Homeಮುಖಪುಟರೂ. 170 ಕೋಟಿ ದಂಡ ಪಾವತಿಸಲು ಮುಂದಾದ ಅದಾನಿ : ಏನಿದು ಪ್ರಕರಣ?

ರೂ. 170 ಕೋಟಿ ದಂಡ ಪಾವತಿಸಲು ಮುಂದಾದ ಅದಾನಿ : ಏನಿದು ಪ್ರಕರಣ?

- Advertisement -
- Advertisement -

ಅಮೆರಿಕದ ನ್ಯಾಯಾಲಯದಲ್ಲಿ ದಾಖಲಾಗಿದ್ದ ವಂಚನೆ ಮತ್ತು ಲಂಚದ ಪ್ರಕರಣಕ್ಕೆ ಸಂಬಂಧಿಸಿದಂತೆ, ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಟ್ಟು 18 ಮಿಲಿಯನ್ ಡಾಲರ್ (ಸುಮಾರು 170 ಕೋಟಿ ರೂಪಾಯಿ) ದಂಡ ಪಾವತಿಸಲು ಒಪ್ಪಿಕೊಳ್ಳುವ ಮೂಲಕ ಸಿವಿಲ್ ಪ್ರಕರಣವನ್ನು ಇತ್ಯರ್ಥಪಡಿಸಿಕೊಳ್ಳಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ.

ಅಮೆರಿಕದ ಮಾರುಕಟ್ಟೆ ನಿಯಂತ್ರಣ ಸಂಸ್ಥೆಯಾದ ಯುಎಸ್ ಸೆಕ್ಯುರಿಟೀಸ್ ಅಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ದಾಖಲಿಸಿದ್ದ ಸಿವಿಲ್ ವಂಚನೆ ಮೊಕದ್ದಮೆಯನ್ನು ಕೊನೆಗೊಳಿಸಲು ಅದಾನಿ ಗ್ರೂಪ್ ಜಂಟಿ ಒಪ್ಪಂದಕ್ಕೆ ಬಂದಿದೆ. ನ್ಯಾಯಾಲಯದ ಅಂತಿಮ ಅನುಮೋದನೆಗೆ ಒಳಪಟ್ಟು ಈ ಇತ್ಯರ್ಥ ಪ್ರಕ್ರಿಯೆ ನಡೆಯಲಿದೆ ಎಂದು ವರದಿಗಳು ಹೇಳಿವೆ.

ಒಪ್ಪಂದದ ಪ್ರಕಾರ ಗೌತಮ್ ಅದಾನಿ ಮತ್ತು ಸಾಗರ್ ಅದಾನಿ ಜಂಟಿಯಾಗಿ 18 ಮಿಲಿಯನ್ ಡಾಲರ್ ದಂಡ ಪಾವತಿಸಲಿದ್ದಾರೆ. ಆದರೆ, ತಾವು ಯಾವುದೇ ತಪ್ಪು ಮಾಡಿಲ್ಲ ಎಂದು ಇಬ್ಬರೂ ಸ್ಪಷ್ಟಪಡಿಸಿದ್ದಾರೆ.

ಅದಾನಿ ಪರ ವಕೀಲರು ಈ ಪ್ರಕರಣಕ್ಕೆ ಅಮೆರಿಕದ ನ್ಯಾಯವ್ಯಾಪ್ತಿ (Jurisdiction) ಇಲ್ಲ ಮತ್ತು ಯಾವುದೇ ಸೂಕ್ತ ಸಾಕ್ಷ್ಯಗಳಿಲ್ಲ ಎಂದು ವಾದಿಸಿದ್ದರು. ಇದರ ಬೆನ್ನಲ್ಲೇ, ಯುಎಸ್ ನ್ಯಾಯಾಂಗ ಇಲಾಖೆಯು ಕ್ರಿಮಿನಲ್ ವಂಚನೆಯ ಆರೋಪಗಳನ್ನು ಕೈಬಿಡಲು ನಿರ್ಧರಿಸಿದೆ ಎಂದು ವರದಿಯಾಗಿದೆ.

