ಸರಿಪಡಿಸಲಿದೆ ಎಂಬ ನಂಬಿಕೆ ಇದೆ” ಎಂದು ಹೇಳಿದ್ದಾರೆ. ಅಲ್ಲದೆ ದೇಶದಲ್ಲಿ ‘ಆರಾಧನಾ ಸ್ಥಳಗಳ ಕಾಯ್ದೆ 1991’ ಅನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸದಿದ್ದರೆ ಮುಸ್ಲಿಮರ ಧಾರ್ಮಿಕ ಸ್ಥಳಗಳಿಗೆ ರಕ್ಷಣೆ ಇಲ್ಲದಂತಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಈ ನಡುವೆ ಮುಸ್ಲಿಂ ಸಮುದಾಯದ ಕೆಲವು ಮುಖಂಡರು ಭಿನ್ನ ನಿಲುವನ್ನು ತಳೆದಿದ್ದಾರೆ. ‘ಇಂಡಿಯನ್ ಸೂಫಿ ಫೌಂಡೇಶನ್’ ಅಧ್ಯಕ್ಷ ಕಶಿಶ್ ವಾರ್ಸಿ ಅವರಂತಹ ಕೆಲವು ನಾಯಕರು, “ನ್ಯಾಯಾಲಯದ ತೀರ್ಪನ್ನು ಗೌರವಿಸಿ ಎಲ್ಲರೂ ಶಾಂತಿಯುತವಾಗಿ ಒಪ್ಪಿಕೊಳ್ಳಬೇಕು. ಈ ಹಿಂದೆ ಬಾಬರಿ ಮಸೀದಿ ತೀರ್ಪನ್ನು ಒಪ್ಪಿಕೊಂಡಂತೆ ಇದನ್ನೂ ಒಪ್ಪಿ ವಿವಾದಕ್ಕೆ ಮುಕ್ತಾಯ ಹಾಡಬೇಕು. ಒಬ್ಬ ನಿಜವಾದ ಮುಸ್ಲಿಂ ವಿವಾದಿತ ಜಾಗದಲ್ಲಿ ನಮಾಝ್ ಮಾಡಲು ಇಷ್ಟಪಡುವುದಿಲ್ಲ” ಎಂದು ಹೇಳಿದ್ದಾರೆ.

 


ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದೆಹಲಿಗೆ ಬಂದಿಳಿದ ಕಾಕ್ರೋಚ್ ಪಾರ್ಟಿ ಸಂಸ್ಥಾಪಕ ಅಭಿಜೀತ್ ದೀಪ್ಕೆ : ಜಂತರ್‌ ಮಂತರ್‌ನಲ್ಲಿ ಪ್ರತಿಭಟಿಸಲು ಪೊಲೀಸರಿಂದ ಅನುಮತಿ

ಶನಿವಾರ (ಜೂ.6) ಬೆಳಿಗ್ಗೆ ದೆಹಲಿಗೆ ಆಗಮಿಸಿದ ಕಾಕ್ರೋಚ್ ಜನತಾ ಪಾರ್ಟಿಯ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ, ಪ್ರತಿಭಟನೆಗೆ ದೆಹಲಿ ಪೊಲೀಸರು ಅನುಮತಿ ನೀಡಿದ್ದಾರೆ ಎಂದು ತಿಳಿಸಿದ್ದು, ಯೋಜಿತ ಆಂದೋಲನಕ್ಕಾಗಿ ನೇರವಾಗಿ ಜಂತರ್ ಮಂತರ್‌ನಲ್ಲಿ...

ಜಾಗತಿಕವಾಗಿ ಮೂರು ವರ್ಷಗಳಲ್ಲಿ 600 ಪರಿಸರ ರಕ್ಷಕರ ಹತ್ಯೆ: ವಿಶ್ವಸಂಸ್ಥೆ ತೀವ್ರ ಕಳವಳ: ಜಾಗತಿಕ ತಾಪಮಾನಕ್ಕೆ ಸಾಕ್ಷಿಯಾಗುತ್ತಿರುವ ಭಾರತ

ಜೂನ್ 5 ವಿಶ್ವ ಪರಿಸರ ದಿನ. ಜಗತ್ತಿನಾದ್ಯಂತ ಗಿಡ ನೆಡುವ, ಹಸಿರು ಭಾಷಣ ಬಿಗಿಯುವ ಮತ್ತು ಪರಿಸರ ಕಾಳಜಿಯ ಸಡಗರದ ಆಚರಣೆಗಳು ಎಲ್ಲೆಡೆ ವಿಭಿನ್ನ ರೀತಿಗಳಲ್ಲಿ ವಿಜೃಂಭಿಸುತ್ತಿವೆ. ಆದರೆ, ಇದೇ ಹೊತ್ತಿನಲ್ಲಿ ವಿಶ್ವಸಂಸ್ಥೆಯು...