ನವೆಂಬರ್ 2024ರಲ್ಲಿ, ನ್ಯೂಯಾರ್ಕ್‌ನ ಬ್ರೂಕ್ಲಿನ್ ಫೆಡರಲ್ ನ್ಯಾಯಾಲಯದಲ್ಲಿ ಅದಾನಿ ಮತ್ತು ಇತರರ ವಿರುದ್ಧ ದೋಷಾರೋಪಣೆ ಸಲ್ಲಿಕೆಯಾಗಿತ್ತು. ಅದಾನಿ ಗ್ರೀನ್ ಎನರ್ಜಿ ಸಂಸ್ಥೆಗೆ ಸೌರಶಕ್ತಿ ಒಪ್ಪಂದಗಳನ್ನು ಪಡೆಯಲು ಭಾರತೀಯ ಸರ್ಕಾರಿ ಅಧಿಕಾರಿಗಳಿಗೆ 250 ಮಿಲಿಯನ್ ಡಾಲರ್‌ಗೂ ಅಧಿಕ ಲಂಚ ನೀಡಿದ ಆರೋಪ ಮತ್ತು ಅಮೆರಿಕದ ಹೂಡಿಕೆದಾರರನ್ನು ದಾರಿ ತಪ್ಪಿಸಿ 3 ಶತಕೋಟಿ ಡಾಲರ್‌ಗೂ ಹೆಚ್ಚು ಹಣ ಸಂಗ್ರಹಿಸಿದ ಆರೋಪಗಳನ್ನು ಇವರ ಮೇಲೆ ಹೊರಿಸಲಾಗಿತ್ತು.

ಪ್ರಕರಣದ ಹಿನ್ನೋಟ

ಅಕ್ಟೋಬರ್ 24, 2024ರಲ್ಲಿ ನ್ಯೂಯಾರ್ಕ್‌ನ ಈಸ್ಟರ್ನ್ ಡಿಸ್ಟ್ರಿಕ್ಟ್‌ನ ಯುಎಸ್ ಫೆಡರಲ್ ಪ್ರಾಸಿಕ್ಯೂಟರ್‌ಗಳು ಗೌತಮ್ ಅದಾನಿ ಮತ್ತು ಇತರರ ವಿರುದ್ಧ ರಹಸ್ಯವಾಗಿ ದೋಷಾರೋಪಣೆಯನ್ನು ಸಿದ್ಧಪಡಿಸಿದ್ದರು.

ನವೆಂಬರ್ 20, 2024ರಂದು ಅಮೆರಿಕದ ನ್ಯಾಯಾಂಗ ಇಲಾಖೆ (ಡಿಒಜಿ) ಮತ್ತು ಮಾರುಕಟ್ಟೆ ನಿಯಂತ್ರಣ ಸಂಸ್ಥೆ (ಎಸ್‌ಇಸಿ) ಈ ಆರೋಪಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿದವು. ಅದಾನಿ ಗ್ರೀನ್ ಎನರ್ಜಿ ಸಂಸ್ಥೆಗೆ ಸೌರಶಕ್ತಿ ಗುತ್ತಿಗೆ ಪಡೆಯಲು ಭಾರತೀಯ ಅಧಿಕಾರಿಗಳಿಗೆ 250 ಮಿಲಿಯನ್ ಡಾಲರ್ ಲಂಚ ನೀಡಿದ ಮತ್ತು ಅಮೆರಿಕದ ಹೂಡಿಕೆದಾರರಿಂದ 3 ಬಿಲಿಯನ್ ಡಾಲರ್ ಸಾಲ ಸಂಗ್ರಹಿಸಿ ವಂಚಿಸಿದ ಆರೋಪ ಅದಾನಿ ಮತ್ತು ಇತರರ ವಿರುದ್ದ ಹೊರಿಸಲಾಗಿತ್ತು.

ನವೆಂಬರ್ 21, 2024ರಂದು ನ್ಯೂಯಾರ್ಕ್ ಜಿಲ್ಲಾ ನ್ಯಾಯಾಲಯವು ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಅವರಿಗೆ 21 ದಿನಗಳಲ್ಲಿ ಪ್ರತಿಕ್ರಿಯಿಸುವಂತೆ ಅಹಮದಾಬಾದ್ ವಿಳಾಸಕ್ಕೆ ಸಮನ್ಸ್ ಜಾರಿ ಮಾಡಿತ್ತು.

ಡಿಸೆಂಬರ್ 12, 2024ರಂದು ನ್ಯಾಯಾಲಯವು ಗೊಂದಲಗಳನ್ನು ತಪ್ಪಿಸಲು ಅದಾನಿ ವಿರುದ್ಧದ ಕ್ರಿಮಿನಲ್ ಮತ್ತು ಸಿವಿಲ್ (ಎಸ್‌ಇಸಿ) ಎರಡೂ ಪ್ರಕರಣಗಳನ್ನು ಒಬ್ಬರೇ ನ್ಯಾಯಾಧೀಶರ ಅಡಿಯಲ್ಲಿ ಸಂಯೋಜಿಸಿತ್ತು.

ಆರೋಪಿಗಳು ಭಾರತದಲ್ಲಿದ್ದ ಕಾರಣ ಎಸ್‌ಇಸಿ ಹ್ಯಾಂಗ್ ಕನ್ವೆನ್ಷನ್ (Hague Convention) ಅಡಿಯಲ್ಲಿ ಭಾರತ ಸರ್ಕಾರದ ಮೂಲಕ ಸಮನ್ಸ್ ತಲುಪಿಸಲು ಪ್ರಯತ್ನಿಸಿತ್ತು. ಆದರೆ ತಾಂತ್ರಿಕ ಕಾರಣಗಳಿಂದಾಗಿ ಈ ಪ್ರಕ್ರಿಯೆ ಸುಮಾರು ಒಂದು ವರ್ಷ ಕಾಲ ಸ್ಥಗಿತಗೊಂಡಿತ್ತು.

ಭಾರತ ಸರ್ಕಾರದಿಂದ ನಿರೀಕ್ಷಿತ ಸಹಕಾರ ಸಿಗದ ಹಿನ್ನೆಲೆಯಲ್ಲಿ, ರಾಜತಾಂತ್ರಿಕ ಮಾರ್ಗಗಳನ್ನು ಬೈಪಾಸ್ ಮಾಡಿ, ಅದಾನಿ ಅವರ ಯುಎಸ್ ವಕೀಲರು ಮತ್ತು ಇಮೇಲ್ ಮೂಲಕವೇ ಸಮನ್ಸ್ ಜಾರಿ ಮಾಡಲು ಅನುಮತಿ ನೀಡುವಂತೆ ಜನವರಿ 21, 2026ರಂದು ಎಸ್‌ಇಸಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿತ್ತು.

ಏಪ್ರಿಲ್ 7, 2026ರಂದು ಅದಾನಿ ಅವರ ಕಾನೂನು ತಂಡವು ನ್ಯಾಯಾಲಯಕ್ಕೆ ಪೂರ್ವ-ಮನವಿ ಪತ್ರವನ್ನು (Pre-motion letter) ಸಲ್ಲಿಸಿ, ಪ್ರಕರಣವನ್ನು ವಜಾಗೊಳಿಸುವಂತೆ ಕೋರಿತ್ತು. ಘಟನೆಗಳು ನಡೆದಿರುವುದು ಭಾರತದಲ್ಲಿ, ಹೀಗಾಗಿ ಇಲ್ಲಿ ಅಮೆರಿಕದ ಕಾನೂನು ಅನ್ವಯಿಸುವುದಿಲ್ಲ ಮತ್ತು ನ್ಯಾಯಾಲಯಕ್ಕೆ ನ್ಯಾಯವ್ಯಾಪ್ತಿ ಇಲ್ಲ ಎಂದು ವಾದಿಸಿತ್ತು.

ಏಪ್ರಿಲ್ 2026ರ ಮಧ್ಯ ಭಾಗದಲ್ಲಿ ವಕೀಲ ರಾಬರ್ಟ್ ಗ್ಯೂಫ್ರಾ ಅವರು ವಾಷಿಂಗ್ಟನ್‌ನಲ್ಲಿರುವ ನ್ಯಾಯಾಂಗ ಇಲಾಖೆಯ ಪ್ರಾಸಿಕ್ಯೂಟರ್‌ಗಳನ್ನು ಭೇಟಿಯಾಗಿ 100ಕ್ಕೂ ಹೆಚ್ಚು ಸ್ಲೈಡ್‌ಗಳ ಪ್ರಸ್ತುತಿ ನೀಡಿ ಪ್ರಕರಣ ಎಷ್ಟು ದುರ್ಬಲವಾಗಿದೆ ಎಂದು ವಾದಿಸಿದ್ದರು. ಇದೇ ಸಂದರ್ಭದಲ್ಲಿ, ಅದಾನಿ ಸಮೂಹವು ಅಮೆರಿಕದ ಆರ್ಥಿಕತೆಯಲ್ಲಿ 10 ಬಿಲಿಯನ್ ಹೂಡಿಕೆ ಡಾಲರ್ ಮಾಡುವ ಮತ್ತು 15,000 ಉದ್ಯೋಗ ಸೃಷ್ಟಿಸುವ ಭರವಸೆಯನ್ನೂ ಪ್ರಸ್ತಾಪಿಸಿತ್ತು.