ಮಣಿಪುರ ಎಸ್‌ಐಆರ್ ವಿರೋಧಿಸಿದ ಕುಕಿ-ಝೋ ಗುಂಪುಗಳು

ಮಣಿಪುರ ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆ ವಿರುದ್ಧ ಪ್ರತಿಭಟನೆ ವ್ಯಕ್ತವಾಗಿದೆ. ಕುಕಿ-ಝೋ ಬುಡಕಟ್ಟು ಜನಾಂಗದ ಸಾಂಪ್ರದಾಯಿಕ ಗುಂಪಾದ ಕುಕಿ ಇನ್ಪಿ ಮಣಿಪುರ (ಕೆಐಎಂ) ಮತದಾರರ ಪಟ್ಟಿ...

ಹೇಗಿತ್ತು ‘ಕಾಕ್ರೋಚ್ ಜನತಾ ಪಕ್ಷ’ದ ಮೊದಲ ಸುದ್ದಿಗೋಷ್ಠಿ…? ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಕರೆ

ಜೂನ್ 6, 2026 ರಂದು ಜಂತರ್ ಮಂತರ್‌ನಲ್ಲಿ ನಡೆಯಲಿರುವ 'ಶಾಂತಿಯುತ ಪ್ರತಿಭಟನೆ'ಗೆ ಮುನ್ನ ಜಿರಳೆ ಜನತಾ ಪಕ್ಷ (ಸಿಜೆಪಿ) ತನ್ನ ಮೊದಲ ಪತ್ರಿಕಾಗೋಷ್ಠಿಯನ್ನು ನಡೆಸಿದೆ. ಬುಧವಾರ ಸಂಜೆ (ಜೂ.3) ಸಿಜೆಪಿಯ ಮೂವರು ವಕ್ತಾರರು...

‘ಇದು ಆತ್ಮಹತ್ಯೆಯಲ್ಲ, ಮೋದಿ ಸರ್ಕಾರದ ಭ್ರಷ್ಟ ವ್ಯವಸ್ಥೆ ಮಾಡಿದ ಕೊಲೆ’: ನೀಟ್ ಆಕಾಂಕ್ಷಿಯ ಸಾವಿಗೆ ರಾಹುಲ್ ಗಾಂಧಿ ಆಕ್ರೋಶ

ದೇಶದ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ‘ನೀಟ್-ಯುಜಿ’ (NEET-UG) ವಿವಾದ ಮತ್ತು ವಿದ್ಯಾರ್ಥಿಗಳ ಸಾವುಗಳು ಭಾರತದ ಒಟ್ಟಾರೆ ಶಿಕ್ಷಣ ವ್ಯವಸ್ಥೆಯ ದಯನೀಯ ಸ್ಥಿತಿಗೆ ಕನ್ನಡಿ ಹಿಡಿದಿವೆ. ಪರೀಕ್ಷಾ ಅಕ್ರಮಗಳು, ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು...

ತಕ್ಷಣವೇ ‘SIR ಹೆಲ್ಪ್‌ ಡೆಸ್ಕ್‌’ ಸ್ಥಾಪಿಸುವಂತೆ ಅಧಿಕಾರಿಗಳಿಗೆ ಸಿಎಂ ಸೂಚನೆ

ರಾಜ್ಯದಲ್ಲಿ ಭಾರತೀಯ ಚುನಾವಣಾ ಆಯೋಗದಿಂದ ನಡೆಯುತ್ತಿರುವ ಎಸ್‌ಐಆರ್ (Special Electoral Roll Purification) ಪ್ರಕ್ರಿಯೆ ಸಂದರ್ಭದಲ್ಲಿ ರಾಜ್ಯದ ಯಾವುದೇ ಪ್ರಜೆಯೂ ತನ್ನ ಅತ್ಯಮೂಲ್ಯವಾದ ಮತದಾನದ ಹಕ್ಕನ್ನು ಕಳೆದುಕೊಳ್ಳಬಾರದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್...