ಮೇ 14, 2026 (ನ್ಯೂಯಾರ್ಕ್ ಸಮಯ) / ಮೇ 15, 2026 (ಭಾರತೀಯ ಕಾಲಮಾನ) ಅದಾನಿ ಮತ್ತು ಯುಎಸ್ ಸೆಕ್ಯುರಿಟೀಸ್ ಅಂಡ್ ಎಕ್ಸ್‌ಚೇಂಜ್ ಕಮಿಷನ್ ಜಂಟಿಯಾಗಿ ನ್ಯಾಯಾಲಯಕ್ಕೆ ಇತ್ಯರ್ಥದ ಪ್ರಸ್ತಾವನೆಯನ್ನು ಸಲ್ಲಿಸಿದವು.

ಒಪ್ಪಂದದ ಪ್ರಕಾರ ಗೌತಮ್ ಅದಾನಿ 6 ಮಿಲಿಯನ್ ಡಾಲರ್ ಮತ್ತು ಸಾಗರ್ ಅದಾನಿ 12 ಮಿಲಿಯನ್ ಡಾಲರ್ ಸೇರಿದಂತೆ ಒಟ್ಟು 18 ಮಿಲಿಯನ್ (ಸುಮಾರು 172 ಕೋಟಿ ರೂಪಾಯಿ) ಸಿವಿಲ್ ದಂಡ ಪಾವತಿಸಲು ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಇಬ್ಬರೂ ತಮ್ಮ ಮೇಲಿನ ಯಾವುದೇ ತಪ್ಪು ಅಥವಾ ಅಪರಾಧವನ್ನು ಒಪ್ಪಿಕೊಳ್ಳದೇ (Without admitting or denying the charges) ಸಿವಿಲ್ ಪ್ರಕರಣವನ್ನು ಕೊನೆಗೊಳಿಸಲಿದ್ದಾರೆ.

ಸಿವಿಲ್ ಪ್ರಕರಣ ಇತ್ಯರ್ಥವಾದ ಬೆನ್ನಲ್ಲೇ, ಅಮೆರಿಕದ ನ್ಯಾಯಾಂಗ ಇಲಾಖೆಯು ಗೌತಮ್ ಅದಾನಿ ವಿರುದ್ಧದ ಪ್ರಮುಖ ಕ್ರಿಮಿನಲ್ ವಂಚನೆ ಮತ್ತು ಲಂಚದ ಆರೋಪಗಳನ್ನು ಸಂಪೂರ್ಣವಾಗಿ ಹಿಂಪಡೆಯಲು ನಿರ್ಧರಿಸಿದೆ ಎಂದು ಜಾಗತಿಕ ಮಾಧ್ಯಮಗಳು ವರದಿ ಮಾಡಿವೆ.

ಅದಾನಿಗೆ ಸಮನ್ಸ್ ತಲುಪಿಸಲು ನಿರಾಕರಿಸಿತ್ತು ಕೇಂದ್ರ

ಈ ಹಿಂದೆ ಇದೇ ಪ್ರಕರಣದಕ್ಕೆ ಸಂಬಂಧಿಸಿದಂತೆ ಎಸ್‌ಇಸಿ ನೀಡಿದ್ದ ಸಮನ್ಸ್‌ಗಳನ್ನು ಗೌತಮ್ ಅದಾನಿ ಮತ್ತು ಸಾಗರ್ ಅದಾನಿ ಅವರಿಗೆ ತಲುಪಿಸಲು ಭಾರತ ಸರ್ಕಾರದ ಕಾನೂನು ಮತ್ತು ನ್ಯಾಯ ಸಚಿವಾಲಯವು ಎರಡು ಬಾರಿ ನಿರಾಕರಿಸಿತ್ತು.

ಜನವರಿ 2026ರಲ್ಲಿ ನ್ಯೂಯಾರ್ಕ್ ಫೆಡರಲ್ ನ್ಯಾಯಾಲಯಕ್ಕೆ ಎಸ್‌ಇಸಿ ಸಲ್ಲಿಸಿದ ಅಧಿಕೃತ ದಾಖಲೆಗಳ ಮೂಲಕ ಈ ವಿಷಯ ಬಹಿರಂಗವಾಗಿತ್ತು. ಆದರೆ, ಇದಕ್ಕೆ ಕೇಂದ್ರ ಸರ್ಕಾರ ಸಮಜಾಯಿಸಿ ನೀಡಿತ್ತು.

ಅಂತಾರಾಷ್ಟ್ರೀಯ ನಿಯಮಗಳಾದ ‘ಹ್ಯಾಂಗ್ ಕನ್ವೆನ್ಷನ್’ (Hague Convention) ಅಡಿಯಲ್ಲಿ ಎಸ್‌ಇಸಿ ಕಳುಹಿಸಿದ್ದ ಸಮನ್ಸ್ ಪತ್ರಗಳಲ್ಲಿ ಅಧಿಕೃತ ಮುದ್ರೆ (Seal) ಮತ್ತು ಕಾಯಂ ಶಾಯಿ ಸಹಿ (Ink Signature) ಇಲ್ಲ ಎಂಬ ಕಾರಣ ನೀಡಿ ಭಾರತ ಸರ್ಕಾರ ಮೊದಲ ಬಾರಿಗೆ ದಾಖಲೆಗಳನ್ನು ವಾಪಸ್ ಕಳುಹಿಸಿತ್ತು.

ಆದರೆ, ಅಂತಾರಾಷ್ಟ್ರೀಯ ನಿಯಮಗಳ ಪ್ರಕಾರ ವ್ಯಕ್ತಿಗತ ಸಮನ್ಸ್‌ಗಳಿಗೆ ಇಂತಹ ಫಾರ್ಮಾಲಿಟಿಗಳ ಅಗತ್ಯವಿಲ್ಲ ಎಂದು ಎಸ್‌ಇಸಿ ವಾದಿಸಿತ್ತು.

ಎಸ್‌ಇಸಿ ನ್ಯೂನತೆಗಳನ್ನು ಸರಿಪಡಿಸಿ ಎರಡನೇ ಬಾರಿ ಕಳುಹಿಸಿದಾಗಲೂ ಕೇಂದ್ರ ಕಾನೂನು ಸಚಿವಾಲಯ ತಾಂತ್ರಿಕ ಮತ್ತು ಕಾನೂನು ಆಕ್ಷೇಪಣೆಗಳನ್ನು ಎತ್ತಿ ಸಮನ್ಸ್ ತಲುಪಿಸಲು ನಿರಾಕರಿಸಿತ್ತು.

ಈ ಬಾರಿ, ಭಾರತದಲ್ಲಿರುವ ವ್ಯಕ್ತಿಗಳಿಗೆ ಸಮನ್ಸ್ ಜಾರಿ ಮಾಡಲು ಅಮೆರಿಕದ ಹೂಡಿಕೆ ನಿಯಂತ್ರಣ ಸಂಸ್ಥೆಗೆ (ಎಸ್‌ಇಸಿ) ಯಾವ ಅಧಿಕಾರ ಅಥವಾ ನ್ಯಾಯವ್ಯಾಪ್ತಿ ಇದೆ? ಎಂದು ಪ್ರಶ್ನಿಸಿ ಆಕ್ಷೇಪ ಎತ್ತಿತ್ತು. 

ಭಾರತ ಸರ್ಕಾರದಿಂದ ಸತತ 14 ತಿಂಗಳುಗಳ ಕಾಲ ಯಾವುದೇ ಸಹಕಾರ ಸಿಗದ ಹಿನ್ನೆಲೆಯಲ್ಲಿ ಬೇಸತ್ತ ಎಸ್‌ಇಸಿ, ಜನವರಿ 21, 2026 ರಂದು ನ್ಯೂಯಾರ್ಕ್ ಕೋರ್ಟ್‌ಗೆ ತುರ್ತು ಅರ್ಜಿ ಸಲ್ಲಿಸಿತ್ತು. “ಭಾರತ ಸರ್ಕಾರದ ರಾಜತಾಂತ್ರಿಕ ಮಾರ್ಗಗಳ ಮೂಲಕ ಸಮನ್ಸ್ ತಲುಪಿಸಲು ಸಾಧ್ಯವಾಗುತ್ತಿಲ್ಲ, ಆದ್ದರಿಂದ ನಮಗೆ ಗೌತಮ್ ಅದಾನಿ ಅವರ ಇಮೇಲ್ ಮತ್ತು ಅವರ ಯುಎಸ್ ವಕೀಲರ ಮೂಲಕ ನೇರವಾಗಿ ಸಮನ್ಸ್ ಜಾರಿ ಮಾಡಲು ಅನುಮತಿ ನೀಡಿ” ಎಂದು ಕೋರಿತ್ತು.