ವಿಷಾಹಾರಕ್ಕೆ ಜಾಗತಿಕವಾಗಿ ವರ್ಷಕ್ಕೆ 15 ಲಕ್ಷ ಜನರು ಬಲಿ: ಮಕ್ಕಳಿಗೆ ಹೆಚ್ಚಿನ ಅಪಾಯ: ಭಾರತದ ಸ್ಥಿತಿಯೂ ಆತಂಕಕಾರಿ! 

ನಾವು ದಿನನಿತ್ಯ ಸೇವಿಸುವ ಆಹಾರವೇ ನಮ್ಮ ಜೀವಕ್ಕೆ ಕಂಟಕವಾಗುತ್ತಿದೆಯೇ? ಹೌದು ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆಯ (WHO) ಇತ್ತೀಚಿನ ಆಘಾತಕಾರಿ ವರದಿ. ಜಾಗತಿಕವಾಗಿ ಅಸುರಕ್ಷಿತ ಮತ್ತು ಕಲುಷಿತ ಆಹಾರದ ಸೇವನೆಯಿಂದಾಗಿ ಪ್ರತಿ ವರ್ಷ...

ಡಿಕೆಶಿ ಸಂಪುಟದಲ್ಲಿ ಅಲ್ಪಸಂಖ್ಯಾತರಿಗೆ ಸಿಗುತ್ತಾ ಸೂಕ್ತ ಪ್ರಾತಿನಿಧ್ಯ?

ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿ, ಡಿ.ಕೆ ಶಿವಕುಮಾರ್ ಹೊಸ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗಿದೆ. ಈ ಮೂಲಕ ಕಳೆದ ಒಂದು ವರ್ಷದಿಂದ ನಡೆಯುತ್ತಿದ್ದ ಸಿಎಂ ಬದಲಾವಣೆಯ...

‘ಕರ್ನಾಟಕದಲ್ಲಿ SIR’ ಮತ ಉಳಿಸಿಕೊಳ್ಳುವಂತೆ ಕಾರ್ಯಕರ್ತರಿಗೆ CM ಡಿ.ಕೆ ಶಿವಕುಮಾರ್ ಕರೆ!

ಕರ್ನಾಟಕ ರಾಜಕಾರಣದಲ್ಲಿ ಹೊಸ ಯುಗ ಆರಂಭವಾಗಿದೆ. ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಕೆಲಸ ಮಾಡದಿರುವ ಸಚಿವ ಮತ್ತು ಶಾಸಕರನ್ನು ಸುಮ್ಮನೆ ಬಿಡುವುದಿಲ್ಲ ಎಂದು...

ವೋಟರ್ ಐಡಿ, ಆಧಾರ್ ಇದ್ದರೂ ನೆಮ್ಮದಿ ಇಲ್ಲ, ಪಶ್ಚಿಮ ಬಂಗಾಳದಲ್ಲಿ ಶುರುವಾಯ್ತು ‘ಹೋಲ್ಡಿಂಗ್ ಸೆಂಟರ್’ಗಳ ಭಯ

ಪಶ್ಚಿಮ ಬಂಗಾಳದಲ್ಲಿ "ಯಾರು ಈಗಾಗಲೇ ಮತದಾರರ ಪಟ್ಟಿಯಿಂದ ಹೊರಗುಳಿದಿದ್ದಾರೋ ಮತ್ತು ಟ್ರಿಬ್ಯೂನಲ್‌ನ (ನ್ಯಾಯಮಂಡಳಿ) ಅನುಮೋದನೆಗಾಗಿ ಕಾಯುತ್ತಿದ್ದಾರೋ, ಅಂತಹವರಲ್ಲಿ ಹೊಸ ಪೊಲೀಸ್ ವ್ಯವಸ್ಥೆ ಮತ್ತು ಬಂಧನ ಕೇಂದ್ರಗಳು (ಡಿಟೆಂಷನ್ ಸೆಂಟರ್) ತಮ್ಮನ್ನು ವಿದೇಶಿಯರಂತೆ ನಡೆಸಿಕೊಳ್ಳಲ್ಪಡಬಹುದು...