ಈ ಬೆಳವಣಿಗೆಯ ಬೆನ್ನಲ್ಲೇ ಮಾರುಕಟ್ಟೆಯಲ್ಲಿ ಅದಾನಿ ಷೇರುಗಳು ತೀವ್ರ ಕುಸಿತ ಕಂಡಿದ್ದರಿಂದ, ಅದಾನಿ ಪರ ವಕೀಲರು ತಾವಾಗಿಯೇ ಕೋರ್ಟ್ ಮುಂದೆ ಹಾಜರಾಗಿ ಸಮನ್ಸ್ ಸ್ವೀಕರಿಸಲು ಒಪ್ಪಿಕೊಂಡರು ಮತ್ತು ಪ್ರಕರಣದ ಇತ್ಯರ್ಥಕ್ಕೆ ಮಾತುಕತೆ ಆರಂಭಿಸಿದರು.

ಕೇಂದ್ರ ಸರ್ಕಾರದ ಈ ನಿಲುವು ಆ ಸಮಯದಲ್ಲಿ ಭಾರತೀಯ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ವಿರೋಧ ಪಕ್ಷಗಳು “ಕೇಂದ್ರ ಸರ್ಕಾರವು ಅದಾನಿ ಅವರನ್ನು ರಕ್ಷಿಸಲು ಅಮೆರಿಕದ ಸಮನ್ಸ್ ಅನ್ನು ತಡೆಹಿಡಿದಿದೆ” ಎಂದು ಆರೋಪಿಸಿದ್ದರೆ, ಅಧಿಕಾರಿಗಳು ಇದು ಕೇವಲ ನಿಯಮಾನುಸಾರ ನಡೆದ ತಾಂತ್ರಿಕ ಪ್ರಕ್ರಿಯೆಯಷ್ಟೇ ಎಂದು ಸಮಜಾಯಿಸಿ ನೀಡಿದ್ದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭೋಜಶಾಲಾ-ಕಮಲ್ ಮೌಲಾ ಪ್ರಕರಣದಲ್ಲಿ ಹಿಂದೂಗಳ ಪರ ತೀರ್ಪು…ಮಸೀದಿಯಲ್ಲ ದೇವಸ್ಥಾನವೆಂದ ಕೋರ್ಟ್ : ಏನಿದು ವಿವಾದ?

ಸುಮಾರು 100 ವರ್ಷಗಳ ಹಳೆಯ ವಿವಾದವಾದ ಭೋಜಶಾಲಾ-ಕಮಲ್ ಮೌಲಾ ಮಸೀದಿ ಪ್ರಕರಣದಲ್ಲಿ ಶುಕ್ರವಾರ (ಮೇ 15) ಮಧ್ಯಪ್ರದೇಶ ಹೈಕೋರ್ಟ್ ತೀರ್ಪು ನೀಡಿದ್ದು, ಭೋಜಶಾಲಾದಲ್ಲಿರುವ ಐತಿಹಾಸಿಕ ಸ್ಥಳವು ಸರಸ್ವತಿ ದೇವಿಗೆ ಸಮರ್ಪಿತವಾದ ದೇವಾಲಯವಾಗಿದೆ ಎಂದು...

“ಮಹಿಳಾ ಮೀಸಲಾತಿ ಮುಖವಾಡದಲ್ಲಿ ಡಿಲಿಮಿಟೇಷನ್ ಕುತಂತ್ರ ವಿಫಲ” ಬಿಜೆಪಿಗೆ ದಕ್ಷಿಣ ಭಾರತದ ಎಚ್ಚರಿಕೆ

ಮೋದಿ ನೇತೃತ್ವದ ಕೇಂದ್ರ ಸರ್ಕಾರವು 2026ರ ಏಪ್ರಿಲ್ 16ರಂದು ಸಂಸತ್ತಿನ ವಿಶೇಷ ಅಧಿವೇಶನ ಕರೆದು, ಮಹಿಳಾ ಮೀಸಲಾತಿ ಅನುಷ್ಠಾನವನ್ನು ತ್ವರಿತಗೊಳಿಸುವ ನೆಪವನ್ನು ಮುಂದುಮಾಡಿ ಮೂರು ಮಸೂದೆಗಳನ್ನು ಮಂಡಿಸಿತು. ಇವುಗಳಲ್ಲಿ ಪ್ರಮುಖವಾದ ಸಂವಿಧಾನ (131ನೇ...

ಹೊಸ ಕಾರ್ಮಿಕ ಕಾನೂನು ಶ್ರಮಿಕರ ಮೂಲಭೂತ ಹಕ್ಕುಗಳಿಗೆ ಕತ್ತರಿ!

"8 ಗಂಟೆ ಕೆಲಸ, 8 ಗಂಟೆ ಮನರಂಜನೆ, 8 ಗಂಟೆ ವಿಶ್ರಾಂತಿ" ಎಂಬ ತತ್ವವು ಸುಲಭವಾಗಿ ದೊರೆತದ್ದಲ್ಲ, ಇದು ದೀರ್ಘಕಾಲದ ಹೋರಾಟ, ತ್ಯಾಗ ಮತ್ತು ಏಕತೆಯ ಫಲವಾಗಿದೆ. ಕೆಲಸದ ಹೊರೆ ಅತಿಯಾಗಿ ಇದ್ದ...

ಮನರೇಗಾ ಯಶೋಗಾಥೆ: ಭಾಗ-1 ದಲಿತರು-ಮಹಿಳೆಯರಿಗೆ ಆರ್ಥಿಕ ಭದ್ರತೆ; ಗ್ರಾಮ ಸಬಲೀಕರಣಕ್ಕೆ ಮನರೇಗಾ ಕೊಟ್ಟ ಕೊಡುಗೆ ಅಪಾರ

2001-2004 ರವರೆಗಿನ ನಿರಂತರ ಬರ ಕರ್ನಾಟಕದ ಬಹುತೇಕ ಹಳ್ಳಿಗಳನ್ನು ಕಂಗಾಲಾಗಿಸಿದ್ದಂತೂ ನಿಜ. ಎಲ್ಲ ಕೆರೆಗಳು ಬತ್ತಿಹೋಗಿದ್ದರಿಂದ ದನಕರುಗಳಿಗೆ ನೀರು ಕುಡಿಸಲೂ ಜನ ಅಲೆದಾಡುತ್ತಿದ್ದರು. ಜನರಿಗೆ ಕುಡಿಯುವ ನೀರು ಪೂರೈಕೆ ಸಹ ಆ ಸಂದರ್ಭದಲ್ಲಿ...

ಮಣಿಪುರ: ಬುಡಕಟ್ಟು ಚರ್ಚ್ ನಾಯಕರ ಮೇಲೆ ಉಗ್ರ ದಾಳಿ:  ಹಲವೆಡೆ ಮೇಣದ ಬತ್ತಿಯ ಜೊತೆಗೆ ಶೋಕ ವ್ಯಕ್ತ ಪಡಿಸಿದ ಕುಕಿ ಸಮುದಾಯ 

ಇಂಫಾಲ್: ಮಣಿಪುರದ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಮೂವರು ಪ್ರಮುಖ ಕುಕಿ ಚರ್ಚ್ ನಾಯಕರನ್ನು ಹೊಂಚು ಹಾಕಿ ದಾಳಿ ನಡೆಸಿ ಕೊಲ್ಲಲಾಗಿದೆ. ಈ ಘಟನೆಯು ರಾಜ್ಯದಲ್ಲಿ ಜನಾಂಗೀಯ ಉದ್ವಿಗ್ನತೆಯನ್ನು ಮತ್ತಷ್ಟು ತೀವ್ರಗೊಳಿಸಿದೆ.  ಮೇ 13ರಂದು ಬೆಳಿಗ್ಗೆ ಚುರಾಚಂದ್‌ಪುರನಲ್ಲಿ...

ಗುಜರಾತ್| ಮದುವೆ ಮೆರವಣಿಗೆಯಲ್ಲಿ ಕುದುರೆ ಸವಾರಿ ಮಾಡಿದ ದಲಿತ ವರನ ಮೇಲೆ ಹಲ್ಲೆ

ಗುಜರಾತ್‌ನ ಮೆಹ್ಸಾನಾ ಜಿಲ್ಲೆಯ ಮಡಿ ಗ್ರಾಮದಲ್ಲಿ ಮದುವೆ ಮೆರವಣಿಗೆಯಲ್ಲಿ ಕುದುರೆ ಸವಾರಿ ಮಾಡುತ್ತಿದ್ದ ದಲಿತ ವರನ ಮೇಲೆ ಮೇಲ್ಜಾತಿಯ ಪುರುಷರ ಗುಂಪೊಂದು ಜಾತಿ ನಿಂದನೆ ಮಾಡಿ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ. ಮೇ 10 ರಂದು...

ಆತಂಕಕಾರಿಯಾದ ಆನೆ ದಾಳಿ

ಆನೆ ದಾಳಿ ಹಿಂದೆಂದಿಗಿಂತಲೂ ದುಪ್ಪಟ್ಟಾಗಿದೆ. ಅರಣ್ಯಮಂತ್ರಿ ಈಶ್ವರ್ ಖಂಡ್ರೆಯವರ ಪ್ರಕಾರ ಆನೆಗಳ ಸಂಖ್ಯೆ ದುಪ್ಪಟ್ಟಾಗಿದೆ. ಕಾಡಿನ ಪ್ರಮಾಣ ಅಷ್ಟೆ ಇದೆ. ಅಂದರೆ ಕಾಡಿನ ಪ್ರಮಾಣ ಹೆಚ್ಚು ಮಾಡಬೇಕೆಂದರೆ ಮನುಷ್ಯರ ಆವಾಸ ಇಲ್ಲದೆ ಆನೆಗಳಿಗಾಗಿ...

ವೈದ್ಯಕೀಯ ಸೀಟುಗಳ ಹಂಚಿಕೆ ಕೇಂದ್ರೀಕರಣಕ್ಕೆ ದಕ್ಷಿಣದ ವಿರೋಧ; ನೀಟ್ ಪರೀಕ್ಷೆಯನ್ನೇ ರದ್ದುಗೊಳಿಸಲು ಇದು ಸಕಾಲ

ರಾಜ್ಯಪಟ್ಟಿಯಲ್ಲಿದ್ದ ಶಿಕ್ಷಣದ ಹಕ್ಕನ್ನು ನೀಟ್‌ ಹೆಸರಿನಲ್ಲಿ ಕೇಂದ್ರದ ಜಂಟಿ ಪಟ್ಟಿಗೆ ಸೇರಿಸುವ ಒಕ್ಕೂಟ ಸರ್ಕಾರದ ನಿರ್ಧಾರದಿಂದ ದಕ್ಷಿಣದ ರಾಜ್ಯಗಳು ಭಾರಿ ನಷ್ಟ ಅನುಭವಿಸುತ್ತಿವೆ. ಜೊತೆಗೆ, ನೀಟ್ ಪಾಸ್‌ ಮಾಡುವ ಒತ್ತಡ ತಾಳಲಾರದೆ ದೇಶದಾದ್ಯಂತ...

‘ಮತ’ ವ್ಯರ್ಥ ಮಾಡದ ಮತದಾರ: 2026ರಲ್ಲಿ ಕುಸಿಯಿತು ‘ನೋಟಾ’ ಅಬ್ಬರ

2026ರ ವಿಧಾನಸಭಾ ಚುನಾವಣೆಯಲ್ಲಿ ಅಸ್ಸಾಂ, ಕೇರಳ, ಪುದುಚೇರಿ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಾದ್ಯಂತ ಸುಮಾರು 10.9 ಲಕ್ಷ ಮತಗಳು 'ನೋಟಾ' (ಯಾರಿಗೂ ಮತವಿಲ್ಲ) ಪಾಲಾಗಿವೆ. ಆದರೆ, 2016 ಮತ್ತು 2021ರ ಚುನಾವಣೆಗಳಿಗೆ ಹೋಲಿಸಿದರೆ...

ಕೇರಳದ 13ನೇ ಮುಖ್ಯಮಂತ್ರಿ ವಿ.ಡಿ. ಸತೀಶನ್: ವಿದ್ಯಾರ್ಥಿ ನಾಯಕನಿಂದ ಸಿಎಂ ಸ್ಥಾನದವರೆಗೆ ಸತೀಶನ್ ಪಯಣ

ತಿರುವನಂತಪುರಂ: ಕೇರಳಂನ ನೂತನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಆಯ್ಕೆ ಮಾಡಿದೆ. ಆ ಮೂಲಕ ಹಲವು ದಿನಗಳಿಂದ ಈ ಬಗ್ಗೆ ನಡೆಯುತ್ತಿದ್ದ ಕುತೂಹಲ ಮತ್ತು ಚರ್ಚೆಗಳಿಗೆ ತೆರೆ ಬಿದ್ದಿದೆ.  ಅಖಿಲ ಭಾರತ...